ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, May 20, 2026

ಯುವ ಲೇಖಕ

ಯುವ ಲೇಖಕ ವರ್ಷಕ್ಕೊದರಂತೆ ಹೆರಲು ತೊಡಗಿದ. ಅವನ್ನು ದೂರ್ವಾಸ ಮುನಿಗಳ ಮುಂದೆ ಹೋಗಿ ತೋರಿಸುವ ಮುನ್ನ ಅವರನ್ನು ಚೆನ್ನಾಗಿ ಅಟ್ಟಕ್ಕೇರಿಸುತ್ತಿದ್ದ. ಆಗ ಮುನಿಗಳಿಂದ ಅದ್ಭುತ ಎಂಬ ಮುದ್ರೆ ಸಿಗುತ್ತಿತ್ತು.

ಮೊದಲ ವರ್ಷ ಇಲಿಮರಿ, ಆಮೇಲೆ ಕ್ರಮವಾಗಿ ಹೆಗ್ಗಣ, ಬೆಕ್ಕು, ಹಂದಿಮರಿಯನ್ನು ಹೆತ್ತಿದ್ದ. ಅದಕ್ಕೆ ಮನುಷ್ಯರ ಬಟ್ಟೆ, ಮುಖವಾಡ ತೊಡಿಸುತ್ತಿದ್ದುದರಿಂದ ಜನರಿಗೆ ತಿಳಿಯುತ್ತಿರಲಿಲ್ಲ.

ತಿಮ್ಮ ಯೋಚಿಸಿದ : "ಮುಂದಿನ ವರ್ಷ ಕೋತಿ ಮರಿಯನ್ನು ಹೆತ್ತ ಮೇಲೆ 'ಹಿರಿಯ ಸಾಹಿತಿ' ಎಂಬ ಪಟ್ಟ ಸಿಗುತ್ತದೆ. ಮುಂದೆ ಚುನಾವಣೆಗೂ ನಿಲ್ಲಬಹುದು."
*
✍️ ಕಾಜೂರು ಸತೀಶ್ 

Tuesday, May 5, 2026

ಭ್ರಷ್ಟಾಚಾರ

"ಈ ದೇಶದಲ್ಲಿ ತುಂಬಾ ಭ್ರಷ್ಟಾಚಾರ"ಎಂದ ತಿಮ್ಮನನ್ನು ಬಂಧಿಸಲಾಯಿತು.

ಅವನ ಕುಟುಂಬದವರು ಹಲವರಿಗೆ ಲಂಚ ಕೊಟ್ಟು ಅವನನ್ನು ಬಿಡಿಸಿಕೊಂಡು ಬಂದರು.
*
✍️ ಕಾಜೂರು ಸತೀಶ್
ಗೆಳೆಯ ತೀರಿಕೊಂಡಿದ್ದ. 

ಸಾವಿನ ದರ್ಶನಕ್ಕೂ ಮುನ್ನ ತಿಮ್ಮ ಇಸ್ತ್ರಿ ಮಾಡುತ್ತಿದ್ದ.

ತನ್ನನ್ನೇ ಕೇಳಿಕೊಂಡ :
 "ಗೆಳೆಯ ತೀರಿಕೊಂಡರೂ ನೀನು ಇಸ್ತ್ರಿ ಮಾಡುತ್ತಿದ್ದೀಯಲ್ಲಾ ತಿಮ್ಮ?"

"ಜನ ನನ್ನನ್ನು ಗಮನಿಸಲ್ವಾ " ತಿಮ್ಮ ಹೇಳಿದ.

"ಮತ್ತೆ ಈ ಡ್ರೆಸ್ ಮ್ಯಾಚಿಂಗ್? "

"ಜನ ನೋಡಲ್ವಾ?"
*
ತುಸುಹೊತ್ತು ಕಳೆದ ಮೇಲೆ ಯೋಚಿಸುತ್ತಾ ಕುಳಿತ ತಿಮ್ಮನಿಗೆ ಏನೋ ಕೊರತೆ ಇರುವಂತೆ ಅನಿಸಿ ಸಾವಿಗೆ ತೆರಳದೆ ಅಲ್ಲೇ ಇದ್ದುಕೊಂಡು ಗೆಳೆಯನನ್ನು ನೆನೆದು ಕಣ್ಣೀರಾದ. 

"ಅಲ್ಲಿ ಹೋಗಿದ್ದಿದ್ದರೆ ಆತ್ಮವಂಚನೆ ಆಗುತ್ತಿತ್ತು" ಹೇಳಿಕೊಂಡ ತನ್ನಲ್ಲೇ .
*
✍️ ಕಾಜೂರು ಸತೀಶ್ 

Friday, May 1, 2026

ಆಟ

ಊರಲ್ಲಿ ನೂರಾರು ಮಕ್ಕಳ ಗುಂಪುಗಳಿದ್ದವು. ಅವರೆಲ್ಲರೂ ಗುಂಪುಗುಂಪಾಗಿ ಆಟವಾಡುತ್ತಿದ್ದರು.

ಒಮ್ಮೆ ಮೂರು ಗುಂಪುಗಳು "ನಾವೊಂದು ಆಟ ಆಡೋಣವೇ?" ಎಂದವು. ಹಲವು ಗುಂಪುಗಳು ಈ ಹಿಂದೆ ಇದೇ ಆಟವಾಡಿ ಇದು 'ಅಪಾಯಕಾರಿ' ಎಂಬ ನಿರ್ಣಯಕ್ಕೆ ಬಂದಿದ್ದವು.

ತಿಳಿದೂ ತಿಳಿದೂ ಈ ಮೂರು ಗುಂಪುಗಳು ಆಟಕ್ಕಿಳಿದವು. ತಮಗೆ ಸಾಧ್ಯವಾದಷ್ಟು ಕಲ್ಲುಗಳನ್ನು ಅವು ಸಂಗ್ರಹಿಸಿಟ್ಟುಕೊಂಡಿದ್ದವು. ಆಟ ಆರಂಭವಾದೊಡನೆ ಎರಡು ತಂಡಗಳು ಒಟ್ಟುಗೂಡಿ ಒಂದು ತಂಡದ ಮೇಲೆ ಕಲ್ಲುಗಳನ್ನು ಎಸೆಯಲಾರಂಭಿಸಿದವು. ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನೇ ಇವೆರಡೂ ತಮ್ಮಲ್ಲಿ ಶೇಖರಿಸಿಟ್ಟುಕೊಂಡಿದ್ದವು. ಆನೆಗಳ ಸಹಾಯದಿಂದ ಅವನ್ನು ಎಸೆಯುತ್ತಿದ್ದವು.

ಹಿರಿಯರು ಈ ಆಟವನ್ನು ಮಕ್ಕಳಿಗೆ ಕಲಿಸಿದ್ದರು. ದೂರದಿಂದಲೇ ಇದನ್ನು ನಿಯಂತ್ರಿಸುತ್ತಿದ್ದರು. ಮಕ್ಕಳು ಸಾಯುವುದನ್ನು ತಮ್ಮ ಸಾಧನೆ ಎಂಬಂತೆ ನೋಡುತ್ತಿದ್ದರು.
*
✍️ಕಾಜೂರು ಸತೀಶ್