ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, February 14, 2022

ಏನು ಮಾಡಲಿ ಹೂಗಳು ಕೊಲೆಯಾದ ಕಾಲದಲ್ಲಿ?



ಜಗತ್ತು ಬಂದು ತಲುಪಿರುವ ಹತಾಶ ಹಂತವನ್ನು "ಕಣ್ಣಲ್ಲಿಳಿದ ಮಳೆಹನಿ"ಯ ಒಂದೊಂದು ಕವಿತೆಗಳೂ ಹೀಗೇ ಎದೆಗೆ ತಾಕಿಸುತ್ತವೆ. ಮನುಷ್ಯ-ಪ್ರಾಣಿ-ಪಕ್ಷಿ-ಗಿಡ-ಮರಗಳೆಲ್ಲವೂ ಕೊಲ್ಲಲ್ಪಟ್ಟವು. ಇದೀಗ ಎದೆ ದನಿಗಳ ಕವಿತೆಗಳೂ ಕೊಲೆಯಾಗುತ್ತಿರುವುದರ ನೋವು, ಸಂಕಟ, ಮನುಷ್ಯತ್ವ ಸತ್ತುಹೋದ ಹೊತ್ತಿನ ಸಂದಿಗ್ಧತೆಯನ್ನು ಕವಿ ತಣ್ಣಗೆ ಹೇಳುತ್ತಾರೆ. ಈ ನೆಲದೊಂದಿಗೆ, ಈ ಪರಿಸರದೊಂದಿಗೆ ಕವಿಯ ಅದಮ್ಯ ಒಡನಾಟವನ್ನು ಸಂಕಲನದಲ್ಲಿನ ಅನೇಕ ಕವಿತೆಗಳು ಉಸಿರಾಡುತ್ತವೆ. ಈ ಒಡನಾಟದಿಂದಲೇ ಪ್ರಕೃತಿಯ ಮೇಲಾಗುತ್ತಿರುವ ಅತ್ಯಾಚಾರವನ್ನು ಸೂಕ್ಷ್ಮವಾಗಿ ಗ್ರಹಿಸುತ್ತಾರೆ. 'ಎಲ್ಲಿ?' 'ಮರ ಯಾರದು?' 'ಕಾಡುಗವಿತೆ, 'ಕಾಡುಗಳಿದ್ದವು ಕವಿತೆಗಳಲ್ಲಿ' 'ನಡುರಾತ್ರಿ ನಾಯಿ ಬೊಗಳುತ್ತಿದೆ' ಯ ಸಾಲುಗಳು, ಕಣ್ಮರೆಯಾಗುತ್ತಿರುವ ಗಿಡ ಮರಗಳ ಹಸಿರು, ಅದನ್ನೇ ನಂಬಿಕೊಂಡಿರುವ ಅಸಂಖ್ಯಾತ ಜೀವಜಂತುಗಳು ಅನುಭವಿಸುತ್ತಿರುವ ಪಾಡನ್ನು ಕಣ್ಣಿಗೆ ಕಟ್ಟಿಕೊಡುತ್ತವೆ. 'ಒಂದು ಕವಿತೆ ಹುಟ್ಟುವುದರಲ್ಲಿತ್ತು' ಎಂದು ಹೇಳುವಾಗ ಕವಿ ಅನುಭವಿಸುತ್ತಿರುವ ತಲ್ಲಣ ತಿಳಿಯುತ್ತದೆ! ಕೊನೆಗೆ,
"ಯಾರು ಕೊಲ್ಲುತ್ತಾರೆ ನನ್ನ ಕವಿತೆಗಳನ್ನು ನಾನು ಸತ್ತ ಮೇಲೆ ಯಾರು ಬದುಕುತ್ತಾರೆ ನನ್ನ ಕವಿತೆಗಳನ್ನು ನಾನು ಸತ್ತ ಮೇಲೆ" ಎಂದು ಕೇಳುತ್ತಾ, ಕವಿತೆಗಳು ಉಳಿಯಬೇಕಾದ ತುರ್ತನ್ನು ಕಾಳಜಿ ಮಾಡುತ್ತಾರೆ.

ನೆಮ್ಮದಿಯ ಹುಡುಕಾಟಕ್ಕೆ ತೊಡಗುವ ಕವಿಯ ಎದೆಯಲ್ಲಿ ನೋವುಗಳೇ ನೇತಾಡುತ್ತಿವೆ. ಧಾರಾಳಿಯಾಗಿರುವ ಪ್ರಕೃತಿಯ ಮೇಲೆಯೇ ದಬ್ಬಾಳಿಕೆ ಮಾಡಿ, ಆಕ್ರಮಿಸಿಕೊಂಡು, ನನ್ನದೆನ್ನುವವರ ಕಡೆಗೆ ಕನಿಕರದ ನೋಟ ಬೀರುವ ಕವಿಯೊಬ್ಬ ನಿಜಮನುಷ್ಯ... ಯಾಂತ್ರಿಕತೆಗೆ ಒಡ್ಡಿಕೊಂಡಿರುವ ಈ ಸೃಷ್ಟಿಗೆ ಮರುಚೈತನ್ಯ ಬರುವುದಾದರೆ ಮರಕುಟುಕನನ್ನು ಕರೆದು, ಕುಕ್ಕಿ, ಕುಟುಕಿ ಹೊಸದಾರಿ ಮಾಡಲು ತನ್ನೆದೆಯನ್ನೇ ಒತ್ತೆಯಿಡ ಬಯಸುವ ಕವಿಯದು ಅದೆಂಥ ಜೀವಪ್ರೀತಿ! ಕೃತ್ರಿಮತೆಗೆ ನರಳಿದ ಹೃದಯ! "ಛೇ! ಎಷ್ಟೊಂದು ಹಕ್ಕಿಗಳಿವೆ ಇಲ್ಲಿ, ಒಂದಾದರೂ ಬರಬಾರದೇ?" ಹಕ್ಕಿಗಳೂ ಯಾಂತ್ರಿಕತೆಗೆ ಒಗ್ಗಿಕೊಂಡವೇ ಎಂಬ ದಿಗಿಲನ್ನೂ ಈ ಸಾಲು ಧ್ವನಿಸುತ್ತದೆ.


ಕವಿಗೆ ಯಾವುದೂ ಅಮುಖ್ಯವಲ್ಲ. ಎಲೆಯೊಂದು- ಪತಿಯ ಬೆರಳು ಬಿಡಿಸಿಕೊಂಡ ಹೆಣ್ಣಾಗಿ, ತವರ ಮಣ್ಣಾಗಿ, ಬೆಳಕಾಗಿ, ಹಕ್ಕಿಯೊಡನೆ ಏಕವಾಗಿ, ಉಸಿರು ಬೆರೆವ ಗೆರೆಯಿರದ ದಾರಿಯಾಗಿ; ಗಾಳಿ- ಸಮುದ್ರವಾಗಿ, 'ಉಳಿದ ನಮ್ಮ ನಾಳೆಗಳ' ಲೆಕ್ಕವಿಡುವ ಜ್ಞಾನಿಯಾಗಿ; ಅವ್ವನ ರೊಟ್ಟಿ- ಕವಿತೆಯಾಗಿ, ಯುದ್ಧವಿಲ್ಲದ ಭೂಪಟವಾಗಿ, ಮರುಭೂಮಿಯಾಗಿ ರೂಪಾಂತರಗೊಳ್ಳುವ ಬಗೆಯನ್ನು ಎಲೆ, ಗಾಳಿ, ಏಕ, ರೊಟ್ಟಿ ಕವಿತೆಗಳು ಬಿಚ್ಚಿಡುವ ರೀತಿಯೇ ವಿಸ್ಮಯ!

