ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, March 31, 2020

ಒಂದು ದಶಕದ ಗೃಹಬಂಧನ ಮತ್ತು ಕೊರೋನಾ

ಜನ ಮನೆಯ ಒಳಗೆ ಬಂಧಿಯಾಗಿದ್ದಾರೆ. 'ಕೊರೋನಾ' ಅಂತಹ  ಅನಿವಾರ್ಯತೆಯನ್ನು ಸೃಷ್ಟಿಸಿದೆ;  ಜಗತ್ತನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ. ಸೃಜನಶೀಲವಾಗಿ ಖಾಲಿಖಾಲಿಯಾಗಿರುವ ಜನ, ಹಲವು ಚಟಗಳನ್ನು ರೂಢಿಸಿಕೊಂಡಿರುವ ಜನ 'ಮನೆಯೊಂದು ಬಂಧೀಖಾನೆ' ಎಂಬಂತೆ ಬದುಕುತ್ತಿದ್ದಾರೆ.
*

ಗೆಳೆಯನಿಗೆ SMS ಕಳಿಸಿದ್ದೆ: 'ಎಲ್ಲಿದ್ದೀರಿ ಸಾಹೇಬ್ರೇ?'
 ಗಂಟೆಗಳು ಕಳೆದ ಮೇಲೆ ಅತ್ತಲಿಂದ ಉತ್ತರ:------
ನನ್ನ ಸರದಿ: ಅಯ್ಯೋ ಇನ್ನೂ ಅಲ್ಲೇ ಇದ್ದೀರಾ? ಒಬ್ರೇನಾ?
'ಹೌದು'!

'ಗೃಹಬಂಧನ' ಎನ್ನುವುದು ನನಗೆ ಮತ್ತು ನನ್ನ ಆ ಗೆಳೆಯನಿಗೆ ಹೊಸದಲ್ಲ. ಒಂದು ದಶಕದಷ್ಟು ಕಾಲ ನಾವು ಗೃಹಬಂಧನದಲ್ಲಿದ್ದವರು. ಒಂದು ಕಡೆ ಅದು ನನ್ನನ್ನು ಮತ್ತಷ್ಟೂ introvert ಆಗಿಸಿದರೆ ಇನ್ನೊಂದು ಕಡೆ ಅದನ್ನು ನೀಗಿಸಿಕೊಳ್ಳಲು ಸೃಜನಶೀಲ ದಾರಿಯನ್ನು ಹುಡುಕತೊಡಗುವಂತೆ ಮಾಡಿತು.

ಅಗತ್ಯ ವಸ್ತುಗಳು ದೊರೆಯದೆ ನಾವೆಷ್ಟೋ ದಿನ ಉಪವಾಸ ಮಲಗಿದ್ದೇವೆ. ಹೊರಮನುಷ್ಯರ ಸಂಪರ್ಕಕ್ಕಾಗಿ ಮೊಬೈಲು ಹಿಡಿದು ಗುಡ್ಡಗಳನ್ನು ಏರಿದ್ದೇವೆ. ATMನಲ್ಲಿ ಹಣ ಪಡೆಯಲು ಒಂದು ದಿನದ ಸಾಂದರ್ಭಿಕ ರಜೆಯನ್ನು ಹಾಕಿದ್ದೇವೆ.  ಬಸ್ಸಿನ ಮುಖನೋಡದೆ ಎಷ್ಟೋ ದಿನಗಳನ್ನು ಕಳೆದಿದ್ದೇವೆ.
*

ಮಾರ್ಚ್ 14ರ ನಂತರ ನನ್ನ ಆ ಗೆಳೆಯ ಅಂಗಡಿಯ ಮುಖ ನೋಡಲಿಲ್ಲ. ಅದೃಷ್ಟವೆಂದರೆ ಅವರಿಗೆ ಅಗತ್ಯ ವಸ್ತುಗಳ ಕೊರತೆಯಿಲ್ಲ. ಒಂದೊಮ್ಮೆ ನಾನು ಇನ್ನೂ ಅಲ್ಲೇ ಇದ್ದಿಬಿಟ್ಟಿದ್ದರೆ ಅರೆ ಜೀವವಾಗುತ್ತಿದ್ದೆ, ಅಥವಾ ಸತ್ತುಹೋಗುತ್ತಿದ್ದೆ!

