ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, December 31, 2022

ಹಬ್ಬ



ಅಬ್ಬರಿಸುವ ಹಬ್ಬವನ್ನು ಪ್ರತೀ ವರ್ಷ ಆಚರಿಸಲಾಗುತ್ತಿತ್ತು. ಹೆಚ್ಚು ಅಬ್ಬರಿಸುವವರ ಧ್ವನಿಪೆಟ್ಟಿಗೆ ಒಡೆದು, ಧ್ವನಿ ಕೀರಲಾಗಿ, ಧ್ವನಿ ಕಳೆದುಕೊಂಡು ನರಳುವವರ ಸಂಖ್ಯೆ ಎಂದಿನಂತೆ ಇದ್ದೇ ಇರುತ್ತಿತ್ತು .

ರಾತ್ರಿ ಅಬ್ಬರಿಸುವಂತಿಲ್ಲ ಎಂದು ಆದೇಶ ಹೊರಡಿಸಿದರೂ ರಾತ್ರಿಯೇ ಹೆಚ್ಚು ಜನರು ಅಬ್ಬರಿಸುತ್ತಿದ್ದರು.

ಧ್ವನಿ ಕಳೆದುಕೊಳ್ಳುವವರಿಗೆ ತುರ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿತ್ತು.

*

ಹಬ್ಬದ ಎರಡು ದಿನಗಳ ಮೊದಲು ಕವಿಗಳು, ಕಲಾವಿದರಿಗಾಗಿ ದಟ್ಟ ಕಾಡಿನಲ್ಲಿ ವಾಸದ ವ್ಯವಸ್ಥೆಯನ್ನು ಮಾಡಿದ್ದರು.

*
ಕಾಜೂರು ಸತೀಶ್

ತಾರ್ತೂಫ್

Molière ಬರೆದ Tartuffe (1664)ನಾಟಕದಲ್ಲಿ(satire) ಕಪಟಿಯಾದ tartuffeನನ್ನು ಯಜಮಾನನು ಮನೆಗೆ ಕರೆದು ಅಲ್ಲೇ ಉಳಿಸಿಕೊಂಡು ಆರಾಧಿಸುವ ಕತೆಯಿದೆ. ಕಡೆಗೆ ಅವನ ನಿಜರೂಪ ಬಯಲಾಗುವ ಹೊತ್ತಿನಲ್ಲಿ ಮನೆಯನ್ನೇ ಕಬಳಿಸುವ ಮಟ್ಟಕ್ಕೆ ಬೆಳೆದುಬಿಡುತ್ತಾನೆ Tartuffe. ಆ ಕಾಲದ ಧಾರ್ಮಿಕ ಮೌಢ್ಯವನ್ನೂ ಸಾಮಾಜಿಕ ತರತಮಗಳನ್ನೂ ವೈನೋದಿಕವಾಗಿ ಬರೆದ Molièreನು ಈ ಎಲ್ಲಾ ಸಂಗತಿಗಳನ್ನು ಸೊಗಸಾಗಿ ವಿಶ್ಲೇಷಿಸುವ ಕಾರ್ಯವನ್ನು ಮನೆಯ ಸೇವಕಿ Dorine ಬಳಿ ಮಾಡಿಸುತ್ತಾನೆ. ಎಲ್ಲಾ ಕಾಲದ political satire ಆಗಿಯೂ ಇದು ಓದಿಸಿಕೊಳ್ಳುತ್ತದೆ.

*

ಕಾಜೂರು ಸತೀಶ್

ಕಾಫ್ಕ

Kafkaನ The Metamorphosis, The Castle, The Trial- ಕೃತಿಗಳು fragmentary ಎನಿಸುತ್ತವೆ. 'ಇಡಿ'ಯನ್ನು ಹುಡುಕಲಾಗದ ಆದರೆ ಬಿಡಿಯಲ್ಲಿ ಬೆಚ್ಚಿಬೀಳಿಸುವ ಭಯಾನಕ ವಾಸ್ತವವನ್ನು ಕಟ್ಟಿಕೊಡುತ್ತಾನೆ Kafka. The castle ಹೆಚ್ಚು symbolic ಆಗಿ ಕಂಡರೆ, The trialನ ನ್ಯಾಯದ ಪರಿಕಲ್ಪನೆ ವಿಚಿತ್ರ ಸತ್ಯವಾಗಿ ಕಾಣುತ್ತದೆ. Camusನಿಗಿಂತ ತೀವ್ರವಾಗಿ Absurdity ಮತ್ತು Existentialismಗಳನ್ನು ಹೊರತರುತ್ತಾನೆ Kafka.

40ಕ್ಕೆ ತೀರಿಕೊಂಡ ಅವನ ಕೃತಿಗಳು ಅಪೂರ್ಣವಾಗಿಯೇ ಪ್ರಕಟಗೊಂಡವು. ನಾನು ಸತ್ತಮೇಲೆ ಇವುಗಳನ್ನು ಸುಟ್ಟಬಿಡಿ ಎಂದು ಬರೆದಿದ್ದ. ಆದರೆ,thanks, ಅವನ ಗೆಳೆಯ ಹಾಗೆ ಮಾಡಲಿಲ್ಲ!
*
ಕಾಜೂರು ಸತೀಶ್

ಮ್ಯಾಕ್ರೋ ಛಾಯಾಗ್ರಹಣ- ಆಳ ,ಅಗಲಗಳು


ಮಹಾಭಾರತದ ಒಂದು ಸನ್ನಿವೇಶ: ದ್ರೋಣಾಚಾರ್ಯರು ಅರ್ಜುನನಿಗೆ ಒಂದು ಹಕ್ಕಿ ಕುಳಿತ ಮರವನ್ನು ತೋರಿಸಿ 'ಏನು ಕಾಣಿಸುತ್ತಿದೆ' ಎಂದಾಗ ಅವನು 'ಹಕ್ಕಿಯ ಕಣ್ಣು ಕಾಣಿಸುತ್ತಿದೆ' ಎಂದನಂತೆ .

ಮ್ಯಾಕ್ರೋ ಫೋಟೋಗ್ರಫಿ ಅಥವಾ ಸ್ಥೂಲ ಛಾಯಾಗ್ರಹಣದ ಬಗೆಯೂ ಹೀಗೆ. ಪಕ್ಷಿಯನ್ನು ಕಂಡಾಗ ಅದರ ಕಣ್ಣು ಅಥವಾ ಇತರೆ ನಿರ್ದಿಷ್ಟ ಭಾಗಗಳ ಮೇಲೆ ಕೇಂದ್ರೀಕರಿಸುವ ಬಗೆಯದು. ಅಥವಾ ಇಡೀ ಹಕ್ಕಿಯ ಸಮೀಪದ ನೋಟವನ್ನು ಒದಗಿಸುವ ಛಾಯಾಗ್ರಹಣ. ಅದರ ಪಯಣ ಇಡಿಯಿಂದ ಬಿಡಿಯ ಕಡೆಗೆ.

ಸಣ್ಣ ವಸ್ತು ಅಥವಾ ಆಕೃತಿಗಳನ್ನು ಅವು ಇರುವ ಹಾಗೆ ಅಥವಾ ಇರುವುದಕ್ಕಿಂತ ಹೆಚ್ಚಿನ ಆಕಾರ ಮತ್ತು ಗಾತ್ರದಲ್ಲಿ ಕಾಣುವಂತೆ ಕ್ಲಿಕ್ಕಿಸುವುದೇ ಮ್ಯಾಕ್ರೋ ಛಾಯಾಗ್ರಹಣ . ನಮ್ಮ ಕಣ್ಣೆದುರೇ ಇರುವ ಹೂವು, ಎಲೆ, ಕೀಟ, ನೀರಹನಿ, ಆಹಾರವಸ್ತುಗಳು, ಪ್ರಾಣಿ-ಪಕ್ಷಿ, ಕಲ್ಲು ಕಡ್ಡಿಗಳಿಂದ ಮೊದಲ್ಗೊಂಡು ನಮ್ಮ ಬರಿಗಣ್ಣು ಸವಿಯದ ಸಮೀಪದ ನೋಟವನ್ನು ಮ್ಯಾಕ್ರೊ ಛಾಯಾಗ್ರಹಣವು ನಮಗೆ ನೀಡುತ್ತದೆ.

