ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, December 25, 2021

ಗುಂಡಿ


ಗುಂಡಿ-೧
----------

ಹಾವುಗಳ ಹಾವಳಿ ಹೆಚ್ಚಾಗಿ ಕಪ್ಪೆಗಳು ರಸ್ತೆಯ ಚಿಕ್ಕ ಗುಂಡಿಗಳಲ್ಲಿ ಮನೆಮಾಡಿದ್ದರಿಂದ ಚಕ್ರಕ್ಕೆ ಸಿಲುಕಿ ಅವುಗಳ ಸಂತತಿ ವಿನಾಶದತ್ತ ಸಾಗಿತು. ಕಡೆಗೆ ರಸ್ತೆಯ ದೊಡ್ಡ ಗುಂಡಿಗಳಲ್ಲಿ ಮನೆಮಾಡಿದವು.

ನಾಯಕ ಕಪ್ಪೆ ಹೇಳಿತು- 'ಈಗ ಸತ್ತರೆ ನಾವಷ್ಟೇ ಸಾಯುವುದಿಲ್ಲ!'

*

ಗುಂಡಿ-೨
----------

ರಸ್ತೆಯ ದೊಡ್ಡ ಗುಂಡಿಗಳು ಆಶ್ರಯ ನೀಡಿದ ಖುಷಿಗೆ ಕಪ್ಪೆಗಳೆಲ್ಲಾ ಸೇರಿ 'ಗೆಲ್ಲಿಸಿದವರಿಗೆ'  ಸನ್ಮಾನ ಸಮಾರಂಭವನ್ನು ಏರ್ಪಡಿಸಿದವು.

*



ಕಾಜೂರು ಸತೀಶ್

Friday, December 24, 2021

'ಕಣ್ಣಲ್ಲಿಳಿದ ಮಳೆಹನಿ'ಯ ಕುರಿತು ದಾದಾಪೀರ್ ಜೈಮನ್



ಕಾಜೂರು ಸತೀಶ್ ಅವರ 'ಕಣ್ಣಲ್ಲಿಳಿದ ಮಳೆಹನಿ' ಕವನಸಂಕಲನ ಓದಿದೆ. ಸಹಜತೆಯನ್ನೇ ಜೀವವಾಗಿಸಿಕೊಂಡ ನಿರಾಭರಣ ಸೌಂದರ್ಯವಿದೆ ಈ ಕವಿತೆಗಳಲ್ಲಿ. 'ಒಂದೇ ಒಂದು ಸಾಲು, ಪದ, ಅಕ್ಷರ, ಉಪಮೆ, ರೂಪಕ, ಪ್ರತಿಮೆಗಳನ್ನು ಅನಗತ್ಯವಾಗಿ ಬಳಸಲಾರೆ ಎಂಬ ಹಠ ತೊಟ್ಟಂತಿದೆ.' ಎಂಬ ತೀರ್ಪುಗಾರರ ಅಭಿಪ್ರಾಯಕ್ಕೆ ಮುದ್ರೆಯೊತ್ತುವ ಹಾಗೆ ಇಲ್ಲಿನ ಎಲ್ಲಾ ಕವಿತೆಗಳಿವೆ.