ಗುಡಿಸಲಿಗೆ ಆತುಕೊಂಡೇ ಅದರ ಭೀಕರತೆಯನ್ನು ಅನುಭವಿಸಿಕೊಂಡು ನೆನಪುಗಳನ್ನು ಒಳಗಿಳಿಸಿಕೊಂಡು ಸಹಜತೆಗಾಗಿ ಧ್ಯಾನಿಸುವ ಕವಿ,
"ಆಯುಧಗಳು ಇದ್ದೇ ಇರುತ್ತವೆ
ಬೆಳಕ ಹಚ್ಚುತ್ತೇನೆ
ಬೆಳಕಿನ ಕುರಿತೂ ಮಾತಾಡುವುದಿಲ್ಲ" ಎನ್ನುತ್ತಾರೆ.

ಸಾವು, ಮಹೋನ್ನತ ಆನಂದವನ್ನು ಅನುಭವಿಸಲು ಇರುವ ಭೂಮಿಕೆ ಎಂದು ತಿಳಿಯುತ್ತಾ, ಗಾಳಿಯಲ್ಲಿ ಅತ್ತಿಂದಿತ್ತ ತೂರಾಡಿ ಸುಖಿಸುವ ಎಲೆಯ ಆನಂದವೇ ಸಾವಿನಿಂದಲೂ ಸಿಗಬೇಕೆಂದು ಬಯಸುತ್ತಾರೆ.
"ಚಟ್ಟಕ್ಕೆ ಮೋಟುಬೀಡಿಯ ಕಿಡಿ ತಾಗಿ
ಚಟಪಟ ಉರಿದು ಹೋಗುವುದಾದರೆ
ಎಷ್ಟು ಚಂದ ಎಷ್ಟು ಚಂದ" ಎಂದು ಸಾವಿನ ದಿನದ ಒಣ ಆಚರಣೆಗಳನ್ನು ಧಿಕ್ಕರಿಸುತ್ತಾರೆ.

ಕಾವ್ಯಮೀಮಾಂಸೆ, ಹೊಟೇಲು, ಕ್ಷಮಿಸು, ಜಲವರ್ಣ ಮುಂತಾದ ಕವಿತೆಗಳೂ,
"ಮ್ಯಾನ್ಹೋಲಿನಲ್ಲಿ ಉಸಿರುಗಟ್ಟಿ ಸತ್ತ ಕವಿತೆಯ ಶವ
ಕವಿಗೂ ಸಿಗಲಿಲ್ಲ ಟಿವಿಗೂ ಸಿಗಲಿಲ್ಲ" ಎಂಬ ಸಾಲುಗಳು
ಸಿದ್ಧಾಂತಗಳಾಚೆಗೂ ಉಸಿರಾಡಬೇಕಾದ ಮಾನವತೆಯನ್ನು ಪ್ರತಿನಿಧಿಸುತ್ತವೆ.

ಅಪ್ಪನ ವಿಸ್ತಾರತೆಯನ್ನೂ, ಅವ್ವನ ಸೀರೆಯ ಅಗಾಧತೆಯನೂ, ಎದೆಯ ದನಿಯನ್ನು, ಪ್ರೇಮದ ಸರಳತೆಯನ್ನು ಧೇನಿಸುವ ಇವರ ಕವಿತೆಗಳಲ್ಲಿ ಅಪರೂಪದ ರೂಪಕಗಳಿವೆ, ಪ್ರತಿಮೆಗಳಿವೆ, ಪ್ರಾಮಾಣಿಕ ಅಭಿವ್ಯಕ್ತಿಯಿದೆ. ನಿಜ! ಇವರ ಕವಿತೆಗಳಲ್ಲಿ ತೀವ್ರವಾದ ಭಾವೋದ್ವೇಗಗಳಿಲ್ಲ, ಜಿದ್ದಿಗೆ ಬೀಳುವ ಬಿರುಸುಗಳಿಲ್ಲ... ಕಡು ತಣ್ಣಗಿನ ನೀರಿನ ಇರಿತವಿದೆ! ಬದುಕಿನ ಸಂದೇಶವನ್ನು ದಾಟಿಸುವ ನೋಟವಿದೆ. ನಮ್ಮ ಬಾಧ್ಯತೆಗಳನ್ನು ನೆನಪಿಸಿ, ಎಚ್ಚರಿಸುವ ಬದ್ಧತೆಯಿದೆ...

ಪ್ರೀತಿಯ ಕಾಜೂರು ಸತೀಶ್ ಸರ್... ನಿಮ್ಮ ಮತ್ತಷ್ಟು ಪ್ರಾಮಾಣಿಕ ಮಾತುಗಳಿಗಾಗಿ ಕಾಯುತ್ತಾ...


-ರಮ್ಯ ಕೆ ಜಿ, ಮೂರ್ನಾಡು.

Friday, February 11, 2022

ಕಣ್ಣಲ್ಲಿಳಿದ ಮಳೆಹನಿಯ ಕುರಿತು ನೂತನಾ ದೋಶೆಟ್ಟಿಯವರ ಅಭಿಪ್ರಾಯ

ಕೃಪೆ- ಸಂಗಾತಿ

ಕಣ್ಣಲ್ಲಿಳಿದ ಮಳೆಹನಿ – ಕಾಜೂರು ಸತೀಶ್ ಅವರ ಹೊಸ ಕವನ ಸಂಕಲನ.. ಚಿ. ಶ್ರೀನಿವಾಸ ರಾಜು ಕಾವ್ಯ ಪುರಸ್ಕಾರ ಪಡೆದ ಈ ಕೃತಿ ಸಂಗಾತ ಪುಸ್ತಕದಿಂದ ಪ್ರಕಟವಾಗಿದೆ. 40ಕವಿತೆಗಳ ಈ ಸಂಕಲನ ಸೊಗಸಾದ ಮುಖಪುಟದಿಂದ ಓದಲು ಹಿಡಿದಾಗಲೇ ಹತ್ತಿರವಾಗುತ್ತದೆ.


