ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Showing posts with label ಪುಸ್ತಕ ವಿಮರ್ಶೆ. Show all posts
Showing posts with label ಪುಸ್ತಕ ವಿಮರ್ಶೆ. Show all posts

Wednesday, April 12, 2017

ಎದೆಯೊಳಗಿಳಿವ ಪಿಸುಮಾತುಗಳು

ಈಗಾಗಲೇ ಕಣ್ಣೆವೆಯಲ್ಲಿನ ಚಿತ್ರಗಳು ಎಂಬ ಲೇಖನಗಳ ಗುಚ್ಛವನ್ನು ಹೊರತಂದು ಸಾಹಿತ್ಯ ವಲಯಕ್ಕೆ ಪರಿಚಿತರಾಗಿರುವ ಕೊಡಗು ಜಿಲ್ಲೆಯ ಕುಶಾಲನಗರದ ಸುನೀತಾ ಲೋಕೇಶ್ , ತಮ್ಮ ಲೋಕದ ಗ್ರಹಿಕೆಗಳನ್ನು ‘ಕಾವ್ಯ'ದ ಬಾಯಿ ತೊಡಿಸಿ ಪಿಸುನುಡಿಯುತ್ತಿದ್ದಾರೆ .


ಮೌನ ಸಂವಾದ ನಮಗೇಕೆ?
ನಮಗಾಗಿ ಪಿಸುಮಾತುಗಳಿಲ್ಲವೇ?

(ಮಂದಸ್ಮಿತಳಾಗಿ ಬಾ) ಎಂದು ಗೆಳತಿಯನ್ನು ಕರೆಯುವ ಹಾಗೆ ತಮ್ಮೊಳಗೆ ಹರಿಯುತ್ತಿರುವ ಪಿಸುಮಾತುಗಳನ್ನು ನಮಗೂ ಕೇಳಿಸುತ್ತಿದ್ದಾರೆ . ಅದು ಹಿಮನದಿಯ ಪಿಸುಮಾತು ಗಳಂತೆ ಕೇಳಿಸುತ್ತಿವೆ. ಆ ಹಿಮನದಿಗೆ ಒಮ್ಮೊಮ್ಮೆ ಘನೀಭವಿಸಿದ ಹಿಮದ ಕತ್ತಿಯಂಚು ಪ್ರಾಪ್ತವಾದರೆ, ಮತ್ತೊಮ್ಮೆ ಸ್ವಲ್ಪ _ ಸ್ವಲ್ಪವೇ ಕರಗಿ ತೊಟ್ಟಿಕ್ಕುವ , ತಣ್ಣಗೆ ಹರಿಯುವ ಸಂಭ್ರಮ. ಅದು ಅವರಿಂದ ಹಿತಮಿತದ ಇಂಪಾದ ,ಜೀವಪರ ಆಸ್ಥೆಯುಳ್ಳ ನುಡಿಗಳನ್ನಾಡಿಸುತ್ತದೆ.

ಮಬ್ಬು ಮುಸುಕುವುದು ನಿಜ
ಮೊಣಕೈಯ ತಿವಿದುಬಿಡು


ಇಳಿ ಸಮಯದ ಇರುಳಿಗೆ
ಹೆದರಿಸುವ ಎಡರುಗಲ್ಲುಗಳಿಲ್ಲ
ಕೆಕ್ಕರಿಸುವ ನೋಟ ಇಲ್ಲವೇ ಇಲ್ಲ

(ಮಂದಸ್ಮಿತಳಾಗಿ ಬಾ)

ಎರಡು ದಶಕಗಳಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ, ಪ್ರಾಮಾಣಿಕ ಸೇವೆಗೆ ಹೆಸರಾಗಿರುವ ಸುನೀತಾ ಲೋಕೇಶ್ ಅವರು, ಅಷ್ಟೇ ಪ್ರಾಮಾಣಿಕತೆಯಿಂದ ಕವಿತೆಗಳೊಂದಿಗೂ ಬಾಳುತ್ತಿರುವವರು. ಇಷ್ಟಾಗಿಯೂ ಕವಿತೆಗಳಿಂದ ಏನೇನನ್ನೋ ಸಾಧಿಸಬೇಕೆಂಬ, ಖ್ಯಾತಿ ಪಡೆಯಬೇಕೆಂಬ ಹಂಬಲ ಅವರಿಗೆ ಇದ್ದಂತಿಲ್ಲ . ಅದೊಂದು ಬಿಡುಗಡೆ ಅಷ್ಟೆ. ಕವಿತೆಯನ್ನು ಹೆರುವಾಗಲೆಲ್ಲ ಅವರು ಬಾಲ್ಯಕ್ಕೆ ಹಿಂತಿರುಗುತ್ತಾರೆ. ಆ ಮಗುತನ ಅವರನ್ನು ಬರೆಸುತ್ತದೆ. ಇರುವ ಮತ್ತು ಆಗಿಹೋಗಿರುವ ಕಾಲಗಳ ಜಿಜ್ಞಾಸೆ ಅವರ ಬಹುತೇಕ ಕವಿತೆಗಳಲ್ಲಿ ಕಾಣಸಿಗುತ್ತವೆ:

ಈಗ
ನಾಲ್ಕು ಬಾಹುಗಳ ಗಾಜ
ಪಂಜರದೊಳಗಿನ ಕಾಲವಾದರೂ
ಈ ಬಂಧನದಲೊಂದು ಚಂದವಿದೆ

(ಬಂಧಿ).


ಸುನೀತಾ ಲೋಕೇಶ್ ಅವರ ಕಾವ್ಯದ ಕೇಂದ್ರವನ್ನು ಗುರುತಿಸಬೇಕಾದದ್ದು ಇಕೊ - ಫೆಮಿನಿಸಂ ನೆಲೆಗಳಿಂದ. ಹೆಣ್ತನ ಮತ್ತು ಅದರ ಪಡಿಯಚ್ಚಿನಂತಿರುವ ನಿಸರ್ಗವನ್ನು ಕವಿತೆಗಳಲ್ಲಿ ತುಂಬಿಡುವುದು ಎಲ್ಲ ಕಾಲಕ್ಕೂ ಒಂದು ಸಾಮಾಜಿಕ , ಸಾಂಸ್ಕೃತಿಕ ಹೊಣೆಗಾರಿಕೆಯೇ ಆಗಿಬಿಡುತ್ತದೆ. ಓರ್ವ ಮಹಿಳೆ ತನ್ನ ಸಂಕಟಗಳನ್ನು , ಸಂಭ್ರಮಗಳನ್ನು ಅಭಿವ್ಯಕ್ತಿಸುವಾಗ ಅದಕ್ಕೆ ಲೋಕಾಂತದ ಆಯಾಮಗಳು ಸಹಜವಾಗಿಯೇ ಪ್ರಾಪ್ತವಾಗುತ್ತವೆ. ಈ ಸಾಲುಗಳು ಅದನ್ನು ಸಾಕ್ಷೀಕರಿಸುತ್ತವೆ:

ಪ್ರಕೃತಿಯೊಳಗೆ ಲೀನವಾದ ಮನ
ಪ್ರಫುಲ್ಲತೆಯಲಿ ತೇಲಲಿ

(ಆ ಮುಂಜಾನೆ)

ಮನದೊಳಗೆ ನದಿಯೊಂದು ಹರಿಯುತಾ ಕೇಳುತಿದೆ
ಬೊಗಸೆ ನೀರಿನೊಡನೆ ಚೆಲ್ಲಾಟವೇಕೆ?

(ಸಂಜೆಯೊಡನೆ ಪ್ರೇಮವೇಕೆ?)

