ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, September 6, 2024

ಕಣ್ಣಲ್ಲಿಳಿದ ಮಳೆಹನಿಯ ಕುರಿತು ರಾಜು ಸರ್

ಎಲ್ಲಾ ಕವಿತೆಗಳೂ ಹೀಗೆ. ತಮ್ಮ ಪಾಡಿಗೆ ತಾವೇ ಹಾಡಿಕೊಳ್ಳುಬಹುದಾದ, ಏಕಾಂತಕ್ಕೆ ತನುಕೊಟ್ಟಂತೆ.
ಬರೆದವರೇ ಹೇಳುವಂತೆ:
ಅಳುವವರ ಅಳುವಲ್ಲಿ ಹರಿದು ಕಡಲ ಸೇರುವುದಾದರೆ ಎಷ್ಟು ಚೆಂದ ಎಷ್ಟು ಚೆಂದ

ಒಂದಲ್ಲ ಒಂದು ರೀತಿಯಲ್ಲಿ ಇಲ್ಲಿನ ಕವಿತೆಗಳೆಷ್ಟು ಕಾಡಬಲ್ಲವೋ,ಕವಿಯೂ ಹಾಗೆ ಕಾಡಬಲ್ಲ. ಅದೆಷ್ಟು ಕವಿತೆಯ ವ್ಯಾವೋಹ ಇರಬಹುದು, ಅದೆಷ್ಟು ವ್ಯಾಪಕವಾಗಿ ಅವರನ್ನು ವ್ಯಾಪಿಸಿರಬಹುದು. ಪದ ,ಮೌನ ,ಹುಡುಕಾಟ, ಸುತ್ತಾಟ ,ಕೋಪ ಕವಿತೆಯೊಳಗೆ ನಾನು ಜೀವಿಸಿದ್ದೆನೆ ಎಂದು ಹೇಳುವಷ್ಟು ಮಾತುಗಾರ. ಇವೆಲ್ಲವೂ ಸತೀಶ್ ರನ್ನು ಕವಿತೆಗಳೊಟ್ಟಿಗೆ 'ಕವಿ'ಯನ್ನೂ ನಮಗೆ ಪರಿಚಯಿಸುತ್ತವೆ. ಎಲ್ಲಾ ಕವಿತೆಗಳು ಹೊಸ ಜಾಯಮಾನಕ್ಕೆ ತಕ್ಕ ಎನ್ನಬಹುದಾದ ಅನೂಹ್ಯ ಬೆಳವಣಿಗೆಯಾಗಿದೆ. ಹೊಸ ರೀತಿಯ ಕವಿತೆಗಳನ್ನು ಓದಿಸಿದ ಸಂಗಾತದವರಿಗೂ, ಹೊಸ ಪುಸ್ತಕವನ್ನು ಪದೇ ಪದೇ ಕೊಟ್ಟು ಓದಿಸುವ Krishna Chengadi ಅಣ್ಣನವರಿಗೂ ರಾಶಿ ಧನ್ಯವಾದಗಳನ್ನಷ್ಟೇ ನಾನಿಲ್ಲಿ ಹೇಳಬಹುದು .

ಯಾರ ತಿಂದು ಬದುಕುತ್ತವೆ ನನ್ನ ಕವಿತೆಗಳು ನಾನು ಸತ್ತ ಮೇಲೆ
ಯಾರ ಕಣ್ಣೀರ ಪೇಯ ಅವುಗಳಿಗೆ ನಾನು ಸತ್ತ ಮೇಲೆ
*


✍️ ರಾಜು

Saturday, August 24, 2024

ಕುಳಿ

ತಿಮ್ಮ ರಸ್ತೆಯಲ್ಲಿ ನಡೆಯುವಾಗ ಯೋಚಿಸುತ್ತಿದ್ದ. ಚಂದ್ರನಲ್ಲಿ ಇದಕ್ಕಿಂತ ದೊಡ್ಡ ಕುಳಿಗಳಿರಬಹುದು.
ಕಾಜೂರು ಸತೀಶ್ 

Tuesday, August 20, 2024

ಗೋಷ್ಠಿ

ತಮ್ಮ ದೇಶ ಅಷ್ಟು ಹಿಂದುಳಿದಿರುವುದನ್ನು ಗಮನಿಸಿದ ಚಿಂತಕರೆಲ್ಲಾ ಸೇರಿ ಗೋಷ್ಠಿಯೊಂದನ್ನು ಏರ್ಪಡಿಸಿದರು.

ಹಲವು ವಾದ-ಸಿದ್ಧಾಂತಗಳನ್ನು ವಿದ್ವಾಂಸರು ಮಂಡಿಸುತ್ತಿದ್ದರು. ನೂರಾರು ಹೊಳವುಗಳನ್ನು ಬಿಚ್ಚಿಡುತ್ತಿದ್ದರು.

ಪ್ರಶ್ನೋತ್ತರ ಸಮಯದಲ್ಲಿ ತಿಮ್ಮನಿಗೆ ಮೈಕು ಸಿಕ್ಕಿತು.
"ಚುನಾವಣೆಯು ಹಣ-ಆಮಿಷಗಳಿಲ್ಲದೆ ನಡೆಯಲಿ. ಕೊಡುವುದು-ಪಡೆಯುವುದು ಎರಡೂ ನಿಲ್ಲಬೇಕು. ನಿಮ್ಮಿಂದ ಅದು ಸಾಧ್ಯವೇ?"ಕೇಳಿದ.

ಅಲ್ಲಿಗೆ ಘೋಷ್ಠಿ ನಿಂತು ಹೋಯಿತು.
*

✍️ಕಾಜೂರು ಸತೀಶ್

ಶವ

ರಸ್ತೆಯಲ್ಲಿ ಅನಾಥ ಶವವೊಂದಿತ್ತು. ಅಲ್ಲಿದ್ದವರ್ಯಾರಿಗೂ ಅದರ ಗುರುತು ಹತ್ತಲಿಲ್ಲ.

ಎಡಗೈ ಗುರುತಿನ ಪಕ್ಷದವರು ಫೋಟೋ ತೆಗೆದು ತಮ್ಮ ಪಕ್ಷದ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಂಡು 'ಇವರು ಗೊತ್ತಾ? ನಮ್ಮ ಪಕ್ಷದವರಾ?'ಎಂಬ ಪ್ರಶ್ನೆ ಎಸೆದರು.

ಬಲಗೈ ಗುರುತಿನ ಪಕ್ಷದವರೂ ಹಾಗೇ ಮಾಡಿದರು.

ಯಾರೂ ಗುರುತಿಸಲಿಲ್ಲ . ಕೊನೆಗೆ  ಜಾತಿಗೊಂದರಂತೆ ರಚಿಸಲಾಗಿದ್ದ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಲಾಯಿತು- 'ನಮ್ಮವರಾ?'

 ಆಗಲೂ ಯಾರಿಗೂ ಗುರುತು ಸಿಗಲಿಲ್ಲ.

 ಅಷ್ಟೇ!
*
✍️ ಕಾಜೂರು ಸತೀಶ್ 

Sunday, August 18, 2024

ಸಮುದ್ರ



''ಅತ್ಯಂತ ದೊಡ್ಡ ಸಮುದ್ರ ಯಾವುದು?'' ಶಿಕ್ಷಕರು ವಿದ್ಯಾರ್ಥಿಯನ್ನು ಕೇಳಿದರು.

ವಿದ್ಯಾರ್ಥಿಯು ಒಂದು ಕ್ಷಣ ಯೋಚಿಸುತ್ತಾ ನಿಂತಿದ್ದನ್ನು ಕಂಡು ಶಿಕ್ಷಕರೇ ಉತ್ತರ ಹೇಳಿದರು.

''ಅಲ್ಲ ಸರ್ ... ಅಶಾಂತವಾದ ಮನಸ್ಸೇ ಅತ್ಯಂತ ದೊಡ್ಡ ಸಮುದ್ರ'' ವಿದ್ಯಾರ್ಥಿ ಹೇಳಿದ.

ಶಿಕ್ಷಕರು ಒಂದು ಕ್ಷಣ ಕಣ್ಣು ಮುಚ್ಚಿ ನಿಂತು ತನ್ನೊಳಗೆ ಮುಳುಗಿದರು.
ತನ್ನ ಆಳದಿಂದ ಸಾಲು ಸಾಲು ಅಲೆಗಳೆದ್ದು ತಲೆಗೆ ಅಪ್ಪಳಿಸಿ ಸಾಯುತ್ತಿದ್ದವು.
ಮನಸ್ಸಿನ ತುಂಬೆಲ್ಲಾ ನೊರೆಗಳು- ಗುಳ್ಳೆಗಳು.

ಮತ್ತೆ ತಡ ಮಾಡಲಿಲ್ಲ.
 ವಿದ್ಯಾರ್ಥಿಯನ್ನು ತರಗತಿಯಿಂದ ಹೊರಗೆ ಹಾಕುವ ಬದಲು ಶಿಕ್ಷಕರೇ ತರಗತಿಯ ಹೊರಗೆ ಹೋಗಿ ನಿಂತರು.
*


ಮಲಯಾಳಂ ಮೂಲ -
 ಪಿ ಕೆ ಪಾರಕ್ಕಡವು 

ಕನ್ನಡಕ್ಕೆ - ಕಾಜೂರು ಸತೀಶ್

Wednesday, July 31, 2024

ನಶೆಯ ಲೇಖನಿಯಲ್ಲಿನ ಕವಿತೆಗಳು

ಮನದ ಬೇಗುದಿಗೆ
ಮುಲಾಮು ಹಚ್ಚಲು
ನನ್ನೀ ಲೇಖನಿಯೊಟ್ಟಿಗೆ ಹೊರಟಿರುವೆ

ಹೀಗೆ ತಮ್ಮ ಕವಿತೆಗಳ ಸ್ವರೂಪದ ಕುರಿತು ಹೇಳುತ್ತಾ ಸೌಮ್ಯ ಹೆಗ್ಗಡಹಳ್ಳಿ ಅವರು ಶ್ರಮಸಂಸ್ಕೃತಿಯ ಬೇರುಗಳನ್ನು ಅವ್ವ ಅಪ್ಪ ಆದಿಮ ಕೃಷಿಯ ರೂಪಕದೊಂದಿಗೆ ತಮ್ಮ ಕವಿತೆ ನಶೆಯ ಲೇಖನಿಯಲ್ಲಿ ನೋಡುತ್ತಾರೆ. ಶ್ರಮದ ಹಿಂದಿರುವ ಸಹಜ ಅಸಹಾಯಕತೆಗಷ್ಟೇ ಅದು ನಿಲ್ಲುವುದಿಲ್ಲ. ದುಃಖವನ್ನು ಹತಾಶೆಯನ್ನು ಮೀರುವ ಛಲವೂ  ಈ ಕವಿತೆಗಳಿಗಿವೆ.


ನಿಗಿ ಕೆಂಡಕೆ ನೀರಟ್ಟಿದಂತೆ
ಕಾವುತಾಗಿಸಿ ಬಿಡಲೊಲ್ಲಳು ಅವ್ವ
ಹಣೆಯಲ್ಲಿ ಬೆವರುಟ್ಟುವ ತನಕ
(ಮೀಯುವುದೆಂದರೆ ಚೈತನ್ಯಗಳ ಹುಟ್ಟು)

ಕುದಿಯೊಳಗಿನ ಬೆಂದಕ್ಕಿಯು
ಎಡೆಗೆ ಅನ್ನವಾಗಿ
ಹಸಿವ ತಣಿಯುವಾಗ
ಮನದ ಬೇಗುದಿಗೆ
ಕಣ್ಣೀರಾಗುವುದೇಕೆ?
ನಿನ್ನೊಳಗಿನ ಛಲದ ಚಿಗುರಿಗೆ
ಚುಮುಕಿಸಿದ ನೀರಾಗಲಿ ಬಿಡು
( ನಿನ್ನೊಳಗಿನ ನೀನು)

ಈ ಶ್ರಮಸಂಸ್ಕೃತಿಯ ಛಲ ಹಠತ್ತಾಗಿ ಕುಸಿಯುವುದು ಸಾವಿನ ಮೂಲಕ:

ಅಪ್ಪ ಅಜ್ಜನಾಗಿ ತಲೆಗೊಂದು ಪೇಟಕಟ್ಟಿ
ಕೋಲಿಡಿದು ನಮ್ಮೊಟ್ಟಿಗೆ ಸುತ್ತಿ ಬರುವೆನೆಂದು ಕನಸ ಕಂಡಿದ್ದೆ
ಕೋಲಿನ ಹಿಡಿಕೆ ಸವೆಯಲ್ಲಿಲ್ಲ ನೆರಿಗೆ ಹತ್ತಲಿಲ್ಲ ಬಟ್ಟೆ ಹೀಗೆಂದು ಮಾತಿಲ್ಲದೆ ಸಾಗಿಬಿಟ್ಟ ಅಪ್ಪ
(ಅಪ್ಪನೆಂಬ ಅನಂತ)

ಹೀಗೆ ಸಮಾಜವು ಹುಟ್ಟುವ ಅಸಮಾನತೆಯ ಫಲಿತವಾದ ಅಸಹಾಯಕತೆಯನ್ನು ದಾಟುವ ಅದಮ್ಯ ಛಲ ಮತ್ತೆ ಮತ್ತೆ ಆವರ ಕವಿತೆಗಳಲ್ಲಿ ಮರಳುತ್ತದೆ.

ಎಂಜಲೆಲೆಗೆ ಕೈಯಿಟ್ಟು
ಹಸಿವ ತಣಿವ ಕೈಗಳಿರುವಾಗ
ಮೃಷ್ಟಾನ್ನದ ಬಯಕೆ
ನನಗೇಕೆ?
(ಛಲ)

'ಅಕ್ಷರ'ವೆಂಬ ಬೆಳಕು ಇಂತಹ ಅಸಮಾನತೆಗಳನ್ನು ದೂರಮಾಡುತ್ತದೆ ಎಂಬ ನಿಲುವು ಕವಿಯದು.