ನಮ್ಮ ಮನೆಯ ಗೋಡೆಯ ಮೇಲೆ ಲೊಚಗುಡುವ ಹಲ್ಲಿಯ ಕಣ್ಣು ,ಅದರ ಮೈಯ ರಚನೆ; ಕಾಲಿನ ಪಕ್ಕದಲ್ಲೇ ಮಲಗಿರುವ ಬೆಕ್ಕಿನ ಕಣ್ಣು ; ಪುಟ್ಟ ಮಗುವಿನ ಭಾವಚಿತ್ರ, ಅದರ ಕೂದಲು, ಕಣ್ಣು ,ಕಿವಿ, ಅಡುಗೆಮನೆಯ ತರಕಾರಿ, ಆಹಾರವಸ್ತುಗಳು ಇವೂ ಮ್ಯಾಕ್ರೋ ಛಾಯಾಗ್ರಹಣದ ವಸ್ತು.ಹಾಗೆಯೇ, ಮಾರುಕಟ್ಟೆಯ ಉತ್ಪನ್ನಗಳು ,ಪುಸ್ತಕದ ರಕ್ಷಾಪುಟ, ಎಲೆಕ್ಟ್ರಾನಿಕ್ ಉತ್ಪನ್ನಗಳು , ಆಭರಣಗಳು.. ಹೀಗೆ ಮನೆಯ ಒಳಗೇ ಆರಂಭಿಸಬಹುದಾದ ಮ್ಯಾಕ್ರೊ ಛಾಯಾಗ್ರಹಣವು ದಟ್ಟ ಅರಣ್ಯದ ವಿಶಿಷ್ಟ ಕೀಟ ಹಾಗೂ ಸಸ್ಯ ಪ್ರಭೇದಗಳವರೆಗೂ ಚಾಚಿಕೊಳ್ಳುತ್ತದೆ.

ಇನ್ನೂ ಸ್ಪಷ್ಟವಾಗಬೇಕಾದರೆ : ನಿಮ್ಮ ಮನೆಯ ಗೋಡೆಯ ಮೇಲೆ ಒಂದು ಹಲ್ಲಿಯೋ ಅಥವಾ ಜೇಡವೋ ಇದೆ ಎಂದಿಟ್ಟುಕೊಳ್ಳಿ. ನೀವು ನಿಮ್ಮ ಮೊಬೈಲಿನಲ್ಲಿ ಅದನ್ನು ಕ್ಲಿಕ್ಕಿಸುತ್ತೀರಿ. ಈಗ ಅದೊಂದು ಸಾಮಾನ್ಯ ಚಿತ್ರವಷ್ಟೇ. ಕೆಲವರು ಅದನ್ನು ನೋಡಿದರೆ ಭಯಪಡುವುದೂ ಉಂಟು. ಅದೇ ಜೀವಿಯ ಸುಂದರ ಕಣ್ಣು ಅಥವಾ ರೇಖಾಗಣಿತದ ಆಕೃತಿಯಂತಹ ಅದರ ದೇಹದ ವಿನ್ಯಾಸದ ಮೇಲೆ ಕೇಂದ್ರೀಕರಿಸಿದ ಚಿತ್ರ ಎಂಥವರನ್ನೂ ಸೆಳೆಯುತ್ತದೆ. ವಿಜ್ಞಾನದ ವಿದ್ಯಾರ್ಥಿಗೆ ಅದೊಂದು ಅಧ್ಯಯನದ ವಸ್ತು. ಕಲೋಪಾಸಕನಿಗೆ ಅದೊಂದು ಅದ್ಭುತ ಕಲೆ. ಹೀಗೆ, ಒಂದು ಅಲಕ್ಷಿತ ಸಂಗತಿಯನ್ನೂ ಚಿತ್ರವಾಗಿಸುವ ಈ ಬಗೆಯ ಛಾಯಾಗ್ರಹಣವೇ ಮ್ಯಾಕ್ರೋ ಛಾಯಾಗ್ರಹಣ
*
ಮ್ಯಾಕ್ರೋ ಛಾಯಾಗ್ರಹಣಕ್ಕೆ ಬೇಕಿರುವ ಮುಖ್ಯ ಸಾಧನಗಳು: 👉DSLR ಕ್ಯಾಮರಾ ಅಥವಾ Mirrorless ಕ್ಯಾಮರಾ ಅಥವಾ ಸ್ಮಾರ್ಟ್ ಫೋನ್
👉ಮ್ಯಾಕ್ರೋ ಮಸೂರ ಅಥವಾ ಮ್ಯಾಕ್ರೋ ಲೆನ್ಸ್
👉ಫ್ಲ್ಯಾಷ್
👉ಬೆಳಕಿನ ಚದುರುವಿಕೆಗಾಗಿ ಡಿಫ್ಯೂಸರ್
👉 ಕ್ಯಾಮರಾವನ್ನು ನಿಲ್ಲಿಸುವ ಟ್ರೈಪಾಡ್
👉ಸಾಮಾನ್ಯ ಲೆನ್ಸುಗಳನ್ನು ಮ್ಯಾಕ್ರೋ ಆಗಿ ಪರಿವರ್ತಿಸಲು ಅಂದರೆ ಲೆನ್ಸನ್ನು  ತಿರುಗಿಸಿ  ಹಾಕಲು  ರಿವರ್ಸ್ ರಿಂಗ್
👉 ಸನಿಹದಿಂದ ಫೋಕಸ್ ಮಾಡಲು ಕ್ಲೋಸ್ ಅಪ್ ಫಿಲ್ಟರ್ ಅಥವಾ ಶೋಧಕ
  👉ಲೆನ್ಸನ್ನು ವಿಸ್ತರಿಸಲು ವಿಸ್ತರಣಾ ಕೊಳವೆ ಅಥವಾ Extension Tube
*
ಮ್ಯಾಕ್ರೋ ಛಾಯಾಗ್ರಹಣದ ಇತಿಹಾಸ

ಮ್ಯಾಕ್ರೋ ಛಾಯಾಗ್ರಹಣವು ಆರಂಭವಾದದ್ದು ಇಪ್ಪತ್ತನೆಯ ಶತಮಾನದ ಆದಿಯಲ್ಲಿ. ಫ್ರ್ಯಾಂಕ್ ಪರ್ಸಿ ಸ್ಮಿತ್ ಎಂಬ ಬ್ರಿಟನ್ನಿನ ಛಾಯಾಗ್ರಾಹಕ ಈಗ ನಾವು ಬಳಸುತ್ತಿರುವ ಮಾದರಿಯ ವಿಸ್ತರಣಾ ಕೊಳವೆ ಅಥವಾ extension tubeಗಳ ಸಹಾಯದಿಂದ ಕೀಟಗಳ ಚಿತ್ರಗಳನ್ನು  ಮೊದಲು ಸೆರೆಹಿಡಿದರು. ಶೈಕ್ಷಣಿಕ ಹಾಗೂ ಸಂಶೋಧನಾ ದೃಷ್ಟಿಯಿಂದ ಆಗಿನ ಮ್ಯಾಕ್ರೋ ಛಾಯಾಗ್ರಹಣವು ನಡೆಯುತ್ತಿತ್ತು. ಈಗಿನ ಹಾಗೆ ಚಿತ್ರವನ್ನು ಸೆರೆಹಿಡಿಯುವಾಗ ವಸ್ತುವಿನ ವಿನ್ಯಾಸವನ್ನು  ಕ್ಯಾಮರಾದ Viewfinderನಲ್ಲಿ ನೋಡಿ ಅನುಭವಿಸುವ ಮತ್ತು  ಚಿತ್ರಕ್ಕೆ ಚೌಕಟ್ಟನ್ನು ರೂಪಿಸುವ ಅವಕಾಶ ಆಗ ಇರಲಿಲ್ಲ.  ಅಥವಾ, ಇಂದಿನ ಮೊಬೈಲ್ ಫೋನ್ ಮತ್ತು  mirrorless ಕ್ಯಾಮರಾಗಳ ಹಾಗೆ ನಾವು ಕ್ಲಿಕ್ಕಿಸಬೇಕಾದ ವಸ್ತುಗಳನ್ನು  ಪರದೆಯಲ್ಲಿ ನೋಡಿಕೊಂಡೇ ಚಿತ್ರಿಸುವ ಅವಕಾಶವೂ ಆಗ ಇರಲಿಲ್ಲ.  1950ರಲ್ಲಿ SLR ಅಥವಾ single lens reflexನ ಆವಿಷ್ಕಾರದ ಅನಂತರ ಮ್ಯಾಕ್ರೋ ಛಾಯಾಗ್ರಹಣಕ್ಕೆ ವಿಶೇಷ ಅವಕಾಶಗಳು ದೊರೆತವು. ಇಂದು ಛಾಯಾಗ್ರಹಣ  ಜಗತ್ತಿನ ಬಹುಮುಖ್ಯ ಸಂಗತಿಗಳಲ್ಲಿ ಮ್ಯಾಕ್ರೋ ಛಾಯಾಗ್ರಹಣವೂ ಒಂದು.
*
ಮ್ಯಾಕ್ರೋ ಲೆನ್ಸ್ ಅಥವಾ ಮ್ಯಾಕ್ರೋ ಮಸೂರವನ್ನು ಮೂರು ಬಗೆಯಲ್ಲಿ ವಿಂಗಡಿಸಬಹುದು:
  👉 60 ಮಿ.ಮೀ.ಗಿಂತ ಕಡಿಮೆ ನಾಭಿದೂರ ಅಥವಾ focal length ಹೊಂದಿರುವ ಕಿರು ಮ್ಯಾಕ್ರೋ ಮಸೂರ

👉 ಸುಮಾರು 90ರಿಂದ 105ಮಿ.ಮೀ. ನಡುವಿನ ನಾಭಿದೂರ ಹೊಂದಿರುವ ಮಧ್ಯಮ ಮ್ಯಾಕ್ರೋ  ಮಸೂರ

ಮತ್ತು
👉ಸುಮಾರು 150ರಿಂದದ 200 ಮಿ.ಮೀ. ನಾಭಿದೂರ ಹೊಂದಿರುವ ಉದ್ದನೆಯ ಮ್ಯಾಕ್ರೋ ಮಸೂರ.

