ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, August 17, 2026

ಅಮಾನತು

ರಾಜನು ಪ್ರಜೆಗಳನ್ನು ಉದ್ದೇಶಿಸಿ ಮಾತನಾಡುವಾಗ ರಾಜನ ಕಾವಲಿಗೆಂದು ನಿಯೋಜಿಸಲಾದ ಸೈನಿಕನು ಬಿಪಿಯಲ್ಲಿ ಏರುಪೇರಾಗಿ ತಲೆತಿರುಗಿ ಬಿದ್ದನು. ಸಿಟ್ಟುಗೊಂಡ ರಾಜನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅವನನ್ನು ಅಮಾನತು ಮಾಡಲು ಆದೇಶಿಸಿದನು.

ಸೈನಿಕನಿಗೆ ಪ್ರಜ್ಞೆ ಇರಲಿಲ್ಲ. ಹಾಗಾಗಿ ಅಮಾನತು ಪತ್ರವನ್ನು ಕೈಯಲ್ಲಿ ಇಟ್ಟು ಹೆಬ್ಬೆರಳಿನ ಸಹಿ ಪಡೆಯಲಾಯಿತು.

ಕ್ಷಣಗಳು ಉರುಳಿದಂತೆ ಇರುವೆಗಳು, ನೊಣಗಳು ಅವನನ್ನು ನೋಡಲು ಸಾಲು ಸಾಲಾಗಿ ಬರತೊಡಗಿವು.
*
✍️ ಕಾಜೂರು ಸತೀಶ್

Sunday, August 16, 2026

ಕಣ್ಣು ತುಂಬಿರುವಾಗ..

ಕಣ್ಣು ತುಂಬಿರುವಾಗ
ಯೋಚನೆಯ ಮಳೆಯೇಕೆ?
ಕೂಡಿಟ್ಟ ಕನಸುಗಳು
ಮುಳುಗದಿರದೇ?

ಎದೆಯ ತಳಪಾಯಗಳು
ಮಿಡಿದು ಮಿದುವಾದಾಗ 
ಸುಖದ ಗೋಡೆಯ ಕನಸು 
ಕುಸಿಯದಿರದೇ?

ನಗೆಯ ಹಾಳೆಯ ದೋಣಿ 
ಆಸೆಯಲಿ ನೆನೆದಾಗ 
ಗೀಚಿಟ್ಟ ನಾಳೆಗಳು 
ಮಸುಕಾಗದೇ?

ಈ ಕ್ಷಣದ ಉಸಿರೇ... 
ಮರೆತುಬಿಡು ನಾಳೆಗಳ 
ಈ ಕ್ಷಣದ ಹಸಿವೇ.. 
ತೊರೆದುಬಿಡು ನಾಳೆಗಳ...

ಕಣ್ಣು ತುಂಬಿರುವಾಗ 
ಯೋಚನೆಯ ಮಳೆಯೇಕೆ?
ಕೂಡಿಟ್ಟ ಕನಸುಗಳು 
ಮುಳುಗದಿರದೇ?
*
✍️ ಕಾಜೂರು ಸತೀಶ್