ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, May 24, 2023

ರಾಜಕೀಯ ಮತ್ತು ಪ್ರಕೃತಿ


ಬಾಳೆಯಡ ಕಿಶನ್ ಪೂವಯ್ಯ ಅವರನ್ನು ಭೇಟಿ ಮಾಡಿಸಿದ್ದು ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ೮೦ನೆಯ ಸಾಹಿತ್ಯ ಸಮ್ಮೇಳನ.ಅವರು ಸ್ವಾಗತ ಸಮಿತಿಯ ಸಂಚಾಲಕರಾಗಿದ್ದಾಗ ಅದೇ ತಂಡದಲ್ಲಿ ನಾನು ಸಹ- ಸಂಚಾಲಕನಾಗಿದ್ದೆ. ಕಡಿಮೆ ಮಾತನಾಡುವ, ಶಿಸ್ತಿನ ವ್ಯಕ್ತಿ. ವಕೀಲ ಮತ್ತು ನೋಟರಿಯವರಾಗಿ, ಕ್ರೀಡಾಪಟುವಾಗಿ, ಅಂಕಣಕಾರರಾಗಿ, ರಾಜಕೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಸಂಘಟಕರಾಗಿ, ಕೃಷಿಕರಾಗಿ ತಮ್ಮನ್ನು ವಿಸ್ತರಿಸಿಕೊಂಡವರು ಬಾಳೆಯಡ ಕಿಶನ್ ಪೂವಯ್ಯ.


'ರಾಜಕೀಯ ಮತ್ತು ಪ್ರಕೃತಿ' ಕೃತಿಯಲ್ಲಿ ೨೭ ಲೇಖನಗಳಿವೆ. ಈ ಲೇಖನಗಳಿಗೆ 'ಕೊಡಗು' ಎಂಬ ಭೌಗೋಳಿಕ ಮತ್ತು ಸಾಂಸ್ಕೃತಿಕ ಆವರಣವಿದೆ. ಮಡಿಕೇರಿ ದಸರಾ, ಕಾವೇರಿ, ಕೊಡಗಿನ ರಾಜಕಾರಣ, ಕೊಡಗಿನ ಪ್ರವಾಸೋದ್ಯಮ, ಪ್ರಕೃತಿ ವಿನಾಶ- ಇವುಗಳನ್ನು ಕೊಡಗಿನ ನೆಲೆಯಲ್ಲಿ ವಿಶ್ಲೇಷಿಸಿದರೆ, ಜಾತಿ ರಾಜಕಾರಣ , ಪಕ್ಷಾಂತರ, ಮೌಲ್ಯಾಧಾರಿತ ರಾಜಕೀಯ , ಬೇಟೆ ಮತ್ತು ಕಾನೂನು ಮುಂತಾದವುಗಳನ್ನು ದೇಶಾತೀತವಾಗಿ ಹಿಡಿದಿಡುತ್ತಾರೆ.


ಈ ಲೇಖನಗಳೆಲ್ಲಾ ಹುಟ್ಟಿರುವುದು ಸಮ-ಸಖೀ-ಸಮಾಜದ ನಿರೀಕ್ಷೆಯಲ್ಲಿ. ಅದಕ್ಕಿರುವ ಅಡ್ಡಿಗಳಲ್ಲಿ ಮುಖ್ಯವಾದದ್ದು 'ರಾಜಕೀಯ'( ರಾಜಕೀಯ ಎಂದರೆ ಅಧಿಕಾರದ/ಪಕ್ಷಗಳ/ ಚುನಾವಣೆಗೆ ಸಂಬಂಧಿಸಿದ ಸಂಗತಿ ಮಾತ್ರ ಅಲ್ಲ; ಎಲ್ಲ ರಂಗಗಳಲ್ಲಿ ಸ್ವಾರ್ಥಪರ ಅಭಿವೃದ್ಧಿಗಾಗಿ ಮನುಷ್ಯ ತೋರುವ ಅಧಿಕಾರದ ದುರ್ಬಳಕೆಯೂ, ಕಪಟತನವೂ ರಾಜಕೀಯವೇ ಆಗುತ್ತದೆ). ಮತ್ತೊಂದು- ಪ್ರಕೃತಿ ಮತ್ತು ಸಂಸ್ಕೃತಿಯ ನಾಶ. ಮಡಿಕೇರಿ ದಸರಾ ಆಚರಣೆಯ ಮೇಲೆ ರಾಜಕೀಯ ಪ್ರವೇಶ, ಕಾವೇರಿ(ಧಾರ್ಮಿಕ ಮತ್ತು ಸಾಂಸ್ಕೃತಿಕ ಆಯಾಮದಲ್ಲಿ) ಮತ್ತು ಎರಡು ಜನಾಂಗಗಳ ಸ್ವಪ್ರತಿಷ್ಠೆ, ಕೊಡಗಿನ ಪರಿಸರದ ಮೇಲೆ ಪ್ರವಾಸೋದ್ಯಮದ ಪರಿಣಾಮ - ಈ ಬಗೆಯ ಪ್ರಧಾನ ಸಂಗತಿಗಳನ್ನು ಚರ್ಚೆಗೆ ಎತ್ತಿಕೊಳ್ಳುವುದು ಅವರಿಗಿರುವ ಪ್ರಗತಿಪರ ಚಿಂತನೆಗಳ ಬಲದಿಂದಲೇ; ಉತ್ತಮ ಪರಿಣಾಮದ ಹಂಬಲದಿಂದಲೇ. ಪ್ರತಿಕ್ರಿಯೆಯ ರೂಪದಲ್ಲಿಯೂ ಕೆಲವು ಲೇಖನಗಳು ಕಾಣಿಸುತ್ತವೆ.
ಕಿಶನ್ ಪೂವಯ್ಯ ಅವರ ಚಿಂತನೆಗಳು ಮತ್ತಷ್ಟೂ ಎಲ್ಲರನ್ನೂ ತಲುಪಲಿ ಎಂಬ ಆಶಯ ನನ್ನದು.
*
ಕಾಜೂರು ಸತೀಶ್ 



