ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, December 1, 2015

ಗಾಯದ ಹೂವುಗಳ ಕುರಿತು ಡಾ.ಕೃಷ್ಣ ಗಿಳಿಯಾರ್ ಅವರ ನುಡಿ

ಕಾಜೂರು ಸತೀಶರ 'ಗಾಯದ ಹೂಗಳು' ಕವಿತೆಗಳನ್ನು ಓದಿದೆ. ಕವಿತೆ ಸ್ವಲ್ಪವೂ ವಾಚ್ಯವೆನಿಸದಂತೆ ಕೆಲವರು ಕಷ್ಟಪಟ್ಟು ಬರೆಯುತ್ತಾರೆ. ಇಲ್ಲಿ ಮಾತ್ರ ಕವಿ ತನ್ನ ಭಾವತೀವ್ರತೆಯ ಸಹಜ ಭಾಷೆಯಾಗಿ ಪ್ರತಿಮೆಗಳನ್ನು ದುಡಿಸಿಕೊಂಡಿದ್ದಾರೆ. ಸಂಗತ ಸಂಗತಿಗಳನ್ನು ಅಸಂಗತದ ಮೂಸೆಯಲ್ಲಿ ಹದವಾಗಿ ಬೇಯಿಸಿದ್ದಾರೆ. ತಲ್ಲಣಗಳನ್ನು ಗ್ರಹಿಸಿ ಸ್ಪಂದಿಸುವಲ್ಲಿ ಹೊಸ ಮಾರ್ಗವನ್ನೇ ಕಂಡುಕೊಂಡಿದ್ದಾರೆ.

ನುಂಗಿದ ಇಲಿ
ಹೊಟ್ಟೆಯೊಳಗೆ ಬದುಕಿದ್ದಷ್ಟು ಹೊತ್ತು
ಮಗು
ಆಮೇಲೆ ಹಾವು (ಹಾವು)

ದುಃಖವೆಂದರೇನೆಂದೇ ಗೊತ್ತಿರದ ಗಾಳಿ
ಶವವನ್ನೂ ಬಿಡದಂತೆ ಅಪ್ಪಿ, ಮುದ್ದಾಡಿ
ಮೆಲ್ಲಗೆ ಕಣ್ಣು ಮುಚ್ಚಿಸಿ
ಹಿಂದಿನಿಂದ 'ಕೂ...' ಎನ್ನುವುದು (ಮೈಲಿಗೆ)

ಹುಟ್ಟುವಾಗ ಅಳುವುದಿಲ್ಲ
ಅವ್ವನ ಗುಪ್ತಾಗಗಳಿಗೆ
ನೋವು ಕೊಡುವುದಿಲ್ಲ
ಹುಟ್ಟಿಸಿದ ಅವಳ
ಮೈಯುದ್ದಕ್ಕೂ ಹರಿದಾಡಿ
ಹರಿದಲ್ಲೆಲ್ಲ ಪಾಚಿಯಂಥ ಹಸಿರು (ನದಿ)

ಹಸಿದ ಜಿಗಣೆಯೇ
ಬಾ, ಹೀರು ನನ್ನನ್ನು
ಸ್ವಲ್ಪದರಲ್ಲೇ ನೀನು
ದ್ರಾಕ್ಷಿಯಾಗಿ ಉದುರುತ್ತಿ
ನೀ ಹೆರುವ ಕೂಸಿಗೆ
ನನ್ನ ಹೆಸರಿಡುವುದ ಮರೆಯದಿರು
ಅಪ್ಪನಾಗುವ ಖುಷಿಯಿದೆ ನನಗೆ (ಮಿಕ್ಕವರಾರನ್ನೂ ಹೀರಕೂಡದು)

ಭೂಕಂಪವಾಗಲಿ
ಸುನಾಮಿಯಾಗಲಿ
ನಮ್ಮಿಬ್ಬರ ಗೋಡೆಗಳ ಮೇಲೆ
ನಮ್ಮಿಬ್ಬರ ಮಿಲನಕ್ಕಾಗಿ (ನಾವಿಬ್ಬರು ತೀರಿಕೊಂಡ ಮೇಲೆ)

ಇದುವರೆಗೆ ಬರೆಸಿಕೊಂಡ ನನ್ನ ಕವಿತೆಗಳೆಲ್ಲವೂ
ವೈದ್ಯನಿಗೆ ಕೊಡಲು ಕಾಸಿಲ್ಲದೆ
ನರಳುತ್ತಲೇ ಇವೆ ಹಸಿನೆಲದ ಮೇಲೆ (ಅಸ್ವಸ್ಥ ಕವಿತೆಗಳು)

ನನ್ನ ಖಿನ್ನತೆ
ಹಡೆಯುತ್ತಲೇ ಇರುತ್ತದೆ
ನಾನದಕ್ಕೆ ಕವಿತೆಯೆಂಬ
ಹೆಸರಿಡುತ್ತಲೇ ಬಂದಿದ್ದೇನೆ (ನನ್ನ ಕವಿತೆ)

ಗಾಯಗಳು ಹಾಡಬೇಕು ಕೆಂಪು ಹೂಗಳಾಗಿ
ಒಸರುವ ಅಷ್ಟೂ ರಕ್ತವೂ ಹೂವಿಗೆ ಅಂದ ನೀಡಬೇಕು ( ಗಾಯದ ಹೂಗಳು)

ಲೋಕದ ಆಗುಹೋಗುಗಳಿಗೆ, ಆತ್ಮದ ನೋವಿಗೆ ತೆರೆದುಕೊಳ್ಳುವ ಸಹಜ ಅಭಿವ್ಯಕ್ತಿಯಾಗಿ ಇವರ ಕವಿತೆಗಳಿವೆ. ಓದುತ್ತಾ ಹೋದಂತೆ ಕಾಡುತ್ತಾ ಹೋಗುತ್ತವೆ.

ಅಭಿನಂದನೆಗಳು ಸತೀಶ್...
**

ಡಾ. ಕೃಷ್ಣ ಗಿಳಿಯಾರ್

ಗಾಯದ ಹೂವುಗಳ ಕುರಿತು ಎಂ. ಎಸ್. ರುದ್ರೇಶ್ವರಸ್ವಾಮಿ ಅವರ ಮಾತು

ಸಂಕೋಚ ಸ್ವಭಾವದ ಕವಿ ಕಾಜೂರು ಸತೀಶ್,
ಮಡಿಕೇರಿಯ ಎತ್ತರದ ಮರಗಳಲ್ಲಿನ ಮಿಣುಕು ಹುಳುಗಳನ್ನ
ಅವುಗಳ ಮಿಂಚನ್ನ
ಕವಿತೆಯೊಳಗೆ ಕರೆತರುವಾಗಲೂ
ಅವುಗಳಿಗೆ ಗಾಯವಾದೀತೆಂಬ ಅಳುಕುಳ್ಳವರು.
ಯಾವಾಗಲೂ ಒಂದು ಒಳ್ಳೆಯ ಕವಿತೆಗಾಗಿ ಕಾಯುವ ಸತೀಶ್
ಏನಾಯ್ತು, ಎಂದು ಕೇಳಿದರೆ.
ಏನಿಲ್ಲ, ಕವಿತೆ ತುಂಬಾ ಅವಸರದಲ್ಲಿತ್ತು
ಅದರ ಜೊತೆ ಹೆಜ್ಜೆ ಹಾಕಲಾಗಲಿಲ್ಲ
ಎಂದು ಹೇಳುವ Sense
And Sensibility ಯುಳ್ಳವರು.
ಈ ಸಂಕಲನದ ಹಸ್ತಪ್ರತಿಗೆ ೨೦೧೫ರ ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪುರಸ್ಕಾರ
ದೊರೆತಿದೆ. ಇದು ಸತೀಶ್ ಅವರ ಮೊದಲ ಸಂಕಲನ ಕೂಡ.

೦೧.೧೨.೨೦೧೫
**

-ಎಂ.ಎಸ್. ರುದ್ರೇಶ್ವರಸ್ವಾಮಿ

Saturday, November 28, 2015

ದಿನಚರಿ -11

ಆ ಕಡೆ ಹೋದಾಗಲೆಲ್ಲ ರಸ್ತೆಯ ಬದಿಯಲ್ಲಿ ಯಾರಾದರೊಬ್ಬರು ವಿಚಿತ್ರ ಭಂಗಿಯಲ್ಲಿ ಬಿದ್ದುಕೊಂಡಿರುತ್ತಾರೆ. ಹಾಗೆ ಬಿದ್ದುಕೊಂಡವರೆಲ್ಲ ಹಳೆಯದೊಂದು ಪಂಚೆಯನ್ನು ತೊಟ್ಟಿರುತ್ತಾರೆ. ಕೆಲವೊಮ್ಮೆ ಭಂಗಿಯಲ್ಲಿ ಸ್ವಲ್ಪ ವ್ಯತ್ಯಾಸವಾದಾಗ ಅವರ ಗುಪ್ತಾಂಗವು ದಾರಿಹೋಕರನ್ನು ನೋಡುತ್ತಾ , ಒಳವಸ್ತ್ರದ ಕೊರತೆಯನ್ನೂ, ಬಡತನವನ್ನೂ ಕವಿತೆಯಂತೆ ಹೇಳುತ್ತಿರುತ್ತದೆ. ಆಗ ಒಳಗೊಳಗೇ ನಕ್ಕು ಮುಖ ತಿರುಗಿಸುವ ದಾರಿಹೋಕರ ದರ್ಶನವಾಗುತ್ತದೆ.


ನಮ್ಮ ಸರ್ಕಾರಗಳು ಯಾವುದನ್ನು 'ಅಭಿವೃದ್ಧಿ' ಎಂದುಕೊಂಡಿವೆ? ಜನ ಹೀಗೆ ಹೊಟ್ಟೆ ತುಂಬುವಂತೆ ಕುಡಿದಾಗ ಅದರ ಖಜಾನೆ ತುಂಬುವುದೇನೋ ನಿಜ. ಆದರೆ 'ಸುಖೀ ರಾಜ್ಯ'ದ ಕಲ್ಪನೆ ಸಾಕಾರಗೊಳ್ಳುವುದಾದರೂ ಹೇಗೆ? ಹಾಗೆ ಎಲ್ಲವನ್ನೂ ತೋರಿಸುತ್ತಾ ರಸ್ತೆಯಂಚಲ್ಲಿ ಮಲಗಿರುವವರು ಬಡತನದ ಬೇಗೆಯಿಂದ ಬೇಯುತ್ತಿರುವವರು. ಅವರನ್ನೇ ನಂಬಿಕೊಂಡಿರುವ ಅವರ ಮನೆಮಂದಿಯ ಕಥೆಯಾದರೂ ಏನಾಗಬೇಡ?

ನಾನು ಹೈಸ್ಕೂಲಿನಲ್ಲಿದ್ದಾಗ, ಮೊದಲ ಬಾರಿಗೆ ಕುಡಿದು ಶಾಲೆಯ ಸಮೀಪದ ಪೊದೆಯಲ್ಲಿ ಬಿದ್ದಿದ್ದ ಗೆಳೆಯ ಶಶಿಕುಮಾರನ ಚಿತ್ರ ಕಣ್ಣಿಗೆ ಅಂಟುತ್ತದೆ. ಕುಡಿತದಿಂದ ಬೀದಿಪಾಲಾದ ಕುಟುಂಬಗಳ ಸಂಖ್ಯೆಯಂತೂ ಬೀದಿಗೇ ನೆನಪಿರುವುದಿಲ್ಲ.

ತಂಬಾಕು, ಮದ್ಯಪಾನದ ಸಂಪೂರ್ಣ ನಿಷೇಧದಿಂದ ಸ್ವಲ್ಪಮಟ್ಟಿಗಾದರೂ ಆರ್ಥಿಕ ಸಮಾನತೆಯನ್ನು ಸಾಧಿಸಬಹುದೇನೋ. ದುರಂತವೆಂದರೆ, ನಮ್ಮ ರಾಜಕಾರಣದ ಬೇರಿಗೆ ಇದರ ಅಗತ್ಯವಿರುವುದರಿಂದ ಯಾವ ಟೊಂಗೆಯನ್ನೂ, ಗೂಡುಗಳನ್ನು ಅಷ್ಟು ಸುಲಭವಾಗಿ ಅದು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ!
**
-ಕಾಜೂರು ಸತೀಶ್

ನಿನ್ನೇ ಪ್ರೀತಿಸುವೆ

ತುಂಬಾ ಹಿಂದೆ ಬರೆದಿಟ್ಟಿದ್ದ ಇದು ಇಂದು ನನ್ನ ಕಣ್ಣಿಗೆ ಬಿತ್ತು. ಇದು ಹುಟ್ಟಿಕೊಂಡ ತುರ್ತು ಏನಿದ್ದಿರಬಹುದೆಂದು ಸ್ಪಷ್ಟವಾಗಿ ಹೇಳಲಾಗುತ್ತಿಲ್ಲ . ಸುಮ್ಮನೆ ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ- ನನಗೆ ನಾನೇ ಪತ್ರ ಬರೆದು ಅಂಚೆಯಲ್ಲಿ ಪೋಸ್ಟ್ ಮಾಡುವ ಹಾಗೆ!
---------------------------------------------------------------

ನನ್ನ -ನಿನ್ನ ನಡುವೆ ಕಡಲೊಂದನ್ನು ಬೇಕೆಂದೇ ನಿರ್ಮಿಸಿಕೊಂಡು
ನಿನ್ನನ್ನು ಗಾಢವಾಗಿ ಪ್ರೀತಿಸುತ್ತೇನೆ.
ಅವ್ವ,ದೇವರುಗಳನ್ನು ಪ್ರೀತಿಸಿದ ಹಾಗೆ.


ಈ ಮಳೆ ನಮ್ಮ ಇಟ್ಟಿಗೆಗಳನ್ನು ಒಂದೊಂದೆ ಕೆಡವಿ
ಮನೆಯೆಂಬೊ ಮನೆಯನ್ನೇ ಕೊಡವಿದಾಗ
ನೀನು ಮತ್ತಷ್ಟೂ ಇಷ್ಟವಾದೆ.
ಮಾಳಿಗೆಯ ಆಣಿಯೊಂದು ಕಾಲಿಗೆ ಚುಚ್ಚಿ
'ಆಣಿ'ಯಾಗಿ ಕುಂಟನಾಗಿದ್ದೇನೆ.
ಅದರಿಂದ ಒಸರುವ ತೊಟ್ಟುರಕ್ತ
ನಾನು ನಡೆದುಹೋದ ರಸ್ತೆಯನ್ನು ನಾಯಿಯಂತೆ ಹಿಂಬಾಲಿಸುತ್ತಿದೆ.
ನನ್ನದೇ ಆಸ್ತಿಯೆಂಬಂತೆ ಬೇಲಿ ಹಾಕುತ್ತಿದೆ.



ನಾನು ನಡೆದುಹೋಗುವಾಗ - ನೀನು ಕಾರಿನ ಸ್ವಪ್ನದಲ್ಲೇ ಇರುವಾಗ-
ನನ್ನ ವೀರ್ಯ ಸ್ಖಲನಗೊಳ್ಳಲಿ.
ನನ್ನ ಏದುಸಿರು,ಬೆವರು
ಎಲ್ಲ ಅಕ್ಷರಗಳ ಬಾಯಿಗೆ ಬೀಗ ಜಡಿಯಲಿ.
ಆಮೇಲಿನ ಮೌನದಲ್ಲಿ ನಾನೊಬ್ಬ ರಾಜನಾಗುತ್ತೇನೆ.
ಕಡಲ ಆಚೆಬದಿಯ ಸಾಮ್ರಾಜ್ಯವೇನಿದ್ದರೂ ನಿನ್ನದೇ.


ಘಾಸಿಗೊಂಡ ಬೆನ್ನಹುರಿಯ ಬಲದಲ್ಲಿ ಪಟ್ಟಕಟ್ಟಿದ ಮೇಲೆ
ಪೀಠದ ಮೊಳೆಗಳು ಭೂಕಂಪನವನ್ನು ಉಂಟುಮಾಡುತ್ತವೆ.
ನನ್ನ ಮೈತುಂಬ ಹುಳುವೆದ್ದು
ನನ್ನೊಳಗೊಂದು ಮನೆ ಕಟ್ಟುತಿರಲು
ನಾನೇ ಮನೆಯಾಗುವ ಖುಷಿಯಲ್ಲಿ
ನಿನ್ನನ್ನು ಗಾಢವಾಗಿ ಪ್ರೀತಿಸುತ್ತೇನೆ.


ಎಷ್ಟು ಬಾರಿ ಹ್ರದಯಸ್ತಂಭನಕ್ಕೊಳಗಾದರೂ ನಿನ್ನ ಸೋಕಿದ ಗಾಳಿ
ಕಡಲು ದಾಟುವಾಗ ಭೋರ್ಗರೆದು ನನ್ನ ತಟ್ಟಿ ಬೀಳಿಸುತ್ತದೆ.
ಬಿದ್ದ ಬಲದಲ್ಲಿ ರಕುತ ಮತ್ತೆ ಕಡಲಾಗಿ ಭೋರ್ಗರೆದು
ಹುಟ್ಟುತ್ತಲೇ ಇದ್ದೇನೆ.
ನನ್ನ ಬದುಕಿಸುವ ನಿನ್ನನ್ನು ಮತ್ತೆ ಮತ್ತೆ ಪ್ರೀತಿಸುತ್ತೇನೆ.


ನಿನ್ನ ಒಮ್ಮೆಯೂ ನೋಡದೇ ಸಾಯುವಾಗಲೂ ನಿನ್ನೇ ಪ್ರೀತಿಸುತ್ತೇನೆ.
ನೆಲಕ್ಕುರುಳುವಾಗ ಅಂಗಿಯ ಅಷ್ಟಿಷ್ಟು ಚಿಲ್ಲರೆಗಳು ನರ್ತಿಸುತ್ತವೆ ನಿನ್ನ ನೆನೆದು.
ಕ್ಷಮಿಸು,ಸಾಯುವ ಹೊತ್ತಲ್ಲಿ ಯಾರನ್ನೆಲ್ಲ ನೆನೆಯಲೆಂಬ ತರಾತುರಿಯಲ್ಲಿ
ನಿನ್ನ ಮರೆತುಹೋದರೂ ಹೋದೀತು.


ಆಮೇಲೂ ನಿನ್ನ ಗಾಢವಾಗಿ ಪ್ರೀತಿಸುವುದು ಸುಲಭ.
ದೇಹವಿಲ್ಲದ ಪ್ರೀತಿ ಕಡಲನ್ನು ಕುಡಿದು ಕೂಡುವುದು ಬೇಗ!
**
-ಕಾಜೂರು ಸತೀಶ್

Thursday, November 26, 2015

ಗಾಯದ ಹೂವುಗಳ ಕುರಿತು ಧನಂಜಯ್ ಮಡಿಕೇರಿ ಅವರ ನುಡಿ

ಗಾಯದ ಹೂವುಗಳು ಮತ್ತು ನಲ್ಮೆಯ ಸತೀಶ್......
-------------------------------------------------------------

ಕಾಜೂರು ಶಾಲೆ ಹತ್ತಿರ ಇರುವ ಪಶುವೈದ್ಯ ಶಾಲೆ ಬಳಿ ಆಲದ ಮರವಿದೆ ಅದರ ಬೇರುಗಳನ್ನು ಹಿಡಿದು ಉಯ್ಯಾಲೆ ಆಡಿದ ನೆನಪು ಮಾತ್ರ ನನಗೆ ಇರುವುದು. ಆದರೆ ನೀವು ಮರವನ್ನೇರಿ ಅದರ ಶೃಂಗದಲ್ಲಿ ನಿಂತು ಹೊರ ಜಗತ್ತನ್ನು ನೋಡಿದ ರೀತಿ ಮಾತ್ರ ಅದ್ಭುತ. ಹಾಗಂತ ನಿಮ್ಮ ಗಾಯದ ಹೂವುಗಳು ನನ್ನಲ್ಲಿ ಪಿಸುಗುಟ್ಟಿದವು. ಗಾಯದ ಹೂವುಗಳು ಕವನ ಸಂಕಲನ ನಿಮ್ಮ ದೈನಂದಿನ ಗೆಳೆಯರು ಯಾರು ? ನಿಮ್ಮ ಆದ್ಯತೆ ಏನು ಎನ್ನುವುದನ್ನು ನನಗೆ ಅರ್ಥೈಸಿದೆ.


ಇರುವೆಯ ಮೂಲಕ ಪ್ರಾರಂಭವಾಗುವ ನಿಮ್ಮ ಕವಿತೆ ಎಲ್ಲಾ ಕಡೆ ಇರುವೆ ಎನ್ನುವ ಸಂದೇಶದೊಂದಿಗೆ ಅದು ಊದುಗೊಳವೆ, ಖಾಲಿ ಡಬ್ಬ, ಚಪ್ಪಲಿಗಳು ಏನೇ ಆಗಿರಲಿ ಅದನ್ನು ನಿಮ್ಮ ಬರವಣಿಗೆ ಮೂಲಕ ಸ್ಪರ್ಶಿಸಿದ ರೀತಿ ಅದ್ಭುತವಾಗಿದೆ. ಕವಿತೆಗಳು ಅಸ್ವಸ್ಥವಾಗಿವೆ ವೈದ್ಯನಿಗೆ ಕೊಡಲು ಕಾಸಿಲ್ಲದೆ ಹಾಸಿಗೆಯ ಮೇಲೆ ನರಳುತ್ತಲೇ ಇವೆ ಎನ್ನುವುದು ನಿಮ್ಮ ಹೃದಯ ವಿಶಾಲತೆ ಅಲ್ಲದೆ ಬೇರೇನು ? ಇರಬಹುದು ನಿನ್ನೆ ಹುಟ್ಟಿದ್ದನ್ನು ಬೀದಿಯಲ್ಲಿ ಮೊನ್ನೆ ಹುಟ್ಟಿದ್ದನ್ನು ಚರಂಡಿಯಲ್ಲಿ ಎಸೆದಿರಬಹುದು. ಅದಕ್ಕೂ ಹಿಂದಿನದನ್ನು ಪೆನ್ನು ಇಂಕುಗಳೊಂದಿಗೆ ಬೆಂಕಿ ಹಚ್ಚಿ ಸುಟ್ಟಿರಬಹುದು. ಅದು ಅತಿಯಾಗಿ ಗಾಯಗೊಂಡವೇ ? ಎನ್ನುವುದು ನನ್ನ ಸಾತ್ವಿಕ ಪ್ರಶ್ನೆ. ಹಾಗಾದರೆ ಗಡಿನಾಡ ಸಂಚಾರಿ, ಶಕ್ತಿ, ವಿಜಯ ಕರ್ನಾಟಕ, ಕನ್ನಡ ಪ್ರಭ, ಉದಯವಾಣಿ, ಅವಧಿ, ಪಂಜು ಮುಂತಾದ ಕಡೆ ನುಸುಳಿದವು ಗಾಯದ ಹೂವುಗಳು ಅಲ್ಲವೇ.? ಹೌದು, ಅವೆಲ್ಲವೂ ಗಾಯದ ಹೂವುಗಳೇ. ಅದನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದೀರಿ. ಮುಲಾಮು ಹಚ್ಚುವವರು ಹಚ್ಚಲಿ ? ಕೆರೆದು ಗಾಯ ಮಾಡುವವರು ಮಾಡಲಿ ತಪ್ಪೇನು.?


ನಿಮ್ಮ ಕಾವ್ಯ ಕೃಷಿಯಲ್ಲಿ ನನಗೆ ಕಂಡಿದ್ದು ಸೂಕ್ಷ್ಮತೆ, ಬದುಕಿನ ಪದರುಗಳನ್ನು ನೀವು ಪ್ರವೇಶಿಸಿದ ರೀತಿ, ಅದರ ಒಳಹೊಕ್ಕು ನೋಡಿದ ರೀತಿ ಮತ್ತು ಅನಾವರಣಗೊಳಿಸಿದ ಶೈಲಿ, ಅನುಭವ, ಕೋಮಲತೆ, ತೀಕ್ಷ್ಣತೆ ಮತ್ತು ಕಾವ್ಯ ಕೃಷಿಯಲ್ಲಿ ನಿಮಗಿರುವ ಪ್ರಬುದ್ಧತೆ, ಭಕ್ತಿ ಎಲ್ಲವನ್ನು ನಾನು ಕಂಡೆ.


