ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, November 14, 2023

ಸ್ಪರ್ಧೆ



ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುತ್ತಾ ಪತ್ರಿಕೆಗಳಲ್ಲಿ ಸದಾ ಸದ್ದುಮಾಡುವ ಕಥೆಗಾರರು ಈ ಬಾರಿಯ ಕಥಾಸ್ಪರ್ಧೆಗೆ ಕಥೆ ಕಳುಹಿಸುವುದಿಲ್ಲವೆಂಬುದನ್ನು ಖಾತ್ರಿಪಡಿಸಿಕೊಂಡ 'ತಿಮ್ಮ' ಅವರ ಹೆಸರಿನಲ್ಲಿ ತನ್ನ ಕಥೆಯೊಂದನ್ನು ಕಳುಹಿಸಿದ.

ತಿಮ್ಮನ ನಿರೀಕ್ಷೆಯಂತೆ ಆ ಕಥೆಗೆ ಮೊದಲ ಬಹುಮಾನ ಬಂತು!

ತಮ್ಮ ಹೆಸರನ್ನು ನೋಡಿದ ಆ ಕಥೆಗಾರರು ಹೌಹಾರಿ ' ಇದು ಅಕ್ಷಮ್ಯ. ಹೀಗೆ ನನ್ನ ಹೆಸರನ್ನು ಬಳಸಿದವರ ಕಥೆಯನ್ನು ಇನ್ನುಮುಂದೆ ಯಾವುದೇ ಪತ್ರಿಕೆಯಲ್ಲಿ ಪ್ರಕಟಿಸಬಾರದು' ಎಂದು ಜಾಲತಾಣಗಳಲ್ಲಿ ಬರೆದುಕೊಂಡರು.

ಆ ಕಥೆಯನ್ನು ತಿಮ್ಮನೇ ಬರೆದದ್ದೆಂದು ತಿಮ್ಮನ ಹೊರತಾಗಿ ಮತ್ತ್ಯಾರಿಗೂ ತಿಳಿದಿರಲಿಲ್ಲ, ತಿಳಿಯಲೂ ಇಲ್ಲ. ತಿಮ್ಮ ಬರೆದ ಆ ಕಥೆಯ ವಸ್ತುವೂ ಅದೇ ಆಗಿತ್ತು: ಹೆಸರಾಂತ ಕಥೆಗಾರನ ಹೆಸರಿನಲ್ಲಿ ಯುವ ಕಥೆಗಾರನೊಬ್ಬ ಕಥೆ ಬರೆದು ಅದಕ್ಕೆ ಬಹುಮಾನ ಘೋಷಣೆಯಾದ ಮೇಲೆ ನಡೆಯುವ 'ಪ್ರಸಂಗ'ಗಳು!
*
ಕಾಜೂರು ಸತೀಶ್

ನೋಟ

'ಜಗತ್ತಿನ ಅದ್ಭುತ ತಾಣ' ಎಂದು ಗುರುತಿಸಲ್ಪಟ್ಟ ಸ್ಥಳ ಅದಾಗಿತ್ತು. ಯಾರೇ ಹೋಗಲಿ , ಒಂದು ಕ್ಷಣ ಹುಚ್ಚೆದ್ದು ಕುಣಿದು ಕುಪ್ಪಳಿಸುತ್ತಾರೆ, ಅಷ್ಟು ಚೆಲುವು ಆ ತಾಣಕ್ಕೆ.
ಆ ಬೆಟ್ಟ, ಹರಿವ ನದಿ, ಮೋಡಗಳ ಸಾಲು, ಸೂರ್ಯಾಸ್ತ...ಉಫ್!

ಮನುಷ್ಯರು ಇರದಿದ್ದ ಆ ಸಂಜೆ ಸಿಂಹವೊಂದು ಬಂದು ಅಲ್ಲಿ ಕುಳಿತಿತು. ಅದರ ತೀಕ್ಷ್ಣ ನೋಟವು ಅಷ್ಟ ದಿಕ್ಕುಗಳಲ್ಲೂ ಹರಡಿ ಆಹಾರವನ್ನು ಅರಸುತ್ತಿದ್ದವು!
*
ಕಾಜೂರು ಸತೀಶ್