ಬದುಕನಾವರಿಸಿದ ಗಿಡಮರಗಳೆಲ್ಲವೂ
ಬಾಡುತ್ತಿವೆ ಕಣ್ಣೀರಿನಲ್ಲಿ ನೆನೆಸಿದರೂ

(ಪರಾಧೀನ ಕಾಲ)

ಬಹುತೇಕ ಕವಿತೆಗಳಲ್ಲಿ ವಿಷಾದದ ಎಳೆಗಳು ಮಿಳಿತಗೊಂಡಿದ್ದರೂ , ನಮ್ರವಾದ ಪ್ರಾರ್ಥನೆ ಮತ್ತು ಮಹತ್ತಾದ ಆಶಯವೊಂದು ಮೈಪಡೆದು ಅದು ಕವಿತೆಗಳನ್ನು ಮಾನವೀಯಗೊಳಿಸುತ್ತದೆ:

ಉರಿದು ಹೊತ್ತೊಯ್ಯಿರಿ
ಮನದ ಮಲಿನಗಳನೂ

(ಪುಟ್ಟ ಮಣ್ಣ ಹಣತೆಗಳೇ)

ನನ್ನ ಅಳುವಿಗೆ ತಡೆಗೋಡೆಯಾಗಿ
ಕಣ್ಣ ವಹಿಯೊಳಗಿರಲಿ
ಭದ್ರವಾಗಿ

(ಆ ಹನಿ)

ಚುಚ್ಚು ನುಡಿ ದಾಟಿಗೆ
ಕಾಳ ನರ್ತನ ಮಾಡದಿರಲಿ ನಾಲಗೆ ...
ದ್ವೇಷಾಗ್ನಿಯನ್ನು ಮೌನದಲಿ ನಂದಿಸು

(ಮೌನಿಯಾಗು ಮನವೆ).

ಮೌಲ್ಯಗಳ ಪಲ್ಲಟ ಇಲ್ಲಿನ ಸುಮಾರು ಕವಿತೆಗಳ ಸರಕು. ಬಂಧಿ ಕವಿತೆಯು ಹೆಣ್ಣಿನ ವ್ಯಕ್ತಿ ಸ್ವಾತಂತ್ರ್ಯವೆಂಬ ಹಿಮದ ಜಾರುವಿಕೆಯು ಭೂತಕ್ಕಿಂತ ವರ್ತಮಾನದಲ್ಲಿಯೇ ಸುಂದರವಾಗಿದೆ ಎಂದು ವ್ಯಂಗ್ಯಾತ್ಮಕವಾಗಿ ಒಪ್ಪಿಕೊಳ್ಳುತ್ತದೆ:

ಕೆಂಪು ಹರಳಿನೋಲೆ
ಎರಡೆಳೆಯ ದೊಡ್ಡ ಮಾಂಗಲ್ಯ
ಝರಿ ಬಾರ್ಡರಿನ ರೇಷ್ಮೆ ಸೀರೆ
ಕುಂಕುಮ ಹಣೆಗೇರಿ
ಗಣಕ ಯಂತ್ರದ ಕೈಚಳಕದಿ
ಬಯಕೆಗಳೆಲ್ಲವೂ ಈಡೇರಿದೆ


ಹಿಮನದಿಯ ಪಿಸುಮಾತುಗಳಲ್ಲಿ ಗಾಢವಾಗಿ ತಟ್ಟುವುದು ಸಂಜೆಯೊಡನೆ ಪ್ರೇಮವೇಕೆ?, ಪುಟ್ಟ ಮಣ್ಣ ಹಣತೆಗಳೇ, ಪ್ರಣಯ ಮಳೆ, ಪರಾಧೀನ ಕಾಲ, ಆ ಹನಿ, ಮನಸಿನ ಹೊಸ್ತಿಲಲೆ, ನನ್ನೂರಿನ ಬಸ್ಸು, ಒಣಮರದೊಡತಿ ಮುಂತಾದವು. ಇವೆಲ್ಲಾ _ ಕವಯಿತ್ರಿಗೆ ಕವಿತೆಯ ಕುರಿತು ಇರುವ ಆಳವಾದ ಅರಿವನ್ನು ಪ್ರತಿನಿಧಿಸುತ್ತವೆ. ಮೃದುವಾದ ಮಾತು , ಹದವಾದ ಭಾಷೆ, ಭಿನ್ನವಾದ ಇಮೇಜುಗಳು ಅವರ ಕಾವ್ಯಪ್ರಜ್ಞೆಯನ್ನು ಸಾರುತ್ತವೆ. ನನ್ನೂರಿನ ಬಸ್ಸು ಕವಿತೆಯ ಈ ಸಾಲುಗಳನ್ನೇ ಗಮನಿಸಿ :

ಬಸ್ಸು ದೂರ ಸಾಗಿದೆ
ಅದರ ಬಣ್ಣ ಮಾಸುತ್ತಿದೆಯೇ ?
ಮತ್ತೀಗ ಕಾಣುತ್ತಿರುವುದು ಮರವೊಂದೆ
ಕಹಿಸತ್ಯ ಬಚ್ಚಿಟ್ಟ ಮರ
ನಿದ್ದೆಗೆ ಜಾರಿದೆ




ಸುನೀತಾ ಇಲ್ಲಿ ಕಟ್ಟಿಕೊಡುವ ಹೆಣ್ಣಿನ ಜಗತ್ತು ಯಾತನಾಮಯವಾದದ್ದು. ಕೌಟುಂಬಿಕ ಹಿಂಸೆ , ಅತ್ಯಾಚಾರದ ಕರಾಳತೆಯನ್ನು ಕವಿತೆಗಳಲ್ಲಿ ತುಂಬುತ್ತಲೇ
ಗಾಳಿ ನೀರು ಇಹದಷ್ಟು ಅನಿವಾರ್ಯ / ಈ ನನ್ನ ಸಖಿಯರು ಎನ್ನುತ್ತಾರೆ . ಆದರೆ, ಜ್ಞಾನ ಪರಂಪರೆಯ ಮಹಿಳಾ ಕಾವ್ಯದ ನೆಲೆಗಳಿಗಿಂತ ಭಿನ್ನವಾಗಿ ತಮ್ಮ ಕಾವ್ಯದ ಅಸ್ಮಿತೆಯನ್ನು ಕಂಡುಕೊಳ್ಳುವ ಮಾದರಿಗಳು ಇಲ್ಲಿ ಕಾಣಿಸುವುದಿಲ್ಲ. ಸಮಾಜಮುಖಿ ನಿಲುವುಗಳು ಕಾವ್ಯದಲ್ಲಿ ಇಣುಕುವಾಗಲೆಲ್ಲ ಅವುಗಳಿಗೆ ಬಂಡಾಯದ ಲೇಪನವಿದ್ದರೂ, ತೆಳುಪದರದ ಕಾವ್ಯಾನುಭವವನ್ನು ಪಡೆಯುವ ಅಪಾಯವನ್ನೂ ಎದುರಿಸುತ್ತವೆ(ನನ್ನ ಸಖಿಯರು, ಅಶ್ರುತರ್ಪಣ , ಅಕ್ಷಯ ಪಾತ್ರೆ, ಪೌರುಷ, ಚಿಂತೆಯ ಗೆರೆಗಳ ಮೇಲೆ)


ಭಿನ್ನ ಅಭಿರುಚಿಯ ಕೊಡಗಿನಲ್ಲಿ ಸಾಹಿತ್ಯ ಕೃತಿಯೊಂದು ಬಿಡುಗಡೆಗೆ ಸಿದ್ಧವಾಗಿದೆಯೆಂದರೆ ಅದೊಂದು ವಿಶೇಷವಾದ ಸಂಗತಿ; ಸಂಭ್ರಮ. ಅದರಲ್ಲೂ ಮಹಿಳಾ ಕಾವ್ಯದ ಧಾರೆ ಇಲ್ಲಿ ಭಿನ್ನವಾಗಿ ಹರಿಯುತ್ತಿರುವುದು ಸಂತೋಷದ ವಿಚಾರ. ಸುನೀತಾ ಅವರ ಈ ಕೃತಿ ಹೊರಬರುತ್ತಿರುವುದು ನಮಗೆಲ್ಲಾ ಸಂಭ್ರಮಿಸುವ ಸಂಗತಿಯೇ ಸರಿ.