ಸಾಹಿತ್ಯ ಲೋಕದ ಜನಪ್ರಿಯ ಕವಿಗಳ ಸಾಲಿಗೆ ಸೇರುವ ಎಲ್ಲಾ ರೀತಿಯ ಅರ್ಹತೆ ಮತ್ತು ಸಾಮರ್ಥ್ಯ ಗಾಯದ ಹೂವುಗಳಿಗೆ ಇದೆ. ಆ ಮೂಲಕ ಕವಿಯಾದ ನಿಮಗೂ ಇದೆ ಎಂದು ಸಾಕ್ಷೀಕರಿಸಿದ್ದೀರಿ. ಗಾಯದ ಹೂವುಗಳ ಬುಟ್ಟಿಯಲ್ಲಿ ಭಾಷೆ, ಮಣ್ಣಿನ ಸತ್ವ, ಪ್ರಕೃತಿಯ ವೈಭವ, ಹಕ್ಕಿಗಳ ಚಿಲಿಪಿಲಿ, ಪ್ರತಿಭಟನೆ, ಆಧುನಿಕ ಬದುಕು, ಅದರೊಳಗಿನ ಜಟಿಲತೆ, ಕುಟಿಲತೆ ಎಲ್ಲವೂ ಅನಾವರಣಗೊಳಿಸುವ ನಿಮ್ಮ ಶ್ರಮ ಇಷ್ಟವಾಯಿತು. ಪ್ರಕೃತಿ ಮತ್ತು ಮನುಷ್ಯನ ನಡುವೆ ನಿಂತು ಜಗತ್ತನ್ನು ನೋಡಿದ ದೃಷ್ಟಿಕೋನ ನನಗೆ ಒಟ್ಟಾರೆ ನಿಮ್ಮ ಕವನ ಸಂಕಲನ ಓದಿಕೊಂಡು ಹೋದಾಗ ಇಷ್ಟವಾಗಿದ್ದು. ಕವಿತೆಯನ್ನು ಕ್ಲಿಷ್ಟತೆಯ ಗೂಡಾಗಿಸದೆ ಇಷ್ಟವಾಗಿ ಓದಿಕೊಂಡು ಹೋಗುವಂತೆ ಮಾಡಿದ ನಿಮ್ಮ ಶ್ರಮ ಸಾರ್ಥಕವಾಗಿದೆ . ನಿಮ್ಮ ಲೇಖನಿಯಿಂದ ಹೆಚ್ಹು ಹೆಚ್ಚು ಕವಿತೆಗಳು ಮೂಡಲಿ ಬದುಕು ಸುಂದರವಾಗಿರಲಿ.
**

ಧನಂಜಯ್ ಮಡಿಕೇರಿ

Monday, November 23, 2015

'ಗಾಯದ ಹೂವುಗಳು' ಕುರಿತು ಬಸೂ ಅವರ ಮಾತು

ಗೆಳೆಯ ಕಾಜೂರು ಸತೀಶ್ ರ 'ಗಾಯದ ಹೂಗಳು' ಕವನ ಸಂಕಲನ ಇಂದು ತಲುಪಿತು. ಸಂಕಲನದ ಹೆಸರೇ ನನ್ನೊಳಗೊಂದು ತಲ್ಲಣ ಹುಟ್ಟಿಸಿದೆ. ಸಂಕಲನವನ್ನು ಮುಟ್ಟುವಾಗ ಬೆರಳು ಸುಮ್ಮನೆ ಕಂಪಿಸುತ್ತಿದ್ದವು. ಎದೆಯೊಳಗೆ ಯಾವುದೊ ಸಂಕಟ ಎದ್ದುಬಂದ ಹಾಗೆ ತಳಮಳ. ಅದು ತುಂಬ ಆಳಕ್ಕಿಳಿಯಿತು. ಒಂದೆರಡು ಕವಿತೆಗಳನ್ನಷ್ಟೆ ಓದಲು ಸಾಧ್ಯವಾಗಿದೆ. ಕಣ್ಮುಚ್ಚಿ ಧ್ಯಾನಸ್ಥವಾಗುವ ಮನಸು ಓದು ಮುಂದುವರೆಸಲು ಒಪ್ಪುತ್ತಿಲ್ಲ.



ಸತೀಶ್ ನಮ್ಮ ನಡುವಿನ ತುಂಬ ಭರವಸೆಯ ಯುವಕವಿ. ಎಫ್ ಬಿ ಮೂಲಕವೆ ಪರಿಚಯವಾದ ಅವರ ಸಾಲು ಎಷ್ಷು ತಾಕಿದ್ದವು ಎಂದರೆ ಕಳೆದ ಸಲ ಹಾವೇರಿಯಲ್ಲಿ ನಾವು ಸಂಘಟಿಸಿದ ಮೇ ಸಾಹಿತ್ಯ ಮೇಳದಲ್ಲಿ ಕವಿತೆ ಓದಲು ಅವರನ್ನು ಕರೆಯಿಸಿಕೊಂಡಿದ್ದೆ. ಮೌನವಾಗಿ ಗಾಢವಿಷಾಧವನ್ನು ಗುಲ್ಜಾರರಷ್ಟೆ ಅವರು ಕನ್ನಡದಲ್ಲಿ ಸಶಕ್ತವಾಗಿ ಕಟ್ಟಿಕೊಡಬಲ್ಲರು.


ಈ ರಾತ್ರಿಗೆ ನಾನು ಅವರ ಗಾಯದ ಹೂಗಳೊಂದಿಗಿರುವೆ. ಗಾಯಗೊಳಿಸದೆ ಕವಿತೆ ಓದಿಸಲು ಅವರಿಗೆ ಬರುವುದಿಲ್ಲ. ಹಿಂಸೆ ಮತ್ತು ಉನ್ಮಾದದ ಉತ್ಪಾದನೆಯಲ್ಲಿ ರಾಜ್ಯದ ಕೆಲ ಶಕ್ತಿಗಳು
ಮುಳುಗಿರುವ ಸಮಯದಲ್ಲಿ ಈ ಕವಿ ತಾನು ಗಾಯಗೊಂಡು ಲೋಕವನ್ನು ಮಾನವೀಯವಾಗಿಸಲು ಅಕ್ಷರಗಳನ್ನು ಒಳಗಿಳಿಸಿಕೊಂಡಿದ್ದಾರೆ. ಈ ಕವಿಗೊಂದು ಶರಣು.
*

-ಬಸೂ

Saturday, November 21, 2015

'ಗಾಯದ ಹೂವುಗಳು' ಕುರಿತು ಟಿ.ಕೆ.ತ್ಯಾಗರಾಜ್ ಅವರ ಅನಿಸಿಕೆ

ನನ್ನ ಜಿಲ್ಲೆಯ ಪ್ರೀತಿಯ ಗೆಳೆಯ,ಪ್ರತಿಭಾವಂತ ಕವಿ ಕಾಜೂರು ಸತೀಶ್ ತಮ್ಮ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪಡೆದ "ಗಾಯದ ಹೂವುಗಳು" ಕವನ ಸಂಕಲನವನ್ನು ನೆನಪಿಟ್ಟು ಕಳಿಸಿಕೊಟ್ಟಿದ್ದಾರೆ.ಸುಂದರವಾದ ಮುಖಪುಟವಷ್ಟೇ ಅಲ್ಲ.ನಿಮ್ಮೆದೆಯ ಕದ ತಟ್ಟ ಬಲ್ಲ ಕವನಗಳ ಬುತ್ತಿಯನ್ನೇ ಕಟ್ಟಿ ಕೊಟ್ಟಿದ್ದಾರೆ.


"ನೀನು ನನ್ನ ಜತೆ ಬದುಕಿಕೊಳ್ಳಬಹುದು" ಎಂಬ ಕವನದಲ್ಲಿ ಅವರು ಹೇಳುತ್ತಾರೆ :


ನನ್ನ ಪಕ್ಕೆಲುಬುಗಳನ್ನು ಕಿತ್ತು
ಪಂಜರವಾಗಿಸುತ್ತೇನೆ
ನೀನದರ ಹೊರಗೆ ಹಾರಾಡಿಕೊಂಡಿರಬಹುದು.
.......
.......
ನನ್ನ ಕಣ್ಣ ಕೆಂಪನ್ನು ಬಸಿದು
ಹೂವೊಂದನ್ನು ಸೃಷ್ಟಿಸುತ್ತೇನೆ
ನೀನದನ್ನು ಮುಡಿಗೇರಿಸಿಕೊಳ್ಳಬಹುದು.

ಇನ್ನೊಂದು ಪದ್ಯ "ಇನ್ನೂ ಬದುಕಿರುವ ಕವಿತೆಗಳು" ವಿನಲ್ಲಿ ಅವರು ಹೇಳುತ್ತಾರೆ :
ಜೀವ ಚಡಪಡಿಸುವ ಹೊತ್ತಲ್ಲಿ
ವೈದ್ಯರ ಬಳಿ ಹೋದೆ
ಹರಿದ ನನ್ನ ಜೇಬು ತಡಕಾಡಿದರು.
ಹೊರ ಬರುವ ಹೊತ್ತಲ್ಲಿ
ಜೇಬಿನ ತುತ್ತ ತುದಿಯ ದಾರಕ್ಕೆ
ಪದ್ಯಗಳು ಜೋತು ಬಿದ್ದಿದ್ದವು.
ಅದರ ಬಲದಲ್ಲಿ
ನಾನೀಗಲೂ ಬದುಕಿಕೊಂಡಿದ್ದೇನೆ.
...........
ಅವರ ಕಾವ್ಯ ಪ್ರತಿಭೆಗೆ ಎರಡು ಉದಾಹರಣೆಗಳನ್ನಷ್ಟೇ ನಾನು ನಿಮ್ಮ ಮುಂದಿರಿಸಿದ್ದೇನೆ. ಬೆಂಗಳೂರಿನ ಫಲ್ಗುಣಿ ಪುಸ್ತಕ ಈ ಸಂಕಲನವನ್ನು ಪ್ರಕಟಿಸಿದೆ.ಹೊಸ ತಲೆಮಾರಿನ ಸಂವೇದನೆ ನಿಮಗೂ ಇಷ್ಟವಾಗುತ್ತದೆ.
**

ಟಿ.ಕೆ.ತ್ಯಾಗರಾಜ್

ನಡೆದೂ ಮುಗಿಯದ ಹಾದಿ

ಕಂಡುಂಡದ್ದನ್ನು ತಮ್ಮ ಪಾಡಿಗೆ ತಾವು ಬರೆದು ಹಗುರಾಗುವ ಮಾರುತಿ ದಾಸಣ್ಣವರ ಸರ್ ,ಈಚೆಗೆ 'ನಡೆದೂ ಮುಗಿಯದ ಹಾದಿ' ಎಂಬ ತಮ್ಮ ಎರಡನೆಯ ಕವನ ಸಂಕಲನವನ್ನು ಹೊರತಂದರು.



ಮಾರುತಿ ಸರ್ ಅವರ ಪರಿಚಯ ನನಗಾದದ್ದು ಅವರ ಕವಿತೆಗಳ ಮೂಲಕ. ಒಂದು ದಶಕದ ಹಿಂದೆ 'ಮಯೂರ ಕಲ್ಪನೆ ' ವಿಭಾಗದಲ್ಲಿ ಬೆಳಗಾವಿ ಕನ್ನಡದ ಸಮರ್ಥ ಬಳಕೆಯೊಂದಿಗೆ ಕಟ್ಟುತ್ತಿದ್ದ ಕವಿತೆ ಮತ್ತು ಅದಕ್ಕೂ ಮಿಗಿಲಾಗಿ ,ಅದರ ಕೆಳಗೆ ಬರೆದುಕೊಳ್ಳುತ್ತಿದ್ದ 'ಗಾಳಿಬೀಡು' ಎಂಬ ಊರು . ಇವು ಪರಿಚಯದ ಹಿಂದಿರುವ ಕಾರಣಗಳು.



ಇಷ್ಟಾದರೂ ನಾನವರನ್ನು ಮೊದಲು ನೋಡಿದ್ದು ಫೆಬ್ರವರಿ 16, 2009ರಲ್ಲಿ. ಭಾಗಮಂಡಲದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ . ಆ ದಿನ ಅವರು 'ಯಾರೋ ಒಬ್ಬ ಮುದುಕ ' ಎಂಬ ಕವಿತೆಯನ್ನು ಓದಿದ್ದರು. ಅಲ್ಲೂ ನಾನವರನ್ನು ಮಾತನಾಡಿಸಿರಲಿಲ್ಲ! ಮತ್ತೆ 2011,ಜನವರಿ 27ರಂದು ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಪರ್ಧಾ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ನಾವಿಬ್ಬರು ಪರಸ್ಪರ ಪರಿಚಯ ಮಾಡಿಕೊಂಡೆವು.



ಅದಾದ ಮೇಲೆ ಅವರು ಮಡಿಕೇರಿ ಬಸ್ ನಿಲ್ದಾಣದಲ್ಲಿ ಸಿಕ್ಕಾಗ ವರ್ಗಾವಣೆಯ ನಿಮಿತ್ತ ಕೌನ್ಸಿಲಿಂಗಿಗೆ ಹೈದರಾಬಾದ್ ಹೊರಟಿದ್ದೇನೆ ಎಂದಿದ್ದರು. ಸ್ವಲ್ಪ ದಿನಗಳ ನಂತರ ಅವರದೇ ಶಾಲೆಯಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನ ನಡೆದರೂ,ಅವರ ಉಪನ್ಯಾಸ ಕೇಳಿದರೂ ,ಮಾತನಾಡಿಸಲಾಗಲಿಲ್ಲ!



ಸದ್ಯ ಮಾರುತಿ ಸರ್ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.



ಮೊನ್ನೆ , 'ನಡೆದೂ ಮುಗಿಯದ ಹಾದಿ'ಯನ್ನು ಪ್ರೀತಿಯಿಂದ ಕಳುಹಿಸಿಕೊಟ್ಟಾಗ ಇಷ್ಟೆಲ್ಲಾ ನೆನಪಾಯಿತು . ಇಂಥ ಸೂಕ್ಷ್ಮಗಳನ್ನು ಈ ಕಾಲದ ತುರ್ತು ಎಂದುಕೊಂಡು ಇಲ್ಲಿ ಹೇಳಿಕೊಳ್ಳುತ್ತಿದ್ದೇನೆ.ಮತ್ತೂ ಆಶ್ಚರ್ಯವೆಂದರೆ,ಅವರು ಪುಸ್ತಕದಲ್ಲಿ ನನ್ನನ್ನು ನೆನಪುಮಾಡಿಕೊಂಡಿದ್ದಾರೆ.ಪುಸ್ತಕ ತಲುಪಿ ಇಷ್ಟು ದಿನಗಳಾದರೂ ,ತಲುಪಿರುವ ಕುರಿತು ಇನ್ನೂ ಏನೂ ಹೇಳದ ನನಗೆ ,
ಪಾಪಪ್ರಜ್ಞೆ ಹೆಗಲೇರಿಕೊಂಡಿದೆ.

*

ಬದುಕಿದಂತೆ,ಬದುಕುವಂತೆ ಬರೆಯುವ ('ನನ್ನ ಪಾಡೂ ಹಾಡಾಗಲಿ') ಬರೆಯುವ ಮಾರುತಿ ದಾಸಣ್ಣವರ ಸರ್,ತಮ್ಮ ಬದುಕನ್ನು ಕಾವ್ಯದ ಮೂಲಕ ಉಸಿರಾಡುವವರು.ಹಾಗೆಂದು ಅದನ್ನು ಖಾಸಗಿಯಾಗಿಸದೆ ತಮ್ಮ ಅನುಭವ ದರ್ಶನವನ್ನು ಸಾಂಸ್ಕೃತಿಕವಾಗಿ,ಮೌಲಿಕವಾಗಿ ದಾಟಿಸಬಲ್ಲವರು.



ಅವರ ಕವಿತೆಗಳಲ್ಲಿ ಇಣುಕುವ ಅಪ್ಪನ ಬದುಕಿನ ಮಾರ್ಗವೇ ಒಟ್ಟು ಸಮಾಜದ ಭಿನ್ನ ಸ್ತರಗಳನ್ನೂ,ಅವರ ಶೋಚನೀಯ ಸ್ಥಿತಿಗತಿಗಳನ್ನೂ ಬಿಂಬಿಸುವ ದರ್ಪಣ.(ಶ್ರೀಮಂತ ,ಬಡವ,ಕಲಾವಿದ ,ಹೆಡ್ಡ,ದೊಡ್ಡ ಕುಳ,ಗುಲಾಮ ). ಅಮ್ಮ ಇಲ್ಲಿ ಪ್ರಚಂಡ ಇಚ್ಛಾಶಕ್ತಿಯೊಂದಿಗೆ ಶಿಲ್ಪಿಯ ಉಳಿಪೆಟ್ಟಿಗೆ ಸದಾ ಮೈಯ್ಯೊಡ್ಡಿ ಕೂತ ಸಹನಶೀಲೆ.



ನನ್ನನ್ನು ಕಾಡುವುದು- ಮಾರುತಿ ಸರ್ ಅವರ ಕವಿತೆಗಳ ಪ್ರಾಮಾಣಿಕತೆ . ಇಲ್ಲಿನ ಅನೇಕ ಕವಿತೆಗಳಲ್ಲಿ ಕಾಲದ,ಸಂಬಂಧದ ಸೂಕ್ಷ್ಮಗಳು ನವಿರಾಗಿ ತೆರೆದುಕೊಳ್ಳುತ್ತವೆ.



ಅಪ್ಪ ಅವ್ವಂದಿರ ಸಂತೆಯ ಗಂಟು /
ಬಿಚ್ಚಿ ಹೋಗಿತ್ತೇ,ಹರಿದು ಹೋಗಿತ್ತೇ/
ಚುರುಮುರಿ ಬಟಗಡಲೆ/
ಬಿದ್ದಿವೆ ಅಲ್ಲಲ್ಲಿ.[ನಡೆದೂ ಮುಗಿಯದ ಹಾದಿ]



ಮೌಲ್ಯವಿರದ ತರುಣ ಪೀಳಿಗೆಯ ಮೇಲಿನ ಸಣ್ಣ ಆಕ್ರೋಶ ಹೀಗೆ ವ್ಯಕ್ತವಾಗುತ್ತದೆ :



ತಟ್ಟೆಯಲ್ಲಿ ಸ್ಟೈಲಾಗಿ ಅನ್ನ ಬಿಟ್ಟೇಳುವ/
ಮಗನ ಹಮ್ಮಿಗೆ ರೇಗುತ್ತೇನೆ.[ಅವ್ವ ಕಟ್ಟಿಕೊಟ್ಟ ಬುತ್ತಿ]


ಮಾರುತಿ ಸರ್ ತಮ್ಮ ದೇಸಿ ಭಾಷೆಯಲ್ಲಿ ಹಾಡು ಹೊಸೆಯುತ್ತಾ ಸಂಭ್ರಮಿಸುತ್ತಾರೆ(ಬಿದ್ಹೋದ ಬಿದಿರೂ ಕೊಳಲಾದ ಹಾಂಗ ). 'ಎಲ್ಲಿದ್ದಿ ಜೋಗಪ್ಪ','ಯಾರೋ ಬಂದು ', 'ಬಾಲ್ಯ ಹೊಲದ ತೆನೆ'- ಈ ಕವಿತೆಗಳು ಅವರ ಸಂಗೀತ ಪ್ರಜ್ಞೆಯನ್ನು ತೋರಿಸುತ್ತವೆ .




ಸಮಾಜದ ಬಿಕ್ಕಟ್ಟುಗಳನ್ನು,ವೈರುಧ್ಯಗಳನ್ನು ಸ್ವಯಂ ಅನುಭವಿಸಿ ,ಅವುಗಳನ್ನು ಭಿನ್ನವಾಗಿ ಕಟ್ಟಿಕೊಡುತ್ತಾರೆ.ಆಗ ಉದ್ಭವಿಸುವ ಆಕ್ರೋಶವೆಲ್ಲ ನ್ಯಾಯೋಚಿತವಾದದ್ದೇ:


ಏಕಲವ್ಯನ ಬೆರಳ ಕತ್ತರಿಸಿದಾಗ/
ಅತ್ತುಬಿಟ್ಟ ವಾಲ್ಮೀಕಿ[ವಿಪರ್ಯಾಸ]
+



ಮೂರ್ತಿಪೂಜೆಯ ಹಗ್ಗ /
ಹರಿದೊಗೆದ ನಿನಗೆ /
ಅದರದೇ ಉರಳು.
+


ಸಾದಾ ಸರಳ ಭಿಕ್ಕುವಿಗೆ /
ಎಷ್ಟೊಂದು ಗೋಲ್ಡನ್ನು /
ಟೆಂಪಲ್ಲುಗಳು.[ಬುದ್ಧನಿಲ್ಲದ ಬೋಧಿ]
+


ನನ್ನನ್ನಿರಲು ಬಿಡಿ ಹಾಗೇ/
ನಿಮ್ಮೊಳಗೆ ಬರೆಯದೇ ಉಳಿದ /
ಕವಿತೆಯಾಗಿ[ಗೋರಿ ಕಟ್ಟಬೇಡಿ]
+


ಅಸ್ತ್ರವಿಡಿದಿದ್ದಾಳೀಕೆ/
ಯಾರಿಗೋ ಗೊತ್ತಿಲ್ಲ /
ಆಟವಾಡಲು ಕೊಡು /
ಎಂದು ಮಗ/
ರಂಪ ಹೂಡಿದ್ದಾನೆ [ಯುದ್ಧ ಮುಗಿದ ಮೇಲೆ ]
+


ಆಧುನೀಕತೆಯು ಸಂಬಂಧಗಳನ್ನು ಛಿದ್ರಗೊಳಿಸುತ್ತಿರುವಾಗ,ಬಹುತೇಕ ಕವಿತೆಗಳು ಭೂತ-ವರ್ತಮಾನಗಳನ್ನು ತುಲನಾತ್ಮಕವಾಗಿ ಗ್ರಹಿಸುತ್ತವೆ. 'ಮಲ್ಲಿಗೆ ಮತ್ತು ಬೇವು', 'ಗೆಳೆಯನಿಗೆ', 'ಬೇಗ ಬಾ' , 'ಹಳೆಬೇರು-ಹೊಸಚಿಗುರು' -ಇಂತಹ ಮಾದರಿಯವು.



ಕೆರೆ ದಂಡೆಗೆ ಬೇಲಿಯು ಇದೆ/
ಈಜಾಡುವ ಹೈದರಿಲ್ಲ[ಹಳೆಬೇರು ಹೊಸಚಿಗುರು]
*


ಟಿ.ವಿ. ಕೇಬಲನ್ನು/
ತೆಗೆಸಿಬಿಡುತ್ತೇನೆ/
ಕಂಪ್ಯೂಟರನ್ನು ಆಫ್ ಮಾಡಿ/
ಮಲಗಿಸಿ ಬಿಡುತ್ತೇನೆ[ಗೆಳೆಯನಿಗೆ]
*


ಸಂಕೀರ್ಣ ಬದುಕಿನಿಂದ ಬಿಡಿಸಿಕೊಂಡು ಬದುಕಬೇಕಾದ ತುರ್ತನ್ನು ಹೇಳುವ,ವಾಸ್ತವದ ಲೆಕ್ಕ ತಪ್ಪಿದುದರ ಕುರುಹುಗಳಿರುವ ಇಂತಹ ಅನೇಕ ಕವಿತೆಗಳು ಸಂಕಲನದಲ್ಲಿವೆ .



'ಅವ್ವ ಮತ್ತು ಕುಂಕುಮ' ಕವಿತೆ ಇಲ್ಲಿ ಗಮನಾರ್ಹವಾದುದು.ಕನ್ನಡಿಯ ತುಣುಕು ,ಜೇನ ಮೇಣದ ಡಬ್ಬಿ,ಕುಂಕುಮ ಬಟ್ಟಲು- ಇವು ಅವ್ವನ ಸಿಂಗಾರ ಸಾಮ್ರಾಜ್ಯದ ಸರಕುಗಳು .



ಅಪ್ಪ ಕಾಯಿಲೆ ಬಂದು ಮಲಗಿದಾಗ/
ಅವ್ವನ ಕುಂಕುಮದ ಹಾರೈಕೆ/
ಇನ್ನೂ ಜೋರಾಗಿರುತ್ತದೆ.



