ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, January 30, 2019

ಪ್ರಚಾರದ ಹಿಂಸೆ

ಆ ಮೇಷ್ಟ್ರ ಹೆಸರನ್ನು ಹಲವರಿಂದ ಕೇಳಿ ತಿಳಿದಿದ್ದೆ. ಒಮ್ಮೆ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ( ಒಲ್ಲದ ಮನಸ್ಸಿನಿಂದ! ) ಪ್ರಥಮ ಸ್ಥಾನ ಪಡೆದಿದ್ದರು. (ಇವರ ಹೊರತು ಅಲ್ಲಿ ಭಾಗವಹಿಸಿದ್ದವರೆಲ್ಲರೂ ಚಿತ್ರಕಲಾ ಶಿಕ್ಷಕರು!)

ಮೊನ್ನೆ ಅವರು ಸಿಕ್ಕಿದಾಗ ಒಂದಷ್ಟು ಜನರಿಗೆ ಅವರ ಹೆಸರು, ಶಾಲೆಯಲ್ಲಿ ಅವರು ಮಾಡುತ್ತಿರುವ ಸೇವೆಯನ್ನು ವಿವರಿಸಿದೆ. ಅವರ ಮುಖದಲ್ಲಿನ ಮುಜುಗರ ನನ್ನನ್ನು ಇರಿದು ಕೊಲ್ಲುತ್ತಿತ್ತು!

ಸುಮಾರು ಹೊತ್ತು ಕಳೆದ ಮೇಲೆ ನನ್ನ ಬಳಿ ಬಂದು ಮೆಲ್ಲಗೆ ಉಸುರಿ ಹೋದ ಅವರ ಮಾತುಗಳು ಮಾಗಿಯ ಈ ರಾತ್ರಿಯನ್ನು ಸುಡುತ್ತಿವೆ!

ಅವರು ಅಂದಿದ್ದಿಷ್ಟು: " ಸರ್ ದಯವಿಟ್ಟು ಯಾರಿಗೂ ಹೇಳ್ಬೇಡಿ. ನೀವು ಹೇಳಿ ನಾಲ್ಕು ಜನಕ್ಕೆ ಗೊತ್ತಾಯ್ತು ಅಂತ ಇಟ್ಕೊಳ್ಳಿ, ಆಮೇಲೆ ಅವ್ರು ಇವ್ರು ಬರ್ತಾರೆ, ಅಲ್ಲಿ ಇಲ್ಲಿ ಕರೀತಾರೆ, ಪಾಪ ನಮ್ಮಕ್ಳಿಗೆ ಅನ್ಯಾಯ ಆಗುತ್ತೆ, ಶಾಲೆ ಮುಚ್ಚುತ್ತೆ, ಈ publicityಯಿಂದ ನೆಮ್ದಿನೂ ಹಾಳಾಗುತ್ತೆ.. ದಯವಿಟ್ಟು ಬೇಡ ಸಾರ್.."

ಕ್ಷಮಿಸಿ ಸರ್, ನಿಮ್ಮ ಹೆಸರನ್ನು ಇಲ್ಲಿ ಬರೆದು ಮತ್ತೊಮ್ಮೆ ನಿಮಗೆ ಮುಜುಗರ ಉಂಟುಮಾಡುವುದಿಲ್ಲ!
*
ಕಾಜೂರು ಸತೀಶ್