ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, December 3, 2019

ನನ್ನ ಹೆಸರು ಮತ್ತು ಕಾಡುವ ಕೆಲವು ಪಾತ್ರಗಳು

ಅಮ್ಮ ಹೇಳಿ ನಗುತ್ತಿದ್ದರು!
*
ಕಳೆದ ವರ್ಷದ ಡಿಸೆಂಬರ್ ತಿಂಗಳು. ನಾನು ಸಂಜೆ ಹಿಂತಿರುಗುವಾಗ ವ್ಯಕ್ತಿಯೊಬ್ಬರು ರಸ್ತೆಯ ಎಡಕ್ಕೊಮ್ಮೆ ಬಲಕ್ಕೊಮ್ಮೆ ವಾಲುತ್ತಾ ಬರುತ್ತಿರುವುದು ದೂರದಿಂದ ಕಾಣಿಸಿತು.

ಹತ್ತಿರ ಬಂದಾಗ ' ಛೆ! ನೀವಾ ಇದು?! ನಾನು ಯಾರೋ ಬೇರೆಯವ್ರು ಅಂದ್ಕೊಂಡಿದ್ದೆ , ನೀವು ಈ ಥರಾ ಮಾಡ್ತೀರಿ ಅಂದ್ಕೊಂಡಿರ್ಲಿಲ್ಲ!' ಎಂದು ಹೇಳಿ ನನ್ನ ದಾರಿ ಹಿಡಿದೆ.

'ಅವರು ಕುಡಿಯುವುದನ್ನು ಬಿಟ್ಟಿದ್ದಾರಂತೆ' ಎಂದು ಅಮ್ಮ ಹೇಳಿದರು. ನನಗೆ ಆಶ್ಚರ್ಯ ! 'ಅದ್ಹೇಗೆ ಬಿಟ್ಟರು?' ಕೇಳಿದೆ. ಕಳೆದ ವರ್ಷ ನೀನು ಏನೋ ಹೇಳಿದ್ಯಂತೆ, ಅದರಿಂದ ಅವರಿಗೆ ತುಂಬಾ ಮುಜುಗರ
ಆಯ್ತಂತೆ. 'ಅವ್ನಿಂದ ಹೀಗೆ ಹೇಳಿಸ್ಕೊಂಡ್ನಲ್ಲಾ ಎಂದು ದಿನಾ ದುಃಖಿಸುತ್ತಿದ್ದರಂತೆ'!

ಅಮ್ಮ ನಗುತ್ತಿದ್ದರು. ನನಗೋ ದಿಗ್ಭ್ರಮೆ!

**

ಇವತ್ತು ಮತ್ತೊಂದು ಘಟನೆ ನಡೆಯಿತು. 'ಸತೀಶ್ ಯಾರು' ಎಂದು ಕೇಳಿಕೊಂಡು ಬಂದರು ಒಬ್ಬರು. 'ಇವರೇ' ಎಂದರು ಪಕ್ಕದವರು. 'ನಮಸ್ತೆ ಸರ್' ಎಂದು ಹೇಳಿ ಅವರು ಹೊರಟುಹೋದರು!

ಯಾಕೋ ಈ ಬದುಕು ಇಷ್ಟೆಲ್ಲಾ ವಿಚಿತ್ರವಾಗಿರುತ್ತಾ ಅನ್ನಿಸತೊಡಗಿದೆ!

Whatsapp ಮತ್ತು ಗುಮಾಸ್ತೀಕರಣ

ತಂತ್ರಜ್ಞಾನದಲ್ಲಿ ನಮ್ಮ ಬೆಳವಣಿಗೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ದೈಹಿಕ ಮತ್ತು ಬೌದ್ಧಿಕ ಶ್ರಮವನ್ನು ಕಡಿಮೆ ಮಾಡುವ ಅವು ಒಂದು ಕೆಲಸವನ್ನು ಶೀಘ್ರವಾಗಿ ಮುಗಿಸಿಕೊಡುವಲ್ಲಿ ನೆರವಾಗುತ್ತವೆ. ಈ ಬೆಳವಣಿಗೆಯನ್ನು ಮೆಚ್ಚಲೇಬೇಕು!


ನಾವೆಲ್ಲಾ ಬೆನ್ನುತಟ್ಟಿಕೊಳ್ಳುವ ತಂತ್ರಜ್ಞಾನವು ಇಂದು ಇಂಡಿಯಾದ ಎಲ್ಲಾ ಸರಕಾರಿ ನೌಕರರನ್ನು ಗುಮಾಸ್ತರನ್ನಾಗಿಸಿದೆ. ಇಡೀ ಕೆಲಸಗಳೆಲ್ಲ ದಾಖಲೀಕರಣದ ನಿಮಿತ್ತವಾಗಿಯೇ ನಡೆಯುತ್ತಿದೆ. ಅದಕ್ಕಾಗಿ ಒಬ್ಬರು ಮತ್ತೊಬ್ಬರ ಮೇಲೆ ತಮ್ಮ ಅಧಿಕಾರವನ್ನು ಹೇರಬೇಕಾಗುತ್ತದೆ. ಶ್ರೇಣೀಕರಣದ ಅಡಿಯಿಂದ ಮುಡಿಯವರೆಗೆ ಹಬ್ಬಿಕೊಂಡಿರುವ ಈ ಪ್ರಕ್ರಿಯೆಯು ಕೆಲಸವನ್ನು ಮತ್ತಷ್ಟೂ ಜಟಿಲವಾಗಿಸುತ್ತಿದೆ.

ಅಧಿಕಾರಿಯಾದವರು ಕಾಲ್ ಸೆಂಟರ್ ನೌಕರರ ಹಾಗೆ ಕರೆ ಸ್ವೀಕರಿಸಬೇಕು, ಟೈಪಿಸ್ಟಿನ ಹಾಗೆ ಸಂದೇಶ ಕುಟ್ಟಬೇಕು ಇತ್ಯಾದಿ. ಹೀಗಾದಾಗ ಮಾಡಬೇಕಿರುವ ನಿಜದ ಕೆಲಸಗಳೆಲ್ಲಾ ಹಳ್ಳ ಹಿಡಿಯುತ್ತವೆ!

whatsapp ಈ ವ್ಯವಸ್ಥೆಯನ್ನು ನಿಜಕ್ಕೂ ಬುಡಮೇಲು ಮಾಡಿಬಿಡುತ್ತದೆ.

Thursday, October 17, 2019

ಕುಡಿಗಾಣದ ಅಬ್ಬಿಯ ನೆಪದಲ್ಲಿ ಕಂಡ ಅಪರೂಪದ ಮುಖಗಳು

ಕಳೆದ ಭಾನುವಾರ ಆತ್ಮಕ್ಕೆ ಸ್ವಲ್ಪ ಸುಖ ಸಿಗಲೆಂದು ಪ್ರಕೃತಿಯ ಚೆಲುವು ಅರಸಿ ಕುಡಿಗಾಣ ಅಬ್ಬಿಯ ಕಡೆಗೆ ಹೊರಟಿದ್ದೆವು. ಸೋಮವಾರಪೇಟೆಯಿಂದ 22ಕಿ.ಮೀ. ಅಂತರದಲ್ಲಿ ನಗರದ,ಆಧುನೀಕರಣದ ನರಕದಿಂದ ತಪ್ಪಿಸಿಕೊಂಡು ಬದುಕುತ್ತಿರುವ ಕೊತ್ತನಳ್ಳಿಯ ಸಮೀಪವಿರುವ ಸ್ಥಳವದು.


ಮಧ್ಯಾಹ್ನದ ಸೂರ್ಯ ನೆತ್ತಿಯ ಮೇಲಿಂದ ಅದಾಗಲೇ ಜಾರಿಹೋಗಿತ್ತು. ಹೊಟ್ಟೆಯು ಯಾವುದೋ ಸ್ವರದಲ್ಲಿ ಜಠರದ ಚರಮಗೀತೆಯನ್ನು ಗುನುಗುನಿಸುತ್ತಿತ್ತು. ಊಟಕ್ಕೆ ಶೇಖರ್ ಸರ್ ಖಾತ್ರಿ. ರಾಧಾಕೃಷ್ಣ ಸರ್ ಮತ್ತು ಲೋಕೇಶ್ ಸರ್ ಅವರಿಗೆ 'ನಮಗಿವತ್ತು ಊಟ ಸಿಗುತ್ತೋ ಏನೋ' ಎಂಬ ಅನುಮಾನ.


ಕೊತ್ತನಳ್ಳಿಯ ಆ ಮನೆಯನ್ನು ತಲುಪಿದಾಗ ಬಾಗಿಲಿಗೆ ಚಿಲಕ! ಚಿಲಕ ತೆರೆದು ಶೇಖರ್ ಸರ್ ಸರಾಗವಾಗಿ ಒಳಹೊಕ್ಕಾಗ ನನಗೆ ಗಾಬರಿ! ಯಾರದೋ ಮನೆ, ಜನರಿಲ್ಲದ ವೇಳೆಯಲ್ಲಿ ಹೀಗೆ ಮನೆ ನುಗ್ಗುವುದು ಎಂದರೆ!


ಹಾಗೆ ಒಳನುಗ್ಗಿದವರು ನಾಲ್ಕು ತಟ್ಟೆಗೆ ಕಣಿಲೆ ಸಾರು ಮತ್ತು ಕಡುಬು ಹಾಕಿ ಒಂದನ್ನು ಬಾಯೊಳಗಿಳಿಸಿಕೊಳ್ಳುತ್ತಾ 'ಬನ್ನಿ' ಎಂದು ನಮ್ಮನ್ನು ಆಮಂತ್ರಿಸಿದರು! ಆತ್ಮದ ಆರೋಗ್ಯಕ್ಕಾಗಿ ಬಂದ ನಮಗೆ ದೇಹದ ಅಸ್ತಿತ್ವ ದೊಡ್ಡದೆನಿಸಿ 'ಮುಕ್ಕಲು' ಶು(ಸು)ರುಮಾಡಿದೆವು. 

ಶೇಖರ್ ಸರ್ ಮೇಷ್ಟ್ರಾಗಿದ್ದಾಗ ಇದೇ ಮನೆಯಲ್ಲಿ 'ಮನೆಮಗ'ನಂತೆ ಉಳಿದುಕೊಂಡಿದ್ದರು. ಈಗಿನ Paying Guestನಂತಲ್ಲ ಅದು. 

ಸ್ವಲ್ಪ ಹೊತ್ತಲ್ಲಿ ತೋಟದೊಳಗಿಂದ ಒಂದು ಕುಳ್ಳಗಿನ ದೇಹ ಏನನ್ನೋ ತಲೆಯ ಮೇಲಿರಿಸಿಕೊಂಡು ನುಸುಳಿ ಬರುತ್ತಿತ್ತು. ನಮ್ಮನ್ನು ನೋಡಿದ್ದೇ ನಗುವಿನ 'ಸ್ವಾಗತ'.

'ಬೊಂಬಾಯಣ್ಣ' ಪರಿಚಯಿಸಿದರು ಶೇಖರ್ ಸರ್. ನನಗದು 'ಬೊಮ್ಮಾಯಣ್ಣ' ಎಂದು ಕೇಳಿಸಿದ್ದರಿಂದ ಹೆಸರಿನ ಬಗ್ಗೆ ಚಕಾರವೆತ್ತಲಿಲ್ಲ.

ಅಷ್ಟರಲ್ಲಿ ಪಾರ್ವತಕ್ಕ ಬಂದು 'ಬನ್ನಿ ಮಾಷ್ಟ್ರೇ' ಎಂಬ ಸ್ವಾಗತಕ್ಕೆ ಅವರ ಮನೆಯ ಕಡೆ ನಡೆದೆವು. ಪಾರ್ವತಕ್ಕನ ಮಾತಿನಲ್ಲಿ ಇಡೀ ಹಳ್ಳಿಯ ಭಾಷೆ ಮತ್ತು ಸಂಸ್ಕೃತಿಗಳ ದರ್ಶನವಾಯಿತು. ಅಲ್ಲಿ ನಮ್ಮ ಪಾಲಿಗೆ 'ಕಟ್ಟಂಚಾಯ', 'ಮೀನಿನ ಪೀಸು' ,ಸೀಬೇಕಾಯಿ.


'ಬೊಂಬಾಯಣ್ಣ'ನ ಕೋಳಿಸಾರಿಗೆ ಅದೆಂಥದ್ದೋ ಚುಂಬಕ ಶಕ್ತಿಯಿದೆ ಎಂದು ಆಮೇಲೆ ತಿಳಿದದ್ದು. ಬೊಂಬಾಯಿಯ ಹೋಟೆಲೊಂದರಲ್ಲಿ ಕೆಲಸ ಮಾಡಿದ್ದರಿಂದ ಪೂವಯ್ಯ ಎಂಬ ನಿಜನಾಮವಳಿದು ಅನ್ವರ್ಥನಾಮವೇ ಉಳಿದುಬಿಟ್ಟಿತ್ತು.


*

ಅಲ್ಲಿಗೆ ಬೆಳಿಗ್ಗೆ ಮತ್ತು ಸಂಜೆ ಬಸ್ಸು  ಬಂದು ಮುಖ ತೋರಿಸಿ ಹೋಗುತ್ತದೆ. ಮೊಬೈಲ್ ಸಿಗ್ನಲ್ ಎಲ್ಲಾದರೂ ಒಂದು 'ಕಡ್ಡಿ' ಸಿಕ್ಕಿದರೆ ಅವರ ಅದೃಷ್ಟ. ಅಷ್ಟಿಷ್ಟು ಓದಿಕೊಂಡ ಮಕ್ಕಳು ಪಟ್ಟಣ ಸೇರಿದ್ದಾರೆ. ಇರುವ ಕಾಫಿ ತೋಟ, ಭತ್ತದ ಗದ್ದೆಯಲ್ಲಿ ತಂದೆ-ತಾಯಿಯರ ಅಹೋರಾತ್ರಿ ಕೆಲಸ. ನಮ್ಮಂಥವರು ಹೋದರೆ ಸ್ವಲ್ಪವೂ ಬೇಸರಿಸದೆ ಮನೆಮಕ್ಕಳ ಹಾಗೆ ಆತಿಥ್ಯ.

ಪಕ್ಕಾ ಕಾಡುಮನುಷ್ಯನ ಹಾಗೆ ಬೆಳೆದ ನನಗೆ ಇದನ್ನೆಲ್ಲ ನೋಡಿದ ಮೇಲೆ ಈ ತಂತ್ರಜ್ಞಾನ ನಮ್ಮ ಅಸ್ತಿತ್ವವನ್ನು ಬುಡಮೇಲು ಮಾಡುತ್ತಿರುವ ಕುರಿತು ಸಿಟ್ಟು, ಸಂಕಟ ಒಟ್ಟಿಗೆ ಆಗತೊಡಗಿದೆ

*
ಕಾಜೂರು ಸತೀಶ್ 

Wednesday, October 9, 2019

ಜಿ ಕೆ ರವೀಂದ್ರಕುಮಾರ್ ಸರ್- ಅಕ್ಷರ ತರ್ಪಣ

2011ರಲ್ಲಿ ಹಳೆಯ ದೀಪಾವಳಿ ವಿಶೇಷಾಂಕಗಳನ್ನು ಗುಡ್ಡೆಹಾಕಿಕೊಂಡು ಕತೆ-ಕವಿತೆಗಳನ್ನು ಗಂಭೀರವಾಗಿ ಓದುತ್ತಾ ಕುಳಿತಿದ್ದೆ. ಕನ್ನಡ ಪ್ರಭ ವಿಶೇಷಾಂಕದ ಕಡೆಯ ಪುಟದ ಕವಿತೆ ನನ್ನನ್ನು ಹೆಚ್ಚು ಕಾಡಿದ್ದು. ಕವಿತೆ ಹೀಗೆ ಆರಂಭವಾಗಿತ್ತು:
'ಹುಟ್ಟಬಹುದಿತ್ತೇನೊ ವಿದಾಯದ ಒಂದು ಸಾಲು..'

ಕಣ್ತಪ್ಪಿನಿಂದ ಕವಿಯ ಹೆಸರು ನಮೂದಿಸಲು ಬಿಟ್ಟುಹೋಗಿತ್ತು.

ಮೊಬೈಲು ಕೈಗೆತ್ತಿಕೊಂಡು ಸಂದೇಶ ಕಳಿಸಿದೆ. 'ಆ ಕವಿತೆ ನಿಮ್ದೇ ಅಲ್ವಾ ಸರ್?  ಅತ್ತಲಿಂದ  'Yes, wonderful! Thanks'. ಆಗ ಅವರೊಂದಿಗೆ ಮಾತನಾಡಿದೆ;ಕಂಚಿನ ಕಂಠ!

ಆ 'ವಿದಾಯದ ಸಾಲು' ನಮ್ಮನ್ನು ಮತ್ತಷ್ಟೂ ಆತ್ಮೀಯರನ್ನಾಗಿಸಿತ್ತು. ಅದೇ 'ವಿದಾಯದ ಸಾಲು' ಈಗ ನನ್ನಿಂದ ಬರೆಸಿಕೊಳ್ಳುತ್ತಿದೆ! ಪ್ರಿಯ ಜಿ ಕೆ ರವೀಂದ್ರಕುಮಾರ್ ಸರ್....



ರವೀಂದ್ರಕುಮಾರ್ ಸರ್ ತೀರಿಕೊಂಡ ಸುದ್ದಿ ಕೇಳಿ ಅದನ್ನು ನಂಬುವುದಕ್ಕೆ ಗಂಟೆಗಳೇ ಹಿಡಿಸಿದವು. ಯುವತಲೆಮಾರಿನೊಂದಿಗೆ ಎಷ್ಟೊಂದು ಪ್ರೀತಿಯಿಂದ ಮಾತನಾಡುತ್ತಿದ್ದರು, ತಿದ್ದುತ್ತಿದ್ದರು,ಬೆನ್ನು ತಟ್ಟುತ್ತಿದ್ದರು, ಬೆಳೆಸುತ್ತಿದ್ದರು! ಇವತ್ತಿನ ಫೇಸ್ಬುಕ್ ಗೋಡೆಗಳ ಮೇಲೆಲ್ಲಾ ರವೀಂದ್ರಕುಮಾರ್ ಸರ್ ಅವರದ್ದೇ ಚಿತ್ರಗಳು, ಒಡನಾಟದ ನೆನಪುಗಳು.