ತಮ್ಮ ಮಿತಿಗಳನ್ನು ಮೀರುವ, ನಿರ್ವಹಿಸುವ ಸಾಮರ್ಥ್ಯ ಸುನೀತಾ ಲೋಕೇಶ್ ಅವರ ಕವಿತೆಗಳಿಗೆ ಇದ್ದೇ ಇದೆ . ಅದು _ ಮಾತಿನ ಮಿತವ್ಯಯದಿಂದ, ಪ್ರತೀಕಗಳಿಂದ ಗಟ್ಟಿಗೊಂಡು, ಆಶಯದಲ್ಲಿ ಸಾಧಿಸಿದ ಪ್ರಬುದ್ಧತೆಯನ್ನು ಅಭಿವ್ಯಕ್ತಿಯಲ್ಲೂ ಸಾಧಿಸಿದಾಗ ಹೊಸನೆಲೆಗಳನ್ನು ಮುಟ್ಟುತ್ತದೆ. ಅವರ ಕಾವ್ಯ ಜೀವನವು ಸದಾ ಬೆಳಗುತ್ತಿರಲೆಂದು ಅತ್ಯಂತ ಕಿರಿಯವನಾಗಿ ಪ್ರೀತಿಯಿಂದ ಆಶಿಸುತ್ತೇನೆ.
*

ಕಾಜೂರು ಸತೀಶ್
sathishkajooru@gmail.com

Thursday, March 16, 2017

ಮನಸು ಅಭಿಸಾರಿಕೆ ಮತ್ತು ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ

ನೂರಾ ಐದು ವರ್ಷಗಳ ಹಿಂದೆ ಜನಿಸಿದ ಅಪ್ರತಿಮ ಕತೆಗಾರ್ತಿ ಕೊಡಗಿನ ಗೌರಮ್ಮ. ತಮ್ಮ ಇಪ್ಪತ್ತೇಳನೆ ವರ್ಷಕ್ಕೇ ದಾರುಣವಾಗಿ ತೀರಿಕೊಂಡ ಗೌರಮ್ಮ ಅಷ್ಟರಲ್ಲಾಗಲೇ ತಮ್ಮ ಕಥಾ ಪ್ರತಿಭೆಯನ್ನು ನಾಡಿನ ಉದ್ದಗಲಕ್ಕೂ ಬೆಳಗಿದವರು. ಚಿರಸ್ಥಾಯಿಯಾಗುಳಿವ ಅವರ ಕಂಬನಿ(1939), ಮತ್ತು ಚಿಗುರು(1942) ಅದಕ್ಕೆ ಸಾಕ್ಷಿ.

*

ಈ ಸಾಲಿನ _ಕೊಡಗಿನ ಗೌರಮ್ಮ ದತ್ತಿ ನಿಧಿ_ ಪ್ರಶಸ್ತಿಗೆ ಹನ್ನೊಂದು ಕೃತಿಗಳು ಸ್ಪರ್ಧಾಕಣದಲ್ಲಿದ್ದವು. ಗಂಭೀರ ಬರವಣಿಗೆಗಳಿಂದ ಸದಾ ದೂರ ಉಳಿದ ಕೊಡಗು ಈ ಬಾರಿ ಇಷ್ಟು ಪ್ರಮಾಣದಲ್ಲಿ ಕೃತಿಗಳನ್ನು ಸ್ಪರ್ಧೆಗಿಳಿಸಿದೆಯಲ್ಲಾ ಎಂಬ ಸಂತೋಷ ಉಕ್ಕಿಸಿತು. ಅದು ಒಳ್ಳೆಯ ಬೆಳವಣಿಗೆಯೇ ಸರಿ.
*

ಯಾವತ್ತೂ ಒಂದು ಗಟ್ಟಿ ಕೃತಿ ನೂರ್ಕಾಲ ಬಾಳುತ್ತದೆ. ಯಾವ ಪೂರ್ವಗ್ರಹದ, ಭಟ್ಟಂಗಿಗಳ ಬೆಂಬಲವಿಲ್ಲದಿದ್ದರೂ ಅದು ಬೆಳೆಯುತ್ತದೆ. ಬರೆಯುವವರೆಲ್ಲರೂ ಪುಸ್ತಕ ಪ್ರಕಟಿಸುತ್ತಿರುವ ಇಂದಿನ ಕಾಲದಲ್ಲಿ ಉಳಿಯುವುದು ಮತ್ತು ಉಳಿಯಬೇಕಾದದ್ದು ಉತ್ತಮ ಕೃತಿಗಳಷ್ಟೆ.
*

ಮಹಿಳಾ ಸಾಹಿತ್ಯದ ಸಶಕ್ತ ಸಂವೇದನೆಗಳು ಕನ್ನಡ ಸಾಹಿತ್ಯದಲ್ಲಿ ಅಕ್ಕಮಹಾದೇವಿಗಿಂತಲೂ ಮೊದಲೇ ಗುರುತಿಸಬಹುದು. ಜೀವನಾನುಭವದ ಜನಪದ ಸಾಹಿತ್ಯ ಈ ನಿಟ್ಟಿನಲ್ಲಿ ಗಮನಾರ್ಹವಾದುದು. ಸ್ವಾತಂತ್ರ್ಯಾ ಪೂರ್ವದಲ್ಲೇ ಕನ್ನಡದ ಆರ್. ಕಲ್ಯಾಣಮ್ಮ, ನಂಜನಗೂಡು ತಿರುಮಲಾಂಬ, ಕೊಡಗಿನ ಗೌರಮ್ಮ ಮುಂತಾದವರು ಸಾಧಿಸಿದ ಸಿದ್ಧಿ ನಿಜಕ್ಕೂ ಅಭೂತಪೂರ್ವ.

*

ಸ್ಪರ್ಧೆಗೆ ಬಂದಿದ್ದ ಕೃತಿಗಳ ಒಳಪ್ರವೇಶ ಮಾಡಿದಂತೆಲ್ಲಾ ನಿರಾಸೆಯೇ ಆವರಿಸತೊಡಗಿತು. ಬರಹದ ಬಾಲಿಶತನ ಇನ್ನೂ ಯಾಕೆ ಈ ನೆಲದಲ್ಲಿ ಮನೆಮಾಡಿದೆ ಎಂಬ ಕೊರಗು ಕಾಡಿತು. ಆದರೆ ಅಷ್ಟೂ ಕೊರಗುಗಳನ್ನು ಸುಳ್ಳುಮಾಡುವಂತೆ ಶಾಂತಿ ಕೆ ಅಪ್ಪಣ್ಣ ಅವರ ಮನಸು ಅಭಿಸಾರಿಕೆ ಓದಿಸಿಕೊಂಡಿತು. ಕೊಡಗಿನ ಗೌರಮ್ಮ ಕಟ್ಟಿಕೊಟ್ಟ ವಿಶಿಷ್ಟ ಕಥಾಲೋಕದ ಹರಿವು ಈಗ ಈ ಕಾಲಘಟ್ಟದಲ್ಲಿ ಶಾಂತಿ ಅವರಿಂದ ಮುಂದುವರಿಯುತ್ತಿದೆ ಎನ್ನಲು ಹರ್ಷವಾಗುತ್ತಿದೆ.


ಶಾಂತಿ ಅವರು ಮೊದಲ ಸಂಕಲನದಲ್ಲೇ ತೋರಿದ ಸಾಧನೆ ನಿಜಕ್ಕೂ ಈ ನೆಲಕ್ಕೆ ಹೆಮ್ಮೆ ತರುವ ಸಂಗತಿ. ಏಕೆಂದರೆ, ಈ ಹೊತ್ತಿನಲ್ಲಿ ನಮ್ಮ ಕಥಾ ಸಂಸ್ಕೃತಿಯ/ ಪರಂಪರೆಯ ಎಳೆಯನ್ನಿರಿಸಿಕೊಂಡೇ ಹೊಸ ಹಾದಿಗೆ ಜಿಗಿಯುವುದು ಮಹತ್ತಾದ ಸವಾಲು. ಅದು ಅವರಿಗೆ ಅಷ್ಟು ಸಹಜವಾಗಿ, ಸಲೀಸಾಗಿ ಸಿದ್ಧಿಸಿದೆ. ಹೀಗಾಗಿಯೇ ಶ್ರೀಮತಿ ಶಾಂತಿ ಕೆ ಅಪ್ಪಣ್ಣ ಅವರ ಮನಸು ಅಭಿಸಾರಿಕೆ ಕಥಾಸಂಕಲನವನ್ನು 2016-17ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಮಾಡಿದ್ದು. ಈ ಕಥೆಗಾರ್ತಿ ಕ್ರಮಿಸುವ ನಾಳಿನ ಹಾದಿಗಳು ನಿಜಕ್ಕೂ ಕುತೂಹಲಕಾರಿ.