ತಗ್ಗಿದ ತಲೆಯೊಳಗೆ
ಹೊಕ್ಕಿದ ವಿಚಾರಗಳು
ತಲೆಯೆತ್ತಿ ನಡೆಯಲೇಬೇಕು
ಅದೊಮ್ಮೆ
ಅಕ್ಷರವಾಗಿ ಪುಟಿದು
ಓದುವ ಕೈಗಳಿಗೆ
ತಾಗಲೇಬೇಕು
(ಓದು)

ಬಡತನ, ಶೋಷಣೆ, ಹಸಿವು, ಅಸಮಾನತೆಗಳ ಮೇಲಿನ ಕಾವ್ಯವಿದು; ನೆಲಮೂಲದ ಕಾವ್ಯವಿದು. ಅಕ್ಷಯ ಪಾತ್ರೆಯಂತಹ ಇಂತಹ ಆಶಯಗಳು ಎಲ್ಲ ಕಾಲದಲ್ಲೂ ಹುಟ್ಟುವಂತವುಗಳು. ಇನ್ನಷ್ಟೂ ತೀವ್ರವಾಗಿ ಹಾಗೂ ಸೂಕ್ಷ್ಮವಾಗಿ ಅವುಗಳನ್ನು ಹೇಳಿದರೆ ಈ ಕವಿತೆಗಳಿಗೆ ಹೆಚ್ಚು ಪರಿಣಾಮ ದಕ್ಕಬಲ್ಲದು.
*
ಕಾಜೂರು ಸತೀಶ್ 

Wednesday, July 24, 2024

ಪ್ರಶ್ನೆ

ರಾಜನು ಸಭೆ ಕರೆದು ತನ್ನ ಸಾಧನೆಗಳನ್ನು ವಿವರಿಸತೊಡಗಿದನು. ತಾನಿನ್ನು ಹೂವಿನ ರಸ್ತೆಯನ್ನು ನಿರ್ಮಿಸಬೇಕೆಂದಿದ್ದೇನೆ ಎಂದು ಹೇಳಿದನು. ಆ ಕುರಿತು ಪ್ರತಿಯೊಬ್ಬರ ಬಳಿ ಅಭಿಪ್ರಾಯ ಕೇಳಿದನು. ಎಲ್ಲರೂ 'ಅತ್ಯುತ್ತಮ ನಿರ್ಧಾರ' ಎಂದರು. ತಿಮ್ಮನ ಸರದಿ ಬಂದಾಗ ' ಅಷ್ಟೆಲ್ಲಾ ಹೂವುಗಳನ್ನು ಕಿತ್ತರೆ ಹಕ್ಕಿಗಳ, ಚಿಟ್ಟೆಗಳ ಆಹಾರ ಕಸಿದಂತಾಗುವುದಿಲ್ಲವೇ? ಬೇಸಿಗೆಯಲ್ಲಿ ಬಾಡುವುದಿಲ್ಲವೇ? ಮಳೆಗಾಲದಲ್ಲಿ ಕೊಚ್ಚಿಹೋಗುವುದಿಲ್ಲವೇ?' ಎಂದನು.

ಅಂದಿನಿಂದ ತಿಮ್ಮನಿಗೆ ಗೆಳೆಯರು ಇಲ್ಲವಾದರು. ಅವರೆಲ್ಲರೂ ಮಾಡಬೇಕಾಗಿದ್ದ ಕೆಲಸಗಳು ತಿಮ್ಮನ ಹೆಗಲಿಗೇರಿದವು.
*
ಕಾಜೂರು ಸತೀಶ್

Saturday, July 20, 2024

ದನಿ

-೧-
ಪ್ರಿಯ ಮಧ್ಯರಾತ್ರಿಯೇ
ಯಾರೋ ನಿನ್ನ ನಿದ್ದೆ ಕದ್ದರು
ಮೌನವಾಗಿದ್ದ ಕಾಲದಲ್ಲಿ
ಹೂಂಗುಡುತ್ತಿದ್ದ ಕಾಲದಲ್ಲಿ
ಹೇಗೋ ನಿದ್ದೆಗೆ ಶರಣಾಗುತ್ತಿದ್ದೆ
ಈಗ ದನಿಯೇರಿಸಿರುವೆ
ಸಾಯುವುದಕ್ಕೂ ಸಿದ್ಧವಾಗಿರುವೆ
ಇನ್ನು ನಿನ್ನ ನಿದ್ದೆಯೆಲ್ಲಾ
ನ್ಯಾಯದೇವತೆಯ ಕಣ್ಣುಗಳಿಗೇ

-೨-
ಈಗ ಬೆಳಕಾಗಿದೆ
ಯಾರೋ ನಿನ್ನ ನಿದ್ದೆ ಕದ್ದ ಖುಷಿಯಲ್ಲಿ
ಬೆಳಕನ್ನೂ ಕದ್ದರು
ಮೌನವಾಗಿದ್ದ ಕಾಲದಲ್ಲಿ
ಕಿವಿತುಂಬ ಹಕ್ಕಿಗೊರಲು
ಈಗ ದನಿಯೇರಿಸಿರುವೆ
ಸಾಯುವುದಕ್ಕೂ ಸಿದ್ಧವಾಗಿರುವೆ
ಕದ್ದವರ ಕೈಯಲ್ಲೀಗ ಹಸಿರು ಶಾಯಿ.
*

✍️ಕಾಜೂರು ಸತೀಶ್

ಮರಣದಂಡನೆ

ದಿನ ಕಳೆದಂತೆ 'ಮೌನ'ಕ್ಕೆ ಬದುಕುವುದು ಕಷ್ಟವೆನಿಸಿತು. ಒಂದು ದಿನ ಅದು ಮಾತನ್ನು ಕೊಂದಿತು. ಆದರೆ ಯಾವ ಸಾಕ್ಷಿಯನ್ನೂ ಅದು ಉಳಿಸಲಿಲ್ಲ.

ಮರುದಿನವೇ ಅದಕ್ಕೆ ಮರಣದಂಡನೆ ವಿಧಿಸಲಾಯಿತು. 'ಹೇಗೂ ಮಾತನಾಡುವುದಿಲ್ಲವಲ್ಲಾ' ನ್ಯಾಯಾಧೀಶ ಹೇಳಿದ್ದ.
*

ಕಾಜೂರು ಸತೀಶ್ 

Tuesday, July 9, 2024

ಪಾದ

ಪಾದ ಆಗಿದ್ದಕ್ಕೇನೋ
ಸದಾ ತುಳಿಸಿಕೊಳ್ಳುತ್ತಿರುವುದು

ಇನ್ನು
ನಾನೊಂದು ಆಕಾಶವಾಗಬೇಕು
ನಕ್ಷತ್ರಗಳಷ್ಟೇ ಬಿರಿದು ಅರಳುವ
ಅಪಾರ ಕಾಯ
*


ಮಲಯಾಳಂ ಮೂಲ - ಲೂಯಿಸ್ ಪೀಟರ್ 

ಕನ್ನಡಕ್ಕೆ- ಕಾಜೂರು ಸತೀಶ್

ನೆರೆಮನೆ


ಬೆಳಕಾದಾಗ
ನೆರೆಮನೆ ಮಾಯವಾಗಿತ್ತು

ಏನಾಗಿರಬಹುದು
ಕುಂಞಾಲಿ ಕಾಕನಿಗೂ
ಆಮೀನ ಅತ್ತೆಗೂ
ಕುಂಞಾಮೀನಾಳಿಗೂ

ಅವರ ಅಂಗಳದ
ಮದರಂಗಿಯ ಬೇರುಗಳು
ನನ್ನ ಮನೆಯ ದಾಸವಾಳವನ್ನು
ಭಯದಿಂದ ನಡುಗುತ್ತಾ ಬಿಗಿದಪ್ಪಿದೆ

ಒಂದರಿಂದ ಹತ್ತರವರೆಗೆ
ಭಾರತವೇ ನಮ್ಮ ದೇಶವೆಂದು
ಒಟ್ಟಾಗಿ ಕಲೆತು ಕಲಿತ
ಕುಂಞಾಮೀನಾಳ ಕಣ್ಣುಗಳು
ನನ್ನ ಕಿಟಕಿಯ ಒಳಗೆ ತುಂಬಿ ತುಳುಕುತ್ತಿವೆ

ಒಂದೇ ಒಂದು ರಾತ್ರಿಯ ಕತ್ತಲಲ್ಲಿ
ಸಾವಿರ ಸಾವಿರ ಮನೆಗಳು ಮಾಯವಾಗಬಹುದು
ಕೋಟಿ ಜನ ಕಾಣೆಯಾಗಬಹುದು

ಆದರೆ ಒಂದು ಬೆಳಗು ಸಾಕು ನಮಗೆ
ಒಂದು ಬೆಳಕು ಸಾಕು..
*


ಮಲಯಾಳಂ ಮೂಲ - ಪವಿತ್ರನ್ ತೀಕ್ಕುನಿ

ಕನ್ನಡಕ್ಕೆ- ಕಾಜೂರು ಸತೀಶ್

Sunday, July 7, 2024

ಪತ್ರ

'ಪ್ರೀತಿಪೂರ್ವಕವಾಗಿ'
ಎಂದಷ್ಟೇ ಬರೆದ ಪತ್ರವೊಂದು ಸಿಕ್ಕಿತು
ಬರೆದದ್ದು ಯಾರು?
ಎಲ್ಲಿಂದ ಬರೆದದ್ದು?
ಗೊತ್ತಿಲ್ಲ
ಬರೀ ಒಂದೇ ಒಂದು ಸಾಲಿನ ಪತ್ರ.


ಯಾರಿರಬಹುದೆಂದು ಯೋಚಿಸಿದೆ
ಎಷ್ಟು ಉದಾತ್ತ ಪ್ರೀತಿ
ಇಲ್ಲ ನೆನಪಾಗುತ್ತಿಲ್ಲ


ತಮಾಷೆಗೆ ಯಾರಾದ್ರೂ ಮಾಡಿರ್ಬಹುದು
ಗೆಳೆಯ ಹೇಳಿದ

ಯಾಕೋ ಆ ರಾತ್ರಿ
ನಿದ್ದೆಹತ್ತಲೇ ಇಲ್ಲ

ವಿದ್ಯುದ್ದೀಪದ ಸ್ವಿಚ್ ಆನ್ ಮಾಡಿದೆ
ಕಿಟಕಿ ತೆರೆದೆ
ಹೆಸರೇ ತಿಳಿಯದ ಹೂಗಳ
ಪರಿಮಳದೊಂದಿಗೆ
ಗಾಳಿ ಪ್ರವೇಶಿಸಿತು 
ಕೋಣೆಯಿಡೀ ಅದರದ್ದೇ ಓಡಾಟ 

ಪುಟ್ಟ ಮಕ್ಕಳಿಗೆ ಹೇಳುವಂತೆ 
ಬೀಳ್ಬೇಡ ಜೋಪಾನ ಎಂದು 
ಗಾಳಿಗೆ ಹೇಳಿದೆ

ಯಾಕೋ  ಎನೋ 
ಮನೆಗೆ ಕರೆಮಾಡಬೇಕೆನಿಸಿತು

ಏನಾಯ್ತು ಎಂದರು   ಗಾಬರಿಯಿಂದ 
ಏನೂ ಇಲ್ಲ ಸುಮ್ನೆ ಮಾಡಿದ್ದು
ಎಂದಷ್ಟೇ ಉತ್ತರಿಸಿ ಫೋನಿಟ್ಟೆ

ಮೇಜಿನ ಮೇಲಿದ್ದ
ಆ ಪತ್ರ ರೆಕ್ಕೆಬಿಡಿಸಿತು 
'ಪ್ರೀತಿಪೂರ್ವಕ' ಎಂಬ ಆ ಹಕ್ಕಿ
 ಹಾರುತ್ತಾ ಹಾರುತ್ತಾ
ನೇರ ಎದೆಗೇ ಇಳಿಯಿತು.
*


ಮಲಯಾಳಂ ಮೂಲ - ಹರೀಶ್ ಶಕ್ತಿಧರನ್
ಕನ್ನಡಕ್ಕೆ- ಕಾಜೂರು ಸತೀಶ್ 

Friday, July 5, 2024

ಎಲ್ಲಿ ಹೋದರು?

ಆ ಮನುಷ್ಯ ಈ ಬೆಳಿಗ್ಗೆ  ನೆನಪಾದರು.ಅವರಿಂದ ಸಂದೇಶ ಬರದೆ ಮೂರು ತಿಂಗಳಾಗಿದ್ದವು!

'ನಿಮ್ಮ ಓದಿಗೆ' ಎಂಬ ಆರಂಭ ಅವರ ಸಂದೇಶಗಳಿಗೆ. ಪ್ರತಿಕ್ರಿಯಿಸಿದರೆ ಅವರ ಸಂಭ್ರಮ ನೋಡಬೇಕು!

ಫೇಸ್ಬುಕ್ ನಲ್ಲಿ ಅವರನ್ನು ಹುಡುಕಿದೆ. ಜನ ಅವರಿಗೆ ಅಂತಿಮ ನಮನವನ್ನು ಸಲ್ಲಿಸಿ ಮೂರು ತಿಂಗಳು ಕಳೆದಿದ್ದವು!


ಮಾಲಿಂಗರಾಯ ಹೂಗಾರ ಎಂಬ ಈ ಅಪ್ಪಟ ಕಾವ್ಯಪ್ರೇಮಿ ಅನಾರೋಗ್ಯದಿಂದ ತೀರಿಹೋಗಿದ್ದರು! ನನ್ನಂಥ ನೂರಾರು ಜನರೊಂದಿಗೆ ಕವಿತೆಯ ಕಾರಣಕ್ಕಾಗಿ ಪರಿಚಿತರಾಗಿ ಇದ್ದಕ್ಕಿದ್ದ ಹಾಗೆ ಕವಿತೆಯನ್ನೂ ಅದರಂತೆಯೇ ಇರುವ ಅವರ ದೇಹವನ್ನೂ ತೊರೆದುಹೋದ ಆ ಮನುಷ್ಯ ಈ ದಿನವೆಲ್ಲ ನನ್ನನ್ನು ಮತ್ತಷ್ಟೂ ಭಾರವಾಗಿಸಲೆಂಬಂತೆ ಉಳಿದುಹೋಗಿದ್ದಾರೆ.
*
ಕಾಜೂರು ಸತೀಶ್

ಸುರಿವ ಮಳೆಯಲ್ಲಿ



ಬಿಸಿಲಲ್ಲಿ
ಮಳೆಯಲ್ಲಿ
ಕೊಡೆಯಲ್ಲಿ
ನನ್ನೊಂದಿಗೆ ಹೆಜ್ಜೆಹಾಕಲು
ನಿನ್ನ ಕರೆದದ್ದು
ಬದಲಿಗೆ ಕೊಡೆ ಹಿಡಿಯಲಿಕ್ಕಲ್ಲ

ಹೂವಿನ ಪರಿಮಳ ಹೀರಿ
ಸುಖಿಸಲು ನಿನಗೆ ಹೇಳಿದ್ದು
ಹೂವನ್ನೇ ಕುಯ್ಯಲಿಕ್ಕಲ್ಲ

ಆದರೆ
ನೀನು ನನ್ನ ಕೊಡೆಯನ್ನೂ ಹೂವನ್ನೂ ತೆಗೆದು
ಬಿಸಿಲಲ್ಲಿ ಓಡಿದೆ

ಸುರಿವ ಮಳೆಯಲ್ಲಿ
ನಾನು ನನ್ನ ಕಣ್ಣುಗಳಲ್ಲಿ ಕಡಲಾಗಿ
ಸುಮ್ಮನೆ ನಿಂತುಬಿಟ್ಟೆ
*


ಮಲಯಾಳಂ ಮೂಲ- ಶಿಮ್ನ ಕೇರಳ ಕೆ ಪಿ

ಕನ್ನಡಕೆ - ಕಾಜೂರು ಸತೀಶ್

ದಾನ



ನನ್ನನ್ನು ತುಂಡು ತುಂಡಾಗಿ
ಹಂಚಿಬಿಡುತ್ತೇನೆ
ಮಕ್ಕಳಿಗಾಗಿ
ಗಂಡನಿಗಾಗಿ
ಮಿತ್ರರಿಗಾಗಿ
ಅಸಹಾಯಕರಿಗಾಗಿ