ಗೃಹಬಂಧನದ ಒಂದು ದಶಕವು ನನಗೆ ಮನುಷ್ಯನ ಸಣ್ಣತನಗಳನ್ನೂ, ಏಕಾಂತದ ಪರಮಸುಖವನ್ನೂ, ನಿಸರ್ಗದ ಒಡನಾಟದ ದಿವ್ಯ ಅನುಭವವನ್ನೂ ಒಟ್ಟಿಗೆ ಕೊಟ್ಟಿದೆ. ಒಬ್ಬ ಕಾರಾಗೃಹವಾಸಿಯ ಒಳಗೆ ಪರಕಾಯ ಪ್ರವೇಶ ಮಾಡುವುದನ್ನೂ ಕಲಿಸಿದೆ.
*


ಕಾಜೂರು ಸತೀಶ್ 

Friday, March 27, 2020

ಬಾನಸಮುದ್ರಕ್ಕೆ ಕವಿತೆಯ ನೋಟದ ಗಾಳ

ಆಧುನಿಕ ಕವಿತೆಗಳ ಮುಖ್ಯ ಲಕ್ಷಣಗಳೆಂದರೆ
-ಅವು ಹೇಳುವುದನ್ನು ವಾಚ್ಯವಾಗಿಸಿಬಿಡುವುದು
-ಹೇಳಿಯೂ ಹೇಳದಂತಿರುವುದು
-ಹೊಸ ಮಾದರಿಯಲ್ಲಿ ಹೇಳುವುದು
-ಅಖಂಡವಾಗಿ ಹೇಳದಿರುವುದು ಅಥವಾ ಅಖಂಡವಾಗಿ ಹೇಳುವಷ್ಟು ಧ್ಯಾನಸ್ಥ ಸ್ಥಿತಿಯಿಂದ ವಂಚಿತವಾಗಿಬಿಡುವುದು.
- ಹೇಳುವಿಕೆಯಲ್ಲಿ ನಿರ್ದಿಷ್ಟತೆಯಿದ್ದರೂ ಕಲಾತ್ಮಕವಾಗಿರದೆ ಇರುವುದು.
-ಒಂದು ಇಸಂ ಅನ್ನು ಸ್ಥಾಪಿಸಲೆಂದೇ ಬರೆಯುವುದು ಮತ್ತು ಸಹಜವಾಗಿ ಉಕ್ಕುವ ಮುಗ್ಧತೆಯನ್ನು ಹತ್ತಿಕ್ಕುವುದು.


ಇವು ಈಗ ಪ್ರಕಟಗೊಳ್ಳುತ್ತಿರುವ ಕವಿತೆಗಳ ಸಾಮಾನ್ಯ ಚಹರೆಗಳು. ಅದು ಕನ್ನಡಕ್ಕೆ ಸೀಮಿತವಾಗುವ ವಿಚಾರವಲ್ಲ. ನಾನು ಹೆಚ್ಚು ಓದಿಕೊಳ್ಳುತ್ತಿರುವ ಸಮಕಾಲೀನ ಮಲಯಾಳಂ ಕಾವ್ಯವು ಗದ್ಯದ ಒಳಗೆ ಪದ್ಯವನ್ನು ಹೊಸ ನೆಲೆಯಲ್ಲಿ ಶೋಧಿಸುವ ಪ್ರಯತ್ನದಲ್ಲಿದೆ. ಭಾಷಿಕ ರೂಪ ಮತ್ತು ಆಕೃತಿಗಳ ಬಗ್ಗೆ ಅದು ತಲೆ ಕೆಡಿಸಿಕೊಳ್ಳುವುದಿಲ್ಲ. 'ಕವಿತೆ ಹೊಸದಾಗಿರಬೇಕು' ಎಂಬ ನಿಲುವಷ್ಟೇ ಅಲ್ಲಿ ನಿಚ್ಚಳವಾಗಿ ಕಾಣಿಸುತ್ತಿದೆ. ಯಾವುದು ಕತೆ , ಯಾವುದು ಕವಿತೆ ಎಂದು 'ಆಲಿಸಿ ಗುರುತಿಸುವುದು' ಅಲ್ಲಿ ಜಟಿಲವಾದ ಸಂಗತಿ. ವಿಷಯ ಕೊಟ್ಟರೆ ಸಾಕು ಅಲ್ಲೇ ಕವಿತೆ!