ಸ್ಪರ್ಧೆಗೆ ಬಂದಿದ್ದ- ಒಂದು ಲಲಿತ ಪ್ರಬಂಧ, ಒಂದು ನಾಟಕ, ನಾಲ್ಕು ಸಣ್ಣ ಕತೆ, ಎರಡು ಕಾದಂಬರಿ, ಒಂದು ಸಂಶೋಧನಾ ಕೃತಿ, ಒಂದು ಹಾಸ್ಯ ಬರಹ, ಒಂದು ವೈಚಾರಿಕ ಲೇಖನ- ಪುಸ್ತಕಗಳ ಪೈಕಿ ಸಂಗೀತಾ ರವಿರಾಜ್ ಅವರ ಕಪ್ಪು ಹುಡುಗಿ(ಪ್ರಬಂಧ), ಮುಲ್ಲೇಂಗಡ ರೇವತಿ ಪೂವಯ್ಯ ಅವರ ಕೊಡವ ಜನಪದ ನೃತ್ಯಗಳು ಒಂದು ಅಧ್ಯಯನ , ಹಾನಗಲ್ಲು ಜಲಾ ಕಾಳಪ್ಪ ಅವರ ಕ್ಷಮಯಾಧರಿತ್ರಿ(ಕಾದಂಬರಿ) ಗಮನ ಸೆಳೆದವು; ಭರವಸೆ ಮೂಡಿಸಿದವು. ಇಲ್ಲಿನ ಸಾಹಿತ್ಯದ ಜೀವಂತಿಕೆಗೆ ಸಾಕ್ಷಿ ಅವು.
*

**ಶಾಂತಿ ಅಪ್ಪಣ್ಣ ಅವರ ಕತೆಗಳು ಮತ್ತು ಮನುಷ್ಯ ಸ್ವಭಾವದ ನಿಗೂಢ ತಂತುಗಳ ಅನಾವರಣ**

ಒಂದು ಐಡಿಯಾಲಜಿಯನ್ನು ಹೊರಗೆಡುವುದಕ್ಕೆ ಕತೆಯನ್ನು ಮಾಧ್ಯಮವಾಗಿಸುವುದು ಸೃಜನಶೀಲ ನಿರ್ಬಂಧ. ಕತೆ ಹೇಳುತ್ತಾ ಕತೆಗಾರ ಬದುಕಿನ ಹೊಸ ಸಾಧ್ಯತೆಗಳನ್ನು ಮುಟ್ಟುತ್ತಾನೆ. ಪಾತ್ರಗಳಿಗೆ ಸೃಷ್ಟಿಶೀಲ ಗುಣಗಳು ಪ್ರಾಪ್ತಿಯಾಗುತ್ತಾ ಕತೆಗಾರ ಬೆಳೆಯುತ್ತಾನೆ. ಯಾವಾಗ ಕತೆಹೇಳುವ ಧಾವಂತ ಇರುವುದಿಲ್ಲವೋ ಮತ್ತು ಅದೊಂದು ತಾತ್ವಿಕ ಹುಡುಕಾಟವಾಗುತ್ತದೋ, ಆಗ ಕತೆ ಗೆಲ್ಲುತ್ತದೆ. ಶಾಂತಿ ಅಪ್ಪಣ್ಣ ಅವರ ಕತೆಗಳು ಗೆಲ್ಲುವುದೂ ಈ ಕಾರಣದಿಂದಾಗಿಯೇ.

ಹಾಗೆ ನೋಡಿದರೆ ಕೊಡಗಿನ ಗೌರಮ್ಮ ಅವರಿಗೂ ಶಾಂತಿ ಅವರಿಗೂ ತಾತ್ವಿಕ ಸಾಮ್ಯಗಳಿವೆ. ಈ ಇಬ್ಬರೂ ಬದಲಾಗುತ್ತಿರುವ ಸಮಾಜದ ಸಂಬಂಧಗಳ ಸ್ಥಿತ್ಯಂತರಗಳ ಕುರಿತು ಹೇಳುತ್ತಾರೆ. ಇಂತಹ ಪಲ್ಲಟಗಳನ್ನು ತಲ್ಲಣಗೊಂಡು ಹೇಳುವುದಿಲ್ಲ. ತೆರೆದ ಕಣ್ಣುಗಳಿಂದ ನೋಡುತ್ತಾರೆ. ತೀರ್ಪುಗಾರಿಕೆ ಕೊಡುವುದಿಲ್ಲ; ವಕಾಲತ್ತು ವಹಿಸುವುದಿಲ್ಲ. ಇಬ್ಬರೂ ಬಳಸುವುದು ಆಡು ಭಾಷೆ ಮತ್ತು ಗಂಭೀರ ಭಾಷೆಗಳ ನಡುವಿನ ಭಾಷೆ. (ಶಾಂತಿಯವರು ಪರಶುವಿನ ದೇವರು, ಪರಿಹಾರ ಕತೆಗಳಲ್ಲಿ ಹಾಸನ-ಮೈಸೂರು ಜಿಲ್ಲೆಯ ಹಳ್ಳಿಯ ಭಾಷೆಯನ್ನು ಬಳಸುವಲ್ಲಿಯೂ ಯಶ ಕಾಣುತ್ತಾರೆ).ಇಬ್ಬರದೂ 'ಸ್ವ'ವನ್ನು ವರ್ಜಿಸುವ ಕಥಾಭಿವ್ಯಕ್ತಿ. ಅಥವಾ ತಮ್ಮೊಳಗು ಮತ್ತು ಬದುಕಿನ ಬಹುತ್ವಗಳನ್ನು ಬೇರೆಯಾಗಿಸದೆ ನೋಡುವ ಕ್ರಮ.

ಶಾಂತಿ ಅಪ್ಪಣ್ಣ ಅವರ ದಾರಿ ಕತೆಯಲ್ಲಿ ಬರುವ ಮದುವೆಯಾದ ತಿಂಗಳಲ್ಲೇ ಗಂಡ ತೀರಿಕೊಂಡು ಮೈದುನನಿಂದ ಲೈಂಗಿಕ ಹಿಂಸೆಗೆ ಒಳಗಾಗುವ ಚಂದ್ರಾಮಳನ್ನು ಸಮಾಜ ಶೋಷಿಸತೊಡಗಿದಾಗ ಕಾಸೀಂ ಸಾಬಿಯನ್ನು ಮದುವೆಯಾಗಿ ಚಾಂದ್ಬೀ ಆದದ್ದು, ಗೌರಮ್ಮ ಅವರ ಅಪರಾಧಿಯರು ಕತೆಯ ಪಾರ್ವತಿ ತನ್ನ ಜಾತಿಯಿಂದ ಬಹಿಷ್ಕರಿಸಲ್ಪಟ್ಟಾಗ ರಜಿಯಾ ಆಗಿ ಉನ್ನೀಸನನ್ನು ಮದುವೆಯಾಗುವುದು ಇದಕ್ಕೊಂದು ಉದಾಹರಣೆ.

ಶಾಂತಿಯವರ ಕತೆಗಳ ಅಭಿವ್ಯಕ್ತಿಯ ದಾರಿ ಕೊಂಚ ಭಿನ್ನ. ಕೆಲವು ಕತೆಗಳು ಅವಾಸ್ತವದ ಬೆನ್ನುಬಿದ್ದು ನಿರೂಪಣೆಗೊಂಡರೆ, ಗೌರಮ್ಮ ಅವರದ್ದು ಪಕ್ಕಾ ಅನುಭವನಿಷ್ಠ, ನೇರ- ನಿರಾಡಂಬರ ಶೈಲಿಯದ್ದು. ಆದರೂ,ಗೌರಮ್ಮ ಅವರು ತಮ್ಮ ನಿಜಜೀವನದ ಪರಿಸರದ ಸೂಚನೆಯನ್ನು ನೀಡದೆ ರಾಷ್ಟ್ರೀಯವಾದದ ನೆಲೆಯಲ್ಲಿ ಕತೆ ಕಟ್ಟುತ್ತಾರೆ.