ಕಡೆಗೆ
ನನ್ನ ಕನ್ನಡಿಯಲ್ಲಿ 
ನನ್ನ ಕಣ್ಣುಗಳನ್ನಷ್ಟೇ ನೋಡುತ್ತೇನೆ
ಜೊತೆಗೆ ಕಣ್ಣೀರನ್ನೂ 
*


ಮಲಯಾಳಂ ಮೂಲ - ಮಾಧವಿಕುಟ್ಟಿ 

ಕನ್ನಡಕ್ಕೆ- ಕಾಜೂರು ಸತೀಶ್ 

Friday, June 21, 2024

ಮದುವೆ

ಅವನ ಮದುವೆಯ ದಿನ ಇವನು ಜ್ವರದಿಂದ ಮಲಗಿದ್ದ.
ಅಂದಿನಿಂದ ಅವನು ಮಾತುಬಿಟ್ಟ
*
ಗುಂಡು, ತುಂಡು ಇಲ್ಲವೆಂಬ ಸಿಟ್ಟಿನಲ್ಲಿ ಕವರಿಗೆ ಹಾಕಿದ್ದ ಒಂದು ನೋಟನ್ನು ಕಿಸೆಗೆ ಇಳಿಸಿದ
ಅದು ಬಾರಿನ ಡ್ರಾಯರ್ ಸೇರಿತು
*
ಕಾರಿನಲ್ಲಿ ಬಂದು ಹೋದರು
ಸಾವಿರ ಸಾವಿರ ಮೌಲ್ಯದ ಬಟ್ಟೆ
ಕೆಜಿಗಟ್ಟಲೆ ಬಣ್ಣ - ಆಭರಣ
ಸ್ವಲ್ಪ ಉಂಡರು ಬಿಟ್ಟುಹೋದರು

ಇದೇನು ಇಷ್ಟೊಂದು ಕಾಗೆಗಳು ಇಲ್ಲಿ
ಇಂದು ಯಾವ ಕಾಗೆಯ ಮದುವೆ?
*
ಮನೆಯನ್ನು ಮಾರಿ ಮದುವೆ ಮಾಡಿದ್ದರು
ಈ ಕುಣಿಕೆ ಕೂಡ ಬಾಡಿಗೆಯದ್ದೇ!
*
ಸೂರ್ಯ ಹೇಳುತ್ತಿತ್ತು
ಇವತ್ತು ಮುಖಗಳೇ ಕಾಣಿಸುತ್ತಿಲ್ಲ
ಯಾರ ಗುರುತೇ ಸಿಗುತ್ತಿಲ್ಲ!
*
ಇರುವ ಒಂದು ಚೈನನ್ನೂ ಅಡವಿಟ್ಟಾಗ
ನೆರೆಮನೆಯವರ ಚೈನು ರಿಂಗುಗಳಿಗ ಸರಳ ವಿವಾಹದ ಕನಸು ಕಮರಿತು
*
ಅವನು ಐನೂರು ಹಾಕಿದ್ದ
ಇವನು ಐನೂರಾ ಒಂದು

ಕೊಳೆ ತೊಳೆಯಲೂ ಅದು ಒಳ್ಳೆಯದಂತೆ!
*
ಅವರಿಬ್ಬರದು ರಿಜಿಸ್ಟರ್ ಮದುವೆ
ಅವರೂರ ಮನದಲ್ಲಿ ಅಮರ ಕೈದಿಗಳು
*


- ಕಾಜೂರು ಸತೀಶ್ 

Monday, June 10, 2024

ಮನೆ

ತಿಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದ. ಈ ಬಾರಿ ಅವನ ಪಕ್ಷ ಗೆದ್ದು ಅಧಿಕಾರಕ್ಕೇರಿತ್ತು. ಇದೇ ಖುಷಿಯಲ್ಲಿ ಅವನಿಗೆ ಐಷಾರಾಮಿ ಮನೆಯೊಂದನ್ನು ಕಟ್ಟಿಕೊಡಲಾಯಿತು.

ಮನೆಯಿಲ್ಲದವರು, ಗುಡಿಸಲಿನಲ್ಲಿರುವವರು, ಬಂಗಲೆಯಲ್ಲಿರುವವರು ಎಲ್ಲರೂ ಬಂದು ಉಡುಗೊರೆಗಳನ್ನು ಕೊಟ್ಟುಹೋದರು.
ಕಾಜೂರು ಸತೀಶ್ 

Sunday, June 9, 2024

ಯಮ

ಯಮ ಎದುರಿಗೆ ಬಂದು ನಿಂತಾಗ
ಅವಳು ಸೀರೆ ಉಡುತ್ತಿದ್ದಳು

ಪೂರ್ಣ ಉಟ್ಟೇ ಇರಲಿಲ್ಲ
ಸಾಕು ಸಾಕು
ಬಾ ಜೊತೆಗೆ
ಎಂದನು ಯಮ


ಅವಳು ಯಮನನ್ನೇ ನೋಡಿದಳು
ಚಿತ್ರದಲ್ಲಿ ಕಂಡಂತೆ ಇರಲಿಲ್ಲ
ಎಷ್ಟು ಚಂದ ಗೊತ್ತಾ
ಒಳ್ಳೆಯ ಎತ್ತರ
ಅದಕ್ಕೆ ಸರಿಯಾದ ತೂಕ


ಯಮ ಒಮ್ಮೆ ನಕ್ಕ
ಸಾಕು ಸಾಕು
ಬಾ ಜೊತೆಗೆ


ಸ್ವಲ್ಪ ಇರಿಯಪ್ಪ
ಸ್ವಲ್ಪ ಜಡೆ ಕಟ್ಕೋತೇನೆ..

ನಿಮ್ದು ಮದ್ವೆ ಆಗಿದ್ಯಾ?
ಯಾಕೆ?
ಸುಮ್ನೆ ಕೇಳ್ದೆ
ಆಗಿದೆ
ಹೆಂಡ್ತಿ ಅಂದ್ರೆ ಇಷ್ಟನಾ?
ಹೌದು

ಸಾಕು ಸಾಕು
ಬಾ ಜೊತೆಗೆ

ಈ ಬೊಟ್ಟು ಹಾಕೋತೇನೆ
ಕನ್ನಡಿಯಲ್ಲಿ ಅಂಟಿಸಿಟ್ಟ ಬೊಟ್ಟನ್ನು
ಹಣೆಗಿಟ್ಟಳು

ಇಷ್ಟು ಸಾಕು
ಬಾ ಜೊತೆಗೆ

ಯಮ ಅವಳ ಮುಖವನ್ನೊಮ್ಮೆ ನೋಡಿದ
ಅವಳ ಕಣ್ಣುಗಳು ತುಂಬಿದ್ದವು

ಯಮ ಅವಳ ಕಣ್ಣೀರು ಒರೆಸಿದ
ಅವಳನ್ನಾಲಂಗಿಸಿ
 ಹಣೆಗೆ ಮುತ್ತನ್ನಿಟ್ಟ


ಇಷ್ಟು ಪ್ರೀತಿಯಿಂದ
ಯಾರೂ ನೋಡಿಕೊಂಡಿರಲಿಲ್ಲ ನನ್ನನ್ನು 
ಮುದ್ದಿಸಿರಲಿಲ್ಲ 


ಯಮ ನಕ್ಕು ನುಡಿದ
ಅದಕ್ಕೇ ಎಲ್ಲರೂ ನನ್ನ ಹಿಂದೆ ಬರುವುದು
ಜಗದ ಎಲ್ಲವನ್ನೂ 
ಎಲ್ಲರನ್ನೂ ತೊರೆದು


ಅವಳು ಆ ಕೈಹಿಡಿದು ನಡೆದಳು
 ದೂರ ಬಹುದೂರ
*
ಮಲಯಾಳಂ ಮೂಲ -ನಯನಾ ವೈದೇಹಿ



ಕನ್ನಡಕ್ಕೆ- ಕಾಜೂರು ಸತೀಶ್

Monday, May 27, 2024

ಅವ್ಯವಸ್ಥೆ ಎಂದರೆ..


ಆ ಮೇಷ್ಟ್ರನ್ನು ಆ... ಶಾಲೆಗೆ ನಿಯೋಜಿಸಿದ್ದರು! (ಅಷ್ಟು ಹೊಟ್ಟೆಕಿಚ್ಚು?)

ಅಲ್ಲಿ ಇಬ್ಬರು ಮಕ್ಕಳು. ಒಂದೇ ಮನೆಯ ಇಬ್ಬರು ಮಕ್ಕಳು! ತಂತ್ರಜ್ಞಾನ/ facebook/whatsappಗಳನ್ನೇ ಅರಿಯದ ಇಬ್ಬರು. ಗುದ್ದಲಿ ತೆಗೆದು ಅಗೆಯುವುದೆಂದರೆ ಅಷ್ಟು ಇಷ್ಟ ಆ ಮಕ್ಕಳಿಗೆ.

ಅಲ್ಲಿ ಮಧ್ಯಾಹ್ನದ ಬಿಸಿಯೂಟ ಸಿದ್ಧಪಡಿಸುವವರಿಲ್ಲ. ಇದ್ದರೂ ಊರುಬಿಟ್ಟು ಹೊರಟುಹೋಗಿದ್ದಾರೆ. ಯಾರನ್ನಾದರೂ ಕೇಳೋಣವೆಂದರೆ ಮೊಬೈಲ್ ಸಿಗ್ನಲ್ ಇಲ್ಲ. ನೇಮಿಸೋಣವೆಂದರೆ ಅಂಥವರು ಆ ಊರಲ್ಲಿಲ್ಲ.

ಮೇಷ್ಟ್ರು ಅಂದಿನಿಂದ ಅಡುಗೆ ಭಟ್ಟರಾದರು.(ಇದನ್ನೆಲ್ಲ ವಿಚಾರಿಸಬೇಕಾದ ಮಂದಿ ಮನೆಯಲ್ಲೇ ಕುಳಿತು ಭರ್ಜರಿ ಅಡುಗೆ ಮಾಡಿ ಊಟಮಾಡಿ ಹಾಯಾಗಿದ್ದರು!).
ಅಡುಗೆ ಸಾಮಗ್ರಿಗಳನ್ನು ತಂದು, ಗ್ಯಾಸ್ ತಂದು ( ಅಡುಗೆ ಸಿಬ್ಬಂದಿ ಇಲ್ಲದಿದ್ದರೆ ಹಣ ಮುಟ್ಟುವಂತಿಲ್ಲ!) ಅಡುಗೆ ಮಾಡಿ ,ಪಾತ್ರೆ ತೊಳೆದು ಎರಡು ತಿಂಗಳು professional cook ಆದ ಆ ಮೇಷ್ಟ್ರು ಹೊಸ ಕೆಲಸಕ್ಕೆ ಒಗ್ಗಿಕೊಳ್ಳುತ್ತಿರುವಾಗಲೇ ಆ ಮಕ್ಕಳೆರಡು ದೂರದ ವಸತಿನಿಲಯಕ್ಕೆ ಸೇರಿಕೊಂಡರು. ಆ ಮೂಲಕ ಆ ಶಾಲೆಯ ಬಾಗಿಲು ಸಂಪೂರ್ಣವಾಗಿ ಮುಚ್ಚಿಕೊಂಡಿತು.

ಇತ್ತ ಮೂಲ ಶಾಲೆಯ ಮಕ್ಕಳು ಒಬ್ಬರಾದ ಮೇಲೆ ಒಬ್ಬರು ವರ್ಗಾವಣೆ ಪತ್ರ ಪಡೆದುಕೊಂಡು ಬೇರೆ ಕಡೆಗೆ ಹೊರಟುಹೋಗಿದ್ದರು.

ಪ್ರತೀ ಮಾನ್ಸೂನ್ ಆರಂಭದಲ್ಲಿ ಇದು ಮುಂದುವರಿಯುವಾಗ ಆ ಮೇಷ್ಟ್ರು ಇರುವ ಮೂಲ ಶಾಲೆಯ ಬಾಗಿಲು 'ಮುಚ್ಬಿಡ್ಲಾ ಮೇಷ್ಟ್ರೇ' ಎಂದು ಮುಗ್ಧವಾಗಿ ಕೇಳಿದಂತೆ ಅನ್ನಿಸುತ್ತದೆ.

Friday, April 19, 2024

ಆಹಾ


ಒಂದಾನೊಂದು ಕಾಲದಲ್ಲಿ
ಒಂದು ಊರಿನಲ್ಲಿ
ಮನೆಗೆಲಸದ ನಡುವೆ
ಸೊಂಟ ಸರಿಪಡಿಸಿ
ದಣಿವಾರಿಸಿಕೊಳ್ಳುವುದರ ನಡುವೆ
ಹೆಂಡತಿ ಒಂದು ಕವಿತೆ ಬರೆದಳು
ಓದಿದವರೆಲ್ಲರೂ ''ಆಹಾ'' ಎಂದರು.

ಹೆಂಡತಿ ಮತ್ತೊಂದು ಕವಿತೆ ಬರೆದಳು
ಓದಿದ ಅವರೆಲ್ಲರೂ ಅಂದರು
"ಇವತ್ತು ಗಂಡಂದಲ್ವಾ ಅಡುಗೆ?''
ಆಹಾ!

ಹೆಂಡತಿ ಮತ್ತೆ ಕವಿತೆ ಬರೆದಳು
ಓದಿದವರೆಲ್ಲರೂ ಒಟ್ಟಾಗಿ ಅಂದರು
''ಇವತ್ತು ಪಾತ್ರೆ-ಪಗಡೆ ತೊಳಿಯೋ ಕೆಲಸ ಎಲ್ಲಾ
ಗಂಡಂದೇ ಅಲ್ವಾ?''
ಆಹ್ಹಾ!

ಹೆಂಡತಿ ಮತ್ತೆ ಕವಿತೆ ಬರೆದಳು
ಓದಿದವರಿಗೀಗ ಸಹಿಸಲಾಗುತ್ತಿಲ್ಲ
''ಮನೆಗೂಡಿಸೋದೆಲ್ಲ ಗಂಡನೇ ಅಲ್ವಾ?''
ಆಹ್ಹಾ!

ಹೆಂಡತಿ ಮತ್ತೆ ಕವಿತೆ ಬರೆದಳು 
ಓದಿದವರೆಲ್ಲ ತಿರಸ್ಕಾರದಿಂದ
''ಇವಳ ಗಂಡ ಅಮ್ಮಾವ್ರ ಗಂಡನೇ ಇರಬೇಕು''
ಆಹ್ಹಾ!

ಹೆಂಡತಿ ಮತ್ತೆ ಒಂದು ಕವಿತೆ ಬರೆದಳು
ಓದಿದವರು ಸೆಟೆದೆದ್ದರು
''ಇವಳ್ನೆಲ್ಲಾ  ನಿಯಂತ್ರಿಸದಿರೋದಕ್ಕೆ ಒಬ್ಬ ಸರಿಯಾದ ಗಂಡ್ಸು ಇಲ್ಲದಿರೋದೇ ಕಾರಣ''
ಆಹ್ಹಾ!