Thursday, April 27, 2023

ಮೌನದೊಡಲಿನ ಗಜ಼ಲ್

ಅಂಬವ್ವ ಪ್ರತಾಪ್ ಸಿಂಗ್ ಅವರು ಮೌನದೊಡಲ ಮಾತು(ಗಜ಼ಲ್) ಸಂಕಲನವನ್ನು ತಿಂಗಳ ಹಿಂದೆಯೇ ಕಳಿಸಿ ಅದು ತಲುಪಿರುವ/ ಓದಿರುವ ಸಂಗತಿಯನ್ನೇನೂ ವಿಚಾರಿಸದೆ ಕಾವ್ಯಧ್ಯಾನದಲ್ಲಿರುವಂತೆ ಮೌನವಾಗಿದ್ದಾರೆ. (ನನಗೆ ಅವರ ಪರಿಚಯವಿಲ್ಲ, ಬಹುಶಃ ಅವರಿಗೂ!)

ಅಂಬವ್ವ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನವರು, ಶಿಕ್ಷಕಿ. ಶಿಕ್ಷಕರೊಬ್ಬರು ಸೃಜನಶೀಲರಾಗಿದ್ದರೆ ಅವರಿಂದ ಹೊಮ್ಮುವ ಪ್ರಭಾವ/ ಪ್ರೇರಣೆಗಳು ವ್ಯಕ್ತಿ-ಕಾಲದೇಶಗಳನ್ನು ಸ್ಪರ್ಶಿಸಿ ಬೆಳೆಯುತ್ತದೆ. ಅದರಲ್ಲೂ, ಬರೆಯುವ ಪ್ರಕ್ರಿಯೆಯ ಹಿಂದೆ ಓದುವ, ಧ್ಯಾನಿಸುವ ಪ್ರಕ್ರಿಯೆ ಜೊತೆಯಾಗಿರುತ್ತದೆ. ಬೇರೆಯವರ ಮಾತು ಬಿಡಿ, ಮಕ್ಕಳೊಂದಿಗೆ ಒಡನಾಡುವ ಶಿಕ್ಷಕರಿಗೇ ಓದಿನ ಬಲವಿಲ್ಲದೆ ಇರುವ ಕಾಲದಲ್ಲಿರುವಾಗ ಅಂಬವ್ವ ಟೀಚರ್ ಅವರ ನಡೆ ಇಷ್ಟವಾಗುತ್ತದೆ.


ಅಂಬವ್ವ ಪ್ರತಾಪ್ ಸಿಂಗ್ ಅವರು ಈಗಾಗಲೇ ನಾಲ್ಕು ಕೃತಿಗಳನ್ನು ರಚಿಸಿದ್ದಾರೆ. ಮೌನದೊಡಲ ಮಾತು ಅವರ ಐದನೆಯ ಕೃತಿ. ಅರುವತ್ತು ಗಜ಼ಲ್ ಗಳ ಗುಚ್ಛ. ಗಜ಼ಲ್ - ಹೆಚ್ಚು ಚರ್ಚೆಗೆ ಒಳಪಡುವ ಮಾದರಿ. ಮೂಲ ಮಾದರಿ(ಪಾರ್ಸಿ, ಉರ್ದು), ಕನ್ನಡದ ಮಾದರಿ ಮತ್ತು ರೂಪಾಂತರದ ಮಾದರಿ- ಇವುಗಳ ನಡುವೆ ಯಾವುದು ಗಜ಼ಲ್ ಯಾವುದು ಅಲ್ಲ ಎನ್ನುವ ಜಿಜ್ಞಾಸೆ ಇದೆ(ಅದೇನೇ ಇದ್ದರೂ ಬರೆದ ಒಂದೆರಡು ಸಾಲುಗಳಲ್ಲೇ ಕಾವ್ಯಶಕ್ತಿಯನ್ನು ಗ್ರಹಿಸಬಹುದು).