ಮನಕಲಕುವ ಇಂತಹ ಸಂಗತಿಗಳನ್ನು ಕಾವ್ಯಾತ್ಮಕಗೊಳಿಸಿದ ಬಗೆ ಬೆರಗು ಹುಟ್ಟಿಸುತ್ತದೆ.ಕನ್ನಡಿ ಮತ್ತು ಕುಂಕುಮದ ಪ್ರತಿಮೆಗಳು ಶಕ್ತವಾಗಿ ಹೊರಹೊಮ್ಮಿವೆ.



ಕನ್ನಡಿ ಫಳಫಳ ಹೊಳೆಯುತ್ತದೆ/
ಕುಂಕುಮದ ಕೆಂಪು ತುಂಬಿಕೊಂಡು .


ಅಪ್ಪನನ್ನೂ ಕುಂಕುಮವನ್ನೂ/
ಮಗುವಿನಂತೆ ಸಾಕಿದ್ದ/
ಅವ್ವನ ಹಣೆ/
ಈಗ ಖಾಲಿಯಿದೆ(ಕೊರಳೂ)



ಹೀಗೆ ಬದುಕಿನ ಎಲ್ಲ ಸೂಕ್ಷ್ಮಗಳನ್ನು ಹೇಳಹೊರಡುವ ಮಾರುತಿ ಸರ್ ಅವರ ಕೆಲವು ಕವಿತೆಗಳಲ್ಲಿ ಮಾತು ಕೂಡ ಇಣುಕುತ್ತದೆ.ಅದನ್ನು ನೀಗಿಸಿಕೊಳ್ಳುವ ಎಲ್ಲ ಕಸುವೂ ಅವರಿಗಿದೆ.ನನ್ನಂಥವರನ್ನೂ ನೆನೆಸಿಕೊಳ್ಳುವ ಅವರ ದೊಡ್ಡಗುಣಕ್ಕೆ ಶರಣು!

**

-ಕಾಜೂರು ಸತೀಶ್

Tuesday, November 17, 2015

എന്റെ അകത്തേക്കു കയറുംബേള്

കാലിങ് ബെല് ഇല്ലെങ്കിലും
എന്റെ വാരിയെല്ലീനെ തട്ടിയാല് മതി -
ഞാന് വാതില് തുറക്കുന്നു .



മൊട്ടാവുന്ന,വിടരുന്ന
എല്ലാം ഹൃദയങ്ങള്ക്കും ഒരേ ഒരു നിറം
എന്റെ വീട്ടില് പൈന്റ്റ൪ പുരട്ടിയതും അതേ നിറം .



എന്റെ കുടലിന്റെ പായ് വിരിക്കുന്നു.
നിങ്ങള് അതില് ഇരിക്കുക, വിശ്രമിക്കുക.
തലച്ചോറ് , ഹൃദയം ,രക്തത്തിന്റെ കുറിച്ചു
ചര്ച്ച നടത്തുക.



എന്റെ വീട്ടിനെ പൂട്ട് ഇല്ല -
നിങ്ങള് എപ്പോഴെങ്കിലും വരാം .
മഴക്കാലത്ത് തകര്ന്നു വീണാല്
മണ്ണിന്റെ അകത്തു എന്റെ വീട് .
അവിടെ നഖം, രോമം ,എല്ലിനെ പറ്റി ചര്ച്ച ചെയ്യുക .



എന്റെ വീട്ടിന്റെ അകത്തുള്ള സ്നേഹം
ഏതു മഴ ,ഏതു കാറ്റിലും തകര്കുന്നതല്ല.
കാലിങ് ബെല് ഇല്ലെങ്കിലും
കാറ്റിന്റെ വാതില് തട്ടി അവിടത്തേക്ക് വരിക .
**


-കാജൂരു സതീഷ്

Saturday, November 14, 2015

ದೋಷ

ಈಗೀಗ ಅಜ್ಜನಿಗೆ ಉಚ್ಚಾರಣಾ ದೋಷ.
'ಪಾಪು' ಎನ್ನಲು 'ಪುಪಾ' ಎನ್ನುತ್ತಾರೆ
'ಪುಟ್ಟ' ಎನ್ನಲು 'ಟ್ಟಪು'
'ಮುದ್ದು' ಎನ್ನಲು 'ದ್ದುಮು'...

ಆದರೆ,
ಮನೆಯಿಂದ ಹೊರಗೆ
'ಪುಟ್ಟಿ'ಯನ್ನು ಕರೆಯಲು
ಯಾಕೋ ತುಂಬಾ ಹೆದರಿಕೊಳ್ಳುತ್ತಿದ್ದಾರೆ!
**

-ಕಾಜೂರು ಸತೀಶ್

Wednesday, November 11, 2015

ಚಿಟ್ಟೆ ಮತ್ತು ಗಿಳಿ

ಚಿಟ್ಟೆ ಮತ್ತು ಗಿಳಿ
ಹೂದೋಟದ ತುಂಬ ಹಾರಾಡಿ
ದಣಿದು ಕುಳಿತಿವೆ.


ಗಿಳಿಯ ಕಣ್ಣುಗಳು
ಚಿಟ್ಟೆಯ ಮೇಲೆ
ಚಿಟ್ಟೆಯ ಕಣ್ಣುಗಳು
ಹೂವಿನ ಮೇಲೆ.


ಒಂದು ಸಲ ಹಾರಿದರೂ ಸಾಕು
ಚಿಟ್ಟೆಗೆ ಮಕರಂಧ ಹೀರಬಹುದು
ಗಿಳಿಗೆ ಚಿಟ್ಟೆಯನ್ನು ತಿನ್ನಬಹುದು.


'ಚಿಟ್ಟೆಯೋ ಅಥವಾ ಗಿಳಿಯೋ
ಮೊದಲು ಹಾರುವವರಾರು?'
ಯೋಚಿಸಿದ ಹೂದೋಟದವ.


ಚಿಟ್ಟೆ ಹಾರಿತೆಂದರೆ
ಒಂದು ಹೂವು ಸಿಗಬಹುದು
ಇನ್ನೂ ಹಾರಿತೆಂದರೆ ಮತ್ತೊಂದು ಹೂವು.
ಮತ್ತೂ ಹಾರಬಹುದು-
ಸುಸ್ತಾಗಿ ಕುಳಿತ ಗಿಳಿ ಹಾರುವವರೆಗೆ.


ಆದರೆ
ಚಿಟ್ಟೆ ಹಾರಲಿಲ್ಲ
ಗಿಳಿಯೂ ಕೂಡ.
**

ಮಲಯಾಳಂ ಮೂಲ- ಡೋನಾ ಮಯೂರ

ಕನ್ನಡಕ್ಕೆ- ಕಾಜೂರು ಸತೀಶ್

Tuesday, November 10, 2015

ದಿನಚರಿ-10

ಗುಂಪುಘರ್ಷಣೆಯಲ್ಲಿ ಸಾಯುವ ಪ್ರತಿಯೊಬ್ಬ ಅಮಾಯಕ ವ್ಯಕ್ತಿಯ ಮೇಲೆ ಅಪಾರ ಮರುಕವಾಗುತ್ತದೆ[ತತ್ವ ,ಸಿದ್ಧಾಂತ, ವರ್ಗಗಳ ಹಂಗಿಲ್ಲದೆ]. ಇವರನ್ನು ಬೀದಿಗಿಳಿಸಿ ಬೀದಿಪಾಲು ಮಾಡುವ ನೇತಾರರ ಮೇಲೆ ತೀರಿಸಲಾರದಷ್ಟು ಆಕ್ರೋಶ ಹುಟ್ಟುತ್ತದೆ.



ಇಂತಹ ಅಮಾಯಕರನ್ನು ಬಾಲ್ಯದಿಂದಲೇ ನೋಡುತ್ತಾ ಬಂದಿದ್ದೇನೆ. ಅವರಲ್ಲನೇಕರು ತೀರಿಕೊಂಡಿದ್ದಾರೆ. ಉಳಿದವರು ತಮ್ಮ ಮೈಮೇಲೆ ಹೇರಲಾಗಿರುವ ಆಪಾದನೆಗಳ ಪೊರೆ ಕಳಚಲು ಕೋರ್ಟು ಕಚೇರಿಗೆ ಅಲೆದೂ ಅಲೆದು ಈಗ ಸದ್ದೇ ಇಲ್ಲದ ಹಾಗೆ ಕೌಟುಂಬಿಕ ಚಕ್ರದ ಕೆಳಗಿನ ನೆಲವಾಗಿದ್ದಾರೆ.ಹೊಟ್ಟೆಪಾಡಿಗಾಗಿ ಬದುಕುವ ಇಂತಹ ಅಮಾಯಕರಿರುವವರೆಗೂ ರಕ್ಕಸರು ಸದ್ದಿಲ್ಲದೆ ಇವರ, ನೆಲದ ರಕ್ತ ಹೀರಲು ತೊಡಗುತ್ತಾರೆ.

ಅವತ್ತು ಯಾರನ್ನು ಬೆಂಬಲಿಸಿ ಬೀದಿಗಿಳಿದಿದ್ದರೋ,ಅದೇ ಮನುಷ್ಯ ಈಗ ಇವರೆದುರು ಅಪರಿಚಿತನಂತೆ ಅಧಿಕಾರದ ಅಮಲಿನ ಬಲದಿಂದ ಹಾಯಾಗಿ ಹಾದುಹೋಗುತ್ತಾನೆ.
**

-ಕಾಜೂರು ಸತೀಶ್

Tuesday, November 3, 2015

ಬಹಿಷ್ಕೃತ

ನಾನು ಕಳಿಸಿಕೊಟ್ಟ ಖರ್ಜೂರ ತಿನ್ನುತ್ತಾ
ಎಷ್ಟು ಸಂಭ್ರಮಿಸುತ್ತಿರುವೆ ನೀನು
'ಆಹಾ ಎಷ್ಟು ಸಿಹಿ' ಎಂದು ಚಪ್ಪರಿಸುತ್ತಿರುವೆ.


ಆ ಸಿಹಿಯ ಒಳಗೆ ಗುಟ್ಟಾಗಿ ಕುಳಿತಿರುವ
ಸುಡುಬಿಸಿಲಿನ ಬಗ್ಗೆ ಗೊತ್ತಿಲ್ಲ ನಿನಗೆ.


ಅದರ ಒಂದು ಬೀಜವನ್ನಾದರೂ ಹೂತುಬಿಡು
ನಿನ್ನ ಹೃದಯದಲ್ಲಿ .
ಮೊಳೆತು ಮರವಾದ ಮೇಲೆ
ನೀನೇ ಸುಡುಬಿಸಿಲಾಗಿಬಿಡುತ್ತೀಯ.


ಹೂವಾಗಿ ಕಾಯಾಗಿ
ಹಣ್ಣಾದ ಮೇಲೆ
ಒಂದೊಂದೇ ಖರ್ಜೂರ ನಿನ್ನೊಳಗಿಳಿಯುವಾಗ
ಸಿಹಿಯ ಒಳಗೆ ಅಡಗಿ ಕುಳಿತಿರುವ
ಸುಡುಬಿಸಿಲು ತಿಳಿಯುವುದು.


ಆಮೇಲೆ
ಆ ಮರಕ್ಕೆ
'ಬಹಿಷ್ಕರಿಸಲ್ಪಟ್ಟವನು' ಎಂಬ ಹೆಸರಿಟ್ಟುಬಿಡು!
**
ಮಲಯಾಳಂ ಮೂಲ- ಪ್ರದುಲ್ ಷಾದ್ ಸಿ.


ಕನ್ನಡಕ್ಕೆ -ಕಾಜೂರು ಸತೀಶ್

ದಿನಚರಿ -9

ಪೋಸ್ಟ್ ಮಾರ್ಟಂ ದೃಶ್ಯವನ್ನು ನೋಡಿದೆ. ಆ ವೈದ್ಯ, ಮತ್ತವರ ಸಹವರ್ತಿಗಳು ಜೀವಂತ ಶರೀರಗಳ ಜೊತೆ ಒಡನಾಡುವಾಗ ಅವರ ಮನಸ್ಸಿನಲ್ಲಿ ಯಾವ ವಿಚಾರಗಳು ಹರಿದಾಡುತ್ತಿರಬಹುದು? ಚರ್ಮ, ಮೂಳೆ, ರೋಮ, ಉಗುರು - ಇವುಗಳಷ್ಟೆ ನೆನಪಾಗಬಹುದೇ?

ಅಮೂರ್ತವಾದ ಪರಿಕರಗಳೇ ವ್ಯಕ್ತಿಯ ಅಸ್ಮಿತೆಯನ್ನು ಸಾರುವುದು, ವ್ಯಕ್ತಿತ್ವವನ್ನು ರೂಪಿಸುವುದು. ಅವುಗಳ ಅನುಪಸ್ಥಿತಿ ಆ ದೇಹಗಳಲ್ಲಿರುವುದಿಲ್ಲ ಎಂಬ ನಿಲುವನ್ನು ಗಟ್ಟಿಯಾಗಿ ತಳೆದುಕೊಂಡು ತನ್ನವರೊಂದಿಗೆ ಸಹಜವಾಗಿ ಒಡನಾಡುತ್ತಾರೆಯೇ? ಪ್ರೀತಿ, ಸ್ನೇಹ, ಕಾಮ, ಸಿಟ್ಟು, ತಮಾಷೆ ಇವುಗಳನ್ನೆಲ್ಲ ಅಷ್ಟು ಸುಲಭವಾಗಿ ಕೊಡು-ಕೊಳ್ಳಲು ಸಾಧ್ಯವೇ?

ಹಕ್ಕಿಗಳೆಲ್ಲ ಗಂಟಲು ಸರಿಪಡಿಸಿಕೊಳ್ಳುತ್ತಿರಬಹುದಾದ ಈ ಬೆಳ್ಳಂಬೆಳಿಗ್ಗೆ ಇವೆಲ್ಲ ಯಾಕೆ ಕಾಡುತ್ತಿವೆಯೋ ತಿಳಿಯುತ್ತಿಲ್ಲ.
**
-ಕಾಜೂರು ಸತೀಶ್

Monday, November 2, 2015

ದಿನಚರಿ -8

ಮೂಟೆ ಕಟ್ಟಿಟ್ಟ ಪುಸ್ತಕದ ಚೀಲವನ್ನು ಅಟ್ಟದಿಂದ ಇಳಿಸಿದೆ- ಬಾಲ್ಯ ನಿದ್ರಿಸುತ್ತಿತ್ತು ಅದರೊಳಗೆ. ಕಟ್ಟುಬಿಚ್ಚಿದೆ- ನೆಟಿಗೆ ಮುರಿದು ಕಣ್ಣುಗಳನ್ನು ಉಜ್ಜುತ್ತಾ ಎದ್ದುಬಿಟ್ಟಿತು.

ನೋಟ್ಪುಸ್ತಕಗಳ ತೆರೆದರೆ, ಸಹಿಮಾಡಿದ ಗುರುಗಳೆಲ್ಲರೂ ಪ್ರತ್ಯಕ್ಷ[ಅವರಿಗೆ ವರ್ಗಾವಣೆಯಿಲ್ಲ, ಬಡ್ತಿಯಿಲ್ಲ, ಸಾವೂ ಇಲ್ಲ!]

ಆಡಿ ಅರ್ಧಕ್ಕೆ ನಿಲ್ಲಿಸಿದ 'ಕಳ್ಳ-ಪೊಲೀಸ್' ಆಟದ 'ಕಳ್ಳ' ಎನ್ನುವ ಚೀಟಿ ಅಲ್ಲೇ ಉಳಿದುಬಿಟ್ಟಿತ್ತು. ಬರೆದ ಭೂಪಟಗಳೆಲ್ಲ ಏಕಕೋಶೀಯ ಜೀವಿಗಳಾಗಿ ಗಡಿದಾಟಿಬಿಟ್ಟಿದ್ದವು!

ಕಳಕೊಳ್ಳಲು ಇಷ್ಟವಿಲ್ಲ. ಮತ್ತೆ ಮೂಟೆ ಕಟ್ಟಿಟ್ಟೆ.
**
-ಕಾಜೂರು ಸತೀಶ್

ಕಿರುಗವಿತೆಗಳು

-೧-
ಮರ ಹತ್ತುವಾಗ ಒಂದು ಹಾವು ಸಿಕ್ಕಿತು
ಹಿಡಿದು ಎಸೆದುಬಿಟ್ಟೆ ಜೀವಭಯದಿಂದ

ಹಾವು ಸತ್ತಿತು
ಹಡೆದ ಅಷ್ಟೂ ನನ್ನ ಕವಿತೆಗಳೂ.

-೨-
ಇವತ್ತು ಅಮವಾಸ್ಯೆ
ಟಾರ್ಚಿಲ್ಲದೆ ನಡೆದುಬಂದೆ

ಕತ್ತಲು ಕೂಡ ಮುಖಕ್ಕೆ ಮಸಿಬಳಿಯಲಿಲ್ಲ.

-೩-
ಬೆಳಕ ಝರಿ ಹರಿದು
ಕಡಲ ಸೇರಿದೆ

ಮರುಭೂಮಿಗಳು ಹೆಚ್ಚುತ್ತಲೇ ಇವೆ.

-೪-
ತಲೆಯಾಡಿಸುವ ನಾಯಿಯ ಕಿವಿಗಳ ಸದ್ದು
ಗಡಿಯಾರದ ಮುಳ್ಳು ಮೈಮುರಿವ ಸದ್ದು
ನಿನ್ನ ಹೃದಯದ ಹೂವರಳುವ ಸದ್ದು
ಕೇಳುತ್ತಿಲ್ಲವೆಂದರೆ

ದಯವಿಟ್ಟು
ಕವಿತೆ ಹಡೆಯುವುದ ನಿಲ್ಲಿಸಿಬಿಡು.
***
-ಕಾಜೂರು ಸತೀಶ್

ರೊಟ್ಟಿ

-೧-
ರೊಟ್ಟಿ ತಟ್ಟುವ ಅವ್ವನಿಗೆ
ಹೆಬ್ಬೆಟ್ಟಿನ ಸಹಿ ಬಲು ಸುಲಭ

ಅವ್ವ ರೊಟ್ಟಿ ತಟ್ಟಿ
ಜ್ಯಾಮಿತಿಯ ವೃತ್ತಕ್ಕೆ ದ್ರೋಹ ಬಗೆಯುವುದಿಲ್ಲ

ನನ್ನ ಹೊಟ್ಟೆಗಿಳಿದ ರೊಟ್ಟಿ
ಅವಳ ಹೆಬ್ಬೆಟ್ಟು ಸಹಿಗಳ ಜೀರ್ಣಿಸಿ
ಕವಿತೆಗಳ ಜನನ

-೨-
ನಾ ತಟ್ಟುವ ರೊಟ್ಟಿ
ಭೂಪಟಗಳ ನೆನಪಿಸುವುದು
ನನ್ನ ನಾಯಿಗೆ ಕಿತ್ತು ಕೊಡುವಾಗಲೂ
ಗಡಿ ಉಲ್ಲಂಘನೆಯಾಗುವುದಿಲ್ಲ
ಯುದ್ಧ ಸಂಭವಿಸುವುದಿಲ್ಲ

-೩-
ಅವ್ವಂದಿರ ತಪ್ಪಾಗಿ ಅರ್ಥೈಸಿದ ಸೂರ್ಯ
ರೊಟ್ಟಿ ಸುಡುತ್ತಿದೆ ನೆಲದ ಕಾವಲಿಯಲ್ಲಿ
ನೇಗಿಲ ಸೌದೆ ಎಷ್ಟು ಚೆನ್ನಾಗಿ ಉರಿಯುತ್ತದೆ

ಅದು ತಿಂದುಳಿದು
ಇಟ್ಟ
ರೊಟ್ಟಿ
ಮರಗಟ್ಟಿ
ಮರುಭೂಮಿಗಳಾಗಿವೆ

ಕುಣಿಕೆಗಳ ಎಸೆದರೆ ಸೂರ್ಯ ಮುಟ್ಟಿಯೂ ನೋಡುತ್ತಿಲ್ಲ
ಸುಲಭಕ್ಕೆ ಸಿಗುವ ಗೆಲ್ಲುಗಳೂ ಸೌದೆಗಳಾಗುತ್ತಿಲ್ಲ

-೪-
ನರಿ ಹೊಂಚು ಹಾಕುತಿದೆ
ಕಾಗೆ ಇನ್ನೇನು ಹಾಡಲಿದೆ.
***

-ಕಾಜೂರು ಸತೀಶ್

Sunday, November 1, 2015

ಗಾಳಿ

ಗಿಡಮರಗಳ ಹೊಕ್ಕಳಿಂದುಕ್ಕುವ ಗಾಳಿಯ ತೊರೆ, ನದಿ
ಗುಪ್ತವಾಗಿ ಸುಪ್ತವಾಗಿ ಹರಿದು, ಕೂಡಿ ವಾತಸಮುದ್ರ



ಎಷ್ಟು ಹಕ್ಕಿಗಳು ಈಜಾಡಿಕೊಂಡಿವೆ ಅಲ್ಲಿ
ಎಷ್ಟು ಉದುರಿದೆಲೆಗಳು ಮೀನುಗಳ ಅನುಕರಿಸುತಿವೆ ಅಲ್ಲಿ
ಎಷ್ಟು ಮರಗಳು ಮುಳುಗಿ ಜಳಕಮಾಡುತಿವೆ ಅಲ್ಲಿ
ಮುಜುಗರವಿಲ್ಲದೆ ಬೆತ್ತಲ, ಬೆಳಗತ್ತಲ ಲೆಕ್ಕವಿಲ್ಲದೆ



ಮೇಲ್ಪದರದಲ್ಲೇ ತೇಲುತಿರುವ ಇಷ್ಟೆತ್ತರದ ಮರದ ಗೆಲ್ಲಿಗೆ
ಮರೆತುಹೋಗಿರಬಹುದೇ ಪಾತಾಳದ ಬೇರು?
ಮುದಿತಳದ ಪ್ರೀತಿ?



ಎಷ್ಟು ರಂಧ್ರಗಳಿವೆಯೋ ನಮ್ಮೊಳಗೆ ಗಾಳಿಗಷ್ಟೇ ಗೊತ್ತು
ಉಳಿದ ನಮ್ಮ ನಾಳೆಗಳೆಷ್ಟೋ ಗಾಳಿಗಷ್ಟೇ ಗೊತ್ತು



ಕತ್ತರಿಸಿದರೂ ಕತ್ತುಹಿಚುಕಿದರೂ ನೋವಿಲ್ಲದ ಸಾವಿಲ್ಲದ ಬದುಕು
ರಕ್ತವಿಲ್ಲದ ವರ್ಣವಿಲ್ಲದ ವಾತಸಮುದ್ರ ಕೆಂಪಾಗುವುದೇ ಇಲ್ಲ.

**

-ಕಾಜೂರು ಸತೀಶ್

ದಿನಚರಿ -7

ಕನಿಷ್ಟ ಒಂದು ಚಿತ್ರ, ಒಂದು ಕತೆ, ಒಂದು ಹಾಡು, ಒಂದು ನಾಟಕ - ಇಷ್ಟನ್ನಾದರೂ ಕಲಿಸಿಕೊಡದ ;
ಒಂದು ದಿನವಾದರೂ ಮಕ್ಕಳೊಂದಿಗೆ ಆಡಿ ಬಟ್ಟೆ ತುಂಬಾ ಮಣ್ಣು ಮಾಡಿಕೊಳ್ಳದ ವ್ಯಕ್ತಿಯನ್ನು 'ಶಿಕ್ಷಕ/ಶಿಕ್ಷಕಿ' ಎಂದು ಕರೆಯಲು ಎದೆ ಸೀಳಿದಷ್ಟು ಹಿಂಸೆಯಾಗುತ್ತದೆ!

**

-ಕಾಜೂರು ಸತೀಶ್

ದಿನಚರಿ -6

ಎಷ್ಟೆಷ್ಟೋ ಸಲ 'Love You' ಅಂತ ಹೇಳಬೇಕೆಂದುಕೊಳ್ಳುತ್ತೇನೆ. ಆದರೆ ಈ ಹಾಳು phrase ನಿಂದ ಮದುವೆಯ ಮತ್ತು ಕಾಮದ ಕಮಟು ವಾಸನೆ ಹೊಡೆಯುತ್ತಿರುತ್ತದೆ. ಅದಕ್ಕೇ, ಲೆಕ್ಕವಿಲ್ಲದಷ್ಟು ಸಲ ನುಂಗಿಕೊಂಡಿದ್ದೇನೆ!