ಗಂಡ ಎಂದಿನಂತೆ
ಕವಿತೆ ಬರೆಯುತ್ತಿದ್ದಾನೆ
ಕಥೆ ಬರೆಯುತ್ತಿದ್ದಾನೆ
ಆತ್ಮರತಿಯಲ್ಲಿ ಮುಳುಗಿದ್ದಾನೆ
 ಓದಿದವರು ಅಹುದಹುದೆನ್ನುತ್ತಿದ್ದಾರೆ
' ಓರ್ವ ಯಶಸ್ವಿ ಪುರುಷನ ಹಿಂದೆ 
 ಒಳ್ಳೆಯ ಹೆಣ್ಣೊಬ್ಬಳಿರುತ್ತಾಳೆ'
ಗಂಡ ಮತ್ತೆ ಮತ್ತೆ ಬರೆಯುತ್ತಿದ್ದಾನೆ 
ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ
ಆಹಾ!


ಮಲಯಾಳಂ ಮೂಲ - ವಿ ಕೆ ಶಾಹಿನ



ಕನ್ನಡಕ್ಕೆ- ಕಾಜೂರು ಸತೀಶ್

Friday, April 12, 2024

ಪ್ರೊಫೆಸರ್



ನನ್ನ ನೆನಪಿದ್ಯಾ ನಿಂಗೆ?
ನಾನು ಪ್ರೊಫೆಸರ್ ಸೇಠ್
ನಿಂಗೆ ಭೂಗೋಳಶಾಸ್ತ್ರ ಕಲಿಸ್ತಿದ್ದೆ

ಹ್ಮ್..ಆರಾಮ
ಈಗ ನಿವೃತ್ತಿ ಜೀವನ
ಆದ್ರೂ ಗಟ್ಟಿಮುಟ್ಟಿಯಾಗಿದ್ದೇನೆ ನೋಡು

ಹೆಂಡ್ತಿ ತೀರ್ಕೊಂಡ್ಳು
ಕೆಲವು ವರ್ಷಗಳಾದ್ವು

ದೇವ್ರ ದಯದಿಂದ ಎಲ್ಲಾ ಮಕ್ಳು ಒಂದು ಹಂತಕ್ಕೆ ಬಂದಿದ್ದಾರೆ
ಒಬ್ಬ ಸೇಲ್ಸ್ ಮ್ಯಾನೇಜರ್
ಮತ್ತೊಬ್ಬ ಬ್ಯಾಂಕ್ ಮ್ಯಾನೇಜರ್
ಇಬ್ರಿಗೂ ಕಾರಿದೆ

ಮೂರ್ನೇಯವ್ನು ಪರವಾಯಿಲ್ಲ
ಆದ್ರೆ ಹೇಳುವಷ್ಟೇನೂ ಇಲ್ಲ ಬಿಡು
ಇರ್ತಾರಲ್ವಾ ಎಲ್ಲರ ಮನೇಲೂ ಒಬ್ಬೊಬ್ರು -ಕಪ್ಪುಚುಕ್ಕೆ ಥರ

ಸರಳ ಮತ್ತು ತರಳ ಇಬ್ರಿಗೂ ಮದ್ವೆಯಾಯ್ತು
ಇಬ್ರಿಗೂ ಒಳ್ಳೆ ಗಂಡಂದಿರೇ ಸಿಕ್ಕಿದ್ರು
ನೀನು ನಂಬಲ್ಲ,  ನಂಗೀಗ ಹನ್ನೊಂದು ಮೊಮ್ಮಕ್ಳು!
ನಿಂಗೆ? ಮೂರು?
ಬಿಡು, ಫ್ಯಾಮಿಲಿ ಪ್ಲ್ಯಾನಿಂಗ್ ಕಾಲ ಅಲ್ವಾ?
ಛೆ! ಛೆ! ನಾನೇನು ಅದರ ವಿರುದ್ಧ ಅಲ್ಲ ಬಿಡು
ಕಾಲಕ್ಕೆ ತಕ್ಕ ಕೋಲ ಹಾಕ್ಬೇಕಲ್ವಾ?
ಜಗತ್ತೇ ಬದಲಾಗ್ತಿದೆ, ನಾವೂ ಬೆಳೀತಿದ್ವಿ ನೋಡು
ಹಳೇ ಮೌಲ್ಯವೆಲ್ಲಾ ಹೋಯ್ತು
ಈಗೇನಿದ್ರೂ ಹೊಸ ರೀತಿನೀತಿಗಳು
ಕಣ್ಮುಚ್ಚಿ ತೆಗೆಯುವಷ್ಟ್ರಲ್ಲಿ ಎಲ್ಲಾ ಬದಲಾಗಿರ್ತದೆ

ವಯಸ್ತಾಯ್ತಲ್ವಾ
ಹಿಂದಿನ ಹಾಗೆ ಸುತ್ತಾಡ್ಲಿಕ್ಕೆ ಆಗ್ತಿಲ್ಲ

ಸ್ವಲ್ಪ ಮೈಕೈ ನೋವು ಬಿಟ್ರೆ ಬೇರೆ ಎಲ್ಲಾ ಓಕೆ
ಶುಗರ್ ಇಲ್ಲ ಬಿಪಿ ಇಲ್ಲ ಹಾರ್ಟ್ ಅಟ್ಯಾಕ್ ಆಗಿಲ್ಲ
ಇದೆಲ್ಲಾ ಯಾಕೆ ಅಂದ್ರೆ ಆಗ ನನಗಿದ್ದ ಶಿಸ್ತುಬದ್ಧ ಜೀವನ ಶೈಲಿ

ನೀನು ಹೇಗಿದ್ದೀಯ ?
ಚೆನ್ನಾಗಿದ್ದೀಯ? ತುಂಬಾ ಸಂತೋಷ
ಈ ವರ್ಷ ನಂಗೆ ಅರವತ್ತೊಂಬತ್ತು ತುಂಬುತ್ತೆ
ಸೆಂಚುರಿ ಹೊಡೀಬೇಕು ಅಂದ್ಕೊಂಡಿದ್ದೀನಿ

ನೀನು ಆಗ ಕಡ್ಡಿ ಥರ ಒಣಗಿಹೋಗಿದ್ದೆ
ಈಗ ಊದ್ಬಿಟ್ಟಿದ್ದೀಯಲ್ವಪ್ಪ!
ಏಯ್.. ಸುಮ್ನೆ ತಮಾಷೆ ಮಾಡ್ದೆ ಆಯ್ತಾ

ಇನ್ನು ಈ ದಾರೀಲಿ ಬರುವಾಗ
ನಮ್ಮ ಮನೆಗೆ ಬರ್ಬೇಕು
ಆ ಮನೆ ಕಾಣ್ತಿದೆಯಲ್ವಾ
ಅದರ ಹಿಂದೆನೇ ನಮ್ಮನೆ.
*


ಇಂಗ್ಲಿಷ್ ಮೂಲ- ನಿಸ್ಸೀಮ್ ಎಜೆ಼ಕಿಯಲ್ 


ಕನ್ನಡಕ್ಕೆ- ಕಾಜೂರು ಸತೀಶ್ 



Saturday, April 6, 2024

'ಕಣ್ಣಲ್ಲಿಳಿದ ಮಳೆ ಹನಿ': ಪ್ರಕೃತಿ ಮೀಮಾಂಸೆ ಮತ್ತು ಆದಿಮ ಜಗತ್ತು: ಮಧು ಬಿರಾದಾರ


'ಲೋಕ ಸಂಕಟಕ್ಕೆ ಪರಿಹಾರ ಪ್ರಕೃತಿಯಲ್ಲಿಯೇ ಇದೆ. ಆ ಕಾರಣದಿಂದಲೇ ಪ್ರಕೃತಿಗೆ ಕಿವಿಗೊಡಬೇಕು. ಹಗಲು ರಾತ್ರಿ ಬದಲಾದಂತೆ ಕಾಡಿನ ನೆರಳು ಚಲಿಸುವಂತೆ ಮನುಷ್ಯ ಚಲಿಸಬೇಕಾಗಿದೆ. ಅಂತಹ ಸಂವೇದನೆ ಇಲ್ಲಿಯ ಕವಿತೆಯಲ್ಲಿ ಕಾಣಬಹುದು' ಎನ್ನುತ್ತಾರೆ ಕವಿ ಮಧು ಬಿರಾದಾರ ಅವರು ಕಾಜೂರು ಸತೀಶ ಅವರ ಕಣ್ಣಲ್ಲಿಳಿದ ಮಳೆಹನಿ ಸಂಕಲನಕ್ಕೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.


ಕಣ್ಣಲ್ಲಿಳಿದ ಮಳೆಹನಿ’ ದಟ್ಟವಾದ ಕಾಡಿನ ಅನುಭವವನ್ನು ಕಟ್ಟಿಕೊಡುವ ಸಂಕಲನ. ಇಲ್ಲಿಯ ಪ್ರಾಣಿ, ಪಕ್ಷಿ ನಿಸರ್ಗ ಸಹಜವಾಗಿ ಬದುಕುತ್ತವೆ. ಬದುಕನ್ನು ಸಂಭ್ರಮಿಸುತ್ತವೆ. ಕವಿಯೂ ಕಾಡಿನ ಭಾಗವಾದಂತೆ ಕಾಣುವನು. ದಟ್ಟವಾದ ಕಾಡು ಕ್ರಮೇಣ ಮೃಗಾಲಯವಾಗುವುದರ ಕುರಿತು ಕವಿಗೆ ಆತಂಕವಿದೆ. ಇಲ್ಲಿಯ ಸಂವೇದನೆಯ ಸೂಕ್ಷ್ಮತೆಯನ್ನು ಗಮನಿಸಬೇಕು. ಕಾಡಿನ ಮರ್ಮರವನ್ನು ಗ್ರಹಿಸಿಕೊಂಡ ಮನಸ್ಸಿಗೆ ಕಾಡೇ ಇಲ್ಲವಾಗುವ ಸಂದರ್ಭ ಬಂದಾಗ ಆಗುವ ಆಘಾತ ಭಯಂಕರವಾದದ್ದು. ಇದು ಕಾಡಿನ ಕಥೆಯಾದರೆ ನಾಡಿನ ವ್ಯಥೆ ಇನ್ನೊಂದು ತರಹವಿದೆ. ಹಳ್ಳಿ ಕೇಂದ್ರಿತ ಜೀವನ ಕ್ರಮವೆಂದರೆ ಅದು ನಿಸರ್ಗ ಜನ್ಯ ಬದುಕಿನಂತೆ. ಭೂಮಿಯ ಮಡಿಲಲ್ಲಿ ಉಸಿರಾಡುವ ಇಲ್ಲಿಯ ಬದುಕು ಕ್ರಮೇಣ ಆಧುನಿಕ ನಗರ ಕೇಂದ್ರಿತ ವಾಸನೆಗೆ ಬಲಿಯಾಗಿ ನರಳುತ್ತದೆ. ವಿಘಟನೆಯ ಬೀಜ ಬಿದ್ದು ಹೆಮ್ಮರವಾಗುವುದರ ಬಗ್ಗೆ ಕವಿ ಕಳವಳ ವ್ಯಕ್ತಪಡಿಸುವನು. ಇಲ್ಲಿಯ ಕವಿತೆ ಲೋಕದ ನಗಾರಿ ನುಡಿಸಿದರೂ ಅದು ಲೋಕಕ್ಕೆ ಸಂಬಂಧಿಸಿದ ಪ್ರತಿಮೆಗಳ ಮೂಲಕವಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಕಾಡಿನ ಪ್ರತಿಮೆಗಳನ್ನು ಬಳಸುವ ಕವಿ ಮಿತ ಭಾಷಿಕನಂತೆ ಕಾಣುವನು. ಎಲ್ಲಿಯೂ ಅಬ್ಬರ ವಾಚಾಳಿತನದ ವ್ಯಸನ ಕಾಣಲಾರದು. ತಾನು ಬದುಕುತ್ತಿರುವ ಕಾಲಮಾನದ ಅಬ್ಬರದ ಪ್ರವಾಹದಿಂದ ದೂರವಿದ್ದು, ಭಿನ್ನವಾದ ದಾರಿಯಲ್ಲಿ ಕ್ರಮಿಸುತ್ತಿರುವ ಕವಿಯೊಬ್ಬನ ಕವಿತೆಯಂತಿವೆ.


ಪ್ರಕೃತಿಯೊಂದಿಗೆ ಸಂವಾದಿಸುವ ಕವಿತೆ ಈ ಲೋಕದ ವಿದ್ಯಮಾನವನ್ನು ಅರ್ಥಪೂರ್ಣವಾಗಿ ಮತ್ತು ಭಿನ್ನವಾಗಿ ತೆರೆದಿಟ್ಟಂತೆ ಇಲ್ಲಿಯ ಕವಿತೆಗಳು ನೇರವಾಗಿ ಸಮಾಜದೊಂದಿಗೆ ಅಥವಾ ಲೋಕದೊಂದಿಗೆ ಸಂವಾದಿಸುವುದಿಲ್ಲ. ಆ ಚಪಲವೂ ಇಲ್ಲ. ಲೋಕ ಸಂಕಟಗಳನ್ನು ಮೈಮೇಲೆ ಹೊತ್ತು ಕಿರುಚಾಡುವುದಿಲ್ಲ. ಕವಿತೆಯ ನಡಿಗೆ ಪ್ರಕೃತಿಯ ಚಲನೆಯಂತಿದೆ. ಇಲ್ಲಿಯ ತಿಳಿವಳಿಕೆ, ಗ್ರಹಿಕೆಗಳು ಪೂರ್ವ ನಿರ್ಧರಿತವಲ್ಲ. ಪ್ರಕೃತಿಯೊಂದಿಗೆ ಮುಗ್ಧ ಮಗುವಿನ ಕೌತುಕದ ಮಾತಿನಂತೆ ಎದೆ ಹಾಲು ಕುಡಿಯುವ ಮಗು ತಾಯಿಯೊಂದಿಗೆ ಮಾತಿಗಿಳಿದಂತಿದೆ. ಇದು ತಾಯಿ ಮಗುವಿನ ನಡುವಿನ ಸಂಭಾಷಣೆಯಾದರೂ ಅದು ಲೋಕಕ್ಕೆ ಸಂಬಂಧಿಸಿದ್ದೇ ಹೊರತು (ತಾಯಿ-ಮಗು) ಆ ಇಬ್ಬರಿಗೆ ಸಂಬಂಧಿಸಿದಂತೆ ಭಾವಿಸಬೇಕಿಲ್ಲ. ಕವಿತೆಯಲ್ಲಿ ಗಟ್ಟಿಯಾದ ತಾತ್ವಿಕತೆ ರೂಪಗೊಳ್ಳುವುದು ಎಂದರೆ ಬೀಜದೊಳಗಿನ ಮರದಂತೆ. ಕೆಸರಿನ ಒಡಲಿಂದ ಎದ್ದು ಬರುವುದಕ್ಕೂ ಮೈಗೆ ಕೆಸರು ಲೇಪಿಸಿಕೊಂಡಿರುವುದಕ್ಕೂ ವ್ಯತ್ಯಾಸವಿದೆ. ಮೈಗೆ ಅಂಟಿಸಿಕೊಂಡಿರುವ ಕೆಸರಿನ ಪಸೆ ಆರಿದಂತೆ ಉದುರಿ ಬೀಳುತ್ತದೆ. ಕೆಸರಿನ ಒಡಲಿಂದ ಜೀವ ಪಡೆದ ಮೊಳಕೆಗೆ ಕೆಸರೇ ಜೀವ ದ್ರವ್ಯವಾಗಿರುತ್ತದೆ.