ಮೊದಲ ಕವಿತೆ – ಎಲ್ಲಿ- ಕಾಡು ನಾಡಾದ ಬಗೆಗಿನ ಈ ಪ್ರಶ್ನೆಯೊಂದಿಗೆ ಸಂಕಲನದ ಓದು ಆರಂಭ. ಪುಟ್ಟ ಪುಟ್ಟ ಶೀರ್ಷಿಕೆಯ ಇಲ್ಲಿನ ಪದ್ಯಗಳು ಆಳದಲ್ಲಿ ಅಪಾರ ಜಿಜ್ಞಾಸೆಯಿಂದ ಕೂಡಿವೆ.

ಮರ ಯಾರದು? ಕವಿತೆ , ಎಲ್ಲರದ್ದೂ ಆಗಬಹುದಾಗಿದ್ದ ಮರ ಈಗ ಯಾರಾದ್ದೂ ಅಲ್ಲದೆ ನೆನಪುಗಳ ಸಂತೆಯನ್ನು ಎದೆಯಲ್ಲಿ ನೆಟ್ಟು ಬಿಡುತ್ತದೆ.

ಎಲೆಯನ್ನು ಪತ್ನಿಯಾಗಿ ಕಾಣುವ ಈ ಕವಿ ತವರನ್ನು ನೆನೆನೆನೆದು ಪುಳಕಗೊಳ್ಳುವ ಅವಳಲ್ಲಿ. ಮತ್ತೆ ಮತ್ತೆ ಹಸಿರು/ ಮತ್ತೆ ಮತ್ತೆ ಬೆಳಕು/ ಕಂಡು ಈ ಸಾಲುಗಳಲ್ಲಿ ಎಷ್ಟು ಅರ್ಥಗಳ ಹೊಳಹಿಸಿದೆ.

ಮ್ಯಾನ್ ಹೋಲಿನಲ್ಲಿ ಸತ್ತ ಕವಿತೆ- ಒಂದು ಸಶಕ್ತ ವಿಡಂಬನೆ. ಇಲ್ಲಿ ಸಾಯುವುದು ಕವಿತೆಯೋ, ನಿಜ ಸಾಹಿತ್ಯವೋ, ಒಳ್ಳೆಯ ಸಂಸ್ಕಾರವೋ ಅಥವಾ ಮುಚ್ಚಳ ಮುಚ್ಚಿದ ಕವಿತೆ ಬರೆಯುವ ಕೈಗಳ ಹೊಲಸು ಯಾರ ಅರಿವಿಗೂ ಸಿಗದೆ ಅಡಗಿ ಹೋದಂತಿದೆಯೋ!

ಗುಡಿಸಲು- ಕವಿತೆಯಲ್ಲಿನ ರೂಪಕಗಳು, ಅದರೊಳಗಿನ ಬದುಕಿನಂತೆ, ಅದರ ಸುತ್ತಲಿನ ಸಮಾಜವನ್ನು ಚಿತ್ರಿಸುವ ಬಗೆ ಆಶ್ಚರ್ಯ ಹುಟ್ಟಿಸುತ್ತದೆ.

ಒಂದಾದರೂ ಬರಬಾರದೆ? ಕವಿತೆಯಲ್ಲಿ ಮರಕುಟಿಗ ಹಕ್ಕಿಯ ಮೂಲಕ ಆಧುನಿಕತೆಯ ಐಬುಗಳನ್ನೆಲ್ಲ ಬಗೆದು, “ಹಚ್ಚಹಸಿರು ಹೃದಯದ ಮನುಷ್ಯರ ನೋಡುವ ” ಹಂಬಲ ಕವಿಯದು.

ಕೊಲೆ, ಕವಿತೆ – ಸುಕೋಮಲ ಹೂಗಳನ್ನು ಕೊಲೆ ಮಾಡುವ. ಈ ದುರುಳ ಕಾಲದ ತಣ್ಣಗಿನ ಕ್ರೌರ್ಯನನ್ನು ಧ್ವನಿಸಿದರೆ , ರೊಟ್ಟಿ- ಕವಿತೆಯಲ್ಲಿ ರೊಟ್ಟಿ ಸುಡುತ್ತದೆ ನೆಲದ ಕಾವಲಿಯಲ್ಲಿ/ ನೇಗಿಲು ಸೌದೆ ಎಷ್ಟು ಚೆನ್ನಾಗಿ ಉರಿಯುತ್ತದೆ , ಎಂದು ಚುಚ್ಚುವ ವ್ಯಂಗ್ಯವಿದೆ.

ನನ್ನೊಳಗೆ ಇಳಿಯುವಾಗ – ಕವಿತೆಯಲ್ಲಿ ವಚನಗಳನ್ನು ನೆನಪಿಸುವ ಭಾವವಿದೆ. ದೇಹವೇ ದೇಗುಲ ಎಂಬಂತೆ ಪಕ್ಕೆಲುಬುಗಳ ತಟ್ಟಿದರೂ ಮನೆ- ಮನದ ಕದ ತೆರೆಯುತ್ತದೆ .

ಎದೆಯ ದನಿಯಿದು; ಶೃಂಗಾರ ಕಾವ್ಯವಲ್ಲ! ಕವಿತೆಯಲ್ಲಿ ಅಂಗೈ ಗೆರೆಗಳು ಸಲಾಕೆಯ ಹಿಡಿತಕ್ಕೆ ಸವೆಯುವುದಿಲ್ಲ. ಬದಲಾಗಿ ಅವು ನಿರ್ಮಿಸಿದ ಹಳಿಗಳು ಸವೆಯುತ್ತವೆ.. ಎದೆಗಳು ವಾಹನ ಸಂಚಾರದಿಂದ ದುರಸ್ತಿಯಲ್ಲಿವೆ. ಆ ಎದೆಯೊಳಗೆ ಮಲಗಲು ಹೊತ್ತಾಗಿರುವ ಮಗುವಿಗೆ ಹಾಲೂಡಿಸಲು ಕವಿ ಆ ತಾಯಿಯನ್ನು ಕರೆಯುವುದಾದರೂ ಹೇಗೆ? ನೇತು ಹಾಕಿರುವ ಕೆಂಬಟ್ಟೆಯ ತುಂಡೊಂದು ಧ್ವಜವಾಗಿ , ಆ ಧ್ವಜವನ್ನು ಇಳಿಸಿ, ಟಾರು ಕುದಿಯುವುದರೊಳಗೆ ಆಕೆ ಹಾಲು ಕುಡಿಸಬೇಕು. ಅವರಿಬ್ಬರೂ ಬೇರೊಬ್ಬರಿಗಾಗಿ ರಸ್ತೆ, ರೈಲು ಹಳಿ, ಮನೆಗಳನ್ನು ಕಟ್ಟುತ್ತಲೇ ಇರುತ್ತಾರೆ. ತಮಗೆ ನೆರಳೆಂಬ ಕಪ್ಪನ್ನು ಉಳಿಸಿಕೊಂಡು, ಅದನ್ನೇ ಹಾಸಿ ಹೊದೆಯುತ್ತಾರೆ. ಇಲ್ಲಿ ಜಗದ ಕಾರ್ಮಿಕ ವರ್ಗದ ನೋವು, ಸಂಕಟ ತಣ್ಣಗೆ ಕೊರೆಯುತ್ತದೆ.
ಬಂಧಿ, ಕವಿತೆ ಬದುಕಿನ ನಾಲ್ಕು ಮಜಲುಗಳು ಎದುರಿಸಬಹುದಾದ ಸಂದಿಗ್ಧ ಗಳನ್ನು ಧ್ವನಿಪೂರ್ಣವಾಗಿಸಿದೆ. ಅವುಗಳನ್ನು ಮೀರಿ ನಿಲ್ಲಲಾರದ್ದೂ ಒಂದು ಸಂದಿಗ್ಧವೆ. ಕಾಲಕಾಲಕ್ಕೆ ಎದುರಾಗುವ ಅವು ಹೇಗೆ ಒಂದಿಡೀ ಬದುಕನ್ನು ಇಷ್ಟಿಷ್ಟೇ ಮುಗಿಸಿಬಿಡಬಲ್ಲವು ಎಂಬುದನ್ನು ಬಹಳ ಮಾರ್ಮಿಕವಾಗಿ ಹೇಳಲಾಗಿದೆ.