**

-ಕಾಜೂರು ಸತೀಶ್

ದಿನಚರಿ -5

ಹೀಗೆ ಘನಮೌನದಲ್ಲಿ ಒಬ್ಬನೇ ಬದುಕುವುದು ಎಷ್ಟು ಖುಷಿ ಗೊತ್ತಾ? ಅದೆಂಥದ್ದೇ ಹಿಂಸೆಯಾಗಲಿ, ಅಥವಾ ಸತ್ತೇ ಹೋಗಲಿ- ಅದರಲ್ಲಿ ನನಗಂತೂ ತುಂಬ ತುಂಬಾ ಖುಷಿಯಿದೆ!



ಒಮ್ಮೆ ಹೀಗೇ ಗಂಭೀರವಾಗಿ ಏನನ್ನೋ ಧ್ಯಾನಿಸುತ್ತಾ ಒಳಗೇ ಕೂತುಬಿಟ್ಟಿದ್ದೆ. ಎರಡನೇ ದಿನ ಪಕ್ಕದವರು ಬಂದು ಬಾಗಿಲು ತಟ್ಟಿದರು! "ಓ.. ನೀವಿದ್ದೀರಾ? ಸದ್ದೇ ಇರ್ರಿಲ್ಲ ಅದ್ಕೆ ಕರ್ದೆ" ಎಂದರು. ಅವರ ಕಲ್ಪನೆಯಲ್ಲಿ ನನ್ನ ಸಾವು ಹೇಗಿದ್ದೀರಬಹುದೆಂದು ಊಹಿಸುತ್ತಾ ಹಲ್ಲುಗಳು ಕಾಣದ ಹಾಗೆ ನಕ್ಕುಬಿಟ್ಟಿದ್ದೆ!
**

-ಕಾಜೂರು ಸತೀಶ್

ದಿನಚರಿ -2

ನನ್ನ ಜೀವನದಲ್ಲಿ ಕಂಡ ಮಹಾನ್ ಸುಳ್ಳುಗಾರನ ಕುರಿತ ಲೇಖನವನ್ನು ಈಚೆಗೆ ಓದಿದ್ದೆ. ಹೊಗಳಿ ಹೊಗಳಿ ಅಟ್ಟಕ್ಕೇರಿಸಿಬಿಟ್ಟಿದ್ದರು. ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ಮುಖವಾಡ ತೊಡುವ ಇಂತಹ so called ಸಾಹಿತಿಗಳ ಮುಖ ನನಗೆ ಹೊಸತಲ್ಲವಾದರೂ, ಈ ಕಾಲದ ಸಾಹಿತ್ಯ ಹೇಗಿತ್ತು ಎನ್ನುವುದನ್ನು ನಾಳಿನ ದಿನಗಳಲ್ಲಿ ನನ್ನ ವಿದ್ಯಾರ್ಥಿಗಳು, ಅವರ ಮಕ್ಕಳು-ಮೊಮ್ಮಕ್ಕಳೆಲ್ಲ ತಿಳಿಯಲು ಅನುಕೂಲವಾಗಲಿ ಎಂದು ಇದನ್ನು ಶಾಸನದ ಹಾಗೆ ಇಲ್ಲಿ ಬರೆದಿಟ್ಟಿದ್ದೇನೆ!


**

-ಕಾಜೂರು ಸತೀಶ್

ದಿನಚರಿ -4

ಒಂದು ದಿನ 'ನಿಮ್ಮ ಪುಸ್ತಕ ಪ್ರಕಟಿಸುತ್ತೇವೆ, ಕವಿತೆಗಳನ್ನು ಕಳುಹಿಸಿಕೊಡಿ' ಎಂಬ ಪತ್ರವೊಂದು ಬಂದಿತ್ತು. ಕಳುಹಿಸಿಕೊಟ್ಟೆ. ಆಮೇಲೆ ಅವರೇನೂ ಹೇಳಲಿಲ್ಲ , ನಾನೇನೂ ಕೇಳಲಿಲ್ಲ. ಹಾಗೆ ನನ್ನ ಮೊದಲ ಹಸ್ತಪ್ರತಿ ಕಳೆದುಹೋಯಿತು!

ಮತ್ತೊಂದು ದಿನ ನನ್ನ ಎರಡನೇ ಹಸ್ತಪ್ರತಿ ಹೇಗ್ಹೇಗೋ ಪುಸ್ತಕವಾಗಿ ಮುದ್ರಿತವಾಯಿತು. ಅದರಲ್ಲೊಮ್ಮೆಯಾದರೂ ಕಣ್ಣಾಡಿಸೋಣವೆಂದರೆ, ಅದಿನ್ನೂ ನನ್ನ ಬಡಪಾಯಿ ಕೋಣೆಗೆ ಬರುವುದಿಲ್ಲವೆಂಬಂತೆ ರಾಜಧಾನಿಯ ಚರಂಡಿಯ ಪರಿಮಳವನ್ನಷ್ಟೇ ಆಘ್ರಾಣಿಸುತ್ತಾ ಕುಳಿತಿದೆ. ಹಾಗೆ, ನನ್ನ ಎರಡನೆಯ ಹಸ್ತಪ್ರತಿಯೂ ಮರಣದಂಡನೆಗೆ ಒಳಗಾಯಿತು!



ಸದ್ಯ! ಮೂರನೇ ಹಸ್ತಪ್ರತಿ ಭದ್ರವಾಗಿದೆ. ನಾಲ್ಕನೆಯದರ ಸುದ್ದಿಯನ್ನು ಸದ್ಯದಲ್ಲೇ ಬರೆದುಕೊಳ್ಳುವೆ.
**

-ಕಾಜೂರು ಸತೀಶ್

ದಿನಚರಿ -3

ಎಷ್ಟೆಷ್ಟೋ ಪತ್ರಿಕೆಗಳನ್ನು ನೋಡಿದ್ದೇನೆ;ಓದಿದ್ದೇನೆ. ಆದರೆ ಒಂದು ಗುಂಪಿನ ಜನ ಎಂದೆಂದೂ ತಲೆಯ ಮೇಲೆ ಹೊತ್ತೊಯ್ಯುವ ಈ ಪತ್ರಿಕೆಗೆ ಇರುವ ಬರಹಗಾರರ ಮೇಲಿನ ನಿಲುವು ನನ್ನನ್ನು disturb ಮಾಡುತ್ತದೆ. ಹೊಸ ಬರಹಗಾರನೊಬ್ಬ ಇಲ್ಲಿ ಕಾಣಿಸಿಕೊಳ್ಳಲು ದೊಡ್ಡವರ ಶಿಫಾರಸ್ಸು ಬೇಕು. ನನ್ನಂಥ untouchable ವ್ಯಕ್ತಿಗಳು ಇಂತಹವುಗಳಿಂದ ದೂರ ಉಳಿಯುವುದೇ ಒಳ್ಳೆಯದು. ಅದು ತನ್ನ ಪೂರ್ವಾಗ್ರಹಪೀಡಿತ ಬಲೆಯೊಳಗೆ ಮತ್ತಷ್ಟೂ ಸಿಲುಕಿಕೊಂಡು ಸಂಭ್ರಮಿಸಲಿ!
**

-ಕಾಜೂರು ಸತೀಶ್

ದಿನಚರಿ -1

ಈ ಚಿಂತನೆಗಳು ಅಕ್ಷರಗಳಾಗಿ ಹುಟ್ಟಿಕೊಳ್ಳುವಾಗ ಒಬ್ಬ ಕೂಲಿ ಕಾರ್ಮಿಕನಾಗಿರುತ್ತೇನೆ: ಬೆವರು ಧಾರಾಕಾರ ಜಿನುಗುತ್ತದೆ, ಹೃದಯ ಚಂಡೆಯಾಗಿರುತ್ತದೆ, ಕಣ್ಣುಗಳು ಅದ್ಯಾವುದೋ ಕೇಂದ್ರದ ದಾಸನಾಗಿರುತ್ತವೆ.



ಇದೇ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ಕ್ರಾಂತಿಕಾರಿ ಆಗುತ್ತಾನೆ. ಇದೇ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ನೇಣುಹಾಕಿಕೊಳ್ಳುತ್ತಾನೆ. ಇದೇ ಸ್ಥಿತಿಯಲ್ಲಿ ಧೋ ಧೋ ಮಳೆ ಸುರಿಯುತ್ತದೆ. ಬಿಸಿಲು ಸುಟ್ಟೂ ಸುಡುತ್ತದೆ. ಎಲೆಯ ತೊಟ್ಟು ಕಳಚಿ ಭೂಮಿಯ ಪಾದ ಸೇರುತ್ತದೆ.

ಇದೇ ಸ್ಥಿತಿಯಲ್ಲಿಯೇ ಸಿದ್ದಾರ್ಥ ಬುದ್ಧನಾದದ್ದು!
**

-ಕಾಜೂರು ಸತೀಶ್

Tuesday, October 20, 2015

ನನ್ನೊಳಗೆ ಅಚ್ಚಾದ ವ್ಯಕ್ತಿಯ ಚಿತ್ರ

ಕ್ಯಾಮರಾ, ಗಾಢ ವರ್ಣದ ಷರ್ಟ್, ಜರ್ಕಿನ್, ನೈಟ್ ಪ್ಯಾಂಟ್, ಶೂ, ಬ್ಯಾಗ್, ಕಾಗದಗಳು, ಪತ್ರಿಕೆಗಳು, ಬಿಳಿಯ ದಾಡಿ - ಇಷ್ಟೂ ಚಿತ್ರಗಳು ಒಟ್ಟಿಗೆ ಎದುರಾದಾಗ ಈ ಮನುಷ್ಯನ ನೆನಪಾಗುತ್ತದೆ.


ಮೊದಲ ಬಾರಿಗೆ ನೋಡಿದ್ದಾಗ ಇವರೊಬ್ಬರು ಫೊಟೊಗ್ರಾಫರ್ ಇರಬಹುದೆಂದುಕೊಂಡಿದ್ದೆ. ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲೊಂದು ಸಾಹಿತ್ಯ ಕಾರ್ಯಕ್ರಮ ನಡೆಯುತ್ತಿದ್ದಾಗ, ನೇರವಾಗಿ ವೇದಿಕೆಯ ಬಳಿ ಬಂದವರೇ ಫೊಟೊ ಕ್ಲಿಕ್ಕಿಸಿ ಅಲ್ಲಿಂದ ಮಾಯವಾಗಿದ್ದರು.


ಮರುವರ್ಷ ಗೋಣಿಕೊಪ್ಪದ ದಸರಾ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಲು ವೇದಿಕೆಯ ಮೇಲೇರಿದ ಇವರು ತಮ್ಮ ಕವಿತೆಯೊಂದನ್ನು ಓದಿ, ಏನೇನೋ ಮಾತನಾಡಲು ಶುರುವಿಟ್ಟರು. ಸಂಘಟಕರು ಗದರಿಸಿ ಅವರ ಮಾತನ್ನು ಮೊಟಕುಗೊಳಿಸಿ ವೇದಿಕೆಯಿಂದ ಕೆಳಗಿಳಿಸಿದ್ದರು.


ಸ್ವಲ್ಪ ದಿನಗಳ ನಂತರ ನನ್ನ ಸಹೋದ್ಯೋಗಿಗೆ ಕವಿಗೋಷ್ಠಿಯ ಆಹ್ವಾನ ಪತ್ರವೊಂದು ಬಂದಿತ್ತು. ಅದರಲ್ಲಿ 'ಇಂದ' ವಿಳಾಸ ನೋಡಿ ತುಂಬಾ ವಿಚಿತ್ರ ಅನ್ನಿಸಿತ್ತು. ಕವಿ, ಸಾಹಿತಿ, ನಟ, ನಿರ್ದೇಶಕ, ಪತ್ರಕರ್ತ ಹೀಗೆ ತಮ್ಮನ್ನು ಪರಿಚಯಿಸಿಕೊಂಡಿದ್ದ ಇದೇ ವ್ಯಕ್ತಿ, ತಮ್ಮ ವಿದ್ಯಾರ್ಹತೆಯಾದ SSLC ಯನ್ನೂ ನಮೂದಿಸಿದ್ದರು! ಆಶ್ಚರ್ಯವೆಂದರೆ ಆ ಕವಿಗೋಷ್ಠಿಯನ್ನು ಇವರೇ ಆಯೋಜಿಸಿದ್ದರು.


ಮೊನ್ನೆ ಮಡಿಕೇರಿ ದಸರಾ ಕವಿಗೋಷ್ಠಿಯಲ್ಲಿ ಮತ್ತೆ ಇವರ ದರ್ಶನವಾಯಿತು. ಮುಂದೆ ಕುಳಿತಿದ್ದ ಅವರು ಹಿಂದಿನ ದಿನದ ಪತ್ರಿಕೆಯನ್ನು ಓದುತ್ತಿದ್ದರು. ಜಿಲ್ಲಾಧಿಕಾರಿಯವರು ಬಂದಾಗ ಏನೋ ಒಂದು ಕಾಗದವನ್ನು ಕೊಟ್ಟರು. ಕಾರ್ಯಕ್ರಮ ಆರಂಭವಾಗುವ ಮೊದಲು ಹಿಂದೆ ಕುಳಿತು ಸುಮ್ಮನೆ ಇವರನ್ನೇ ಗಮನಿಸುತ್ತಿದ್ದೆ. ಅಷ್ಟು ಹೊತ್ತು ಇವರು ಅಲ್ಲಿದ್ದರೂ ಒಬ್ಬರೊಂದಿಗೂ ಮಾತನಾಡಲಿಲ್ಲ! ಕವಿಗೋಷ್ಠಿಯ ಸಂದರ್ಭ ನೋಡಿದೆ- ನಿದ್ರಿಸುತ್ತಿದ್ದರು. ಕಾರ್ಯಕ್ರಮ ಮುಗಿಯುವುದರೊಳಗೆ ಅಲ್ಲಿಂದ ತೆರಳಿದ್ದರು.




ಈಚೆಗೆ ಒಂದು ಕವಿಗೋಷ್ಠಿ ನಡೆಯಿತಂತೆ. ಅದರಲ್ಲಿ ಇಬ್ಬರೇ ಭಾಗವಹಿಸಿದರಂತೆ - ಇವರು ಮತ್ತು ಇನ್ನೊಬ್ಬರು! ಮುಂದೆ ಖಾಲಿ ಕುರ್ಚಿಗಳು! ಸಾಹಿತ್ಯದ ಕುರಿತು ಸುಮಾರು ಹೊತ್ತು ಮಾತನಾಡಿದರಂತೆ! ಈ ವಿಷಯವನ್ನು ಗೆಳೆಯ ಜಗದೀಶ್ ಜೋಡುಬೀಟಿಯವರಿಂದ ತಿಳಿದ ಮೇಲೆ ಅದೊಂದು ದೊಡ್ಡ ಪ್ರತಿಭಟನೆ ಎನಿಸಿತು. ಮಾರಣ್ಣ ದಿಲೀಪ್ ಕುಮಾರ್ ಎಂಬ ಈ ವಿಶಿಷ್ಟ ವ್ಯಕ್ತಿ ನನ್ನೊಳಗೆ ಅಚ್ಚಾಗಿ ಉಳಿದುಬಿಟ್ಟರು.
**

-ಕಾಜೂರು ಸತೀಶ್

Friday, September 4, 2015

ಎದೆಯಲ್ಲಿ ಉಳಿದದ್ದು ...

ಹಿಂದೊಮ್ಮೆ ನನ್ನ ಎಂದಿನ ಪೆದ್ದುತನವನ್ನು ಬಳಸಿ ಗೆಳೆಯನನ್ನು -"ಶಿಫಾರಸ್ಸಿಲ್ಲದೆ, ಲಾಬಿಯಿಲ್ಲದೆ ಕನ್ನಡ ಸಾಹಿತ್ಯದಲ್ಲಿ ಪ್ರಶಸ್ತಿಗಳು ಸಿಗುತ್ತವೆಯೇ? ಹಾಗೆ ಪ್ರಶಸ್ತಿ ಗಳಿಸಿದವರು ಯಾರಾದರೂ ಇದ್ದಾರೆಯೇ? ಅವರ ಹೆಸರು ಕೇಳಬೇಕೆಂಬ ಆಸೆಯಿದೆ" ಎಂದು ಪ್ರಶ್ನಿಸಿದ್ದೆ!

"ಇದ್ದಾರೆ " ಎಂದಿದ್ದೇ ತಡ, "ಯಾರವರು"? ಎಂದಿದ್ದಕ್ಕೆ ಕವಿಯೊಬ್ಬರ ಹೆಸರನ್ನು ಹೇಳಿದ್ದರು.
*

ಒಂದು ದಿನ ಕವಯಿತ್ರಿ ಸ್ಮಿತಾ ಅಮೃತರಾಜ್ ಅವರು ಕರೆಮಾಡಿ "ಕಡೆಂಗೋಡ್ಲು ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನಿಸಿದ್ದಾರೆ, ಆ ಪ್ರಶಸ್ತಿ ನಿಮಗೇ ಸಿಗುತ್ತದೆ " ಎಂದು ಹೇಳಿ ನನ್ನ ಮುಜುಗರವನ್ನು ಹೆಚ್ಚು ಮಾಡಿದ್ದರು. ನಾನು ನಗುತ್ತಾ ತಿರುಗುಬಾಣ ಬಿಡಲು ಪ್ರಯತ್ನಿಸಿದರೂ ಅವರ ಮಾತನ್ನು ತಿರಸ್ಕರಿಸುವಲ್ಲಿ ಸೋತಿದ್ದೆ. ಪ್ರೀತಿಯ ಕವಿ ವಾಸುದೇವ ನಾಡಿಗ್ ಅವರಿಂದ ವಿಮರ್ಶೆಯನ್ನು ಬರೆಸಿಕೊಂಡಿದ್ದ ಹಸ್ತಪ್ರತಿಗೆ ಒಂದಿಷ್ಟನ್ನು ಸೇರಿಸಿ(ಅವರಿಗೂ ತಿಳಿಸದೆ), ಕಳುಹಿಸಿ, ನಿರಾಳವಾಗಿ, ಆ ಕಡೆಗೆ ಯೋಚಿಸುವುದಕ್ಕೂ ಪುರುಸೊತ್ತಿಲ್ಲದಂತೆ ಬದುಕಿನ ಯಾತ್ರೆಯಲ್ಲಿ ತಲ್ಲೀನನಾಗಿದ್ದೆ.
*

ಮತ್ತೊಂದು ದಿನ ಎಂ.ಜಿ.ಎಂ. ಕಾಲೇಜಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಗ್ರಂಥಪಾಲಕ , ಸ್ನೇಹಜೀವಿ ವೆಂಕಟೇಶ್ ಅವರು ಕರೆ ಮಾಡಿ ಕಡೆಂಗೋಡ್ಲು ಪ್ರಶಸ್ತಿಗೆ ಆಯ್ಕೆಯಾಗಿದ್ದನ್ನು ತಿಳಿಸಿದರು. ನಾನು ದಂಗಾಗಿ ಹೋದೆ! ಸುಡುವ ಏಕಾಂತದಲ್ಲಿ, ಸಾಹಿತ್ಯ ವಲಯದ ಪರಿಧಿಯ ಹೊರಗೆ ಕನಕನಂತೆ ಬದುಕುತ್ತಿರುವ ನನಗೆ ಅದೊಂದು ಬೆರಗು.ಇಂತಹ ಬೆರಗನ್ನು ಹುಟ್ಟಿಸಿದವರ ನ್ಯಾಯಪರತೆ, ಶಿಸ್ತು, ವಸ್ತುನಿಷ್ಠತೆಯು, ನನ್ನಂಥ ಕವಿತೆಯ ಕೊರಳಪಟ್ಟಿ ಹಿಡಿದು ನ್ಯಾಯ ಕೇಳ ಹೊರಡುವ ಮತ್ತಿನ್ನೆಷ್ಟೋ ಹುಡುಗರಿಗೆ ಬದುಕನ್ನೂ,ಸಾಹಿತ್ಯವನ್ನೂ ದಟ್ಟವಾಗಿ ಪ್ರೀತಿಸಲು ಕಲಿಸುವ ಸಂಗತಿ. ಶರಣು ಕಡೆಂಗೋಡ್ಲು ಪ್ರತಿಷ್ಠಾನಕ್ಕೆ ಮತ್ತು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ. ಜೊತೆಗೆ ಪ್ರೋತ್ಸಾಹಿಸಿದ ಪ್ರೊ. ಕೃಷ್ಣ ಭಟ್, ಡಾ. ಜಯರಾಮ ಕಾರಂತ, ಪ್ರೊ. ಮುರಳೀಧರ ಹಿರಿಯಡ್ಕ, ಡಾ.ಪ್ರಜ್ಞಾ ಮಾರ್ಪಳ್ಳಿ, ಡಾ. ಮಹಾಬಲೇಶ್ವರ ಭಟ್, ಸುಕನ್ಯ ಕಳಸ, ಡಾ.ನರೇಂದ್ರ ರೈ ದೇರ್ಲ ಅವರಿಗೆ .


ಈ ನೆಪದಲ್ಲಿ ಗೆಳೆಯರಾದ ಪ್ರವೀಣ್,ಭರಮಪ್ಪ , ಪ್ರವೀಣಕುಮಾರ ದೈವಜ್ಞಾಚಾರ್ಯರು ತುಂಬಿಕೊಟ್ಟ ಮರೆಯಲಾಗದ ಅನುಭವಗಳನ್ನು ಹೊತ್ತೊಯ್ಯುತ್ತಿದ್ದೇನೆ. ರಮ್ಯ ಕೆ.ಜಿ. ಮೂರ್ನಾಡು ,ಶುಭಲಕ್ಷ್ಮಿಯವರ ಉಪಸ್ಥಿತಿ ಹರ್ಷದ ಸಂಗತಿ.



**

-ಕಾಜೂರು ಸತೀಶ್

Tuesday, September 1, 2015

'ಗಾಯದ ಹೂವುಗಳು' ಕವನ ಸಂಕಲನದ ಕುರಿತು

"ಗಾಯದ ಹೂವುಗಳು" ಕುರಿತು ನನ್ನುಡಿ...

ಕೊಡಗಿನ ಸಾರಸ್ವತ ಲೋಕಕ್ಕೆ ತಮ್ಮ ವಿಶಿಷ್ಟ ಸಾಹಿತ್ಯ ಕೃಷಿಯ ಕೊಡುಗೆಯೊಂದಿಗೆ ಚಿರಪರಿಚಿತರಾಗಿರುವ ಪ್ರೀತಿಯ ಕವಿ ಶ್ರೀ ಕಾಜೂರು ಸತೀಶ್ ರವರಿಗೆ ೨೦೧೫ರ ಕಡೆಂಗೋಡ್ಲು ಕಾವ್ಯ ಪುರಸ್ಕಾರಕ್ಕಾಗಿ ತುಂಬು ಅಭಿನಂದನೆಗಳು...

ಪುಸ್ತಕ ಬಿಡುಗಡೆಯ ದಿನದಂದೇ ಕೈತಾಕಿದ ಕಾಜೂರರ "ಗಾಯದ ಹೂವುಗಳು"ನ್ನು ಮೂಸುತ್ತಲೇ ಇದ್ದೇನೆ... ಆಘ್ರಾಣಿಸಿದಷ್ಟೂ ಹಸಿ-ಹಸಿ ಕಾವ್ಯಗಳು ಕಣ್ತೆರೆದುಕೊಳ್ಳುತ್ತಲೇ ಇವೆ ನನ್ನೊಳಗೆ... ಕವಿತೆಗಳನ್ನು ವಿಮರ್ಶಿಸುವಷ್ಟು ಪ್ರಬುದ್ಧತೆ ನನ್ನಲ್ಲಿ ಇನ್ನೂ ಹುಟ್ಟಿಕೊಂಡಿಲ್ಲವಾದ್ದರಿಂದ ಪ್ರತೀ ಕವಿತೆಗಳನ್ನೂ ಹೃದಯಕ್ಕೇ ತೆಗೆದುಕೊಂಡು ಓದಿಕೊಂಡಿದ್ದೇನೆ... ಕೆಲವು ಕವಿತೆಗಳಲ್ಲಿ ವ್ಯಕ್ತಗೊಂಡ ಪ್ರತಿಮೆಗಳು ನನ್ನ ಗ್ರಹಿಕೆಗೆ ಒದಗದಿದ್ದರೂ ಹೊಸ-ಹೊಸ ಹೊಳಹುಗಳನ್ನು ನನ್ನೊಳಗೆ ಸ್ಫುರಿಸುತ್ತಿವೆ....