ಮೇಲಿನ ಅನಿಸಿಕೆಗಳನ್ನು ಹೇಳಬೇಕೆನಿಸಿತು,ಅಷ್ಟೆ . ಯಾವುದನ್ನೋ ಯೋಚಿಸುವಾಗ ಇವೆಲ್ಲಾ ಬಂದುಹೋದವು.
************************************



ವಿಳಾಸವನ್ನೂ ಕೇಳದೆ ,ಪುಸ್ತಕ ಕಳಿಸುತ್ತಿದ್ದೇನೆ ಎಂದೂ ಹೇಳದೆ, ತಲುಪಿರುವುದನ್ನೂ ಖಾತ್ರಿಪಡಿಸಿಕೊಳ್ಳದೆ(ರಾಮಕೃಷ್ಣ ಸುಗತ ಅವರೂ ಈಚೆಗೆ ಹೀಗೇ ಮಾಡಿದ್ದರು!) ಸುಮ್ಮನೆ ಇರುವ ಪ್ರವೀಣ ಅವರ ಬಾನಸಮುದ್ರಕೆ ಗಾಳನೋಟವನ್ನು ಓದಿದೆ. ಅದರ ಕುರುಹಾಗಿ ಈ ನಾಲ್ಕು ಸಾಲುಗಳು.


" .... ನನ್ನ ಬಹುತೇಕ ಕವಿತೆಗಳನ್ನು ಕಷ್ಟ ಕವಿತೆ, ಕೋಪ ಕವಿತೆ, ಕಟು ಕವಿತೆ ಅಥವಾ ನೋವು ಕವಿತೆಗಳಾಗಿಯೇ ಕಾಣಬಹುದು" ತಮ್ಮ ಕವಿತೆಗಳಿಗೆ ಹೀಗೆ ಮುನ್ನುಡಿ ಬರೆದುಕೊಳ್ಳುವ ಪ್ರವೀಣ 'ಬಾನಸಮುದ್ರಕೆ ಗಾಳನೋಟ' ಸಂಕಲನಕ್ಕೆ ಪ್ರವೇಶವನ್ನು ಒದಗಿಸುತ್ತಾರೆ. ಈ ಚೊಚ್ಚಲ ಹೆರಿಗೆಗಾಗಿ ಅವರು ಕವಿತೆ ಹುಟ್ಟಿದ ನಂತರದ 28 ವರ್ಷಗಳನ್ನು ತೇಯ್ದಿದ್ದಾರೆ. 'ಅಂತೂ ಈ ಗದ್ದಲದಲಿ ಇರಲಿ/ ನನ್ನದೂ ಒಂದು ಕೂಗು' ಎಂದು ನೆಲಬಾನಿನತ್ತ ಗಾಳನೋಟ ಬೀರಿದ್ದಾರೆ.

*
ದುಃಖ ಮತ್ತು ಸಿಟ್ಟನ್ನು ಹಲ್ಲು ಕಚ್ಚಿ ಸಹಿಸುವಾಗಿನ 'ಮೌನ' ಪ್ರವೀಣ ಅವರ ಕವಿತೆಗಳು. ಕವಿತೆಯನ್ನು ಸೃಜಿಸುವುದೆಂದರೆ 'ಮಾತುಗಳು ಹರಿವ ಗಟಾರಿನಲಿ ಮೌನ ಮುತ್ತುಗಳ' ಹುಡುಕುವ ಪರಿ . ಅಲ್ಲಿರುವುದು ಹೊಸತನದ ಹಸಿಮಣ್ಣು. ಹೊಸ ರೂಪಕ ಮತ್ತು ಪ್ರತಿಮೆಗಳು ಅವುಗಳ ಬಾಯಿ:

- ಮಳೆಯ ದಾಳಿಗೆ ಸತ್ತುಬಿದ್ದ ಕಡಲು

-ನೀರ ಬೆಚ್ಚಗಿನ ಎಮ್ಮೆಯಿಲ್ಲದೇ ಚಳಿ ಹಿಡಿದು ನೆಗಡಿ

- ರಾತ್ರಿ ಚಿರಯೌವ್ವನೆ/ಹಗಲು ಹಳಸಿದ ಮುದುಕ

-ಹೊಟ್ಟೆ ಒಲೆಯಲಿ ಅರ್ಧ ಉರಿದ ಒಲವಿನ ಸೌದೆ ಹೊಗೆ ಎಬ್ಬಿಸಿದೆ


ಹೀಗೆ ಪ್ರವೀಣ ಅವರ ಕವಿತೆಗಳು ಯಾರ ಒಳಗೂ 'ಹೊಳೆಯದಿರುವ ಶೂನ್ಯ'ವನ್ನು ಹೊಳೆಯಿಸಿ ತುಂಬಿಕೊಳ್ಳುತ್ತವೆ:

-ಸಾವು ನಿರಂತರ ನಿರ್ಭಯ ನಿರ್ವಸ್ತ್ರ
ಗೆಳತಿಯಂತೆ ಬಂದು
ತಬ್ಬಿಕೊಳ್ಳುತ್ತದೆ

-ನಿನ್ನ ನೆನಪು ನನ್ನ ತೋಳು ಜಗ್ಗುತ್ತದೆ
ನಾನು ಬನೀನು ಕಂಡೀತೆಂದು ಕಾಲರೆಳೆದುಕೊಳ್ಳುತ್ತೇನೆ.
*
ಕವಿತೆ ಹುಟ್ಟುವುದೇ ಹತಾಶೆಯಲ್ಲಿ ಮತ್ತು ಅದನ್ನು ನಿವಾರಿಸಿಕೊಳ್ಳುವ ಹಪಾಹಪಿಯಲ್ಲಿ. ಈ 'ಬಿಡುಗಡೆಗೊಳ್ಳಬಯಸುವ' ಪ್ರಕ್ರಿಯೆಯಲ್ಲಿ ಅಭಿವ್ಯಕ್ತಿಯು philosophical ಆಗಿಬಿಡುತ್ತದೆ:

-ಗವಿಯ ಒಳಗಿನ ಕೊನೆಯಲ್ಲಿ
ಬೆಳಕಿನೂರಿನ ಗಿಡನೆಟ್ಟರೂ
ಹೂವು ಅರಳುವುದೆಂಬ ಕನಸು
ಸಾಕಾರಗೊಳ್ಳುವುದಿಲ್ಲ.

- ಕತೆ ಮುಗಿದ ಮೇಲೆ ನೀತಿ ಹೇಳುತ್ತೀರಿ
ಅರ್ಥವಾಗುವುದೇ ಇಲ್ಲ
ಮೊದಲೇ ಹೇಳಿದ್ದರೆ ಕತೆಯನ್ನಾದರೂ ತಿರುಚಬಹುದಿತ್ತು.

-ಬೆಂಕಿ ಎಂದೂ ಸುಟ್ಟುಕೊಳ್ಳುವುದಿಲ್ಲ
ಸುಡುವುದು ಅದನ್ನು ಹೊತ್ತಿಸಿದ್ದು.

-ನೀನೀಗ ಬೆತ್ತಲಾಗಿ ಬಂದರೂ
ಪ್ರೀತಿ ಹುಟ್ಟುವುದಿಲ್ಲ
ಒಳಗೆ ಬೆಂಕಿ ಹೊತ್ತಿಕೊಳ್ಳದೆ
ಹೊರಗೆ ಬೆಳಕು ಚೆಲ್ಲುವುದಿಲ್ಲ


*

ಛಂದಸ್ಸಿನ ಪ್ರಯೋಗಶೀಲ ಬಳಕೆಯಲ್ಲೂ ಕೆಲವು ಕಡೆಗಳಲ್ಲಿ ಕವಿ ಪ್ರವೀಣರು:

ಪಿಸುಕಿದ ಪರಕಾರದಲಿ ನಗುದುಟಿಯ ಬಣ್ಣ
ನಗುವಿನ ಚಂದ್ರನಿಗೆ ಒಂಟಿ ತಾರೆ ಕಣ್ಣ
ನೋವ ಬಾಣಲೆಯಲಿ ಖುಷಿ ಬಾರೆ ಹಣ್ಣ
ಮಾತಿನ ಮೊರದಲ್ಲಿ ಖೇರು ಎದೆಯ ಹುಣ್ಣ
*

ಸಾಮಾನ್ಯವಾಗಿ ಆಧುನಿಕ ಕವಿತೆಗಳಿಗೆ clarity ಲಭಿಸುವುದು ಕಥನ ಕವನಗಳಿಂದ.ಪ್ರವೀಣ ಅವರ ಕವಿತೆಯೊಳಗಿನ ಕಥೆಗಾರರಿಗೆ ಕತೆ ಮತ್ತು ಕವಿತೆಯನ್ನು ಸಮದೂಗಿಸಿಕೊಂಡು ಹೋಗಬಲ್ಲ ಕಸುವಿರುವುದರಿಂದ- Narration ಸಾಗುತ್ತಿದ್ದಂತೆ ಚಂಗನೆ ಜಿಗಿದು ಹೊಸ ಅರ್ಥ ಹೊಳೆಯಿಸುವಲ್ಲಿ ಯಶ ಕಾಣುತ್ತಾರೆ.

