ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, October 9, 2019

ಜಿ ಕೆ ರವೀಂದ್ರಕುಮಾರ್ ಸರ್- ಅಕ್ಷರ ತರ್ಪಣ

2011ರಲ್ಲಿ ಹಳೆಯ ದೀಪಾವಳಿ ವಿಶೇಷಾಂಕಗಳನ್ನು ಗುಡ್ಡೆಹಾಕಿಕೊಂಡು ಕತೆ-ಕವಿತೆಗಳನ್ನು ಗಂಭೀರವಾಗಿ ಓದುತ್ತಾ ಕುಳಿತಿದ್ದೆ. ಕನ್ನಡ ಪ್ರಭ ವಿಶೇಷಾಂಕದ ಕಡೆಯ ಪುಟದ ಕವಿತೆ ನನ್ನನ್ನು ಹೆಚ್ಚು ಕಾಡಿದ್ದು. ಕವಿತೆ ಹೀಗೆ ಆರಂಭವಾಗಿತ್ತು:
'ಹುಟ್ಟಬಹುದಿತ್ತೇನೊ ವಿದಾಯದ ಒಂದು ಸಾಲು..'

ಕಣ್ತಪ್ಪಿನಿಂದ ಕವಿಯ ಹೆಸರು ನಮೂದಿಸಲು ಬಿಟ್ಟುಹೋಗಿತ್ತು.

ಮೊಬೈಲು ಕೈಗೆತ್ತಿಕೊಂಡು ಸಂದೇಶ ಕಳಿಸಿದೆ. 'ಆ ಕವಿತೆ ನಿಮ್ದೇ ಅಲ್ವಾ ಸರ್?  ಅತ್ತಲಿಂದ  'Yes, wonderful! Thanks'. ಆಗ ಅವರೊಂದಿಗೆ ಮಾತನಾಡಿದೆ;ಕಂಚಿನ ಕಂಠ!

ಆ 'ವಿದಾಯದ ಸಾಲು' ನಮ್ಮನ್ನು ಮತ್ತಷ್ಟೂ ಆತ್ಮೀಯರನ್ನಾಗಿಸಿತ್ತು. ಅದೇ 'ವಿದಾಯದ ಸಾಲು' ಈಗ ನನ್ನಿಂದ ಬರೆಸಿಕೊಳ್ಳುತ್ತಿದೆ! ಪ್ರಿಯ ಜಿ ಕೆ ರವೀಂದ್ರಕುಮಾರ್ ಸರ್....



ರವೀಂದ್ರಕುಮಾರ್ ಸರ್ ತೀರಿಕೊಂಡ ಸುದ್ದಿ ಕೇಳಿ ಅದನ್ನು ನಂಬುವುದಕ್ಕೆ ಗಂಟೆಗಳೇ ಹಿಡಿಸಿದವು. ಯುವತಲೆಮಾರಿನೊಂದಿಗೆ ಎಷ್ಟೊಂದು ಪ್ರೀತಿಯಿಂದ ಮಾತನಾಡುತ್ತಿದ್ದರು, ತಿದ್ದುತ್ತಿದ್ದರು,ಬೆನ್ನು ತಟ್ಟುತ್ತಿದ್ದರು, ಬೆಳೆಸುತ್ತಿದ್ದರು! ಇವತ್ತಿನ ಫೇಸ್ಬುಕ್ ಗೋಡೆಗಳ ಮೇಲೆಲ್ಲಾ ರವೀಂದ್ರಕುಮಾರ್ ಸರ್ ಅವರದ್ದೇ ಚಿತ್ರಗಳು, ಒಡನಾಟದ ನೆನಪುಗಳು.

ನಾನವರನ್ನು ಮೊದಲು ಮುಖತಃ ಭೇಟಿಯಾಗಿದ್ದು ಮಡಿಕೇರಿಯ ದಸರಾ ಕವಿಗೋಷ್ಠಿಯಲ್ಲಿ. ಕವಿ/ಸಾಹಿತಿಗಳಿಂದ ದೂರ ಉಳಿಯುವ ನನಗೆ ಅವರ ಆತ್ಮೀಯತೆ ತುಂಬಾ ಇಷ್ಟವಾಯಿತು.


ಮಡಿಕೇರಿಯಲ್ಲಿದ್ದಾಗ ಅವರ ಬರವಣಿಗೆ ಎಷ್ಟು ತೀವ್ರವಾಗಿತ್ತೆಂದರೆ ಅವರ ಲಲಿತ ಪ್ರಬಂಧ 'ಮೇಘ ಮಲ್ಹಾರ' ಹುಟ್ಟಿದ್ದೇ ಅಲ್ಲಿ. ಪ್ರಜಾವಾಣಿ ವಿಮರ್ಶೆ, silence please ,ದನಿ ಅನುದನಿಗಳ ಪ್ರಸವವೂ.

