ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, April 21, 2018

ಕಡಲ ಕರೆಯ ಕುರಿತು ಡಾ.ಎಚ್.ಎಸ್.ಅನುಪಮಾ

Listen to Dr HS Anupama, speaking on kajooru Sathish's 'kadala kare', a kannada translation of contemporary malayalam poems #np on #SoundCloud
https://soundcloud.com/kajooru-sathish/dr-hs-anupama-speaking-on

ಸೇತುರಾಮ್ ಅವರ 'ನಾವಲ್ಲ' ಕಥಾಸಂಕಲನ

ಹೆಸರಾಂತ ನಾಟಕಕಾರ, ನಟ, ನಿರ್ದೇಶಕ ಶ್ರೀ ಸೇತುರಾಮ್ ಅವರ 'ನಾವಲ್ಲ' ಕಥಾಸಂಕಲನವು ನಾನು ಓದಿದ ಮಹತ್ವದ ಕೃತಿಗಳಲ್ಲೊಂದು.

ಸಂಕಲನದಲ್ಲಿರುವ ಆರು ಕಥೆಗಳೂ ಓದುಗರನ್ನು ತೀವ್ರವಾಗಿ ಕಾಡಿಸುವಂಥವುಗಳು. ನಮ್ಮ ಸಜ್ಜನಿಕೆಯ ಮುಖವಾಡಗಳನ್ನು ಕಳಚಿಡುವ ಕಥನಗಳವು. ನಮ್ಮೊಳಗಿನ ಪ್ರಜ್ಞೆಯನ್ನು ಎಬ್ಬಿಸುವ 'ಮನಸ್ಸಿನ ಮಾತು'ಗಳವು.

ಅಭೂತಪೂರ್ವ ಕಥೆ ಹೇಳುವ ಶೈಲಿ, ಕೆಂಡದುಂಡೆಗಳಂಥ ಭಾಷೆ ಮತ್ತು ಸಂಭಾಷಣೆಗಳಿಂದಾಗಿ ಈ ಕೃತಿಯು ನಾಲ್ಕು ಮುದ್ರಣಗಳನ್ನು ಕಂಡಿದೆ. ಅವರ 'ಕಾತ್ಯಾಯಿನಿ'ಯು ಕನ್ನಡ ಕಥಾಪರಂಪರೆಯ ಪ್ರಮುಖ ಕಥೆಗಳ ಸಾಲಿಗೆ ಸೇರಬಲ್ಲ ಕಥೆ.

ಹೆಣ್ಣಿನ ಆತ್ಮವನ್ನು ಧರಿಸಿ ಮಾತನಾಡುವ ಸೇತುರಾಮ್ ಅವರ ಕಥೆಗಳು ಹೆಣ್ಣಿನ ಮೇಲಾಗುವ ದೌರ್ಜನ್ಯಗಳನ್ನು ಅತಿಸೂಕ್ಷ್ಮವಾಗಿ,  ಸಶಕ್ತವಾಗಿ ವಿವರಿಸುತ್ತವೆ. ಕೌಟುಂಬಿಕ, ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆಗಳಲ್ಲಿರುವ ಕ್ರೌರ್ಯ ಮತ್ತು ಅಸಮಾನತೆಗಳನ್ನು ಆಳವಾಗಿ ವಿಶ್ಲೇಷಿಸುತ್ತವೆ.

ಸ್ವಯಂ ಭ್ರಷ್ಟರಾಗಿದ್ದುಕೊಂಡು 'ನಾವಲ್ಲ' ಎನ್ನುತ್ತಾ ಮತ್ತೊಬ್ಬರ ಭ್ರಷ್ಟತೆಯನ್ನು ಬಯಲಿಗೆಳೆಯಲು ಹೊರಡುವ ನಮ್ಮಂಥವರ ಮುಖವಾಡಗಳು ಇಲ್ಲಿ ಬಟಾಬಯಲಾಗುತ್ತವೆ.

ತಾಯ್ತನವನ್ನು ತುಂಬಿಕೊಂಡ , ಮಾನವೀಯತೆಗಾಗಿ ಹಪಹಪಿಸುವ ಕಥೆಗಳಿವು.
*

ಕಾಜೂರು ಸತೀಶ್

Friday, April 20, 2018

ಡೆಮಾಕ್ರಸಿ ಅಳಿಯುತ್ತಿರುವ ಲಕ್ಷಣಗಳು

* ಕೋಟಿಕುಳಗಳಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ; ಅಂಥವರಿಗೇ ಗೆಲುವಿನ ಪ್ರಾಪ್ತಿ.

* ಜಾತಿ ಮತ್ತು ಧರ್ಮಾಧಾರಿತ ಮತ ಚಲಾವಣೆ.

* ಒಂದೇ ಪಕ್ಷಕ್ಕೆ ಮತ ಚಲಾಯಿಸುವುದು. ಎಂಥಾ ಭ್ರಷ್ಟನೇ ಸ್ಪರ್ಧಿಸಲಿ, ಮತ ಅವನಿಗೇ ಮೀಸಲು.

* ಹಣ, ಹೆಂಡ ಮತ್ತಿತರ ಆಮಿಷಗಳಿಗೆ ಬಲಿಯಾಗುವ ಮತದಾರ.

* ಗೆದ್ದ ತಕ್ಷಣವೇ ಸರ್ವಾಧಿಕಾರಿಯಾಗುವ ರಾಜಕಾರಣಿ.