ಪ್ರಸ್ತುತ ಸಮಾಜ ವಿಘಟನೆ ಮತ್ತು ಕಲುಷಿತಗೊಳ್ಳುತ್ತಿರುವ ಕಾಲದಲ್ಲಿ ಪ್ರಕೃತಿಯೊಂದಿಗೆ ಸಂವಾದಿಸುವುದೆಂದರೆ ಅಂತರಂಗದೊಂದಿಗೆ ಮಾತಿಗಿಳಿದಂತೆ. ಲೋಕ ಸಂಕಟಕ್ಕೆ ಪರಿಹಾರ ಪ್ರಕೃತಿಯಲ್ಲಿಯೇ ಇದೆ. ಆ ಕಾರಣದಿಂದಲೇ ಪ್ರಕೃತಿಗೆ ಕಿವಿಗೊಡಬೇಕು. ಹಗಲು ರಾತ್ರಿ ಬದಲಾದಂತೆ ಕಾಡಿನ ನೆರಳು ಚಲಿಸುವಂತೆ ಮನುಷ್ಯ ಚಲಿಸಬೇಕಾಗಿದೆ. ಅಂತಹ ಸಂವೇದನೆ ಇಲ್ಲಿಯ ಕವಿತೆಯಲ್ಲಿ ಕಾಣಬಹುದು.

ನಾಗರಿಕತೆಯ ಇತಿಹಾಸ, ನಾಗರಿಕ ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕೆ ಹೊರತು ಒಂದು ಕಾಲಮಾನದ ಒಟ್ಟು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡುವಂತಾಗಬಾರದು. ಮನುಷ್ಯನ ಕಥೆ ಅಥವಾ ಚರಿತ್ರೆಯೆಂದರೆ ಅದು ನೆನಪು ತಾನೆ? ಅಕ್ಷರ ಮನುಷ್ಯ ಜನ್ಮದ ಕೋಶ. (ನೆನಪಿನಕೋಶ, ಜ್ಞಾಪಕ ಕೋಶ) ಲಕ್ಷಾಂತರ ವರ್ಷಗಳ ಹಿಂದೆ ಸಂವಹನದ ಭಾಷೆಯಂತೆ ಲಿಪಿಯು ಮುಖ್ಯವಾಯಿತು. ಅಕ್ಷರಗಳ ಮೂಲಕ ಮನುಷ್ಯ ತನ್ನ ಭಾವ ಕೋಶಗಳನ್ನು ಕುತೂಹಲ, ಅಚ್ಚರಿ, ವಿಸ್ಮಯಗೊಳಿಸುವ ಸಂಗತಿಗಳನ್ನು ದಾಖಲಿಸುತ್ತ ಬಂದ. ಒಂದು ವೇಳೆ ಹಾಗೆ ಆಗದೆ ಹೋಗಿದ್ದರೆ? ಇವತ್ತಿನ ನಾವುಗಳು ಹೀಗೆ ಇರಲು ಸಾಧ್ಯವಿತ್ತೆ? ‘ಎಲ್ಲಿ’? ಕವಿತೆಯ ತಾತ್ಪರ್ಯವಿದು. ‘ಎಲ್ಲಿ’ ಅರ್ಥವಾದರೆ ಆದಿಮ ಜಗತ್ತು ಮತ್ತು ಸಮಕಾಲೀನ ಜಗತ್ತಿನ ಸ್ಥಾನ ಸ್ಪಷ್ಟವಾಗುತ್ತದೆ.


ಇಲ್ಲಿಯ ಪ್ರತಿಮೆಗಳು ಆದಿಮಾನವನ ಕಾಡಿನಿಂದ ಕಾಂಕ್ರೀಟ್ ಕಾಡಿನ ಜೆಸಿಬಿವರೆಗೆ ಹಾದುಬರುತ್ತವೆ. ಪ್ರಕೃತಿಯ ಚಲನೆಗೆ ಅನುಗುಣವಾಗಿ ನಾಗರಿಕತೆ ಬೆಳೆಯುತ ಬಂದಿದೆ. ಆದರೆ ಅದರೊಳಗೆ ಸೇರಿರುವ ಮೃಗತ್ವ ಅಥವಾ ರಾಕ್ಷಸಿತನ ಒಟ್ಟು ಚಲನೆಯ ದಿಕ್ಕನ್ನೇ ಬದಲಿಸುತ್ತಿದೆ. ಅದು ಮುಟ್ಟುವ ಗಮ್ಯದಿಂದ ಆಗುವ ಅನಾಹುತ ಪ್ರಾಯಶಃ ಯಾರಿಗೂ ಅರಿವಿಗೆ ಬಾರದಿಲ್ಲ. ವಿಚಿತ್ರವೆಂದರೆ ನೆರಳ ಮೋಹ ಪ್ರೇತವಾಗಿ ಕಾಡಿದಂತಿದೆ. ಬಿಡಿಸಿದಷ್ಟು ಗುಂಜಾಗುವುದನ್ನು ಕವಿತೆ ಸರಳವಾಗಿ ಮನವರಿಕೆ ಮಾಡಿಸುತ್ತದೆ.

ಒಂದೊಮ್ಮೆ ನನಗೆ ತುಂಬು ಮರೆವಿರುವುದಾದರೆ
ಮರಗಳು ಮತ್ತು ಮನೆಗಳು
ಹೀಗೆ ಹೇಳಿಕೊಳ್ಳಲು ಎಲ್ಲಿರುತ್ತಿದ್ದವು ಈ ಕಾಳರಾತ್ರಿಯಲ್ಲಿ”?(ಪು15)

ಕಾಡಿನ ಮಧ್ಯ ಅಲೆಮಾರಿ ಬೇಟೆಗಾರನಾಗಿದ್ದ ಮನುಷ್ಯ, ಆಧುನಿಕತೆಗೆ ತೆರೆದುಕೊಂಡಂತೆ ವಿನಾಶದ ದಾರಿಯನ್ನೇ ತುಳಿದ. ಆಧುನಿಕತೆ ಎಲ್ಲ ಕಾಲಕ್ಕೂ ಸಂಭ್ರಮದಿಂದಲೇ ಸ್ವಾಗತಿಸಲಾಯಿತು. ಆದರೆ ಅದರ ಒಡಲೊಳಗೆ ವಿಘಟನೆಯ ಬೀಜ ಬಿದ್ದು ಮೊಳಕೆ ಒಡೆದು ಮರವಾಗುವ ಪ್ರಕ್ರಿಯೆ ಸದ್ದಿಲ್ಲದ ನಡೆಯುತ್ತಿತ್ತು. ಈ ಪ್ರಕ್ರಿಯೆ ಬಹುತೇಕ ಇವತ್ತು ‘ವಸುದಾವಲಯ’ ಆವರಿಸಿಕೊಂಡಿದೆ. ಒಂದು ಕಾಲದಲ್ಲಿ ಬದುಕಿಗೆ ಬೆಳಕಾಗಿದ್ದು ಕಾಲಾಂತರದಲ್ಲಿ ಕಗ್ಗತ್ತಲೆಯಾಗಿದ್ದು ಇತಿಹಾಸದ ಪುಟದಿಂದ ತಿಳಿದು ಬರುತ್ತದೆ. ವಿಚಿತ್ರವೆಂದರೆ ಅಕ್ಷರವು ಮನುಷ್ಯನ ಬಾಳಿನ ಬೆಳಕೆಂದು ಭಾವಿಸಲಾಯಿತು. ಇದನ್ನು ಜಗತ್ತಿನ ಶ್ರೇಷ್ಠ ತತ್ವಜ್ಞಾನಿಗಳು ಕವಿಗಳು ಸಾರಿ ಸಾರಿ ಹೇಳಿದ್ದಾರೆ. ದಂಡಿ- ಅಕ್ಷರವೆಂಬ ಬೆಳಕು ಇರದಿದ್ದರೆ ಜಗತ್ತು ಕತ್ತಲೆಯಿಂದ ಕೂಡಿರುತ್ತಿತ್ತೆಂದು ಸಾವಿರ ವರ್ಷಗಳ ಹಿಂದೆ ಹೇಳಿದ್ದಾನೆ. ಎರಡು ಸಾವಿರ ವರ್ಷಗಳ ಹಿಂದೆ ಚೀನಿ ತತ್ವಜ್ಞಾನಿ ಲಾವ್ ತ್ಸು ರಾಜ, ಪ್ರಜೆ, ರಾಜ್ಯ, ಮತ್ತು ಸೇವಕ ಈ ಎಲ್ಲ ದಾರಿಯೂ ವಿಘಟನೆಯದ್ದೇಯಾಗಿದೆ ಎನ್ನುವನು. ರಾಜನಾದವನು ಋಷಿಯಾಗಿರಬೇಕು. ಋಷಿಯಾದವನು ರಾಜನಾಗಬೇಕೆನ್ನುವನು. ‘ಎಲ್ಲಿ’, ಮರ ಯಾರದು? ಈ ಕವಿತೆಗಳು ಈ ತರಹದ ತಾತ್ವಿಕತೆಯನ್ನು ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಹಾಗಿದ್ದರೆ ಮನುಷ್ಯನಿಗೆ ಘಾಸಿಗೊಳಿಸುತ್ತಿರುವುದು ಯಾವುದು? ಅಕ್ಷರ ಪಥ ಬದಲಿಸಿದೆಯೆ? ಅಲ್ಲಮ ಇದನ್ನೇ ಹೇಳಲಿಲ್ಲವೆ? ಒಂದು ಕಾಲದ ಬರಹ ದೈವವಾಗಿತ್ತು. ಇವತ್ತು? ಕುತೂಹಲದಿಂದ ಕಣ್ಣರಳಿಸಿ ಜಗತ್ತಿನ ವಿಸ್ಮಯವನ್ನು ಅರಿಯುವ ಪ್ರಯತ್ನ ಮಾಡಬೇಕಾದ ಅದೆಷ್ಟೋ ಮೊದಲ ತಲೆಮಾರಿನ ಜನಾಂಗ ಘಾಸಿಗೊಂಡಂತ್ತಿದೆ. ಘಾಸಿಗೊಳ್ಳುವುದೆಂದರೆ ಮುಗ್ಧ ಲೋಕವನ್ನು ಹಾಳುಗೆಡುವುದು. ಭೀತಿ ತಲ್ಲಣವನ್ನು ಹುಟ್ಟು ಹಾಕುವುದು. ಇದು ನಿಜಕ್ಕೂ ಭಯಾನಕವಾದದ್ದು. ‘ಎಲ್ಲಿ’, ‘ಮರ ಯಾರದು’? ಎತ್ತುವ ತಾತ್ವಿಕ ಪ್ರಶ್ನೆ ಕೂಡ ಪ್ರಜ್ಞಾವಂತ ಜಗತ್ತಿನಿಂದ ಪ್ರಜ್ಞಾಪೂರ್ವಕವಾಗಿ ಎತ್ತಿದ ಪ್ರಶ್ನೆಯಂತಲ್ಲ. ಪ್ರಕೃತಿಯ ಭಾಗವಾದವನ್ನೊಬ್ಬ ಅದರಿಂದ ಬೇರ್ಪಟ್ಟ ಸಂಕಟದಂತಿದೆ. ತಾಯಿಯನ್ನು ಅಗಲಿದ ಕರುವಿನಂತೆ.

‘ತಳದಲ್ಲಿ ಕುಳಿತು
ಗೆಲ್ಲುಗಳಲಿ ಕುಳಿತು
ಓದದೆ ಇದ್ದಿದ್ದರೆ
ಕವಿತೆ ಬರೆಯದೆ ಇದ್ದಿದ್ದರೆ
ತಂಗಾಳಿಯಲಿ ಮುಳುಗೇಳದೆ ಇದ್ದಿದ್ದರೆ
ನನ್ನದೇ ಆಗಿರುತ್ತಿತ್ತು ಈ ಮರ
ನನ್ನದೇ ಮರ’ (ಪು-17)


ಇಲ್ಲಿಯ ಕವಿತೆಗಳ ಉದ್ದಕ್ಕೂ ಮನುಷ್ಯನ ಪ್ರವೇಶವೇ ಆದಂತೆ ಅನಿಸುವುದಿಲ್ಲ. ಪ್ರಕೃತಿಯ ಕೇಂದ್ರ ಚಲನೆಯೇ ಪಿಸುಗುಟ್ಟಿದಂತೇನಿಸುತ್ತದೆ. ಇದು ಉತ್ಪ್ರೇಕ್ಷಿತವೆನಿಸಿದರೂ ನಿಜ. ಕವಿ ಪ್ರಕೃತಿಯ ಚಲನೆಯ ಭಾಗವಾಗಿದ್ದಾನೆಯೇ? ಅಥವಾ ಕಾಲದ ಚಲನೆಯ ಭಾಗವಾಗಿದ್ದಾನಾ? ಎರಡೂ ಒಂದೇಯೆ? ಅಥವಾ ಎರಡೂ ಬೇರೆ ಬೇರೆ? ಯಾವುದು ಸರಳವಾಗಿಲ್ಲ. ಕವಿತೆಯ ಒಳಗೆ ಇಳಿದಂತೆ ಕಾಡು ಹೊಕ್ಕಂತೆ ಭಾಸವಾಗುತ್ತದೆ. ನಿತ್ಯ ವಿದ್ಯಮಾನದ ಭಾಷಿಕ ಕಿರುಚಾಟವೆಲ್ಲ ಪ್ರೇತದ ಎದುರು ನಿವಾಳಿಸಿದಂತೆ ಇಲ್ಲಿ ಎಲ್ಲವೂ ಸ್ತಬ್ಧ. ಹಾಗೆಂದ್ದರೇ ಗಾಳಿ, ಬೆಳಕು, ಎಲೆ ಬಳ್ಳಿಗಳ ಬಳುಕಾಟ, ಮನುಷ್ಯನ ರಕ್ತದ ಪರಿಚಲನೆ ನಿತ್ತಂತಲ್ಲ. ‘ನಿಶಬ್ದ ನಿಶಬ್ದ ಶಬ್ದದಾಚೆಯ ಶಬ್ದ/ ನಿಶಬ್ದವಿದ್ದರೂ ಮೌನವಲ್ಲ/ ನಿಸ್ಸೀಮ ್ನಿಟೇಸ್ಸೀಮ ಸೀಮದಲೆ ನಿಸ್ಸೀಮ/ ನಿಸ್ಸೀಮವೆಂದರೂ ಶೂನ್ಯವಲ್ಲ’(ನನ್ನನಲ್ಲ ಪುಟ-13) ಮಧುರ ಚೆನ್ನರ ಸಾಲು ಇನ್ನಷ್ಟು ಅದನ್ನು ಸ್ಪಷ್ಟಪಡಿಸುತ್ತದೆಂದು ಭಾವಿಸುವೆ.