ನಾನವರನ್ನು ಮೊದಲು ಮುಖತಃ ಭೇಟಿಯಾಗಿದ್ದು ಮಡಿಕೇರಿಯ ದಸರಾ ಕವಿಗೋಷ್ಠಿಯಲ್ಲಿ. ಕವಿ/ಸಾಹಿತಿಗಳಿಂದ ದೂರ ಉಳಿಯುವ ನನಗೆ ಅವರ ಆತ್ಮೀಯತೆ ತುಂಬಾ ಇಷ್ಟವಾಯಿತು.


ಮಡಿಕೇರಿಯಲ್ಲಿದ್ದಾಗ ಅವರ ಬರವಣಿಗೆ ಎಷ್ಟು ತೀವ್ರವಾಗಿತ್ತೆಂದರೆ ಅವರ ಲಲಿತ ಪ್ರಬಂಧ 'ಮೇಘ ಮಲ್ಹಾರ' ಹುಟ್ಟಿದ್ದೇ ಅಲ್ಲಿ. ಪ್ರಜಾವಾಣಿ ವಿಮರ್ಶೆ, silence please ,ದನಿ ಅನುದನಿಗಳ ಪ್ರಸವವೂ.

MEd ಓದಿಕೊಂಡು ಯಾವುದೋ ಶಾಲೆಯ ಮಕ್ಕಳಿಗೆ ಮೇಷ್ಟ್ರಾಗದೆ ಬಾನುಲಿಯಲ್ಲಿ ನಮ್ಮೆಲ್ಲರಿಗೂ ಮೇಷ್ಟ್ರಾಗಿದ್ದರು. ಅವರ ಸಿಡಿಲಿನಂಥ ಧ್ವನಿ, ಸ್ಪಷ್ಟ ಉಚ್ಚಾರ, ಹದವರಿತ ಏರಿಳಿತ, ಸಂದರ್ಶನದಲ್ಲಿ ಬುಲೆಟ್ಟಿನಂತೆ ಬರುತ್ತಿದ್ದ ಪ್ರಶ್ನೆಗಳು- ಇದನ್ನೆಲ್ಲ ಕೇಳಿ ಅನುಭವವಿದ್ದ ನನಗೆ ಅವರು ಆಕಾಶವಾಣಿಗೆ ಆಹ್ವಾನಿಸಿದರೂ ತಪ್ಪಿಸಿಕೊಂಡಿದ್ದೆ.

ಸಾಹಿತ್ಯ , ಸಂಗೀತ, ತತ್ವಶಾಸ್ತ್ರಗಳ ಮೇಲೆ ಅಪಾರ ಒಲವು. ಅವರ ಪ್ರಬುದ್ಧತೆಗೆ ಈ ವೀಡಿಯೊಗಳೇ ಸಾಕ್ಷಿ.


https://youtu.be/mZeKJr1xf0w
ಸಾವಿನ ಶಯ್ಯೆಯಿಂದ ಎರಡು ದಶಕಗಳ ಹಿಂದೆ ಎದ್ದು ಬಂದಿದ್ದರು. 'ಸಾವು' ಅವರನ್ನು ಅಷ್ಟು ಕಾಡಿಸಿದೆ, ಪೀಡಿಸಿದೆ. 'ಕದವಿಲ್ಲದ ಊರಿಗೆ' ಪಯಣ ಬೆಳೆಸುವ ಅನುಭವಗಳು ಅನೇಕ ಕವಿತೆಗಳಲ್ಲಿವೆ. ಮೊನ್ನೆ ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಕವಿತೆ ಕೂಡ ಅಂತಹದ್ದೇ: 'ಶುಭಂ ಎಂದಾಗ ತೆರೆಯ ಮೇಲಿನ ಕತೆ ಮುಗಿವುದು...'




ನನಗೆ ಅವರ 'ಮರವನಪ್ಪಿದ ಬಳ್ಳಿ'ಯನ್ನು ಕಳುಹಿಸಿಕೊಟ್ಟಿದ್ದರು(ನನ್ನ ಇಷ್ಟದ ಸಂಕಲನವದು).ಜೊತೆಗೆ ಅವರ ಈತನಕದ ಕವಿತೆಗಳ ವಿಮರ್ಶಾ ಸಂಕಲನವನ್ನೂ . ಮತ್ತೆ ಮತ್ತೆ ಓದಿಸಿಕೊಂಡ ಕೃತಿಗಳವು. 'ನಿಮ್ಮ ಅಂಚೆ ವಿಳಾಸ ಕೊಡಿ' ಈ ಸಂದೇಶವನ್ನು ನನ್ನ ತಲೆಮಾರು ಅವರಿಂದ ಸ್ವೀಕರಿಸಿರುವುದಕ್ಕೆ ಲೆಕ್ಕವಿಲ್ಲ.

'ಸತೀಶ್ ಭಾವಗೀತೆ ಕಳುಹಿಸಿ' ಕೇಳಿದ್ದರು. ಎರಡನ್ನು ಕಳುಹಿಸಿಕೊಟ್ಟಿದ್ದೆ. 'ಹಾಡುತ್ತಾ ಹಾಡುತ್ತಾ ಹಾಡುಗಾರರು ಹಾಡುವುದನ್ನು ನಿಲ್ಲಿಸಿಯೇಬಿಟ್ಟರು. ಏನದು ಇಮೇಜ್? ವಿವರಿಸುತ್ತೀರಾ?ಕುತೂಹಲಕ್ಕೆ ಕೇಳುತ್ತಿದ್ದೇನೆ' ಕೇಳಿದ್ದರು. ಮತ್ತೊಂದನ್ನು ಕಳುಹಿಸಿದಾಗ ಮೆಚ್ಚಿ ಸಂದೇಶ ಕಳುಹಿಸಿದ್ದರು. ಅದು ಪ್ರಸಾರವಾಗುವ ಮೊದಲೇ ಹೀಗೆ ಹೊರಟುಬಿಟ್ಟರು.


ಗೊತ್ತು, ರವೀಂದ್ರಕುಮಾರ್ ಸರ್ ಮತ್ತಷ್ಟೂ ಬಾಳುತ್ತಾರೆ ನಮ್ಮೊಳಗೆ, ಮತ್ತಷ್ಟೂ ಪ್ರೀತಿಸಲ್ಪಡುತ್ತಾರೆ.

*
ಕಾಜೂರು ಸತೀಶ್ 

Monday, October 7, 2019

ಗಾಂಧಿ ಜಯಂತಿ ,ಮೀನು, ಸ್ವಾತಂತ್ರ್ಯ,ಶಿಕ್ಷಣ, ಬದುಕು, ಇತ್ಯಾದಿ

ಗಾಂಧಿ ಜಯಂತಿ. ಆ ಶಾಲೆಯಲ್ಲಿ ಎಂಟು ಮಕ್ಕಳಿದ್ದರು.


'ಮಕ್ಳೇ, ಗಾಂಧೀಜಿ ಬಗ್ಗೆ ಏನಾದ್ರೂ ಗೊತ್ತಾ?' ಕೇಳಿದೆ. ಮುಖವನ್ನೇ ನೋಡಿದರು. ಹೂ-ಹಾರ ಹಾಕಿರುವ ಗಾಂಧಿಯ ಪಟ ತೋರಿಸಿ 'ಇವ್ರು ಯಾರೂಂತ ಗೊತ್ತಾ?' ಕೇಳಿದೆ.

'ತಾತ ಸರ್' ಮಗುವೊಂದು ಮುಗ್ಧತೆಯಿಂದ ಹೇಳಿತು.

'ಸ್ವಾತಂತ್ರ್ಯ ದಿನಾಚರಣೆ ಆಚರ್ಸ್ತೀರಲ್ವಾ?' 'ನಮ್ಮ ದೇಶ ಯಾವ್ದು ಗೊತ್ತಾ?'

ಪದವೇ ಕೇಳದವರಂತೆ ನನ್ನನ್ನೇ ನೋಡತೊಡಗಿದರು.


ಆ ಮುಗ್ಧ ಮಕ್ಕಳಿಗೆ ಅವೆಲ್ಲಾ ತಿಳಿದಿರಲಿಲ್ಲ. ಬದಲಾಗಿ ಮೀನು ಹಿಡಿಯುವುದು, ಸಾರುಮಾಡಿ ತಿನ್ನುವುದು ಮುಂತಾದ ಜೀವನ ಕೌಶಲಗಳನ್ನು ಕಲಿತಿದ್ದರು.

ಹೇಮಾವತಿ ಹಿನ್ನೀರು ಇರುವವರೆಗೆ ಆ ಶಾಲೆಯಲ್ಲಿ ಶಿಕ್ಷಣ. ನೀರು ಇಳಿದಿದ್ದೇ ತಡ ಮತ್ತೊಂದು ಊರಿಗೆ; ಮತ್ತೊಂದು ರಾಜ್ಯಕ್ಕೆ. ಹೀಗಾಗಿ ಮಕ್ಕಳಿಗೆ ಕನ್ನಡದ ಜ್ಞಾನ ಅಷ್ಟಕ್ಕಷ್ಟೆ.


ಮನೆಗೆ ಹೋದಾಗ ಚಾಪೆ ಹಾಸಿ ಕೂರಿಸಿದರು. ಗೆಳೆಯ ಜಾನ್ ಸುಂಟಿಕೊಪ್ಪ , ಸುತ್ತಮುತ್ತಲಿನ ಶಿಕ್ಷಕರು ನಮ್ಮೊಂದಿಗೆ ಕೂಡಿಕೊಂಡರು.

ಮಕ್ಕಳ ಪೋಷಕರು ಹೆಚ್ಚೆಂದರೆ ಮೂರನೇ ತರಗತಿಯವರೆಗೆ ಓದಿದವರು. 'ನಮಗೆ ಬದುಕು ಮುಖ್ಯ' ಎಂದರು. 'ಮಕ್ಕಳ ಭವಿಷ್ಯ ಮುಖ್ಯ ಅಲ್ವಾ?' ಕೇಳಿದರೆ 'ಏನ್ಮಾಡೋದು ನಾವು ಹೋದ್ರೆ ಮಕ್ಳೂ ಬರ್ತಾವಲ್ಲಾ' ಸಮರ್ಥಿಸಿಕೊಂಡರು.

ಸಿಳ್ಳೇಕ್ಯಾತ ಸಮುದಾಯಕ್ಕೆ ಸೇರಿದ ಅವರು ತಮ್ಮ ಸ್ವಂತ ಹಣದಿಂದ ದೇವಾಲಯವನ್ನು ಕಟ್ಟಿಸುತ್ತಿದ್ದರು. ಮೂರು ಲಕ್ಷದ ಯೋಜನೆ!
******************************** 

ಹೊರಗೆ ಬಂದ ಮೇಲೆ 'ಅಲ್ಲಾ ಸಾರ್ ಅವ್ರೆಷ್ಟು calm ಆಗಿದ್ರು, ನಾವು ನೋಡಿ ಆಕಾಶ ಕಳಚಿ ಬಿದ್ದವ್ರ ಹಾಗೆ ಇರ್ತೇವೆ. ನಿಜವಾದ ಸ್ವಾತಂತ್ರ್ಯವನ್ನು ಅವ್ರು ಅನುಭವಿಸ್ತಿದ್ದಾರೆ. ನಮ್ಗಿಲ್ಲ ನೋಡಿ' ಗೆಳೆಯನಿಗೆ ಹೇಳಿದೆ.

'ನಿಜ ಸಾರ್ ಅವ್ರನ್ನು ನಾವು ,ಈ ವ್ಯವಸ್ಥೆ ಎಲ್ಲಾ ಸೇರಿ ಹಾಳು ಮಾಡ್ತಿದ್ದೇವೆ. ನಮ್ಮ ಯೋಜನೆಗಳಿಂದ ಅವ್ರು ಮೀನು ಹಿಡಿಯೋದನ್ನೂ ಕಲಿಯಲ್ಲ, ಬೇರೆ ಕೆಲ್ಸಾನೂ ಕಲಿಯಲ್ಲ' ಗೆಳೆಯನ ಪ್ರತಿಕ್ರಿಯೆ.

ಪ್ರಿಯ ಗಾಂಧಿ, ಕ್ಷಮಿಸಿ ನಮ್ಮನ್ನು!
*

ಕಾಜೂರು ಸತೀಶ್

Sunday, September 29, 2019

ನಾ ಕಂಡ ಗಲ್ಲಿ ಬಾಯ್

'ಗಲ್ಲಿ ಬಾಯ್'- ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೇಶನಗೊಂಡಿದೆ. ಈ ಚಿತ್ರವನ್ನು ನೋಡಿದ ಅನೇಕ ನನ್ನ ಗೆಳೆಯರು 'ಅದು ಆಸ್ಕರ್ material ಅಲ್ಲವೇ ಅಲ್ಲ, ಹೇಗೆ ಆಯ್ಕೆಗೊಂಡಿತೋ ತಿಳಿಯುತ್ತಿಲ್ಲ'ಎನ್ನುತ್ತಿದ್ದರು.

ಗಲ್ಲಿ ಬಾಯ್ ಸಿನಿಮಾದ ಕತೆಗಿಂತ ತಂತ್ರವೇ ಹೆಚ್ಚು ಗಮನ ಸೆಳೆಯುತ್ತದೆ. ಆಸ್ಕರನ್ನು ಗಮನದಲ್ಲಿಟ್ಟುಕೊಂಡೇ ಚಿತ್ರವನ್ನು ರೂಪಿಸಲಾಗಿದೆಯೇ ಎನ್ನುವ ಅನುಮಾನವೂ ನನ್ನನ್ನು ಕಾಡಿದ್ದಿದೆ.


ಸಂಗೀತ, ಚಿತ್ರೀಕರಣ, ಎಡಿಟಿಂಗ್, ಸಂಭಾಷಣೆ- ಇವು ಚಿತ್ರದ ಗಮನಾರ್ಹ ಅಂಶಗಳು. ದನಿ ಮೊದಲು ಬಂದು ಆಮೇಲೆ ವ್ಯಕ್ತಿ ಗೋಚರವಾಗುವುದು, ಪಾತ್ರಗಳ ಚಲನೆಯನ್ನು ನೆರಳು ಬೆಳಕಿನೊಳಗೆ ಜಾದೂ ಮಾಡುತ್ತಾ ಎತ್ತರದಿಂದ ಮುಮ್ಮುಖ ಹಾಗೂ ಹಿಮ್ಮುಖವಾಗಿ ಸೆರೆಹಿಡಿಯುವುದು, ಸಹಜಾಭಿನಯ, ಕಾವ್ಯಾತ್ಮಕ ಸಾಲುಗಳು, ಸಂಭಾಷಣೆಯ ಪ್ರಬುದ್ಧ ಅಭಿವ್ಯಕ್ತಿ, ನೋಡುಗರನ್ನು ಚಕಿತಗೊಳಿಸುವ ಕೆಲವು ದೃಶ್ಯಗಳು ಈ ಚಿತ್ರದ ಹೆಚ್ಚುಗಾರಿಕೆ.

ನೈಜ ಘಟನೆಯನ್ನಾಧರಿಸಿದ ಸಿನಿಮಾವಿದು. ಕಲಾತ್ಮಕ ಚಿತ್ರಗಳಲ್ಲಿರುವ ಸಾವಧಾನ ಇಲ್ಲಿಲ್ಲ. ಮುಂಬಯಿಯ ಗಲ್ಲಿಯೊಂದರಿಂದ ಬದುಕಿನ ಬಲೆಯೊಳಗೆ ಸಿಲುಕಿ ಛಲದಿಂದ ಹೊರಬಂದು ಸುಂದರ ಬದುಕನ್ನು ಕಟ್ಟಿಕೊಳ್ಳುವ ರ್ಯಾಪರ್ ಒಬ್ಬನ ಕತೆ. ಅದರೊಳಗೆ ಪ್ರೀತಿಯ ಸೇರ್ಪಡೆ. ಕತೆ ಹೇಳುವುದರಲ್ಲಿ ಈ ಸಿನಿಮಾ ಆಸ್ಥೆ ವಹಿಸುವುದಿಲ್ಲ. ಕ್ಲೈಮ್ಯಾಕ್ಸ್ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ಸಾಮಾಜಿಕ ,ಸಾಂಸ್ಕೃತಿಕ ಆಯಾಮಗಳಿವೆಯಾದರೂ ಕಲಾತ್ಮಕ ನಿರ್ವಹಣೆಯಲ್ಲಿ ಸೋಲುತ್ತದೆ ಸಿನಿಮಾ.

ಸಂಭಾಷಣೆಯಲ್ಲಿ ಕಾವ್ಯಾತ್ಮಕ ಶ್ರಮವಿದೆ. ರಣಬೀರ್,ಆಲಿಯಾ ಅವರ ಪ್ರಬುದ್ಧ ಅಭಿನಯ ಗಮನ ಸೆಳೆಯುತ್ತದೆ. ಯಾವ ನಟ/ನಟಿಯ ಅಭಿನಯದ ಬಗ್ಗೆ ಚಕಾರ ಎತ್ತುವಂತಿಲ್ಲ- ಅಷ್ಟು ಸಹಜ ಮತ್ತು ಅದ್ಭುತ.

*
ಕಾಜೂರು ಸತೀಶ್ 

Wednesday, August 21, 2019

ವಾಲ್ಟರ್ ಹಿಲರಿ ಡಿಮೆಲ್ಲೊ- ಅಭಿವೃದ್ಧಿಯ ಹರಿಕಾರ


ವಾಲ್ಟರ್ ಹಿಲರಿ ಡಿಮೆಲ್ಲೊ ಸರ್ ಡಯಟ್ ಕೂಡಿಗೆಗೆ ಬಂದ ಮೊದಲ ವಾರದಲ್ಲಿ ಅವರ ಮಾತನ್ನು ಕೇಳಿಸಿಕೊಂಡಿದ್ದೆ. 'ನನ್ನ ಅಪ್ಪ ಕಲಿತ ಸಂಸ್ಥೆ' ಎಂದು ಅಭಿಮಾನದಿಂದ ಹೇಳಿಕೊಳ್ಳುವಾಗ ಅದರಲ್ಲಿ 'ಅದನ್ನು ಹೀಗೆ ಇಟ್ಟುಕೊಂಡಿದ್ದೀರಲ್ಲ' ಎನ್ನುವ ಕೊರಗೂ ಕಾಣಿಸುತ್ತಿತ್ತು.