MEd ಓದಿಕೊಂಡು ಯಾವುದೋ ಶಾಲೆಯ ಮಕ್ಕಳಿಗೆ ಮೇಷ್ಟ್ರಾಗದೆ ಬಾನುಲಿಯಲ್ಲಿ ನಮ್ಮೆಲ್ಲರಿಗೂ ಮೇಷ್ಟ್ರಾಗಿದ್ದರು. ಅವರ ಸಿಡಿಲಿನಂಥ ಧ್ವನಿ, ಸ್ಪಷ್ಟ ಉಚ್ಚಾರ, ಹದವರಿತ ಏರಿಳಿತ, ಸಂದರ್ಶನದಲ್ಲಿ ಬುಲೆಟ್ಟಿನಂತೆ ಬರುತ್ತಿದ್ದ ಪ್ರಶ್ನೆಗಳು- ಇದನ್ನೆಲ್ಲ ಕೇಳಿ ಅನುಭವವಿದ್ದ ನನಗೆ ಅವರು ಆಕಾಶವಾಣಿಗೆ ಆಹ್ವಾನಿಸಿದರೂ ತಪ್ಪಿಸಿಕೊಂಡಿದ್ದೆ.

ಸಾಹಿತ್ಯ , ಸಂಗೀತ, ತತ್ವಶಾಸ್ತ್ರಗಳ ಮೇಲೆ ಅಪಾರ ಒಲವು. ಅವರ ಪ್ರಬುದ್ಧತೆಗೆ ಈ ವೀಡಿಯೊಗಳೇ ಸಾಕ್ಷಿ.


https://youtu.be/mZeKJr1xf0w
ಸಾವಿನ ಶಯ್ಯೆಯಿಂದ ಎರಡು ದಶಕಗಳ ಹಿಂದೆ ಎದ್ದು ಬಂದಿದ್ದರು. 'ಸಾವು' ಅವರನ್ನು ಅಷ್ಟು ಕಾಡಿಸಿದೆ, ಪೀಡಿಸಿದೆ. 'ಕದವಿಲ್ಲದ ಊರಿಗೆ' ಪಯಣ ಬೆಳೆಸುವ ಅನುಭವಗಳು ಅನೇಕ ಕವಿತೆಗಳಲ್ಲಿವೆ. ಮೊನ್ನೆ ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಕವಿತೆ ಕೂಡ ಅಂತಹದ್ದೇ: 'ಶುಭಂ ಎಂದಾಗ ತೆರೆಯ ಮೇಲಿನ ಕತೆ ಮುಗಿವುದು...'




ನನಗೆ ಅವರ 'ಮರವನಪ್ಪಿದ ಬಳ್ಳಿ'ಯನ್ನು ಕಳುಹಿಸಿಕೊಟ್ಟಿದ್ದರು(ನನ್ನ ಇಷ್ಟದ ಸಂಕಲನವದು).ಜೊತೆಗೆ ಅವರ ಈತನಕದ ಕವಿತೆಗಳ ವಿಮರ್ಶಾ ಸಂಕಲನವನ್ನೂ . ಮತ್ತೆ ಮತ್ತೆ ಓದಿಸಿಕೊಂಡ ಕೃತಿಗಳವು. 'ನಿಮ್ಮ ಅಂಚೆ ವಿಳಾಸ ಕೊಡಿ' ಈ ಸಂದೇಶವನ್ನು ನನ್ನ ತಲೆಮಾರು ಅವರಿಂದ ಸ್ವೀಕರಿಸಿರುವುದಕ್ಕೆ ಲೆಕ್ಕವಿಲ್ಲ.

'ಸತೀಶ್ ಭಾವಗೀತೆ ಕಳುಹಿಸಿ' ಕೇಳಿದ್ದರು. ಎರಡನ್ನು ಕಳುಹಿಸಿಕೊಟ್ಟಿದ್ದೆ. 'ಹಾಡುತ್ತಾ ಹಾಡುತ್ತಾ ಹಾಡುಗಾರರು ಹಾಡುವುದನ್ನು ನಿಲ್ಲಿಸಿಯೇಬಿಟ್ಟರು. ಏನದು ಇಮೇಜ್? ವಿವರಿಸುತ್ತೀರಾ?ಕುತೂಹಲಕ್ಕೆ ಕೇಳುತ್ತಿದ್ದೇನೆ' ಕೇಳಿದ್ದರು. ಮತ್ತೊಂದನ್ನು ಕಳುಹಿಸಿದಾಗ ಮೆಚ್ಚಿ ಸಂದೇಶ ಕಳುಹಿಸಿದ್ದರು. ಅದು ಪ್ರಸಾರವಾಗುವ ಮೊದಲೇ ಹೀಗೆ ಹೊರಟುಬಿಟ್ಟರು.


ಗೊತ್ತು, ರವೀಂದ್ರಕುಮಾರ್ ಸರ್ ಮತ್ತಷ್ಟೂ ಬಾಳುತ್ತಾರೆ ನಮ್ಮೊಳಗೆ, ಮತ್ತಷ್ಟೂ ಪ್ರೀತಿಸಲ್ಪಡುತ್ತಾರೆ.

*
ಕಾಜೂರು ಸತೀಶ್ 

No comments:

Post a Comment