ಉದಾಹರಣೆಗೆ- 1. ಲೂಜ಼್ ಕನೆಕ್ಷನ್ - ಅಸತ್ಯದ ಕಾಲದಲ್ಲಿ ಬೆಳಕು ಹೊತ್ತಿಕೊಳ್ಳುವುದು ಅನ್ಯಾಯದ ಮಾರ್ಗದಿಂದ ಎಂಬುದನ್ನು ಧ್ವನಿಸುವ ಕವಿತೆ. ಇಂದಿನ ವ್ಯಾಪಾರೀಕರಣದ ಸ್ಥಿತಿ. ಬಾಡಿಗೆ ಮನೆ ಎಂಬ ಕಾರಣಕ್ಕಾಗಿ ಹೊಸ ಸ್ವಿಚ್ ತರದೆ ಮತ್ತೊಂದನ್ನು ಕಿತ್ತು ಅಂಟಿಸುವ electricianನ ಕೆಲಸ. ಸ್ವಿಚ್ ಹೋಗಿರುವುದೇ ದೀಪ ಉರಿಯದಿರಲು ಕಾರಣವೆಂದರೂ, ಸುಳ್ಳೇಸುಳ್ಳು ನುಡಿದು ಆದಾಯ ಮಾಡಬಯಸುವ electrician. (ಈ ಕವಿತೆಯಲ್ಲಿ ಪ್ರವೀಣರು ಸರಳವಾಗಿಯೂ ಕವಿತೆಯನ್ನು ಉಸುರಬಲ್ಲರು ಎನ್ನುವುದನ್ನು ತೋರಿಸಿದ್ದಾರೆ)

2. ದಿಕ್ಕಿಲ್ಲದ ಬಯಲಲ್ಲಿ- ರಾಡಿಯೆದ್ದ ವ್ಯವಸ್ಥೆಯೊಂದಿಗೆ ರಾಜಿಮಾಡಿಕೊಳ್ಳುತ್ತಿರುವ ನಾವು. ಮೈಮೇಲೆ ಹಿಕ್ಕೆಹಾಕಿದ ಕಾಗೆಯ ವಿರುದ್ಧದ ಸೇಡು ತೀರಿಸಿಕೊಳ್ಳುವ ನಡಿಗೆ ಕಡೆಗೆ ಕಾಗೆಯೇ ಆಗಿಬಿಡುವ ಸ್ಥಿತ್ಯಂತರ.
*
ಪ್ರವೀಣರ ಕವಿತೆಗಳ ಹೆಚ್ಚುಗಾರಿಕೆಯೆಂದರೆ ಅವು ಇಸಂಗಳ ಕಡೆಗೆ ಚಲಿಸದೆ ಅನ್ನಿಸಿದ್ದನ್ನು ಹೇಳುವ ಮುಗ್ಧತೆಯನ್ನು ಹೊಂದಿರುವುದು. ಎಲ್ಲೂ ಅವು ಖಾಸಗಿ ಸಂಗತಿಗಳಾಗಿ ಉಳಿದುಬಿಡುವುದಿಲ್ಲ. ಅಲ್ಲಿ ಸಾಮಾಜಿಕ ಸಂರಚನೆಯ ಬುಡ ಅಲುಗಾಡುತ್ತಿರುವ, ಮಾನವೀಯ ಕಾಳಜಿಗಳ ಅತ್ಯಗತ್ಯತೆಯ ಕುರಿತ ಸೂಕ್ಷ್ಮ ಗ್ರಹಿಕೆಗಳಿವೆ.
ಇನ್ನೂ simple ಆಗಿ ಹೇಳುತ್ತಾ ಅಪಾರಾರ್ಥವನ್ನು ಮೂಡಿಸಲಿ ಎಂಬುವುದೇ ನನ್ನ ಕೋರಿಕೆ.
*


ಕಾಜೂರು ಸತೀಶ್

Tuesday, March 17, 2020

ಮಾರ್ಚ್ ತಿಂಗಳ ಕುಲುಮೆ ಮತ್ತು ನಾನು

ಯಾಕೋ ಏನೋ ಈ ಮಾರ್ಚ್ ತಿಂಗಳ ಈ ದಿನದ ಕತ್ತಲಲ್ಲಿ ಚಂದ್ರ ತಣ್ಣಗೆ ಆಕಳಿಸಿ ಅರೆತೆರೆದ ಕಣ್ಣುಗಳಲ್ಲಿ ನಿದ್ರಿಸುತ್ತಿರುವಾಗ, ನಾನಿಲ್ಲಿ ಸಣ್ಣಗೆ ಬೆವರುತ್ತಿರುವಾಗ,ಎರಡು ವರ್ಷಗಳ ಹಿಂದಿನ ಒಂದು ದಶಕದ ಬಿರುಬೇಸಿಗೆಯು ಬಂದು 'ಹೇಗಿದ್ದೀಯ   ಈಗ' ಎಂದು ಕ್ಷೇಮ ವಿಚಾರಿಸಿ ಹೋಯಿತು!