ಕವಿಗೆ ಪ್ರಕೃತಿಯ ಬಗ್ಗೆ ಅದಮ್ಯವಾದ ಹಂಬಲವಿದೆ. ಅಳಿಯುತ್ತಿರುವ ಕಾಡಿನ ಬಗೆಗೆ ಬೇಸರವಿದೆ. ಇಲ್ಲಿಯ ಶಕ್ತಿ ಎಂದರೆ ದಟ್ಟವಾದ ಕಾಡು. ಮತ್ತು ಜುಳು ಜುಳು ಹರಿಯುವ ನೀರಿನಂತೆ, ಹಕ್ಕಿಗಳ ಕಲರವದಂತೆ ಕಾಡಿನ ಹಸಿರಂತೆ ಕವಿಯ ಒಳಗೆ ಗಟ್ಟಿಯಾದ ಸಕಾರಾತ್ಮಕ ಮನೋಭಾವವಿದೆ. ಕಣ್ಣೆದುರಿನ ವಿನಾಶಕ್ಕೆ ವಿಚಲಿತನಾದರೂ ಅದಕ್ಕಿಂತಲೂ ವೇಗವಾಗಿ, ತೀವ್ರವಾಗಿ ಭರವಸೆಯ ಬೀಜ ಬಿತ್ತುವ ಬಯಕೆ ಇಲ್ಲಿಯ ಕವಿಗೆ. ‘ಎಷ್ಟೊಂದು ಹಕ್ಕಿಗಳಿವೆ ಇಲ್ಲಿ ಒಂದಾದರೂ ಬರಬಾರದೆ’?(ಪುಟ-22) ಎನ್ನುವ ಕವಿ.

‘ಒಂದು ಮರಕುಟಿಗವಾದರೂ ಬಂದು ಕುಟುಕುಟು ಕುಟುಕಿ
ಮೊಬೈಲಿನಲ್ಲೊಂದು ತೂತುಮಾಡಿ ನುಗ್ಗಿ
ಜೋರಾಗಿ ಹಾಡಿ’

ವಿನಾಶ ಮತ್ತು ವಿದ್ರೋಹತನದ ಒಡದೊಳಗೆ ಪ್ರಚಂಡ ಇಚ್ಛಾಶಕ್ತಿ ಇರುವುದಕ್ಕೆ ಈ ಕವಿತೆ ಸಾಕ್ಷಿ. ಕವಿಯ ಬಯಕೆ, ಕನವರಿಕೆ ಎಲ್ಲವೂ ಆದಿಮ ಜಗತ್ತಿನದು. ಆದಿಮವೆಂದರೆ ಕಲುಷಿತಗೊಳ್ಳದ ಮುಗ್ಧ ಜಗತ್ತು. ಅಲ್ಲಿ ಮನುಷ್ಯನಷ್ಟೋ ಬಾಳುವ ಹಕ್ಕು ಎಲ್ಲ ಜೀವಿಗಳಿಗೆ ಇದೆ. ಆ ಎಲ್ಲದರೊಂದಿಗೆ ಮನುಷ್ಯ ಸಹಜೀವಿಯಾಗಿ ಬದುಕುವುದು ಹಾಗೂ ಮುಖ್ಯವಾಗಿ ಮನುಷ್ಯ ಮನುಷ್ಯರ ನಡುವೆ ಮತ್ಸರ, ವಂಚನೆ, ಕಾಳಗ ಮತ್ತು ಅಧಿಕಾರ ಈ ಯಾವುದು ಇಲ್ಲದ ಕಾಲದ ಬದುಕು. ಅದು ಆದಿಮವೆನ್ನಬಹುದೇನೋ. ಇಡೀ ಮನುಕುಲವೇ ಯಂತ್ರ ಮತ್ತು ಯಾಂತ್ರಿಕವಾಗಿರುವಾಗಲೂ ಕವಿ ವಿಚಲಿತನಾಗದೆ; ಒಂದು ಹಕ್ಕಿ ಮೊಬೈಲ್ ಕುಕ್ಕಿ, ಮೊಬೈಲಿನ ರಿಂಗ್ಟೋನಾಗಿ, ಡಿಪಿಯಾಗಿ ಹಾರಿ ಹೋಗುವಾಗ ಬಿದ್ದ ಹಿಕ್ಕಿಯಲ್ಲೊಂದು ಬೀಜ ಬಿದ್ದು ಅದರಿಂದ ಮರ ಹುಟ್ಟಿ ಆ ಮರದಿಂದ ಕಾಡಾಗಿ, ಇಡೀ ಯಂತ್ರ ಜಗತ್ತು ಪುಡಿಪುಡಿಯಾಗಿ ಮನುಷ್ಯನ ಎದೆಯಲ್ಲಿ ಹಕ್ಕಿ ಹಾಡುವುದ್ದನ್ನು ನೋಡುವ ಮತ್ತು ಮತ್ತೇ ಮನುಷ್ಯ ಬದುಕಿನ ಸಹಜತೆಗೆ ಮರಳುವುದನ್ನು ನೋಡುವ ಬಯಕೆ ಇಲ್ಲಿಯ ಕವಿತೆಯಲ್ಲಿ ಎದ್ದು ಕಾಣುತ್ತದೆ.

ಕಾಡು ಮತ್ತು ನಾಡಿನಲ್ಲಾದ ಪಲ್ಲಟದಿಂದಾಗಿ ಏನೆಲ್ಲ ಸಂಭವಿಸುತ್ತಿದೆ ಎನ್ನುವುದನ್ನು ನಾವು ಇವತ್ತು ನೋಡುತ್ತಿದ್ದೇವೆ. ನಗರ ಕೇಂದ್ರಿತ ಪ್ರದೇಶದ ಮಳೆಗಾಲದ ಸ್ಥಿತಿ. ಕಾಡು ಅಳಿದು ಉಳ್ಳವರ ಆಸ್ತಿಯಾದಾಗ ಸಂಭವಿಸಿದ ಪ್ರಾಕೃತಿಕ ವಿಕೋಪ ಒಂದೆಡೆಯಾದರೆ, ಕಾಡ ಪ್ರಾಣಿಗಳ ದಾಳಿ ಇನ್ನೊಂದು ಬಗೆಯದು. ಈ ಎಲ್ಲ ಅಂಶಗಳನ್ನು ಸೂಚಿಸುವ ಅತ್ಯಂತ ಸರಳ ಮತ್ತು ಅರ್ಥಪೂರ್ಣ ಸಾಲು ‘ನಡುರಾತ್ರಿ ನಾಯಿ ಬೊಗಳುತ್ತಿದೆ ಎಂದರೆ’ ಮತ್ತು ‘ಕಾಡು ಗವಿತೆ’ ಈ ಎರಡು ಕವಿತೆಗಳು.

‘ಈ ಕಾಡು ಹಾದಿಯಲ್ಲಿ
ಇರುವೆಗಳೆರಡು ಮಾತನಾಡಿಕೊಂಡಂತೆ ಕವಿತೆ’ ಎಂದುಕೊಂಡೆ
‘ಈಗೀಗ ಕಾಡು ಕಡಿದಿದ್ದಾರೆ ಜನ
ಹಾದಿಯಲ್ಲಿ ಆನೆಗಳಿವೆ’ (ಕಾಡುಗವಿತೆ-ಪು-18)

ಈ ಕವಿತೆ ಕಾಡಿನ ವಿನಾಶದ ಬಗ್ಗೆ ಮಾತನಾಡಿದಂತೆ ಇಲ್ಲಿಯ ಹಲವು ಕವಿತೆಗಳು ಈ ಬಗೆಯಲ್ಲಿ ಪಿಸುಗುಡುವವು. ಕುತೂಹಲವೆನೆಂದರೆ ಇಲ್ಲಿಯ ಭಾಷೆ, ತಂತ್ರ, ಪ್ರತಿಮೆ, ರೂಪ ಹೊಸದನ್ನು ದರ್ಶಿಸುವಂತಿದೆ. ಇನ್ನೊಂದು ವಿಷಯವೇನೆಂದರೆ ಕವಿತೆ ಆಧುನಿಕ ನಗರ ಕೇಂದ್ರಿತ ಜಗತ್ತಿನಲ್ಲಿ ನಿಂತು ಮಾತನಾಡುವುದಿಲ್ಲವೆನ್ನುವುದು. ಇಲ್ಲಿಯ ಕವಿತೆ ಮಣ್ಣಿಗೆ ತಾಗಿ ಉಸಿರಾಡುತ್ತದೆ. ಮಣ್ಣಿಗೆ ಬಿದ್ದ ಬೀಜ ಮರವಾಗುವ, ಬೆಳಕಾಗುವ, ಗಾಳಿ, ಮಳೆ, ನೆರಳ, ಆಶ್ರಯ, ಆಶ್ರಮ ಲೋಕದ ಚರಾಚರ ಜೀವಿಗಳೊಂದಿಗೆ ಸಮೃದ್ಧಿಯಾಗಿ ಬದುಕುವ ಕನಸು. ಈ ಕನಸು ಬಣ್ಣದ ಬಲೂನಲ್ಲ. ವಾಸ್ತವದ ಉಸಿರಾಟ. ಇಲ್ಲಿಯ ಕವಿತೆಯದು ಹದಮಿರದಂತೆ, ಹದವರಿತ ಬದುಕುವ ದಾರಿ. ಮನುಷ್ಯ ಕಾಡಿನ ನಂಟನ್ನು ಬಿಡಿಸಿಕೊಳ್ಳದಂತೆ ಹೆಣೆದುಕೊಂಡಿದೆ ಇಲ್ಲಿಯ ಬದುಕು.


ಈ ಸಂಕಲನದ ಕವಿತೆಗಳು ಸಮರ್ಥ ಪ್ರತಿಮೆಗಳ ಮೂಲಕ ಮೂಲ ಸತ್ಯದ ಕುರಿತು ಮಾತನಾಡಿದಂತೆ ಹೊಸ ಬಗೆಯ ಚಿತ್ರವನ್ನೇ ಕಟ್ಟಿಕೊಡುತ್ತದೆ. ಇಲ್ಲಿಯ ಕೇಂದ್ರ ಕಾಳಜಿ ಕಾಡು ಮತ್ತು ಮನುಷ್ಯ. ಮನುಷ್ಯನ ವಿನಾಶತನವನ್ನು ತಣ್ಣಗೆ ಚಿತ್ರಿಸುವ ಕವಿ ಮತ್ತು ‘ಕಾವ್ಯ  ಮೀಮಾಂಸೆ’ಯ ಮೂಲಕ ಕಾವ್ಯ ತಳೆಯಬೇಕಾದ ನಿಲುವನ್ನು ಸ್ಪಷ್ಟಪಡಿಸುವನು. ಇಲ್ಲಿಯ ಬಹುತೇಕ ಪ್ರತಿಮೆಗಳು ಬೌದ್ಧಿಕ ಕಸರತ್ತಿನಾಚೆಯವು. ಸಹಜತೆ ಮತ್ತು ಸ್ಪಷ್ಟತೆಗೆ ಸಾಕ್ಷಿಯಂತೆ ‘ಬುಡ್ಡಿ ದೀಪದ ಬುಡ’ ಮುಖ್ಯವಾಗುತ್ತದೆ.

ಹಚ್ಚಿಟ್ಟರೆ ಬುಡ್ಡಿ ದೀಪ
ಹಸಿದ ಕೀಟಕ್ಕೆ ಹಣ್ಣಾಗಿ ತೋರುವುದು.

‘ಆಮೇಲೆ
ಬುಡ್ಡಿ ದೀಪದ ಬುಡದ ಕಪ್ಪುಗಂಬಳಿ
ಲಾಲಿ ಹಾಡುವುದು
ಸಾವನು ಲಾಲಿ ಹಾಡುವುದು

ಹಸಿದು ಸತ್ತವರಿಗೆಲ್ಲ ಹೀಗೇ
ಒಂದು ಹಣ್ಣು ಕಂಡಿರಬಹುದು
ಬೆಳಕ ಭ್ರಮೆಯಲ್ಲಿ’.(ಪು-50)

ಕಾಲ ಮತ್ತು ಸಾವು ಕವಿತೆಯ ಸ್ಥಾಯಿಭಾವವಾಗಿ ಗಮನ ಸೆಳೆದಂತೆ ಕತ್ತಲೆ ಹಾಗೂ ಬೆಳಕು ನಿಶ್ಶಬ್ದವಾಗಿ ದಿಗಂತದಾಚೆಯ ದಾರ್ಶನಿಕತೆಯ ಚಿತ್ರ ಮೂಡಿಸುತ್ತದೆ. ನಿಧಾನ ಮತ್ತು ಧ್ಯಾನ ಅರಿವಿನ ದಾರಿಯಾಗಿ ಕವಿತೆಗಳು ಎದೆಗಿಳಿಯುತ್ತವೆ. ಒಟ್ಟಾರೆ ಈ ಬ್ರಹ್ಮಾಂಡವೇ ಕಾಡು. ಮನುಷ್ಯನೂ ಎಲ್ಲ ಜೀವಿಗಳಂತೆ. ಹಾಗಾಗಿ ಇಲ್ಲಿ ಮನುಷ್ಯನಂತೆ ಇನ್ನುಳಿದ ಚರಾಚರವೆಲ್ಲವೂ ಮಾತನಾಡುತ್ತವೆ. ಆದರೆ ಎಲ್ಲಿಯೂ ತನ್ನ ಲಯವನ್ನು ತಪ್ಪಲಾರವು. ಲಯ ತಪ್ಪಿದ, ತಪ್ಪುತ್ತಿರುವ ಮನುಷ್ಯನಿಗೆ ಕಾಡೇ ಮರಳಿ ಲಯಕ್ಕೆ ತರುವಂತೆ ಇಲ್ಲಿ ಕವಿತೆಗಳಿವೆ ಎನ್ನಬಹುದು. ಈ ಹಿನ್ನೆಲೆಯಲ್ಲಿ ‘ಕಣ್ಣಲ್ಲಿಳಿದ ಮಳೆಹನಿ’ ಪ್ರಕೃತಿಯ ಲಯವೆನ್ನಬಹುದೇನೋ.
*

 ✍️ ಡಾ. ಮಧು ಬಿರಾದಾರ

ಆಕರ ಗ್ರಂಥ: ಕಾಜೂರು ಸತೀಶ್- ಕಣ್ಣಲ್ಲಿಳಿದ ಮಳೆಹನಿ- ಸಂಗಾತ ಪುಸ್ತಕ ಗದಗ-2021

ಕಾಮ

ಹುಟ್ಟಿಗೆ ಕಾರಣ ಕೇಳಿದಳು ತಿಮ್ಮಿ.
'ಕಾಮ' ಎಂದ ತಿಮ್ಮ.
ಹೌಹಾರಿದಳು ತಿಮ್ಮಿ
'ಹಾಗಾದರೆ ಪ್ರೀತಿ?'
'ಕಾಮ ಹುಟ್ಟಿದ ಮೇಲೆಯೇ ಪ್ರೀತಿಯ ಜನನ' ತಿಮ್ಮ ಹೇಳಿದ. 
*
ಕಾಜೂರು ಸತೀಶ್ 

ಆಸ್ತಿ ಘೋಷಣೆ

ತಿಮ್ಮ ಚುನಾವಣೆಯಲ್ಲಿ ಭಾಗವಹಿಸಲು ಆಸ್ತಿ ಘೋಷಣೆ ಮಾಡಿದ. ಇನ್ನೇನು ಚುನಾವಣೆ ಆರಂಭವಾಗುತ್ತದೆ ಎನ್ನುವಾಗ ಚಡ್ಡಿಯಲ್ಲೇ ಓಡಾಡುತ್ತಿದ್ದ ಅವನು ತನ್ನ ಬಳಿ ಒಂದೂ ಪ್ಯಾಂಟ್ ಇಲ್ಲವೆಂದು ಘೋಷಿಸಿದ. ಜನ ಅವನ ಪ್ಯಾಂಟನ್ನು ಹುಡುಕುವ ಗೋಜಿಗೆ ಹೋಗಲಿಲ್ಲ.
*
ಕಾಜೂರು ಸತೀಶ್ 

Monday, March 18, 2024

ಚಿಂತಕರು

ತಿಮ್ಮ ಕಳೆದ ಎರಡು ದಿನಗಳಲ್ಲಿ ಇಬ್ಬರನ್ನು ಭೇಟಿಯಾಗಿದ್ದ. ಒಬ್ಬರು ತಮ್ಮ ಧರ್ಮದ ಉಳಿವಿಗಾಗಿ ಹೋರಾಟ ಮಾಡುವವರು ;ಮತ್ತೊಬ್ಬರು ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸುವವರ ವಿರುದ್ಧ ಹೋರಾಡುವವರು.