ಭಾವ ಬಾಂಧವ್ಯಗಳ ತಾಕಲಾಟದೊಳಗೆ ಜೀಕುತ್ತಿರುವ ಈ ಜೀವಜಗತ್ತಿನಲ್ಲಿ ಯಾವುದೂ ಮುಖ್ಯವಲ್ಲ ಎಂದುಕೊಳ್ಳುತ್ತಿರುವಾಗಲೇ ಯಾವುದೂ ಅಮುಖ್ಯವಲ್ಲ ಎಂದು ಕವಿತೆಗಳು ಮಾತಿಗಿಳಿದುಬಿಡುತ್ತವೆ.... ನೆಲ-ನಿಸರ್ಗದೊಂದಿಗೇ ಬದುಕು ಕಟ್ಟಿಕೊಂಡ ಈ ನೆಲದ ಕವಿಯ ಕವಿತೆಗಳೆಲ್ಲವೂ ಅನುಭವ ಪ್ರಾಮಾಣಿಕತೆಯಿಂದ ಅಭಿವ್ಯಕ್ತಗೊಂಡವುಗಳಾಗಿವೆ ಎಂಬುದು ನಿಸ್ಸಂದೇಹ... 'ಕಾಲ'ಬುಡದ ಇರುವೆ-ಚಪ್ಪಲಿಗಳು, ಸಂವೇದನೆಗಳನ್ನು ಉದ್ದೀಪನಗೊಳಿಸುವ ನದಿ, ಒಲೆ-ಅವ್ವನನ್ನು ಬಾಚಿ ತಬ್ಬಿಕೊಂಡ ಕವಿಯ ಆಂತರ್ಯ ನಿಜಕ್ಕೂ ಪರಿಪಕ್ವತೆಯ ವಿಕಾಸ....

ಸತೀಶ್ ರ ಎಲ್ಲಾ ಕವಿತೆಗಳನ್ನು ಆವಾಹಿಸಿಕೊಳ್ಳುವಾಗ,
ಇವು ದಮನಿತರ ದನಿಯಾಗಿ, ಆತ್ಮಾಭಿಮಾನವನ್ನು ಬಡಿದೆಬ್ಬಿಸಿಕೊಳ್ಳುವ ಕಾರಣವಾಗಿ ನಿಲ್ಲುತ್ತದೆ... ಕಲ್ಪನಾ ಸ್ವಾತಂತ್ರ್ಯವನ್ನು ಅತಿಯಾಗಿ ಬಳಸಿಕೊಳ್ಳದೆ ಅನುಭವದ ಹೊಳಹುಗಳೊಂದಿಗೆ ಹರವಿಕೊಂಡ ಕವಿತೆಗಳು ಆಪ್ತವೆನಿಸುತ್ತವೆ....
ಬೆರಗು ಹುಟ್ಟಿಸುತ್ತವೆ... ಕವಿಯ ಖಿನ್ನತೆಯೇ ಹಡೆದ ಈ ಕವಿತೆಗಳೆಲ್ಲಾ ಸಾರ್ವತ್ರಿಕತೆಯ ನೆಲೆಗಟ್ಟಿನಲ್ಲಿ ಗಟ್ಟಿಯಾಗಿ ಅನಾವರಣಗೊಂಡಿವೆ....
ಪ್ರಪಂಚದ ಬಹಿರ್ಮುಖತೆಯನ್ನು ಬಿಂಬಿಸಿದಷ್ಟೂ ಅಂತರ್ಮುಖತೆಯನ್ನು ಪ್ರತಿಬಿಂಬಿಸಿರುವುದು ವಿಶೇಷವೆನಿಸಿದೆ....

ಸಾವಿನಾಚೆಗೂ ಗುಟುರುಗುಟ್ಟುವ ಸಾಮಾಜಿಕ ತರತಮಗಳಾದ ಅಸ್ಪೃಶ್ಯತೆ, ಅತ್ಯಾಚಾರ, ಭ್ರಷ್ಟತೆ, ಮತಾಂಧತೆ, ಕುಟಿಲತೆ, ದುಷ್ಟತೆಗಳನ್ನು ಕಾಡುಕವಿತೆ, ಚಪ್ಪಲಿಗಳು, ಮೈಲಿಗೆ, ಕಡಲಾಚೆಗಿನ ಹುಡುಗಿಗೆ, ಹಾವು, ನಾವಿಬ್ಬರು ತೀರಿಕೊಂಡ ಮೇಲೆ- ಇವೇ ಮೊದಲಾದ ಕವಿತೆಗಳು ಅದ್ಭುತವಾಗಿ ಧ್ವನಿಸುತ್ತವೆ... ಜೊತೆಗೆ ಸಮಾಜಮುಖಿ ಸೂಕ್ಷ್ಮ ಸಂವೇದನೆಗಳ ದೃಷ್ಟಿಕೋನವನ್ನೂ; ದಿಟ್ಟಿಸಬೇಕಾದ ಪರಿಯನ್ನೂ; ಶೂನ್ಯತೆಯನ್ನು ತುಂಬಿಕೊಳ್ಳಬೇಕಾದ ತುರ್ತನ್ನೂ ಮುಂದಿಡುತ್ತವೆ... ಹೀಗಾಗಿ ಕವಿ ಪ್ರಬುದ್ಧರೆನಿಸುತ್ತಾರೆ... ಕರ್ತವ್ಯಪ್ರಜ್ಞರೆನಿಸುತ್ತಾರೆ...

ಈ ಲೋಕದೊಳಗಿನ ತಾಕಲಾಟಗಳಿಗೆ ಮೈಯೊಡ್ಡಿಕೊಂಡ ಭಾವದ ಹೂವುಗಳು ಗಾಯಗೊಂಡು ನರಳುತ್ತಿರುವ ಸಂದರ್ಭದಲ್ಲೇ ಕವಿ ತನ್ನ ಕವಿತೆಗಳ ಮೂಲಕವೇ ಮುಲಾಮನ್ನೂ ಹಚ್ಚುತ್ತಾರೆ...
ತಕ್ಷಣದ ಅಸಹಾಯಕತೆಯನ್ನು ಮೆಟ್ಟಿ ನಿಲ್ಲುವ ಛಲವನ್ನೂ ಮೂಡಿಸುತ್ತಾರೆ. ಕವಿತೆಗಳು ಜೀವಂತಿಕೆಯನ್ನು ಕಾಪಿಟ್ಟುಕೊಳ್ಳುವುದು ಇಂಥ ಮನೋಭೂಮಿಕೆಯಲ್ಲೇ. ಜಗದ ಗಾಯಗಳೆಲ್ಲವೂ ಬಿರಿದ ಹೂವುಗಳಾಗಲಿ ಎನ್ನುವ ಕವಿಯ ಆಶಯ ಹೃದ್ಯ, ಸುಂದರ.

ಒಂದು ಮಹಾಮೌನದೊಳಗಿನ ಚೈತನ್ಯ ಶಕ್ತಿಯಾಗಿರುವ ಶ್ರೀಯುತರು ನನ್ನ ಸಮಕಾಲೀನರು ಎನ್ನುವುದು ನನ್ನ ಅಭಿಮಾನ,ಹೆಮ್ಮೆ . ಅಪಾರ ಅಂತಃಶಕ್ತಿಯುಳ್ಳ ಇವರು ಇನ್ನೂ ಎತ್ತರಕ್ಕೆ ಏರಬಲ್ಲವರು, ಏರಲಿ. ತಮ್ಮ ಕಾವ್ಯದ ಮೂಲಕ ಮನಸ್ಸು-ಮನಸ್ಸುಗಳ ನಡುವಿನ ಅತೃಪ್ತಿಗಳನ್ನು ತಣಿಸುತ್ತಾ ಜನರನ್ನು ಮುಟ್ಟುತ್ತಿರಲಿ. ಶುಭವಾಗಲಿ.
**


-ರಮ್ಯ ಕೆ.ಜಿ. ಮೂರ್ನಾಡು


Tuesday, August 11, 2015

ಕಡೆಂಗೋಡ್ಲು ಕಾವ್ಯ ಪುರಸ್ಕಾರ 2015

ಲೇಖಕ ಕಾಜೂರು ಸತೀಶ್‌ ಅವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ
ಸಮಾಜ ಒಡೆಯುವ ಕೆಲಸ ಸಲ್ಲದು

ಪ್ರಜಾವಾಣಿ ವಾರ್ತೆ

Tue, 08/11/2015 - 11:38

ಉಡುಪಿ: ತನ್ನ ನೋವನ್ನು ಲೋಕಾಂತ ಮಾಡಬೇಕಾದ ಗುಣ ಎಲ್ಲಾ ಬರಹಗಾರರಲ್ಲಿರಬೇಕು ಎಂದು ಲೇಖಕ ಕಾಜೂರು ಸತೀಶ್‌ ಅಭಿಪ್ರಾಯಪಟ್ಟರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ ಮಣಿಪಾಲ ಸಂಯುಕ್ತವಾಗಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಗಾಯದ ಹೂವುಗಳು’ ಕವನ ಸಂಕಲನಕ್ಕೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಬರಹಗಾರ ಯಾವುದೇ ಪಂಥ ವರ್ಗಗಳಿಗೆ ಮೀಸಲಾಗಿ ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದರು.

ಕಡೆಂಗೋಡ್ಲು ಶಂಕರ ಭಟ್ಟರ ಕುರಿತು ಸಂಸ್ಮರಣಾ ಭಾಷಣ ಮಾಡಿದ ಉಪನ್ಯಾಸಕ ಡಾ. ನರೇಂದ್ರ ರೈ ದೇರ್ಲ, ಪತ್ರಿಕೋದ್ಯಮಿಯಾಗಿದ್ದ ಶಂಕರ ಭಟ್ಟರು ಸಂಪಾದಕೀಯದ ಮೂಲಕ ಆತ್ಮ ಹಾಗೂ ಲೋಕ ತಿದ್ದುವ ಕೆಲಸ ಮಾಡಿದ್ದರು. ಪ್ರಚಾರದ ವೇಗದಲ್ಲಿ ವಿಚಾರ ಸಾಯಬಾರದು ಎಂಬುದನ್ನು ಅರಿತಿದ್ದರು. ಸಾಮಾನ್ಯ ಜನರಿಗೆ ತಿಳಿಯುವ ಸಂಪಾದಕೀಯವನ್ನು ಅವರು ಬರೆದಿದ್ದರು ಎಂದರು.

ಪ್ರಜ್ಞಾ ಮಾರ್ಪಳ್ಳಿ ಕೃತಿ ಪರಿಚಯ ಮಾಡಿದರು. ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕಡೆಂಗೋಡ್ಲು ಈಶ್ವರ ಭಟ್‌, ಡಾ.ಕೆ.ಎಸ್‌.ಭಟ್‌ ಮಣಿಪಾಲ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಹೆರಂಜೆ ಕೃಷ್ಣ ಭಟ್‌ ಕಾರ್ಯಕ್ರಮ ನಿರೂಪಿಸಿದರು.

Monday, August 10, 2015

ಕಡೆಂಗೋಡ್ಲು ಕಾವ್ಯ ಪುರಸ್ಕಾರ 2015

[ಉದಯವಾಣಿ]

ಉಡುಪಿ : ಕನ್ನಡ ಉಳಿಸಲು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದವರಿಗೆ ಎಲ್ಲ ಉದ್ಯೋಗಗಳಲ್ಲಿ ಕನಿಷ್ಠ ಶೇ. 25 ಮೀಸಲಾತಿ ನೀಡಬೇಕು ಎಂದು ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಆಗ್ರಹಿಸಿದ್ದಾರೆ.

ಎಂಜಿಎಂ ಕಾಲೇಜಿನಲ್ಲಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಶ್ರಯದಲ್ಲಿ ರವಿವಾರ ಮಡಿಕೇರಿಯ ಕಾಜೂರು ಸತೀಶರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಮಾಡಿದ ಅವರು, ಸುವರ್ಣಮಹೋತ್ಸವ, ಶತಮಾನೋತ್ಸವ ಕಂಡ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿ ತೀರಾ ಚಿಂತಾಜನಕವಾಗಿವೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಸಬೇಕೆಂದಿದ್ದರೂ ಅದು ನಡೆಯುತ್ತಿಲ್ಲ. ರಾಜಕಾರಣಿಗಳು, ಅವರ ಸಂಬಂಧಿಕರು ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಮೀಸಲಾತಿ ಅತೀ ಅಗತ್ಯ ಎಂದರು.

ಕಡೆಂಗೋಡ್ಲು ಶಂಕರ ಭಟ್‌ ಅವರು "ಶುದ್ಧಾಂಗ ಕೃಷಿಕ' ಎಂದು ಪ್ರಯೋಗ ಮಾಡಿದ್ದಾರೆ. ಇತ್ತೀಚಿಗೆ ಒಬ್ಬ ರೈತ ಕೇವಲ 5,000 ರೂ. ಸಾಲವಿರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದಾಗ ಇದು ಅರ್ಥವಾಗುತ್ತದೆ ಎಂದು ಸಂಸ್ಮರಣ ಭಾಷಣ ಮಾಡಿದ ಕವಿ, ಪ್ರಾಧ್ಯಾಪಕ ಡಾ| ನರೇಂದ್ರ ರೈ ದೇರ್ಲ ಹೇಳಿದರು.

ಈಗಿನ ಮಾಧ್ಯಮಗಳಂತೆ ಕಡೆಂಗೋಡ್ಲು ತೀರ್ಪು ಕೊಡುತ್ತಿರಲಿಲ್ಲ. ಅವರೊಳಗೊಬ್ಬ ಉಪನ್ಯಾಸಕನಿದ್ದ ಕಾರಣ ಸಂವೇದನಶೀಲರಾಗಿ ಓದುಗರೊಂದಿಗೆ ಸಂವಾದ ನಡೆಸುತ್ತಿದ್ದರು. ಸಾಯುವವರೆಗೂ ಅಧ್ಯಯನ ನಡೆಸುತ್ತಿದ್ದರು. ಕಡಿಮೆ ಓದಿದ್ದೇ ಇದಕ್ಕೆ ಕಾರಣ ಎಂದು ದೇರ್ಲ ಹೇಳಿದರು.

ಕಡೆಂಗೋಡ್ಲು ಪುತ್ರರಾದ ಕಡೆಂಗೋಡ್ಲು ಈಶ್ವರ ಭಟ್‌, ಡಾ| ಕೆ.ಎಸ್‌. ಭಟ್‌ ಉಪಸ್ಥಿತರಿದ್ದರು. ಪ್ರಶಸ್ತಿ ಪುರಸ್ಕೃತ "ಗಾಯದ ಹೂವುಗಳು' ಕವನ ಸಂಕಲನದ ಕುರಿತು ಡಾ| ಪ್ರಜ್ಞಾ ಮಾರ್ಪಳ್ಳಿ ಮಾತನಾಡಿದರು. ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ| ಹೆರಂಜೆ ಕೃಷ್ಣ ಭಟ್‌ ಸ್ವಾಗತಿಸಿ ಜಿ.ಪಿ. ಪ್ರಭಾಕರ್‌ ವಂದಿಸಿದರು.

ಮಹಾಯುದ್ಧಗಳೂ ರಸಗೊಬ್ಬರಗಳೂ...
ಎರಡು ಮಹಾಯುದ್ಧಗಳಾದ ಬಳಿಕ ಭಾರತಕ್ಕೆ ಜಾನ್‌ ಆಗಸ್ಟಿನ್‌ ಬಂದು ಆಹಾರ ಉತ್ಪಾದನೆ ಹೆಚ್ಚಿಸಲು "ಮ್ಯಾಜಿಕ್‌ ಪುಡಿ' ತಂದಿರುವುದಾಗಿ ಪ್ರಧಾನಿ ನೆಹರೂ ಅವರಿಗೆ ಹೇಳಿದ. ಯುವ ನೆಹರೂ ಬರಲಿ ಎಂದರು. ಮ್ಯಾಜಿಕ್‌ ಪುಡಿಯನ್ನು ಗದ್ದೆಗಳಿಗೆ ಹಾಕಿದರು. ಇದೇ ಯೂರಿಯಾ, ಸುಫ‌ಲಾ. ಯುದ್ಧಾನಂತರ ಅಮೋನಿಯ ರಸಗೊಬ್ಬರ ಖರೀದಿಸಲು ಭಾರತ ಬೇಕಿತ್ತು. ಈಗ ಇದರ ಪರಿಣಾಮ ನೋಡುತ್ತಿದ್ದೇವೆ.
-ಡಾ| ನರೇಂದ್ರ ರೈ ದೇರ್ಲ

ಸಾಹಿತಿಗಳು ಸಮಾಜ ಒಡೆಯುವ ಬದಲು ಯಾವುದೇ ಪಂಥಗಳಿಗೆ, ವರ್ಗಗಳಿಗೆ ಅಂಟಿಕೊಳ್ಳದೆ ಶುದ್ಧ ಅಂತಃಕರಣದವರಾಗಿರಬೇಕು. ಕಿರಿಯರನ್ನು ಹಿರಿಯರು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿರಬೇಕು.
-ಕಾಜೂರು ಸತೀಶ್‌

ಯುದ್ಧೋದ್ಯಮ
ಈಗ ಶಿಕ್ಷಣ, ಧರ್ಮ, ಆರೋಗ್ಯ, ಪತ್ರಿಕೆ ಎಲ್ಲವೂ ಉದ್ಯಮವಾಗಿವೆ. ಪಾಶ್ಚಾತ್ಯ ದೇಶಗಳು ಯುದ್ಧವನ್ನೂ ಉದ್ಯಮವಾಗಿ ಮಾಡಿಕೊಂಡಿರುವುದನ್ನು ಗಮನಿಸಿ ಕಡೆಂಗೋಡ್ಲು ಅವರು "ಯುದ್ಧೋದ್ಯಮ' ಎಂಬ ಶಬ್ದ ಬಳಸಿದ್ದಾರೆ. ಮಾಧವ ಗಾಡ್ಗೀಳ್‌ಗೆ ಈಗಿರುವ ಪರಿಸರ ಕುರಿತ ಕಳವಳ ಆಗಲೇ ಕಡೆಂಗೋಡ್ಲು ವ್ಯಕ್ತಪಡಿಸಿದ್ದರು ಎಂದು ನರೇಂದ್ರ ರೈ ದೇರ್ಲ ಹೇಳಿದರು.

ಕಡೆಂಗೋಡ್ಲು ಪ್ರಶಸ್ತಿ 2015

Saturday, July 18, 2015

'ಕಿಟಕಿ ಅಷ್ಟೆ ಸಾಕೆ?'

ಕನ್ನಡ ಕಾವ್ಯವು ನವೋದಯದಿಂದ ನವ್ಯಕ್ಕೆ ಮಗ್ಗಲು ಬದಲಾಯಿಸುತ್ತಿದ್ದ ಹೊತ್ತಿನಲ್ಲಿ
ತಮ್ಮನ್ನು ತಾವು ಮರುರೂಪಿಸಿಕೊಂಡು ಗಂಭೀರವಾಗಿ ಕಾವ್ಯಕಟ್ಟೋಣದಲ್ಲಿ ತೊಡಗಿಸಿಕೊಂಡವರು
ಕೆ.ಎಸ್.ನ. .ಅವರು ಪ್ರೇಮ -ದಾಂಪತ್ಯದ ನೆಲೆಗಳನ್ನು ರಮ್ಯವಾಗಿ ವಿಸ್ತರಿಸಿ ಜನಸಾಮಾನ್ಯರ
ಹೃದಯಗಳಿಗೆ ಲಗ್ಗೆಯಿಟ್ಟವರು.ಬದುಕಿನ ಕಟುಸತ್ಯವನ್ನು,ನಿಷ್ಠುರತೆಯನ್ನು ಭಿನ್ನ ಕ್ರಮಗಳಲ್ಲಿ
ಶೋಧಿಸಿ ಕಾವ್ಯದ 'ಬಾಗಿಲು ತೆರೆದು ' ತೋರಿಸಿ ಬೆರಗು ಹುಟ್ಟಿಸಿದವರು.



ಕೆ.ಎಸ್.ನರಸಿಂಹಸ್ವಾಮಿಯವರ ನವ್ಯದ ಸಂದರ್ಭದ ರಚನೆಗಳು ಗೋಪಾಲಕೃಷ್ಣ ಅಡಿಗರ
ಕಾವ್ಯಮಾರ್ಗಕ್ಕಿಂತ ಭಿನ್ನವಾಗಿ ,ಅದಕ್ಕೊಂದು ಪ್ರತ್ಯುತ್ತರವೆಂಬಂತೆ ಗೋಚರಿಸುತ್ತವೆ .ಅವರ
ಸುಕುಮಾರ ಜಗತ್ತು ಸಂಕೀರ್ಣತೆಗೆ ಹೊರಳಿಕೊಂಡಿದ್ದು ಕಾವ್ಯಪ್ರಿಯರಿಗೆ
ಅರಗಿಸಿಕೊಳ್ಳಲಾಗದಷ್ಟು ಸೋಜಿಗದ ಸಂಗತಿ . ಹೀಗಾಗಿಯೇ ಜನಪ್ರಿಯತೆ ಮತ್ತು ವಿಮರ್ಶೆಗಳೆರಡೂ
ಜೊತೆಜೊತೆಗೆ ಕವಿಯ ಮೇಲೆ ಮುಗಿಬಿದ್ದಿದ್ದವು . ಈ ಹೊತ್ತಿನಲ್ಲೂ ಅವರ ನವ್ಯ ಸಂದರ್ಭದ
ಕವಿತೆಗಳು ಪ್ರಾಮಾಣಿಕವಾಗಿ ವಿಮರ್ಶೆಗೆ ಒಳಪಟ್ಟಿಲ್ಲ ಎಂದೇ ಅನ್ನಿಸುತ್ತದೆ.



ಪ್ರಸ್ತುತ 'ಕಿಟಕಿ ಅಷ್ಟೇ ಸಾಕೆ?' ಎನ್ನುವುದು ಮೇಲಿನ ಮಾತುಗಳನ್ನು ಪ್ರತಿನಿಧಿಸುವ
ಪ್ರಾತಿನಿಧಿಕ ಕವಿತೆ. ಹದಿನಾಲ್ಕು ಸಾಲುಗಳುಳ್ಳ ಸ್ವಭಾವೋಕ್ತಿಯ ಕಾವ್ಯವಾದ ಇದು,
ಶೀರ್ಷಿಕೆಯ ಮೂಲಕ ಪ್ರಶ್ನೆಯೊಂದನ್ನು ಮುಂದಿಡುತ್ತಾ ಅದನ್ನು ನೀಗಿಸಿಕೊಳ್ಳುವ ಮಾರ್ಗವನ್ನು
ಸೂಚಿಸುತ್ತದೆ . ಪ್ರತಿಮಾ ಮಾರ್ಗದಲ್ಲಿ ಸಾಗಿ,ಚಿತ್ರ ಮತ್ತು ಚೌಕಟ್ಟುಗಳೆಂಬೊ ಒಳಹೊರಗನ್ನು
ತುಲನಾತ್ಮಕವಾಗಿ ಗ್ರಹಿಸುತ್ತದೆ:



ಚೌಕಟ್ಟು ಚಿನ್ನದ್ದು ,ಚಿತ್ರ ಸಾಧಾರಣ /
ನಿಮಗೆ ಬೇಕಾದ್ದು ಚೌಕಟ್ಟೊ ಚಿತ್ರವೊ ಹೇಳಿ.



ಕೆ.ಎಸ್.ನ. ಅವರು ತಮ್ಮ ಬದುಕು ಮತ್ತು ಕಾವ್ಯದ ನಡುವೆ ಎಂದೂ ಅಭೇದ ಕಲ್ಪಿಸಿಕೊಂಡವರಲ್ಲ.ಅವರ
ಪ್ರಕಾರ - ಬದುಕಿನಂತೆ ಕಾವ್ಯ,ಕಾವ್ಯದಂತೆ ಬದುಕು . ಸಾಧಾರಣ ಕಲೆಗೂ(ಮುಖ್ಯವಾಗಿ ಕಾವ್ಯಕ್ಕೆ
) ವಿಮರ್ಶಾ ವಲಯ ಚಿನ್ನದ ಚೌಕಟ್ಟು ತೊಡಿಸುತ್ತದೆ.ಆದರೆ ,ವಾಸ್ತವವಾಗಿ ಸಮಾಜದ ನಿರೀಕ್ಷೆ
ಅದಲ್ಲ.ಅದು ಚಿತ್ರವೆಂಬೊ ಆತ್ಮೋನ್ನತಿಯನ್ನು ಬಯಸುತ್ತದೆ.ಇಂಥ ಸೂಕ್ಷ್ಮಗಳನ್ನು ಯಾವ
ಅಬ್ಬರವೂ ಇಲ್ಲದೆ ನಿರಾಡಂಬರವಾಗಿ ಹೇಳುತ್ತಾರೆ ಕವಿ.



