ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, April 28, 2026

ಕಥೆ

ದಿನಕ್ಕೊಂದು ಕಥೆ ಹೇಳುತ್ತಿದ್ದ ತಿಮ್ಮ. ಕೇಳಿಸಿಕೊಳ್ಳಲೆಂದೇ ನಿಮ್ಮಿ ಕಾಯುತ್ತಿದ್ದಳು.

ಅದಕ್ಕಾಗಿ ಕಂಡು ಕೇಳಿದ್ದನ್ನೆಲ್ಲ ಕಥೆ ಮಾಡಿಕೊಂಡು ಹುಮ್ಮಸ್ಸಿನಿಂದ ಸಿದ್ಧವಾಗುತ್ತಿದ್ದ . ಅಷ್ಟೇ ಕುತೂಹಲ ನಿಮ್ಮಿಗೆ. ಇವನ ಕರೆಗಾಗಿಯೇ ದೂರದೂರಿನಲ್ಲಿ ಕಾಯುತ್ತಿದ್ದಳು.

ಒಂದು ದಿನ ತುಸು ಹೆಚ್ಚೇ ಕಥೆಗಳನ್ನು ಹೊತ್ತು ತಂದಿದ್ದ. ಕರೆಮಾಡಿದ.

"ನನಗಿನ್ನು ನಿನ್ನ ಕಥೆಗಳು ಬೇಡ" ಎಂದಳು.

"ಯಾಕೆ" ಎಂದ ದಿಗ್ಭ್ರಾಂತನಾಗಿ .

" ನೀನು ಹೀಗೆ ಕಥೆಗಳನ್ನು ಹೇಳುತ್ತಿದ್ದರೆ ಅದಕ್ಕಾಗಿ ಕಾದೂ ಕಾದೂ ನನ್ನ ಮನಸ್ಸೂ ಕಥೆಯಾಗುತ್ತದೆ. ನಾವೂ ಕಥೆಯಾಗುತ್ತೇವೆ.  ನಮಗೆ ನಮ್ಮದೇ ಆದ ಬದುಕು ಬೇಡವೇ?ಸ್ವಾತಂತ್ರ್ಯ ಬೇಡವೇ? " ಎಂದಳು.

ತಿಮ್ಮ ಕಥೆಯಾದ.

*
✍️ ಕಾಜೂರು ಸತೀಶ್

ಆಸ್ಪತ್ರೆ

ತಿಮ್ಮನನ್ನು ಗ್ರಾಮ ಸಮಿತಿಯ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರು.

ಮೊದಲ ಸಭೆಯಲ್ಲಿ ಗ್ರಾಮದಲ್ಲೊಂದು ದೇವಸ್ಥಾನ ಕಟ್ಟುವ ಪ್ರಸ್ತಾವ ಬಂತು. 'ಅದರ ಬದಲಿಗೆ ಒಂದು ಆಸ್ಪತ್ರೆ ಕಟ್ಟಿಸೋಣ' ಎಂದ ತಿಮ್ಮ. ಆದರೆ ಅದಕ್ಕೆ ಯಾರೂ ಒಪ್ಪಲಿಲ್ಲ. ತಿಮ್ಮ ಪಟ್ಟುಬಿಡದೆ ಕುಳಿತಿದ್ದರಿಂದ ಊರಿನ ಜನಗಳ ಅಭಿಪ್ರಾಯ ಪಡೆಯಲಾಯಿತು.

ಎಲ್ಲರೂ ದೇವಾಲಯ ನಿರ್ಮಾಣವೇ ಸರಿ ಎಂದರು.

ತಿಮ್ಮನಿಗೆ ಮುಖಭಂಗವಾಯಿತು. ಬೇಸರದಿಂದ ಇದ್ದ. ಬಿಸಿಲ ಕಾವಿಗೆ ತಲೆತಿರುಗಿ ಬಿದ್ದ. ದೂರದ ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ತೀರಿಹೋಗಿದ್ದ.

'ದೇವಾಲಯ ಬೇಡ ಎಂದಿದ್ದಕ್ಕೆ ಈ ಸಾವು' ಜನ ಹೇಳಿದರು.

ಮನೆಮಂದಿ ಮಾತ್ರ 'ಊರಲ್ಲೊಂದು ಆಸ್ಪತ್ರೆ ಇದ್ದಿದ್ದರೆ ತಿಮ್ಮ ಬದುಕುಳಿಯುತ್ತಿದ್ದ' ಎಂದು ಕಣ್ಣೀರಿಟ್ಟರು.
*
✍️ ಕಾಜೂರು ಸತೀಶ್