Friday, October 13, 2023

ಸತ್ ಛಾಯಾ -ಕವನ ಸಂಕಲನದ ಕುರಿತು

ವಿಕ್ರಾಂತ್ ಕೇಳ್ಕರ್ ಅವರು ಸೃಜನಶೀಲ ಶಿಕ್ಷಕರು. ಮಾಹಿತಿ ತಂತ್ರಜ್ಞಾನದ ಹಲವು ಶಾಖೆಗಳನ್ನು ಸ್ಪರ್ಶಿಸಿದ ಅನುಭವವಿರುವವರು. ಆ ಕ್ಷೇತ್ರದಲ್ಲಿ ರಾಷ್ಟ್ರೀಯ ಪುರಸ್ಕಾರವನ್ನು ಪಡೆದವರು. ಫೋಟೋಗ್ರಫಿಯಲ್ಲೂ ಆಸಕ್ತಿಯನ್ನು ಹೊಂದಿರುವ ಅವರು ಹಲವಾರು ಸೊಗಸಾದ ಪಕ್ಷಿಗಳ ಚಿತ್ರಗಳನ್ನು ಕ್ಲಿಕಿಸಿದ್ದಾರೆ. ಇಂಗ್ಲಿಷ್ ಭಾಷಾ ಶಿಕ್ಷಕರಾಗಿ ತಂತ್ರಜ್ಞಾನವನ್ನು ಅನುಕೂಲಿಸುವಿಕೆಯ ಭಾಗವಾಗಿಸಿಕೊಂಡಿದ್ದಾರೆ.



ಹೀಗೆ ಸಕ್ರಿಯರಾಗಿರುವ ವಿಕ್ರಾಂತ್ ಕೇಳ್ಕರ್ ಅವರು ನಮ್ಮೆದುರಿಗೆ ಪ್ರತ್ಯಕ್ಷವಾಗಿದ್ದು ಸತ್ ಛಾಯಾ ಎಂಬ ಕವನ ಸಂಕಲನದೊಂದಿಗೆ. ಅದರೊಂದಿಗೆ ಅವರು ಕವಿತೆ ಬರೆಯುತ್ತಾರೆ ಎಂಬ ಸಂಗತಿಯೂ ನಮಗೆ ತಿಳಿಯಿತು! ಅವರು ಅದನ್ನು ಸಾಹಿತ್ಯ ಶಿಶುವಿನ ಗೀಚು ಸಾಹಿತ್ಯ ಎಂದು ಮುಖಪುಟದಲ್ಲೇ ಬರೆದುಕೊಂಡಿದ್ದಾರೆ. ಅಂತ್ಯಪ್ರಾಸವುಳ್ಳ ರಚನೆಗಳಿವು. ಅವರ ಕವಿತೆಗಳ ಮಾದರಿ ಹೀಗಿದೆ:
ಸಾಹಿತಿಯು ನಾನಲ್ಲ ಸಾಧುವೂ ಅಲ್ಲ
ಕವಿಯಂತೂ ನಾನಲ್ಲವೇ ಅಲ್ಲ
ಛಂದಾಲಂಕಾರಗಳು ಎನಗೆ ತಿಳಿದಿಲ್ಲ
ಆದರೂ ಗೀಚುವ ದಾಹ ತೀರಿಲ್ಲ

ಪ್ರತಿಕ್ರಿಯಾತ್ಮಕ ಮಾದರಿಯ ಕವಿತೆಗಳಿವು.ಈ ಕೃತಿಗೆ ತಾ.ಶ್ರೀ.ಗುರುರಾಜ್, ಸದಾಶಿವ ಸೊರಟೂರು ಮುಂತಾದ ಲೇಖಕರ ಅಮೂಲ್ಯವಾದ ಮುನ್ನುಡಿಗಳಿವೆ. ಕನ್ನಡದ/ಜಗತ್ತಿನ ಹಲವು ಕಾವ್ಯಧಾರೆಗಳಿಗೆ ಮುಖಾಮುಖಿಯಾಗುತ್ತಾ ವಿಕ್ರಾಂತ್ ಸರ್ ಅವರು ಹೆಚ್ಚು ಹೆಚ್ಚು ಬರೆಯುವಂತಾಗಲಿ.
ಅವರಿಗೆ ಶುಭಾಶಯಗಳು.

*


ಕಾಜೂರು ಸತೀಶ್

ನಾಟಿ ಮಾಡೋ ಪರಿ



ಮಳೆ ಬರ್ತಿದೆ ಮರಿ
 ಗೆಳೆಯರ್ನೆಲ್ಲಾ ಕರಿ
ಹೇಳ್ಕೊಡ್ತೇನೆ ಎಲ್ಲಾ ಸೇರಿ
 ನಾಟಿ ಮಾಡೋ ಪರಿ

ಮಾಡ್ಕೋಬೇಡಿ ಕಿರಿಕಿರಿ
ಮೊಳಕೆಯಲ್ಲಿದೆ ಸಿರಿ
ಅನ್ಕೋಬೇಡಿ ಪಿರಿಪಿರಿ
ಪೈರೇ ಸುಖದ ಗರಿ

ಕಪ್ಪೆ ಹಾರ್ದಂಗ್ಹಾರಿ
ಗೆಳೆಯರೆಲ್ಲ ಸೇರಿ
ಪೈರು ನೆಟ್ಕೊಂಡ್ಹೋಗಿ
ಸಾಲು ಇರ್ಬೇಕು ಸರಿ

ಕೆಸರಲ್ಹೆಜ್ಜೆ ಊರಿ
ಮಾಡ್ಕೊಂಡ್ಹೋಗಿ ದಾರಿ
ಕಷ್ಟಗಳ್ನೆಲ್ಲಾ ತೂರಿ
ಬದುಕಿಗಿರ್ಲಿ ಗುರಿ
*
ಕಾಜೂರು ಸತೀಶ್ 

