ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, June 19, 2026

ಅಜಿತ್ ಸರ್ ನಿವೃತ್ತರಾದರು!


ಅಜಿತ್ ಕುಮಾರ್ ಸರ್ ಮೇ 31ಕ್ಕೆ ನಿವೃತ್ತರಾದರು!

1999ರಿಂದ 2025ರವರೆಗೆ ಕಾಜೂರು ಶಾಲೆಯಲ್ಲಿ ಅವರು ಸಲ್ಲಿಸಿದ ಸೇವೆ ಮತ್ತು ಶ್ರಮವನ್ನು ನಾನು ಹತ್ತಿರದಿಂದ ಬಲ್ಲೆ. ನಾನು ಐಗೂರು ಪ್ರೌಢಶಾಲೆಗೆ ದಾಖಲಾದಾಗ ಅಜಿತ್ ಸರ್ ಕಾಜೂರು ಶಾಲೆಗೆ ಶಿಕ್ಷಕರಾಗಿ ವರ್ಗಾವಣೆಗೊಂಡು ಬಂದರು. ನಾವು ಶಾಲೆ ಮುಗಿಸಿ ಬರುವಾಗ, ಮಕ್ಕಳಿಗೆ ಕ್ರೀಡಾ ಕೌಶಲಗಳನ್ನು ಕಲಿಸುವಲ್ಲಿ ತಲ್ಲೀನರಾಗಿರುತ್ತಿದ್ದ ಅವರನ್ನು ಕುತೂಹಲದಿಂದ ನೋಡುತ್ತಿದ್ದೆವು.

ದೈಹಿಕ ಶಿಕ್ಷಣ ಶಿಕ್ಷಕರಾಗಿ ಮೈದಾನದಲ್ಲಿ ಬೆವರು ಹರಿಸಿ ವಿದ್ಯಾರ್ಥಿಗಳ ಬೆಳವಣಿಗೆಗೆ ಶ್ರಮಿಸಿದವರು ಅಜಿತ್ ಸರ್ . ದೈಹಿಕ ಶಿಕ್ಷಣದ ಜೊತೆಗೆ ಇತರೇ ವಿಷಯಗಳನ್ನೂ ಉತ್ಸಾಹದಿಂದ ಬೋಧಿಸುತ್ತಿದ್ದರು. ಹಲವು ಜವಾಬ್ದಾರಿಗಳನ್ನು ಹೆಗಲಿಗೆ ಹೊತ್ತು ಅವುಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಲ್ಲದೆ , ಮುಖ್ಯ ಶಿಕ್ಷಕರ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿಭಾಯಿಸಿದ್ದರು.
*

ಕಾಜೂರು ಶಾಲೆಯಲ್ಲಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ದೊರೆತಿದ್ದು ನನ್ನ ಭಾಗ್ಯ. ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಮತ್ತು ಸರಳತೆಯ ಪ್ರತಿರೂಪವಾಗಿದ್ದ ಅವರು, ಯಾವುದೇ ಪ್ರಚಾರದ ಹಂಬಲವಿಲ್ಲದೆ ಮೌನವಾಗಿ ದುಡಿಯುತ್ತಾ ಶಾಲೆಯ ಪ್ರಗತಿಗೆ ತಮ್ಮ ಅಮೂಲ್ಯ ಕೊಡುಗೆ ನೀಡಿದವರು. ಸಮುದಾಯದೊಂದಿಗೆ ಅವರಿಗಿದ್ದ ಬಾಂಧವ್ಯ ಪ್ರಶಂಸನಾರ್ಹ.
*
ಇನ್ನೇನು ನಿವೃತ್ತಿಯ ಅಂಚಿನಲ್ಲಿದ್ದ ಅವರು ಗುಮ್ಮನಕೊಲ್ಲಿ ಶಾಲೆಗೆ ವರ್ಗಾವಣೆಗೊಂಡರು. ದೊರೆತ ಐದು ತಿಂಗಳಲ್ಲಿ ಅಲ್ಲಿಯೂ ಹುರುಪಿನಿಂದ ದುಡಿದರು. ಪ್ರಶಸ್ತಿಗೆ ಅರ್ಜಿ ಸಲ್ಲಿಸದೆ ನಿವೃತ್ತರಾದರು!

ಶುಭಾಶಯಗಳು ಸರ್!
*
✍️ ಕಾಜೂರು ಸತೀಶ್



Wednesday, May 20, 2026

ಯುವ ಲೇಖಕ

ಯುವ ಲೇಖಕ ವರ್ಷಕ್ಕೊದರಂತೆ ಹೆರಲು ತೊಡಗಿದ. ಅವನ್ನು ದೂರ್ವಾಸ ಮುನಿಗಳ ಮುಂದೆ ಹೋಗಿ ತೋರಿಸುವ ಮುನ್ನ ಅವರನ್ನು ಚೆನ್ನಾಗಿ ಅಟ್ಟಕ್ಕೇರಿಸುತ್ತಿದ್ದ. ಆಗ ಮುನಿಗಳಿಂದ ಅದ್ಭುತ ಎಂಬ ಮುದ್ರೆ ಸಿಗುತ್ತಿತ್ತು.

ಮೊದಲ ವರ್ಷ ಇಲಿಮರಿ, ಆಮೇಲೆ ಕ್ರಮವಾಗಿ ಹೆಗ್ಗಣ, ಬೆಕ್ಕು, ಹಂದಿಮರಿಯನ್ನು ಹೆತ್ತಿದ್ದ. ಅದಕ್ಕೆ ಮನುಷ್ಯರ ಬಟ್ಟೆ, ಮುಖವಾಡ ತೊಡಿಸುತ್ತಿದ್ದುದರಿಂದ ಜನರಿಗೆ ತಿಳಿಯುತ್ತಿರಲಿಲ್ಲ.

ತಿಮ್ಮ ಯೋಚಿಸಿದ : "ಮುಂದಿನ ವರ್ಷ ಕೋತಿ ಮರಿಯನ್ನು ಹೆತ್ತ ಮೇಲೆ 'ಹಿರಿಯ ಸಾಹಿತಿ' ಎಂಬ ಪಟ್ಟ ಸಿಗುತ್ತದೆ. ಮುಂದೆ ಚುನಾವಣೆಗೂ ನಿಲ್ಲಬಹುದು."
*
✍️ ಕಾಜೂರು ಸತೀಶ್