ನವೋದಯದ ಸಾಂಪ್ರದಾಯಿಕ ಶೈಲಿಯಿಂದ ಬಿಡಿಸಿಕೊಂಡು ಹೊಸದಿಕ್ಕಿಗೆ ಹೊರಳಿಕೊಂಡ ಹಿನ್ನೆಲೆಯನ್ನು
ಕವಿ ಇಲ್ಲಿ ಹೇಳಿದ್ದಾರೆ . ಅದು ಅಡಿಗರ 'ಅನ್ಯರೊರೆದುದನೆ ಬರೆದುದನೆ ಬರೆಬರೆದು
ಬಿನ್ನಗಾಗಿದೆ ಮನವು' ಎಂದು ಬೆನ್ನು ತಿರುಗಿಸಿ ನಡೆದ ಮಾದರಿಯದ್ದಾರೂ- ಶಿಲ್ಪ ,ವಸ್ತು
,ಪ್ರತಿಮೆ,ಭಾಷೆ ಮತ್ತು ಬದುಕಿನ ದರ್ಶನಗಳ ನೆಲೆಯಿಂದ ಭಿನ್ನವಾದದ್ದು;ಸಾಂಸ್ಕೃತಿಕವಾಗಿಯೂ
ವಿಭಿನ್ನವಾದದ್ದು.ಕೇವಲ ಕಾವ್ಯಶರೀರಕ್ಕಷ್ಟೇ ಹೆಚ್ಚು ಅಂಟಿಕೊಂಡಿದ್ದ ಅಲ್ಲಿ ಅರ್ಥದ ಆಳವೂ
ಇರಬೇಕೆನ್ನುವ ನಿಲುವು ಕವಿತೆಯಲ್ಲಿ ಕಾಣಿಸುತ್ತದೆ . ಕಾವ್ಯವನ್ನು ಮತ್ತು ಅದು
ಆಗುಮಾಡಿಕೊಳ್ಳುವ ಬದುಕನ್ನು ಹಾಗೂ ಒಟ್ಟು ಜಗತ್ತನ್ನು ಕಿಟಕಿಗಳ ಮೂಲಕವಷ್ಟೇ ಸೀಮಿತವಾಗಿ
ಪರಿಭಾವಿಸಿದರೆ ನಿಜದ ರಸಗ್ರಹಣ - ಅರ್ಥಗ್ರಹಣಗಳು ಅಸಾಧ್ಯವಾಗುತ್ತದೆ.



ನಿನ್ನ ಕಿಟಕಿಗಳಿಂದ ಏನ ನೋಡುವೆ ನೀನು/
ಕೆರೆ ಬತ್ತಿ ನೀರಿಲ್ಲ,ಇಲ್ಲ ಮೀನು !



ಇಲ್ಲಿ 'ಬತ್ತಿದ ಕೆರೆ,ಇಲ್ಲದ ಮೀನು' ನಮ್ಮ ಸೀಮಿತ ಗ್ರಹಿಕೆಯ ಫಲಗಳು .



ಕವಿ ಮತ್ತು ಕವಿತೆಯ ಆಶಯ ಎರಡನೇ ನುಡಿಯಲ್ಲಿ ಸ್ಪಷ್ಪವಾಗುತ್ತಾ ಹೋಗುತ್ತದೆ .ಛಂದಸ್ಸು -
ಪ್ರಾಸಗಳನ್ನು ಕವಿ 'ಚೌಕಟ್ಟು' ಎನ್ನುತ್ತಾರೆ . ಕಾವ್ಯದ ದೇಹವದು.ಅದರ
ಆತ್ಮದಲ್ಲಿರಬೇಕಾದದ್ದು ಭಾವ ಮತ್ತು ಮಂದಹಾಸ,ಹಾಗೆಯೇ ಚೆಲುವು-ಒಲವುಗಳಿಂದ ತುಂಬಿದ ಬದುಕು .
ಇದು ನವೋದಯದ ಏಕತಾನತೆಯನ್ನೂ,ನವ್ಯದ ಬಿಗುವನ್ನೂ ಮುರಿದು ಕಟ್ಟುವ ಬಗೆಯೂ ಹೌದು .



ಕೆ.ಎಸ್.ನ. ಅವರ ಆರಂಭಿಕ ಕವಿತೆಗಳ ಮೇಲೆ ಬಿ.ಎಂ.ಶ್ರೀ.ಯವರ 'ಇಂಗ್ಲಿಷ್ ಗೀತಗಳು' ಮತ್ತು
ಬರ್ನ್ಸ್ ಕವಿಯ ಜಾನಪದೀಯ ಒಳನೋಟಗಳ ಸ್ಪರ್ಶವಿದ್ದರೂ,ಅವು ಈ ನೆಲದ ಬದುಕನ್ನು ಬಿಟ್ಟು
ಸಾಗುವಂಥದ್ದಲ್ಲ.ಕವಿಯು ಇಲ್ಲಿ ಕವಿತೆ ಮತ್ತು ಬದುಕಿನ ಒಳಹೊರಗಿನ ಸಮತೋಲನ ಸಾಧಿಸಬೇಕಾದ
ತುರ್ತನ್ನು ಹೇಳುತ್ತಾರೆ .



ಛಂದಸ್ಸು ಚೌಕಟ್ಟು,ಅದರ ಜತೆಗಿದೆ ಪ್ರಾಸ/
ಕವಿತೆಯಲ್ಲಿ ಕಾಣಬೇಕಾದ್ದು ಮಂದಹಾಸ /
ಭಾವ ಹೊಳೆಯಲು ಬೇಕು ಚಿತ್ರದಲ್ಲಿ /
ಚೆಲುವು ಒಲವುಗಳಿಂದ ತುಂಬಿಕೊಂಡಿದೆ ಬದುಕು .



'ಭಾವ ಹೊಳೆಯಲು ಬೇಕು ಚಿತ್ರದಲ್ಲಿ ' ಎನ್ನುವಲ್ಲಿ 'ಭಾವ' ಎಂಬ ಅಮೂರ್ತ ಸಂಗತಿಯನ್ನು
ಚಿತ್ರದ ಹೊಳೆಯುವಿಕೆಗೆ ಆವಾಹಿಸಿ ಮೂರ್ತತೆಯನ್ನು ಸೃಷ್ಟಿಸುತ್ತಾರೆ. 'ಚಿತ್ರ'
,'ಚೌಕಟ್ಟು' ,'ಕಿಟಕಿ' ಮುಂತಾದ ಪ್ರತಿಮೆಗಳು ಬದುಕು -ಕಾವ್ಯದ ಅರ್ಥದ ಹರಹುಗಳನ್ನು
ವಿಸ್ತರಿಸುತ್ತಾ ಹೋಗುತ್ತವೆ .



ಕವಿ ಎಂದೂ ಸಿದ್ಧಾಂತದ ಹಂಗಿಗೆ ಒಳಪಟ್ಟವರಲ್ಲ.ಕಾವ್ಯ ಎಂದಿಗೂ ಅವರಿಗೆ ಜೀವಪರ
ಕಾಳಜಿಯುಳ್ಳದ್ದು.ಹಾಗೆ ನೋಡಿದರೆ ,ಅವರ 'ನವ್ಯಕಾಲದ' ಕವಿತೆಗಳನ್ನು ಅದರ ನಂತರದ 'ಸಮನ್ವಯ'ದ
ನೆಲೆಯಲ್ಲಿಯೇ ಗುರುತಿಸುವುದು ಸರಿಯೆನ್ನಿಸುತ್ತದೆ.



'ಕಿಟಕಿ ಅಷ್ಟೇ ಸಾಕೆ?' ಒಂದು ದರ್ಶನ ಕಾವ್ಯ. ಭಾವನೆಗಳು ಇಲ್ಲಿ ಚಿಂತನೆಗಳಾಗಿ
ಮಾರ್ಪಡುತ್ತವೆ.ನಾವು ಬರಡೆಂದುಕೊಳ್ಳುವ ಮರುಭೂಮಿಯಲ್ಲಿ ಕವಿ 'ಒಂಟೆ ಸಾಲನು' ಕಾಣುತ್ತಾರೆ.
'ಮಿಂಚೊ ಮಳೆಯೊ ಕಾಣೆ ಚಿತ್ರವಿದೆ ನೋಡಿದಿರ?' ಎನ್ನುತ್ತಾರೆ . ನವ್ಯ ಸಂದರ್ಭದ
ಪಾಶ್ಚಾತ್ಯರಿಂದ ಕಡಪಡೆದ ಅಭಿವ್ಯಕ್ತಿಯ ಮಾದರಿಯಲ್ಲಿ ಹತಾಶೆ,ಪರಿತ್ಯಕ್ತತೆಗಳೇ ಸ್ಥಾಯೀ
ಭಾವ. ಅವರ ಬದುಕಿನ ಕ್ರಮವೂ ಅದಕ್ಕಿಂತ ಭಿನ್ನವಾಗಿಲ್ಲ.ಅದಕ್ಕೆ ಮುಖಾಮುಖಿಯಾಗುವ ಕವಿ ಈ
ನೆಲದ ಚೆಲುವಿನ ಚಿತ್ರಗಳ ಮೋಡಿಗೆ ಒಳಗಾಗುತ್ತಾರೆ.ಅಂತಹ ಅಧಮ್ಯ ಜೀವನ ಪ್ರೀತಿಯ ,ಸೌಂದರ್ಯ
ಪ್ರಜ್ಞೆಯ ಶೃಂಗದಲ್ಲಿರುವ ,ತನ್ನದೇ ಕಾವ್ಯಮಾರ್ಗವೊಂದನ್ನು ರೂಪಿಸಹೊರಟಿರುವ ಕವಿಗೆ ಕುರುಡು
ವಿಮರ್ಶಕರಿಂದ ರಸಭಂಗವಾಗುವುದು ಇಷ್ಟವಿಲ್ಲ .('ನನ್ನನೆಬ್ಬಿಸಬೇಡಿ'); ಬದಲಾಗಿ ಅವರನ್ನು
ಮುಕ್ತ ಚರ್ಚೆಗೆ ಆಹ್ವಾನಿಸುತ್ತಾರೆ ('ಮಾತನಾಡಿ').



ನೆಲದ ಪ್ರಜ್ಞೆಯನ್ನು ಕೆರೆ,ಮೀನು ,ಮರುಭೂಮಿ,ಮಿಂಚು ,ಮಳೆ ಮುಂತಾದ ಜೈವಿಕ - ಅಜೈವಿಕ
ಅಂಶಗಳು ಸಾದರಪಡಿಸುತ್ತವೆ. ಕವಿ ಅಂತಹ ಪ್ರಜ್ಞೆಯನ್ನು ಬಿಟ್ಟು ಕಾವ್ಯ ಸೃಷ್ಟಿಗೆ
ತೊಡಗುವುದಿಲ್ಲ;ಅವುಗಳನ್ನು ಮರೆತೂ ಬದುಕಹೊರಡುವುದಿಲ್ಲ.



ಎಲ್ಲ ಅಕಾಡೆಮಿಕ್ ಶಿಸ್ತುಗಳ ಹೊರೆಯಿಂದ ಹೊರಗಿದ್ದ ಕೆ.ಎಸ್.ನ. ತಮ್ಮದೇ ಲಯದಲ್ಲಿ
ನಡೆದವರು.ಬದುಕು ಹಾಗೂ ಕಲೆಯ ಕುರಿತು ಪೂರ್ವಾಗ್ರಹಗಳಿಂದ ಬಂಧಿತವಾಗಿರುವ ಮಂದಿಯನ್ನು ಕಡೆಯ
ಎರಡು ಸಾಲುಗಳು ತೀಕ್ಷ್ಣವಾಗಿ ಕುಟುಕುತ್ತವೆ; ತಮ್ತಮ್ಮ ಅನುಭವಗಳನ್ನು
ವಿಸ್ತರಿಸಿಕೊಳ್ಳಲು ಕರೆಕೊಡುತ್ತವೆ.



ಕಿಟಕಿಯಿಂದೇಕೆ ನೋಡುವಿರಿ ಜಗತ್ತನ್ನು /
ಕಿಟಕಿ ಅಷ್ಟೇ ಸಾಕೆ,ಬಾಗಿಲು ತೆರೆದಿದೆ.



ಹಾಗೆ 'ತೆರೆದ ಬಾಗಿಲು ' ನೆಲದ ಅಂತಃಸ್ಸತ್ವವನ್ನೂ,ಪ್ರಚಂಡ
ಇಚ್ಛಾಶಕ್ತಿಯನ್ನೂ,ಆಶಾವಾದವನ್ನೂ ಒಳಗೆ ಬಿಟ್ಟುಕೊಳ್ಳುತ್ತದೆ.ಸರಳ,ಸಹಜವಾಗಿರುವ ಈ ಕವಿತೆಯು
ವಾಸ್ತವದ ಬಹಿರಾಡಂಬರವನ್ನು ಕಾವ್ಯ ಮತ್ತು ಬದುಕಿನ ದ್ವಿಮುಖ ಕೋನಗಳಲ್ಲಿ ಸುಪ್ತವ್ಯಂಗ್ಯದ
ಮೂಲಕ ಸೊಗಸಾಗಿ ತೆರೆದಿಡುತ್ತದೆ.





**

-ಕಾಜೂರು ಸತೀಶ್

Sunday, July 12, 2015

ನನ್ನೊಳಗೆ ಇಳಿಯುವಾಗ

ಕರೆಗಂಟೆ ಇಲ್ಲದ ಮನೆ ನನ್ನದು

ನನ್ನ ಪಕ್ಕೆಲುಬುಗಳ ತಟ್ಟಿದರೆ ಸಾಕು

ಬಾಗಿಲು ತೆರೆಯುವೆ.



ಎಲ್ಲ ಹೃದಯಗಳ ಬಣ್ಣ ನನ್ನ ಮನೆಗೆ.

ತಕರಾರು ತೆಗೆಯದೇ

ಪೈಂಟರ್ನಿಂದ ಬಳಿಸಿಕೊಂಡದ್ದು.



ಬನ್ನಿ

ಕರುಳ ಚಾಪೆ ಹಾಸುವೆ

ಕೂತು ಸುಧಾರಿಸಿಕೊಳ್ಳಿರಿ

ಬೇಕಿದ್ದರೆ

ಮೆದುಳು, ಹೃದಯ, ರಕ್ತದ ಕೋಣೆಗಳ ಬಗ್ಗೆ

ಚರ್ಚೆ ನಡೆಸಿರಿ.



ಬೀಗವೂ ಇಲ್ಲ ನನ್ನ ಮನೆಗೆ.

ಗಾಳಿ ಮಳೆಗೆ ಮುರಿದುಬಿದ್ದರೆ

ಮಣ್ಣೇ ನನ್ನ ಮನೆ.



ಅಲ್ಲಿಗೂ ಬರುವಿರಾದರೆ ಬನ್ನಿ

ಉಗುರು, ರೋಮ, ಮೂಳೆಗಳ ಬಗ್ಗೆ

ಚರ್ಚೆ ನಡೆಸಿರಿ.



ಕರೆಗಂಟೆ ಅಲ್ಲಿಲ್ಲದಿದ್ದರೂ

ಗಾಳಿಯನ್ನು ತಟ್ಟಿ ಸಾಕು

ಬಾಗಿಲು ತೆರೆಯುವೆ.



**
-ಕಾಜೂರು ಸತೀಶ್

ನನ್ನವರು

ಕಡುಗಪ್ಪು ಮಣ್ಣಿನುದ್ಭವಿಗಳಾದ ನನ್ನವರ
ಹಿಮಾಚ್ಛಾದಿತ ಕಣಿವೆ ಕಣ್ಗಳಲಿ
ಪಟಪಟನೆ ತೊಟ್ಟಿಕ್ಕುವ ಹನಿಯ ಗಾನ
ಶ್ರುತಿ ಸಂಗತಿಗಳು ಒಂದಿಷ್ಟೂ ತಪ್ಪದೆ
ಆಲಿಕಲ್ಲುಗಳ ಗಾತ್ರದಲ್ಲಿ ಸುರಿಯುತ್ತದೆ.


ಅವರ ಸಡುಸುಡುವ ಶುಕ್ರನ ಮೈಶಾಖಕ್ಕೆ
ಹೊರಬೀಳದ ಬೆವರು
ಒಳಗೊಳಗೇ ಕೊತಕೊತ ಕುದಿಯುವ
ಸಾವಿರಾರು ಬೆಂಕಿನದಿಗಳನ್ನು ಹರಿಸಿ
ಬಾಂಬುಗಳ ಹಾಗೆ ಸಿಡಿಯುವ ಥರ್ಮೋಮೀಟರುಗಳನ್ನು
ತೇಲಿಸಿಕೊಂಡು ಸಾಗುತ್ತದೆ.


ಝಗಮಗಿಸುವ ದೀಪ,ಬಿರುವೇಗದ ರಾಕೆಟುಗಳ
ಎವೆಯಿಕ್ಕದೆ ನೋಡುತ್ತಲೇ ಇರುವ ನನ್ನವರ ನೋಟ
ಮನೆಗೋ ಆಕಾಶಕ್ಕೋ ತಾರಸಿಗೆಂದು
ಓಲೆಗರಿಗಳಲ್ಲಿ ಕಾಣದ ಪೈಥಾಗೋರಸನನ್ನು ಹೆಣೆಯುತ್ತದೆ.





ಹಸಿರು ಕುಸುಮಗಳನ್ನೇ ಬಿಡಿಸುವ ನನ್ನವರ ಗಾಯಗೊಂಡ ಬೆರಳು
ಕೆಂಬಣ್ಣ ಹೀರಿ ದ್ರಾಕ್ಷಿಯಂತಾದ ಜಿಗಣೆಗಳ ಗೊಂಚಲುಗಳಲ್ಲಿ
ಉದುರುವ ಹೂವಿನ ದಳಗಳನ್ನು ಬಿಡಿಸುತ್ತದೆ.


ನೆರಳುಗಳ ದೇಹಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಹೋದ ನನ್ನವರು
ಕತ್ತಲ ಸಂದುಗಳಲ್ಲಿ ಹೂತುಹೋಗಿ
ನಿಕ್ಷೇಪಗಳಾಗುತ್ತಿರುವ ದೃಶ್ಯ
ಗಣಿಧಣಿಗಳ ಮನೆಗೇ ನೇರಪ್ರಸಾರವಾಗುತ್ತಿದೆ.
**
-ಕಾಜೂರು ಸತೀಶ್
[೨೦೦೮]

Monday, May 25, 2015

ನನ್ನಂಥವರು ಹುಟ್ಟಿದ ತಪ್ಪಿಗೆ

ನನ್ನಂಥವರು ಹುಟ್ಟಿದ ತಪ್ಪಿಗೆ
ವಿಷದ ಡಬ್ಬಿಗಳು ಖಾಲಿಯಾಗುತ್ತಿವೆ
ಕುಣಿಕೆಗಳು ಬಿಗಿದು ತುಂಡಾಗುತ್ತಿವೆ.


ನನ್ನಂಥವರು ಹುಟ್ಟಿದ ತಪ್ಪಿಗೆ
ಧರ್ಮಗಳು ಅನಾಥವಾಗುತ್ತಿವೆ
ಜಾತಿಗಳು ಭಿಕ್ಷೆ ಬೇಡುತ್ತಿವೆ.


ನನ್ನಂಥವರು ಹುಟ್ಟಿದ ತಪ್ಪಿಗೆ
ಕಣ್ಣೀರಿಗೆ ಪ್ರವಾಹ ಭೀತಿ
ಮನಸ್ಸುಗಳಿಗೆ ಹಿಸ್ಟೀರಿಯಾ.



ನನ್ನಂಥವರು ಹುಟ್ಟಿದ ತಪ್ಪಿಗೆ
ಕವಿತೆ ಬರೆಸಿಕೊಳ್ಳುತ್ತದೆ
ಅಕ್ಷರಗಳು ಗಾಯಗೊಂಡು ನರಳುತ್ತವೆ.


ನನ್ನಂಥವರು ಹುಟ್ಟಿದ ತಪ್ಪಿಗೆ
ಕೊಲೆಯಾಗುತ್ತಲೇ ಇರುತ್ತೇವೆ
ಇರುವೆಗಳೊಂದಿಗೆ ಸಾಯುತ್ತಲೇ ಇರುತ್ತೇವೆ.
**

-ಕಾಜೂರು ಸತೀಶ್

Tuesday, May 19, 2015

ತಲೆದಿಂಬು

-1-

ದಿಂಬು ಊದಿಕೊಳ್ಳುತ್ತದೆ
ನಿನ್ನ ಕಣ್ಣುಗಳ ಹಾಗೆ



ದುಃಖಿಸದಿರು
ತಲೆದಿಂಬು ಊದಿಕೊಂಡಿದ್ದು ಸಾಕು.



ಸರಿ, ದಿಂಬನ್ನೂ ಊದಿಸು
ಬಿಡುಗಡೆಗೊಳ್ಳಲಿ ನಿನ್ನ ಕಣ್ಣುಗಳು .


-2-

ಚಿಕ್ಕವನಿದ್ದಾಗಲೂ ದಿಂಬುಗಳಿದ್ದವು
ಹಳೆಯ ಅಂಗಿ-ಚಡ್ಡಿ ಅದರೊಳಗೆ.


ಎಷ್ಟು ಹೊಲಿದು ಬಾಯ್ಮುಚ್ಚಿದ್ದರೂ
ಅಂಗಿ ಚಡ್ಡಿಗಳ ಕೈಕಾಲುಗಳು ಇಣುಕಿ
ಬಾಲ್ಯ ಹೊರಬರುತ್ತಲೇ ಇರುತ್ತದೆ .


-3-

ಈಗೀಗ ಗಾಳಿ ತುಂಬಿಸುವ ದಿಂಬುಗಳಿವೆ.
ಊದಿದವರ ಒತ್ತಡ ಊದಿಸುತ್ತದೆ ಅದನು.


ಊದುವ ಗಾಳಿ ಒಳಗಿನದ್ದು.
ತುಂಬಿಕೊಳ್ಳುವ ದಿಂಬಿಗೂ ಗಾಳಿ ಒಳಗಿನದ್ದೇ.


ಹೊರಗಿನದ್ದು ತುಂಬಿಕೊಳ್ಳುವುದಿಲ್ಲ
ಬಯಲ ಬಲೂನಿಗೆ ಲೆಕ್ಕವಿಲ್ಲದಷ್ಟು ರಂಧ್ರಗಳು.

-4-

ದುಃಖಕ್ಕೆ ತಲೆಗೊಡುವ ದಿಂಬೇ,
ನಗು
ನಗು.

**

-ಕಾಜೂರು ಸತೀಶ್

Wednesday, May 13, 2015

ಒಂದು ಕೊಕ್ಕರೆಯ ಚಿತ್ರ

ಮೋಡವನ್ನು ದಿಟ್ಟಿಸಿದಾಗಲೆಲ್ಲ
ಆನೆ,ಮೊಲಗಳೆಲ್ಲ ಆಟವಾಡುತ್ತಿರುವಂತೆ
ಗುಬ್ಬಚ್ಚಿಗಳು ಚೀಂವ್ ಚೀಂವ್ ಹಾಡಿ
ನಿಧಾನಕ್ಕೆ ಹಾರುತ್ತಿರುವಂತೆ ತೋರುತ್ತದೆ.



ಮನೆಯ ಹಿಂದಿರುವ ಗದ್ದೆಬದಿಯಲ್ಲಿ
ನೀರಿನಾಳಕ್ಕೆ ಕಣ್ಣುನೆಟ್ಟು
ಧ್ಯಾನಿಸುವ ಕೊಕ್ಕರೆಯ ಚಿತ್ರವನ್ನು
ಆ ಕೊಳ ಹಿಡಿದಿಟ್ಟುಕೊಂಡಿದೆ.



ಬಿರುಬೇಸಿಗೆಯಲ್ಲಿ
ಕೊಳ ಬತ್ತಿದ ಮೇಲೆ
ಕೊಕ್ಕರೆ ಕಾಣಿಸುತ್ತಲೇ ಇಲ್ಲ,
ಏನು ಸಂಭವಿಸಿತೊ ಏನೊ ಆ ಚಿತ್ರಕ್ಕೆ.