ಆಮೇಲೆ ಅವರು DIETನ ಸ್ವರೂಪವನ್ನೇ ಬದಲಿಸಿಬಿಟ್ಟರು.  ಸುಣ್ಣ-ಬಣ್ಣ ಬಳಿದು ಬಾಹ್ಯ ರೂಪವನ್ನು ಚಂದಗಾಣಿಸುವಂತೆ ಮಾಡಿದ್ದಷ್ಟೇ ಅಲ್ಲ, ಅದಕ್ಕೂ ಮಿಗಿಲಾಗಿ DIETನ (ಮತ್ತು ಜಿಲ್ಲೆಯ) ಆಂತರಿಕ ಸ್ವರೂಪವನ್ನೇ ಬದಲಿಸಿಬಿಟ್ಟರು. ಸ್ವತಃ ತಾವೇ ಮೊದಲು ಕಚೇರಿಗೆ ಬರುವುದು, ಗಿಡಗಳಿಗೆ ನೀರುಹಾಕಿಸುವುದರಿಂದ ಅವರ ಕಚೇರಿಯ ಕೆಲಸಗಳು ಮೊದಲ್ಗೊಳ್ಳುತ್ತಿದ್ದವು. ಅವರ ಕೆಲಸಕ್ಕೆ ಹಗಲು-ರಾತ್ರಿಗಳ ಹಂಗಿರಲಿಲ್ಲ. 

ಅವರೊಬ್ಬ ಪಕ್ಕಾ ಡೆಮಾಕ್ರಟಿಕ್. ನಗುನಗುತ್ತಲೇ ಕೆಲಸವನ್ನು ಪೂರೈಸಿಕೊಳ್ಳುವವರು. ಪ್ರೇರಣಾದಾಯಕವಾಗಿ ಮತ್ತು ಖಡಕ್ಕಾಗಿ ಮಾತನಾಡಿ ಸೋಮಾರಿಗಳನ್ನೂ ಕೆಲಸ ಮಾಡುವಂತೆ ಮಾಡಬಲ್ಲವರು. ಕೆಲಸದ ವಿಷಯದಲ್ಲಿ ಅವರು ಯಾರೊಂದಿಗೂ ರಾಜಿ ಮಾಡಿಕೊಂಡವರಲ್ಲ.

 DDPI(development ) ಮತ್ತು DIET ಪ್ರಾಂಶುಪಾಲರಾಗಿದ್ದ ಅವರನ್ನು ನೋಡಿ ಯಾರೂ ಭಯಪಡುತ್ತಿರುಲಿಲ್ಲ; ಬದಲಾಗಿ ಅವರ ಕರ್ತವ್ಯ ಪ್ರಜ್ಞೆ ಮತ್ತು ಅವರ ಮೇಲಿನ ಗೌರವ ಉಳಿದವರನ್ನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಪ್ರೇರೇಪಿಸುತ್ತಿತ್ತು.

ಅಪಘಾತವಾಗಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಇವರು ಮರುದಿನವೇ  ಕರ್ತವ್ಯಕ್ಕೆ ಹಾಜರಾಗಿದ್ದರು!
ಪ್ರಕೃತಿ ವಿಕೋಪ ಸಂದರ್ಭದಲ್ಲಿ ಅವರು ಶ್ರಮಿಸಿದ ಪರಿ ಅದ್ಭುತ. ಚುನಾವಣಾ ಸಂದರ್ಭದಲ್ಲಿಯೂ ಅವರ ಸೇವೆ ಅನನ್ಯ.

ಇವರ ನೇತೃತ್ವದಲ್ಲಿ ಎಷ್ಟೋ ಸಭೆಗಳಲ್ಲಿ ಭಾಗವಹಿಸಿದ್ದೇನೆ. ಒಮ್ಮೆಯೂ ನಮ್ಮನ್ನು ಉಪವಾಸವಿರಿಸಿ ದಿನವಿಡೀ ಸಭೆ ಮಾಡಿದವರಲ್ಲ. ಅವರ ಖಚಿತ ನಿಲುವು, ನುಡಿದಂತೆ ನಡೆಯುವ ಬದುಕು ನಮ್ಮೆಲ್ಲರಿಗೂ ಸದಾ ಮಾದರಿ. 

ಈಗ ಅವರ ಅನುಪಸ್ಥಿತಿ ನಮ್ಮನ್ನು ತೀವ್ರವಾಗಿ  ಕಾಡುತ್ತಿದೆ. ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಬಗೆಯ ಶೈಕ್ಷಣಿಕ ಸಂಚಲನ ಮೂಡಿಸಿದ ವಾಲ್ಟರ್ ಹೆಚ್ ಡಿಮೆಲ್ಲೊ ಸರ್ ಈಗ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆಗೊಂಡು ತೆರಳಿದ್ದಾರೆ. 

ಶರಣು ಸರ್ ನಿಮ್ಮ ಕರ್ತವ್ಯ ಪ್ರಜ್ಞೆಗೆ, ಮಾನವೀಯತೆಗೆ, ಅಪಾರ ಉತ್ಸಾಹಕ್ಕೆ.

*

ಕಾಜೂರು ಸತೀಶ್ 

Tuesday, August 13, 2019

ನಾನೊಬ್ಬ ಮನುಷ್ಯ ಕಣ್ರೀ!

ಈ Whatsapp ಹುಟ್ಟಿಬಂದ ತಕ್ಷಣ ಅದನ್ನು ಒಳಗೆ ಸೇರಿಸಿಕೊಂಡಿದ್ದೆ. ಆದರೆ, ಯಾವಾಗಲಾದರೊಮ್ಮೆ ಅಂತರ್ಜಾಲದ ಸಂಪರ್ಕ ಸಿಕ್ಕಾಗ ಬರಬರನೆ ಸಾವಿರಾರು ಸಂದೇಶಗಳು ಒಮ್ಮೆಲೇ ಬಂದು ಮೊಬೈಲನ್ನು ನಿದ್ರಾವಸ್ಥೆಗೆ ದೂಡುತ್ತಿದ್ದವು.

ಆಮೇಲಾಮೇಲೆ ಅದೊಂದು ತಲೆನೋವಿನ ಸಂಗತಿಯಾಗಿ ಮೊಬೈಲೆಂಬೋ ಮನೆಯಿಂದ ಬಲವಂತವಾಗಿ ಆಚೆ ತಳ್ಳಿದ್ದೆ.

ಬದುಕು ಅಷ್ಟು ಸುಲಭವಲ್ಲ ನೋಡಿ-
ಯಾವುದು ಹಿಂಸಿಸುತ್ತದೋ, ಯಾವ ಕೆಲಸ ನಮಗೆ ಇಷ್ಟವಿಲ್ಲವೋ ಅಂತಹ ಕೆಲಸಗಳನ್ನೇ ಮಾಡಲಿಕ್ಕೆಂದು ಬದುಕಿರುವವರು ನಾವು( ಈ ಹೊಟ್ಟೆ ಅನ್ನೋದಿದೆಯಲ್ಲಾ, ಹಾಳಾದ್ದು!).

ಹಾಗಾಗಿ ದಿನದ ಸರಿಸುಮಾರು 18 ಗಂಟೆಗಳ ಕಾಲ ಅದರೊಳಗೆ 'ಬರ್ರೋ' ಸುರಿಯುವ ಪ್ರವಾಹದಲ್ಲಿ ತೇಲುತ್ತಾ ಮುಳುಗುತ್ತಾ ಸಾವಿನ ದವಡೆಯಿಂದ(ದವಡೆಗಿಂತ ಕೋರೆ ಸಮಂಜಸವೇನೊ!!) ಪಾರಾಗುತ್ತಿದ್ದೇನೆ.

ನನಗೂ ಆಟ ಆಡಬೇಕೆನಿಸುತ್ತದೆ, ಕಾಡು-ಮೇಡು ಅಲೆಯಬೇಕೆನಿಸುತ್ತದೆ, ಕತ್ತಿ-ಗುದ್ದಲಿ-ಹಾರೆ ಹಿಡಿದು ಒಂದಷ್ಟು ಕೆಲಸ ಮಾಡಬೇಕೆನಿಸುತ್ತದೆ.

Dear whatsapp, please ,believe me, I'm a human being!
*


ಕಾಜೂರು ಸತೀಶ್

Monday, August 12, 2019

ಕೇಶವ ಪೆರಾಜೆ ಮೇಷ್ಟ್ರು ಮತ್ತು ಅಳಿಯದ ನೆನಪುಗಳು

ಪುಟ್ಟ ದೇಹ,ನೀಟಾಗಿ ಶೇವ್ ಮಾಡಿದ ಮುಖ, ತೋಳಿಗೆ ಆತುಕೊಂಡಿರುವ ಮಗುವಿನಂಥ ಬ್ಯಾಗು, ತಾಂಬೂಲ ಜಗಿದು ಕೆಂಪಗಾದ ಬಾಯಿ, ದಕ್ಷಿಣ ಕನ್ನಡದ ಕಂಪುಳ್ಳ ಕನ್ನಡ... ಇವು ಕೇಶವ ಪೆರಾಜೆ ಮೇಷ್ಟ್ರ  ಬಾಹ್ಯ ಚಹರೆಗಳು.
*

ಆ ಮುಖವನ್ನು ಮೊದಲು ನೋಡಿದ್ದು ನಾನು ಒಂದನೇ ತರಗತಿಯಲ್ಲಿದ್ದಾಗ. ಅದೇ ಶಾಲೆಯಲ್ಲಿ ನನ್ನಣ್ಣ, ಅಕ್ಕನಿಗೆ ಅವರು ಕಲಿಸುತ್ತಿದ್ದುದರಿಂದ ಅವರ ಕುರಿತ ವರದಿಗಳು ನನಗೆ ಆಗಾಗ ಲಭಿಸುತ್ತಿದ್ದವು.

ಆ ಊರಿನಿಂದ ಮತ್ತೊಂದು ಊರಿಗೆ ನಾನು ಬಂದ ಮೇಲೆ, ಮತ್ತೆಂದೂ ಅವರ ದರ್ಶನವಾಗಿರಲಿಲ್ಲ. ಆಮೇಲೆ ಅವರ ದರ್ಶನವಾದದ್ದು 2006ರ ನವೆಂಬರ್ 29ಕ್ಕೆ. 
*


ನಾನು ಮಡಿಕೇರಿ ತಾಲೂಕಿನಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಮೇಷ್ಟ್ರಿಗೆ ನನ್ನ ಪರಿಚಯ ಹೇಳಿಕೊಂಡೆ. ಆಮೇಲೆ ಹಲವು ಸಾಹಿತ್ಯ ಕಾರ್ಯಕ್ರಮಗಳಲ್ಲಿ ನಾವಿಬ್ಬರು ಭೇಟಿಯಾಗುತ್ತಿದ್ದೆವು. ಕೊಡಗಿನ ಈ ತಲೆಮಾರಿನ ಬರವಣಿಗೆ ಕ್ರಮದ ಬಗ್ಗೆ ಅವರಿಗೆ ತೀವ್ರ ಅಸಮಾಧಾನವಿತ್ತು.

*

ಒಮ್ಮೆ 'ಬಾ ಟೀ ಕುಡಿಯೋಣ' ಎಂದು ಮಡಿಕೇರಿಯ ಹೋಟೆಲೊಂದಕ್ಕೆ ಕರೆದುಕೊಂಡು ಹೋದರು. ಹಣ ಕೊಡಲು ಬಿಡಲಿಲ್ಲ. ನೋಟನ್ನು ತೋರಬೆರಳು ಮತ್ತು ಮಧ್ಯಬೆರಳಿನ ನಡುವೆ ಸಿಕ್ಕಿಸಿಕೊಂಡು ಕೊಟ್ಟರು. 'ಹೀಗೆ ಕೊಡೋದಾದ್ರೆ ದುಡ್ಡೇ ಬೇಡ...ಹೀಗೆ ಹಣಕೊಟ್ಟು ನಮ್ಮ ವ್ಯಾಪಾರಕ್ಕೆ ಕಲ್ಲುಹಾಕಬೇಡಿ' ಎಂದ ಆತ(ಆ ಅಹಂಕಾರಕ್ಕೋ ಏನೋ ಈಗ ಆ ಹೋಟೆಲ್ ಮುಚ್ಚಿದೆ!). ಮೇಷ್ಟ್ರು ಏನೂ ಹೇಳದೆ ಹೊರಗೆ ಬಂದ ಮೇಲೆ 'ಹಣ ಹೇಗೆ ಕೊಟ್ಟರೇನು ಅವನಿಗೆ ಬೇಕಾದ್ದು ಹಣ ತಾನೆ?' ಎನ್ನುತ್ತಾ ಆ ಹೋಟೆಲಿನವ ತೋರಿದ ದರ್ಪದ ನಿಜವಾದ ಕಾರಣವನ್ನು ಬಿಚ್ಚಿಟ್ಟರು.

*
ನಗರ ಸಭೆ ಚುನಾವಣೆ. ಅವರ ತಂಡದಲ್ಲಿ ನಾನೂ ಇದ್ದೆ. ಅಂದು ಭಾನುವಾರವಾದ್ದರಿಂದ ಹೋಟೆಲುಗಳು ಮುಚ್ಚಿದ್ದವು. ಇಡೀ ದಿನ ಉಪವಾಸವಿದ್ದು ಕೆಲಸ ಮಾಡಬೇಕಿತ್ತು. ಮೇಷ್ಟ್ರು ಮನೆಗೆ ಕರೆ ಮಾಡಿ ಅಲ್ಲಿದ್ದವರ ಊಟ-ಉಪಚಾರವನ್ನು ತಾವೇ ಮಾಡಿದ್ದರು.
*

 ತಮ್ಮ ಪುತ್ರ ಸುಧಾಮ ಸಂತ ಮೈಕಲರ ಶಾಲೆಯಲ್ಲಿದ್ದಾಗ ನನಗೆ ಪರಿಚಯಿಸಿದ್ದರು. ಮಡಿಕೇರಿಯಲ್ಲಿ ಸಿಕ್ಕಾಗಲೆಲ್ಲ ಮನೆಗೆ ಕರೆಯುತ್ತಿದ್ದರು. ಬಿಡುವಾದಾಗ ಬರುತ್ತೇನೆ ಎಂದು ಹೇಳುತ್ತಲೇ ವರುಷಗಳನ್ನು ನೂಕಿದೆ.
*

ಮಕ್ಕಳಿಗಾಗಿ ಒಂದೆರಡು ಪುಸ್ತಕಗಳನ್ನು ಬರೆಯುತ್ತಿದ್ದೇನೆ ಎಂದಿದ್ದರು. ಯಕ್ಷಗಾನದ ಕುರಿತು ಸ್ವಲ್ಪ ಬರೆದಿಟ್ಟಿದ್ದೇನೆ, ಅದನ್ನು ಪೂರ್ಣಗೊಳಿಸಬೇಕು ಎನ್ನುತ್ತಿದ್ದರು.
*
ನಾನು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಒಂದು ವರ್ಷ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದ್ದರು. 'ಅಲ್ಲಿನ ಕರಾಳ ನೆನಪುಗಳನ್ನು ನಾನು ಮರೆಯುವುದಿಲ್ಲ' ಎನ್ನುತ್ತಿದ್ದರು. 'ಬೇಗ ಅಲ್ಲಿಂದ ತಪ್ಪಿಸಿಕೊಂಡು ಬಾ' ಎಂದು ನನಗೆ ಹೇಳುತ್ತಿದ್ದರು.
*

ಯಾವ ಸಾಹಿತ್ಯ ಕಾರ್ಯಕ್ರಮವಿರಲಿ ಅಲ್ಲಿ ಅವರ ಹಾಜರಾತಿ ಇರುತ್ತಿತ್ತು. ಅವರು ಸದಾ ಕಲೆ-ಸಾಹಿತ್ಯದ ಧ್ಯಾನದಲ್ಲೇ ಇರುತ್ತಿದ್ದರು.
*

'ಸುಧಾಮನಿಗೆ ಮದುವೆಯಾಯಿತು ಹೇಳಲು ಆಗಲಿಲ್ಲ'ಎಂದು ಆ ವೃತ್ತಾಂತವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದರು. ತಮ್ಮ ತಾಯಿ ತೀರಿಕೊಂಡಾಗ ಬಾಲ್ಯದ ದಾರುಣ ಜೀವನದ ಕುರಿತು ಕೆಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದರು. 
*

ನನ್ನ ಪುಸ್ತಕಗಳನ್ನು ಕೇಳುತ್ತಲೇ ಇದ್ದರು. ಬೈಸಿಕೊಳ್ಳುವುದು ಬೇಡ ಎಂದೇ ನಾನವರಿಗೆ ಕೊಟ್ಟಿರಲಿಲ್ಲ. ಒಮ್ಮೆಯೂ ತಮ್ಮ ಅನಾರೋಗ್ಯದ ಕುರಿತು ಅವರು ಮಾತನಾಡಿರಲಿಲ್ಲ. 'ಮಾಧವ ಹೇಗೆ ಇಂಗ್ಲೀಷ್ ಕಲಿತ ಅಂತ್ಲೇ ಗೊತ್ತಿಲ್ಲ' ಎಂದು  ತಮ್ಮ ಸಹೋದರ ಡಾ. ಮಾಧವ ಪೆರಾಜೆ(ಹಂಪಿ ವಿವಿ ಪ್ರಾಧ್ಯಾಪಕ ) ಅವರ ಬಗ್ಗೆ ಹೇಳುತ್ತಿದ್ದರು.
*

'ಒಮ್ಮೆ ನಾವೆಲ್ಲಾ ಸೇರಬೇಕು, ತುಂಬಾ ಮಾತನಾಡಬೇಕು' ಎನ್ನುತ್ತಿದ್ದರು. 'Facebookನಲ್ಲಿ ನೋಡುತ್ತೇನೆ, ನನಗೆ ಅಷ್ಟಾಗಿ ಗೊತ್ತಿಲ್ಲ, ಮಗ ಹೇಳಿಕೊಡುತ್ತಾನೆ'ಎನ್ನುವಾಗ ಮಗುತನವಿರುತ್ತಿತ್ತು ಅವರ ಮಾತಿನಲ್ಲಿ.
*
ಅವರು ಯಾರೊಂದಿಗೂ ಶತ್ರುತ್ವವನ್ನು ಕಾಯ್ದುಕೊಂಡಿರಲಿಲ್ಲ. ಯಾರಾದರೂ ಬೈದರೂ ಸುಮ್ಮನಿರುತ್ತಿದ್ದರು. ಆದರೆ ಅವರ ಒಳಗೆ ವ್ಯವಸ್ಥೆಯ ಕುರಿತ ಆಕ್ರೋಶಗಳು ತಣ್ಣಗೆ ಬೇಯುತ್ತಿದ್ದವು!
*
ಅವರಿಗೆ ತುಳುವಿನ ಬಗ್ಗೆ ಅಪಾರ ವ್ಯಾಮೋಹ. 'ಎಷ್ಟು ಕೆಟ್ಟದಾಗಿ ಈ ಜನ ತುಳು ಮಾತಾಡ್ತಾರೆ'ಎಂದು ಬೇಸರಿಸುತ್ತಿದ್ದರು. ಕಾರ್ಯಕ್ರಮಗಳಲ್ಲಿ 'ಈ ಒಂದು' ಎಂದು ಭಾಷಣಕಾರರು ಮತ್ತೆ ಮತ್ತೆ ಹೇಳುವಾಗ 'ಎಷ್ಟು ಅಸಹ್ಯ ಭಾಷೆ' ಎನ್ನುತ್ತಿದ್ದರು. ನಮ್ಮ ಮಾತು-ಕತೆಗಳೆಲ್ಲ ರಸ್ತೆಬದಿಯಲ್ಲಿಯೇ 'ನಡೆಯು'ತ್ತಿದ್ದವು! 