ಕಿರು ಮ್ಯಾಕ್ರೋ ಮಸೂರದಲ್ಲಿ ವಸ್ತುವಿನ ಸಮೀಪಕ್ಕೆ ಹೋಗಿ ಚಿತ್ರವನ್ನು ತೆಗೆಯಬೇಕು. ಉದ್ದನೆಯ ಮ್ಯಾಕ್ರೋ ಮಸೂರದಲ್ಲಿ ಸ್ವಲ್ಪ ಅಂತರವನ್ನು ಕಾಯ್ದುಕೊಂಡು ಚಿತ್ರವನ್ನು ಸೆರೆಹಿಡಿಯಬಹುದು.  ಕೆಲವು ಸೂಕ್ಷ್ಮ ಸ್ವಭಾವದ ಅಂದರೆ ಕ್ಯಾಮರಾಗಳಿಗೆ ಸುಲಭವಾಗಿ ಸಿಗದ ಜೀವಿಗಳನ್ನು ಚಿತ್ರಿಸಲು ಹಾಗೂ ವಸ್ತುಗಳನ್ನು ಭಯಪಡಿಸದೆ ಚಿತ್ರೀಕರಿಸಲು ಇವು ಸಹಕಾರಿಯಾಗಿದೆ.

ಮ್ಯಾಕ್ರೋದಲ್ಲಿ ಚಿತ್ರದ ಸಂಯೋಜನೆ, ಹಿನ್ನೆಲೆ , ಬೆಳಕು,  ಬಹಳ ಮುಖ್ಯ. ನಿಸರ್ಗದ ಸಹಜ ಬಣ್ಣ, ಬೆಳಕು, ಹಿನ್ನೆಲೆ ಸಿಕ್ಕಿದರಂತೂ ಛಾಯಾಗ್ರಾಹಕರಿಗೆ ಹಬ್ಬ. ಚಿತ್ರವನ್ನು ಕ್ಲಿಕ್ಕಿಸಿದ ಅನಂತರದ processing ಅಥವಾ ಸಂಸ್ಕರಣೆಯು  ಬೇಕಿರುವ ತಿದ್ದುಪಡಿಗೆ ಸಹಕಾರಿ. ಅದಕ್ಕಾಗಿ ವಿವಿಧ softwareಗಳು ಇಂದು ಲಭ್ಯವಿವೆ.

ಚಿತ್ರಕ್ಕೊಂದು ಚೌಕಟ್ಟಿದೆಯೇ? ಅದು ಏನನ್ನೋ ಹೇಳುತ್ತಿದೆಯೇ? ಬೆಳಕು ಯಾವುದರ ಮೇಲೆ ಬಿದ್ದಿದೆ? ಕೇಂದ್ರೀಕರಿಸಿದ ಚಿತ್ರ ಮತ್ತು ಹಿನ್ನೆಲೆ ಒಂದೇ ಬಣ್ಣದಲ್ಲಿದೆಯೇ ಅಥವಾ ಪ್ರಧಾನ ಭಾಗವೇ ಮಸುಕಾಗಿದೆಯೇ? ನೆರಳು ಬೆಳಕಿನ ಸಂಯೋಜನೆ ಇದೆಯೇ? 3D ಅಥವಾ ಮೂರು ಆಯಾಮಗಳಿವೆಯೇ? ಈ ಎಲ್ಲ ಪ್ರಶ್ನೆಗಳು ಮ್ಯಾಕ್ರೋ  'ಚಿತ್ರದ ಪರಿಣಾಮ'ದ ಮಹತ್ವವನ್ನು ತಿಳಿಸುತ್ತವೆ. ಇವೆಲ್ಲವುಗಳ ಜೊತೆಗೆ ಛಾಯಾಗ್ರಾಹಕರ ತಂತ್ರಗಾರಿಕೆಯ ಪಾಲೂ ಬೇಕಾಗುತ್ತದೆ.
*

ಸ್ಮಾರ್ಟ್ ಫೋನಿನಲ್ಲಿ ಮ್ಯಾಕ್ರೋ ಛಾಯಾಗ್ರಹಣ

ಕ್ಯಾಮೆರಾ ಹಾಗೂ ಕ್ಯಾಮರಾ ಸಂಬಂಧಿ ಉಪಕರಣಗಳನ್ನು  ಕೊಳ್ಳಲು ಸಾಮರ್ಥ್ಯವಿರುವವರು ಮಾತ್ರವೇ ಮಾಡುತ್ತಿದ್ದ ಛಾಯಾಗ್ರಹಣವು ಸ್ಮಾರ್ಟ್ ಫೋನುಗಳು ಬಂದಾಗಿನಿಂದ ಹಲವು ಮಂದಿಯ ಆಸಕ್ತಿಯ ಕ್ಷೇತ್ರವಾಗಿದೆ. ಇದು ಮತ್ತೆ ಒಂದು ಹೆಜ್ಜೆ ಮುಂದೆ ಸಾಗಿ,  ಮ್ಯಾಕ್ರೋ ಲೆನ್ಸುಗಳನ್ನು ಕೊಂಡುಕೊಂಡು ಮ್ಯಾಕ್ರೋ ಛಾಯಾಗ್ರಹಣವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಕೆಲವು ಸ್ಮಾರ್ಟ್ ಫೋನುಗಳಿಗೆ ಹೊಂದಿಕೊಳ್ಳುವ ಈ ಕ್ಲಿಪ್ ಲೆನ್ಸುಗಳು ಇಂದು ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಲಭ್ಯವಾಗುತ್ತಿವೆ . ಹಾಗೆಯೇ, ಬೆಳಕಿಗಾಗಿ ಅಗತ್ಯವಿರುವ ಡಿಫ್ಯೂಸರುಗಳೂ ಲಭ್ಯವಿವೆ. ತೆಗೆದ ಚಿತ್ರವನ್ನು playstoreನಲ್ಲಿ ಲಭ್ಯವಿರುವ ಕೆಲವು appಗಳಲ್ಲಿ ಸಂಸ್ಕರಣೆ ಅಥವಾ ಪ್ರೊಸೆಸಿಂಗ್ ಮಾಡಿ ಬೆಳಕು-ಬಣ್ಣಗಳ ತಿದ್ದುಪಡಿಗಳನ್ನೂ ಮಾಡಿಕೊಳ್ಳಬಹುದು.