ಈಗೀಗ
ಕೆಲವೊಮ್ಮೆ
ಮೋಡವನ್ನು ದಿಟ್ಟಿಸಿದರೆ
ಕಣ್ಣ ತುಂಬ ಅದೇ ಕೊಕ್ಕರೆಯ ಚಿತ್ರ.

**

ಮಲಯಾಳಂ ಮೂಲ- ವೀರಾನ್ಕುಟ್ಟಿ



ಕನ್ನಡಕ್ಕೆ -ಕಾಜೂರು ಸತೀಶ್

Monday, May 11, 2015

ವೀರಾನ್ಕುಟ್ಟಿ ಕವಿತೆಗಳು

**ಅನನ್ಯ**


ನೀನು ಎಣ್ಣೆ
ನಾನು ಬೆಂಕಿ
ನಮ್ಮಿಬ್ಬರು ಉರಿಯುವ
ಬೆಳಕಿನಲ್ಲಿ ಕುಳಿತ ದೇವರು
ಪ್ರೀತಿಯ ಕುರಿತ ಕವಿತೆ ಹೊಸೆಯುತ್ತಾರೆ.
*


**ಮರೆವು**


ನಿನಗೆಂದು ಹೇಳಲು ಉಳಿಸಿದ ರಹಸ್ಯ
ನಿನ್ನೆ ಗಾಳಿಯ ಪಾಲಾಯಿತು.
ಅದು ಯಾವ ಕೊಂಬೆಯಲ್ಲಿರುತ್ತೋ?
ಯಾವ ಬೆಂಕಿಯ ಗರ್ಭ ಸೇರಿರುತ್ತೋ?
ಯಾವ ಮಣ್ಣಲ್ಲಿ ಬೆರೆತುಹೋಗಿರುತ್ತೋ ಗೊತ್ತಿಲ್ಲ.

ಈಗ ನೀನೇ ಹೇಳಿಕೊಡಬೇಕು
ನಿನಗೆ ಹೇಳಲು ಉಳಿಸಿದ ಆ ರಹಸ್ಯ
ನನಗೀಗ ಮರೆತೇ ಹೋಗಿದೆ.
*


**ಹೆತ್ತೊಡಲು**

ನೆರಳುಗಳೆಂದರೆ
ಹೆತ್ತ ಒಡನೆಯೇ
ತೆವಳಿಹೋಗುವ ರಾತ್ರಿಯ ಮಕ್ಕಳು.

ಒಂದೊಮ್ಮೆ ನೆರಳುಗಳೇ ಇಲ್ಲದಿದ್ದರೆ
ರಾತ್ರಿಯ ಮುಖ ಹೀಗಿದೆಯೆಂದು
ಹಗಲಿಗೆ ತಿಳಿಯುತ್ತಲೇ ಇರಲಿಲ್ಲ.
*


**ಏಕಾಂತ**

ಈ ಏಕಾಂತ
ನನ್ನ ಜೊತೆಗೇ ಇದೆ
ನಾನೆಂದೂ ಒಂಟಿಯಲ್ಲ.
*


**ಮರಗಳ ನಡುವೆ**

ಮರಗಳ ನಡುವೆ
ನೀನು ನನ್ನನ್ನೇ ನೋಡಿಕೊಂಡಿರು
ನಾನು ನಿನ್ನನ್ನೇ ನೋಡಿಕೊಂಡಿರುವೆ.

ಯಾಕೆ ಗೊತ್ತಾ?

ಬೇಸಿಗೆ ಶುರುವಾದಾಗ
ನಮ್ಮಿಬ್ಬರಲ್ಲಿ ಯಾರು ಬೇಗ ಒಣಗುತ್ತಾರೆಂದು
ತಿಳಿಯಬೇಕು.
**

ಮಲಯಾಳಂ ಮೂಲ- ವೀರಾನ್ಕುಟ್ಟಿ


ಕನ್ನಡಕ್ಕೆ -ಕಾಜೂರು ಸತೀಶ್

Friday, May 8, 2015

ಕವಿ,ರಾಜಕಾರಣಿ ಮತ್ತು ಅರಳೀಮರ

-1-

'ಯಾರೆಲ್ಲ ಇದ್ದಾರೆ ಅಲ್ಲಿ' ಎಂದೆ.

'ಕವಿ ಮತ್ತು ರಾಜಕಾರಣಿ- ಇಬ್ಬರು' ಎಂದು ಎಣಿಸಿ ಹೇಳಿದ.

ಎರಡೆರಡು ಬಾರಿ ಎಣಿಸಿ ತೋರಿಸಿದೆ: 'ಕವಿ,ರಾಜಕಾರಣಿ ಮತ್ತು ಅರಳೀಮರ - ಒಟ್ಟು ಮೂವರು'.

(ಎಣಿಸಿ ಹೇಳಲು ಎಷ್ಟೆಷ್ಟೋ ಬಾಕಿ ಇವೆ ಅಲ್ಲಿ . ಬೇಡ ಬಿಡಿ.)


-2-

ಯಾರನ್ನಾದರೂ 'ಕವಿ' ಎಂದೋ , 'ರಾಜಕಾರಣಿ' ಎಂದೋ ಕರೆಯುವ ಮುನ್ನ ಸ್ವಲ್ಪ ಯೋಚಿಸಬೇಕು - ಅವರಲ್ಲಿ ಕೆಲವರಾದರೂ ಅರಳೀಮರದಂತಹ ಒಳ್ಳೆಯವರಿರುತ್ತಾರೆ!


-3-


ಒಬ್ಬರು ಅನಿಸಿದ್ದನ್ನು ಹೇಳುತ್ತಾರೆ.ಮತ್ತೊಬ್ಬರು ಅನಿಸಿದ್ದನ್ನು ಬರೆಯುತ್ತಾರೆ.ಮತ್ತೊಂದಿದೆಯಲ್ಲಾ- ಅದು ಹಾಗೆ ಮಾಡಲು ಅವರಿಬ್ಬರಿಗೂ ತನ್ನ ಉಸಿರನ್ನು ದಾನಮಾಡುತ್ತದೆ.


-4-

ಇಬ್ಬರ ಕೊರಳೂ ಸಣ್ಣವು.ಹೀಗಾಗಿ ,ಮೂರನೆಯದಕ್ಕೆ ಯಾರೂ ಹಾರ ಹಾಕುವುದಿಲ್ಲ.


-5-


ಒಬ್ಬರು ಜಾತಿಯ ಹೆಸರು ಹೇಳಿ ಪ್ರಶಸ್ತಿ ಪಡೆದರೆ,ಮತ್ತೊಬ್ಬರು ಓಟು ಪಡೆದರು. ಅರಳೀಮರಕ್ಕೆ ಜಾತಿಯ ಹೆಸರಿಟ್ಟಿದ್ದು ಮನುಷ್ಯನೇ ಆದ್ದರಿಂದ ,ಅದು ತನ್ನ ಪಾಡಿಗೆ ಉಸಿರಿನ ಕೊಡು-ಕೊಳ್ಳುವಿಕೆಯಲ್ಲಿ ನಿರತವಾಗಿತ್ತು.


**
-ಕಾಜೂರು ಸತೀಶ್

Sunday, April 19, 2015

ಹಲಸಿನ ಹಣ್ಣು


ಪ್ರಕಾಶನ್ ಮಡಿಕೈ


ಎಷ್ಟು ಬಲಿಷ್ಠ ಈ ಹಲಸಿನ ಹಣ್ಣು
ಎಷ್ಟೆತ್ತರದಿಂದ ಬಿದ್ದು ಉರುಳಿದರೂ
ಅದೇ ರುಚಿ
(ಬೇಡಿಕೆ ಕುಂದುತ್ತದಷ್ಟೆ).



ಹಲಸಿನ ಹಣ್ಣಿಗೆ
ಒಬ್ಬರ ಕುತ್ತಿಗೆ ಮುರಿಯಬೇಕೆನಿಸಿದರೆ
ಮರದಿಂದ ಕೆಳಗಿರುವವನ ತಲೆಗೆ ನೇರವಾಗಿ ಬಿದ್ದರೆ ಸಾಕು!


ಸುಮ್ಮನೆ ಬಿಡುವುದಿಲ್ಲ ಅದು-
ಕತ್ತರಿಸುವವರ ಬೆರಳುಗಳನ್ನೇ ಅಂಟಿಸಿ ಬಂಧಿಸಿಬಿಡುವುದು.
ಸ್ವಲ್ಪ ತಣ್ಣೀರು ಮುಟ್ಟಿ ಕತ್ತರಿಸಬೇಕು-
ಅಂಟಿಸಿಕೊಳ್ಳದಿರಲು
ಬಂಧಿಸಿಕೊಳ್ಳದಿರಲು.


ಹಣ್ಣುಗಳಿಗೂ ವರ್ಗಭೇದ ತಪ್ಪಿಲ್ಲ.
ತೂಕ ಹೆಚ್ಚಿದ್ದಕ್ಕೆ
ಉಳಿದ ಹಣ್ಣುಗಳೊಂದಿಗೆ ಜಾಗವಿಲ್ಲ,
ಮುದ್ದಿಸುವವರಿಲ್ಲ,
ಹಣ್ಣಿನಂಗಡಿಯಲ್ಲಿ
ಮಾರುವವರೂ ಇಲ್ಲ.


ಹಸಿವು ಪ್ರಾಣ ಹಿಂಡುವಾಗ
ಹಲಸಿನ ಹಣ್ಣೇ ಅಮೃತ.
ಚಿಕ್ಕ-ಚಿಕ್ಕ ಹಣ್ಣುಗಳನ್ನಷ್ಟೇ ಕೊಳ್ಳುವ ಧನಿಕರಿಗೆ
ಹಲಸಿನ ಹಣ್ಣೊಂದು ಕತ್ತರಿಸಿ ದನಕ್ಕೆಸೆಯುವ ವಸ್ತು.


ಹಲಸಿನ ಹಣ್ಣಿನ ಕವಿತೆ ಬರೆದರೆ
ಬಡವನೊಬ್ಬ ಎತ್ತಿಕೊಂಡು ಹೋಗಿ
ಹಿಟ್ಟುಮಾಡಿ ತಿನ್ನುತ್ತಾನೆ.
ಸಿರಿವಂತರಿಗೆ ಸಿಕ್ಕರೆ
ಕಾಲಡಿಯಲ್ಲಿ ಅಪ್ಪಚ್ಚಿ!
*

ಮಲಯಾಳಂ ಮೂಲ- ಪ್ರಕಾಶನ್ ಮಡಿಕೈ

ಕನ್ನಡಕ್ಕೆ -ಕಾಜೂರು ಸತೀಶ್

Tuesday, April 7, 2015

ಸಾವಿನ ರುಚಿ ಮತ್ತು ವಾಸನೆ

ಅಡುಗೆ ಕೋಣೆಯಲ್ಲಿಟ್ಟಿದ್ದ ಪ್ಲಾಸ್ಟಿಕ್ಕಿನೊಳಗಿಂದ ಎಂಥದ್ದೋ ವಾಸನೆ ಹೊರಹೊಮ್ಮುತ್ತಿತ್ತು.ಎರಡು-ಮೂರು ಬಾರಿ ಆ ವಾಸನೆಯನ್ನು ಅನುಭವಿಸಿದಾಗ,ಸುಮಾರು ವರ್ಷಗಳ ಹಿಂದಿನ ಒಂದು ಘಟನೆಯ ನೆನಪು ಮೂಗಿಗೆ ಆವರಿಸಿಕೊಳ್ಳತೊಡಗಿತು.ನೆನಪು ವಾಸನೆಯ ರೂಪದಲ್ಲೂ(olfactory) ಅಸ್ತಿತ್ವದಲ್ಲಿರುತ್ತೆ ಅಂದಾಗ ಏನೋ ಒಂಥರಾ ವಿಚಿತ್ರ ಅನ್ನಿಸ್ತಾ ಇದೆ.


ಈ ಹಸಿಮೆಣಸಿನ ವಾಸನೆ ಅಂದ್ರೆ ಅಷ್ಟು ಚಂದ. ಗದ್ದೆಯು ಇದೇ ವಾಸನೆಯನ್ನು ಮೈ ತುಂಬ ತುಂಬಿಕೊಂಡಿತ್ತು.ದೊಗಲೆ ಚಡ್ಡಿಯನ್ನೇರಿಸಿಕೊಂಡು ಬಾವಿಯಿಂದ ನೀರು ತಂದು ಗಿಡಗಳಿಗೆ ಹಾಕುತ್ತಿದ್ದೆ.ಅದೊಂದು ಪ್ರಾಮಾಣಿಕ ಸೇವೆ.ಗಿಡಗಳೂ ಅಷ್ಟೇ ಪ್ರಾಮಾಣಿಕತೆಯಿಂದ ಅದನ್ನು ಸ್ವೀಕರಿಸುತ್ತಿದ್ದವು.


ಆ ದಿನದಲ್ಲೇ ನಾನು ಸಾವಿನ ರುಚಿ ಹೇಗಿರುತ್ತೆ ಅಂತ ಮೊದಲು ತಿಳಿದದ್ದು! ನೀರು ತರಲು ಹೋದವನು ಕಾಲುಜಾರಿ ಬಾವಿಯೊಳಗೆ ಬಿದ್ದುಬಿಟ್ಟೆ.(ಸಾಯುವುದಿದೆಯಲ್ಲಾ-ಅದು ಹೀಗೆ ಬರೆಯುವಷ್ಟು ಸುಲಭವಲ್ಲ!) ಸಾವು ನನ್ನ ನವದ್ವಾರಗಳಿಂದಲೂ ತುಂಬಿಕೊಳ್ಳಲು ತೊಡಗಿತು.ಆ ದಿನ ಸಾವಿಗೆ ಬಾವಿಯಲ್ಲಿದ್ದ ನೀರಿನ ರುಚಿಯಿತ್ತು.ಅಷ್ಟೆ.



ಕೋಮಾದಿಂದ ಹೇಗೋ ಪಾರಾಗಿ ಬಂದೆ.ಸಾವಿಗೂ ಬೇಡವಾದ ಪುಣ್ಯಾತ್ಮ ನಾನು ಎಂದು ಈಗ ಅನ್ನಿಸ್ತಿದೆ .ಅದಕ್ಕಿಂತ ಹೆಚ್ಚಾಗಿ ,ಆ ಸಾವು ಮೆಣಸಿನಕಾಯಿಯ 'ವಾಸನೆ'ಯನ್ನೂ, ಬಾವಿಯ ನೀರಿನ 'ರುಚಿ'ಯನ್ನೂ ನನ್ನ ನೆನಪಿಗೆಂಬಂತೆ ಬಿಟ್ಟುಹೋಗಿದೆ!

*
ಸಾಯುವ ಮುಂಚೆ ಎಷ್ಟೋ ಸಲ ಈ 'ಸಾವು' ಮುಂದೂಡಲ್ಪಟ್ಟಿರುತ್ತೆ.ಎಲ್ಲ ಗೊತ್ತಿದ್ದೂ ಆ ನಡುವೆ ಹೇಗ್ಹೇಗೋ ಬದುಕ್ತೇವೆ,ಯಾರ್ಯಾರಿಗೋ ಕೇಡುಬಗೀತೇವೆ,ಕಿತ್ತಾಡಿಕೊಳ್ತೇವೆ,ಹಿಂಸಿಸ್ತೇವೆ,ಮುಖವಾಡ ತೊಟ್ಟು ಸಭ್ಯರ ಹಾಗೆ ನಾಟಕ ಮಾಡ್ತೇವೆ...


ಎಂಥ ವಿಚಿತ್ರವಪ್ಪಾ ಈ ಬದುಕು!
*

-ಕಾಜೂರು ಸತೀಶ್

Tuesday, March 31, 2015

ಕಿಗ್ಗಾಲು ಗಿರೀಶ್ ಅವರ 'ಮಿತ್ರಲೋಕ'ದ ಕುರಿತು..

ನಿವೃತ್ತ ವಾಯುಪಡೆಯ ಅಧಿಕಾರಿ ಕಿಗ್ಗಾಲು ಎಸ್ ಗಿರೀಶ್ ಅವರು ಕೃಷಿಯಲ್ಲಿ ಸಕ್ರಿಯರಾಗಿದ್ದುಕೊಂಡು,ಅದನ್ನು ಸಾಹಿತ್ಯಕ್ಕೂ ವಿಸ್ತರಿಸಿಕೊಂಡವರು.'ನಗೆಹೋಳಿಗೆ' ,'ಹವಾಲ್ದಾರ್ ಮಂಜಪ್ಪ ಮತ್ತಿತರ ಕಥೆಗಳು ' ಕೃತಿಗಳ ಮೂಲಕ ಕೊಡಗು ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಹೆಸರು ಗಳಿಸಿದವರು.

ಪ್ರಸ್ತುತ 'ಮಿತ್ರಲೋಕ'ದಲ್ಲಿರುವ
೬೫ ಚತುಷ್ಪದಿಗಳನ್ನು ಛಂದೋಬದ್ಧವಾಗಿ ರಚಿಸಿದ್ದಾರೆ.ಈ ಉಸಿರುಗಟ್ಟಿಸುವ ಕಾಲದಲ್ಲೂ ಮತ್ತೆ
ನವೋದಯದ ಭಾಷೆಯನ್ನೂ ,ಅಭಿವ್ಯಕ್ತಿಯ ಕ್ರಮವನ್ನೂ ರೂಢಿಸಿಕೊಂಡು , ಸಹಜ-ಸರಳ ಮಾದರಿಯಲ್ಲಿ
ಲೋಕದ ವೈರುಧ್ಯಗಳನ್ನು ಕಟ್ಟಿಕೊಟ್ಟು ಚಿಂತನೆಗೆ ಹಚ್ಚಿದ್ದಾರೆ .ಜೊತೆಜೊತೆಗೆ ಜಗತ್ತು
ನಿರ್ವಹಿಸಬೇಕಾದ ತುರ್ತನ್ನೂ,ಪಾಲಿಸಬೇಕಾದ ಮಾರ್ಗವನ್ನೂ
ಹಾಕಿಕೊಟ್ಟಿದ್ದಾರೆ.ಹಳೆ-ನಡು-ಹೊಸಗನ್ನಡದ ಬಳಕೆಯಿದ್ದರೂ,ಒಟ್ಟು ಓದಿನ ನಂತರ 'ಸಮನ್ವಯ'ದ
ಅನುಭವವೊಂದು ಓದುಗನಲ್ಲಿ ಮೂಡುತ್ತದೆ . ೬೫ ಚತುಷ್ಪದಿಗಳಲ್ಲೂ ಹಚ್ಚಿಟ್ಟ ದೀಪದ ಬೆಳಕಿದೆ.


ಹರಿವ ನೀರಿಗೆ ಉಂಟೆ ಜಾತಿಮತಪಂಥ?
ಉರಿವ ಅಗ್ನಿಗೆ ಉಂಟೆ ಕುಲಗೋತ್ರ ಧರ್ಮ?
ಇರಲೇಕೆ ಮನುಜಂಗೆ ಮತ್ತೆ ವರ್ಣ ಸಂಘರ್ಷ?
ತೊರೆದುಬಿಡು ಮರುಳುತನ ಕೇಳುಮಿತ್ರ

ಇಂತಹ ಮಾದರಿಯ ಚತುಷ್ಪದಿಗಳ ಜೊತೆಗೆ ಅವುಗಳ ವ್ಯಾಖ್ಯಾನವನ್ನೂ ಕೃತಿ ಒಳಗೊಂಡಿದೆ.

ಕಿಗ್ಗಾಲು ಗಿರೀಶ್ ಅವರ ಬರೆಹಗಳು ಸಹೃದಯರನ್ನು ತಲುಪಲಿ;ಮತ್ತಷ್ಟೂ ಗಂಭೀರತೆಯನ್ನು ಸಾಧಿಸಲಿ.
**
-ಕಾಜೂರು ಸತೀಶ್

Sunday, March 29, 2015

ಕತೆಯೆಂಬ ಮುಗಿಲ ಮಾಯೆಯ ಕರುಣೆಯ ಒಳಗೆ..

'ಶುದ್ಧ ಚಿಂತನೆಗೆ ವಾಸ್ತವವನ್ನು ಇಡಿಯಾಗಿ ಗ್ರಹಿಸುವ ಶಕ್ತಿ ಇರುವುದಿಲ್ಲ. 'ಕಥನ ಕಲೆ' ಮಾತ್ರವೇ ವಾಸ್ತವವನ್ನು ಅಖಂಡವಾಗಿ ಹಿಡಿದಿಡಬಲ್ಲದು.'

-ಜಾರ್ಜ್ ಲುಕಾಚ್ಸ್



ಈ ಹೊತ್ತಿನಲ್ಲಿ ಕಾವ್ಯವು ಅಸ್ಪಷ್ಟತೆಯಿಂದ,ಸಂದಿಗ್ಧತೆಗಳಿಂದ ಓದುಗನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವಾಗ,ಸಣ್ಣಕತೆ ಹಾಗೂ ಕಾದಂಬರಿಯ ಪ್ರಕಾರಗಳು ಅಭಿವ್ಯಕ್ತಿಯ ಉತ್ತಮ ಮಾರ್ಗಗಳೆನಿಸುತ್ತಿವೆ.ಕಾವ್ಯವಷ್ಟೇ ಬದುಕಿನ ಎಲ್ಲ ಅನುಭವಗಳಿಗೂ ರೂಪು ಕೊಡಲಾರವು.ಹೇಳಿಕೊಳ್ಳುವ,ದಾಟಿಸುವ,ಕಟ್ಟುವ ,ಮುರಿಯುವ,ಸಂವಾದಿಸುವ..ಎಲ್ಲ ಕ್ರಿಯೆಗಳ ಸಾರ್ಥಕತೆಯು ಸದ್ಯದಲ್ಲಿ ಸಾಧ್ಯವಾಗುತ್ತಿರುವುದು ಇವೆರಡು ಪ್ರಕಾರಗಳಿಂದಲೇ.

*

ಕವಿ,ಕತೆಗಾರ ಪಿ. ಮಂಜುನಾಥ ಅವರು ಕತೆ ಮತ್ತು ಕವಿತೆ- ಎರಡೂ ಮಾರ್ಗಗಳಲ್ಲಿ ನಡೆದು ಯಶಸ್ಸನ್ನು ಗಳಿಸಿಕೊಂಡವರು.ನೆಲದ ಹಿಡಿಮಣ್ಣನ್ನೇ ಎತ್ತಿಕೊಂಡು ಅದರ ಚಹರೆಗಳನ್ನು ಪ್ರಾಮಾಣಿಕವಾಗಿ ಉಲಿಯುವ ಅವರ ಬರೆಹಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಬೆಳಕು ಕಂಡಿದ್ದರೂ,ಇದೀಗ ಕಥಾ ಸಂಕಲನದ ರೂಪದಲ್ಲಿ ಹೊರಬಂದಿರುವುದು ಸಂತಸದ ಸಂಗತಿ .


'ಕಥನಗಾರಿಕೆ'ಯನ್ನಷ್ಟೇ ಮೇಲ್ಮೆಗೆ ತಂದು -ಅದನ್ನು ವೈಚಾರಿಕ ಆಕೃತಿಗಳಿಗೆ ಒಗ್ಗಿಸದೆ- ನಿರ್ಭಾವುಕವಾಗಿ ಹೇಳುವ ವೈಶಿಷ್ಟ್ಯತೆ 'ಮುಗಿಲ ಮಾಯೆಯ ಕರುಣೆ'ಯದ್ದು.ಕೃತಿಯ ಕಥಾನುಭವದಲ್ಲಿ ಕತೆಗಾರನ ತಾತ್ವಿಕ ಹಾವಳಿಯಿಲ್ಲ;ಕಟುವಾಸ್ತವ ಮತ್ತು ಕತೆಗಳ ನಡುವಿನ ಅರ್ಥಪೂರ್ಣವಾದ ಸಂವಾದವಿದೆ.