ಮಾರ್ಚ್ ಅಲ್ಲಿ ಕುಲುಮೆಯೊಳಗೆ ಮನೆಮಾಡಿತ್ತು. ನಾನು ಆಕ್ಸಿಜನ್ನಿಗೆ ಹಪಹಪಿಸಿ ವಿಶಾಲವಾಗಿ ಹಬ್ಬಿದ್ದ ಸಸ್ಯರಾಶಿಯ ಹಸಿರು ಮುಖವನ್ನು ದೀನನಾಗಿ ದಿಟ್ಟಿಸುತ್ತಿದ್ದೆ. ಅವಕ್ಕೆ ನನ್ನ ಮೇಲೆ ಕರುಣೆ ಉಕ್ಕುತ್ತಿರಲಿಲ್ಲ. ನಿಂತಲ್ಲಿ , ಕೂತಲ್ಲಿ ಮಂಕಾಗಿ ನಾನು ನಿದ್ದೆಹೋಗುತ್ತಿದ್ದೆ.

ರಾತ್ರಿಯ ಬದುಕು! ಆಹಾ! ಮಲಗುವ ಮುನ್ನ ಒಂದು ಕೊಡ ನೀರನ್ನು ಮಂಚದ ಕೆಳಗೆ ಸುರಿಯುವುದು. ಫ್ಯಾನಿಗೂ ಉಸಿರುಗಟ್ಟುವ ಹಾಗೆ ಅದರ ರೆಕ್ಕೆಗಳನ್ನು ತಿರುಗಿಸವುದು. ವಿದ್ಯುತ್ ಗೊಟಕ್ ಎಂದರೆ ನಿದ್ದೆಗೂ ಅದೇ ಗತಿ!

ಕತ್ತಲಲ್ಲಿ ಒಂದು ಹೆಜ್ಜೆಯನ್ನು ಭೂಮ್ತಾಯಿಯ ಎದೆಯ ಮೇಲಿಡುತ್ತಿದ್ದೇನೆ ಎಂದರೆ ಟಾರ್ಚಿನ ಸಹಾಯ ಬೇಕಿತ್ತು! ಸ್ವಲ್ಪ ಯಾಮಾರಿದರೂ ಮುಲಾಜಿಲ್ಲದೆ ಕುಟುಕಿಬಿಡುತ್ತವೆ ಹಾವುಗಳು! ಕಿಟಕಿಯಲ್ಲಿ, ಬಾಗಿಲಲ್ಲಿ, ಅಂಗಳದಲ್ಲಿ, ಬಚ್ಚಲ ಮನೆಯಲ್ಲಿ ...ಎಲ್ಲೆಲ್ಲೂ ಹಾವುಗಳದ್ದೇ ಪಾರಮ್ಯ! ನಾನು ನನ್ನ ಪಾಡಿಗೆ , ಅವು ಅವುಗಳ ಪಾಡಿಗೆ!
(ಮನುಷ್ಯರಷ್ಟು ಕ್ರೂರಿಯಲ್ಲ ಅವು!)

ತಲೆಯ ಮೇಲೆ ಕಂಡಿದ್ದು, ಕಾಲಡಿಗೆ ಸಿಕ್ಕಿಹಾಕಿಕೊಂಡಿದ್ದು, selfie ತೆಗೆದುಕೊಂಡಿದ್ದು... ಅವೆಲ್ಲಾ ಅಲ್ಲಿನ ಬೆಂಕಿಬಿಸಿಲಿನ ಎದುರು ಮಂಕಾಗಿ ನೆನಪಾಗುತ್ತಿವೆ..
*


ಕಾಜೂರು ಸತೀಶ್ 

Tuesday, March 3, 2020

ನನ್ನ ಗುರುಪಟ್ಟಿಯಲ್ಲಿರುವ ಕೆಲವು ಕಪ್ಪು ಚುಕ್ಕಿಗಳು

ನನ್ನ ಕೆಲವು ಆದರ್ಶ ಗುರುಗಳ ಬಗ್ಗೆ ಅನೇಕ ಕಡೆಗಳಲ್ಲಿ ಹೇಳುತ್ತಾ ಬಂದಿದ್ದೇನೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಿದ್ದೇನೆ; ಪ್ರಯತ್ತಿಸುತ್ತಿದ್ದೇನೆ.