ನಾನು ಅಲ್ಲಿಂದ ವರ್ಗಾವಣೆಗೊಂಡು ಇಲ್ಲಿಗೆ  ಬಂದ ಮೇಲೆ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ.
*
ಜನವರಿ 31. ಅಂದು ರೇಡಿಯೋ ಕೇಳಿ ದಂಗಾದೆ. ಮೇಷ್ಟ್ರು ತೀರಿಕೊಂಡ ಸುದ್ದಿ ನಂಬಲಾಗಲಿಲ್ಲ. ಈಗಲೂ ನಂಬಲಾಗುತ್ತಿಲ್ಲ.ಕುಳಿತಿದ್ದವರು ಎದ್ದು ನಡೆದುಹೋದ ಹಾಗೆ ಹೋಗಿಬಿಟ್ಟರು ಅವರು.
*

ಪೆರಾಜೆಗೆ ಹೋದಾಗ ಅವರ ಮನೆ ಹುಡುಕಿಕೊಂಡು ಹೋಗಿ ಸಿಗದೆ ಹಿಂತಿರುಗಿದ್ದೆ.
*
ಮೇಷ್ಟ್ರ ಜೊತೆಗಿನ ಒಡನಾಟದ ನೆನಪುಗಳು ಎಂದೂ ಅಳಿಯಲಾರವು.

*

ಕಾಜೂರು ಸತೀಶ್

Monday, July 29, 2019

ಶಿಕ್ಷಣ ಮತ್ತು ವೃತ್ತಿ


ನಾವು ಏನೋ ಕಲಿತಿರುತ್ತೇವೆ. ಯಾವುದೋ ಕ್ಷೇತ್ರದಲ್ಲಿ ವಿಶೇಷತೆಯನ್ನು ಗಳಿಸಿಕೊಂಡಿರುತ್ತೇವೆ. ನಮಗೆ ಯಾವುದೋ ಒಂದು ಕ್ಷೇತ್ರದಲ್ಲಿ ದುಡಿಯುವ ಇಚ್ಛೆಯಿರುತ್ತದೆ.

ತಮಾಷೆಯೆಂದರೆ, ನಾವು ಓದಿರುವುದಕ್ಕೂ ಮಾಡುತ್ತಿರುವ ಕೆಲಸಕ್ಕೂ ಪರಸ್ಪರ ಸಂಬಂಧವೇ ಇರುವುದಿಲ್ಲ. PhD ಮಾಡಿದಾತ ಕನಿಷ್ಟ ಒಂದು ಡಿ ಗ್ರೂಪ್ ಕೆಲಸ ಸಿಕ್ಕಿದರೂ ಸಾಕು ಎಂದು ಕನಸು ಕಾಣುತ್ತಾನೆ. ಇಂಜಿನಿಯರಿಂಗ್ ಓದಿದಾತ ಬ್ಯಾಂಕಿನಲ್ಲಿ ಕಂಪ್ಯೂಟರ್ ಕುಟ್ಟುತ್ತಾ ಕುಳಿತಿರುತ್ತಾನೆ. ರಸವತ್ತಾಗಿ ಸಾಹಿತ್ಯ ಹೇಳಿಕೊಡಬಲ್ಲವನಿಗೆ ಗುಮಾಸ್ತನ ಕೆಲಸ. ಕಾಗುಣಿತ ಬರದ ವ್ಯಕ್ತಿ ಭಾಷಾ ಶಾಸ್ತ್ರದ ಪ್ರೊಫೆಸರ್!

ನಮ್ಮ ನಮ್ಮ ಆಸಕ್ತಿಯ ಕ್ಷೇತ್ರಗಳಿಗೆ ನಮ್ಮನ್ನು ನಿಯೋಜಿಸಿಬಿಟ್ಟರೆ ಬದುಕು ಮತ್ತು ಈ ಜಗತ್ತು ಎಷ್ಟು ಚೆನ್ನಾಗಿರುತ್ತಿತ್ತು!

ಕಬಡ್ಡಿ ಆಟಗಾರನ ಮೇಲೆ ಚೆಸ್ ಹೇರುವ ಲೋಕದ ಕಪಾಳಕ್ಕೆ ಬಾರಿಸಲು ಯಾವ ಕೆರ ಹೊಂದುತ್ತದೆ ಎಂದು ಯೋಚಿಸುತ್ತಾ ಕುಳಿತಿದ್ದೇನೆ...
*

ಕಾಜೂರು ಸತೀಶ್

Saturday, July 27, 2019

ಸರ್ಕಾರಿ ಕೆಲಸ ಮತ್ತು ರಾಜಕಾರಣ

ಒಬ್ಬಾತ ಸರ್ಕಾರಿ ನೌಕರನಾಗಿದ್ದು ಪ್ರಭಾವಿ ರಾಜಕಾರಣಿಗಳ ನಂಟಿದೆಯೆಂದರೆ(ಬಕೇಟ್ ಹಿಡಿಯಲು ತಿಳಿದಿದ್ದರೆ) ಆತ ಕೆಲಸ ಮಾಡಬೇಕೆಂದೇನೂ ಇಲ್ಲ!

ಒಬ್ಬಾತ ಪ್ರಾಮಾಣಿಕ ಕೆಲಸಗಾರನಾಗಿದ್ದರೆ ಮೇಲೆ ಹೇಳಿದ ಪುಣ್ಯಾತ್ಮನ ಕೆಲಸಗಳೆಲ್ಲ ಇವನ ಹೆಗಲಿಗೇರುತ್ತದೆ.

ರಾಜಕಾರಣದ ಈ ಬಗೆಯ ಹೊಲಸು ಪ್ರವೇಶ ನಮ್ಮ ನಾಡನ್ನು ಮಂಕಾಗಿಸುತ್ತದೆ.

ಡೆಮಾಕ್ರಸಿಯ ಆತ್ಮದಲ್ಲಿ ಸರ್ವಾಧಿಕಾರವು ಕುಳಿತು ಆಳುತ್ತಿರುತ್ತದೆಯೇ?
*

ಕಾಜೂರು ಸತೀಶ್ 

Friday, July 26, 2019

ತಂತ್ರಜ್ಞಾನ ಮತ್ತು ನೆಮ್ಮದಿ

ನನಗೆ ಯಾವಾಗಲೂ ಅನಿಸುತ್ತಿರುತ್ತದೆ- ಇರುವಷ್ಟು ಕಾಲ ನಾವು ಏನನ್ನಾದರೂ ಸಾಧಿಸಿ ಪಡೆಯಬೇಕಿರುವುದಿದ್ದರೆ, ಅದು 'ನೆಮ್ಮದಿ'.

ನೆಮ್ಮದಿಯ ಗಳಿಕೆಗಿರುವ ಅತ್ಯಂತ ದೊಡ್ಡ ತೊಡಕೆಂದರೆ 'ತಂತ್ರಜ್ಞಾನ'. ಅದು ಮೆದುಳನ್ನು ದಾಸನನ್ನಾಗಿ ಮಾಡುತ್ತದೆ. ನಾವು ಒಡೆಯರಾಗಿದ್ದುಕೊಂಡೇ ಅದರ ಗುಲಾಮರಾಗಿಬಿಡುತ್ತೇವೆ. ಸುಲಭೀಕರಣದ ಬಲೆಗೆ ಸಿಲುಕಿ ಒದ್ದಾಡುತ್ತೇವೆ. ಅದರೆದುರು ನಮ್ಮ ದೇಹ ಮತ್ತು ಮನಸ್ಸು ಜಡವಾಗಿಬಿಡುತ್ತವೆ. ಆದರೂ ನಾವು ಬೆವರು ಹರಿಸಿ ದುಡಿಯುವವರಂತೆ ಪೋಷಾಕು ತೊಡುತ್ತೇವೆ. ಒತ್ತಡದಲ್ಲಿ ಸಾಯುತ್ತೇವೆ.

ಎಲ್ಲ ಕೆಲಸಗಳಲ್ಲೂ ತಂತ್ರಜ್ಞಾನವು ಎಷ್ಟು ಸಹಕರಿಸುತ್ತದೋ ಅದರ ದುಪ್ಪಟ್ಟು ಒತ್ತಡವನ್ನು ಬಿಟ್ಟಿಯಾಗಿ ವಿತರಿಸುತ್ತದೆ. ಹಾಗೆ ಒತ್ತಡ ಹೇರಿ ಮಾಡಿಸುವ ಕಾರ್ಯದ ಫಲಿತಾಂಶ ಮಾತ್ರ ಶೂನ್ಯ ಅಥವಾ ನಿರರ್ಥಕ.

*


ಕಾಜೂರು ಸತೀಶ್ 

Tuesday, July 23, 2019

ಹುಟ್ಟು, ಜನ್ಮದಿನ ಮತ್ತು ಸಾವಿನ ನಡುವೆ

ಫೇಸ್ಬುಕ್ಕಿಗೆ ಬರುವವರೆಗೆ ನನ್ನ ಜನ್ಮದಿನಾಂಕವನ್ನು ಗುಟ್ಟಾಗಿ ಇಟ್ಟುಕೊಂಡಿದ್ದೆ. ಫೇಸ್ಬುಕ್ಕಿನಿಂದ ಹೈಡ್ ಮಾಡುವಷ್ಟರಲ್ಲಿ ಸುಮಾರು ಜನರ ನೆನಪಿನೊಳಗೆ ಅದು ಸಿಕ್ಕಿಹಾಕಿಕೊಂಡಿತ್ತು.

ನನ್ನ ಜನ್ಮದಿನ ಉಳಿದೆಲ್ಲ ದಿನಗಳಂತೆ ಒಂದು ಸಾಮಾನ್ಯ ದಿನ. ಅದನ್ನು ಹಬ್ಬದಂತೆ ಆಚರಿಸುವುದು ನನ್ನಿಂದ ಅಸಾಧ್ಯ. ಮರಣದ ಕಡೆಗಿನ ಪಯಣ ಒಂದು ಕಡೆ, ಏನನ್ನಾದರೂ ಮಾಡಬೇಕೆಂಬ ತುಡಿತ ಮತ್ತೊಂದು ಕಡೆ. ಅದಕ್ಕಾಗಿ ನಿಸರ್ಗ ಸಹಜ ವಾಂಛೆಗಳನ್ನೆಲ್ಲ ಹತ್ತಿಕ್ಕಿ ಈ ಕ್ಷಣಗಳನ್ನಷ್ಟೇ ಬಾಳುತ್ತಾ ಬದುಕು ಕಟ್ಟಿಕೊಳ್ಳುತ್ತಿರುವವನು ನಾನು.

ನೋವು-ನಲಿವುಗಳನ್ನು ಸ್ಥಿತಪ್ರಜ್ಞತೆಯಿಂದ ಸ್ವೀಕರಿಸಬೇಕೆನ್ನುವುದು ನನ್ನ ತರ್ಕ(ಅದು ಸಾಧ್ಯವಿಲ್ಲದಿದ್ದರೂ). ನೋವನ್ನು ಸಹಿಸುವ ವಿಧಾನವೆಂದರೆ ನಲಿವನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದಿರುವುದು. ಹುಟ್ಟನ್ನು, ಹುಟ್ಟುಹಬ್ಬವನ್ನು ಸಂಭ್ರಮಿಸುವಾಗ ಸಾವನ್ನು ಸಹಜವಾಗಿ (ಸಂಭ್ರಮಿಸುವುದು ಬೇಡ!) ಸ್ವೀಕರಿಸುವ ಸವಾಲನ್ನು ಎದುರಿಸಬೇಕು.

ಇದರ ನಡುವೆ, ಈ ಹುಟ್ಟುಹಬ್ಬದ ಹಾರೈಕೆಗಳಲ್ಲಿ ಕೆಲವಾದರೂ ನಿಜದ ಪ್ರೀತಿಯನ್ನು ಮೈದುಂಬಿಕೊಂಡಿರುತ್ತದೆ; ಆಚರಿಸದಿದ್ದರೂ ಆ ದಿನವನ್ನು ಲವಲವಿಕೆಯಿಂದಿಟ್ಟಿರುತ್ತದೆ.
*


ಕಾಜೂರು ಸತೀಶ್ 

Monday, July 22, 2019

ಕಾಯಿಲೆ, ಒಳ್ಳೆಯತನ ಮತ್ತು...

ಒಂದು ತರಬೇತಿಯಲ್ಲಿ ನಾನವರನ್ನು ಮೊದಲ ಬಾರಿಗೆ ನೋಡಿದ್ದು. ಅವರು ಬೇರೆ ಜಿಲ್ಲೆಯಿಂದ ವರ್ಗಾವಣೆಯಾಗಿ ಬಂದಿದ್ದರು.

ಅವರು ನನ್ನ ಗುಂಪಿನಲ್ಲಿದ್ದರು. ನಮಗೆ ಸೂಚನೆ ಸಿಕ್ಕಿತ್ತು: "ಇಷ್ಟು ನಿಮಿಷದ ಒಳಗೆ ಯಾರು ಹೆಚ್ಚು ಪದರಚನೆ ಮಾಡುತ್ತಾರೋ ಆ ತಂಡವು ಗೆಲುವನ್ನು ತನ್ನದಾಗಿಸುತ್ತದೆ".

ಸಮಯ ಮೀರಿದರೂ ಉಳಿದ ತಂಡಗಳು ತಮ್ಮ ಅಂಕವನ್ನು ಹೆಚ್ಚಿಸಿಕೊಳ್ಳುವ ಅನ್ಯಮಾರ್ಗವನ್ನು ಹಿಡಿದಿದ್ದವು. ಇವರು ಮಾತ್ರ- 'ಸಮಯ ಮುಗಿದಿದೆ, ಇನ್ನು ನಾನು ಮಾಡುವುದಿಲ್ಲ, ತಂಡ ಸೋತರೂ ಪರವಾಗಿಲ್ಲ' ಎಂದು ಸುಮ್ಮನೆ ಕುಳಿತುಬಿಟ್ಟರು.

ಆ ಕ್ಷಣ ನಾನವರಿಗೆ ಏನೂ ಹೇಳಲಿಲ್ಲ. ಬದಲಾಗಿ, ಆ ಕ್ಷಣವನ್ನು ನನ್ನೊಳಗೆ ತುಂಬಿಕೊಳ್ಳತೊಡಗಿದೆ. ಅವರ ಬಗ್ಗೆ ಗೌರವ ಭಾವವೊಂದು ನನ್ನೊಳಗೆ ಟಿಸಿಲೊಡೆದಿತ್ತು.

ಅಂತಹ ಒಳ್ಳೆಯ ವ್ಯಕ್ತಿಯನ್ನು ಒಂದು ಭೀಕರ ಕಾಯಿಲೆ ಬಂದು ಅಪ್ಪಿಕೊಂಡಿದೆ ಎಂಬ ಸುದ್ದಿ ಕೇಳಿ ಕುಸಿದುಹೋದೆ. ಒಂದು ಕ್ಷಣ ಜನರು ಹಳಿಯುವ 'ವಿಧಿ'ಯ ನೆನಪಾಯಿತು.
ಆದರೆ ವಾಸ್ತವವಾಗಿ ಆ ಕಾಯಿಲೆಗೂ, ಅವರ ಒಳ್ಳೆಯತನಕ್ಕೂ ಯಾವ ಬಗೆಯ ಸಂಬಂಧವೂ ಇಲ್ಲ ಎಂದುಕೊಂಡು ಮತ್ತದೇ ಶೂನ್ಯದೊಳಗೆ ಸೇರಿಕೊಂಡೆ.

*

ನನಗೆ ಆಗಾಗ ಒಂದು ಕರೆ ಬರುತ್ತದೆ. ನಾನು ನನ್ನ ಕೈಯಿಂದ ಇಷ್ಟು ಸಾವಿರ ಹಣವನ್ನು ಶಾಲೆಗಾಗಿ ಖರ್ಚುಮಾಡುತ್ತೇನೆ ಎಂದು ಬೊಗಳೆಬಿಡುತ್ತದೆ ಆ ದನಿ. ಇರೋಬರೋದನ್ನೆಲ್ಲಾ ಕೊಳ್ಳೆಹೊಡೆಯುವ ಪ್ರವೃತ್ತಿಯ ಆ ದನಿಗೆ ಮತ್ತು ಅದನ್ನು ಆವರಿಸಿಕೊಂಡಿರುವ ಆ ದೇಹಕ್ಕೆ, ಅದಕ್ಕಿರುವ ಹೆಸರಿಗೆ ಹೀಗೆ ಹೇಳಿಕೊಳ್ಳಲು ನಾಚಿಕೆ-ಮಾನ-ಮರ್ಯಾದೆಯಾದರೂ ಬೇಡವೇ? ಎಂದು ನನ್ನನ್ನು ನಾನು ಕೇಳಿಕೊಂಡು ಈ ಜಗತ್ತಿಗೆ ಒಗ್ಗಿಕೊಳ್ಳಲು ಹವಣಿಸುತ್ತೇನೆ!
*


ಕಾಜೂರು ಸತೀಶ್

Saturday, July 13, 2019

ಸರ್ಕಾರಿ ವ್ಯವಸ್ಥೆ ಮತ್ತು ಶಿಕ್ಷೆಯಿಲ್ಲದ ಕಗ್ಗೊಲೆ!

