ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, October 13, 2023

ಸತ್ ಛಾಯಾ -ಕವನ ಸಂಕಲನದ ಕುರಿತು

ವಿಕ್ರಾಂತ್ ಕೇಳ್ಕರ್ ಅವರು ಸೃಜನಶೀಲ ಶಿಕ್ಷಕರು. ಮಾಹಿತಿ ತಂತ್ರಜ್ಞಾನದ ಹಲವು ಶಾಖೆಗಳನ್ನು ಸ್ಪರ್ಶಿಸಿದ ಅನುಭವವಿರುವವರು. ಆ ಕ್ಷೇತ್ರದಲ್ಲಿ ರಾಷ್ಟ್ರೀಯ ಪುರಸ್ಕಾರವನ್ನು ಪಡೆದವರು. ಫೋಟೋಗ್ರಫಿಯಲ್ಲೂ ಆಸಕ್ತಿಯನ್ನು ಹೊಂದಿರುವ ಅವರು ಹಲವಾರು ಸೊಗಸಾದ ಪಕ್ಷಿಗಳ ಚಿತ್ರಗಳನ್ನು ಕ್ಲಿಕಿಸಿದ್ದಾರೆ. ಇಂಗ್ಲಿಷ್ ಭಾಷಾ ಶಿಕ್ಷಕರಾಗಿ ತಂತ್ರಜ್ಞಾನವನ್ನು ಅನುಕೂಲಿಸುವಿಕೆಯ ಭಾಗವಾಗಿಸಿಕೊಂಡಿದ್ದಾರೆ.



ಹೀಗೆ ಸಕ್ರಿಯರಾಗಿರುವ ವಿಕ್ರಾಂತ್ ಕೇಳ್ಕರ್ ಅವರು ನಮ್ಮೆದುರಿಗೆ ಪ್ರತ್ಯಕ್ಷವಾಗಿದ್ದು ಸತ್ ಛಾಯಾ ಎಂಬ ಕವನ ಸಂಕಲನದೊಂದಿಗೆ. ಅದರೊಂದಿಗೆ ಅವರು ಕವಿತೆ ಬರೆಯುತ್ತಾರೆ ಎಂಬ ಸಂಗತಿಯೂ ನಮಗೆ ತಿಳಿಯಿತು! ಅವರು ಅದನ್ನು ಸಾಹಿತ್ಯ ಶಿಶುವಿನ ಗೀಚು ಸಾಹಿತ್ಯ ಎಂದು ಮುಖಪುಟದಲ್ಲೇ ಬರೆದುಕೊಂಡಿದ್ದಾರೆ. ಅಂತ್ಯಪ್ರಾಸವುಳ್ಳ ರಚನೆಗಳಿವು. ಅವರ ಕವಿತೆಗಳ ಮಾದರಿ ಹೀಗಿದೆ:
ಸಾಹಿತಿಯು ನಾನಲ್ಲ ಸಾಧುವೂ ಅಲ್ಲ
ಕವಿಯಂತೂ ನಾನಲ್ಲವೇ ಅಲ್ಲ
ಛಂದಾಲಂಕಾರಗಳು ಎನಗೆ ತಿಳಿದಿಲ್ಲ
ಆದರೂ ಗೀಚುವ ದಾಹ ತೀರಿಲ್ಲ

ಪ್ರತಿಕ್ರಿಯಾತ್ಮಕ ಮಾದರಿಯ ಕವಿತೆಗಳಿವು.ಈ ಕೃತಿಗೆ ತಾ.ಶ್ರೀ.ಗುರುರಾಜ್, ಸದಾಶಿವ ಸೊರಟೂರು ಮುಂತಾದ ಲೇಖಕರ ಅಮೂಲ್ಯವಾದ ಮುನ್ನುಡಿಗಳಿವೆ. ಕನ್ನಡದ/ಜಗತ್ತಿನ ಹಲವು ಕಾವ್ಯಧಾರೆಗಳಿಗೆ ಮುಖಾಮುಖಿಯಾಗುತ್ತಾ ವಿಕ್ರಾಂತ್ ಸರ್ ಅವರು ಹೆಚ್ಚು ಹೆಚ್ಚು ಬರೆಯುವಂತಾಗಲಿ.
ಅವರಿಗೆ ಶುಭಾಶಯಗಳು.

*


ಕಾಜೂರು ಸತೀಶ್

ನಾಟಿ ಮಾಡೋ ಪರಿ



ಮಳೆ ಬರ್ತಿದೆ ಮರಿ
 ಗೆಳೆಯರ್ನೆಲ್ಲಾ ಕರಿ
ಹೇಳ್ಕೊಡ್ತೇನೆ ಎಲ್ಲಾ ಸೇರಿ
 ನಾಟಿ ಮಾಡೋ ಪರಿ

ಮಾಡ್ಕೋಬೇಡಿ ಕಿರಿಕಿರಿ
ಮೊಳಕೆಯಲ್ಲಿದೆ ಸಿರಿ
ಅನ್ಕೋಬೇಡಿ ಪಿರಿಪಿರಿ
ಪೈರೇ ಸುಖದ ಗರಿ

ಕಪ್ಪೆ ಹಾರ್ದಂಗ್ಹಾರಿ
ಗೆಳೆಯರೆಲ್ಲ ಸೇರಿ
ಪೈರು ನೆಟ್ಕೊಂಡ್ಹೋಗಿ
ಸಾಲು ಇರ್ಬೇಕು ಸರಿ

ಕೆಸರಲ್ಹೆಜ್ಜೆ ಊರಿ
ಮಾಡ್ಕೊಂಡ್ಹೋಗಿ ದಾರಿ
ಕಷ್ಟಗಳ್ನೆಲ್ಲಾ ತೂರಿ
ಬದುಕಿಗಿರ್ಲಿ ಗುರಿ
*
ಕಾಜೂರು ಸತೀಶ್ 

ನನ್ನ ಕವಿತೆ



ಖಿನ್ನನಾದ ಮೇಲೆ ಬೆಟ್ಟಗುಡ್ಡಕ್ಕೆ ನನ್ನ ಮಾತ ಕೊಟ್ಟೆ
ಸುರಿವ ಮಳೆಗೆ ಹರಿವ ಹೊಳೆಗೆ ನನ್ನ ದನಿಯ ಕೊಟ್ಟೆ

ಅವೆಲ್ಲಾ ಮಾತನಾಡುವುದ ಕೇಳಿಸಿಕೊಂಡ ನಾನು
ಅಳಿದುಳಿದ ಮಾತುಗಳ ಮೊಗೆಮೊಗೆದು ಲೇಖನಿಗುಣಿಸಿದೆ

ಹಾಗೆ ಕೊರೆದ ಗೆರೆಗೆರೆಗಳ ಮೈಯ ಬಳುಕು
ಅನ್ನವಿಲ್ಲದೇ ಆದದ್ದು ಪ್ರಿಯರೇ ಅನ್ನವಿಲ್ಲದೆ ಆದದ್ದು.
*
ಕಾಜೂರು ಸತೀಶ್