ನನ್ನ ಕವಿತೆ



ಖಿನ್ನನಾದ ಮೇಲೆ ಬೆಟ್ಟಗುಡ್ಡಕ್ಕೆ ನನ್ನ ಮಾತ ಕೊಟ್ಟೆ
ಸುರಿವ ಮಳೆಗೆ ಹರಿವ ಹೊಳೆಗೆ ನನ್ನ ದನಿಯ ಕೊಟ್ಟೆ

ಅವೆಲ್ಲಾ ಮಾತನಾಡುವುದ ಕೇಳಿಸಿಕೊಂಡ ನಾನು
ಅಳಿದುಳಿದ ಮಾತುಗಳ ಮೊಗೆಮೊಗೆದು ಲೇಖನಿಗುಣಿಸಿದೆ

ಹಾಗೆ ಕೊರೆದ ಗೆರೆಗೆರೆಗಳ ಮೈಯ ಬಳುಕು
ಅನ್ನವಿಲ್ಲದೇ ಆದದ್ದು ಪ್ರಿಯರೇ ಅನ್ನವಿಲ್ಲದೆ ಆದದ್ದು.
*
ಕಾಜೂರು ಸತೀಶ್

Sunday, August 20, 2023

ಏಕಲವ್ಯ

ತಾನೇ ತಾನಾಗಿ ಶಿಲ್ಪಕಲೆಯನ್ನು ಕಲಿತಿದ್ದರಿಂದ 'ಏಕಲವ್ಯ' ಎಂದು ಹೆಸರಾಗಿದ್ದ. ಅವನ ಕೈಚಳಕಕ್ಕೆ ಮಣ್ಣು, ಶಿಲೆಗಳೆಲ್ಲಾ ಜೀವಪಡೆಯುತ್ತಿದ್ದವು.
ಹಲವು ಸಮಾರಂಭಗಳಿಗೆ ಕರೆಬಂದರೂ ಒಂದೆರಡು ಕಡೆಗಳಿಗೆ ಮಾತ್ರ ಬಿಡುವು ಮಾಡಿಕೊಂಡು ಹೋಗಿಬರುತ್ತಿದ್ದ.

'ದಿನದಿಂದ ದಿನಕ್ಕೆ ಕರೆಗಳು ಹೆಚ್ಚು ಬರಲಾರಂಭಿಸಿದವು. ನಾನೊಂದು ಶಿಲ್ಪ ಮಾಡಿದ್ದೇನೆ. ನಿಮ್ಮ ಕೈಯ ಸ್ಪರ್ಶವಾದರೆ ಅದು ಇನ್ನೂ ಚಂದವಾಗ್ತಿತ್ತು..'

'ಒಂದು ಹೆಲ್ಪ್. ಒಂದು ಶಿಲ್ಪವನ್ನು ಕಳಿಸ್ತೇನೆ. ಸರಿಮಾಡಿಕೊಡುವಿರಾ? ಆದರೆ ನಾಳೆಯೇ ಬೇಕಿತ್ತು, ಇಲ್ಲ ಅನ್ಬೇಡಿ'

ಕೊನೆಕೊನೆಗೆ ಮೊಬೈಲ್ ಸ್ವಿಚ್ ಆಫ್ ಮಾಡಿದ. ಅನೇಕ ಸಂಖ್ಯೆಗಳನ್ನು ಬ್ಲಾಕ್ ಮಾಡಿಟ್ಟ. ಜನಗಳಿಂದ ತಪ್ಪಿಸಿಕೊಂಡು ಓಡುತ್ತಿದ್ದ.

ಈ ಹಾವಳಿ ಹೆಚ್ಚಾಗಿ ಬದುಕು ಕಷ್ಟವೆನಿಸಿದಾಗ ತನ್ನ ಕಲೆಯನ್ನು ನಿಲ್ಲಿಸಿದ.