ಆದರೆ, ನನಗೆ ಸಿಕ್ಕ ಕೆಲವು ಸೋಮಾರಿ ಶಿಕ್ಷಕರ ಬಗ್ಗೆಯೂ ಹೇಳಬೇಕೆನಿಸುತ್ತಿದೆ. ಸಮಾಜವೊಂದು ಆರೋಗ್ಯಕರವಾಗಿರಲು ಒಳ್ಳೆಯ ಶಿಕ್ಷಕರ ಪಾತ್ರ ಎಷ್ಟಿರುತ್ತದೋ, ಕೆಟ್ಟುಹೋಗಲು ಇಂತಹ ಕೆಟ್ಟ ಶಿಕ್ಷಕರ ಪಾಲೂ ಇರುತ್ತದೆ.

ನಾನು ಎರಡನೇ ತರಗತಿಯಲ್ಲಿ ಓದುತ್ತಿದ್ದಾಗ ಯಾವಾಗಲೋ ಒಮ್ಮೆ ತರಗತಿಗೆ ನುಗ್ಗಿ ನಮಗೆಲ್ಲಾ ನಾಲ್ಕು ಬಾರಿಸಿ ಒಂದು ಲೆಕ್ಕ ಮಾಡಿ ಹೊರಟುಹೋಗುತ್ತಿದ್ದ ಆ ಮನುಷ್ಯ ಮತ್ತೆ ಬರುತ್ತಿದ್ದದ್ದು ಮತ್ತೊಂದು ತಿಂಗಳಲ್ಲಿ!

ಕೆಲಸ ಎಂದರೆ ಅಷ್ಟು ಸುಲಭ ಅವರಿಗೆ! ಉಳಿದ ಶಿಕ್ಷಕರಿಗೆ ಕಲಿಸುವ ಹಂಬಲ. ಇವರಿಗೆ ಊರು ಸುತ್ತುವ ಚಟ! ಹಾಗಾಗಿ ನನಗೆ ಗಣಿತವೆಂದರೆ ಪ್ರಾಥಮಿಕ ಶಿಕ್ಷಣ ಮುಗಿಯುವವರೆಗೂ ಕಬ್ಬಿಣದ ಕಡಲೆ.

ಒಮ್ಮೆ ಕಷ್ಟ ಬಂದರೆ ಜೀವನವಿಡೀ ಕಷ್ಟ ಬಾಧಿಸುತ್ತದಂತೆ; ಸುಖ ಬಂದರೆ ಜೀವನವಿಡೀ ಸುಖ. ಇವರ ಕತೆಯೂ ಅಂತಹದ್ದೇ. ಆಗ ಅನುಭವಿಸಿದ ಅದೇ ಸುಖವನ್ನು ಈಗಲೂ ಅನುಭವಿಸುತ್ತಿದ್ದಾರೆ!( ಅವರನ್ನು ನನ್ನ ಗುರುಗಳ ಸಾಲಿನಿಂದ ಎಂದೋ ಕಿತ್ತು ಬಿಸಾಕಿದ್ದೇನೆ).
ಸೋಮಾರಿಗಳು ಯಾವಾಗಲೂ ಸುಖದಿಂದಿರುತ್ತಾರೆ ಎನ್ನುವುದಕ್ಕೆ ಇವರೊಂದು ಉದಾಹರಣೆಯಷ್ಟೆ.
*

ನಾನು ಬೆಳೆದು ದೊಡ್ಡವನಾದ ಮೇಲೆ, ಪುಸ್ತಕಗಳ ಹುಚ್ಚು ಹತ್ತಿದ ಮೇಲೆ, ಮತ್ತಿಬ್ಬರು ಮಹಾಶಯರು ಸಿಕ್ಕರು. ಒಬ್ಬರು ಬರೀ ಸುಳ್ಳು ಹೇಳಿ ತಮ್ಮ ಅವಧಿಯನ್ನು ಮುಗಿಸುತ್ತಿದ್ದರು. ಜೇಬಿನಲ್ಲಿ ಹಸಿರು ಶಾಯಿ ಇರುತ್ತಿದ್ದರೂ ಕಾಗುಣಿತ ಬರುತ್ತಿರಲಿಲ್ಲ. ಅವರ ಪರಮ ಸ್ನೇಹಿತ ಮತ್ತೊಬ್ಬ ವ್ಯಕ್ತಿಯು ನಾಲ್ಕು ಪುಸ್ತಕಗಳನ್ನು ತಂದು ಹುಡುಗಿಯರ ಕಡೆಗೆ ನೋಡುತ್ತಾ ಅದನ್ನು ಓದಿ ಮುಗಿಸುತ್ತಿದ್ದರು. ಆಗೆಲ್ಲ ನಾನು ನನ್ನ ನೋಟ್ ಪುಸ್ತಕದಲ್ಲಿ ಬಂಡಾಯ ಕವಿತೆಗಳನ್ನು ಹಡೆಯುತ್ತಿದ್ದೆ!
*