ಒಂದು ಆತ್ಯಂತಿಕ ವಿಷಾದವನ್ನು ದಾಟಿಸುವಾಗಲೂ ಕವಿ ತುಂಬಾ ಸಂಯಮದಿಂದ ದಾಟಿಸುತ್ತಾರೆ. ಈ ಸಂಕಲನದಲ್ಲಿ ಕವಿತೆಯ ಕುರಿತಾದ ಹಲವು ಕವಿತೆಗಳಿವೆ. ಕವಿತೆಯೆಂದರೇನು ಎಂಬ ಶೋಧದ ಜೊತೆಗೆ 'ಸಾವು' ಈ ಕವಿಯನ್ನು ತೀವ್ರವಾಗಿ ಕಾಡಿದೆ. ನೆರಳಂತೆ ಸುಳಿಯುವ ಇವೆರಡನ್ನೂ ಒಂದು ದಿವ್ಯಮೌನದ ಏಕಾಂತದಲ್ಲಿ ಎದುರುಗೊಂಡು ಬರೆದ ಹಾಗಿವೆ. ಅದರ ತೀವ್ರತೆ ಪುಸ್ತಕ ಓದಿ ಮುಗಿಸಿದ ಮೇಲೂ ನಮ್ಮೊಳಗೆ ಕುಳಿತುಬಿಡುವಷ್ಟು ಶಕ್ತವಾಗಿವೆ ಎನಿಸಿದೆ. ಅಂತೆಯೇ ಬದುಕಿನ ಹಾಗೂ ಸಮಾಜದ ದಂದುಗಗಳನ್ನು ಹೇಳುವಾಗ ಕವಿ ವಾಚಾಳಿಯಾಗದೆ ತಣ್ಣಗೆ ಸಾತ್ವಿಕ ಪ್ರತಿರೋಧದ ದನಿಯಾಗಿಯೆ ಹೇಳುತ್ತಾರೆ.

ಕವಿತೆಗಳು ಇಷ್ಟವಾದವು.



- ದಾದಾಪೀರ್ ಜೈಮನ್

Sunday, December 19, 2021

ಕಣ್ಣಲ್ಲಿಳಿದ ಮಳೆಹನಿಯ ಕುರಿತು ಶಿವಾನಂದ ಉಳ್ಳಿಗೇರಿ

ನಿಮ್ಮ ಕವನ ಸಂಕಲನ ಕಣ್ಣಲ್ಲಿಳಿದ ಮಳೆಹನಿ ಓದಿದೆ.
ತುಂಬಾ ಒಳ್ಳೆಯ ಕವಿತೆಗಳನ್ನು ಬರೆದಿರುವಿರಿ ಮೊದಲಿಗೆ ತಮಗೆ ಅಭಿನಂದನೆಗಳು.

ತುಂಬಾ ಸೊಗಸಾದ ಆಕರ್ಷಕ ಮುಖಪುಟ ಹಾಗೂ ಶೀರ್ಷಿಕೆ.

ಪುಟ ತೆರೆದು ಒಂದೊಂದೆ ಕವಿತೆಗಳನ್ನು ಓದಲಾರಂಭಿಸಿದರೆ ನಿರಂತರವಾಗಿ ಓದಿಸಿಕೊಂಡು ಹೋಗುವ ಉತ್ತಮ, ಅರ್ಥಪೂರ್ಣ ವಿಶಿಷ್ಟವಾದ ಕವಿತೆಗಳು.
ಕವಿತೆಯ ವಿಷಯ, ಕಾವ್ಯ ಶೈಲಿ, ಭಾಷೆ ಎಲ್ಲವೂ ತುಂಬಾ ಚೆನ್ನಾಗಿದೆ. ಎಲ್ಲ ಕವಿತೆಗಳನ್ನು ಓದಿ ಖುಷಿಯಾಯ್ತು.

ನಿಮ್ಮಿಂದ ಇನ್ನಷ್ಟು ಕವನ ಸಂಕಲನಗಳು ಮೂಡಿ ಬರಲಿ
ಶುಭವಾಗಲಿ ತಮಗೆ
💐💐💐💐💐
*

ಶಿವಾನಂದ ಉಳ್ಳಿಗೇರಿ

ಕವಿ, ಶಿಕ್ಷಕ
ಬೈಲಹೊಂಗಲ, ಬೆಳಗಾವಿ.