ಇಬ್ಬರೊಳಗೂ ದ್ವೇಷ ಹೊಗೆಯಾಡುತ್ತಿತ್ತು. ಕೊಲ್ಲಲೂ ಅವರು ಹೇಸುತ್ತಿರಲಿಲ್ಲ.

ತಿಮ್ಮ ಮರದ ಬಗ್ಗೆ ಬರೆದಿದ್ದ .ಹೂವಿನ ಬಗ್ಗೆ ಬರೆದಿದ್ದ. ನದಿಯ ಬಗ್ಗೆ ಬರೆದಿದ್ದ .ಮಳೆಯ ಬಗ್ಗೆ ಬರೆದಿದ್ದ .ಗಾಳಿಯ ಬಗ್ಗೆ ಬರೆದಿದ್ದ. ಹೀಗಾಗಿ ತಿಮ್ಮನನ್ನು ಅವರು ಕೊಲ್ಲಲಿಲ್ಲ. ಅವನ ನೆನಪು ಅವರಿಗೆ ಆಗಲಿಲ್ಲ.ಅವರ ಪಟ್ಟಿಯಲ್ಲಿ ಇವನು ಸ್ಥಾನ ಪಡೆಯಲಿಲ್ಲ. ಆದರೂ, ಇಂತಹ ನಿಷ್ಪ್ರಯೋಜಕ ಸಂಗತಿಗಳ ಬಗ್ಗೆ ಬರೆಯುವವರೆಲ್ಲರನ್ನು ಕೊಲ್ಲಬೇಕು ಎಂದು ಅವರೊಮ್ಮೆ ಯೋಚಿಸಿದ್ದರು.

ಮರು ವರ್ಷ ಬರ ಬಂದಾಗ, ಕುಡಿಯಲು ನೀರಲ್ಲದಿದ್ದಾಗ, ಸುಡು ಬೇಸಿಗೆ ಮೈಯ್ಯನ್ನೆಲ್ಲಾ ಸುಡತೊಡಗಿದಾಗ, ಕಾಡು ಒಣಗಿ ಎಲ್ಲವೂ ಬರಡಾದಾಗ , ಪ್ರಾಣಿಗಳೆಲ್ಲ ಬಂದು ಮನುಷ್ಯರನ್ನು ತಿನ್ನತೊಡಗಿದಾಗ.. ಆಗಲೂ ಅವರಿಗೆ ತಿಮ್ಮನ ನೆನಪಾಗಲಿಲ್ಲ- ಧರ್ಮದ ನೆನಪಾಯಿತು, ಜಾತಿಯ ನೆನಪಾಯಿತು, ಪಕ್ಷದ ನೆನಪಾಯಿತು.
*
ಕಾಜೂರು ಸತೀಶ್ 

Saturday, March 9, 2024

ಸಾವು

ಮೊಟ್ಟೆ ತಿನ್ನುತ್ತಿದ್ದ ತಿಮ್ಮ ಹೇಳಿದ: "ಈ ಮೊಟ್ಟೆಹಾಕಿದ ಕೋಳಿ ಮೊನ್ನೆ ಸತ್ತು ಹೋಯಿತು".

Friday, March 8, 2024

ಈಜು

ತಿಮ್ಮ ಮೊದಲು ಕೆರೆಯಲ್ಲಿ ಈಜಲು ಕಲಿತ; ಅಲ್ಲೇ ತರಬೇತುದಾರನಾದ.

ಆಮೇಲೆ ನದಿಯಲ್ಲೂ, ಸಮುದ್ರದಲ್ಲೂ , ಸಾಗರದಲ್ಲೂ ಈಜಲು ಕಲಿತ.

ತಿಮ್ಮನ ಗೆಳೆಯ ರಾಜ ಶ್ರೀಮಂತ ಮನೆತನದವ. ಅವನು ನೇರವಾಗಿ ಸಮುದ್ರದಲ್ಲಿ ಈಜಲು ಕಲಿತು ಅಲ್ಲೇ ತರಬೇತುದಾರನಾದ. 

ತಿಮ್ಮ ಸಾಯುವಾಗಲೂ ಕೆರೆಯಲ್ಲೇ ಈಜುಕಲಿಸುತ್ತಿದ್ದ. ಅವನಿಗೆ ಕೆರೆ ತೀರಾ ಚಿಕ್ಕದೆನಿಸಿ ಉಸಿರುಗಟ್ಟಿ ಸತ್ತಿದ್ದ. 

ಅವನನ್ನು ಬಾವಿಯಲ್ಲಿ ಈಜುಕಲಿಸಲು ನಿಯೋಜಿಸುವ ಸರ್ಕಾರದ ಕನಸು ಕಡೆಗೂ ಈಡೇರಲೇ ಇಲ್ಲ.
*
ಕಾಜೂರು ಸತೀಶ್ 

Tuesday, January 16, 2024

ಪೋಸ್ಟಾಫೀಸಿನಲ್ಲಿ ಪ್ರಬಂಧಗಳ ಜಡ್ಜ್ಮೆಂಟ್

ಈಚೆಗೆ ಲಲಿತ ಪ್ರಬಂಧ ಕೃತಿಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಕೆಲವು ಲಲಿತ ಪ್ರಬಂಧಗಳನ್ನು ಓದಿದ ಅನಂತರ ಇವು ಆತ್ಮ ಚರಿತ್ರೆಯಾಗುತ್ತಿರುವುದರ ಬಗ್ಗೆ ಕಳವಳವೆನಿಸಿದ್ದಿದೆ. ತದ್ವಿರುದ್ಧವಾಗಿ , ರಹಮತ್ ತರೀಕೆರೆ ಅವರ ಬಿಡಿ ಪ್ರಬಂಧಗಳನ್ನು ಓದಿದಾಗಲೆಲ್ಲ ಪ್ರಬಂಧಗಳಿಗಿರುವ ಅಗಾಧ ಸಾಮರ್ಥ್ಯಗಳ ಬಗ್ಗೆ ಬೆರಗಾಗಿದ್ದೇನೆ.

ತಿಂಗಳುಗಳ ಹಿಂದೆ ಅಮರೇಶ ಗಿಣಿವಾರರು ತಮ್ಮ 'ಪೋಸ್ಟಾಫೀಸಿನಲಿ ಅಕ್ಕನ ಜಡ್ಜಮೆಂಟು' ಎಂಬ ಪ್ರಬಂಧಗಳ ಸಂಕಲನ ಕಳಿಸಿದ್ದರು. ಹಿಂಡುಕುಳ್ಳು (👈ಇಲ್ಲಿ ಕ್ಲಿಕ್ಕಿಸಿ) ಕಥಾ ಸಂಕಲನದ ಮೂಲಕ ಗಮನ ಸೆಳೆದಿದ್ದ ಗಿಣಿವಾರರ ಈ ಸಂಕಲನವನ್ನು ಓದಿ ಬೆರಗುಗೊಂಡೆ. ಅಂಚೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ಸಾಹಿತ್ಯದ ಅಕಡೆಮಿಕ್ ಜ್ಞಾನವನ್ನು ಗಳಿಸಿ ತಮ್ಮ ನೆಲದ(ಸಿಂಧನೂರು) ನುಡಿಯಲ್ಲಿ/ ನುಡಿಗಟ್ಟುಗಳಲ್ಲಿ ವಿವಿಧ ಆಕರಗಳೊಂದಿಗೆ ಮಂಡಿಸುತ್ತಾರೆ ಎಂದರೆ ಸಾಹಿತ್ಯವು ಅಷ್ಟರಮಟ್ಟಿಗೆ ಅವರನ್ನು ಸೆಳೆದಿದೆ/ಆವರಿಸಿದೆ ಎಂದರ್ಥ. ಪ್ರಬಂಧವನ್ನು ಅವರು ರಸಾಸ್ವಾದಕ್ಕೂ ರಿಸೋರ್ಸ್ ಆಗುವುದಕ್ಕೂ ಕಡೆದಿಟ್ಟಿದ್ದಾರೆ. ಕೇಂದ್ರ ಪ್ರಜ್ಞೆಯೊಂದನ್ನು ಅನುಭವದ- ಮಾಹಿತಿಯ ಮೂಸೆಯಲ್ಲಿ ಲಲಿತವಾಗಿ ಹೊಸೆಯುವ ಮೂಲಕ ಏಕಕಾಲದಲ್ಲಿ ಕೃತಿಕಾರನ ಭಾವ ಪ್ರಪಂಚಕ್ಕೂ ಜಗತ್ತಿನ ದರ್ಶನಕ್ಕೂ ಸೇತುವಾಗುವ ಹಾಗೆ ನೋಡಿಕೊಂಡಿದ್ದಾರೆ.




ಬಸಿರು ,ಹೆಂಡತಿ ,ಸಾವು, ಬಸ್ಸು, ಪೋಸ್ಟ್ ಆಫೀಸ್, ಬಾಲ್ಯ, ಊರು, ರೇಡಿಯೋ , ಜೀರಂಗಿ, ,ಅಂಗಾಂಗ, ಅಪಾನವಾಯು- ಇಂತಹ ಸಹಜ ಸಂಗತಿಗಳ ಮೇಲೆ ಪ್ರಬಂಧಗಳು ಹರಿದಿದ್ದರೂ, ಸಿದ್ಧ ಹಾದಿಯನ್ನು ಮುರಿದು, ಖಾಸಗಿಗೊಳ್ಳಬಹುದಾದ ಪ್ರಬಂಧವನ್ನು ಸಮುದಾಯದತ್ತ ಜಿಗಿಸಿ ಮಾನವೀಯಗೊಳಿಸುತ್ತಾರೆ. ತಾವು ಓದಿದ ಸಾಹಿತ್ಯ ಕೃತಿಗಳ/ವಸ್ತುಗಳ ಪ್ರಸ್ತಾಪ ಮಾಡುತ್ತಾರೆ.


ಅಂಗಗಳೇ ತಮ್ಮನ್ನು ತಾವು ಪರಿಚಯಿಸುವ/ನಿರೂಪಿಸುವ 'ಅಂಗಾಂಗಗಳ ನೆನೆದು' ಹೊಸ ಮಾದರಿಯ ಪ್ರಬಂಧ. ಅವರನ್ನು ತೀವ್ರವಾಗಿ ಕಾಡುವ 'ಸಾವು' (ಸಾವೆಂಬುದು ಸಾಯದ ನೆನಪು, ಸಾವಿಗೆ ಒಂದು ಪತ್ರ) 'ದೇಹಮೀಮಾಂಸೆ'( ಅಂಗಾಂಗಗಳ ನೆನೆದು, ಬಸಿರಾಯಣ) 'ಅಸ್ತಿತ್ವವಾದ'ದ ವಿವರಗಳು ಸಾಹಿತ್ಯ ಪರಂಪರೆಯ ಕೆಲವು ಟಿಪ್ಪಣಿಗಳೊಂದಿಗೆ ವ್ಯಕ್ತವಾಗಿವೆ(ಅನಂತಮೂರ್ತಿ, ಕಮೂ,ಕಾಫ್ಕ, ಗೂಗಿ, ಸಾರ್ತ್ರ, ಮಾರ್ಕ್ವೆಜ಼್...)


ಮುಗ್ಧ ಜನ ವಲಯದಲ್ಲಿ ಬೆರೆತುಹೋಗಿರುವ ಹಾಸ್ಯವನ್ನು ಅವರು ಹೆಕ್ಕುತ್ತಾರೆ. ಬಸಿರು, ಹೆಂಡತಿ ಮುಂತಾದವುಗಳ ಬಗ್ಗೆ ಹೇಳುವಾಗ 'ಪರ' ವಹಿಸುವುದಿಲ್ಲ. ಅಮರೇಶ ಗಿಣಿವಾರರಿಗೆ ಪ್ರಬಂಧದ ಓಘ ಮತ್ತು ಭಾಷಿಕ ಹಿಡಿತ ಎಷ್ಟರಮಟ್ಟಿಗೆ ಇದೆಯೆಂದರೆ, 'ಅಪಾನವಾಯು ಸಿಡಿದಾಗ' ಪ್ರಬಂಧದ ಆರಂಭವನ್ನೇ ಗಮನಿಸಿ:

ಈ ಪ್ರಬಂಧದ ತಲೆಬರಹ 'ಅಪಾನವಾಯು ಸಿಡಿದಾಗ' ಅಂತ ಬಳಸುವುದು ನನಗೆ ಸೂಕ್ತವೆನಿಸಿತು. 'ಹೂಸು ಬಿಟ್ಟಾಗ' ಅಂತ ಇಟ್ಟಿದ್ದರೆ ಓದುಗರಿಗೆ ಆರಂಭದಲ್ಲಿ ವಾಸನೆ ಹಿಡಿಸಿದಂತಾಗುತ್ತಿತ್ತು .ಅಪಾನ ವಾಯು ಎಂಬ ಶಬ್ದ ಸ್ವಲ್ಪ ನನ್ನ ಬಗ್ಗೆ ಗೌರವ ಉಳಿಸಿದೆ. ಬೇರೆ ಯಾವುದೇ ಮೂಲ ಕನ್ನಡ ಪದಗಳ ಬದಲಾಗಿ ಸಂಸ್ಕೃತ ಅಥವಾ ಪಾರಿಭಾಷಿಕ ಶಬ್ದ ಬಳಸುವುದರಿಂದ ಮೂಲ ಕನ್ನಡ ಪದಗಳ ಬಗ್ಗೆ ಕೀಳರಿಮೆ ಹುಟ್ಟುತ್ತದೆ ಎಂಬ ದಾಟಿಯಲ್ಲಿ ಕೀಲಾರ ನಾಗೇಗೌಡ ಇನ್ನಿತರರು ಜಾಲತಾಣದಲ್ಲಿ ಚರ್ಚೆಗಿಳಿದಿದ್ದರು...
*

ಕಾಜೂರು ಸತೀಶ್

Monday, January 15, 2024

ಅಮ್ಮ



ಅಮ್ಮ ನನ್ನ ಆತ್ಮ ದೇಹ ಮಾತ್ರ ಬೇರೆ
ಪ್ರೀತಿಯಲ್ಲಿ ಕರುಣೆಯಲ್ಲಿ ಅವಳು ವರ್ಷಧಾರೆ

ಗರ್ಭದಲ್ಲೇ ಲಾಲಿ ಹಾಡಿ ತನ್ನ ಕುಡಿಯ ಮಲಗಿಸುವಳು
ಚಕ್ರವ್ಯೂಹವನ್ನೇ ಮುರಿಯುವಂಥ ಕಥೆಯ ಕಲಿಸುವವಳು
||ಅಮ್ಮ||

ತಾನು ಹಸಿದು ತನ್ನ ಕೂಸಿಗಾಗಿ ಅನ್ನ ಉಣಿಸುವವಳು
ಪರರಿಗಾಗಿ  ಉರಿದು ನಗುವ ನಂದಾದೀಪ ಅವಳು 
||ಅಮ್ಮ||

ಜಗದ ಸಕಲ ಪ್ರೀತಿಯನೆಲ್ಲ  ತನ್ನೊಡಲಲಿ ತುಂಬುವವಳು
ಕಣ್ಣನೀರಿನಂಥ ಕಡಲಿನಂತೆ ಹರಡಿ ಬೆಳೆಯುವವಳು
||ಅಮ್ಮ||

ನೆಲಮುಗಿಲಿನಂತೆ ಅವಳು ಕಾಯುವಳು ಸಹಿಸುವಳು
ತುಳಿದರೂ ನೋಯದಂಥ ಭೂಮಿತಾಯಿಯಂಥವಳು
||ಅಮ್ಮ||
*
ಕಾಜೂರು ಸತೀಶ್ 

ಚಿಂತಕ

ಚಿಂತಕ ತೀರಿಕೊಂಡ

ಅವನ ಹೆಸರಿಗಾಗಿ ಹಗ್ಗಜಗ್ಗಾಟ ನಡೆಯಿತು. ಎಡಭಾಗದಲ್ಲಿದ್ದವರು ಹೆಸರಿನ ಅರ್ಧಭಾಗವನ್ನೂ ಬಲಭಾಗದಲ್ಲಿದ್ದವರು ಇನ್ನರ್ಧ ಭಾಗವನ್ನೂ ಹಂಚಿಕೊಂಡರು .