ಸ್ಮಾರ್ಟ್ ಫೋನುಗಳಲ್ಲಿ ಬಳಸುವ ಲೆನ್ಸುಗಳು ಒಂದು ಸಾವಿರ ರೂಪಾಯಿಗೂ ಲಭ್ಯವಿದೆ. ಹಾಗೆಯೇ, dslrಗೆ ಅಗತ್ಯವಾದ  ಲಕ್ಷಾಂತರ ಮೌಲ್ಯದ ಮ್ಯಾಕ್ರೋ ಲೆನ್ಸುಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಛಾಯಾಗ್ರಹಣದಲ್ಲಿ ಒಲವಿರುವ ಆದರೆ dslr ಕ್ಯಾಮರಾವನ್ನು ಕೊಳ್ಳಲು ಸಾಧ್ಯವಾಗದ ಗೃಹಿಣಿಯರಿಗೆ
ಮ್ಯಾಕ್ರೋ ಛಾಯಾಗ್ರಹಣ ಉತ್ತಮ ವೇದಿಕೆ. 'ಇಷ್ಟು ಕಾಲ ಇವೆಲ್ಲಾ ಎಲ್ಲಿದ್ದವು' ಎಂದು  ಹುಬ್ಬೇರಿಸುವಂತೆ ಮಾಡುವ ಬಗೆಬಗೆಯ ಕೀಟಗಳ  ದರ್ಶನವಾಗುತ್ತದೆ. ಮನೆಯ ಹೂದೋಟದಲ್ಲಿ ಹೂವಿನೊಂದಿಗೆ ಹೂವಿನ ಹಾಗೇ ಕಾಣುವ ಚಿಟ್ಟೆಗಳು, ಬಳುಕುತ್ತಾ ಸಾಗುವ ಬಗೆಬಗೆಯ  ಹುಳುಹುಪ್ಪಟೆಗಳು, ಧ್ಯಾನಸ್ಥ ಸ್ಥಿತಿಯಲ್ಲಿರುವ ಜೇಡದ ಬೆರಗಿನ ಬಣ್ಣ- ಅದರ ಮೈಮೇಲಿನ ಕೂದಲು, ಕೀಟಗಳ ಮಿಲನ, ಚಲನೆ ... ಹೀಗೆ ಛಾಯಾಗ್ರಹಣ ನೀಡುವ ದಿವ್ಯ ಸುಖವನ್ನು ಅವರೂ ಅನುಭವಿಸಬಹುದು. ಕ್ರಮೇಣ, ಕ್ರಿಮಿ-ಕೀಟಗಳ ಮೇಲಿನ ಭಯ ಹೊರಟುಹೋಗಿ ಅವುಗಳ ಬೆನ್ನುಹತ್ತುವಂತೆ ಮಾಡುತ್ತವೆ.

ಸ್ಮಾರ್ಟ್ ಫೋನುಗಳಲ್ಲಿ ಸ್ಥೂಲ ಛಾಯಾಗ್ರಹಣ ಮಾಡುವಾಗ ವಸ್ತುವಿನ ತೀರಾ ಸನಿಹಕ್ಕೆ ನಾವು ತೆರಳಬೇಕಾಗುತ್ತದೆ. ಕಡಿಮೆ ನಾಭಿದೂರದ dslr ಮ್ಯಾಕ್ರೋ ಲೆನ್ಸುಗಳನ್ನು ಬಳಸುವಾಗಲೂ ಹೀಗೆಯೇ ಆಗುತ್ತದೆ. ಅದು ಎಷ್ಟರಮಟ್ಟಿಗೆ ಎಂದರೆ ಕೆಲವೊಮ್ಮೆ ಈ ಲೆನ್ಸುಗಳು ವಸ್ತುವನ್ನು ಸ್ಪರ್ಶಿಸಿಯೇಬಿಡುತ್ತವೆ. ಈ ಎಚ್ಚರ ಛಾಯಾಗ್ರಾಹಕರಿಗೆ ಇರಬೇಕಾಗುತ್ತದೆ.
*
ಛಾಯಾಗ್ರಹಣವು ಒಂದು ಧ್ಯಾನಸ್ಥ ಪ್ರಕ್ರಿಯೆ. ಕೆಲವೊಮ್ಮೆ ಒಂದು ಚಿತ್ರಕ್ಕಾಗಿ ದಿನವಿಡೀ ಕಾದು ಕೂರಬೇಕು. ಅವುಗಳು ಕಣ್ಣಿಗೆ ಕಂಡರೂ ಚಿತ್ರವನ್ನು ತೆಗೆಯುವ ಸಂದರ್ಭದಲ್ಲಿ ಅವು ಸ್ಥಾನ ಬದಲಿಸಿ ನಮ್ಮ ಕಣ್ಣುತಪ್ಪಿಸಿರುತ್ತವೆ. ನಿಸರ್ಗದ ಬಣ್ಣದೊಂದಿಗೆ ರಾಜಿಮಾಡಿಕೊಳ್ಳುವ ಇವು ನಮ್ಮ ಕಣ್ಣಿಗೆ ಬೀಳಬೇಕೆಂದರೆ ನಮಗೆ ತಾಳ್ಮೆ ಬೇಕಾಗುತ್ತದೆ ; ಅನುಭವ ಬೇಕಾಗುತ್ತದೆ.
*
ಸಾಮಾನ್ಯವಾಗಿ ವಸ್ತು/ಕೀಟಗಳನ್ನು ಸ್ಥಳಾಂತರಗೊಳಿಸಿ, ನಮಗೆ ಬೇಕಾದ ಸ್ಥಳದಲ್ಲಿ ಕೂರಿಸಿ ಮ್ಯಾಕ್ರೋ ಛಾಯಾಗ್ರಹಣವನ್ನು ಮಾಡುವುದಿದೆ. ಆದರೆ, ಅವುಗಳನ್ನು ಒಕ್ಕಲೆಬ್ಬಿಸಿ  ಅವುಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು ಸರಿಯಲ್ಲ. ಅವುಗಳ ಸಹಜ ಇರುವಿಕೆಯನ್ನೇ ಚಿತ್ರವಾಗಿಸುವ ಖುಷಿ ಹಾಗೂ ಸಾರ್ಥಕತೆಯೇ ಬೇರೆ.
*
ಕಾಂಕ್ರೀಟು ಕಾಡುಗಳು ಮಣ್ಣಿನಲ್ಲಿ ಬದುಕುವ ಅಸಂಖ್ಯ ಜೀವಿಸಮೂಹವನ್ನು ನಾಶಪಡಿಸುತ್ತವೆ. ಮನುಷ್ಯನ ಕುತೂಹಲಗಳಿಗೆ ಜೀವ ಬರುವುದೇ ನಿಸರ್ಗದ ಸಣ್ಣಸಣ್ಣ ಸಂಗತಿಗಳ ಹುಡುಕಾಟದಿಂದ. ಈ ಹುಡುಕಾಟವು ನಿಸರ್ಗದ ಮೇಲೆ ಪ್ರೀತಿಯನ್ನೂ, ಮನಸ್ಸಿಗೆ ಸಂತೋಷವನ್ನೂ ಹುಟ್ಟಿಸುತ್ತದೆ. ಬರಿಗಣ್ಣು ಗ್ರಹಿಸದ ಸಂಗತಿಗಳನ್ನು ಕಲಾತ್ಮಕವಾಗಿ ಚಿತ್ರಿಸುವ ಕ್ರಮವು ನಮ್ಮ ನೋಡುವ ಕ್ರಮವನ್ನೇ ಬದಲಿಸುತ್ತದೆ ಹಾಗೂ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.

ಪ್ರಕೃತಿಯನ್ನು ಪ್ರೀತಿಸುವ, ಅರ್ಥಮಾಡಿಕೊಳ್ಳುವ ಮಾರ್ಗಗಳಲ್ಲಿ ಮ್ಯಾಕ್ರೋ ಫೋಟೋಗ್ರಫಿಯೂ ಒಂದು. ಬದಲಾದ ಕಾಲಕ್ಕನುಗುಣವಾಗಿ ನವನವೀನ ಕ್ಯಾಮರಾಗಳ ಆವಿಷ್ಕಾರಗಳಾಗಿವೆ. ಹೆಚ್ಚಿನ ಮಂದಿ ಛಾಯಾಗ್ರಹಣದ ಕಡೆಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಕೇವಲ ಪರಿಸರ ಅಧ್ಯಯನಕಾರರಷ್ಟೇ ತೊಡಗಿಸಿಕೊಳ್ಳುತ್ತಿದ್ದ ಈ ಕ್ಷೇತ್ರಕ್ಕೆ ಬೇರೆಬೇರೆ ವಲಯಗಳ ಜನರು ಪ್ರವೇಶಿಸುತ್ತಿದ್ದಾರೆ. ಜನಸಾಮಾನ್ಯರ ಪ್ರವೇಶವೇ ಅದರ ಹೆಚ್ಚುಗಾರಿಕೆ. ಅವರ ಅಧ್ಯಯನಕ್ಕಾಗಿ ಅಂತರ್ಜಾಲದ ನೆರವಿದೆ. ಸ್ವಂತ ಆಸಕ್ತಿಯ ಬೆಂಬಲವಿದೆ.