ಬುಡ್ಡಿ ದೀಪದ ಬುಡ ಕವಿತೆಯಲ್ಲಿ ಬಿಸಿಲಿಗೂ, ಸಾವಿಗೂ ಲಾಲಿ ಹಾಡುತ್ತ ನಿಲ್ಲುವ ಪರಿಗೆ ಮನಸ್ಸು ಮೂಕವಾಗುತ್ತದೆ.

ಇಲ್ಲಿಯ ಕವಿತೆಗಳ ಮಳೆಯಲ್ಲಿ ಬೆಂಕಿ ಮಳೆಹನಿ ಉದುರುತ್ತದೆ. ಅನೇಕ ಕವಿತೆಗಳು ಕವಿತೆಯ ಕುರಿತಾಗಿಯೇ ಬರೆದುವಾಗಿದ್ದು ಕವಿತೆ ಬೇರೆ ಬೇರೆ ರೂಪಕಗಳಾಗಿ ಕಾಣುತ್ತದೆ. ಕೆಲವು ಬಾರಿ ಕವಿತೆ ಹಾಡಾದರೆ, ಕೆಲವು ಬಾರಿ ಅತ್ಯಂತ ಸುಖೀ ಜೀವವಾಗುತ್ತದೆ. ಕೆಲವೊಮ್ಮೆ ಕವಿತೆ ಅಂತರಂಗದ ನೋವಾಗಿ ಕವಿತೆಯನ್ನು ಕಬಳಿಸುವ ಟಿವಿ, ಮೊಬೈಲು, ಬೈಕು, ಕತ್ತಿ ಮೊದಲಾದ ಅಭೀಪ್ಸೆಗಳಾಗಿ ಕಾಣುತ್ತದೆ.

ಬೆಳಕಿನ ಕುರಿತು ಬರೀ ಮಾತಾಡುವ ಇಂದಿನ ದಿನಗಳಲ್ಲಿ ಬೆಳಕ ಕುರಿತು ಮಾತಾಡದೆ ಬೆಳಕು ಹಚ್ಚುತ್ತೇನೆ ಎಂಬ ಕವಿಯ ನಿರ್ಮಲ ಭಾವ ಹಾಗೂ ಸದಾಶಯ ಎಲ್ಲ ಕವಿತೆಗಳಲ್ಲೂ ಕಾಣುವುದೇ ಇವುಗಳ ಸೊಗಸು. ಅಮ್ಮನ ಸೀರೆಯಲ್ಲಿ ಬಿದ್ದಿರುವ ತೂತು ಹೊಟ್ಟೆ ತುಂಬಿದಾಗಲೆಲ್ಲ ಸುಡಲೆಂಬಂತೆ ಉಳಿದಿದೆ ಎಂದು ಈ ಕವಿಯಷ್ಟೇ ಹೇಳಬಲ್ಲರು.
*


ನೂತನಾ ದೋಶೆಟ್ಟಿ


ಗಾಢ ವಿಷಾದದ ನೆರಳಿನಂತಿರುವ ‘…. ಮಳೆಹನಿ’


ಪ್ರಕೃತಿ ಬದುಕು ಮತ್ತು ಕಾವ್ಯದ ನಡುವಿನ ಸಾವಯವ ಸಂಬಂಧದ ತಾತ್ವಿಕ ಜಿಜ್ಞಾಸೆ ಸಂಕಲನದುದ್ದಕ್ಕೂ ಕಾಣುತ್ತದೆ. ಕೆಲವೆಡೆ ಸರಳವೆನಿಸುವ ವಸ್ತು ಮತ್ತು ತಂತ್ರಗಳಿಂದ ಹುಟ್ಟುವ ಪ್ರತಿಮೆಗಳಲ್ಲಿ ಸಂಕೀರ್ಣವಾದ ವಿಷಯಗಳನ್ನು ದಾಟಿಸುವ ಶಕ್ತಿ ಇಲ್ಲಿಯ ಕವನಗಳಲ್ಲಿದೆ ಎನಿಸುತ್ತದೆ. ಭಾಷೆಯೆಂಬುದು ಪ್ರಾಣಘಾತುಕವೆಂಬ ಎಚ್ಚರ ಇಲ್ಲಿಯ ಕವಿತೆಗಳಲ್ಲಿ ಎದ್ದುಕಾಣುತ್ತದೆ. ಇದು ಭಾಷೆಗೆ ಒಂದು ಬಿಗುವು ತಂದಿದೆ.
ಕವಿ ಕಾಜೂರು ಸತೀಶ್ ರವರ “ಕಣ್ಣಲ್ಲಿಳಿದ ಮಳೆಹನಿ” ಕವನ ಸಂಕಲನದ ಕುರಿತು ಡಾ. ಸಿ.ಬಿ. ಐನಳ್ಳಿ ಬರಹ