ಅಂಬವ್ವ ಅವರು ತೀರಾ ಗಹನವಾದ ತಾತ್ತ್ವಿಕತೆಗೆ ಹೊರಳುವುದಿಲ್ಲ. ಸರಳ, ಸಹಜವಾದ ಮಾತುಗಳು ಅಲ್ಲಿವೆಯಾದರೂ ಯಾವುದಕ್ಕಾಗಿ ಅವರ ಮನಸ್ಸು ತುಡಿಯುತ್ತದೆ ಎನ್ನುವಲ್ಲಿ ಪ್ರಗತಿಪರವಾದ ಧೋರಣೆಗಳಿವೆ. 'ಅಂತರ್ಮುಖಿ' ಎಂಬ ಮಂಗಳಮುಖಿಯರ ಬಗೆಗಿನ ಕಥನಗಳನ್ನು ಪ್ರಕಟಿಸಿರುವಲ್ಲಿಯೇ ಈ ಧೋರಣೆ ವ್ಯಕ್ತವಾಗುತ್ತದೆ.

ಇಲ್ಲಿನ ಬಿಡಿ ಸಾಲುಗಳು ಅವರು ಮತ್ತಷ್ಟೂ ಒಳ್ಳೆಯ ಕಾವ್ಯವನ್ನು ಸೃಷ್ಟಿಸಬಲ್ಲರು ಎನ್ನುವುದಕ್ಕೆ ನಿದರ್ಶನ:

ನಿನ್ನ ಸ್ವಾಗತಕ್ಕಾಗಿ ನದಿಯು ಸಂಗೀತ ನುಡಿಸುತ್ತಿದೆ
ಅದಕ್ಕೆ ನನ್ನ ಹೃದಯದ ತಾಳವು ಮಿಳಿತಗೊಳ್ಳುತ್ತಿದೆ(ಗಜ಼ಲ್ -5)

ನಿನಗಾಗಿ ಗಾಳಿಯೂ ಖುಷಿಯಾಗಿ ಕೊಳಲನೂದುತ್ತಿದೆ
ಅದಕ್ಕೆ ನನ್ನ ಉಸಿರಾಟ ಜುಗಲ್ಬಂದಿಯಾಗುತ್ತಿದೆ(ಗಜ಼ಲ್ -5)

ರೈತನ ಕೊರಳು ನೇಣಿನ ಹಗ್ಗಕ್ಕೆ ಉರುಳುತ್ತಿದ್ದರೆ
ದಲ್ಲಾಳಿಗಳ ಕುತ್ತಿಗೆ ಚಿನ್ನದ ಭಾರಕ್ಕೆ ಮಣಿಯುತ್ತಿದೆ( ಗಜ಼ಲ್-7)

ಕೊನೆಗೊಮ್ಮೆ ನನ್ನ ಶವವನ್ನಾದರೂ ತೋರಿಸಿಬಿಡಿ
ವನಿತಾ ಹೇಗೆ ಕಾಣುವಳೆಂದು ನೋಡುವೆ ನಾನು( ಗಜ಼ಲ್ -14)

ಪ್ರೀತಿಸುವ ಜೋಡಿಯ ನೋಡಿ ಜಗವೇಕೆ ದ್ವೇಷ ಕಾರುತಿಹುದು
ಸಮಾಧಿಯ ಒಳಗೆ ಲೈಲಾ ಮಜುನೂ ಜೋಡಿ ರೋದಿಸುತ್ತಿದೆ(ಗಜ಼ಲ್ -36)

ಬಿಸಿಲು ಬೆಳದಿಂಗಳಾಗಿ ತಂಪು ಸೂಸುತ್ತಿದೆ ನಿನ್ನ ನೆರಳಿನಲ್ಲಿ
ಇರುಳ ಬೇಗೆ ಕಳೆಯುತ್ತಿದೆ ನಿನ್ನನು ಸೇರಿದ ಮೇಲೆ( ಗಜ಼ಲ್ -55)

ಹೀಗೆ ಅಂಬಮ್ಮ ಟೀಚರ್ ಅವರ ದೊಡ್ಡ ಆಶಯಗಳು ಇಷ್ಟವಾಗುತ್ತವೆ. ಅಂತೆಯೇ,ಇವು ಗಜ಼ಲ್ ಕುರಿತ ಹೆಚ್ಚಿನ ಅಧ್ಯಯನವನ್ನೂ, ಕಲಾತ್ಮಕತೆಯನ್ನೂ, ಮಾತಿನ ಮಿತಬಳಕೆಯನ್ನೂ ನಿರೀಕ್ಷಿಸುತ್ತವೆ. ಕೃತಿಯಲ್ಲಿ ಅಕ್ಷರದೋಷ ಇಲ್ಲದಿರುವುದು ತುಂಬಾ ಖುಷಿಯ ಸಂಗತಿ.
*

ಕಾಜೂರು ಸತೀಶ್