ಇಡೀ ಪ್ರಕೃತಿ ರೂಪುಗೊಂಡಿರುವುದು ಮತ್ತು ಅದು ಪೂರ್ಣಗೊಳ್ಳುವುದು ನಾವು ಅಲಕ್ಷಿಸುವ ಹುಳುಹುಪ್ಪಟೆಗಳಿಂದ ಎಂಬ ಅರಿವನ್ನು ನಮಗೆ ಮ್ಯಾಕ್ರೋ ಛಾಯಾಗ್ರಹಣವು ನೀಡುತ್ತದೆ. ಅಂತಹ ಅರಿವು ನಮಗೆ ಬಂದಲ್ಲಿ ನಾವು ಪ್ರಕೃತಿಯನ್ನು  ಪ್ರೀತಿಸಲು ತೊಡಗುತ್ತೇವೆ,  ಕಾಳಜಿ ತೋರುತ್ತೇವೆ.
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಸಾಲುಗಳಂತೆ,

ಪ್ರೀತಿ ಇಲ್ಲದ ಮೇಲೆ -
ಹೂವು ಅರಳೀತು ಹೇಗೆ ?
ಮೋಡ ಕಟ್ಟೀತು ಹೇಗೆ ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?
*



ಕಾಜೂರು ಸತೀಶ್ 

ಬರೆದಂತೆ ಬದುಕಿದ ಟಾಲ್ಸ್ಟಾಯ್

ಲಿಯೋ ಟಾಲ್ಸ್ಟಾಯ್ ಬದುಕು ಮತ್ತು ಸಾಹಿತ್ಯ
ಬರೆದಂತೆ ಬದುಕಿದ ಲಿಯೋ ಟಾಲ್ಸ್ಟಾಯ್

ಜಗತ್ತಿನ ಹೆಸರಾಂತ ಲೇಖಕರ ಸಾಲಿನಲ್ಲಿ ಎದ್ದುಕಾಣುವ ಪ್ರತಿಭೆ ಕೌಂಟ್ ಲಿಯೋ ಟಾಲ್ಸ್ಟಾಯ್.
ಟಾಲ್ಸ್ಟಾಯ್ ಹುಟ್ಟಿದ್ದು ರಷ್ಯಾದ ಯಸ್ನಾಯ ಪೊಲ್ಯಾನ ಎಂಬ ಹಳ್ಳಿಯಲ್ಲಿ, 28 ಆಗಸ್ಟ್ 1828ರಂದು. ರಷ್ಯಾದ ಅಗರ್ಭ ಶ್ರೀಮಂತರ ಪಟ್ಟಿಯಲ್ಲಿ ಇವರ ಕುಟುಂಬವೂ ಒಂದು.

ಒಂಬತ್ತು ವರ್ಷಕ್ಕೇ ತಂದೆ-ತಾಯಿಯನ್ನು ಕಳೆದುಕೊಂಡ ಟಾಲ್ಸ್ಟಾಯ್ ಶಿಕ್ಷಣದಲ್ಲಿ ಅಷ್ಟೇನೂ ಆಸಕ್ತಿ ತೋರದಿದ್ದರೂ ಸ್ವತಂತ್ರವಾದ ಬೌದ್ಧಿಕತೆಯನ್ನು ರೂಪಿಸಿಕೊಂಡರು.

ಲಿಯೋ ಟಾಲ್ಸ್ಟಾಯ್ ಎಂದಾಗ ಜಗತ್ತಿಗೆ ನೆನಪಾಗುವುದು ಮಹಾಕಾವ್ಯದಂತಹ ಅವರ ಅನಾ ಕರೆನಿನಾ ಮತ್ತು ವಾರ್ ಅಂಡ್ ಪೀಸ್ ಕಾದಂಬರಿಗಳು. ಜಗತ್ತಿನ ಹಲವು ದೇಶ-ಭಾಷೆಗಳಿಗೆ ಅನುವಾದಗೊಂಡ ಹಿರಿಮೆ ಈ ಕೃತಿಗಳದು. ಅನಾ ಕರೆನಿನಾ ಉನ್ನತ ಪ್ರೇಮದ ದುರಂತ ಕತೆಯಾದರೆ, ವಾರ್ ಅಂಡ್ ಪೀಸ್ ಅಥವಾ ಯುದ್ಧ ಮತ್ತು ಶಾಂತಿ ಕಾದಂಬರಿಯು ದ್ವೇಷದಿಂದ ಪ್ರೀತಿಯ ಹಾಗೂ ಮನುಷ್ಯತ್ವದ ಕಡೆಗೆ ಸಾಗುವ ಕಥಾನಕ.

ತನ್ನ ಬದುಕಿನ ಪೂರ್ವಾರ್ಧದಲ್ಲಿ ಹಣ, ಹೆಣ್ಣು, ಜೂಜು, ಸುತ್ತಾಟ, ಯುದ್ಧ, ಇವುಗಳ ಜೊತೆಜೊತೆಗೆ ಸಾಹಿತ್ಯದಲ್ಲಿ ಕಳೆದುಹೋದ ಟಾಲ್ಸ್ಟಾಯ್ ಆ ಹೊತ್ತಿಗಾಗಲೇ ಹೆಸರುವಾಸಿಯಾಗಿದ್ದರು.
ವಿಲಾಸಿ ಜೀವನದಲ್ಲಿ ಮುಳುಗಿಹೋಗಿ ಜೂಜಿನಲ್ಲಿ ಹಣಕಳೆದುಕೊಂಡ ಮೇಲೆ ಸೈನ್ಯಕ್ಕೆ ಸೇರಿದರು. ಆದಿಕವಿ ಪಂಪನ ಯುದ್ಧ ವರ್ಣನೆಗೆ ಅವರ ಕಲಿತನದ ಅನುಭವ ನೆರವಾದಂತೆ, ಯುದ್ಧದ ಸೂಕ್ಷ್ಮ ಅನುಭವಗಳು ಟಾಲ್ಸ್ಟಾಯ್ ಅವರ ಕತೆ ಕಾದಂಬರಿಗಳಲ್ಲಿ ಹೇರಳವಾಗಿ ಸಿಗುತ್ತವೆ.

ಟಾಲ್ಸ್ಟಾಯ್ ಅವರ ಮೊದಲ ಕೃತಿ ರಷ್ಯನ್ ಜಮೀನ್ದಾರ (A Russian Land Lord) ಕಾದಂಬರಿಯ ನಾಯಕ ರಾಜಕುಮಾರ ನೆಕ್ಲುದೋವ್ ಶಿಕ್ಷಣವನ್ನು ಬಿಟ್ಟು, ರೈತರ ಉದ್ಧಾರಕ್ಕಾಗಿ ಹಳ್ಳಿಗೆ ಬರುತ್ತಾನೆ. ಆದರೆ ಶೋಷಣೆಯ ವಾತಾವರಣದಲ್ಲಿ ಬೆಳೆದ ಆ ರೈತರಿಗೆ ಮಾನವೀಯತೆಯ ಪರಿಚಯವಿರವೇ ಇರುವುದಿಲ್ಲ. ಹೀಗಾಗಿ ನೆಕ್ಲುದೇವನ ನಡವಳಿಕೆಯನ್ನೇ ಅವರು ಅನುಮಾನಿಸುತ್ತಾರೆ. ಹೀಗೆ ಟಾಲ್ಸ್ಟಾಯ್ನ ಆರಂಭಿಕ ಒಳತುಡಿತಗಳು ಮೊದಲ ಕೃತಿಯಲ್ಲಿಯೇ ವ್ಯಕ್ತವಾಗಿದೆ. ಇದೇ 'ನೆಕ್ಲುದೋವ್ ' ಕೊನೆಯ ಕಾದಂಬರಿ ಪುನರುತ್ಥಾನ( The Resurrection)ದಲ್ಲಿ ತಂದೆಯಿಂದ ಬಂದ ಸಾವಿರಾರು ಎಕರೆ ಭೂಮಿಯನ್ನು ರೈತರಿಗೆ ಹಂಚಿರುವವನು, ತಾಯಿಯ ಆಸ್ತಿಯನ್ನೂ ರೈತರಿಗೆ ಹಂಚಲಿರುವವನು.