ಮನಸು ಅಭಿಸಾರಿಕೆಯ ಒಟ್ಟೂ ಸ್ವರೂಪವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ- ಅವು ಮನೋವಿಶ್ಲೇಷಣಾತ್ಮಕ ಕತೆಗಳು. ಸಂಕೇತನಿಷ್ಠ, ಫ್ಲ್ಯಾಷ್ ಬ್ಯಾಕ್ ತಂತ್ರ, ಉಪಕಥಾ ಮಾರ್ಗಗಳಲ್ಲಿ ಸಾಗಿ ಓದುಗರನ್ನು ತಡೆದು ನಿಲ್ಲಿಸಿ ಓದಿಸುತ್ತವೆ. ಪಾತ್ರಗಳೇ ನಿರೂಪಕರನ್ನೂ, ಓದುಗರನ್ನೂ ಏಕಕಾಲದಲ್ಲಿ ಬೆಳೆಸುವ ಪರಿ ಮನಸು ಅಭಿಸಾರಿಕೆಯ ಹೆಚ್ಚುಗಾರಿಕೆ.


ಶಾಂತಿ ಅಪ್ಪಣ್ಣ ಅವರ ಕತೆಗಳಲ್ಲಿ ಕಾಲ ಪ್ರಧಾನ ಪಾತ್ರ ವಹಿಸುತ್ತದೆ. ಕ್ಷಣಕ್ಷಣಕ್ಕೂ ಮಿಂಚಿ ಮರೆಯಾಗುವ 'ಅತ್ಯಾಧುನಿಕ'ವಾದ ಈ ಕಾಲದ ವಿಶ್ಲೇಷಣೆಯಿದೆ. ಎಲ್ಲ ಪಾತ್ರಗಳಿಗೂ ಆ ಕ್ಷಣದ ಗಾಢತೆಯಷ್ಟೆ. ಬಹುತೇಕ ಕತೆಗಳಲ್ಲಿ ಕಾಣಬರುವ ಪ್ರೇಮದ ವ್ಯಾಖ್ಯಾನವೂ ಆಧುನಿಕ ಪರಿಭಾಷೆಯಲ್ಲಿ ಕ್ಷಣಿಕತೆಯಿಂದ ಕೂಡಿದ್ದು. ಮುಖವಾಡ, ಸ್ವಾರ್ಥ, ಕಾಮ ಅವುಗಳನ್ನು ಆಕ್ರಮಿಸುತ್ತವೆ. ಉದಾಹರಣೆಗೆ:
_ಹಳೆಯ ಇಮೇಜುಗಳು ತಂತಾನೇ delete ಆಗುತ್ತಾ refresh ಆಗ್ತಿರಬೇಕೇನೊ ಅನ್ನಿಸಿ ಮಜ_(ನೆರಳು)

_ಕಾಲದ ನದಿಯ ಹರಿವು ನೋಡುತ್ತ ಅವನು_(ಬಿಂಬ)

_We just have to love the moment and move on_(ಪಾಸಿಂಗ್ ಕ್ಲೌಡ್ಸ್)

_ನಾವು ಸತ್ಯವನ್ನು ಶೋಧಿಸಬಾರದು ಆ ಕ್ಷಣವನ್ನಷ್ಟೆ ನಂಬಬೇಕು_(ಪಯಣ)

ಬಾಹುಗಳು ಕತೆಯಲ್ಲಿ ನಿರೂಪಕಿ ಹಾಸಿಗೆಯಿಂದ ಏಳುವಾಗ ಎದುರಾಗುವ ವಿಚಿತ್ರ ಜೀವಿ ಪ್ರಭುತ್ವದ ಶೋಷಣೆ, ಸರಿ-ತಪ್ಪುಗಳನ್ನು ಸಮಾನಾರ್ಥಕಗಳೆಂದುಕೊಳ್ಳುವ ನವೀನ ಪರಿಭಾಷೆಯನ್ನು ಹೇಳುತ್ತದೆ. ಪ್ರಸಿದ್ಧ ಕಾದಂಬರಿಕಾರ ಕಾಫ್ಕಾನ ಮೆಟಮಾರ್ಫಸಿಸ್ನಲ್ಲಿ ಕಥಾ ನಾಯಕ ಗ್ರಿಗರ್ ಸಂಸ ತಾನೇ ಹುಳುವಾಗಿ ರೂಪಾಂತರ ಹೊಂದುತ್ತಾನೆ. ಅದೇ ಬಗೆಯ ಮ್ಯಾನಿಫೆಸ್ಟೊ ಉಳ್ಳ ಅಸ್ತಿತ್ವವಾದಿ ಆಲೋಚನೆಗಳೂ ಶಾಂತಿಯವರ ಕತೆಗಳಲ್ಲಿ ಗುರುತಿಸಬಹುದು(ಆದರೂ ಆ ವಿಚಿತ್ರ ಜೀವಿಯ ಉಪದೇಶಾತ್ಮಕ ನುಡಿಗಳು ಕ್ಲೀಷೆಯಂತೆ ಕಾಣುತ್ತವೆ). ಪಾಸಿಂಗ್ ಕ್ಲೌಡ್ಸ್, ಬಿಂಬ, ಪ್ರಶ್ನೆ ಕತೆಗಳಲ್ಲೂ ಅಸ್ತಿತ್ವವಾದದ ಎಳೆಗಳನ್ನು ಗುರುತಿಸಬಹುದು. ಪ್ರಶ್ನೆ ಕತೆಯಲ್ಲಿ ಅತ್ತೆಯು ಗುಲಗಂಜಿ ಬೆರೆಸಿ ತನ್ನ ಗಂಡನನ್ನು ಕೊಲ್ಲುತ್ತಿರುವ ಸಂಗತಿಯನ್ನು ಹೀಗೆ ಹೇಳುತ್ತಾರೆ: ಅವನಿಗೆ ಊಟವಿಟ್ಟು ಆರಾಮಾಗಿ ಕೂತು ಮಾತಾಡಿದ್ದಳು. ಈಗ ಹೇಳೇ ಹೇಳಿದ್ದಳು. ತಾನು ಕೊಂದವರ ಬಗ್ಗೆ, ಮತ್ತೀಗ ಕೊಲ್ಲುತ್ತಿರುವವರ ಬಗ್ಗೆ. ಮಾವ ಅತ್ತ, ಅಕ್ಷರಶಃ ಅತ್ತ.

