ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, October 7, 2019

ಗಾಂಧಿ ಜಯಂತಿ ,ಮೀನು, ಸ್ವಾತಂತ್ರ್ಯ,ಶಿಕ್ಷಣ, ಬದುಕು, ಇತ್ಯಾದಿ

ಗಾಂಧಿ ಜಯಂತಿ. ಆ ಶಾಲೆಯಲ್ಲಿ ಎಂಟು ಮಕ್ಕಳಿದ್ದರು.


'ಮಕ್ಳೇ, ಗಾಂಧೀಜಿ ಬಗ್ಗೆ ಏನಾದ್ರೂ ಗೊತ್ತಾ?' ಕೇಳಿದೆ. ಮುಖವನ್ನೇ ನೋಡಿದರು. ಹೂ-ಹಾರ ಹಾಕಿರುವ ಗಾಂಧಿಯ ಪಟ ತೋರಿಸಿ 'ಇವ್ರು ಯಾರೂಂತ ಗೊತ್ತಾ?' ಕೇಳಿದೆ.

'ತಾತ ಸರ್' ಮಗುವೊಂದು ಮುಗ್ಧತೆಯಿಂದ ಹೇಳಿತು.

'ಸ್ವಾತಂತ್ರ್ಯ ದಿನಾಚರಣೆ ಆಚರ್ಸ್ತೀರಲ್ವಾ?' 'ನಮ್ಮ ದೇಶ ಯಾವ್ದು ಗೊತ್ತಾ?'

ಪದವೇ ಕೇಳದವರಂತೆ ನನ್ನನ್ನೇ ನೋಡತೊಡಗಿದರು.


ಆ ಮುಗ್ಧ ಮಕ್ಕಳಿಗೆ ಅವೆಲ್ಲಾ ತಿಳಿದಿರಲಿಲ್ಲ. ಬದಲಾಗಿ ಮೀನು ಹಿಡಿಯುವುದು, ಸಾರುಮಾಡಿ ತಿನ್ನುವುದು ಮುಂತಾದ ಜೀವನ ಕೌಶಲಗಳನ್ನು ಕಲಿತಿದ್ದರು.

ಹೇಮಾವತಿ ಹಿನ್ನೀರು ಇರುವವರೆಗೆ ಆ ಶಾಲೆಯಲ್ಲಿ ಶಿಕ್ಷಣ. ನೀರು ಇಳಿದಿದ್ದೇ ತಡ ಮತ್ತೊಂದು ಊರಿಗೆ; ಮತ್ತೊಂದು ರಾಜ್ಯಕ್ಕೆ. ಹೀಗಾಗಿ ಮಕ್ಕಳಿಗೆ ಕನ್ನಡದ ಜ್ಞಾನ ಅಷ್ಟಕ್ಕಷ್ಟೆ.


ಮನೆಗೆ ಹೋದಾಗ ಚಾಪೆ ಹಾಸಿ ಕೂರಿಸಿದರು. ಗೆಳೆಯ ಜಾನ್ ಸುಂಟಿಕೊಪ್ಪ , ಸುತ್ತಮುತ್ತಲಿನ ಶಿಕ್ಷಕರು ನಮ್ಮೊಂದಿಗೆ ಕೂಡಿಕೊಂಡರು.

ಮಕ್ಕಳ ಪೋಷಕರು ಹೆಚ್ಚೆಂದರೆ ಮೂರನೇ ತರಗತಿಯವರೆಗೆ ಓದಿದವರು. 'ನಮಗೆ ಬದುಕು ಮುಖ್ಯ' ಎಂದರು. 'ಮಕ್ಕಳ ಭವಿಷ್ಯ ಮುಖ್ಯ ಅಲ್ವಾ?' ಕೇಳಿದರೆ 'ಏನ್ಮಾಡೋದು ನಾವು ಹೋದ್ರೆ ಮಕ್ಳೂ ಬರ್ತಾವಲ್ಲಾ' ಸಮರ್ಥಿಸಿಕೊಂಡರು.

ಸಿಳ್ಳೇಕ್ಯಾತ ಸಮುದಾಯಕ್ಕೆ ಸೇರಿದ ಅವರು ತಮ್ಮ ಸ್ವಂತ ಹಣದಿಂದ ದೇವಾಲಯವನ್ನು ಕಟ್ಟಿಸುತ್ತಿದ್ದರು. ಮೂರು ಲಕ್ಷದ ಯೋಜನೆ!
******************************** 

ಹೊರಗೆ ಬಂದ ಮೇಲೆ 'ಅಲ್ಲಾ ಸಾರ್ ಅವ್ರೆಷ್ಟು calm ಆಗಿದ್ರು, ನಾವು ನೋಡಿ ಆಕಾಶ ಕಳಚಿ ಬಿದ್ದವ್ರ ಹಾಗೆ ಇರ್ತೇವೆ. ನಿಜವಾದ ಸ್ವಾತಂತ್ರ್ಯವನ್ನು ಅವ್ರು ಅನುಭವಿಸ್ತಿದ್ದಾರೆ. ನಮ್ಗಿಲ್ಲ ನೋಡಿ' ಗೆಳೆಯನಿಗೆ ಹೇಳಿದೆ.

'ನಿಜ ಸಾರ್ ಅವ್ರನ್ನು ನಾವು ,ಈ ವ್ಯವಸ್ಥೆ ಎಲ್ಲಾ ಸೇರಿ ಹಾಳು ಮಾಡ್ತಿದ್ದೇವೆ. ನಮ್ಮ ಯೋಜನೆಗಳಿಂದ ಅವ್ರು ಮೀನು ಹಿಡಿಯೋದನ್ನೂ ಕಲಿಯಲ್ಲ, ಬೇರೆ ಕೆಲ್ಸಾನೂ ಕಲಿಯಲ್ಲ' ಗೆಳೆಯನ ಪ್ರತಿಕ್ರಿಯೆ.

ಪ್ರಿಯ ಗಾಂಧಿ, ಕ್ಷಮಿಸಿ ನಮ್ಮನ್ನು!
*

ಕಾಜೂರು ಸತೀಶ್

No comments:

Post a Comment