ಲೇಖಕನೊಬ್ಬ ತಾನು ಬರೆಯುವುದು ಮತ್ತು ಹಾಗೆ ಬದುಕುವುದು ಒಂದೇ ಇರಬೇಕೇ ಎಂಬ ಜಿಜ್ಞಾಸೆ ಎಲ್ಲ ಕಾಲಗಳಲ್ಲೂ ನಡೆದಿದೆ. ಈ ನೆಲೆಯಲ್ಲಿ ನೋಡಿದರೆ, ಟಾಲ್ಸ್ಟಾಯ್ ಅವರು ಕೇವಲ ಸಾಹಿತ್ಯಿಕ ಕಾರಣಗಳಿಗಾಗಿ ಮುಖ್ಯರಾಗುವುದಿಲ್ಲ. ಅನಾ ಕರೆನಿನಾ ರಚಿಸಿದ ಅನಂತರದ ಕಾಲಘಟ್ಟ, ಅಂದರೆ , 1880ರ ಅನಂತರ ಅವರ ಬದುಕು ಮತ್ತು ಚಿಂತನೆಯ ಕ್ರಮದಲ್ಲಿ ಗಮನಾರ್ಹ ಪಲ್ಲಟಗಳು ನಡೆದವು. ಅದುವರೆಗಿನ ತನ್ನ ಮಹಾನ್ ಕಾದಂಬರಿಗಳನ್ನೇ 'ಉಪಯೋಗಕ್ಕೆ ಬಾರದ್ದು; ಅವೆಲ್ಲಾ ಅರ್ಥಹೀನ ರಚನೆಗಳು, ಯಾರು ಬೇಕಾದರೂ ಅದನ್ನು ಬರೆಯಬಹುದು' ಎಂದರು. ತಾವು ಬದುಕಿದ ವಿಲಾಸದ ರೀತಿಗೆ ಮರುಗಿದರು. ಪಶ್ಚಾತ್ತಾಪಪಟ್ಟರು. ಯುದ್ಧದ ಸಾವು- ನೋವುಗಳು ಸಾಮ್ರಾಟ ಅಶೋಕನನ್ನು ಕಾಡಿದಂತೆ ಅವರನ್ನು ಕಾಡಿದವು. 1879ರಲ್ಲಿ ಬರೆದ A Confession ಅಥವಾ ತಪ್ಪೊಪ್ಪಿಗೆಯಲ್ಲಿ ಆತ್ಮವಿಮರ್ಶೆಯ ಸ್ಪಷ್ಟ ಧಾಟಿಗಳಿವೆ.

ತಮ್ಮ ಬಾಳ ಸಂಗಾತಿ ಸೋಫಿಯಾಳೊಂದಿಗೆ 50 ವರ್ಷಗಳ ದಾಂಪತ್ಯವನ್ನು ನಡೆಸಿದರು. ಪ್ರೇರಕ ಶಕ್ತಿಯಂತಿದ್ದ ಸೋಫಿಯಾ, ಹಸ್ತಪ್ರತಿ , ಕರಡು ತಿದ್ದುಪಡಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಸಹನೆಯ ಮೂರ್ತಿಯಂತಿದ್ದ ಸೋಫಿಯಾ ಅವರಿಗೆ ಟಾಲ್‌ಸ್ಟಾಯ್ ಅವರ ಸಾಮಾಜಿಕ ಕಾಳಜಿ ಸಹಿಸಲಾರದ ಸಂಗತಿಯಾಯಿತು.

ಹೀಗಾಗಿ , ಎಲ್ಲ ಬಗೆಯ ಲೌಕಿಕ ಸಂಬಂಧಗಳನ್ನು ಕಡಿದುಕೊಂಡು ಬದುಕನ್ನು  ಅನುಭಾವದ ನೆಲೆಯಲ್ಲಿ ಬದುಕಿದರು ಟಾಲ್ಸ್ಟಾಯ್.

ಉತ್ತರಾರ್ಧಘಟ್ಟದ ಟಾಲ್ಸ್ಟಾಯ್ ಅವರ ಸೃಷ್ಟಿಗಳಲ್ಲಿ ಕಾಣಸಿಗುವುದು ನೀತಿಬೋಧಕ ಮಾರ್ಗಗಳು; ಆತ್ಮವಿಮರ್ಶೆಯ ದಾಖಲೆ. ಬದುಕಿನ ಅರ್ಥವಂತಿಕೆಯ ಬಗೆಗಿನ ಚಿಂತನ-ಮಂಥನ. ಅವರದೇ ಅನುಭವ ಕಥನಗಳಂತಿರುವ ಈ ಬರೆಹಗಳು ಜನಪದ ಲಯಕ್ಕೆ ಹತ್ತಿರವಾದವುಗಳು. ಮಕ್ಕಳಿಂದ ಆದಿಯಾಗಿ ಎಲ್ಲರಿಗೂ ಅರ್ಥವಾಗುವ ಸರಳ ನಿರೂಪಣೆ ಅವುಗಳ ಶಕ್ತಿ.

ಈ ನಡುವೆ ನಗರದಿಂದ ಹಳ್ಳಿಗೆ ಬಂದರು. ತನ್ನ ರೈತರ ಕುಟುಂಬಕ್ಕೆ ಶಿಕ್ಷಣ ನೀಡಲು ಶಾಲೆಯನ್ನು ತೆರೆದರು.ಪಠ್ಯಕ್ರಮವನ್ನು ರೂಪಿಸಿದರು. ರೈತರಂತೆ ಬಟ್ಟೆ ಧರಿಸಿದರು. ಚಪ್ಪಲಿಗಳನ್ನು ತಾವೇ ಹೊಲಿದು ಧರಿಸಿದರು.   ಶ್ರಮದ ತತ್ತ್ವವನ್ನು ಬಿತ್ತಿದರು. ತನ್ನ ರೈತರಿಗೆ ಭೂಮಿಯನ್ನು ಹಂಚಿದರು. ಜೀತದಾಳುಗಳನ್ನು ಬಿಡುಗಡೆಗೊಳಿಸಿದರು. ತನ್ನ ಕೃತಿಗಳ ಮೇಲಿನ ಗ್ರಂಥಸ್ವಾಮ್ಯವನ್ನೂ ಪ್ರಕಾಶಕರಿಗೆ ಕೊಡುವ ಪ್ರಯತ್ನ ಮಾಡಿದರು.

ಅವರ ಕಥೆಯೊಂದಿದೆ- 'ಮನುಷ್ಯರಿಗೆಷ್ಟು ಭೂಮಿ ಬೇಕು?'. ರೈತನೊಬ್ಬ ಅಗತ್ಯಕ್ಕಿಂತ ಹೆಚ್ಚು ಜಮೀನಿಗೆ ಆಸೆಪಟ್ಟು ಬಲಿಯಾಗುವ ಕತೆಯದು. ಮನುಷ್ಯನ ದುರಾಸೆಗೂ ಪ್ರಕೃತಿಯ ಸಂಪನ್ಮೂಲಗಳಿಗೂ ಇರುವ ಅಂತರವನ್ನು ಕಲಾತ್ಮಕವಾಗಿ ಹೇಳುತ್ತಾರೆ ಟಾಲ್ಸ್ಟಾಯ್. 'ಅವನ ತಲೆಯಿಂದ ಕಾಲಿನವರೆಗೆ ಬೇಕಾಗಿದ್ದು 6 ಅಡಿ ನೆಲ, ಅಷ್ಟೇ' ಎಂಬ ವಾಕ್ಯದೊಂದಿಗೆ ಕತೆ ಮುಕ್ತಾಯವಾಗುತ್ತದೆ. ಸುಖೀ ಜೀವನಕ್ಕೆ ಅಗತ್ಯವೇನು ಎನ್ನುವುದನ್ನು ತಿಳಿಸುವ ಈ ಕತೆಯನ್ನು  ಟಾಲ್ಸ್ಟಾಯ್ ಬರೆದ ಹೊತ್ತಲ್ಲಿ ಅವರು ತಮ್ಮ ಭೂಮಿಯನ್ನು ರೈತರಿಗೆ ಬಿಟ್ಟುಕೊಟ್ಟಿದ್ದರು!

ಮತ್ತೊಂದು ಕಥೆಯ  ಶೀರ್ಷಿಕೆ 'ಮನುಷ್ಯರು ಬದುಕುವುದು ಎಂದರೆ..'. ಚಮ್ಮಾರನಾದ ಸೈಮನ್ನನ ಬಳಿ ಆಜಾನುಬಾಹು ವ್ಯಕ್ತಿಯೊಬ್ಬ ಬಂದು ಬೂಟು ಹೊಲಿಯಲು ದುಬಾರಿ ಬೆಲೆಯ ಚರ್ಮವನ್ನು ನೀಡಿದ. ಸರಿಯಾಗಿ ಹೊಲಿಯದಿದ್ದರೆ ಸೆರೆಮನೆಗೆ ಹಾಕಿಸುವೆನೆಂದ.
ಸಹಾಯಕ ಮಿಖಾಯಲ್ ಬೂಟು ಹೊಲಿಯುವ ಬದಲು ಚಪ್ಪಲಿ ಹೊಲಿದಿದ್ದ. ಭಯ ಹಾಗೂ ಸಿಟ್ಟಿನಿಂದ ಮಿಖಾಯಲ್ನನ್ನು ಸೈಮನ್ನನು ಗದರುತ್ತಿರುವಾಗ  ಬಾಗಿಲು ತಟ್ಟಿದ ವ್ಯಕ್ತಿ ಆ ಆಜಾನುಬಾಹು ಯಜಮಾನ ತೀರಿಕೊಂಡಿದ್ದಾನೆಂದೂ, ಬೂಟಿನ ಬದಲಿಗೆ ಚಪ್ಪಲಿ ಮಾಡಿಕೊಡಬೇಕೆಂದೂ ಹೇಳಿದ.