ಕರುಳ ಕತ್ತರಿಸಿ ಕಿತ್ತು ತಿನ್ನುವ ಹಸಿವು,ಬದುಕಿನ ಬವಣೆಗಳನ್ನು ಅವರು ತಣ್ಣಗೆ ಕಥಿಸುವ ಕ್ರಮವನ್ನು 'ಆಲಿಸಿದರೆ' ಇಂತಹ ದಾರುಣ ಬದುಕಿಗೆ ಒಳಗಿನವರಾಗಿದ್ದುಕೊಂಡೇ ಕಲೆ(ಕತೆ)ಯಾಗಿ ಮಾರ್ಪಡಿಸಿದ ಕುರುಹುಗಳು ಸಿಗುತ್ತವೆ.ಹೀಗೆ ಒಳಗಿನವರಾಗಿರುವುದು ಬೌದ್ಧಿಕವಾಗಿಯಷ್ಟೇ ಅಲ್ಲ,ಮಾನಸಿಕವಾಗಿಯೂ ಕೂಡ.ಬೆಳಗಾವಿ ಸೀಮೆಯ ಉಜ್ವಲ ಭಾಷೆ ,ದೇಸೀತನ ಅದಕ್ಕೊಂದು ಸಾಂದ್ರವಾದ 'ಧ್ವನಿ'ಯನ್ನು ಕರುಣಿಸಿದೆ.


ಬೆರಗು ಹುಟ್ಟಿಸುವ ಇಂತಹ ಸೂಕ್ಷ್ಮ ಕಥನಗಾರಿಕೆಯು ಬಿಕ್ಕಟ್ಟಿನ ಕಾಲದಲ್ಲಿ ,ಭಾವೋದ್ವೇಗದ ಸನ್ನಿವೇಶದಲ್ಲಿ ಮನುಷ್ಯನ ವರ್ತನೆಯಲ್ಲಾಗುವ ಏರುಪೇರುಗಳನ್ನು(psychological factors ) ಮೈಕ್ರೋಸ್ಕೋಪಿಕ್ ಕಣ್ಣುಗಳಲ್ಲಿ ಗ್ರಹಿಸಿ ದಾಖಲಿಸುತ್ತದೆ.


ಇಲ್ಲಿ ನೆನಪಿನಲ್ಲುಳಿಯುವ ಕಥಾಪಾತ್ರಗಳು ಸಾಮಾನ್ಯರಲ್ಲಿ ಸಾಮಾನ್ಯರು;ಶ್ರೇಣೀಕರಣದ ಕೆಳಗಿರುವ,ಬವಣೆಗಳಿಂದ ಬೆಂದುಹೋದವರು.ದಮನಿತರ ಕಾಯುವಿಕೆಯನ್ನೇ ಇಲ್ಲಿ ಕತೆಗಾರರು ಕತೆಯಾಗಿಸಬಲ್ಲರು.ಹಸಿವು ನೀಗಿಸಿಕೊಳ್ಳಲು ನುಡಿದ 'ಒಂದು ಸುಳ್ಳಿನ' ಪರಿಣಾಮಗಳನ್ನೇ ವಿಸ್ತರಿಸುತ್ತಾ ಮನೋಜ್ಞವಾಗಿ ಕತೆಯನ್ನು ಕಟ್ಟಬಲ್ಲರು.ಅವರ ಎಲ್ಲ ಕಥಾನಕಗಳ ಬೇರು ಹಳ್ಳಿಯದ್ದು.ಅಜ್ಞಾನ,ಅವಿವೇಕ,ಮುಗ್ಧತೆ,ಶೋಷಣೆ,ವೃದ್ಧಾಪ್ಯದ ಬವಣೆ,ಜಾಗತೀಕರಣ-ರಾಜಕಾರಣ-ಮೀಡಿಯಾಗಳ ಅವಕಾಶವಾದ,ದೇವದಾಸಿಪದ್ಧತಿ,ಜೀತಪದ್ಧತಿ,ಜಾತಿ ತಾರತಮ್ಯ ,ಮಲಹೊರುವ ಪದ್ಧತಿ ,ಬದಲಾಗುತ್ತಿರುವ ಹಳ್ಳಿಯ ಚಹರೆಗಳು - ಇವೆಲ್ಲ ಕತೆಗಳಿಂದ ಪ್ರತ್ಯೇಕಿಸಲಾರದ ಹಾಗೆ ಬೆಸೆದುಕೊಂಡಿವೆ.


ಅಲ್ಲಲ್ಲಿ ಇಣುಕುವ ಸೂರ್ಯ,ಬೆಳಕು,ಮಳೆ,ಮೋಡ,ಗ್ರಾಮದೇವರು ಮುಂತಾದ 'ಸಂಗತಿ'ಗಳು ಕಥಾಪ್ರಜ್ಞೆಯನ್ನು ಕಾವ್ಯಾತ್ಮಕವಾಗಿ ಭರವಸೆಯ ದಿಕ್ಕಿಗೆ ಹೊರಳಿಸುತ್ತವೆ.

*

ಹೊಸ ತಲೆಮಾರಿನ ಕನ್ನಡದ ಮಹತ್ವದ ಕತೆಗಾರರ ಸಾಲಿನಲ್ಲಿ ನಿಲ್ಲಬಲ್ಲ ಪಿ.ಮಂಜುನಾಥರ ಮುಂದಿನ ಎಲ್ಲ ಬರೆಹಗಳನ್ನೂ ಕುತೂಹಲದಿಂದ ಎದುರುಗೊಳ್ಳುತ್ತೇನೆ.ಅವರ ಸೂಕ್ಷ್ಮ ಅಭಿವ್ಯಕ್ತಿಗೆ ಸಾಹಿತ್ಯ ವಲಯದಲ್ಲಿ ನ್ಯಾಯಯುತ ಸ್ಥಾನ ಸಿಗಬೇಕು ಎಂಬುದು ಕಿರಿಯವನಾದ ನನ್ನ ಆಗ್ರಹ!

**

- ಕಾಜೂರು ಸತೀಶ್

Saturday, March 28, 2015

ಚಂದ್ರನನ್ನು ಹೋಲಿಸುವ ಬಗೆ



ಸಾಬ್ಲು ಥಾಮಸ್ ವಿ.


ಕೂಡಿಗೆ ಮೀನು ಮಾರ್ಕೆಟ್ ಬಳಿಯ
ಸೇತುವೆಯ ಕೆಳಗೆ
ಕತ್ತಲು ಬಿದ್ದೆದ್ದು ಹಾರಾಡಿದ ರಾತ್ರಿಯ ಹೊತ್ತು.


' ನೀರೊಳಗೆ ಬಿದ್ದು ಹೊಯ್ದಾಡುತ್ತಿರುವ ಚಂದ್ರ
ಥೇಟ್ ಮೀನಿನಂತಿದೆ'
ಎಂದೆ.


ನನ್ನ ಗೆಳೆಯ
ಸಸ್ಯಾಹಾರಿ .


ಅವನ ಪ್ರಕಾರ,
'ನಾನ್ವೆಜ್ ಉಪಮೆಯಲ್ಲಿ ಚಂದ್ರನಿರುವುದಿಲ್ಲ.
ನೀರೊಳಗೆ ಹೊಯ್ದಾಡುತ್ತಿರುವುದು ಬಿಂಬ ಮಾತ್ರ
ಒಂದು ಬೂದುಗುಂಬಳದಂತೆ.


ಇಬ್ಬರೂ
ತರ್ಕ-ಸಿದ್ಧಾಂತಗಳನ್ನೆಲ್ಲ ಕಲಿತದ್ದು
ಪಾರ್ಟಿ ಕ್ಲಾಸಿನಲ್ಲಿ,
ಕಾಲೇಜಿನಲ್ಲಿ.


'ಚಂದ್ರ ಪೂರ್ಣಬಿಂಬವಲ್ಲ,
ಅಮವಾಸ್ಯೆಯ ನಂತರದ
ತೆಳುವಾದ ಒಂದು ಗೆರೆ.
ಬಾಳೆಮೀನಿನ ಹಾಗೆ ಚಡಪಡಿಸುತ್ತದೆ ಅದು
ಕವಿತೆ,ಕಲ್ಪನೆಯೊಳಗೆಲ್ಲ'
ಎಂದೆ.


ಹೀಗೆಲ್ಲ ತರ್ಕಿಸಿದರೂ,
ಸೇತುವೆ ದಾಟುವಷ್ಟರಲ್ಲಿ
ನಮ್ಮಿಬ್ಬರಿಗೆ ಸುಸ್ತೋ ಸುಸ್ತು.


ದೂರದ ಮನೆಯಲ್ಲಿ
ಮತ್ತೊಬ್ಬಳು ಕಾಯುತ್ತಿದ್ದಾಳೆ-
ಚಂದ್ರನ ಮೈಪಡೆದವಳು.
ನನ್ನ ಹಸಿವು
ಸಾಂಬಾರಾಗಿ ಬೇಯುತ್ತಿದೆ ಅಲ್ಲಿ.


ಅವಳನ್ನು ಮಾತ್ರ
ಚಂದ್ರನೊಂದಿಗೆ ಹೋಲಿಸುವುದಿಲ್ಲ.
**

ಮಲಯಾಳಂ ಮೂಲ- ಸಾಬ್ಲು ಥಾಮಸ್ ವಿ.

ಕನ್ನಡಕ್ಕೆ -ಕಾಜೂರು ಸತೀಶ್

Saturday, March 7, 2015

ನನ್ನೊಳಗೆ ಉರಿಯುತ್ತಿರುವ ಸಾಲುಗಳು

ಹೋಳಿ ಮುಗಿಯಿತು ;
ಕಣ್ಣೊಳಗೆ ಉಳಿದದ್ದು ಮತ್ತದೇ ಹಳದಿ!


ಒಂದು ಇಲಿ ಓಡಿಹೋಯಿತು;
ಊರ ತುಂಬೆಲ್ಲ ಕೋಲಾಹಲವೆದ್ದಿದೆ !


ಕಿಚ್ಚು ಹಚ್ಚುವುದಾದರೆ ಹಚ್ಚಿಬಿಡಿ;
ಎಷ್ಟೆಷ್ಟೋ ಒಲೆಗಳು ಉರಿಯದೆ ದಿನಗಳಾಗಿವೆ!


ಹುಚ್ಚು ನಾಯಿಯೊಂದು ನನ್ನ ನೋಡಿ ಬಾಲ ಅಲ್ಲಾಡಿಸಿತು;
ಈಗ ಊರ ತುಂಬೆಲ್ಲ ನನ್ನದೇ ಸುದ್ದಿ !


ರಸ್ತೆಯಂಚಲ್ಲಿ ಕಣ್ಣುಗಳಿಗೆ ಬೆಂಕಿ ತುಂಬಿಕೊಂಡು ನನ್ನ ನೋಡುತ್ತಿದ್ದಾರೆ;
ತರಗುಗಳುರಿದರೂ ನಾನು ನಡೆಯುತ್ತಿರುವ ರಸ್ತೆ ಸುಟ್ಟುಹೋಗುತ್ತಿಲ್ಲ!






ಹುಚ್ಚುನಾಯಿ ಅಂತ ಇಷ್ಟು ದಿನ ಸುಮ್ಮನಿದ್ದೆ;
ಈಗ ತಿಳಿಯಿತು -ನನ್ನಂಥೋರು ಅದರಿಂದಲೂ ಕಲಿಯಬೇಕಾದದ್ದು ಬೇಕಾದಷ್ಟಿದೆ!


ನನಗೆ ಕಾಣದಂತೆ ಬೆಂಕಿ ಹಚ್ಚಿದ್ದಾರೆ;
ನನ್ನ ಕಾಲ ಕೆಳಗಿನ ನದಿ ಅವರಿಗಿನ್ನೂ ಕಾಣಿಸುತ್ತಿಲ್ಲ!


ಬಂದರೆ ಬನ್ನಿ ಎದುರಿಗೆ -ಇರಿಯುವುದಾದರೆ ಇರಿಯಿರಿ ಎದೆಗೆ;
ಹಿಂದೆ ನಿಂತೇನು ಮಾಡುತ್ತೀರಿ- ಬೆನ್ನ ಹಿಂದಿರುವುದನ್ನೂ ನಿಮಗೆ ಹೇಳಿಕೊಡಬೇಕಾಗಿಲ್ಲ!


ಏನನ್ನಿಸುತ್ತಿದೆ ಕೆಲಸವಿಲ್ಲದವರೆ?
ಕನ್ನಡಿಯಲ್ಲಿ ನಿಮ್ಮ ಮೂತಿ ಮುಟ್ಟಿಕೊಳ್ಳಲಾದೀತೆ ನೋಡಿಕೊಳ್ಳಿ !


'ಸತ್ಯ ಹೇಳುತ್ತೇನೆ ಬನ್ನಿ ' ಎಂದಿದ್ದೇ ತಡ-
ಬೀದಿಯಲ್ಲಿ ,ನಿಲ್ದಾಣದಲ್ಲಿ ಈಗ ಒಬ್ಬರೂ ಕಾಣಿಸುತ್ತಿಲ್ಲ!


-ಕಾಜೂರು ಸತೀಶ್

Friday, March 6, 2015

ದಾರಿ ತಪ್ಪಿ ಬಂದ ಇಬ್ಬರು

ಗುಡಿಸಲಿಗೆ
ಮಳೆಯು ನಡೆದುಬರಬಹುದಾದ
ದಾರಿಗಳ ಕುರಿತು
ಚೆಲುವ 'ಬಿಸಿಲು' ನನ್ನೊಂದಿಗೆ ಹೇಳಿದ.


ಗುಡಿಸಲಿಗೆ
ಬಿಸಿಲು ಹತ್ತಿಳಿದು ಬರಬಹುದಾದ
ದಾರಿಗಳ ಕುರಿತು
ಚೆಲುವೆ 'ಮಳೆ' ನನ್ನೊಂದಿಗೆ ಹೇಳಿದಳು.


ಒಂದು ದಿನ
ಮಳೆ ಮತ್ತು ಬಿಸಿಲುಗಳಿಬ್ಬರು
ಒಟ್ಟೊಟ್ಟಿಗೆ ಕೈಕೈಹಿಡಿದು ಬಂದ ಹೊತ್ತು
ಅವರಿಬ್ಬರಿಗೂ ಬೆಳದಿಂಗಳ ಕುರಿತು ಹೇಳಿದೆ.






ಬಂದ ದಾರಿಯಲ್ಲೇ ಇಬ್ಬರೂ ಹಿಂತಿರುಗಿ ಹೋದರು .


ಅವತ್ತು ರಾತ್ರಿ
ಬೆಳದಿಂಗಳನ್ನಪ್ಪಿ ಮಲಗಿದ್ದಾಗ
ದಾರಿ ತಪ್ಪಿ ಬಂದ ಇಬ್ಬರ ಬಗ್ಗೆ ಹೇಳಿದೆ.


ಬೆಳದಿಂಗಳು ಅಪ್ಸರೆಯಂತೆ ನಕ್ಕಳು .

**

ಮಲಯಾಳಂ ಮೂಲ- ಪ್ರದುಲ್ ಶಾದ್ ಸಿ.

ಕನ್ನಡಕ್ಕೆ -ಕಾಜೂರು ಸತೀಶ್

Friday, February 13, 2015

ಮಟಮಟ ಮಧ್ಯಾಹ್ನದ ಹಾಡು/ ಹುರಿವ ಮೀನಿನ ಪರಿಮಳ

ಕುಶಾಲನಗರದ ಹೌಸಿಂಗ್ ಬೋರ್ಡಿನಲ್ಲಿ
ನಲವತ್ತೊಂಬತ್ತು  ಮನೆಗಳು .
ಆ ನಲವತ್ತೊಂಬತ್ತು  ಮನೆಗಳ ನಡುವೆ
ಗಡಗಡ ಚಳಿಯನು ಸಹಿಸಲಾರದೆ
ಸತ್ತೇ ಹೋದ ದಾರಿಗಳು.



ಮಟಮಟ ಮಧ್ಯಾಹ್ನದ ಹೊತ್ತಲ್ಲಿ
ನಮ್ಮೀ ಭಿಕ್ಷುಕ ನಡೆಯುತ್ತಿದ್ದ .
ಐವತ್ತೊಂದು ಮನೆಗಳಲ್ಲೂ
ಹುರಿಯುತ್ತಿದ್ದ ಮೀನಿನ ಪರಿಮಳ
ಉಣಬಡಿಸಿತು ಇವನಿಗೆ .



ಒಂದಾನೊಂದು ಕಾಲದಲ್ಲಿ
ಮಧ್ಯಾಹ್ನದ ಊಟಕ್ಕೆಂದು
ಇಸ್ಕೂಲಿಂದ ಮನೆಗೋಡುವಾಗ
ಹುರಿಯುವ ಮೀನಿನ ಪರಿಮಳವೆಲ್ಲ
ಜೇಸುದಾಸರ ಹಾಡಲಿ ಬೆರೆತು
ಹೀಗೇ ನಲಿದು ಬರುತಲಿತ್ತು.



'ಮಟಮಟ ಮಧ್ಯಾಹ್ನದ ಹಾಡು ನಾನು
ಹುರಿಯುವ ಮೀನಿನ ಪರಿಮಳ ನಾನು'
ಹೀಗೆಂದು ಪರಿಚಯಿಸಿಕೊಳ್ಳುವನು.



ಮಟಮಟ ಮಧ್ಯಾಹ್ನದ ಹೊತ್ತಲ್ಲಿ
ನಲವತ್ತೊಂಬತ್ತು  ಮನೆಯೊಳಗೆಲ್ಲ
ಕಣ್ಣಮಿಟುಕಿಸದೆ ನೋಡುವನು.
ಎಲ್ಲ ಮನೆಗಳಿಗೂ ಬಾಗಿಲುಗಳು
ಎಲ್ಲ ಮನೆಗಳಿಗೂ ಗೇಟುಗಳು
ಎಲ್ಲ ಮನೆಗಳಿಗೂ ಕಿಟಕಿಗಳು
ಎಲ್ಲ ಮನೆಗಳಿಗೂ ಮುಚ್ಚಿಯೇ ಇರುವ
ಗಂಟಿಕ್ಕಿದ ಮುಖದ ಬಾಗಿಲುಗಳು
ತೆರೆಯದೇ ಇರುವ ಕಿಟಕಿಗಳೆಲ್ಲ
ಕೀಳುತ್ತಿರುವವು ಮೀಸೆಯನು.



ಹೀಗಿದ್ದರೂ ಎಲ್ಲ ಮನೆಗಳಿಂದ
ಪರಿಮಳ ಸುತ್ತೆಲ್ಲ ಹಬ್ಬುತಿದೆ.
ಅದಕ್ಕೆಂದೇ ಒಂದೊಂದು ಅಡುಗೆ ಕೋಣೆ
ಒಂದೊಂದು ಗ್ಯಾಸ್ ಒಲೆ
ಎಲ್ಲಾ ಒಲೆಗಳ ಮೇಲೊಂದು
ಇಷ್ಟಗಲದ ಬಾಣಲೆ
ಎಲ್ಲ ಬಾಣಲೆಗಳಲೂ ಕೂಡ
ಮಿನುಮಿನುಗುವ ಮೀನುಗಳು
ಎಲ್ಲ ಅಡುಗೆ ಕೋಣೆಗಳಲ್ಲೊಬ್ಬಳು
ಮೀನು ಹುರಿವ ಹೆಣ್ಣುಮಗಳು .




ನಮ್ಮೀ ಭಿಕ್ಷುಕ ಹಾಯಾಗಿ ಮಲಗುವ
ಮುರುಕಲು ಕೋಣೆಯ ತುಂಬೆಲ್ಲ
ಕುಳಿಮಾಡಿದ ಕುಳಿಯಾನೆಗಳು*
ಒಂದೊಂದು ಕುಳಿಯಲ್ಲೂ ಒಂದೊಂದು ಕುಳಿಯಾನೆ
ಸಂಶಯಪಟ್ಟೊಮ್ಮೆ ಊದಿದರೆ
ಮಣ್ಣೆಲ್ಲ ಮೇಲಕೆ ಹಾರಿ ಹಾರಿ
ಕುಳಿಯಾನೆಗಳನು ತೋರಿಸುವುದು .




ಮಧ್ಯಾಹ್ನದ ಹಾಡು ಮುಂಡಾಸನು ಸುತ್ತಿ
ನಡೆದು ಬಂದಿತು ಅಂದೂ ಕೂಡ.
'ಮಟಮಟ ಮಧ್ಯಾಹ್ನದ ಹಾಡು ನಾನು
ಹುರಿಯುವ ಮೀನಿನ ಪರಿಮಳ ನಾನು '
ನಡೆದೇ ಹೋಯಿತು ಪರಿಚಯಿಸುತ್ತಾ.




ಒಮ್ಮೆಲೇ ನಮ್ಮೀ ಭಿಕ್ಷುಕನೀಗ
ಎಲ್ಲ ಕುಳಿಗಳಿಗೂ ಊದುತಿರುವನು.
ಎಲ್ಲ ಕುಳಿಗಳಲೂ ಕಬ್ಬಿಣದ ಗೇಟುಗಳು
ಕಿಟಕಿ-ಬಾಗಿಲುಗಳು
ಅಟ್ಟಗಳು,ಗೋಡೆಗಳು
ಗ್ಯಾಸ್ ಒಲೆಗಳು
ಹುರಿವ ಬಾಣಲೆಗಳು
ಹಾರಲು ತೊಡಗಿವೆ ಮಣ್ಣಿನೊಂದಿಗೆ.




ಇಗೋ ನೋಡಿ ನಿದ್ರಿಸುತಿರುವನು
ನಮ್ಮೀ ಭಿಕ್ಷುಕ ಹಾಯಾಗಿ
ಜೊತೆಯಲ್ಲೇ ಕುಳಿತುಕೊಂಡಿವೆ
ನಲವತ್ತೊಂಬತ್ತು ಕುಳಿಯಾನೆಗಳು
**





ಮಲಯಾಳಂ ಮೂಲ- ವಿಷ್ಣುಪ್ರಸಾದ್


ಕನ್ನಡಕ್ಕೆ -ಕಾಜೂರು ಸತೀಶ್
----------------------------------------

*ಕುಳಿಯಾನೆ = ಮಣ್ಣಲ್ಲಿ ಆಕರ್ಷಕವಾದ ಕುಳಿ ಮಾಡಿ ಜೀವಿಸುವ ಸಣ್ಣ ಜೀವಿ[ant lion]. 

Wednesday, February 11, 2015

ನನ್ನ ಶವಪೆಟ್ಟಿಗೆ ಹೊರುವವರಿಗೆ

ನನ್ನ ಶವಪೆಟ್ಟಿಗೆ ಹೊರುವವರಿಗೆ
ಉಯಿಲಿನಲ್ಲೂ ಬರೆದಿಡಲಾಗದ
 ರಹಸ್ಯವೊಂದು  ಹೇಳಲು ಉಳಿದಿದೆ.
ನನ್ನ ಹೃದಯದ ಜಾಗದಲ್ಲೊಂದು ಹೂವಿರುತ್ತದೆ ;
ಏರು ಯೌವ್ವನದಲ್ಲಿ
ಪ್ರೀತಿಯ ಆತ್ಮತತ್ವ ಹೇಳಿಕೊಟ್ಠವಳ ಪೂಜಾದ್ರವ್ಯ.



ಮಣ್ಣುಮುಚ್ಚುವ ಮುಂಚೆ
ಹೃದಯದಿಂದ ಆ ಹೂ ಕಿತ್ತು
ಎಸಳುಗಳಿಂದ ಮುಖವ ಮುಚ್ಚಿಡಬೇಕು.
ರೇಖೆಗಳೇ ಮಾಸಿದ ಹಸ್ತಗಳಲ್ಲೂ ಒಂದೊಂದು ದಳ. 
ಹಿಂತಿರುಗಿ ಹೋಗಬೇಕು ಹೂವಿನೊಂದಿಗೆ,
ಹಿಂತಿರುಗಿ ಹೋಗಬೇಕು .



ಇನ್ನೇನು ಸಾಯಬೇಕು ಎನ್ನುವಾಗ
ಈ ಸತ್ಯ ಹೇಳಲು ಸಮಯವಿರುವುದಿಲ್ಲ.
ಬಾಯಿಗೆ ಸುರಿಯುವ ನೀರು
ಸಾವಿನತ್ತ ಹರಿಯುತ್ತದೆ 

ಇಲ್ಲದಿದ್ದರೆ
ನನ್ನ ಶವಪೆಟ್ಟಿಗೆಯನ್ನು ಮುಚ್ಚಬೇಡಿರಿ
ಮುಚ್ಚಬೇಡಿರಿ ನನ್ನ ಶವಪೆಟ್ಟಿಗೆಯನ್ನು



ಇನ್ನು ನನ್ನ ಸ್ನೇಹಿತರೂ ತೀರಿಕೊಂಡವರಲ್ಲವೇ?


**





ಮಲಯಾಳಂ ಮೂಲ- ಎ. ಅಯ್ಯಪ್ಪನ್


ಕನ್ನಡಕ್ಕೆ -ಕಾಜೂರು ಸತೀಶ್