* ಬಹುತೇಕ ಸೌಲಭ್ಯಗಳೆಲ್ಲ ಗೆದ್ದವರ ಸಂಬಂಧಿಕರಿಗೆ, ಆಪ್ತ ಕಾರ್ಯಕರ್ತರುಗಳಿಗೆ ಹಂಚಿಕೆ.

* ವಂಶಪಾರಂಪರ್ಯಾಧಾರಿತ ರಾಜಕಾರಣ.

* ಇವರಲ್ಲಿ ಯಾರೂ ಅರ್ಹರಲ್ಲ ಎಂದು 'NOTA'ವನ್ನು ಬೆಂಬಲಿಸುವ ಮತದಾರ.

* ಚುನಾವಣಾ ಸಂದರ್ಭವಷ್ಟೇ ಬಿರುಸಿನಿಂದ ನಡೆಯುವ ಕಾಮಗಾರಿಗಳು.

*

ಕಾಜೂರು ಸತೀಶ್

ಮದುವೆ ಊಟ

ಸುಡುವ ಈ ಬೇಸಿಗೆಯಲ್ಲಿ ಎಷ್ಟೋ ಮದುವೆಗಳಲ್ಲಿ ಭಾಗಿಯಾಗಿದ್ದೇನೆ. ಮತ್ತಷ್ಟೂ ಸುಡುವ ಅಲ್ಲಿನ ಅಡುಗೆ ಕೋಣೆಗಳಲ್ಲಿ ಬೆವರಿನ ಮಳೆ ಸುರಿಸುವ ಕೆಲಸಗಾರರನ್ನು ನೋಡಿದ್ದೇನೆ.

ನೀವು ನಂಬಲಾರಿರಿ: ನಾವು ಉಣ್ಣುವ ಮದುವೆ ಊಟದಲ್ಲಿ ಅವರ ಬೆವರಿನ ಒಂದು ಹನಿಯಾದರೂ ಜಾಗ ಪಡೆದುಕೊಂಡಿರುತ್ತದೆ! ಅಷ್ಟೆಲ್ಲ ಜನಗಳಿಗೆ ಬೇಯಿಸಿ ಹಾಕುವುದೆಂದರೇನು ಸಾಮಾನ್ಯ ಕೆಲಸವೇ?

ಲಿಪ್ಸ್ಟಿಕ್ ಬಳಿದು ಬಂದು ಎರಡೇ ಎರಡು ಬೆರಳುಗಳಲ್ಲಿ ಸ್ವಲ್ಪ ತಿಂದು ಮುಕ್ಕಾಲು ಭಾಗವನ್ನು ತಟ್ಟೆಯಲ್ಲೇ ಉಳಿಸಿಬರುವ ಈ ಕಾಲದ ಹುಡುಗಿಯರ ಮೇಲೆ ಇನ್ನಿಲ್ಲದ ಸಿಟ್ಟು ಬರುತ್ತದೆ.

ಸಾವು ಮತ್ತು ಮದುವೆ



ಸಾವು ಮತ್ತು ಮದುವೆ ನನ್ನನ್ನು ದಾರುಣವಾಗಿ ಕಾಡುವ ಕೌಟುಂಬಿಕ ಸಂದರ್ಭಗಳು. ಈ ಎರಡೂ ಕೂಡ ಶೋಷಣೆಯ ದಾರಿಗಳು. ಸಮಾಜವು ಈ ಸನ್ನಿವೇಶಗಳಿಗೆ ಒಳಗಾಗುವ ಕುಟುಂಬವನ್ನು ಗರಿಷ್ಟ ಮಟ್ಟದಲ್ಲಿ ಶೋಷಿಸುತ್ತದೆ.

Saturday, April 7, 2018

ಮರ ಮತ್ತು ಜನ

ಮರ ಹೂವಾಗಿ ನಕ್ಕಿತು
ಮುಡಿದು ತೆಪ್ಪಗಾದರು ಜನ

ಮರ ಹಣ್ಣಾಗಿ ಉಲಿಯಿತು
ತಿಂದು ತೇಗಿ ನಿದ್ದೆಹೋದರು ಜನ

ಮರ ನೊಂದು ಎಲೆಯುದುರಿಸಿತು
'ಉದುರಿತಂತೆ ಹೆಹ್ಹೆಹ್ಹೇ'
ಎದ್ದೆದ್ದು ಕೇಕೆ ಹಾಕಿದರು ಜನ 
*

- ಕಾಜೂರು ಸತೀಶ್

ಆಟ

ಅವಳತ್ತ ಚೆಂಡನ್ನೆಸೆದೆ
ಅವಳು ನನ್ನತ್ತಲೂ.

ಸುಮಾರು ಹೊತ್ತಾದ ಮೇಲೆ
ಚೆಂಡನ್ನೇ ಬಳಸದೆ
ಎಸೆಯುವ ಹಿಡಿಯುವ ಆಟ ಆಡಿದೆವು.

ಇನ್ನೂ ಸ್ವಲ್ಪ ಹೊತ್ತಾದ ಮೇಲೆ
ನಾವು
ನಾವಿಬ್ಬರೂ ಇಲ್ಲದೆ
ಚೆಂಡನ್ನಷ್ಟೇ ಎಸೆದುಕೊಂಡೆವು
ಚೆಂಡನ್ನಷ್ಟೇ ಹಿಡಿದುಕೊಂಡೆವು.
*

ಮಲಯಾಳಂ ಮೂಲ - ಎಂ. ಆರ್. ವಿಷ್ಣು ಪ್ರಸಾದ್

ಕನ್ನಡಕ್ಕೆ - ಕಾಜೂರು ಸತೀಶ್