'ಅವನು ಕೆಲಸ ಮಾಡುತ್ತಾನೆ, ಅವನಿಗೆ ಇನ್ನಷ್ಟೂ ಕೆಲಸವನ್ನು ವಹಿಸಿಬಿಡಿ'

'ಇವನು ಏನೂ ಮಾಡುವುದಿಲ್ಲ, ಇವನಿಗೆ ಯಾವ ಕೆಲಸವನ್ನೂ ವಹಿಸದಿರಿ'

ಹೀಗೆ ದುಡಿಯುವವರ ಮೇಲೆ ಕೆಲಸಗಳನ್ನು ಹೇರಿ, ಒತ್ತಡಕ್ಕೆ ಸಿಲುಕಿಸಿ ಕೊಲೆಗೈಯ್ಯುವ,

ದುಡಿಯದವರನ್ನು ಕೊಬ್ಬಿಸಿ ಪೋಷಿಸುವ bureaucracyಗೆ ಯಾವ ಶಿಕ್ಷೆಯೂ ಇಲ್ಲ. ಶಿಕ್ಷೆಯ ಮಾತಿರಲಿ- ಉಳಿಯುವ ಆ 'ಜಾಣ ಸೋಮಾರಿವರ್ಗ'ದಿಂದ ನಮ್ಮ ಸಮಾಜಕ್ಕೆ ಎಂತಹ ಸೇವೆಯಾದರೂ ಸಲ್ಲುತ್ತದೆ?

ನಾವು ಯಾಕೆ ಹಿಂದುಳಿಯುತ್ತೇವೆ ಎಂದರೆ....
*

ಕಾಜೂರು ಸತೀಶ್

Saturday, June 8, 2019

ಒಂದೇ ಒಂದು ಅಕ್ಷರ

ಒಂದು ಅಕ್ಷರವನ್ನು
ನಿನಗೆ ಉಡುಗೊರೆಯಾಗಿ ನೀಡುತ್ತೇನೆ
ಹೊಚ್ಚ ಹೊಸತು
ವರ್ಣಮಾಲೆಯಲ್ಲಿಲ್ಲದ್ದು

ಆ ಒಂದಕ್ಷರದಲ್ಲಿ
ನೀನೊಂದು ಕವಿತೆಯ ಹಡೆದುಬಿಡು
ಹುಟ್ಟಲಿಚ್ಛಿಸಿದ ಕತೆಯೊಂದನ್ನು
ಹೂವಂತೆ ಅರಳಿಸಿಬಿಡು

ಆ ಒಂದಕ್ಷರದಲ್ಲಿ
ನಿನ್ನ ಪ್ರೀತಿಯನ್ನು
ವಸಂತವಾಗಿ ಅರಳಿಸು
ಗೆಳತಿಗೊಂದು ಚೆಲುವಾದ ಪತ್ರ ಬರೆ

ಆ ಒಂದೇ ಒಂದಕ್ಷರದಲ್ಲಿ
ಅಕ್ಷರಲೋಕದ ಸಾಮ್ರಾಟನಾಗು
ಅರ್ಥಗಳ ಮಾತಿನೊಳಗೆ ತುಂಬಿ ಕಗ್ಗಾಡಾಗಿಸು

ಆಮೇಲೆ
ಆ ಒಂದಕ್ಷರವನ್ನು
ಮಹಾಸಾಗಾರದಲ್ಲಿ ತರ್ಪಣವಾಗಿ ತೇಲಿಬಿಡು
ಹಿಂತಿರುಗಿ ನೋಡದೆ
ಬದುಕಿನತ್ತ ನಡೆದುಬಿಡು.
*

 ಮಲಯಾಳಂ ಮೂಲ- ಜ್ಯೋತಿ ಮದನ್

 ಕನ್ನಡಕ್ಕೆ - ಕಾಜೂರು ಸತೀಶ್

Friday, June 7, 2019

ಸ್ತ್ರೀ

ಕೊತಕೊತ ಕುದಿದು ಬೆಂದ
ಅನ್ನ ಬಸಿಯುವಾಗಲೂ..

ಮೂಗು ಬಾಯಿ ಕಟ್ಟಿ
ಬಲೆ ಹೊಡೆಯುವಾಗಲೂ..

ಮೇಯುವ ಕೋಳಿಮರಿಗಳ ಹಿಡಿಯ ಬಂದ
ಗಿಡುಗವನ್ನೋಡಿಸುವಾಗಲೂ..

ಕೊಟ್ಟಿಗೆಯಲ್ಲಿ ಸೆಗಣಿ ಬಾಚುವಾಗಲೂ..

ಇವೆಲ್ಲಾ ಬದುಕಿರುವವರ ಪಾಲಿನ ಅನಂತ ಸಾಧ್ಯತೆಗಳೆಂದು
ಹತ್ತನೇ ತರಗತಿಯ ಫಲಿತಾಂಶ ನೋಡಿ ಬಂದ
ಮಗುವಿಗೆ ಹೇಳಿದಂತೆ ಅಮ್ಮ ನೆನಪಿಸುತ್ತಿದ್ದಳು

ಮಂಚದ ಕೆಳಗೆ
ಬಿಳಿವಸ್ತ್ರದೊಳಗೆ ಮಲಗಿರುವ
ಅಜ್ಜಿಯ ಮುಖವನ್ನು ಗೀಚುವ
ನಾನದನ್ನು ಕೇಳಿಸಿಕೊಳ್ಳುತ್ತಲೇ ಇಲ್ಲ!

*

 ಮಲಯಾಳಂ ಮೂಲ- ವಿದ್ಯಾ ಪೂವಂಚೇರಿ

 ಕನ್ನಡಕ್ಕೆ- ಕಾಜೂರು ಸತೀಶ್

Thursday, June 6, 2019

A+



ಒಂದೇ ಒಂದು A+ ಕೂಡ ಸಿಗದ
ಮಗುವಿನ ಮನೆಗೆ ಹೋದೆ
ಹಾಲು ಕರೆಯುತ್ತಿತ್ತು ಕೊಟ್ಟಿಗೆಯಲ್ಲಿ.

ಒಮ್ಮೆ ನನ್ನನ್ನು ಮತ್ತೊಮ್ಮೆ ಮಗುವನ್ನು ದಿಟ್ಟಿಸಿದ ಹಸು
ಹುಲ್ಲು ಕುಯ್ಲಿಕ್ಕೆ ಬರುತ್ತಾ?
ನನ್ನ ಬಿಚ್ಚಿ ಮೇಯ್ಸಿ ಕಟ್ಲಿಕ್ಕೆ ಬರುತ್ತಾ?
ಕೇಳಿತು ನನ್ನನ್ನು
ಇಲ್ಲ ಎನ್ನುತ್ತಾ ಹಳದಿ ಕಕ್ಕೆಹೂವಿನ ಮೇಲೆ ಕಣ್ಣುನೆಟ್ಟು ತಪ್ಪಿಸಿಕೊಂಡೆ

ಇದೇ ಹಾದಿಬದಿಯಲ್ಲೊಂದು ಗೆಳೆಯನ ಮನೆ
ಈಗ ಅದಕ್ಕೆ ಬೀಗ ಜಡಿದಿದ್ದಾರೆ
ಅಲ್ಲಿ ಹುಲ್ಲು ಗೆದ್ದಲುಗಳು
ಅವನಿಗಿಂತಲೂ ಸುಖವಾಗಿ ಬದುಕುತ್ತಿವೆ

ಇನ್ನೇನ್ ಸಮಾಚಾರ? ಕೇಳಿದೆ
ಕುಡಿಯಲು ನೀರುಕೊಟ್ಟು
ಬಿಸಿಲ ಪರೀಕ್ಷೆಯಲ್ಲಿ ಉತ್ತೀರ್ಣನಾದ ಮಗು
ಎದುರಿಗೆ ಬಂದು ನಿಂತಿತು
ಹಸು ಅದನ್ನು ನೆಕ್ಕುತ್ತಿದೆ
ಅಮ್ಮ ಇಲ್ವಾ? ಕೇಳಿದೆ
ಒದ್ದೆ ಕಣ್ಣುಗಳು!

ಕರು ಅಂಬೇ ಎಂದು ಕರೆಯಿತು ಮಗುವ
ನಾನು ಹೊರಟುಹೋದೆ

ನನ್ನೊಳಗೆ ಈಗ A+ ಸಿಗದ ಒಂದು ಮಗು
ದೋಣಿಯಲ್ಲಿ ಸಂಚರಿಸುತಿದೆ
ಅದು ಅದರ ಅಮ್ಮನ ಅಪ್ಪುಗೆಯಲ್ಲಿದೆ
ನಡೆಯುವಾಗಲೂ ಇಬ್ಬರು ಒಟ್ಟೊಟ್ಟಿಗೆ

ನನ್ನ ಮನೆಯಲ್ಲಿ ಹಸುವಿಲ್ಲ
ಅದಕ್ಕೆ ತಿನ್ನಿಸಲು ನನಗೆ ಬರುವುದಿಲ್ಲ

ನದಿ ಮಳೆಯತ್ತ ಕೈಚಾಚುತಿದೆ
ನಾನೀಗ ಅಮ್ಮ ತೀರಿಕೊಂಡರೂ ಬದುಕುತ್ತಿರುವ
ಒಂದು ಮನೆಯತ್ತ ಹೊರಟಿದ್ದೇನೆ

ಅಲ್ಲೊಂದು ಮಾವಿನ ತೋಪು
ಒಂದು ಮಾವಿನ ಹಣ್ಣು
ನನಗಾಗಿ ಕಾಯುತ್ತಿದೆ

ಅಮ್ಮ ಹೇಳಿದಳು
ಅಲ್ನೋಡು A+
ತಗೋ ಅದನ್ನು!
*

ಮಲಯಾಳಂ ಮೂಲ- ಮುನೀರ್ ಅಗ್ರಗಾಮಿ

ಕನ್ನಡಕ್ಕೆ -ಕಾಜೂರು ಸತೀಶ್

Tuesday, June 4, 2019

ಖಾಲಿ

ಈ ಕೆಲಸಕ್ಕೆ ಸೇರಿ ಒಂದು ವರ್ಷವಷ್ಟೇ ಆಗಿದ್ದು. ನನ್ನ ಬದಲಾವಣೆಯು ಇವತ್ತು ಅರಿವಿಗೆ ಬಂತು! ನಾನು ನಿಜಕ್ಕೂ ಶೂನ್ಯವನ್ನು ಅಪ್ಪಿಕೊಳ್ಳುವುದರೆಡೆಗೆ ಚಲಿಸುತ್ತಿದ್ದೇನೋ ಏನೋ.

ನಾನು ಮಾತನಾಡಬೇಕಿತ್ತು. ತಡಕಾಡಿದೆ, ಹೆಣಗಾಡಿದೆ. ಶಬ್ದಗಳು, ವಿಚಾರಗಳು ಅಷ್ಟು ದೂರದಲ್ಲಿ ನಿಂತು ನನ್ನನ್ನು ಅಣಕಿಸುತ್ತಿದ್ದವು; ಕೇಕೆ ಹಾಕುತ್ತಿದ್ದವು. ಬಟಾಬಯಲಾಗುತ್ತಿದ್ದೆ ನಾನು.

ಇನ್ನು ಇದರೊಳಗೆ ಇರುವಷ್ಟು ಕಾಲ ನನ್ನ ಸೃಜನಶೀಲತೆ ಸತ್ತು ಮಣ್ಣಾಗಲಿದೆ. ಸೃಜನಶೀಲತೆಯೇ ಇಲ್ಲದ ಮೇಲೆ ನನ್ನ ಅಸ್ತಿತ್ವವಾದರೂ ಎಲ್ಲಿ?

ಮನುಷ್ಯರನ್ನು ಹೀಗೂ ಕೊಲ್ಲಬಹುದಲ್ಲಾ?!
*

ಕಾಜೂರು ಸತೀಶ್

Thursday, May 16, 2019

ಮೋಸ

ಹರಿವು ನಿಲ್ಲಿಸಿ
ಸಾಯುವ ಕಡೇ ಕ್ಷಣದಲ್ಲಿ
ನದಿಯು ಹಾದಿಯೊಡನೆ ಉಸುರಿತು:

'ಸಮುದ್ರವನ್ನು ನೋಡಲು ಸಾಧ್ಯವಾದರೆ
ನಾನು ಶ್ರಮಿಸಿದ್ದೆ ಎಂದು ಹೇಳಬೇಕು'

ಅಷ್ಟರಲ್ಲಾಗಲೇ
ಹಾದಿಯ ಮರಳಕಣ
ಮರುಭೂಮಿಯೊಡನೆ
ರಹಸ್ಯ ಮಾತುಕತೆ ಆರಂಭಿಸಿತ್ತು!
*

 #ಮಲಯಾಳಂ ಮೂಲ- ಜಿನೇಶ್ ಮಡಪ್ಪಳ್ಳಿ

#ಕನ್ನಡಕ್ಕೆ - ಕಾಜೂರು ಸತೀಶ್

Monday, May 13, 2019

ಮಳೆ'ಹನಿ'

ಮಳೆ ನಿಂತಿದೆ
ಮರಕ್ಕೀಗ ಮೋಡದ ಕೆಲಸ!
*
ಮಳೆ ನಿಂತಿದೆ
ಮೋಡ ದಣಿವಾರಿಸಿಕೊಳ್ಳುತ್ತಿರುವಾಗ
ಮರವದರ ಬೆವರೊರೆಸಿಕೊಡುತ್ತಿದೆ!
*
ಮಳೆ ನಿಂತಿದೆ
ಒದ್ದೆಯಾದ ಗಾಳಿ ಮೈಕೊಡವುತ್ತಿದೆ!
*
ಮಳೆ ನಿಂತಿದೆ
ಮರ ಮಾತಿಗಿಳಿದಿದೆ!
*
ಮಳೆ ನಿಂತಿದೆ
ನಕ್ಷತ್ರಗಳು ನಿದ್ದೆಗೆ ಜಾರಿವೆ!
*

ಕಾಜೂರು ಸತೀಶ್

Sunday, May 5, 2019

ಪುನರಪಿ ಮರಣ ಮತ್ತು ನಡುವಿನ ಇಷ್ಟೇ ಇಷ್ಟು ಬದುಕು

ವಿದ್ಯುತ್ತಿಲ್ಲದ ಒಂದು ರಾತ್ರಿ. ಅವರು ಹೊರಡಲಣಿಯಾದರು. ನಾನು 'ಟಾರ್ಚ್ ತಗೊಂಡ್ಹೋಗಿ ಸಾರ್' ಎಂದೆ. 'ಬೇಡಬಿಡಿ' ಎಂದರು. ಮೂರ್ನಾಲ್ಕು ಹೆಜ್ಜೆ ಮುಂದೆ ಹೋದವರು ನಿಮಿಷದ ನಂತರ ಮತ್ತೆ ಬಂದರು. 'ತುಂಬಾ ಕತ್ತಲು, ಟಾರ್ಚ್ ಕೊಡಿ' ಎಂದರು. ಮತ್ತೆ ಹೊರಟವರು ಎರಡು ನಿಮಿಷಗಳ ಕಳೆದ ಮೇಲೆ ಏದುಸಿರು ಬಿಡುತ್ತಾ ಬಂದರು. 'ಮೇಷ್ಟ್ರೇ...ಇವತ್ತೇನಾದ್ರೂ ಟಾರ್ಚ್ ತಗೊಂಡ್ಹೋಗಿಲ್ಲ ಅಂದಿದ್ರೆ ಔಟ್ ಮೇಷ್ಟ್ರೇ ನಾನು... ಕರೆಂಟ್ ಲೈನ್ ಕಟ್ಟಾಗಿ ರೋಡಲ್ಲಿ ಬಿದ್ದಿದೆ, ಕರೆಂಟ್ ಇದೆ ಅದ್ರಲ್ಲಿ' ಎಂದರು.

'ಸಾವು' ಎಂದರೆ ಹಾಗೆ. ಎಲ್ಲೆಲ್ಲೋ ಹೇಗ್ಹೇಗೋ ಹೊಂಚುಹಾಕಿ ಕುಳಿತಿರುತ್ತದೆ. ಒಂಬತ್ತು ವರ್ಷಗಳ ಹಿಂದೆ, ಇದನ್ನು ಬರೆಯುತ್ತಿರುವ ಈ ದಿವಸದಂದು(ಮೇ 5) ಮೇಷ್ಟ್ರೊಬ್ಬರ ತಲೆಮೇಲೆ ಅಡಿಕೆ ಮರ ಬಿದ್ದು ಸ್ಥಳದಲ್ಲೇ ಅಸುನೀಗಿದ್ದರು. ಆಗಿದ್ದಿಷ್ಟು: ಅಡಿಕೆ ಮರವನ್ನು ಕಡಿಸುತ್ತಿದ್ದರು. ಇನ್ನೇನು ಮರ ಬೀಳಬೇಕೆನ್ನುವಷ್ಟರಲ್ಲಿ 'ಸ್ವಲ್ಪ ದೂರ ನಿಲ್ಲಿ ಮೇಷ್ಟ್ರೇ' ಎಂದಿದ್ದಾರೆ ಮರ ಕಡಿಯುವವರು. ಇವರು ಪಕ್ಕಕ್ಕೆ ಸರಿಯುವಾಗ ಅದುವರೆಗೆ ನೋಡಿರದ ಗುಂಡಿಯೊಂದರಲ್ಲಿ ಕಾಲು ಸಿಲುಕಿದೆ. ಮರ ಸಾವಾಗಿ ಅವರ ನೆತ್ತಿಗೆ ಬಡಿದಿದೆ!

ಅದರ ಹಿಂದಿನ ದಿನ ರಾತ್ರಿ 11 ಗಂಟೆಯವರೆಗೆ ಅವರು ನಮ್ಮೊಂದಿಗಿದ್ದರು.ನಮ್ಮಲ್ಲೇ ಊಟಮಾಡಿ ಹೋಗಿದ್ದರು.

'ಸಾವು' ಯಾಕಿಷ್ಟು ಕಾಡುತ್ತೋ ಗೊತ್ತಿಲ್ಲ. ನನ್ನ ಸಾವು ಕೂಡ ಕೂದಲೆಳೆಯಲ್ಲಿ ತಪ್ಪುತ್ತಾ ತಪ್ಪುತ್ತಾ ನನ್ನನ್ನು ಇದನ್ನೆಲ್ಲ ಗೀಚುವಷ್ಟರ ಮಟ್ಟಿಗೆ ತಂದು ನಿಲ್ಲಿಸಿದೆ. ಮದುವೆ, ಮನೆ,ಆಸ್ತಿ, ಬದನೆಕಾಯಿ ಎಂದೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವ ನಾವು ನಮ್ಮ ಸಾವಿಗೆ ಮಾತ್ರ ಸಿದ್ಧತೆಯನ್ನೇ ಮಾಡಿಕೊಳ್ಳುವುದಿಲ್ಲ. ಸಾವು ಬಂದಾಗ ನಾವೆಷ್ಟು ನಿಕೃಷ್ಟರಾಗಿರುತ್ತೇವೆ ಎಂಬುದನ್ನೂ ನಾವು ಯೋಚಿಸುವ ಗೊಡವೆಗೆ ಹೋಗುವುದಿಲ್ಲ.

