ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, May 24, 2023

ರಾಜಕೀಯ ಮತ್ತು ಪ್ರಕೃತಿ


ಬಾಳೆಯಡ ಕಿಶನ್ ಪೂವಯ್ಯ ಅವರನ್ನು ಭೇಟಿ ಮಾಡಿಸಿದ್ದು ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ೮೦ನೆಯ ಸಾಹಿತ್ಯ ಸಮ್ಮೇಳನ.ಅವರು ಸ್ವಾಗತ ಸಮಿತಿಯ ಸಂಚಾಲಕರಾಗಿದ್ದಾಗ ಅದೇ ತಂಡದಲ್ಲಿ ನಾನು ಸಹ- ಸಂಚಾಲಕನಾಗಿದ್ದೆ. ಕಡಿಮೆ ಮಾತನಾಡುವ, ಶಿಸ್ತಿನ ವ್ಯಕ್ತಿ. ವಕೀಲ ಮತ್ತು ನೋಟರಿಯವರಾಗಿ, ಕ್ರೀಡಾಪಟುವಾಗಿ, ಅಂಕಣಕಾರರಾಗಿ, ರಾಜಕೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಸಂಘಟಕರಾಗಿ, ಕೃಷಿಕರಾಗಿ ತಮ್ಮನ್ನು ವಿಸ್ತರಿಸಿಕೊಂಡವರು ಬಾಳೆಯಡ ಕಿಶನ್ ಪೂವಯ್ಯ.


'ರಾಜಕೀಯ ಮತ್ತು ಪ್ರಕೃತಿ' ಕೃತಿಯಲ್ಲಿ ೨೭ ಲೇಖನಗಳಿವೆ. ಈ ಲೇಖನಗಳಿಗೆ 'ಕೊಡಗು' ಎಂಬ ಭೌಗೋಳಿಕ ಮತ್ತು ಸಾಂಸ್ಕೃತಿಕ ಆವರಣವಿದೆ. ಮಡಿಕೇರಿ ದಸರಾ, ಕಾವೇರಿ, ಕೊಡಗಿನ ರಾಜಕಾರಣ, ಕೊಡಗಿನ ಪ್ರವಾಸೋದ್ಯಮ, ಪ್ರಕೃತಿ ವಿನಾಶ- ಇವುಗಳನ್ನು ಕೊಡಗಿನ ನೆಲೆಯಲ್ಲಿ ವಿಶ್ಲೇಷಿಸಿದರೆ, ಜಾತಿ ರಾಜಕಾರಣ , ಪಕ್ಷಾಂತರ, ಮೌಲ್ಯಾಧಾರಿತ ರಾಜಕೀಯ , ಬೇಟೆ ಮತ್ತು ಕಾನೂನು ಮುಂತಾದವುಗಳನ್ನು ದೇಶಾತೀತವಾಗಿ ಹಿಡಿದಿಡುತ್ತಾರೆ.


ಈ ಲೇಖನಗಳೆಲ್ಲಾ ಹುಟ್ಟಿರುವುದು ಸಮ-ಸಖೀ-ಸಮಾಜದ ನಿರೀಕ್ಷೆಯಲ್ಲಿ. ಅದಕ್ಕಿರುವ ಅಡ್ಡಿಗಳಲ್ಲಿ ಮುಖ್ಯವಾದದ್ದು 'ರಾಜಕೀಯ'( ರಾಜಕೀಯ ಎಂದರೆ ಅಧಿಕಾರದ/ಪಕ್ಷಗಳ/ ಚುನಾವಣೆಗೆ ಸಂಬಂಧಿಸಿದ ಸಂಗತಿ ಮಾತ್ರ ಅಲ್ಲ; ಎಲ್ಲ ರಂಗಗಳಲ್ಲಿ ಸ್ವಾರ್ಥಪರ ಅಭಿವೃದ್ಧಿಗಾಗಿ ಮನುಷ್ಯ ತೋರುವ ಅಧಿಕಾರದ ದುರ್ಬಳಕೆಯೂ, ಕಪಟತನವೂ ರಾಜಕೀಯವೇ ಆಗುತ್ತದೆ). ಮತ್ತೊಂದು- ಪ್ರಕೃತಿ ಮತ್ತು ಸಂಸ್ಕೃತಿಯ ನಾಶ. ಮಡಿಕೇರಿ ದಸರಾ ಆಚರಣೆಯ ಮೇಲೆ ರಾಜಕೀಯ ಪ್ರವೇಶ, ಕಾವೇರಿ(ಧಾರ್ಮಿಕ ಮತ್ತು ಸಾಂಸ್ಕೃತಿಕ ಆಯಾಮದಲ್ಲಿ) ಮತ್ತು ಎರಡು ಜನಾಂಗಗಳ ಸ್ವಪ್ರತಿಷ್ಠೆ, ಕೊಡಗಿನ ಪರಿಸರದ ಮೇಲೆ ಪ್ರವಾಸೋದ್ಯಮದ ಪರಿಣಾಮ - ಈ ಬಗೆಯ ಪ್ರಧಾನ ಸಂಗತಿಗಳನ್ನು ಚರ್ಚೆಗೆ ಎತ್ತಿಕೊಳ್ಳುವುದು ಅವರಿಗಿರುವ ಪ್ರಗತಿಪರ ಚಿಂತನೆಗಳ ಬಲದಿಂದಲೇ; ಉತ್ತಮ ಪರಿಣಾಮದ ಹಂಬಲದಿಂದಲೇ. ಪ್ರತಿಕ್ರಿಯೆಯ ರೂಪದಲ್ಲಿಯೂ ಕೆಲವು ಲೇಖನಗಳು ಕಾಣಿಸುತ್ತವೆ.
ಕಿಶನ್ ಪೂವಯ್ಯ ಅವರ ಚಿಂತನೆಗಳು ಮತ್ತಷ್ಟೂ ಎಲ್ಲರನ್ನೂ ತಲುಪಲಿ ಎಂಬ ಆಶಯ ನನ್ನದು.
*
ಕಾಜೂರು ಸತೀಶ್ 



No comments:

Post a Comment