ಶೋಷಣೆಗೆ ಈಡಾಗುವ ಅನೇಕ ಮುಗ್ಧ ಜೀವಗಳು ಶಾಂತಿಯವರ ಕತೆಗಳಲ್ಲಿ ನಿಚ್ಚಳವಾಗಿ ಕಾಣಸಿಗುತ್ತವೆ. ಪರಶುವಿನ ದೇವರು ಕತೆಯಲ್ಲಿ ಪರಶುವಿನ ಹೆಂಡತಿ ಸುಜಾತಳಿಗೆ ಶ್ರೀಮಂತೆಯಾಗುವ ಕನಸು ಬಿದ್ದು ತನ್ನೂರಿನ ಅಷ್ಟೂ ಶ್ರೀಮಂತರನ್ನೂ ದುಡಿಸಿ ದಣಿಸುತ್ತಿದ್ದಳು. ಮೈಮೇಲೆ ದೇವರು ಬರುವ ಪರಶುವಿನ ಪಾತ್ರ ಕ್ರಾಂತಿಕಾರಕವಾದದ್ದು. ಒಂದೆಡೆ ತಮ್ಮ ಜಾತಿಯನ್ನೇ ಬಚ್ಚಿಟ್ಟು ಸುಖವಾಗಿ ಬದುಕಿಸಲು ಹವಣಿಸುವ ಸುಜಾತ, ಮತ್ತೊಂದೆಡೆ ತನ್ನ ಜಾತಿಯನ್ನು ದೇವರ ಮೂಲಕ ಬಟಾಬಯಲು ಮಾಡುವ ಪರಶು. ಒಡೆಯ ದೇವಯ್ಯನಿಗೆ ಹೇಳುವ ನಿನ್ನ ಹೆಂಡತಿ ಪರಶುವಿನೊಂದಿಗೆ ಮಲಗಿದ್ದಳು ಎಂಬ ಪರಶುವಿನ ದೇವರ ನುಡಿ ಮತ್ತು ಇಂತಹ ಕಾರಣಗಳಿಂದಾಗಿಯೇ ಕುಟುಂಬವನ್ನು ಕಟ್ಟಿಕೊಂಡು ಊರೂರು ಅಲೆಯಬೇಕಾದ ಸುಜಾತಾಳ ಅಸಹಾಯಕತೆ. ಪಾಸಿಂಗ್ ಕ್ಲೌಡ್ಸ್ ಕತೆ ಚಿತ್ರಿಸುವ ಬದುಕನ್ನೇ ಡಾಕ್ಯುಮೆಂಟರಿ ಮಾಡುವ, ಹೊಟ್ಟೆಯಲ್ಲಿರುವ ಇನ್ನೂ ಹುಟ್ಟದ ಮಗುವನ್ನು ಮಾರಲು ತೀರ್ಮಾನಿಸುವ ತಾಯಿ ಸೆಲ್ವಿ ಮನಕಲಕುವ ಸದ್ಯೋವರ್ತಮಾನದ ವಾಸ್ತವಗಳು. ನಗರೀಕರಣ ಏಕಕಾಲದಲ್ಲಿ ಸೃಷ್ಟಿಸುವ ಔದ್ಯೋಗೀಕರಣ ಮತ್ತು ಹಿಂಸೆ ಮುಳ್ಳುಗಳು ಕತೆಯಲ್ಲಿ ತೆರೆದುಕೊಳ್ಳುತ್ತವೆ(ಹಳ್ಳಿಯಿಂದ ಉದ್ಯೋಗ ಹುಡುಕಿ ಹೊರಟ ಟಿಪ್ಪು, ಅವನನ್ನು ಹುಡುಕಿ ಹೋಗುವ ಹೆಂಡತಿ ಸುಷ್ಮ, ಕಾಂಟ್ರಾಕ್ಟರುಗಳು ಅತ್ಯಾಚಾರವೆಸಗಿ ಅವಳನ್ನು ಕೊಲೆಮಾಡುವ, ಟಿಪ್ಪುವನ್ನೂ ಮುಗಿಸುವ ಕತೆ).

ದಾರಿ, ಸುಳಿ, ಪ್ರಶ್ನೆ, ಪಯಣ, ಪಾಸಿಂಗ್ ಕ್ಲೌಡ್ಸ್, ಪರಶುವಿನ ದೇವರು, ನೆರಳು, ಮನಸು ಅಭಿಸಾರಿಕೆ ಇವು ಈ ಸಂಕಲನದ ಮಹತ್ವದ ಕತೆಗಳು. ಇವು ಕನ್ನಡ ಸಾಹಿತ್ಯದಲ್ಲಿ ಸದಾ ಜೀವಂತವಾಗಿರಬಹುದಾದ ಕಸುವುಳ್ಳ ಕತೆಗಳು. ನೆರಳು, ನನ್ನ ಹಾಡು ನನ್ನದು, ಬಾಹುಗಳು ಈ ಕತೆಗಳ ವಸ್ತು, ಆಶಯ ಉತ್ತಮವಾಗಿದ್ದರೂ ಅನಗತ್ಯ ವಿವರಗಳು ಇಡಿಕಿರಿದು ಟಾಕೇಟಿವ್ ಎನಿಸುತ್ತದೆ.

ಶಾಂತಿಯವರ ದಿಟ್ಟವಾದ ಕಥಾ ನಿರೂಪಣೆ ಮಹಿಳಾ ಸಾಹಿತ್ಯವು ಹೊಸ ತಲೆಮಾರಿನಲ್ಲಿ ಪುಟಿದೇಳುತ್ತಿರುವ ಸೂಚನೆಯನ್ನು ಕೊಡುತ್ತದೆ. ಮಹಿಳೆಯನ್ನು ಹತ್ತಿಕ್ಕಲಾದ ಸಿದ್ಧಮಾದರಿಗಳಿಂದ ಹೊರಬರುವ ಅವರ ಚಿಂತನೆಗಳು ಸಮಕಾಲೀನ ತುರ್ತುಗಳೂ ಹೌದು. ಅವರ ದಿಟ್ಟ ಅಭಿವ್ಯಕ್ತಿಗಳಿಗೆ ಸಾಕ್ಷಿ ಈ ಸಾಲುಗಳು:
_ಅವನ ತೊಡೆಯನ್ನು ನನ್ನ ಕಾಲು ತಲುಪಿದೆ. ಬೆಡ್ಶೀಟ್ನಿಂದ ಕಾಲುಗಳನ್ನ ಮುಚ್ಚಿಕೊಂಡಿದ್ದೇನಾದರೂ ಯಾವುದೋ ಒಂದು ಹಿತವಾದ ಶಾಖ? ಶಾಖದಂಥದ್ದೇ ಏನೋ ಒಂದು ಅವನ ತೊಡೆಗಳಿಂದ ಹಾದು ನನ್ನ ಹೆಬ್ಬೆರಳಿಗೆ ಇಳಿದು ಕಾಲುಂಗುರದ ಬೆರಳಿಗೆ ಹಾದು, ಅಂಗಾಲಿಡೀ ತುಂಬಿ, ಮೀನಖಂಡದ ಮೇಲೆ ಹತ್ತಿ, ತೊಡೆಯನ್ನೆಲ್ಲ ತುಂಬಿ, ಮುಂಬರಿದು ಮತ್ತೆಲ್ಲೋ ಜಮೆಯಾಗಿ, ಮತ್ತೂ ಹಾಗೆ ಮೇಲು ಮೇಲಕ್ಕೆ ತಲುಪಿ ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ ಅನಿಸಿತು_(ಪಯಣ)

_ಕಮಲದ ಹೂವನ್ನು ಕಿತ್ತವರ ಕಾಲು ಕೆಸರಾಗಬಹುದು. ಹೂವಿಗೆ ಆ ಭಯವಿಲ್ಲ_ (ನನ್ನ ಹಾಡು ನನ್ನದು)

_ಮುಖದಲ್ಲಿನ್ನೂ ಒಂದು ಕಾಂತಿಯಿದೆ. ಹಾಗೇ ಚೂಡಿಯನ್ನೊಮ್ಮೆ ಸೊಂಟದ ಹಿಂದೆ ಕೈ ಹಾಕಿ ಬಿಗಿ ಮಾಡಿ ನೋಡಿದರೆ ಹೊಟ್ಟೆ ಒಂಚೂರು ಮುಂದೆ ಉಬ್ಬಿಕೊಂಡಿರುವುದು ಕಾಣುತ್ತದೆ..ಹಾಗಿಲ್ಲವಾದರೂ ಅನಾರ್ಕಲಿ ಚೂಡಿಯಲ್ಲಿ ಹೊಟ್ಟೆಯ ಉಬ್ಬು ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗೆ ಉಸಿರು ಒಳಕ್ಕೆಳೆದು ಹೊಟ್ಟೆಯನ್ನು ಒಳಕ್ಕೆಳೆದುಕೊಂಡು ನೋಡಿಕೊಂಡೆ..ಮೈಮಾಟ ಚೆನ್ನಾಗಿದೆ ಅನಿಸಿ ಖುಷಿಯಾಯ್ತು_(ಮನಸು ಅಭಿಸಾರಿಕೆ)


ಶಾಂತಿ ಕೆ ಅಪ್ಪಣ್ಣ ಅವರಿಗೆ ಅಭಿನಂದನೆಗಳು! ಕೊಡಗಿನ ಸದ್ಯದ ಮಹಿಳಾ ಸಾಹಿತ್ಯದ ದರ್ಶನಕ್ಕೆ ಅವಕಾಶವನ್ನಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೂ ಋಣಿ.
*

ಕಾಜೂರು ಸತೀಶ್

(ಫೆಬ್ರವರಿ ೪, ೨೦೧೭ರಂದು ಮಡಿಕೇರಿ ಪ್ರೆಸ್ ಕ್ಲಬ್ನಲ್ಲಿ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಂದರ್ಭ ವ್ಯಕ್ತಪಡಿಸಿದ ಅನಿಸಿಕೆಯ ಆಯ್ದ ಭಾಗ)




Sunday, February 8, 2015

ನಡೆದೂ ಮುಗಿಯದ ಹಾದಿ

ಕಂಡುಂಡದ್ದನ್ನು ತಮ್ಮ ಪಾಡಿಗೆ ತಾವು ಬರೆದು ಹಗುರಾಗುವ ಮಾರುತಿ ದಾಸಣ್ಣವರ ಸರ್ ,ಈಚೆಗೆ 'ನಡೆದೂ ಮುಗಿಯದ ಹಾದಿ' ಎಂಬ ತಮ್ಮ ಎರಡನೆಯ ಕವನ ಸಂಕಲನವನ್ನು ಹೊರತಂದರು.