*

ಕಾಜೂರು ಸತೀಶ್

Friday, May 3, 2019

ಪರಿಚಯ ಮತ್ತು ಸೆಲ್ಫಿ

2013ರ ಸೆಪ್ಟೆಂಬರ್ 5ರಂದು ಆ ಕಾಲೇಜಿನ ಹಿಂದಿ ಮೇಷ್ಟ್ರು ಅದೇ ಕಾಲೇಜಿನ ಇಂಗ್ಲಿಷ್ ಮೇಷ್ಟ್ರಿಗೆ ನನ್ನನ್ನು ಪರಿಚಯಿಸಿದರು. ಅವರು ನನಗಿಷ್ಟವಿಲ್ಲದ ಇಂಗ್ಲೀಷಿನಲ್ಲಿ ಮಾತುಬೆಳೆಸಿದ್ದರಿಂದ ಮಾತನಾಡುತ್ತಾ ಮಾತನಾಡುತ್ತಾ ನಾವಿಬ್ಬರು ಶುದ್ಧ ಪರಕೀಯರಾಗಿಬಿಟ್ಟಿದ್ದೆವು!
'ಎರಡು ವರ್ಷಗಳ ಹಿಂದೆ'____'  ಹೆಸರಿನಲ್ಲಿ ಒಂದು ಪತ್ರ ಬಂದಿತ್ತಲ್ವಾ.. ನಾನೇ ಬರ್ದಿದ್ದು' ನಾನು ಹೇಳಿದೆ.  ತಮ್ಮ ಕಛೇರಿಯಲ್ಲಿ ಕೂರಿಸಿ ಆಗಷ್ಟೇ ಬಿಡುಗಡೆಗೊಂಡಿದ್ದ ಕವನ ಸಂಕಲನಕ್ಕೆ ತಮ್ಮ ಹಸ್ತಾಕ್ಷರವನ್ನುಣಿಸಿ ನನಗೆ ನೀಡಿದ್ದರು.

ಮತ್ತೆ ಮೂರು ತಿಂಗಳ ನಂತರ ಅವರು ಸೈಬರ್ ಸೆಂಟರಿನಲ್ಲಿ ಸಿಕ್ಕರು. ಅವರಿಗೆ ನನ್ನ ಪರಿಚಯ ಹತ್ತಲಿಲ್ಲ.ನನಗೆ ಬಸ್ಸು ಹಿಡಿಯುವ ಧಾವಂತ; ಒಂದು ನಗುನಕ್ಕು ಹೊರಟುಬಿಟ್ಟೆ.

ಮತ್ತೊಮ್ಮೆ ಕಾಲೇಜಿನಲ್ಲಿ ಸಿಕ್ಕಾಗ ನಕ್ಕು ಸುಮ್ಮನಾದೆ. ಅವರೂ ನನ್ನನ್ನು ಅನುಕರಿಸಿದರು.

ಕಳೆದ ಮಾರ್ಚ್ 19ಕ್ಕೆ ಮತ್ತದೇ ಕಾಲೇಜಿನಲ್ಲಿ ಸಿಕ್ಕರು. ನಾನು 'ನಮಸ್ತೆ' ಹೇಳಿ ಒಂದು ನಗು ಚೆಲ್ಲಿದೆ. ಅವರು ಮತ್ತದೇ ನಿರ್ಲಿಪ್ತ ಭಾವದಿಂದ ನಕ್ಕರು.

ಇಷ್ಟೆಲ್ಲಾ ಪೀಠಿಕೆ ಏಕೆಂದರೆ - ಇನ್ನೊಮ್ಮೆ ಸಿಕ್ಕಾಗ ನನ್ನ ಹೆಸರನ್ನು ಚೆನ್ನಾಗಿ ಬಲ್ಲ ಅವರೊಂದಿಗೆ ಒಂದು ಸೆಲ್ಫಿ ತೆಗೆದು ಅದನ್ನು facebookಕ್ಕಿಗೆ ಅಂಟಿಸಬೇಕೆಂದುಕೊಂಡಿದ್ದೇನೆ. ಅದಕ್ಕಾಗಿ ಕಾಯುತ್ತಿದ್ದೇನೆ!

ನೀವೂ ಕಾಯುತ್ತಿರಿ!

 *

ಕಾಜೂರು ಸತೀಶ್

Monday, April 29, 2019

ದಿನಚರಿ

ನನಗೆ ಈ ವಿದ್ಯುತ್ತಿಲ್ಲದ ರಾತ್ರಿಗಳು ಅಂದ್ರೆ ತುಂಬಾ ಇಷ್ಟ. ಪಡ್ಡೆ ಐಕಳ ಆರ್ಭಟವಿರದ ಆ ಕ್ಷಣಗಳು ದಿವ್ಯ ಮೌನವನ್ನು ಹೆರತೊಡಗುತ್ತವೆ. ನಿಜವಾದ ಚಿಂತನೆಗಳು ಮೊಳೆಯುವ, ಬೆಳೆಯುವ ಸುಸಮಯವದು. 

*

ನಿತ್ಯದ ಗಾಯಗಳು ಮತ್ತು ಉಳಿಪೆಟ್ಟುಗಳಷ್ಟೇ ನಮ್ಮನ್ನು ಹೊಸ ಆಕೃತಿಯಲ್ಲಿ  ಜಗತ್ತಿಗೆ ತೋರಿಸುತ್ತವೆ. ನಮ್ಮನ್ನು ಬೆಳೆಸುವ ಪರಮ ಗುರುಗಳವು.

*

"ಆತ/ಆಕೆ ಕೆಟ್ಟವನು/ಳು"


ಹೀಗೆ  ಗುರುತಿಸಿಕೊಳ್ಳುವ ಜನಗಳ ಜೊತೆಗೆ ನಾನು ಸ್ನೇಹವನ್ನು ಬಯಸುತ್ತೇನೆ. ಆಮೇಲೆ ನನಗನ್ನಿಸುತ್ತದೆ: 'ಈ ಜಗತ್ತಿನಲ್ಲಿ ಕೆಟ್ಟದ್ದು ಅನ್ನೋದು  ಏನೂ ಇರಲಾರದು!'

*

ಕಾಜೂರು ಸತೀಶ್

Thursday, April 25, 2019

ಆತ್ಮದಂಥವಳಿಗೆ


ಆತ್ಮದ ಮೈಪಡೆದವಳೇ,


ಎಲ್ಲೋ ಹೇಗೋ ಇದ್ದೆ ನಾನು-  ಮನೆಯಂಗಳದಲ್ಲಿ ಬಿದ್ದ ಎಲೆಯೊಂದರಂತೆ. ಗುಡಿಸಲಿಕ್ಕೆಂದು ಪೊರಕೆ ಹಿಡಿದು ಬಂದ ನೀನು ಎಲೆಯಲ್ಲೇನೋ ಚಿತ್ರ ಕಂಡಂತೆ  ಎತ್ತಿ ಮುಡಿಸಿಕೊಂಡೆ. ಹೀಗೆಲ್ಲ ಆಗುತ್ತದೆಂದು ನನಗೂ ತಿಳಿದಿರಲಿಲ್ಲ. ಮರ ಸತ್ತರೂ ಎಷ್ಟೋ ಕಾಲ ಬದುಕಿರುವಂತೆಯೇ ಎದೆಸೆಟೆಸಿ ನಿಂತೇ ಇರುತ್ತದಲ್ಲಾ ಹಕ್ಕಿಗಳಿಗೂ ತಿಳಿಯದಂತೆ - ಹಾಗೆ!


ಮೊದಲ ಸಲ ಗುಂಡಮ್ಮನ ಹಾಗೆ ಬಂದು ಪರಿಚಯ ಹೇಳಿ ಒಂದು ಬಿಳಿ ಹಾಳೆಯನ್ನು ಕೊಟ್ಟು ಹೋದೆ. ಬೂದುಬಣ್ಣದ ಸೀರೆ. ಮೂಗಿಗೆ ಕಿವಿಯ ಓಲೆಯಂಥಾ ಅದೇನೋ ಒಂದು!

 ಮತ್ತೊಮ್ಮೆ ಇನ್ನೊಂದಷ್ಟು ಹಾಳೆಗಳನ್ನು ಸಂಗ್ರಹಿಸಲು ಬರುವೆನೆಂದು ಮೇಘಸಂದೇಶ ಕಳಿಸಿದ್ದೆ. ಬಂದು ಒಂದು ತಿಳಿಯಾದ ನಗೆನಕ್ಕು ಅವುಗಳನ್ನು ಸಂಗ್ರಹಿಸಿಕೊಂಡು ಹೊರಟುಹೋಗಿದ್ದೆ. 'ಜಗತ್ತು ಶುಭ್ರವಾಗಿದೆ' ಎಂದು ನನ್ನೊಳಗಿನ ಕಾರ್ಮಿಕ ಅವತ್ತು ಕೂಗಿಹೇಳಿದ್ದ!


 ಆ ದಿನದ 'ನೀಲಿ'ಯಲ್ಲಿ ಅದಾವ ಅನಂತತೆಯನ್ನು ಕಂಡುಕೊಂಡೆಯೋ ತಿಳಿಯಲಿಲ್ಲ!


ಯಾವುದನ್ನೂ ಮೈ-ಮನಸ್ಸಿಗೆ ಹಚ್ಚಿಕೊಳ್ಳದೆ ನಿರುಮ್ಮಳವಾಗಿ ಹರಿಯುವ ಅಥವಾ ನಿಲ್ಲುವ ನನ್ನ ನೀರಿನಂಥಾ ಒಡಲಿನ ನಡುವಿಗೆ ನಿನ್ನ ಮುಗ್ಧ ನಿಶ್ವಾಸದಲ್ಲಿ ಅಲೆಗಳ ಸೃಷ್ಟಿಸಿದೆ. ಬೇಡಬೇಡವೆಂದರೂ ಅದೇನೇನೇನೋ ಮೊಗೆಮೊಗೆದು ಕೊಟ್ಟೆ. ತೊಟ್ಟಿಲ ಮಗುವಿನಂತೆ ಹಠಹಿಡಿದೆ, ಫಳಾರನೆ ನಕ್ಕೆ. ಒಂದು ಮಿಠಾಯಿಗೂ ಭೂಮ್ಯಾಕಾಶಗಳ ಅಳೆದು ತೂಗುವವನನ್ನು ಸ್ವೀಕರಿಸುವಷ್ಟರ ಮಟ್ಟಿಗೆ ಕುಟ್ಟಿ, ತಟ್ಟಿ, ಹದಮಾಡಿದೆ!


ಸಂಗೀತವೇ,

 ಇಲ್ಲಿ ಯಾವುದೂ ಶಾಶ್ವತವಲ್ಲ; ಯಾವುದೂ! ಈ ಕ್ಷಣಗಳಷ್ಟೇ ಮುಖ್ಯ;ಪವಿತ್ರ. ಹಾಗೆ ನೋಡಿದರೆ ಈ 'ವರ್ತಮಾನ' ಅನ್ನೋದೇ ಇರುವುದಿಲ್ಲ ನೋಡು! ಈಗ ಉಸುರುತ್ತಿರುವ ಈ ದನಿಗಳೆಲ್ಲ ಉಸುರಿದ ಮರುಕ್ಷಣವೇ 'ಭೂತ'ಕ್ಕೆ ಜಾರಿರುತ್ತವೆ. ಈ ಜಗತ್ತು ಭೂತ-ಭವಿಷ್ಯಗಳ ತಿರುಗುಗೂಟಕ್ಕೆ ಸಿಲುಕಿ ನಿನ್ನ ಎರಡೂಕಾಲು ಇಂಚಿನ ಬಳೆಯ ಹಾಗೆ ನಮ್ಮನ್ನೆಲ್ಲ ಗಿರಗಿರ ಸುತ್ತಿಸುತ್ತದೆ! ಯಾರದೋ ಪಾಲಾಗಲಿರುವ ಅಂಗಡಿಯ ಬಳೆ , ಅಂಗಿ, ಪ್ಯಾಂಟು, ಬೆಲ್ಟು, ಇತ್ಯಾದಿ ಇತ್ಯಾದಿಗಳೆಲ್ಲಾ ಎಷ್ಟೆಷ್ಟೋ ಕನಸ್ಸುಗಳನ್ನು ಕಡಪಡೆದು, ಹೆತ್ತು ಮೈಪಡೆದಿರುತ್ತವೆ!

(ಗಾಬರಿಯಾಗ್ಬೇಡ್ರೀ, ನಂಗೆ ಫಿಲಾಸಫಿ ಅಂದ್ರೆ ಇಷ್ಟ! 🤣)


ಇರಲಿ. ಮುರಿದು ಕಟ್ಟಬಹುದಾದ ಈ ಸಾಲುಗಳಂಥಲ್ಲ ಬದುಕು. ನೀ ಹೆತ್ತ ಮಗುವಿನಂಥದ್ದೇ ಮುನಿಸು,ಮಗುವಿನಾಟ ಹೀಗೇ ಮುಂದುವರಿಯಲಿ. ನಾನು ಕಾಲವಾಗುವ ಮುನ್ನವಾದರೂ ಈ ಜಗತ್ತು ನಿನ್ನ ಬಣ್ಣಬಣ್ಣದ ಕನಸಿನ ಕೈಬಳೆಗಳ ತೊಟ್ಟು ಆಟವಾಡಿಕೊಂಡಿರಲಿ.  ನನ್ನಿಂದ ನಿನಗೆ ತುಸುವಾದರೂ ಒಳಿತಾಗದಿದ್ದಲ್ಲಿ ನಿನ್ನ ಮುನಿಸು ನನ್ನನ್ನು ಈ ಕ್ಷಣವೇ ಸುಟ್ಟುಬಿಡಲಿ!


ನಿರಾಕಾರಿ
(ಕಾಜೂರು ಸತೀಶ್ )

Tuesday, April 23, 2019

ರಾತ್ರಿ ನಡಿಗೆ

ರಾತ್ರಿಯಲ್ಲಿ ನಡೆಯುವುದೆಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಅದು ನಿರ್ಜನ ರಸ್ತೆಯಾಗಿರಬೇಕು, ಅಲ್ಲಲ್ಲಿ ಬೀದಿ ದೀಪಗಳಿರಬೇಕು. ಅಷ್ಟಿದ್ದರೆ ಸಾಕು - ಮೌನ ಮತ್ತು ಅಧ್ಯಾತ್ಮದ ಪರಮಸುಖ ಅಲ್ಲಿಂದ ಪ್ರಾಪ್ತಿಯಾಗುತ್ತದೆ.

ಬಾಲ್ಯದಲ್ಲಿ ನನಗೆ ಕತ್ತಲೆಂದರೆ ಭಯ ಅಷ್ಟಿಷ್ಟಲ್ಲ. ಮನೆಯಿಂದ ಹೊರಹೋಗುವುದಿರಲಿ, ಕೋಣೆಯಿಂದ ಕೋಣೆಗೆ ತೆರಳಲೂ ಒಬ್ಬರ ಸಹಾಯ ಬೇಕಿತ್ತು. ಎಲ್ಲಿಯಾದರೂ ಕೊಲೆಯಾದರೆ ಅಥವಾ ದೆವ್ವ ಪಿಶಾಚಿಗಳ ಕಥೆ ಕೇಳಿದರೆ ರಾತ್ರಿಯಂತಹ ನರಕ ಮತ್ತೊಂದಿಲ್ಲ!

ನಾನು ಹೈಸ್ಕೂಲಿನಲ್ಲಿದ್ದಾಗ ಮೊದಲ ಬಾರಿಗೆ ಮಡಿಕೇರಿಗೆ ಭಾಷಣ ಸ್ಪರ್ಧೆಗೆ ಭಾಗವಹಿಸಲೆಂದು ಹೋಗಿದ್ದೆ. ಹಿಂತಿರುಗಿ ಬರುವಾಗ ಕತ್ತಲಾಗಿತ್ತು. ಡಿಸೆಂಬರ್ ತಿಂಗಳು; ಸುಡುವ ಚಳಿ! 'ಇಂಥಾ' ಸ್ಥಳದಲ್ಲಿ ಇಳಿಸಿಬಿಡಿ ಎಂದು ಕ್ಲೀನರಿಗೆ ಮೊದಲೇ ಹೇಳಿದ್ದೆ. ಎರಡು ಕಿ.ಮೀ. ಹಿಂದೆಯೇ ನನ್ನನ್ನು ಇಳಿಸಿಬಿಟ್ಟಿದ್ದ! ಕರೆಂಟ್ ಇಲ್ಲದ್ದಕ್ಕೂ, ನಾನು ಅಲ್ಲಿ ಇಳಿದದ್ದಕ್ಕೂ ಸರಿಹೋಯಿತು! ಅಲ್ಲಿಂದ ಮನೆಗೆ ನಾಲ್ಕೂವರೆ ಕಿ.ಮೀ. ಕ್ರಮಿಸಬೇಕಿತ್ತು. ಬಿರಬಿರನೆ ಹೆಜ್ಜೆಹಾಕಿದೆ.