ಸೀಟಿ ಊದಿ ತೀರ್ಪುನೀಡಿದ ನಿರ್ಣಾಯಕನಿಗೆ ಸ್ವಲ್ಪ ನಡುವಿನ ಭಾಗ ಸಿಕ್ಕಿತು.
*
ಕಾಜೂರು ಸತೀಶ್ 

ಮಂತ್ರಿ

ನಡೆದೂ ನಡೆದೂ ಬಳಲಿದ ದೂರ ದೇಶದ ಮನುಷ್ಯನಿಗೆ ಮರವೊಂದು ಸಿಕ್ಕಿತು. ಆ ಬಟಾಬಯಲಿನಲ್ಲಿದ್ದ ವಿಶಾಲ ಒಂಟಿಮರದ ಕೆಳಗೆ ಕುಳಿತು ದಣಿವಾರಿಸಿಕೊಂಡ. ಅದರಲ್ಲಿ ಹೂಬಿಟ್ಟಿತ್ತು. ಮೊದಲ ಫಸಲಿನ ಸಂಭ್ರಮ ಆ ಮರಕ್ಕೆ. ಹಕ್ಕಿಗಳ ಕಲರವ.

ಕೆಲಕಾಲದ ಅನಂತರ ಮರದ ತುಂಬಾ ಹಣ್ಣುಗಳು! ಹೊಟ್ಟೆ ತುಂಬಾ ತಿಂದ. ಉಳಿದ ಹಣ್ಣುಗಳನ್ನು ಮಾರಲು ಇಟ್ಟ. ಅದನ್ನು ಕೊಳ್ಳಲು ಜನರ ನೂಕುನುಗ್ಗಲು.

ಆ ಬಯಲಿನ ಒಡೆಯನಾದ. ಹಣ್ಣು ಕೊಳ್ಳಲು ಬಂದ ಕೆಲವರು ಅವನ ಸೇವಕರಾಗಿ ಕೆಲಸಕ್ಕೆ ಸೇರಿಕೊಂಡರು. ಬಯಲ ತುಂಬೆಲ್ಲ ಆ ಗಿಡವನ್ನು ನೆಡಿಸಿದ.

ಮುಂದೆ ಅವನು ಮಂತ್ರಿಯಾದ.
*


ಕಾಜೂರು ಸತೀಶ್ 

Sunday, January 14, 2024

ಒಂದನೇ ಇಯತ್ತೆ ಮತ್ತು ನನ್ನ ನೆನಪಿನಂತಹ ಆ ಬೆಟ್ಟ


ಒಂದನೇ ತರಗತಿಗೆ ದಾಖಲಾದ ವರ್ಷ ಮನೆಯಿಂದ ಶಾಲೆಗಿರುವ ಹಾದಿಯಲ್ಲಿದ್ದ ನಿಸರ್ಗವೇ ನನ್ನ ಕಲಿಕಾ ಕೇಂದ್ರವಾಗಿತ್ತು. ಶಾಲೆ ಎಂಬ ನರಕದಿಂದ ತಪ್ಪಿಸಿಕೊಳ್ಳಲು ಎಷ್ಟೋ ಸಲ ಮನೆಯವರನ್ನು ಯಾಮಾರಿಸಿ ಮನುಷ್ಯರಿಲ್ಲದ ಜಾಗದಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದೆ. ಆಗೆಲ್ಲ ನಿತ್ಯದ ಹಾದಿಯಲ್ಲಿ ಎದುರಾಗುತ್ತಿದ್ದ ಎರಡು ಬೆಟ್ಟಗಳನ್ನು ತಪ್ಪದೇ ನೋಡುತ್ತಿದ್ದೆ. ಒಂದು ಬೆಟ್ಟವು ಮರಗಿಡಗಳ ನಡುವೆ ದೊಡ್ಡ ಬಂಡೆಗಳಿಂದ ಮೈದುಂಬಿಕೊಂಡಿದ್ದರೆ, ಮತ್ತೊಂದು ಭತ್ತವನ್ನು ರಾಶಿ ಮಾಡಿಟ್ಟ ಹಾಗೆ ಮೈಪಡೆದಿತ್ತು( ಆದರೆ ಆ ಬೆಟ್ಟವು ನಾನು ಆಗ ಕಾಣುತ್ತಿದ್ದ ಸ್ವರೂಪವನ್ನು ಇಂದು ಹೊಂದಿಲ್ಲ. ಯಾರೋ ಮಹಾಶಯರು ಆ ಬೋಳು ಗುಡ್ಡದ ಮೇಲೆ ಅಕೇಶಿಯಾ ನೆಟ್ಟು ಬಂದರು. ಯಾರಿಗೋ ಲಾಭವಾಯಿತು! ನಾನು ನೊಂದುಕೊಳ್ಳುತ್ತಿರುವೆ!).



ಮೂರು ವರ್ಷ ಅದೇ ಶಾಲೆಯಲ್ಲಿ ಕಳೆದ ನನಗೆ ಆಮೇಲೆ ನನ್ನ ಸಹಪಾಠಿಗಳ ದರ್ಶನವಾಗಲೇ ಇಲ್ಲ( ನನ್ನ ಸಂಬಂಧಿಯೊಬ್ಬರ ಹೊರತು). ಅವರೆಲ್ಲ ಈಗ ಎಲ್ಲಿರುವರು?  ಹೇಗಿರುವರು?ನನ್ನ ನೆನಪು ಅವರಲ್ಲಿರಬಹುದೇ? ಎಂಬೆಲ್ಲ ಕುತೂಹಲಗಳು ನಿತ್ಯ ನನ್ನನ್ನು ಎಡತಾಕುತ್ತವೆ.


ಆ ಶಾಲೆಯ ಮುಖವನ್ನು ಆಗಾಗ ನೋಡುತ್ತೇನೆ.  ನಾನು ಬಾಲ್ಯದಲ್ಲಿ ಕಂಡ ಆ ಊರಿನ ಮುಖಗಳನ್ನು ಅಲ್ಲಿ- ಸೋಮವಾರದ ಸಂತೆಯಲ್ಲಿ- ಸಂಚರಿಸುವ ದಾರಿಯಲ್ಲಿ ನೋಡುತ್ತೇನಾದರೂ ಅವರೊಂದಿಗೆ  ಮಾತಿರಲಿ, ನಗುವನ್ನೂ ವಿನಿಮಯಿಸಿಕೊಳ್ಳುವುದಿಲ್ಲ. ಹಾಗೊಮ್ಮೆ ಮಾಡಿದೆನೆಂದರೆ  ನನ್ನ ಪೂರ್ವಾಪರಗಳನ್ನು ಅವರ ತಲೆಯಲ್ಲಿ ತುಂಬಬೇಕಾಗುತ್ತದೆ, ಅದು ಬೆಂಕಿಯಂತೆ ಊರೆಲ್ಲ ತಲುಪುತ್ತದೆ. ಆಮೇಲೆ ಅವರು ನನ್ನನ್ನು ನೋಡಲು ಬಯಸುವುದು ಮತ್ತೆ ಪರಿಚಯವಾಗುವುದು ಇವೆಲ್ಲ ನನಗೆ ಬೇಕಿರದ ಸಂಗತಿಗಳೇ ಆಗಿವೆ. ನನಗೆ ಮಾತ್ರ ಪರಿಚಯವಿರುವ ಅವರ ನೆನಪನ್ನೂ, ನನ್ನ ಅಮಾಯಕ ಬಾಲ್ಯವನ್ನೂ ಒಟ್ಟುಮಾಡಿ ಗಾಳಿಗೆ ಬಿಟ್ಟುಬಿಡುತ್ತೇನೆ.
**


ಮೊನ್ನೆ ಭತ್ತದ ರಾಶಿಯಂತಿದ್ದ ಆ ಗುಡ್ಡಕ್ಕೆ ಹೋಗುತ್ತಿದ್ದೆವು. ವಾಹನದ ನೆತ್ತಿಯು ಕೊಂಬೆಯೊಂದಕ್ಕೆ ತಗುಲಿದಾಗ ಅಲ್ಲೇ ಸನಿಹದಲ್ಲಿದ್ದ ಮನೆಯಿಂದ ಹೊರಬಂದ ವ್ಯಕ್ತಿ 'ಇದಲ್ಲ ದಾರಿ, ಅದು' ಎಂದು ಕೈತೋರಿಸಿದ.  'ತೋರಿಸ್ತೀರಾ?'ಎಂದಿದ್ದಕ್ಕೆ ಸ್ಕೂಟರ್ ಏರಿ  ಮಗಳನ್ನು ಕೂರಿಸಿಕೊಂಡು ಮುಂದೆ ಮುಂದೆ ಸಾಗಿ ನಮಗೆ ದಾರಿ ತೋರಿಸಿದ.

'ನಾನು ಈ ಬೆಟ್ಟವನ್ನು ಯಾವಾಗಲೂ ಒಮ್ಮೆ ನೋಡಿದ್ದೆ' ಎಂದ . ನಾನು 'ನಡ್ಕೊಂಡು ಹೋಗಿದ್ದೇನೆ  ಇಲ್ಲೆಲ್ಲಾ' ಎಂದೆ.  

'ಏನ್ಹೆಸ್ರು?' ಕೇಳಿದೆ.
ಅವನು ಅವನ ಹೆಸರು ಹೇಳುವುದಕ್ಕೂ ನನ್ನ ಒಂದನೆಯ ತರಗತಿಯ ಆ  ಹುಡುಗನ ಮುಖಕ್ಕೂ ಇವನ ಮುಖಕ್ಕೂ, ಆ ಹೆಸರಿಗೂ ಈ ಹೆಸರಿಗೂ  ತಾಳೆಯಾಗಿ ಒಂದು ಕ್ಷಣ 'ವಾವ್' ಎಂದೆ ಮನಸ್ಸಿನೊಳಗೇ! ಒಬ್ನಾದ್ರೂ ಸಿಕ್ಬಿಟ್ಟ!

ನನ್ನ ಬಗ್ಗೆ ವಿಚಾರಿಸಿದ. ನಾನು ಓದಿದ ಆ ಶಾಲೆಯನ್ನು ಬಿಟ್ಟು ಉಳಿದೆಲ್ಲ ಶಾಲೆಗಳ ಹೆಸರು ಹೇಳಿದೆ. ಅವನು ಹತ್ತನೆಯವರೆಗೆ ಓದಿರುವ ಸಂಗತಿ ಹೇಳಿದ. ಏನೂ ತಿಳಿಯದವರಂತೆ ಅವನ ಬಾಲ್ಯವನ್ನು ಕೆದಕಿದೆ. ಈಗಿನ ಮಕ್ಕಳಂತೆ ಏನೂ ನೆನಪಿಲ್ಲದ ವ್ಯಕ್ತಿಯೇನೂ ಅವನಲ್ಲ. ಹಲವು ಮೇಷ್ಟ್ರುಗಳನ್ನು ಅವನು ನೆನಪಿಸಿಕೊಂಡ. (ಅದರಲ್ಲಿ ನನ್ನ ಜನ್ಮದಿನಾಂಕವನ್ನೂ, ಜಾತಿಯನ್ನೂ ಸೃಷ್ಟಿಸಿದವರೆಲ್ಲರೂ ಬಂದುಹೋದರು!)  ಅವನಿಗಿರುವ ಕ್ರೀಡೆಯ ಮೇಲಿರುವ ಒಲವನ್ನು ಹೇಳಿದ . ಒಂದನೇ ತರಗತಿಯಲ್ಲಿದ್ದಾಗಲೇ ನಾವಿಬ್ಬರು ಪ್ರಚಂಡ ಕಬಡ್ಡಿ ಆಟಗಾರರಾಗಿದ್ದೆವು.  'ನಾನು ಓದೋದ್ರಲ್ಲಿ ಕ್ಲಾಸಿಗೇ ಫಸ್ಟ್ ಇದ್ದೆ' ಎಂದ. ಅವನು ನನ್ನನ್ನು ಗುರುತಿಸಲಿಲ್ಲ ಎಂಬ ಖುಷಿ ನನ್ನೊಳಗೆ ಕುಣಿದಾಡುತ್ತಿತ್ತು. ನಾನು ಪಿಯುಸಿ ಮುಗಿಸುವಷ್ಟರಲ್ಲಿ ಅವನು ಹುಡುಗಿಯೊಬ್ಬಳ ತಂದೆಯಾಗಿದ್ದ! ( ಅವಳು ಅಲ್ಲಿ ಅವನಿಗಿಂತ ತುಸು ದೂರದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು). ಕೆಲವು ಚಿತ್ರಗಳನ್ನು ಸೆರೆಹಿಡಿದು ಒಂದೆರಡನ್ನು ಮಾತ್ರ ಅವನಿಗೆ whatsapp ಮಾಡಿ ಹೇಳಲು ಉಳಿಸಿದ ನನ್ನ ಮಾತುಗಳಂತೆ ಅವುಗಳನ್ನೂ ಉಳಿಸಿಕೊಂಡೆ.
*
ಕಾಜೂರು ಸತೀಶ್