ಮನುಷ್ಯನ ಅಹಮ್ಮಿಕೆ ಮತ್ತು ತಪ್ಪಿಸಿಕೊಳ್ಳಲಾಗಲಾರದ ಸಾವಿನ ಕುರಿತ ಅನನ್ಯ ನೋಟ ಈ ಕತೆಯಲ್ಲಿದೆ.

ಟಾಲ್ಸ್ಟಾಯ್ ಅವರ ಕೇಂದ್ರ ರಷ್ಯಾದ ಸಾಮಾನ್ಯ ಜನರು. ಬದುಕಿನ ಮೂಲಭೂತ ಸಂಗತಿಗಳ ಕುರಿತ ಶೋಧ ಮತ್ತು ಚಿಂತನೆ, ಮನುಷ್ಯನ ದೌರ್ಬಲ್ಯ ಮತ್ತು ಕೆಡುಕುಗಳು, ಅದರಿಂದ  ಕಲಿಯಬೇಕಾದ ಪಾಠಗಳು, ತುರ್ತುಪರಿಸ್ಥಿತಿಯಲ್ಲಿ ಅವನ ವರ್ತನೆಗಳು -ಇಂತಹ ಸಂಗತಿಗಳ ಮೇಲೆ ಅವರ ಗಮನಹರಿಯುತ್ತದೆ.

ವಿಜ್ಞಾನ ಮತ್ತು ಕಲೆ ಸಾಮಾನ್ಯರ ಸ್ವತ್ತು. ಅದು ಪಂಡಿತವರ್ಗದ ಪಾಲಾದರೆ ಅದು ಕಲೆಯೇ ಅಲ್ಲ, ವಿಜ್ಞಾನವೇ ಅಲ್ಲ ಎಂದ ಟಾಲ್ಸ್ಟಾಯ್ , ಸಹಜ ಮತ್ತು ಸಾಮಾನ್ಯ ಗುಣಗಳಿಂದಲೇ ಸಾಹಿತ್ಯವು ಜನಸಾಮಾನ್ಯರ ಹೃದಯಕ್ಕೆ ನಾಟಬೇಕೆಂದರು. ಅದನ್ನೇ ಪಾಲಿಸಿದರು.

ಕೀರ್ತಿ , ಸಿರಿವಂತಿಕೆ, ಪದವಿ, ಗೌರವ.. ಕಡೆಗೆ ಪ್ರಾಣ - ಇವೆಲ್ಲವನ್ನೂ ಜನಸಾಮಾನ್ಯರ ಸೇವೆಗೆ ಮುಡಿಪಾಗಿಡಲು ಮನಸ್ಸುಮಾಡಿದ ಟಾಲ್ಸ್ಟಾಯ್ ಮೌಢ್ಯದ ವಿರುದ್ಧ ಹೋರಾಡಿದರು. ದಬ್ಬಾಳಿಕೆಯನ್ನು ಪ್ರತಿಭಟಿಸಿದರು. ಪ್ರಭುತ್ವದ ದ್ವೇಷ ಕಟ್ಟಿಕೊಂಡರು.

ತಪ್ಪುಗಳನ್ನು ತಿದ್ದಿಕೊಳ್ಳುವ ಹಂಬಲ ಅವರನ್ನು ಪ್ರವಾದಿಯಾಗಿಸಿತು, ದಾರ್ಶನಿಕನನ್ನಾಗಿಸಿತು. ಭಾರತೀಯತೆಯ ನೆಲೆಯಲ್ಲಿ ಹೇಳುವುದಾದರೆ ಮಹರ್ಷಿಯಾಗಿಸಿತು.

ಎಲ್ಲರೂ ತಮ್ಮ ತಮ್ಮ ತಪ್ಪುಗಳ ವಿರುದ್ಧ ತಾವೇ ಹೋರಾಡುವಂತಾದರೆ ಅಲ್ಲಿ ಯುದ್ಧಕ್ಕೆ ಅವಕಾಶವೇ ಇರುವುದಿಲ್ಲ.
ಯಾರೊಂದಿಗೂ ದ್ವೇಷ ಬೇಡ , ಹಿಂಸೆಗೆ ಅವಕಾಶ ಕೊಡುವುದು ಬೇಡ. ಪ್ರೀತಿ ಮತ್ತು ಕ್ಷಮೆಯ ಅಳವಡಿಕೆಯೊಂದಿಗೆ ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ಕಂಡುಕೊಳ್ಳುವುದು ಉದಾತ್ತವಾದ ಮಾರ್ಗ ಎಂದರು ಟಾಲ್ಸ್ಟಾಯ್.  ಅವರದು ವಿಶ್ವಶಾಂತಿಯ, ವಿಶ್ವಮಾನವ ಪ್ರೇಮದ ಪರಿಕಲ್ಪನೆ. ಸತ್ಯಶೋಧನವನ್ನೇ ಬದಲಾವಣೆಯ ದಾರಿಯಾಗಿ ಕಂಡುಕೊಂಡವರವರು.

ಹೀಗೆ ನೈತಿಕ ನಿಲುವುಗಳನ್ನು ರೂಪಿಸಿಕೊಂಡ ರೂಢಿಸಿಕೊಂಡ ಟಾಲ್ಸ್ಟಾಯ್ ಅವರ ಪ್ರಭಾವ  ಜಗತ್ತಿನಾದ್ಯಂತ ಹಬ್ಬಿದೆ. ಮಹಾತ್ಮಾ ಗಾಂಧಿ, ಕುವೆಂಪು , ಮಾಸ್ತಿ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮುಂತಾದ ಗಣ್ಯರು ಇವರ ಪ್ರಭಾವಳಿಗೆ ಸಿಲುಕಿದವರು. ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಅವರೊಂದಿಗೆ ಪತ್ರವ್ಯವಹಾರ ನಡೆಸುತ್ತಿದ್ದರು. ಗ್ರಾಮ ಸ್ವರಾಜ್ಯದ ಪರಿಕಲ್ಪನೆ , ಅಹಿಂಸಾ ಮಾರ್ಗದ ಚಳುವಳಿ, ಆಶ್ರಮದ ಪರಿಕಲ್ಪನೆ, ಮದ್ಯ-ಮಾಂಸಾಹಾರ ವರ್ಜಿಸುವಿಕೆ ಮುಂತಾದ ಆಲೋಚನೆಗಳ ಹಿಂದೆ ಟಾಲ್ಸ್ಟಾಯ್ ಅವರ ತತ್ತ್ವ ಚಿಂತನೆಯ ಪ್ರಭಾವವಿದೆ.

ಕನ್ನಡದ ಪ್ರಜ್ಞೆಯಲ್ಲಿ ಟಾಲ್ಸ್ಟಾಯ್ ಸಾಕಷ್ಟು  ಹರಿದಿದ್ದಾರೆ. ಜಿ.ಪಿ.ರಾಜರತ್ನಂ , ಗೊರೂರು ರಾಮಸ್ವಾಮಿ ಅಯ್ಯಂಗಾರ್, ಸಿಂಪಿ ಲಿಂಗಣ್ಣ, ದೇ.ಜವರೇಗೌಡ ಮೊದಲಾಗಿ ಈಗಲೂ ಅನುವಾದವು  ಸೃಜನಶೀಲವಾಗಿ ನಡೆಯುತ್ತಿದೆ.  ಮತ್ತೆಮತ್ತೆ ಕನ್ನಡಕ್ಕೆ ಮರಳುತ್ತಿರುವ ಲೇಖಕರವರು. ನೈತಿಕ ಚರ್ಚೆಯಿಂದ, ಬದುಕನ್ನೇ ಪ್ರಯೋಗಕ್ಕೊಡ್ಡಿದ ಲೇಖಕರಾದ್ದರಿಂದ ಟಾಲ್ಸ್ಟಾಯ್ ನಮಗೆ ಅಗತ್ಯವೆನಿಸುತ್ತಾರೆ; ಅನುವಾದಕ್ಕೂ ಒಗ್ಗುತ್ತಾರೆ.