ಮನೆ ತಲುಪುವ ಧಾವಂತದಲ್ಲಿದ್ದ ನನಗೆ 'ಆ ಜಾಗ'ಕ್ಕೆ ಬಂದಾಗ ಆ ಚಳಿಯಲ್ಲೂ ಬೆವರು ಉಕ್ಕತೊಡಗಿತು! ನಮ್ಮೂರಿನ ಪ್ರಭಾವಿಯೊಬ್ಬರ ಮನೆಯಲ್ಲಿ ಮನೆಗೆಲಸಕ್ಕಿದ್ದ ಹೆಣ್ಣುಮಗಳನ್ನು ಕೊಲೆಗೈದು ಎಸೆದಿದ್ದ ಜಾಗವದು(ಅದು ಸಹಜ ಸಾವು ಎಂದಾದದ್ದು ಬೇರೆ ವಿಷಯ!). ಅದು ನೆನಪಾಗಿ ಗಾಬರಿಯಾಗಿತ್ತು.
*

 ಕತ್ತಲ ನಡಿಗೆಯ ರುಚಿ ನನಗೆ ಸಿಕ್ಕಿದ್ದು ಪಿಯುಸಿ ನಂತರದ ದಿನಗಳಲ್ಲಿ . ಸಾಹಿತ್ಯದ ಹುಚ್ಚುಹಿಡಿಸಿಕೊಂಡಿದ್ದ ಕಾಲ; ಅಸಾಮಾನ್ಯ ಆಲೋಚನೆಗಳು ಪುಟಿದೇಳುತ್ತಿದ್ದ ಕಾಲ. ನಿತ್ಯ ಮನೆ ತಲುಪುವಾಗ ಕತ್ತಲಾಗುತ್ತಿದ್ದರಿಂದ ನಡಿಗೆಯ ದಾರಿ ಹೆಚ್ಚು ಆಪ್ಯಾಯಮಾನವಾಗಿರುತ್ತಿತ್ತು. ಅವು ಧ್ಯಾನಸ್ಥ ಸಮಯವಾಗಿ ಬಳಕೆಯಾಗುತ್ತಿತ್ತು.
*
ಕತ್ತಲೆಯ ಭಯ ನನ್ನನ್ನು ಪೂರ್ಣವಾಗಿ ತೊರೆದುಹೋದದ್ದು ನಾನು ಕರಿಕೆ ತಲುಪಿದ ಮೇಲೆ. ಕೆಲವೊಮ್ಮೆ ಗೆಳೆಯರೊಡನೆ ಮಾತನಾಡುತ್ತಾ, ಚರ್ಚಿಸುತ್ತಾ ಸಮಯ ರಾತ್ರಿ ಹತ್ತು ಕಳೆಯುತ್ತಿತ್ತು. ಆ ರಾತ್ರಿಯಲ್ಲಿ ಆ ನಿರ್ಜನ ದಾರಿಯಲ್ಲಿ ಒಬ್ಬನೇ ನಡೆದುಹೋಗುವಂತಹ ಅನುಭವ ಚೇತೋಹಾರಿ. ವಾಹನದಲ್ಲಿ ಎದುರಿಗೆ ಬಂದವರು ನನ್ನನ್ನು ನೋಡಿ ಹೆದರಿಕೊಂಡದ್ದೂ ಇದೆ! ಯಾರೊಂದಿಗೂ ಹೆಚ್ಚು ಬೆರೆಯದ ವ್ಯಕ್ತಿಯೊಬ್ಬರು ಒಮ್ಮೆ ನನ್ನನ್ನು ಕರೆದು ' ಅವತ್ತು ರಾತ್ರಿ ನಡ್ಕೊಂಡು ಹೋಗ್ತಿದ್ದವ್ರು ನೀವೇ ಅಲ್ವಾ' ಎನ್ನುತ್ತಾ ತಮ್ಮನ್ನು ಪರಿಚಯಿಸಿಕೊಂಡರು. ಆಮೇಲೆ 'ಟ್ರೆಕ್ಕಿಂಗ್ ಹೋಗುವಾಗ ನಾನೂ ಬರ್ತೇನೆ, ಕರೀರಿ' ಎನ್ನುವಷ್ಟು ಆತ್ಮೀಯರಾಗಿಬಿಟ್ಟರು.
*
ಕತ್ತಲೆಯಲ್ಲಿ ಪಿಶಾಚಿಗಳು ಬರುತ್ತವೆ ಎಂಬ ನನ್ನ ಕಲ್ಪನೆಯು ತಳಸೇರಿದ್ದು- 'ಇದ್ದರೂ ನನ್ನಷ್ಟು ದೊಡ್ಡ ಪಿಶಾಚಿ ಈ ಭೂಮಿಯಲ್ಲಿ ಇರಲಿಕ್ಕಿಲ್ಲ' ಎಂಬ  ನಿಲುವಿನಿಂದ!
*

ಕಾಜೂರು ಸತೀಶ್

ಕರಿಕೆಯ ಉರಗಲೋಕದ ಹೆಜ್ಜೆಗುರುತುಗಳು

'ನೀನು ಹೋಗುತ್ತಿರುವ ಊರಲ್ಲಿ ವಿಷಕಾರಿ ಹಾವುಗಳಿವೆ ಅಂತ ಕೇಳಿದ್ದೆ, ಜೋಪಾನ' ಎಂದಿದ್ದರು ಹಲವರು. ಕರಿಕೆಗೆ ಹೋಗಿ 8 ತಿಂಗಳು ಕಳೆದಿದ್ದರೂ ಒಂದೇ ಒಂದು ಹಾವು ಕೂಡ ಕಣ್ಣಿಗೆ ಬಿದ್ದಿರಲಿಲ್ಲ. 'ಹಾವಂತೆ ಹಾವು'ಎಂದು ನಾನು ಗೊಣಗಿಕೊಂಡಿದ್ದೆ.

ಮಾರ್ಚ್ 10ರಂದು ಪಕ್ಕದ ಮನೆಯವರು 'ಸಾರ್ ಒಂದು ದೊ...ಡ್ಡ ಹಾವಿದೆಯಂತೆ, ಮಗ್ಳು ನೋಡಿದ್ಳಂತೆ' ಎಂದು ವರದಿ ಒಪ್ಪಿಸಿದರು. 'ಕೇರೆ ಹಾವಿರ್ಬಹುದು, ಅದೂ ದೊಡ್ದಾಗಿರುತ್ತೆ', ಎಂದು ಹೇಳಿ ಹೊರಬಂದೆ. ನಮ್ಮ ಪಕ್ಕದ ಗಿಡಗಂಟಿಗಳು ಅಲುಗಾಡತೊಡಗಿದವು. ಮೈ ಜುಮ್ಮೆಂದಿತು - 'ಕಾಳಿಂಗ'! ಅದನ್ನು ನೋಡಿದ್ದೇ ಗೆಳೆಯ ದೇವರಾಜ ಮೇಷ್ಟ್ರ ಬಾಯಿಂದ 'ಹೆಬ್ಬಾವು' ಎಂಬ ಉದ್ಘಾರ ಬಂದಿತು!

ಅದುವರೆಗೆ ಮೃಗಾಲಯದಲ್ಲಷ್ಟೇ ನೋಡಿದ್ದ ಕಾಳಿಂಗವನ್ನು ಅಷ್ಟು ಹತ್ತಿರದಲ್ಲಿ ನೋಡುವ ಭಾಗ್ಯ ಒದಗಿ ಬಂದಿತು. ಸ್ನೇಕ್ ಸತೀಶ್(ನಾನಲ್ಲ!) ಅವರಿಗೆ ಕರೆಮಾಡಲು, ಅವರು ತಮ್ಮ ಸಂಗಡಿಗರನ್ನು ಕಳಿಸಿಕೊಟ್ಟರು. ಅವರು ತಲುಪುವಾಗಲೇ ರಾತ್ರಿಯಾಗಿದ್ದರಿಂದ ಹಾವು ನಾಪತ್ತೆಯಾಗಿತ್ತು.
*
ಹೀಗೆ ಕರಿಕೆಯ ಹಾವಿನ ಲೋಕಕ್ಕೆ ಆ ಹಾವು ಬಂದು ಸ್ವಾಗತ ಭಾಷಣ ಮಾಡಿ ಹೋಗಿತ್ತು. ಆಮೇಲೆ ನಾನು ನೋಡಿದ ಹಾವುಗಳಿಗೂ, ಅವು ನನ್ನನ್ನು - ನಾನು ಅವುಗಳನ್ನೂ ಕಾಡಿಸಿದ, ತಮಾಷೆ ನೋಡಿದ ಪ್ರಸಂಗಗಳಿಗೆ ನನ್ನ ಬಳಿ ಲೆಕ್ಕವಿಲ್ಲ!
*
ಒಮ್ಮೆ ಕನ್ನಡಿಯಲ್ಲಿ ಮುಖನೋಡಿಕೊಳ್ಳುತ್ತಿದ್ದೆ. ತಲೆಯ ಇಷ್ಟೇ ಮೇಲೆ ಹಾವೊಂದು ತೂಗಾಡುತ್ತಿರುವುದನ್ನು ಕನ್ನಡಿಯು ಹೇಳಿತು. ಮೆಲ್ಲಗೆ ಹೊರಬಂದು ಒಂದು ಉದ್ದನೆಯ ಕೋಲಿನಲ್ಲಿ ಅದನ್ನು ಮೇಲಿಂದ ಕೆಳಗೆ ಇಳಿಸಿದೆ. ಅದರ ಸಿಟ್ಟು ಎಲ್ಲಿತ್ತೋ ಏನೋ- ಕೋಲಿಗೆ ಅದರ ಹಲ್ಲು ಮುರಿದುಹೋಗುವಂತೆ ಕುಟುಕಲು ಆರಂಭಿಸಿತು. ಹೇಗೆ ಎಳೆದರೂ ಅದಕ್ಕೆ ಹೊರಗೆ ಬರಲು ಮನಸ್ಸಾಗಲಿಲ್ಲ! ನನ್ನ ಸರ್ಕಸ್ಸನ್ನು ನೋಡಿದ ನೆರೆಮನೆಯವರು ಒಂದು ತೆಳ್ಳನೆಯ ಕೋಲು ತಂದು ಬಡಿದು ಕೊಂದೇಬಿಟ್ಟರು!
*
ನಮ್ಮ ಕಿಟಕಿ ಬಾಗಿಲುಗಳು ಯಾವಾಗಲೂ ಮುಚ್ಚಿದ ಸ್ಥಿತಿಯಲ್ಲೇ ಇರುತ್ತಿದ್ದವು. ತೆರೆದದ್ದೇ ತಡ 'ಏನು ಮಾಡುತ್ತಿದ್ದೀಯ ಸತೀಶಾ' ಎಂಬಂತೆ ಇಣುಕಿ ನೋಡಲು ಹಾವುಗಳು ಬಂದೇ ಬರುತ್ತಿದ್ದವು.
*
ನಮ್ಮ ಬಾತ್ರೂಮಿನ ಒಳಕ್ಕೆ ವಾರಕ್ಕೆ ಕನಿಷ್ಟ ಒಂದು ಹಾವಾದರೂ ಬಂದು ಟೆಂಟು ಹಾಕಿರುತ್ತಿತ್ತು. ನಾನದಕ್ಕೆ ನೀರು ಸುರಿದು ಸ್ನಾನಮಾಡಿಸುತ್ತಿದ್ದೆ! ಕೆಲವು ಹಾವುಗಳು ಎಷ್ಟು ನೀರು ಸುರಿದರೂ ಅಲ್ಲಿಂದ ಕದಲುತ್ತಿರಲಿಲ್ಲ.ಹಾಗೆ ಬರುತ್ತಿದ್ದ ಹಾವುಗಳು ಬಹುತೇಕ ಸೋಮಾರಿಗಳು! ಅವು ದಿನವಿಡೀ ಅಲ್ಲೇ ಇದ್ದು ನಂತರ ಹೊರಟುಹೋಗುತ್ತಿದ್ದವು.
*
ಒಮ್ಮೆ ಬೆಳಿಗ್ಗೆ ಎಂದಿನಂತೆ ರನ್ನಿಂಗ್ ಮಾಡುತ್ತಿದ್ದಾಗ ರಸ್ತೆಯಲ್ಲಿದ್ದ ಹಾವು ಹೆಡೆಯೆತ್ತಿ ನಿಲ್ಲಲು , ಅದರ ಮೇಲೆ ಚಂಗನೆ ಜಿಗಿದು ಓಡಿಬಿಟ್ಟಿದ್ದೆ! ಇನ್ನೊಮ್ಮೆ, ಸುರುಳಿಸುತ್ತಿ ಮಲಗಿದ್ದ ಹಾವಿನ ಮೇಲೆ ಕಾಲಿಟ್ಟಾಗ ರಬ್ಬರಿನಂತಹ ವಸ್ತುವು ತಾಗಿದಂತಾಗಿ ಕಾಲೆತ್ತಿ ನೋಡಿದರೆ ನನ್ನ ಆನೆಭಾರಕ್ಕೆ ಅದು ಗಾಬರಿಗೊಂಡಂತ್ತಿತ್ತು!
*

ಶಶಿ ಫಾರೆಸ್ಟರ್ ಬಂದ ಮೇಲೆ ಸುಮಾರು ಹೆಬ್ಬಾವುಗಳನ್ನು ಹಿಡಿದರು. ಅದಕ್ಕೂ ಮೊದಲು ಹೆಬ್ಬಾವು/ಕಾಳಿಂಗವನ್ನು ಕೆಲವರು ಹೊಡೆದು ಕೊಂದುಬಿಡುತ್ತಿದ್ದರು.
*

ನಮ್ಮ ಶಾಲೆಯ ಯಾವ ಮೂಲೆಯಲ್ಲಿ ಹಾವಿದ್ದರೂ ಮಕ್ಕಳು ನನ್ನನ್ನು ಕರೆದುಕೊಂಡು ಹೋಗಿ ತೋರಿಸುತ್ತಿದ್ದರು. ಹಾವುಗಳನ್ನು ಕೊಲ್ಲುವುದರಿಂದಾಗುವ ಅನಾಹುತಗಳನ್ನು ಮಕ್ಕಳಿಗೆ ಹೇಳುತ್ತಿದ್ದೆ.
*

ಒಮ್ಮೆ ಬಸ್ ಸ್ಟ್ಯಾಂಡಿನಲ್ಲಿ ಕುಳಿತ್ತಿದ್ದಾಗ ಹಾವೊಂದು ದೊಪ್ಪನೆ ಕೆಳಗೆ ಬಿತ್ತು. ಥೇಟ್ ಬಿಸಿಲು ಹಾವಿನಂತಿತ್ತು. ಅದಕ್ಕಿಂತ ಸ್ವಲ್ಪ ದಪ್ಪ ಮತ್ತು ಉದ್ದಕ್ಕಿತ್ತು. ಬೇಡಬೇಡವೆಂದರೂ ಒಬ್ಬಾತ 'ತುಂಬಾ ವೆಷಂ ಸಾರೇ' ಎಂದು ಅದನ್ನು ಹೊಡೆದು ಕೊಂದೇಬಿಟ್ಟ.ಒಂದೆರಡು ಪೆಟ್ಟು ಬಿದ್ದಿದ್ದೇ ತಡ ಅದು ಸಂಪೂರ್ಣ ನೀಲಿಗಟ್ಟಿತು! ಸತ್ತಾಗಲಂತೂ ನೀಲಿಹಾವು!
*

ನನ್ನ ಸಹೋದ್ಯೋಗಿಗೆ ಒಂದು ಸಂಜೆ ಹಾವು ಕುಟುಕಿದ್ದು ಅವರ ಅರಿವಿಗೂ ಬರಲಿಲ್ಲ. ಆಮೇಲೆ ವಿಷವೇರತೊಡಗಿದಾಗ ಅದು ಹಾವೆಂದು ತಿಳಿದು ಕೆಲಕಾಲ ಚಿಕಿತ್ಸೆ ಪಡೆದರು.
*
ಮಳೆಗಾಲದಲ್ಲಂತೂ ರಸ್ತೆಯಲ್ಲಿ ಹಾವುಗಳು ವಾಹನಗಳಿಗೆ ಸಿಲುಕಿ ಸತ್ತುಬಿದ್ದಿರುತ್ತಿದ್ದವು. ನಿತ್ಯಹರಿದ್ವರ್ಣದ ಕರಿಕೆ ತನ್ನ ನಿಜದ ಚೆಲುವನ್ನು ಉಳಿಸಿಕೊಳ್ಳಲು ಒಂದಷ್ಟು ಚೆಲುವು ಚೆಲುವಾದ ಹಾವುಗಳನ್ನು ಸಾಕಿಕೊಂಡಿತ್ತು.
*

ಕಾಜೂರು ಸತೀಶ್

Thursday, April 18, 2019

ಹಸಿವು, ಮದುವೆ ಮತ್ತು ರಕ್ಕಸತನ

ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಕಾಲದಲ್ಲಿ ನಡೆದ ಒಂದು ಘಟನೆಯು ನನ್ನನ್ನು ಬುಡಸಮೇತ ಅಲುಗಾಡಿಸಿತ್ತು. ಮದುವೆ ಮಂಟಪದಲ್ಲಿ ಹೆಚ್ಚು-ಹೆಚ್ಚು ನಾನ್ವೆಜ್ ಬಡಿಸಿಲ್ಲವೆಂದು ಆರಂಭವಾದ ಕಿತ್ತಾಟವು, ಬೆಳೆಬೆಳೆದು ಮದುವೆ ನಡೆಯುತ್ತಿದ್ದ ಸ್ಥಳವೇ ರಣಾಂಗಣವಾಗಿ ಒಂದಷ್ಟು ಜನರನ್ನು ಆಸ್ಪತ್ರೆಗೆ ದಾಖಲು ಮಾಡಿಸಿತ್ತು!
*

ಒಂದು ಮದುವೆಗೆ ಹೋಗಿದ್ದೆ. ಊಟಕ್ಕೆಂದು ಬಾಗಿಲ ಬಳಿ ಕಾಯುತ್ತಾ ನಿಂತಿದ್ದರು ಜನ. ಬಾಗಿಲು ತೆರೆದಿದ್ದೇ ತಡ- ಕದ ತೆಗೆದ ಜಲಾಶಯದ ನೀರಿನಂತೆ ನುಗ್ಗಿದರು. ನೂಕಾಟಕ್ಕೆ ವ್ಯಕ್ತಿಯೊಬ್ಬರು ಬಿದ್ದುಬಿಟ್ಟರು. ಬಿದ್ದ ವ್ಯಕ್ತಿಯ ಮೈಮೇಲೆ ತುಳಿದುಕೊಂಡು ಹೋಗಿ ಜನ ತಮ್ಮ ಆಸನವನ್ನು ಭದ್ರಪಡಿಸಿಕೊಂಡರು!
*

'ಮದುವೆ' ಎಂದರೆ 'ತಿನ್ನುವುದು' ಎಂಬ ಕಲ್ಪನೆ ಜನರಲ್ಲಿ ಬೀಡುಬಿಡುತ್ತಿದೆ. 'ಇದೆಂಥಾ ಮಾರಾಯ ಬರೀ ಪುಳಿಚಾರು... ನಾನು ಜಾಸ್ತಿ ಕವರ್ ಹಾಕಲ್ಲ'ಎಂದು ಕವರಿನಲ್ಲಿ ಹಾಕಿದ ನೂರರ ನೋಟೊಂದನ್ನು ಹಿಂತೆಗೆದು ಕಿಸೆಗಿಳಿಸಿಕೊಂಡ ಶುದ್ಧ ವಾಣಿಜ್ಯ ವ್ಯವಹಾರಕ್ಕೆ ಅದೆಷ್ಟು ಸಲ ಸಾಕ್ಷಿಯಾಗಿಲ್ಲ!
*
ಹಸಿವಾದಾಗಲಷ್ಟೇ ತಿನ್ನುವ ಪ್ರಾಣಿಗಳೆಲ್ಲಿ ಮತ್ತು ಹೊಟ್ಟೆ ತುಂಬಿದ್ದರೂ ಮತ್ತೆ ಮತ್ತೆ ತುರುಕಿ ತುಂಬಿಸಿಕೊಳ್ಳುವ ಬಕಾಸುರ ಮನುಷ್ಯರೆಲ್ಲಿ! ಮುಂದೊಂದು ದಿನ ಈ ಸ್ಥಿತಿ ಮನುಷ್ಯನನ್ನು ಯಾವ ಮಟ್ಟಕ್ಕೆ ಒಯ್ಯಬಹುದು-ಯೋಚಿಸಿದರೆ ಭಯವಾಗುತ್ತದೆ!
*

ಕಾಜೂರು ಸತೀಶ್

ಜನ್ಮದಿನಾಚರಣೆಯೂ ಮತ್ತು ಬಡತನವೂ..