ಒಂದು ವಿಶಿಷ್ಟವಾದ ವಸ್ತು ವಿಷಯ ಸಂವೇದನಾಕ್ರಮ ಮತ್ತು ಅಭಿವ್ಯಕ್ತಿಯನ್ನು ಈ ಸಂಕಲನದ ಕವಿತೆಗಳು ಪರಿಚಯಿಸುವಂತಿವೆ. ಆಧುನಿಕತೆಯ ಸಹವಾಸದಲ್ಲಿ ನಿಸರ್ಗದ ಸಾಂಗತ್ಯ ಮತ್ತು ಅದರ ಸೃಷ್ಟಿಶೀಲತೆ ಒಡಮೂಡಿಸುವ ಜೀವಧ್ವನಿಯನ್ನು ಅಕ್ಷರಶಃ ಕಳೆದುಕೊಂಡಿರುವ ಇಂದಿನ ಸ್ಥಿತಿಯ ಬಗೆಗಿನ ಆತಂಕ ಮತ್ತು ಅದರಿಂದ ಬಿಡುಗಡೆಗೊಳ್ಳುವ ಹಂಬಲ ಇಲ್ಲಿಯ ಬಹುತೇಕ ಕವಿತೆಗಳಲ್ಲಿ ತುಡಿಯುತ್ತದೆ. ನಿಸರ್ಗವನ್ನು ತನ್ನ ಸ್ವತ್ತಾಗಿ ವಶಪಡಿಸಿಕೊಳ್ಳಲು ಹವಣಿಸುವ ಮಾನವನ ಸಣ್ಣತನದ ವಿಡಂಬನೆ (ಮರ ಯಾರದು?, ಕಾಡುಗವಿತೆ) ಇಲ್ಲಿಯ ಕವಿತೆಗಳಲ್ಲಿದೆ. ನಿಸರ್ಗದ ನಾಶದ ಕುರಿತ (ಎಲ್ಲಿ, ನಡುರಾತ್ರಿ…, ಕಾಡುಗಳಿದ್ದವು ಕವಿತೆಗಳಲ್ಲಿ) ಗಾಢ ವಿಷಾದವಿದೆ. ಅಮೆರಿಕದ ಕವಿ ರಾಬರ್ಟ ಫ್ರಾಸ್ಟ್ ನ ಕವನಗಳಲ್ಲಾಗುವಂತೆ ನಿಸರ್ಗದಲ್ಲಿ ವ್ಯಕ್ತಿ ಕಾಣುವ ಸಾಮಾನ್ಯ ಚಿಕ್ಕಪುಟ್ಟ ದೃಶ್ಯಗಳು ಬದುಕಿನ ಮೀಮಾಂಸೆಯ ಕುರಿತ ಆಳವಾದ ಜಿಜ್ಞಾಸೆಗೆ ತೊಡಗಿಸುತ್ತವೆ. ಫ್ರಾಸ್ಟ್ ನನ್ನು ನೆನಪಿಸುವ ಇನ್ನೊಂದು ಮುಖ್ಯ ಗುಣವೆಂದರೆ ಈ ಕವನಗಳಿಗಿರುವ ಮುಕ್ತಅಂತ್ಯವುಳ್ಳ ಅರ್ಥ ಸಾಧ್ಯತೆಗಳು.



ದೈನಂದಿನ ಬದುಕಿನ ಸರಳ ಸಾಮಾನ್ಯ ವಸ್ತು ಮತ್ತು ಘಟನೆಗಳಲ್ಲಿ ಕವಿ ಕಾಣುವ ಆಳವಾದ ಕಾಣ್ಕೆ(ಏಕ, ಕಾವ್ಯಮೀಮಾಂಸೆ) ಎಪಿಫ್ಯಾನಿಕ್ ಎನಿಸುವಂಥ ಅಚ್ಚರಿಯನ್ನು ಮೂಡಿಸುತ್ತದೆ. ಬಯಲಿಗೆ ಅರ್ಥಗಳನ್ನು ಹಚ್ಚುವ (ಗಾಳಿ) ಮತ್ತು ಎಲ್ಲಾ ಅರ್ಥಗಳಲ್ಲಿ ಬಯಲನ್ನು ಕಾಣುವ (ನನ್ನೊಳಗೆ….) ಸಮಚಿತ್ತತೆ ಕವಿಗಿದೆ ಎನಿಸುತ್ತದೆ. ‘ಝರಿ ಮಾತನಾಡುವುದು ಬಿಟ್ಟರೆ/ ಮೌನ ಬಡಕಲಾಗಿ ಹುಟ್ಟಿ/ ಕವಿತೆ ಮುಖವಾಡವಾಗುವುದು ಲೋಕಕ್ಕೆ’ ಎಂಬುದು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಎಚ್ಚರ. ನಿಸರ್ಗದ ಪ್ರತಿ ನಡೆಯ ಬಗೆಗಿನ ಬೆರಗುಗಣ್ಣು ಕವನಗಳಲ್ಲಿ ತೆರೆದೇ ಇದೆ. ಕೆಲವು ಕವನಗಳಲ್ಲಿ (ನನ್ನ ಶವಸಂಸ್ಕಾರದ ದಿನ, ಸಾಯ್ವ ಸುಖ, ಏಕ, ಇತ್ಯಾದಿ) ಸಾವು ನಿಸರ್ಗ ಸಹಜವಾದ ಪ್ರಕ್ರಿಯೆಯ ಭಾಗವೆಂಬಂತೆ ಸಂಭ್ರಮಿಸಲ್ಪಡುತ್ತದೆ ; ಆದರೂ, ವ್ಯಕ್ತಿಯ ವೈಯಕ್ತಿಕ ಬದುಕಿನ ಹೆಪ್ಪುಗಟ್ಟಿದ ವಿಷಾದ ಈ ಚಿತ್ರಣಗಳ ಮೂಲಕ ಬಿಡುಗಡೆಯನ್ನು ಬಯಸುತ್ತಿರುವಂತೆಯೂ ಕಾಣುತ್ತದೆ. ಮಾನವ, ಪ್ರಕೃತಿ, ಅನ್ಯಜೀವಿಗಳು, ಪ್ರಕೃತಿಯ ಭಾಗವಾದ ವಸ್ತುಗಳು ಎಲ್ಲವೂ ಅಂತರಾವಲಂಬನೆ ಮತ್ತು ಸಹಕಾರದಲ್ಲಿ ಬಾಳಬೇಕಿರುವ ಅಗತ್ಯತೆಯನ್ನು ಮಾನವೋತ್ತರವಾದದ (ಪೋಸ್ಟ್ ಹ್ಯುಮ್ಯಾನಿಜಂ) ಒಂದು ಕವಲು ಪ್ರತಿಪಾದಿಸುತ್ತಾ ಮಾನವಕೇಂದ್ರಿತ ಜಗತ್ತಿನ ಪರಿಕಲ್ಪನೆಯನ್ನು ನಿರಾಕರಿಸಿರುವುದು ತಿಳಿದಿದೆದೆಯಷ್ಟೆ. ಈ ಸಂಕಲನದ ಕವಿತೆಗಳಲ್ಲಿ ವ್ಯಕ್ತವಾಗುವ ಮುಖ್ಯ ಕಾಳಜಿಗಳು ಎಲ್ಲೋ ಒಂದು ಕಡೆ ಈ ದೃಷ್ಟಿಕೋನದ ವಿನ್ಯಾಸಕ್ಕೆ ಹೊಂದಿಕೊಳ್ಳುವಂತಿವೆಯೇನೋ ಎನಿಸುತ್ತದೆ. ಆದರೆ, ಇದು ಈ ಕವಿತೆಗಳನ್ನು ನೋಡಬಹುದಾದ ನೋಟಕ್ರಮಗಳಲ್ಲಿ ಒಂದು ಎನ್ನಬಹುದಷ್ಟೆ.