ಮಾರುತಿ ಸರ್ ಅವರ ಪರಿಚಯ ನನಗಾದದ್ದು ಅವರ ಕವಿತೆಗಳ ಮೂಲಕ. ಒಂದು ದಶಕದ ಹಿಂದೆ 'ಮಯೂರ ಕಲ್ಪನೆ ' ವಿಭಾಗದಲ್ಲಿ ಬೆಳಗಾವಿ ಕನ್ನಡದ ಸಮರ್ಥ ಬಳಕೆಯೊಂದಿಗೆ ಕಟ್ಟುತ್ತಿದ್ದ ಕವಿತೆ ಮತ್ತು ಅದಕ್ಕೂ ಮಿಗಿಲಾಗಿ ,ಅದರ ಕೆಳಗೆ ಬರೆದುಕೊಳ್ಳುತ್ತಿದ್ದ 'ಗಾಳಿಬೀಡು' ಎಂಬ ಊರು . ಇವು ಪರಿಚಯದ ಹಿಂದಿರುವ ಕಾರಣಗಳು.



ಇಷ್ಟಾದರೂ ನಾನವರನ್ನು ಮೊದಲು ನೋಡಿದ್ದು ಫೆಬ್ರವರಿ 16, 2009ರಲ್ಲಿ. ಭಾಗಮಂಡಲದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ . ಆ ದಿನ ಅವರು 'ಯಾರೋ ಒಬ್ಬ ಮುದುಕ ' ಎಂಬ ಕವಿತೆಯನ್ನು ಓದಿದ್ದರು. ಅಲ್ಲೂ ನಾನವರನ್ನು ಮಾತನಾಡಿಸಿರಲಿಲ್ಲ! ಮತ್ತೆ 2011,ಜನವರಿ 27ರಂದು ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಪರ್ಧಾ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ನಾವಿಬ್ಬರು ಪರಸ್ಪರ ಪರಿಚಯ ಮಾಡಿಕೊಂಡೆವು.



ಅದಾದ ಮೇಲೆ ಅವರು ಮಡಿಕೇರಿ ಬಸ್ ನಿಲ್ದಾಣದಲ್ಲಿ ಸಿಕ್ಕಾಗ ವರ್ಗಾವಣೆಯ ನಿಮಿತ್ತ ಕೌನ್ಸಿಲಿಂಗಿಗೆ ಹೈದರಾಬಾದ್ ಹೊರಟಿದ್ದೇನೆ ಎಂದಿದ್ದರು. ಸ್ವಲ್ಪ ದಿನಗಳ ನಂತರ ಅವರದೇ ಶಾಲೆಯಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನ ನಡೆದರೂ,ಅವರ ಉಪನ್ಯಾಸ ಕೇಳಿದರೂ ,ಮಾತನಾಡಿಸಲಾಗಲಿಲ್ಲ!




ಸದ್ಯ ಮಾರುತಿ ಸರ್ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.



ಮೊನ್ನೆ , 'ನಡೆದೂ ಮುಗಿಯದ ಹಾದಿ'ಯನ್ನು ಪ್ರೀತಿಯಿಂದ ಕಳುಹಿಸಿಕೊಟ್ಟಾಗ ಇಷ್ಟೆಲ್ಲಾ ನೆನಪಾಯಿತು . ಇಂಥ ಸೂಕ್ಷ್ಮಗಳನ್ನು ಈ ಕಾಲದ ತುರ್ತು ಎಂದುಕೊಂಡು ಇಲ್ಲಿ ಹೇಳಿಕೊಳ್ಳುತ್ತಿದ್ದೇನೆ.ಮತ್ತೂ ಆಶ್ಚರ್ಯವೆಂದರೆ,ಅವರು ಪುಸ್ತಕದಲ್ಲಿ ನನ್ನನ್ನು ನೆನಪುಮಾಡಿಕೊಂಡಿದ್ದಾರೆ.ಪುಸ್ತಕ ತಲುಪಿ ಇಷ್ಟು ದಿನಗಳಾದರೂ ,ತಲುಪಿರುವ ಕುರಿತು ಇನ್ನೂ ಏನೂ ಹೇಳದ ನನಗೆ ,
ಪಾಪಪ್ರಜ್ಞೆ ಹೆಗಲೇರಿಕೊಂಡಿದೆ.

*

ಬದುಕಿದಂತೆ,ಬದುಕುವಂತೆ ಬರೆಯುವ ('ನನ್ನ ಪಾಡೂ ಹಾಡಾಗಲಿ') ಬರೆಯುವ ಮಾರುತಿ ದಾಸಣ್ಣವರ ಸರ್,ತಮ್ಮ ಬದುಕನ್ನು ಕಾವ್ಯದ ಮೂಲಕ ಉಸಿರಾಡುವವರು.ಹಾಗೆಂದು ಅದನ್ನು ಖಾಸಗಿಯಾಗಿಸದೆ ತಮ್ಮ ಅನುಭವ ದರ್ಶನವನ್ನು ಸಾಂಸ್ಕೃತಿಕವಾಗಿ,ಮೌಲಿಕವಾಗಿ ದಾಟಿಸಬಲ್ಲವರು.



ಅವರ ಕವಿತೆಗಳಲ್ಲಿ ಇಣುಕುವ ಅಪ್ಪನ ಬದುಕಿನ ಮಾರ್ಗವೇ ಒಟ್ಟು ಸಮಾಜದ ಭಿನ್ನ ಸ್ತರಗಳನ್ನೂ,ಅವರ ಶೋಚನೀಯ ಸ್ಥಿತಿಗತಿಗಳನ್ನೂ ಬಿಂಬಿಸುವ ದರ್ಪಣ.(ಶ್ರೀಮಂತ ,ಬಡವ,ಕಲಾವಿದ ,ಹೆಡ್ಡ,ದೊಡ್ಡ ಕುಳ,ಗುಲಾಮ ). ಅಮ್ಮ ಇಲ್ಲಿ ಪ್ರಚಂಡ ಇಚ್ಛಾಶಕ್ತಿಯೊಂದಿಗೆ ಶಿಲ್ಪಿಯ ಉಳಿಪೆಟ್ಟಿಗೆ ಸದಾ ಮೈಯ್ಯೊಡ್ಡಿ ಕೂತ ಸಹನಶೀಲೆ.



ನನ್ನನ್ನು ಕಾಡುವುದು- ಮಾರುತಿ ಸರ್ ಅವರ ಕವಿತೆಗಳ ಪ್ರಾಮಾಣಿಕತೆ . ಇಲ್ಲಿನ ಅನೇಕ ಕವಿತೆಗಳಲ್ಲಿ ಕಾಲದ,ಸಂಬಂಧದ ಸೂಕ್ಷ್ಮಗಳು ನವಿರಾಗಿ ತೆರೆದುಕೊಳ್ಳುತ್ತವೆ.