ಇಷ್ಟಾದರೂ, ಇಂತಹ ಶಿಕ್ಷಕರು 'ನಾನು ಇವರಂತೆ ಕೆಟ್ಟ ಶಿಕ್ಷಕನಾಗಬಾರದು' ಎಂಬ ನಿರ್ಧಾರವನ್ನು ತಳೆಯಲು ಕಾರಣಕರ್ತರಾದರು. ಅದಕ್ಕಾಗಿಯಾದರೂ ಅವರನ್ನು ಅಭಿನಂದಿಸಬೇಕು!
*


-ಕಾಜೂರು ಸತೀಶ್

Monday, March 2, 2020

ಒಂದು ಅಕ್ಷರ ಮತ್ತು ಕಾವಲುಭಟರು

(ಅರ್ಪಣೆ:
 ನನ್ನ statusಗಳಿಗೆ ಕಾದು ಕುಳಿತು, screenshot ತೆಗೆದು,ಕೆಲವರಿಗೆ ಕಳುಹಿಸಿ, ಆ statusನ ಅರ್ಥವನ್ನು  ತಮ್ಮ ಅಲ್ಪ ಓದಿನ ಮಿತಿಯಲ್ಲಿ ವಿವರಿಸಿ, ದ್ವೇಷ ಹುಟ್ಟಿಸಿ, ದೊಡ್ಡವರಾಗುತ್ತಿರುವ,  ನನ್ನ ನಗುಮೊಗದ ಸ್ನೇಹಿತರಿಗೆ!)

ಆಳದಲ್ಲಿ ಭ್ರೂಣಗಟ್ಟಿದ ಅಕ್ಷರವೊಂದನು ಧ್ಯಾನಿಸಿ
ಅಳೆದು ತೂಗಿ ಹಡೆದು ತೇಲಿಬಿಟ್ಟೆ ಮೊಬೈಲಿನಲ್ಲಿ
ಹೂ ಎಸಳಿನಂಥ ಅಕ್ಷರ, ಉಸಿರ ಪರಿಮಳ

ನೇಮಿಸಲಾಗಿದೆ ಅಕ್ಷರ ಹೊರಬರುವುದನೇ ಕಾಯಲು ಕಾವಲುಭಟರ
ಬಂದದ್ದೇ ತಡ ಎದ್ದು ಬಿದ್ದು ಎತ್ತಿಕೊಳುವಾಗ ಹಿಂದಿನಿಂದ ಏನೋ ಒಂದು ಸದ್ದು, ಭಾರಕ್ಕೆ!(ಅದೀಗ ಯಾರದೂ ಅಲ್ಲ)
ಸಾವರಿಸಿಕೊಂಡು ಎತ್ತಿ ತಕ್ಕಡಿಯಲಿಟ್ಟರೆ ರೀಡಿಂಗು ಕೂಡ ಸ್ತಬ್ದ.

ಬೆಳಕಿಗೋಸ್ಕರ ನೇಮಿಸಲ್ಪಟ್ಟ ಕಾವಲುಭಟರು ಕತ್ತಲ ಕಾಯ್ದು
ಬೆಳಕು ಮೂಡುವುದೇ ತಡ ನಿದ್ದೆಗೆ ಬಿದ್ದಿದ್ದಾರೆ.

ಅರ್ಥವಾಗದ ಅಕ್ಷರಕ್ಕೆ screenshot ಮತ್ತು shareಗಳ ಕಚಗುಳಿ



ಮೊದಲ ಕಾವಲುಭಟ ' ಮಹಾಪ್ರಭು ಇದು ನಿಮ್ಮ ಕುರಿತಾದದ್ದೇ' ಎಂದ
ಎರಡನೆಯವ ಮೂರನೆಯವ ನಾಲ್ಕನೆಯವ ಹನ್ನೆರಡನೆಯವ 'ನಂದೂ ಅದೇ'!

ಅಕ್ಷರವೀಗ ಕಟಕಟೆಯಲ್ಲಿದೆ
ಅದರ ಹೆಸರಲ್ಲಿ ಒಂದು ಮಾರುಕಟ್ಟೆ ತೆರೆದಿದೆ
ಭರ್ಜರಿ 24×7 ವ್ಯಾಪಾರ!
*



ಕಾಜೂರು ಸತೀಶ್

(ಚಿತ್ರ ಕೃಪೆ- ಅಂತರ್ಜಾಲ)