ಈ ಸಂಕಲನ ಕಾವ್ಯದ ಹುಟ್ಟು ಉದ್ದೇಶ ಮತ್ತು ಬಾಳಿಕೆಯ ಕುರಿತ ಜಿಜ್ಞಾಸೆಯೂ ಆಗಿದೆ. ಕಾವ್ಯಮೀಮಾಂಸೆ ಮತ್ತು ಜೀವನ ಮೀಮಾಂಸೆಯ ನಡುವೆ ಭೇದವೆಣಿಸದೆ ಸಾಹಿತಿಕ ಮತ್ತು ಸಾಂಸ್ಕೃತಿಕ ರಾಜಕಾರಣದ ಶುದ್ಧತೆ ಮತ್ತು ಶ್ರೇಷ್ಠತೆಯ ವ್ಯಸನವನ್ನೂ, ಈ ವ್ಯಸನದಿಂದ ಹುಟ್ಟಿದ ಕ್ರೌರ್ಯ ಮತ್ತು ಹಿಂಸೆಯನ್ನು (ಮ್ಯಾನ್ ಹೋಲಿನಲ್ಲಿ ಸತ್ತಕವಿತೆ) ಸೂಕ್ಷ್ಮವಾಗಿ ವಿಡಂಬಿಸುತ್ತದೆ. ಕಾವ್ಯಮೀಮಾಂಸೆಯ ಹೆಸರಲ್ಲಿ ಹೇರಲಾದ ರೂಪ-ವಿರೂಪಗಳ ಮಡಿ-ಮೈಲಿಗೆಯ ಹೇರಿಕೆಯ ಮೌಲ್ಯಗಳ ಮೀರುವಿಕೆಯೂ ಇಲ್ಲಿ (ಕಾವ್ಯಮೀಮಾಂಸೆ) ಕಾಣುತ್ತದೆ. ನಿಸರ್ಗ, ಮಾನವನ ಬದುಕು ಮತ್ತು ಕಾವ್ಯಗಳ ನಡುವೆ ಬೆಸೆದುಕೊಂಡಿರುವ ಅಂತರಸಂಬಂಧಗಳ ಬಗ್ಗೆ ಕವಿಗೆ ಗಾಢವಾದ ನಂಬಿಕೆಯಿರುವುದು ಇಲ್ಲಿಯ (ಎಷ್ಟುಸುಖಿ ನೀನು…) ಕವನಗಳಲ್ಲಿ ತಿಳಿಯುತ್ತದೆ. ಕವಿಗೆ ಪೆನ್ನು ಬೆಳಕು ಹಚ್ಚಬೇಕಾದ ಸಾಧನವಷ್ಟೇ ಅಲ್ಲ, ಹುಟ್ಟುವ ತವಕದಲ್ಲಿರುವ ಕವಿತೆಯ ಕತ್ತು ಹಿಸುಕುವ ಆಯುಧವೂ ಹೌದು. ಎದೆಯಲ್ಲಿ ಮೂಡಿದ ಸಂವೇದನೆಗಳೆಲ್ಲವನ್ನೂ ವ್ಯಕ್ತಪಡಿಸಲಾಗದ ಕವಿತೆ ‘ಬಂಧಿ’ಯಾಗಿರುವುದರ ತೊಳಲಾಟ ಒಂದೆಡೆಯಾದರೆ, ಇನ್ನೊಂದೆಡೆ ಕವಿತೆ ಎಂಬುದು ಸದಾ ಆಗುವಿಕೆಯ(ಕವಿತೆ ಹುಟ್ಟುವುದರಲ್ಲಿತ್ತು) ಪ್ರಕ್ರಿಯೆಯಲ್ಲಿರುವ ಅರಿವಿನ ಒರತೆ ಎಂಬ ನಿಲುವು ‘ಕೇಳಿರದ ಹಾಡುಗಳೇ ಹೆಚ್ಚು ಮಧುರ’ ಎಂಬ ಕೀಟ್ಸ್ ಕವಿಯ ಸಾಲನ್ನು ನೆನಪಿಸುತ್ತವೆ. ಈ ಕವಿತೆಗಳ ಅವಲೋಕನ ಕವಿತೆಯೆಂಬುದು ಕವಿಗೆ ನಿರಂತರವಾದ ಬದುಕಿನ ಜಿಜ್ಞಾಸೆ ಅಥವಾ ಶೋಧವಾಗಿದೆ ಎಂಬುದನ್ನು ಹೇಳುತ್ತದೆ (‘ಬೆಳಕ ಹಚ್ಚುತ್ತೇನೆ’ ಮತ್ತು ‘ಕವಿತೆ ಹುಟ್ಟುವುದರಲ್ಲಿತ್ತು’). ಇವು ಒಂದು ಸಲಕ್ಕೆ ಓದಿ ಮುಗಿಸುವ ಕವನಗಳಾಗಿರದೇ ಒಂದು ಮಟ್ಟಿನ ಧ್ಯಾನವನ್ನು ಬೇಡುತ್ತವೆ. ಇಲ್ಲಿಯ ಮೌನ ಮಾತನಾಡುತ್ತದೆ.