ಅಪ್ಪ ಅವ್ವಂದಿರ ಸಂತೆಯ ಗಂಟು /
ಬಿಚ್ಚಿ ಹೋಗಿತ್ತೇ,ಹರಿದು ಹೋಗಿತ್ತೇ/
ಚುರುಮುರಿ ಬಟಗಡಲೆ/
ಬಿದ್ದಿವೆ ಅಲ್ಲಲ್ಲಿ.[ನಡೆದೂ ಮುಗಿಯದ ಹಾದಿ]



ಮೌಲ್ಯವಿರದ ತರುಣ ಪೀಳಿಗೆಯ ಮೇಲಿನ ಸಣ್ಣ ಆಕ್ರೋಶ ಹೀಗೆ ವ್ಯಕ್ತವಾಗುತ್ತದೆ :





ತಟ್ಟೆಯಲ್ಲಿ ಸ್ಟೈಲಾಗಿ ಅನ್ನ ಬಿಟ್ಟೇಳುವ/
ಮಗನ ಹಮ್ಮಿಗೆ ರೇಗುತ್ತೇನೆ.[ಅವ್ವ ಕಟ್ಟಿಕೊಟ್ಟ ಬುತ್ತಿ]







ಮಾರುತಿ ಸರ್ ತಮ್ಮ ದೇಸಿ ಭಾಷೆಯಲ್ಲಿ ಹಾಡು ಹೊಸೆಯುತ್ತಾ ಸಂಭ್ರಮಿಸುತ್ತಾರೆ(ಬಿದ್ಹೋದ ಬಿದಿರೂ ಕೊಳಲಾದ ಹಾಂಗ ). 'ಎಲ್ಲಿದ್ದಿ ಜೋಗಪ್ಪ','ಯಾರೋ ಬಂದು ', 'ಬಾಲ್ಯ ಹೊಲದ ತೆನೆ'- ಈ ಕವಿತೆಗಳು ಅವರ ಸಂಗೀತ ಪ್ರಜ್ಞೆಯನ್ನು ತೋರಿಸುತ್ತವೆ .



ಸಮಾಜದ ಬಿಕ್ಕಟ್ಟುಗಳನ್ನು,ವೈರುಧ್ಯಗಳನ್ನು ಸ್ವಯಂ ಅನುಭವಿಸಿ ,ಅವುಗಳನ್ನು ಭಿನ್ನವಾಗಿ ಕಟ್ಟಿಕೊಡುತ್ತಾರೆ.ಆಗ ಉದ್ಭವಿಸುವ ಆಕ್ರೋಶವೆಲ್ಲ ನ್ಯಾಯೋಚಿತವಾದದ್ದೇ:


ಏಕಲವ್ಯನ ಬೆರಳ ಕತ್ತರಿಸಿದಾಗ/
ಅತ್ತುಬಿಟ್ಟ ವಾಲ್ಮೀಕಿ[ವಿಪರ್ಯಾಸ]




ಮೂರ್ತಿಪೂಜೆಯ ಹಗ್ಗ /
ಹರಿದೊಗೆದ ನಿನಗೆ /
ಅದರದೇ ಉರಳು.



ಸಾದಾ ಸರಳ ಭಿಕ್ಕುವಿಗೆ /
ಎಷ್ಟೊಂದು ಗೋಲ್ಡನ್ನು /
ಟೆಂಪಲ್ಲುಗಳು.[ಬುದ್ಧನಿಲ್ಲದ ಬೋಧಿ]




ನನ್ನನ್ನಿರಲು ಬಿಡಿ ಹಾಗೇ/
ನಿಮ್ಮೊಳಗೆ ಬರೆಯದೇ ಉಳಿದ /
ಕವಿತೆಯಾಗಿ[ಗೋರಿ ಕಟ್ಟಬೇಡಿ]


----


ಅಸ್ತ್ರವಿಡಿದಿದ್ದಾಳೀಕೆ/
ಯಾರಿಗೋ ಗೊತ್ತಿಲ್ಲ /
ಆಟವಾಡಲು ಕೊಡು /
ಎಂದು ಮಗ/
ರಂಪ ಹೂಡಿದ್ದಾನೆ [ಯುದ್ಧ ಮುಗಿದ ಮೇಲೆ ]



ಆಧುನೀಕತೆಯು ಸಂಬಂಧಗಳನ್ನು ಛಿದ್ರಗೊಳಿಸುತ್ತಿರುವಾಗ,ಬಹುತೇಕ ಕವಿತೆಗಳು ಭೂತ-ವರ್ತಮಾನಗಳನ್ನು ತುಲನಾತ್ಮಕವಾಗಿ ಗ್ರಹಿಸುತ್ತವೆ. 'ಮಲ್ಲಿಗೆ ಮತ್ತು ಬೇವು', 'ಗೆಳೆಯನಿಗೆ', 'ಬೇಗ ಬಾ' , 'ಹಳೆಬೇರು-ಹೊಸಚಿಗುರು' -ಇಂತಹ ಮಾದರಿಯವು.





ಕೆರೆ ದಂಡೆಗೆ ಬೇಲಿಯು ಇದೆ/
ಈಜಾಡುವ ಹೈದರಿಲ್ಲ[ಹಳೆಬೇರು ಹೊಸಚಿಗುರು]




---



ಟಿ.ವಿ. ಕೇಬಲನ್ನು/
ತೆಗೆಸಿಬಿಡುತ್ತೇನೆ/
ಕಂಪ್ಯೂಟರನ್ನು ಆಫ್ ಮಾಡಿ/
ಮಲಗಿಸಿ ಬಿಡುತ್ತೇನೆ[ಗೆಳೆಯನಿಗೆ]



ಸಂಕೀರ್ಣ ಬದುಕಿನಿಂದ ಬಿಡಿಸಿಕೊಂಡು ಬದುಕಬೇಕಾದ ತುರ್ತನ್ನು ಹೇಳುವ,ವಾಸ್ತವದ ಲೆಕ್ಕ ತಪ್ಪಿದುದರ ಕುರುಹುಗಳಿರುವ ಇಂತಹ ಅನೇಕ ಕವಿತೆಗಳು ಸಂಕಲನದಲ್ಲಿವೆ .







'ಅವ್ವ ಮತ್ತು ಕುಂಕುಮ' ಕವಿತೆ ಇಲ್ಲಿ ಗಮನಾರ್ಹವಾದುದು.ಕನ್ನಡಿಯ ತುಣುಕು ,ಜೇನ ಮೇಣದ ಡಬ್ಬಿ,ಕುಂಕುಮ ಬಟ್ಟಲು- ಇವು ಅವ್ವನ ಸಿಂಗಾರ ಸಾಮ್ರಾಜ್ಯದ ಸರಕುಗಳು .



ಅಪ್ಪ ಕಾಯಿಲೆ ಬಂದು ಮಲಗಿದಾಗ/
ಅವ್ವನ ಕುಂಕುಮದ ಹಾರೈಕೆ/
ಇನ್ನೂ ಜೋರಾಗಿರುತ್ತದೆ.



ಮನಕಲಕುವ ಇಂತಹ ಸಂಗತಿಗಳನ್ನು ಕಾವ್ಯಾತ್ಮಕಗೊಳಿಸಿದ ಬಗೆ ಬೆರಗು ಹುಟ್ಟಿಸುತ್ತದೆ.ಕನ್ನಡಿ ಮತ್ತು ಕುಂಕುಮದ ಪ್ರತಿಮೆಗಳು ಶಕ್ತವಾಗಿ ಹೊರಹೊಮ್ಮಿವೆ.



ಕನ್ನಡಿ ಫಳಫಳ ಹೊಳೆಯುತ್ತದೆ/
ಕುಂಕುಮದ ಕೆಂಪು ತುಂಬಿಕೊಂಡು .





ಅಪ್ಪನನ್ನೂ ಕುಂಕುಮವನ್ನೂ/
ಮಗುವಿನಂತೆ ಸಾಕಿದ್ದ/
ಅವ್ವನ ಹಣೆ/
ಈಗ ಖಾಲಿಯಿದೆ(ಕೊರಳೂ)




ಹೀಗೆ ಬದುಕಿನ ಎಲ್ಲ ಸೂಕ್ಷ್ಮಗಳನ್ನು ಹೇಳಹೊರಡುವ ಮಾರುತಿ ಸರ್ ಅವರ ಕೆಲವು ಕವಿತೆಗಳಲ್ಲಿ ಮಾತು ಕೂಡ ಇಣುಕುತ್ತದೆ.ಅದನ್ನು ನೀಗಿಸಿಕೊಳ್ಳುವ ಎಲ್ಲ ಕಸುವೂ ಅವರಿಗಿದೆ.ನನ್ನಂಥವರನ್ನೂ ನೆನೆಸಿಕೊಳ್ಳುವ ಅವರ ದೊಡ್ಡಗುಣಕ್ಕೆ ಶರಣು!

**

-ಕಾಜೂರು ಸತೀಶ್