ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, July 13, 2026

ಮುಖವಾಡ

ಜಗತ್ತಿನ ಮೂಲೆ ಮೂಲೆಗೂ ಅದೃಶ್ಯವಾದ ಕ್ಯಾಮೆರಾಗಳನ್ನು ಅಳವಡಿಸಲಾಯಿತು. ಮನುಷ್ಯನ ಎಲ್ಲಾ ವರ್ತನೆಗಳನ್ನು, ಆಗುಹೋಗುಗಳನ್ನು ಅವು ದಾಖಲಿಸತೊಡಗಿದವು.

ಅಂದಿನಿಂದ 'ಒಳ್ಳೆಯವರು' ಎಂಬ ಮುಖವಾಡ ಹೆಚ್ಚು ಹೆಚ್ಚು ಮಾರಾಟವಾಗತೊಡಗಿತು. ಜನ ಬದಲಾದರು. ಎಲ್ಲವನ್ನೂ ಯೋಚಿಸಿ ಆಡಿದರು, ಮಾಡಿದರು.

ನಾಯಿ ಮಾತ್ರ ಎಂದಿನಂತೆ ಬೊಗಳುತ್ತಿತ್ತು.
*
✍️ ಕಾಜೂರು ಸತೀಶ್

ನಿದ್ದೆ

"ಇಂದೇ ಕೊನೆಯ ದಿನ. ಪ್ರಬಲ ರಾಷ್ಟ್ರವೊಂದು ನಮ್ಮ ಮೇಲೆ ದಾಳಿಮಾಡಲಿದೆ" ಎಂಬ ಸುದ್ದಿಯನ್ನು ನಾಯಕ ತನ್ನ ಪ್ರಜೆಗಳಿಗೆ ತಿಳಿಸಿದ.

ಆ ದಿನ ಬಂಗಲೆಗಳು ನಿದ್ರಿಸಲಿಲ್ಲ.

ದುಡಿದು ದಣಿದವರು ಚೆನ್ನಾಗಿ ನಿದ್ರಿಸಿದರು.
*
✍️ ಕಾಜೂರು ಸತೀಶ್

ನಿಯಂತ್ರಣ

ದಟ್ಟ ಕಾಡಿನಲ್ಲಿ ತಿಮ್ಮ ಒಬ್ಬನೇ ಹೋಗುತ್ತಿದ್ದ.

"ಯಾಕೆ ಒಬ್ಬನೇ?" ಎಂದರು ಜನ .

"ಇಬ್ಬರು ಇದ್ದಾಗ ನಿಯಂತ್ರಣಕ್ಕೆ ಒಳಗಾಗುತ್ತೇನೆ. ಬಹುಶಃ ನಾನೂ ಅವರನ್ನು ನಿಯಂತ್ರಿಸಲು ಪ್ರಯತ್ನಿಸುತ್ತೇನೆ", ತಿಮ್ಮ ನುಡಿದ.
*

✍️ಕಾಜೂರು ಸತೀಶ್