ಸಾವು ನಿಸರ್ಗ ಸಹಜವಾದ ಪ್ರಕ್ರಿಯೆಯ ಭಾಗವೆಂಬಂತೆ ಸಂಭ್ರಮಿಸಲ್ಪಡುತ್ತದೆ; ಆದರೂ, ವ್ಯಕ್ತಿಯ ವೈಯಕ್ತಿಕ ಬದುಕಿನ ಹೆಪ್ಪುಗಟ್ಟಿದ ವಿಷಾದ ಈ ಚಿತ್ರಣಗಳ ಮೂಲಕ ಬಿಡುಗಡೆಯನ್ನು ಬಯಸುತ್ತಿರುವಂತೆಯೂ ಕಾಣುತ್ತದೆ.
ಕೈಗೂಡದ ಪ್ರೇಮದ ನೋವು ಎದೆಯ ದನಿಯಾಗಿ (ಎದೆಯ ದನಿಯಿದು) ಇಲ್ಲಿ ಹಾಡಿಕೊಳ್ಳುತ್ತದೆ. ಭಗ್ನಗೊಳ್ಳುತ್ತಿರುವ ಪ್ರೇಮದ ಗಾಢ ವಿಷಾದವನ್ನು ಅದರ ಸುಡುವ ಮೌನದ ಸಮೇತ ಬರಹಕ್ಕೆ(ಬರೆಯಲಾರೆ) ಕವಿ ದಾಟಿಸಬಲ್ಲರು. ಎಲ್ಲೆಡೆ ಮಾನವಸಹಜ ಪ್ರೀತಿಯ ಬೇರುಗಳೇ ಮುರುಟುವಂತಾಗಿ, ಮೌಲ್ಯಗಳಿಗೆ ಗೆದ್ದಲು ಹಿಡಿಯುತ್ತಿರುವಾಗ ಹುಟ್ಟುವ ಹತಾಶೆ ಇಲ್ಲಿಯ (ಕೊಲೆ) ಕವನದಲ್ಲಿ ಕಾಣುತ್ತದೆ. ವರ್ತಮಾನದ ಸಾಂಸ್ಕೃತಿಕ ರಾಜಕಾರಣದ ವಿದ್ಯಮಾನಗಳು ಹುಟ್ಟಿಸಿದ ಜಿಗುಪ್ಸೆಯಿಂದ ವಿಮುಖವಾಗುವ ಪ್ರಯತ್ನವೆಂಬಂತೆ ಈ ಕವಿತೆಗಳು ಮೇಲ್ನೋಟಕ್ಕೆ ಕಂಡರೂ, ಅಂಥ ವಿದ್ಯಮಾನಗಳಿಗೆ ಅತ್ಯಂತ ಸೂಕ್ಷ್ಮ ಮತ್ತು ಪ್ರಬುದ್ಧವಾದ ಪ್ರತಿಭಟನೆಯನ್ನು ಅವು ದಾಖಲಿಸುತ್ತವೆ. ‘ಎಲ್ಲ ಹೃದಯಗಳ ಬಣ್ಣ ನನ್ನ ಮನೆಗೆ….. ಕರುಳ ಚಾಪೆ ಹಾಸುವೆ/ ಕೂತು ಸುಧಾರಿಸಿಕೊಳ್ಳಿ….. ಬೇಕಿದ್ದರೆ / ಮೆದುಳು ಹೃದಯ ರಕ್ತದ ಕೋಣೆಗಳ ಬಗ್ಗೆ /ಚರ್ಚೆ ನಡೆಸಿರಿ’ (ನನ್ನೊಳಗೆ ಇಳಿಯುವಾಗ) – ಈ ಸಾಲುಗಳು ಸೂಕ್ಷ್ಮ ಪ್ರತಿಭಟನೆಯ ಜೊತೆಗೆ, ಬೇಡದ ವಿಷಯಗಳ ಬಗೆಗಿನ ಮೌನವನ್ನೂ ಬಿತ್ತುತ್ತಿವೆ.


ಆಧುನಿಕೋತ್ತರ ಬದುಕಿನ ಅರ್ಥಹೀನತೆ ಸತ್ವಹೀನತೆಯ ವಿಡಂಬನೆ, ಅದರಿಂದ ಬಿಡುಗಡೆಯ ಬಯಕೆ (ಮರೆತುಬಿಟ್ಟೆ, ಒಂದಾದರೂ… ) ಇಲ್ಲಿದೆ. ಸತ್ಯ-ಮಿಥ್ಯಗಳ ನಡುವಿನ ಗೆರೆ ಅಳಿಸಿಕೊಂಡ ಬದುಕಿನ ಪೊಳ್ಳುತನದ ರೂಪಕಗಳೂ (ಪರದೆ) ಕಾಣುತ್ತವೆ. ‘ಹಚ್ಚಿಟ್ಟರೆ ಬುಡ್ಡಿ ದೀಪ / ಹಸಿದ ಕೀಟಕ್ಕೆ ಹಣ್ಣಾಗಿ ತೋರುವುದು,…. ಹಸಿದು ಸತ್ತವರಿಗೆ ಹೀಗೇ / ಒಂದು ಹಣ್ಣು ಕಂಡಿರಬಹುದು /ಬೆಳಕ ಭ್ರಮೆಯಲ್ಲಿ’ (ಬುಡ್ಡಿ ದೀಪದ ಬುಡ)- ಇವು ವರ್ತಮಾನದ ಅಭಿವೃದ್ಧಿ ಮಾದರಿಯ ಲೇವಡಿಯೂ ಆಗಬಹುದಾದ ಸಾಲುಗಳು. ಮುಖವಾಡಗಳಲಿ ನಡೆವ ಲೂಟಿ ಮತ್ತು ಸಣ್ಣಪುಟ್ಟ ಬೂಟಿಯ (ಕ್ಷಮಿಸು) ಲೇವಡಿಯೂ ಇದೆ. ಬೆವರ ಬದುಕಿನ ಬವಣೆಯ ಸಾಂಗತ್ಯ(ಹೋಟೆಲ್), ನಿರ್ಲಕ್ಷಕ್ಕೊಳಗಾದ ಹೆಣ್ಣಿನ ಚಿತ್ರಣಗಳೂ (ಅಮ್ಮನ ಸೀರೆ) ಪ್ರತಿಮಾತ್ಮಕವಾಗಿ ಕಾಣುತ್ತವೆ.

ಪ್ರಕೃತಿ ಬದುಕು ಮತ್ತು ಕಾವ್ಯದ ನಡುವಿನ ಸಾವಯವ ಸಂಬಂಧದ ತಾತ್ವಿಕ ಜಿಜ್ಞಾಸೆ ಸಂಕಲನದುದ್ದಕ್ಕೂ ಕಾಣುತ್ತದೆ. ಕೆಲವೆಡೆ ಸರಳವೆನಿಸುವ ವಸ್ತು ಮತ್ತು ತಂತ್ರಗಳಿಂದ ಹುಟ್ಟುವ ಪ್ರತಿಮೆಗಳಲ್ಲಿ ಸಂಕೀರ್ಣವಾದ ವಿಷಯಗಳನ್ನು ದಾಟಿಸುವ ಶಕ್ತಿ ಇಲ್ಲಿಯ ಕವನಗಳಲ್ಲಿದೆ ಎನಿಸುತ್ತದೆ. ಭಾಷೆಯೆಂಬುದು ಪ್ರಾಣಘಾತುಕವೆಂಬ ಎಚ್ಚರ ಇಲ್ಲಿಯ ಕವಿತೆಗಳಲ್ಲಿ ಎದ್ದುಕಾಣುತ್ತದೆ. ಇದು ಭಾಷೆಗೆ ಒಂದು ಬಿಗುವು ತಂದಿದೆ.



ಕವಿಯ ಅನುಭವ ಜಗತ್ತು ವಿಸ್ತಾರಗೊಳ್ಳಬೇಕಾದ ಅಗತ್ಯತೆಯನ್ನು ಹೇಳುತ್ತಾ, ಕನ್ನಡ ಸಾಹಿತ್ಯದಲ್ಲಿ ಸತೀಶರ ಕಾವ್ಯದ ಪಯಣದ ಸಾಧ್ಯತೆಗಳನ್ನು ಮುನ್ನುಡಿಯಲ್ಲಿ ಎಂ.ಡಿ.ಒಕ್ಕುಂದರವರು ಸರಿಯಾಗಿಯೇ ಗುರ್ತಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರತಿಭೆಗಳು ಮೊಳಕೆಯೊಡೆಯಲು ಬೇಕಾದ ಸಾಂಸ್ಕೃತಿಕ ಪರಿಸರವನ್ನು ಕಟ್ಟಲು ನಿರಂತರ ಶ್ರಮ ವಹಿಸುತ್ತಿರುವ ಸಂಗಾತ ಪುಸ್ತಕ ಪ್ರಕಾಶನ ಈ ಕೃತಿಗೆ 2021ರ ಡಿಸೆಂಬರ್ ನಲ್ಲಿ ಚಿ. ಶ್ರೀನಿವಾಸರಾಜು ಕಾವ್ಯ ಪುರಸ್ಕಾರ ನೀಡಿ ಗೌರವಿಸಿದೆ. ಈ ಗೌರವಕ್ಕೆ ಪಾತ್ರರಾದ ಕವಿ ಸತೀಶರಿಗೆ ಮತ್ತು ಪ್ರಕಾಶಕರಿಗೆ ಇಬ್ಬರಿಗೂ ಅಭಿನಂದನೆಗಳು.