ಹಾಗೇ facebookನೊಳಕ್ಕೆ ಇಣುಕುತ್ತಿದ್ದಾಗ ಶಿಕ್ಷಕಿಯೊಬ್ಬರು ತಮ್ಮ ಮಗುವಿನ ಜನ್ಮದಿನವನ್ನು ಸರ್ಕಾರಿ ಶಾಲೆಯ ತರಗತಿಯೊಂದರಲ್ಲಿ ಆಚರಿಸುತ್ತಿರುವ ಚಿತ್ರವನ್ನು ನೋಡಿದೆ. ಮೇಜಿನ ಮೇಲೆ ಮಗುವಿನ ಹೆಸರು ಬರೆದಿರುವ ಕೇಕು ಮತ್ತು ಉರಿಯುತ್ತಿರುವ ಕ್ಯಾಂಡಲ್ಲು. ಅದನ್ನು ಬೆರಗಿನಿಂದ ನೋಡುತ್ತಿರುವ ಮಕ್ಕಳು!

ಬಹುತೇಕ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ತಮ್ಮ ಜನ್ಮದಿನವನ್ನು ಹೀಗೆ ಕೇಕು ಕತ್ತರಿಸಿ ಕ್ಯಾಂಡಲ್ ಆರಿಸಿ ಆಚರಿಸಿಕೊಳ್ಳುವುದಿಲ್ಲ. ಆ ಟೀಚರ್ - ಕತ್ತರಿಸಿದ ಕೇಕನ್ನು ಮಕ್ಕಳಿಗೆ ಕೊಡಬಹುದು; ಅದನ್ನು ಆ ಮಕ್ಕಳು ಖುಷಿಖುಷಿಯಿಂದ ತಿನ್ನಬಹುದು.

ನನ್ನ ಎದೆಸೀಳುವುದು ಅದರ ನಂತರದ ಸ್ಥಿತಿ. ನಾಳೆ ದಿನ ಆ ಮಕ್ಕಳು 'ನಾವೂ ಯಾಕೆ ನಮ್ಮ ಜನ್ಮದಿನವನ್ನು ಹಾಗೆ ಆಚರಿಸಬಾರದು' ಎಂದುಕೊಂಡು ಪೋಷಕರ ಬೆನ್ನುಬೀಳುತ್ತವೆ. ಪೋಷಕರು ಅದನ್ನು ತಿರಸ್ಕರಿಸುತ್ತಾರೆ. 'ಒಬ್ಬರಿಗೆ ಸಾಧ್ಯವಾಗುವ ಸಂಗತಿ ನಮಗೇಕೆ ಸಾಧ್ಯವಿಲ್ಲ'ಎಂದು ಆ ಮಕ್ಕಳು ಯೋಚಿಸುತ್ತಾರೆ; ಹತಾಶರಾಗುತ್ತಾರೆ. ಅವರ ಮುಗ್ಧ ಬಾಲ್ಯವನ್ನದು ಹಿಂಡಿ ಹಿಪ್ಪೆ ಮಾಡುತ್ತದೆ.

ಬುದ್ಧಿವಂತರೆನಿಸಿಕೊಂಡ ಧನಿಕರಿಗಿದು ಅರ್ಥವಾಗುವುದಿಲ್ಲ!
*

ಕಾಜೂರು ಸತೀಶ್

Monday, April 15, 2019

ಕೆಂಪು ಬಿಸಿಲು ಮತ್ತು ಉರಿಯ ಪ್ರತಾಪ

ಜನವರಿಯು ತನ್ನ ಚಳಿಯ ಅಂಗಿಯನ್ನು ಕಿತ್ತೆಸೆದು ಬಂತೆಂದರೆ ಥೇಟ್ ದಗದಗ ಉರಿಯುತ್ತಿರುವ ಒಲೆಬುಡದಲ್ಲಿ ಕುಳಿತ ಹಾಗೆ. ಗೇರುಹಣ್ಣುಗಳು ಆ ಉರಿಯನ್ನೇ ತಿಂದಂತೆ ಕೆಂಪಗೆ ನಗುತ್ತವೆ. ಅಂಥಾ ಹಿಂಸೆಯಲ್ಲೂ ಅಲ್ಲಿನ ಮರಗಳು ಎಲೆಯನ್ನು ಕಳಚಿ ಹೇಡಿಯಂತೆ ವರ್ತಿಸುವುದಿಲ್ಲ.

ಥರ್ಮೋಮೀಟರಿನ ಪಾದರಸ 39 ಡಿಗ್ರಿಯನ್ನು ಮುಟ್ಟಿ ನೋಡುತ್ತದೆ. ಎಷ್ಟು ಮರಗಿಡಗಳಿದ್ದರೇನು- ಆಕ್ಸಿಜನ್ ಮಾತ್ರ ಮೂಗಿನೊಳಗೆ ಹೋಗುವುದೋ ಬೇಡವೋ ಎಂಬ ದ್ವಂದ್ವದಲ್ಲಿರುತ್ತದೆ. ಫ್ಯಾನಿನ ತಲೆತಿರುಗಿದರೂ ಸುಡುಸುಡುಗಾಳಿ! ಸೂರ್ಯ ಮಾತ್ರ ಅಲ್ಲಿದ್ದವರ ಬೆವರ ಚಪ್ಪರಿಸಿ ನೀರಡಿಕೆಯನ್ನು ನೀಗಿಸಿಕೊಂಡು ಕೆಂಪುಕೆಂಪು ನಗು ಚೆಲ್ಲುತ್ತಾನೆ/ಳೆ.

ತರಗತಿಯಲ್ಲಿ ಆಕ್ಸಿಜನ್ ಸಿಗದೆ ನಿಂತಲ್ಲೇ ಕುಸಿಯುವಂತಾಗುತ್ತದೆ. ಮಾರ್ಚ್-ಏಪ್ರಿಲುಗಳ ಹಿಂಸೆ ತಡೆಯಲಾರದೆ ರಾತ್ರಿ ಮಲಗುವ ಮುನ್ನ ಮಂಚದ ಕೆಳಗಿನ ನೆಲಕ್ಕೆ ಒಂದು ಬಕೇಟ್ ನೀರನ್ನು ಸುರಿದುಬಿಡುತ್ತಿದ್ದೆ. ಬೆಳಿಗ್ಗೆದ್ದು ನೋಡಿದರೆ ಅದು ಮಧ್ಯರಾತ್ರಿಯಲ್ಲೇ ಕಾಲ್ಕಿತ್ತ ಸಾಕ್ಷಿಗಳು ಉಳಿದಿರುತ್ತಿದ್ದವು.

ಹಸಿರಿನಿಂದ ನೆಲವೇ ಕಾಣದ ನೆಲದಲ್ಲೇ ಈ ಪರಿಯ ಉರಿಯ ಪ್ರತಾಪವಿರುವಾಗ ಬರಡುನಾಡಿನ ಬದುಕು ಅದೆಷ್ಟು ದಾರುಣವಾಗಿರಬಹುದೆಂಬುದನ್ನು ನೆನೆದು ತಲ್ಲಣಿಸುತ್ತೇನೆ.
*

ಕಾಜೂರು ಸತೀಶ್

ಓಹ್! ಇದ್ದೀರಾ?!

ಒಂದೆರಡು ರಜೆ ಸಿಕ್ಕಿತೆಂದರೆ ಗೆಳೆಯ ಭರಮಪ್ಪ ಪಾಶಗಾರರಿಗೆ 'free ಇದ್ದೀರಾ?' ಅನ್ನೋ ಒಂದು ಮೆಸೇಜು ಕುಟ್ಟಿ ಎಸೆದುಬಿಡುತ್ತಿದ್ದೆ. ಅತ್ತಲಿಂದ 'yes' ಎಂಬ ಅವರ ಸಂದೇಶ ತಡಬಡಾಯಿಸಿಕೊಂಡು ಇನ್ನ್ಯಾವಾಗಲಾದರೂ ಬಂದು ಬಾಗಿಲು ತಟ್ಟಿದರೆ ಮರುದಿನ ಯಾವುದಾದರೂ ಬೆಟ್ಟಕ್ಕೆ ಹೋಗುವುದೋ ಅಥವಾ ಜಲಪಾತದ ಜೊತೆಗೂಡುವುದೋ ಅಥವಾ ಕೇರಳದ ಯಾವುದಾದರೂ ಒಂದು ಸ್ಥಳಕ್ಕೆ ಪಾದಸ್ಪರ್ಶಿಸಿ ಬರುವುದೋ ಆಲೋಚಿಸುತ್ತಾ ಕೂರುತ್ತಿದ್ದೆ.

ಒಂದೊಮ್ಮೆ 'No sir' ಎಂದು ಮೊಬೈಲು ಕುಂಯ್ಗುಟ್ಟಿದರೆ ಮುಚ್ಚಿದ ಮುಂಬಾಗಿಲಿಗೆ ಎರಡು ದಿನಗಳ ಪೂರ್ಣರಜೆಯನ್ನು ಕೊಟ್ಟು ಪುಸ್ತಕ-ಸಿನಿಮಾ-ಅಡುಗೆ-ಸಾಹಿತ್ಯ-ಸಂಗೀತ-ಚಿತ್ರಕಲೆಗೆ ಅಂಟಿಕೊಂಡುಬಿಡುತ್ತಿದ್ದೆ.
*

ಒಮ್ಮೆ ಮೂರು ದಿನಗಳ ರಜೆಯೊಳಗೆ ಕದವನ್ನೂ ತೆರೆಯದೆ ಕುಳಿತುಕೊಂಡಿದ್ದೆ. ಮೂರನೇ ದಿನ ಬಾಗಿಲು ಸದ್ದುಮಾಡಿತು.

ಬಾಗಿಲು ತೆರೆದರೆ ಎದುರಿಗಿರುವ ವ್ಯಕ್ತಿ -' ಓಹ್ ಇದ್ದೀರಾ ಮಾಷ್ಟ್ರೇ?! ಎರಡು ದಿನಗಳಿಂದ ಹೊರಗೇ ಕಾಣ್ಲಿಲ್ಲ? ಅದ್ಕೇ ನೋಡ್ಕೊಂಡು ಹೋಗೋಣ ಅಂತ ಬಂದೆ.. ಹಹ್ಹಹ್ಹಹ್ಹಾ' ಎಂದು ನಗುವನ್ನು ಮೊಗೆಮೊಗೆದು ಚೆಲ್ಲಿ ಹೊರಟುಹೋದರು.
*
ಅವರ ಕಲ್ಪನೆಯಲ್ಲಿ ನನ್ನ ಸಾವು ಹೇಗೆಲ್ಲಾ ಮೂಡಿರಬಹುದು ಎಂಬುದನ್ನು ಯೋಚಿಸಿ ಸಿಕ್ಕಾಪಟ್ಟೆ ನಗು ತುಂಬಿಕೊಂಡೆ!
*

ಕಾಜೂರು ಸತೀಶ್

Friday, February 15, 2019

ಕಡಲಾಚೆಯ ಹುಡುಗಿಗೆ ಕವಿತೆಯ ಕುರಿತು

ಕಾಜೂರು ಸತೀಶ್ ಅವರ ಕಡಲಾಚೆಯ ಹುಡುಗಿಗೆ ಕವಿತೆಯ ಬಗ್ಗೆ ನನ್ನದೊಂದು ಸಹೃದಯ ಓದಿನ ಸ್ಪಂದನೆ ...........

ಅಬ್ಬಾ! ಇದಪ್ಪಾ ಕವಿತೆ ಎಂದರೆ! ಅಂಗ ಮೀರಿದ ಪ್ರೀತಿಯ ಸಂಗ ಬಯಸುವ ಪ್ರೇಮಿಯ ಅದಮ್ಯ ಬಯಕೆ, ತನ್ನ ಪ್ರೇಯಸಿಯನ್ನು ಕೂಡುವ ಸಲುವಾಗಿನ ಹಂಬಲ ಕೇವಲ ಭೌತಿಕ ವಾಂಛೆಯದಲ್ಲ.ಅದು ಪ್ರೇಮಿಗಳನ್ನು ಅಗಲಿಸಿದ ಗಡಿಗಳನ್ನು ; ಭೌಗೋಳಿಕ ಎಲ್ಲೆಗಳನ್ನು ಮೀರಿದ ಒಂದು ವಿಶ್ವಾತ್ಮಕ ಭಾವ ಸಮ್ಮಿಲನದ್ದು. ಭಾವ ಸಮಾಗಮದ್ದು. ಸೀಮಾತೀತವಾದ ಈ ಅಸೀಮ ಪ್ರೇಮಿಯ ; ಅಸೀಮ ಪ್ರೇಮದ ಒಲುಮೆ ,ಆ ತಾರೆ ,ನೀಹಾರಿಕೆ,ಚಂದಿರನ ಅಂಶಗಳಲ್ಲಿ ಬೆಳೆದು ಬೆಳಕಿನ ರೂಪಕಗಳಾಗಿ ಬೆಳೆವ ಈ ನಲ್ಲನ ನಿವೇದನೆ ಇದೆಯಲ್ಲಾ? ಅದು ಕೇಳಿಯೂ ಕಲ್ಲಾದ, ಓದಿಯೂ ಜಡವಾದ ಮನಸುಗಳ ಮರುಭೂಮಿಯಿಂದಲೂ ಒಲುಮೆಯ ಓಯಸಿಸ್ಸಿನ ಝರಿಯನ್ನು ಒಸರುವಂತೆ ಮಾಡುತ್ತದೆ. ನಾನಾದರೂ ಕಡಲ ಆ ತೀರದ ಪ್ರೆಯಸಿಯಾಗಬಾರದಿತ್ತೆ ? ಎಂದು ಮನಸು ಹಂಬಲಿಸುವಂತೆ ಮಾಡುತ್ತದೆ ಈ ಕವಿತೆ.

ಅಭಿನಂದನೆ ನನ್ನ ಪ್ರೀತಿಯ ಹಾಗೂ ಕನ್ನಡದ ಭರವಸೆಯ ಕವಿ ಕಾಜೂರು ಸತೀಶ್ ಅವರೇ.
*



ಪ್ರೊ. ಟಿ.ಯಲ್ಲಪ್ಪ

Wednesday, January 30, 2019

ಪ್ರಚಾರದ ಹಿಂಸೆ

ಆ ಮೇಷ್ಟ್ರ ಹೆಸರನ್ನು ಹಲವರಿಂದ ಕೇಳಿ ತಿಳಿದಿದ್ದೆ. ಒಮ್ಮೆ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ( ಒಲ್ಲದ ಮನಸ್ಸಿನಿಂದ! ) ಪ್ರಥಮ ಸ್ಥಾನ ಪಡೆದಿದ್ದರು. (ಇವರ ಹೊರತು ಅಲ್ಲಿ ಭಾಗವಹಿಸಿದ್ದವರೆಲ್ಲರೂ ಚಿತ್ರಕಲಾ ಶಿಕ್ಷಕರು!)

ಮೊನ್ನೆ ಅವರು ಸಿಕ್ಕಿದಾಗ ಒಂದಷ್ಟು ಜನರಿಗೆ ಅವರ ಹೆಸರು, ಶಾಲೆಯಲ್ಲಿ ಅವರು ಮಾಡುತ್ತಿರುವ ಸೇವೆಯನ್ನು ವಿವರಿಸಿದೆ. ಅವರ ಮುಖದಲ್ಲಿನ ಮುಜುಗರ ನನ್ನನ್ನು ಇರಿದು ಕೊಲ್ಲುತ್ತಿತ್ತು!

ಸುಮಾರು ಹೊತ್ತು ಕಳೆದ ಮೇಲೆ ನನ್ನ ಬಳಿ ಬಂದು ಮೆಲ್ಲಗೆ ಉಸುರಿ ಹೋದ ಅವರ ಮಾತುಗಳು ಮಾಗಿಯ ಈ ರಾತ್ರಿಯನ್ನು ಸುಡುತ್ತಿವೆ!

ಅವರು ಅಂದಿದ್ದಿಷ್ಟು: " ಸರ್ ದಯವಿಟ್ಟು ಯಾರಿಗೂ ಹೇಳ್ಬೇಡಿ. ನೀವು ಹೇಳಿ ನಾಲ್ಕು ಜನಕ್ಕೆ ಗೊತ್ತಾಯ್ತು ಅಂತ ಇಟ್ಕೊಳ್ಳಿ, ಆಮೇಲೆ ಅವ್ರು ಇವ್ರು ಬರ್ತಾರೆ, ಅಲ್ಲಿ ಇಲ್ಲಿ ಕರೀತಾರೆ, ಪಾಪ ನಮ್ಮಕ್ಳಿಗೆ ಅನ್ಯಾಯ ಆಗುತ್ತೆ, ಶಾಲೆ ಮುಚ್ಚುತ್ತೆ, ಈ publicityಯಿಂದ ನೆಮ್ದಿನೂ ಹಾಳಾಗುತ್ತೆ.. ದಯವಿಟ್ಟು ಬೇಡ ಸಾರ್.."

ಕ್ಷಮಿಸಿ ಸರ್, ನಿಮ್ಮ ಹೆಸರನ್ನು ಇಲ್ಲಿ ಬರೆದು ಮತ್ತೊಮ್ಮೆ ನಿಮಗೆ ಮುಜುಗರ ಉಂಟುಮಾಡುವುದಿಲ್ಲ!
*
ಕಾಜೂರು ಸತೀಶ್