1910ರ ಅಕ್ಟೋಬರ್ 28ರಂದು ತನ್ನ 82ನೆ ವಯಸ್ಸಿನಲ್ಲಿ ಮನೆಬಿಟ್ಟು  ಬಂದು ಬುದ್ಧನಂತಾದರು  .  1910ನೇ ನವೆಂಬರ್ 10ರಂದು   ಟಾಲ್‌ಸ್ಟಾಯ್ ಕೊನೆಯುಸಿರೆಳೆದರು.  ಆದರೆ ಅವರು ಬದುಕಿದ ಪರಿಗೆ ಜಗತ್ತು ಬೆರಗಾಗಿದೆ. ಬರೆಯುವುದು ಸುಲಭ, ಆದರೆ ಬರೆದಂತೆ ಬದುಕಿ ತೋರಿಸಿದವರು ಟಾಲ್ಸ್ಟಾಯ್.  ಟಾಲ್ಸ್ಟಾಯರ ಮರುಓದಿಗೆ ಕಲಾತ್ಮಕತೆಯಷ್ಟೇ ಈ ಗುಣವೂ ಮುಖ್ಯವಾಗಿದೆ.

*


-ಕಾಜೂರು ಸತೀಶ್ 


Thursday, December 22, 2022

ಸಿದ್ದೇಶಿ ಸರ್ ಎಂಬ ಪ್ರೇರಕ ಶಕ್ತಿ

28-11-2014. ಜಿಲ್ಲಾ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಯ ಸ್ಪರ್ಧೆಗೆ ಹೋಗಿದ್ದೆ. ಅದು ನಡೆಯುತ್ತಿದ್ದ ಶೂನ್ಯ ವೇಳೆಯಲ್ಲಿ ಮುಂದೆ ಬಂದ ಯುವ ಉಪನ್ಯಾಸಕರೊಬ್ಬರು ಅಲ್ಲಿದ್ದವರನ್ನು ಉದ್ದೇಶಿಸಿ 'ರಂಗಣ್ಣನ ಕನಸಿನ ದಿನಗಳು ಗೊತ್ತಾ?' ಎಂದರು.

ಮೂಲೆಯಲ್ಲಿ ನಿಂತಿದ್ದ ನಾನು 'ಇದ್ಯಾರು ಸಾಹಿತ್ಯ ಕೃತಿಯ ಕುರಿತು ಹೇಳುತ್ತಿರುವರಲ್ಲಾ' (ಅದೂ ಮಡಿಕೇರಿಯಲ್ಲಿ!)  ಎಂದುಕೊಂಡೆ ಬೆರಗಿನಿಂದ.
*



ಎಂ.ಆರ್. ಶ್ರೀನಿವಾಸಮೂರ್ತಿಯವರ ರಂಗಣ್ಣನ ಕನಸಿನ ದಿನಗಳು ಕಾದಂಬರಿಯಲ್ಲಿ ನಾಯಕ ರಂಗಣ್ಣ ಶಿಕ್ಷಕನಾಗಿ, ಅಧಿಕಾರಿಯಾಗಿ ಕಂಡು ಅನುಭವಿಸಿದ ಶಿಕ್ಷಣ ವ್ಯವಸ್ಥೆಯ ಕುರಿತ ಅನನ್ಯ ಒಳನೋಟಗಳಿರುವ ಕಾದಂಬರಿ. ರಂಗಣ್ಣನ ಕಾಳಜಿ, ಸೇವಾತತ್ಪರತೆಯೇ ವ್ಯವಸ್ಥೆಯ ಒಳಗಿಳಿದು ವಸ್ತುಸ್ಥಿತಿಯನ್ನು ವಿವೇಚಿಸಲು ಪ್ರೇರಣೆ.
*
ಮತ್ತೆ ಮಡಿಕೇರಿಯ ಟೋಲ್ ಗೇಟಿನಲ್ಲಿ ಒಂದು ಬ್ಯಾಗು ನೇತುಹಾಕಿಕೊಂಡು ಬಸ್ ಹತ್ತುವ/ಇಳಿಯುವ ಅವರನ್ನು ದೂರದಿಂದ ಗಮನಿಸುತ್ತಿದ್ದೆ. ಆಗ ಅವರು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾಗಿದ್ದರು.

ಅದೇ ಸಮಯದಲ್ಲಿ ನಾನಿದ್ದ ಶಾಲೆಗೆ ಬಂದಿದ್ದರು. ನನ್ನ ಪರಿಚಯವೂ ಆಯಿತು.
*
ಎಂಟು ವರ್ಷಗಳು ಸಂದಿವೆ. ಆ ಕಾದಂಬರಿಯ ಕುರಿತು ಪ್ರಸ್ತಾಪಿಸಿದ ಸಿದ್ದೇಶಿ ಸರ್ ಚಿತ್ರದುರ್ಗಕ್ಕೆ ಹಿಂತಿರುಗಿದರೂ ನನಗೀಗ ರಂಗಣ್ಣನಂತೆ ಅಪಾರ ಕನಸುಗಳನ್ನು ಹೊತ್ತ ಜೀವದ ಹಾಗೆ ಕಾಣಿಸುತ್ತಿದ್ದಾರೆ.



*



ನಾವಿಬ್ಬರು ಭೇಟಿಯಾದಾಗಲೆಲ್ಲಾ ನಮ್ಮನಮ್ಮ ಕನಸುಗಳ ಬಗ್ಗೆ ಚರ್ಚಿಸಿದ್ದೇವೆ: ಚಿತ್ರದುರ್ಗದ ನಿಜಲಿಂಗಪ್ಪ ಸಮಾಧಿಯ ಬಳಿ, ದೊಡ್ಡಮಳ್ತೆಯ ಹೊನ್ನಮ್ಮನಕೆರೆ ಗುಡ್ಡದಲ್ಲಿ, ಡಯಟ್ ಗೋಡೆ-ಗೋಡೆಗಳಾಚೆ. ಪಠ್ಯಪುಸ್ತಕಗಳನ್ನು ಮೀರಿದ , ಸಿದ್ಧಮಾದರಿಗಳನ್ನು ಮುರಿಯುವ ಆಲೋಚನೆಗಳೇ ಅವು; ಜೀವಪರ ಚಿಂತನೆಗಳು.



ಅವರಿರುವಲ್ಲಿ ಧನಾತ್ಮಕ ಶಕ್ತಿ ಪ್ರವಹಿಸುತ್ತಿರುತ್ತದೆ. ಪರಿಣಾಮದ ಬಗ್ಗೆ ಆಲೋಚಿಸದೆ, ತಮ್ಮ ನಿಲುವುಗಳನ್ನು ನೇರವಾಗಿ ಹೇಳಿಬಿಡುವ ಜಾಯಮಾನ ಅವರದು. ಜಿಲ್ಲೆಯ ಹಲವು ಶಿಕ್ಷಕರು ಅವರ ಪ್ರೋತ್ಸಾಹದ ಮಾತಿಗೆ ದುಡಿಯುವ ಕಸುವನ್ನು ಹೆಚ್ಚಿಸಿಕೊಂಡಿದ್ದಾರೆ, ಹೊಸತನವನ್ನು ಮೈದುಂಬಿಕೊಂಡಿದ್ದಾರೆ.



ಮಾತನಾಡುವಾಗ ಕೇಳುಗ/ನೋಡುಗರನ್ನು ಗಮನದಲ್ಲಿಟ್ಟುಕೊಂಡು , ಅವರನ್ನು ಮಾತಿಗೆಳೆಯುತ್ತಾ ಮುಂದುವರಿಯುವ , ಹಲವು ವಾಸ್ತವ ಅನುಭವಗಳನ್ನು ಮಾತಿನ ಕೇಂದ್ರಕ್ಕೆ ಲಿಂಕ್ ಮಾಡುವ ಬಗೆ ಇವರದು.



(ಯಾವತ್ತೂ ನಿದ್ರಿಸುವ ನನ್ನ ಮೊಬೈಲಿನ ಬಗ್ಗೆ ಅವರಿಗೆ ಬೇಸರ/ಸಿಟ್ಟು. ಹಲವು ಭೇಟಿಗಳಿಂದ ತಪ್ಪಿಸಿಕೊಳ್ಳುವ ನನ್ನ ನಿಲುವುಗಳ ಬಗ್ಗೆಯೂ).



ಸಿದ್ದೇಶಿ ಸರ್ ಸುಮಾರು ಒಂದು ದಶಕವನ್ನು ಇಲ್ಲಿ ಬಾಳಿದ್ದಾರೆ. ಹಲವು ಶಿಕ್ಷಕ/ವಿದ್ಯಾರ್ಥಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.
ಈ ಅನುಭವಗಳು ಅವರನ್ನು ಆಯುಷ್ಯವಿಡೀ ಬೆಚ್ಚಗಿರಿಸುತ್ತವೆ!

*

ಕಾಜೂರು ಸತೀಶ್