(ಕೃತಿ: ಕಣ್ಣಲ್ಲಿಳಿದ ಮಳೆಹನಿ (ಕವನ ಸಂಕಲನ), ಲೇಖಕರು : ಕಾಜೂರು ಸತೀಶ್, ಪ್ರಕಾಶನ : ಸಂಗಾತ ಪುಸ್ತಕ, ಧಾರವಾಡ, ಬೆಲೆ: 80/-)

                        ಡಾ. ಸಿ.ಬಿ.ಐನಳ್ಳಿ


ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಿ. ಬಿ. ಐನಳ್ಳಿಯವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.


Saturday, February 5, 2022

ಮುಟ್ಟದೆಯೇ ಮುತ್ತಿಡುವ ಮೋಹಕತೆ



ಮಂಜುಳಾ ಹುಲಿಕುಂಟೆ ಅವರ ದೀಪದುಳುವಿನ ಕಾತರ ಕವನ ಸಂಕಲನವನ್ನು ಈ ಬೆಳಿಗ್ಗೆ ಓದಿದೆ. ಮುಗ್ಧ ಹುಡುಗಿಯೊಬ್ಬಳ  ಪ್ರೇಮದ ಕುರಿತ ಭಾಷ್ಯ, ಲೋಕ ಗ್ರಹಿಕೆ, ದಿನಚರಿ, ಆತ್ಮಕಥಾನಕಗಳಿವು. ಪ್ರೇಮ-ವಿರಹ, ಹತಾಶೆ-ಜೀವಂತಿಕೆಗಳ ಮಿಶ್ರಣ, 
'ಮುಟ್ಟದೆಯೇ ಮುತ್ತಿಡುವ ಮೋಹಕತೆ'

ಹಾಡಿಕೊಳ್ಳಲು ಬಿಟ್ಟುಬಿಡಿ
ನನ್ನ ಪಾಲಿನ ಹಾಡುಗಳ
*

ಹಚ್ಚಿಟ್ಟ ಹಣತೆಯಲ್ಲಿ
ನನ್ನ ನಾನೇ ಸುಟ್ಟುಕೊಳ್ಳುವಾಗ
ಬೆಳಕೆಂದು ಭ್ರಮಿಸುವ ಅವನು
ಮುಗ್ಧನೋ ಕ್ರೂರಿಯೋ
ಅರಿವಾಗುವುದಿಲ್ಲ.
*


'ದೀಪದ ಹುಳು' ಹೆಣ್ಣಿನ ಕುರಿತ ಸಶಕ್ತ ಪ್ರತೀಕ . ದೀಪದ ಹುಳುವಿನ ಕನಸು ಬಗೆಬಗೆಯದಾದರೂ ಕಡೆಗೆ ಸುಟ್ಟು ಕರಕಲಾಗುವ ಹಿಂಸೆ. ಆದರೆ ಕರಕಲಾಗುವ ಮೊದಲಿನ ಕ್ಷಣಗಳ ಉತ್ಕಟ ಪ್ರೇಮದ ಧ್ಯಾನ ಈ ಕವಿತೆಗಳು.


ನನ್ನವ್ವ ನನ್ನ ಹೆರುವ ಮೊದಲೇ
ಸ್ವಾಭಿಮಾನವನ್ನು ಹೆತ್ತಿದ್ದಳು

ಪ್ರೇಮ
ಕೊರಳ ಮೇಲಿನ ಕುಣಿಕೆಯಾದಾಗಲೂ
ಸಾವ ಕ್ಷಣಕ್ಷಣವನ್ನು ಇನ್ನಿಲ್ಲದಂತೆ ಅಪ್ಪಿಕೊಂಡಿದ್ದೇನೆ.
*
ಇನ್ನೂ deep ಆಗಿ ಈ ಮುಗ್ಧ ಲೋಕದೊಳಗೆ ಇಳಿದಾಗ ಪದ್ಯಗಳು ಹೆಚ್ಚು ಕಾಡುತ್ತವೆ. ಮಂಜುಳಾ ಹುಲಿಕುಂಟೆ  ಅವರಿಗೆ ಶುಭಾಶಯಗಳು 

*
ಕಾಜೂರು ಸತೀಶ್ 



ಪ್ರೀತಿ ಮತ್ತು ಪ್ರಾಯಶ್ಚಿತ್ತ ಮತ್ತು ಉಲುಹಿನ ವೃಕ್ಷದ ನೆಳಲು


'ಸಂಕಥನ'ದ ಗೆಳೆಯ ರಾಜೇಂದ್ರ ಪ್ರಸಾದ್ ಅವರ 'ಪ್ರೀತಿ ಮತ್ತು ಪ್ರಾಯಶ್ಚಿತ್ತ' ಮತ್ತು 'ಉಲುಹಿನ ವೃಕ್ಷದ ನೆಳಲು' ಎಂಬ ಎರಡು ಕೃತಿಗಳನ್ನು ಓದಿದೆ. ಸಿದ್ಧಮಾದರಿಯ 'ಮುನ್ನುಡಿ ಬೆನ್ನುಡಿ'ಗಳ ಬದಲಿಗೆ ಕೃತಿಯ ಕೇಂದ್ರಪ್ರಜ್ಞೆಯ ಕುರಿತು ಮಾತುಗಳನ್ನು ತಾವೇ ಬರೆದುಕೊಂಡಿದ್ದಾರೆ. "ಉಲುಹಿನ ವೃಕ್ಷದ ನೆಳಲು' ಕೃತಿಯ ಬಗೆಗಿನ ಮಾತುಗಳು mature ಆಗಿವೆ. ಸೃಜನಶೀಲ ಅಭಿವ್ಯಕ್ತಿಯ ನಡುನಡುವೆ ವೈಚಾರಿಕ ನೆಲೆಗಳನ್ನು ಶೋಧಿಸಿ ಹೇಳುವ ಗದ್ಯಕ್ರಮವೂ ಈ ತಲೆಮಾರಿಗೆ ಬೇಕು. ರಾಜೇಂದ್ರ ಪ್ರಸಾದ್ ಮುಂದೆ ಇಂತಹ ಆಲೋಚನೆಗಳಿರುವ ಗದ್ಯಕೃತಿಗೆ ಮುಂದಾಗಲಿ.