ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, April 27, 2026

ಚಿಗುರೇ...

ಚಿಗುರೇ....
ಏನು ನುಡಿಯಿತು ಬೇರು?
ಏನು ನುಡಿಯಿತು ನೀರು?

ಚಿಗುರೇ....
ಏನು ಹೇಳಿತು ಮಣ್ಣು?
ತೆರೆಯುವಾಗ ಕಣ್ಣು?

ಚಿಗುರೇ....
ಯಾರು ಬರೆದರು ನಿನ್ನ?
ಸುರಿದು ನಿನ್ನಲಿ ಬಣ್ಣ?

ಚಿಗುರೇ...
ಏನು ಹೇಳಿತು ಎಲೆ?
ಮೇಲೇರಿದ ಮೇಲೆ?

ಚಿಗುರೇ...
ಏನು ಹೇಳಿತು ಬಾನು?
ಬಾ ಎಂದಿತೇನು?

ಚಿಗುರೇ...
ಮಣ್ಣು ಕರೆವುದು ನಿನ್ನ
ಎಲೆಯ ಹಾದಿಗೆ ನಿನ್ನ

*
✍️ ಕಾಜೂರು ಸತೀಶ್ 




ಹರಿವ ನದಿಯ ಒಂದು ಕಲ್ಲು

ಹರಿವ ನದಿಯ ಒಂದು ಕಲ್ಲು
ನೆನಪ ಲೆಕ್ಕವಿಡುವುದೇ?
ಕೋಟಿ ಬಂಡೆಗಳ ನಡುವೆ
ಮಾತಿಗೆ ಸಿಗುವುದೇ?

ಹರಿವ ನದಿಗೆ ಒಂದು ಕಲ್ಲು
ಯಾಕೆ ಬಂದು ಸಿಗುವುದು
ನೋವನ್ನು ನಲಿವನ್ನು
ಯಾಕೆ ಮಾತಲಿಡುವುದು?

ನೆರೆಯ ಊರಿನ ಕಥೆಯ
ನೆರೆ ಬಂದ ಕಡು ವ್ಯಥೆಯ
ಕಡಲ ದಾರಿಗೆ ಇಳಿವ
ಪದ ನುಡಿವುದೇ ನದಿಯು ಪದ ನುಡಿವುದೇ ?

ಜುಳು ಜುಳು ಜುಳು ಮಾತಲ್ಲಿ ಮನದ ಕಸ ಅಡಿಗಿರಿಸಿ
ಗಗನದ ನೀಲಿಯಲಿ ಸೂರ್ಯನ ನೆನೆ ನೆನೆಸಿ
ಹಕ್ಕಿಯ ನೆರಳನ್ನು ನೀರೊಳಗೆ ಹಾರಿಸಿ
ಪದ ನುಡಿವುದೇ ನದಿಯು ಪದ ನುಡಿವುದೇ?

ಯಾಕೆ ಆ ಕಲ್ಲು ಮಾತಿಗೆ ಸಿಗುವುದು?
ಯಾಕೆ ಆ ಕಲ್ಲು ಮೌನಕ್ಕೆ ಸಿಗುವುದು?
ಯಾಕೆ ಆ ಕಲ್ಲು ಕಾಳಜಿಗೆ ಸಿಗುವುದು?
ಯಾಕೆ ಆ ಕಲ್ಲು ಪ್ರೀತಿಗೆ ಸಿಗುವುದು?
*
✍️ ಕಾಜೂರು ಸತೀಶ್