ವಿಚಿತ್ರವೆಂದರೆ ಈ ಹಕ್ಕಿಗೂ ಕನ್ನಡದಲ್ಲಿ ಬದನಿಕೆ ಹಕ್ಕಿ ಎಂದೇ ನಾಮಕರಣ ಮಾಡಿದ್ದಾರೆ!
*
ಅರಣ್ಯ ಇಲಾಖೆಯ ವತಿಯಿಂದ ದಿನಾಂಕ 29-12-2022ರಂದು ಸೋಮವಾರಪೇಟೆ ತಾಲೂಕಿನ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದ ಹೊಣೆಯನ್ನು ಹೆಗಲಲ್ಲಿಟ್ಟುಕೊಂಡಿದ್ದವರು ವಲಯ ಅರಣ್ಯಾಧಿಕಾರಿ ಗಾನಶ್ರೀ ಮೇಡಂ.
ಕಾರ್ಯಕ್ರಮ ಮುಗಿದು ವರ್ಷ ಕಳೆದ ಮೇಲೆ ಈ ಗಿಡವನ್ನು ಅವರ ಬಳಿಯೇ ಕೇಳುವುದೊಳಿತು ಎಂದು 'ಕೇಳಿದೆ'. ಅವರು ಸಸ್ಯಕ್ಷೇತ್ರದಲ್ಲಿ ಪಡೆದುಕೊಳ್ಳಿ ಎಂದರು. 30-08-2023ರಂದು ಐದು ಗಿಡಗಳನ್ನು ಪಡೆದು ಅದರಲ್ಲಿ ಮೂರನ್ನು ಬೆಟ್ಟದಳ್ಳಿ ಶಾಲೆಯಲ್ಲೂ ಎರಡನ್ನು ಮನೆಯಲ್ಲೂ ನೆಟ್ಟೆ. ಅಧಿಕ ಮಳೆಬೀಳುವ ತಾಣ ಬೆಟ್ಟದಳ್ಳಿ. ನಾನು ದಸರಾ ರಜೆಮುಗಿಸಿ ತೆರಳಿದಾಗ ಅವು ಬುಡಕೊಳೆತು ಕಪ್ಪಾಗಿ ಅಂತ್ಯಕಂಡಿದ್ದವು!
ಆದರೆ ಮನೆಯಂಗಳದಲ್ಲಿ ನೆಟ್ಟಿದ್ದ ಎರಡು ಗಿಡಗಳಲ್ಲಿ ಕಾಯಿಗಳು ಹುಟ್ಟಿ ಅದನ್ನು ಹುಡುಕಿಕೊಂಡು ಬರುವ ಬದನಿಕೆ ಹಕ್ಕಿಯನ್ನೂ, ಅದರ ಹಸಿವನ್ನು ಹಿಂಗಿಸುತ್ತಿರುವ ಆ ಮರದ ತಾಯ್ತನವನ್ನೂ, ಅದು ಜೀವಪಡೆಯಲು ಕಾರಣಕರ್ತರಾದ ಸಸ್ಯಕ್ಷೇತ್ರದ ಆ ಅನಾಮಿಕ ಮನುಷ್ಯನನ್ನೂ, ಅದನ್ನು ನನಗೆ ಕರುಣಿಸಿದ ಗಾನಶ್ರೀ ಮೇಡಂ ಅವರನ್ನೂ, ಈ ಮಣ್ಣನ್ನೂ, ಹಸಿರೆಂಬೋ ವಿಸ್ಮಯವನ್ನೂ ಒಟ್ಟೊಟ್ಟಿಗೆ ಸ್ಮೃತಿಯ ಬುಟ್ಟಿಯೊಳಗಿಟ್ಟು ಕಾಪಿಟ್ಟುಕೊಳ್ಳುವಂತೆ ಮಾಡಿದೆ.
ಎಲ್ಲಿಯೋ ಇರುವ ಆ ಹಕ್ಕಿಗೆ ಇಲ್ಲಿ ಈ ಗಿಡ ಇದೆಯೆಂದು ಯಾರು ಹೇಳಿಕೊಟ್ಟರೋ ನಾನರಿಯೆ.
*
✍️ಕಾಜೂರು ಸತೀಶ್