ಕಣ್ಣಲ್ಲಿಳಿದ ಮಳೆಹನಿಯ ಕುರಿತು ಡಾ.ಎಂ.ಡಿ.ಒಕ್ಕುಂದ




ಕಾಡು ಹಾಗೂ ಪ್ರಕೃತಿ (ನಾಶದ ವಿಷಾದ), ಕವಿತೆ ಮತ್ತು ಸಾವು ಇವರ ಸೃಜನಶೀಲತೆಯ ಕೇಂದ್ರ ಕಾಳಜಿಯಾಗಿವೆ. ಇವುಗಳೊಂದಿಗೆ ವರ್ತಮಾನದ ತಲ್ಲಣಗಳು, ಬದುಕನ್ನು ಕುರಿತಾದ ತಾತ್ವಿಕ ಜಿಜ್ಞಾಸೆಗಳೂ ಸೇರಿಕೊಂಡಿವೆ. ಇವು ಒಂದರೊಳಗೊಂದು ಬೆಸೆದೂ ಹೋಗಿವೆ. ಕನ್ನಡ ಕಾವ್ಯಕ್ಕೆ ಇವು ಹೊಸ ಸಂಗತಿಗಳೇನಲ್ಲ. ಆದರೆ ಇಲ್ಲಿಯ ಎಲ್ಲ ಕವಿತೆಗಳೂ ತಮ್ಮ ಸಂವೇದನಾಕ್ರಮ, ಪ್ರತಿಮಾವಿಧಾನ ಹಾಗೂ ಭಾಷಿಕ ಬಳಕೆಯ ಭಿನ್ನತೆ, ಸ್ವಂತಿಕೆ ಹಾಗೂ ತಾಜಾತನಗಳಿಂದ ಈ ಕೇಂದ್ರಗಳಿಗೆ ಹೊಸ ರೂಪಧಾರಣೆ ನೀಡಿವೆ. ಆಕರ್ಷಣೆಯನ್ನು ಸೃಷ್ಟಿಸಿವೆ. ಕಾಡನ್ನು ಕೇಂದ್ರದಲ್ಲಿರಿಸಿಕೊಂಡ ಕವಿತೆಗಳಂತೂ ಕನ್ನಡ ಕಾವ್ಯಕ್ಕೆ ಹೊಸದಾದ ಗ್ರಹಿಕೆಗಳನ್ನು, ಹೊಚ್ಚಹೊಸ ಪ್ರತಿಮೆಗಳನ್ನು ಹಾಗೂ ಭಾಷಿಕ ಆಯಾಮಗಳನ್ನು ಸೇರಿಸುವಷ್ಟು ಶಕ್ತಿಶಾಲಿಯಾಗಿವೆ. ಸಾವನ್ನು ಕುರಿತ ಕವಿತೆಗಳು ಭಯ ತಲ್ಲಣ ಆಘಾತ ನಿರಾಸೆಗಳಿಗಿಂತ ಪ್ರಬುದ್ಧವಾಗಿ ಸಾವನ್ನು ಕುರಿತಂತೆ ತಾತ್ವಿಕ ಜಿಜ್ಞಾಸೆಗೆ ತೊಡಗುತ್ತವೆ. ‘ಕವಿತೆ’ ಕೇಂದ್ರಿತ ಕವಿತೆಗಳು ಸೃಜನಶೀಲತೆಯ ಎಚ್ಚರದ ದಾರಿಗಳನ್ನು ಶೋಧಿಸುತ್ತವೆ.

ಅತಿಭಾವುಕತೆ, ಭಾವಾವೇಶ, ವಾಗಾಡಂಬರ, ಉಪಮೆ ರೂಪಕ ಪ್ರತಿಮೆಗಳನ್ನು ಕಟ್ಟುವ ತಿಣುಕಾಟಗಳು ವಿಜೃಂಭಿಸುವುದಿಲ್ಲ. ಒಂದು ಸಾಲು, ಒಂದು ಪದ, ಒಂದು ಅಕ್ಷರ, ಒಂದೇ ಒಂದು ಉಪಮೆ ರೂಪಕ ಪ್ರತಿಮೆಗಳನ್ನು ಅನಗತ್ಯವಾಗಿ ಬಳಸಲಾರೆ ಎಂಬ ಹಠ ತೊಟ್ಟಂತಿದೆ. ಇದು ಹೊಸತಲೆಮಾರಿಗೆ ಅಪರೂಪದ ಗುಣ.
*


- ಎಂ.ಡಿ.ಒಕ್ಕುಂದ

------------------------------------
ಕಣ್ಣಲ್ಲಿಳಿದ ಮಳೆಹನಿ
ಲೇ : ಕಾಜೂರು ಸತೀಶ್
ಬೆಲೆ : 80 ರೂ.

ಸಂಗಾತ ಪುಸ್ತಕ
8431113501