ಈಗ ಬೀದಿಯಲ್ಲಿ ರಾಜಾರೋಷವಾಗಿ ನಡೆಯುವಾಗ ಒಬ್ಬನೇ ಒಬ್ಬ ಮಾತನಾಡಿಸದಿರುವಾಗ ಸ್ವಾತಂತ್ರ್ಯದಲ್ಲಿ ಇಷ್ಟು ಸುಖವಿರುತ್ತದಾ ಎಂದು ಸುಖಿಸತೊಡಗಿದ.
*


ಕಾಜೂರು ಸತೀಶ್

ಸ್ವಾತಂತ್ರ್ಯ

ಮುಖ್ಯಮಂತ್ರಿಗಳೊಂದಿಗೆ ಸಂವಾದಕ್ಕೆ ರಾಜ್ಯದ ಐದು ಮಂದಿಯಲ್ಲಿ ಸಾಹಿತಿ ತಿಮ್ಮನಿಗೂ ಅವಕಾಶ ಸಿಕ್ಕಿತ್ತು.

ಈ ಸಂದೇಶವನ್ನು ಜಾಲತಾಣಗಳಲ್ಲಿ ಹಂಚಿಕೊಂಡ. ಹಲವರಿಂದ ಅಭಿನಂದನೆಗಳ ಮಳೆ ಸುರಿದವು. ಅವರೆಲ್ಲಾ ಆಡಳಿತ ಪಕ್ಷದ ಸಾಹಿತಿಗಳಾಗಿದ್ದರು.

ಅಷ್ಟೇ ಪ್ರಮಾಣದಲ್ಲಿ ನೀನು ಹೋಗಬೇಡ ಎಂದರು. ಅವರು ವಿರೋಧಪಕ್ಷದ ಸಾಹಿತಿಗಳಾಗಿದ್ದರು.
*
ಕಾಜೂರು ಸತೀಶ್

ಹನಿಹನಿಗಳಲ್ಲಿ ಜೀವನದರ್ಶನ

'ಹನಿ ಹನಿ ಇಬ್ಬನಿ' ಲೀಲಾಕುಮಾರಿ ತೊಡಿಕಾನ ಅವರ ಹನಿಗವನಗಳ ಸಂಕಲನ. ಬದುಕಿನ ವಿವಿಧ ಕಾಲಘಟ್ಟಗಳಲ್ಲಿ ಬರೆದಿರುವ ಹನಿಗವನಗಳಿವು. ಹೀಗಿರುವುದರಿಂದ ಸಹಜವಾಗಿ ಅಭಿವ್ಯಕ್ತಿಯಲ್ಲಿ ಏಕರೂಪದ ಮಾದರಿಗಳಿಲ್ಲ. (ಏಕೆಂದರೆ ಪ್ರೌಢಶಾಲೆಯಲ್ಲಿದ್ದಾಗ, ಕಾಲೇಜಿನಲ್ಲಿದ್ದಾಗ ಬರೆದ ಹನಿಗಳೂ ಇಲ್ಲಿವೆ). ಒಟ್ಟು 213 ಹನಿಗವನಗಳಿರುವ ಸಂಕಲನವಿದು.


ಕೇವಲ ವರ್ಣನೆಗೆ ಸೀಮಿತಗೊಳ್ಳದ ಕವಿತೆಗಳಿವು. ಸಮಕಾಲಿನ ಸಮಾಜದ ವೈರುಧ್ಯಗಳ ಮೇಲೆ ಹನಿಗಳ ಕುಟುಕು ಇದೆ. ಯಾವುದೇ ಸೀಮಿತ ಸಿದ್ಧಾಂತಕ್ಕೆ ಕಟ್ಟು ಬೀಳದೆ ಆಯಾ ಕಾಲಘಟ್ಟದಲ್ಲಿ ಕವಿಯೋರ್ವ ಮುಖಾಮುಖಿಯಾಗುವ ಸಂಗತಿಗಳನ್ನೇ ಅವರು ಕವಿತೆಯಾಗಿಸಿದ್ದಾರೆ. ಕವಿತೆಯಾಗುವಿಕೆ/ಆಗದಿರುವಿಕೆಯ ಕುರಿತು ಅವರಿಗೆ ಸ್ಪಷ್ಟತೆ ಇದೆ.

155. ನನ್ನ ಕವಿತೆಗಳೇ
ನನ್ನ ವಿರುದ್ಧ
ದಂಗೆಯೆದ್ದಿವೆ.
ಗೀಚಿದ್ದಕ್ಕೆಲ್ಲ
ಕವಿತೆ ಎಂದು
ಹೆಸರಿಟ್ಟಿದ್ದಕ್ಕೆ..
ಕವಿ ಎಂದು ಬೀಗಿದ್ದಕ್ಕೆ.

191. ಪ್ರತಿ ಏಕಾಂತದ
ಮೌನದಲ್ಲೂ
ಹೃದಯಕ್ಕೊಂದೊಂದು
ಸುಖ ಪ್ರಸವ
ಬಿಳಿ ಹಾಳೆಯ ಮೇಲೆ.
ಮಲಗಿದ
ಕವಿತೆ ಮರಿ
ಕಣ್ಣುಮಿಟಿಕುಸುತ್ತಿದೆ.


26. ಅವರಿವರ ಮಾತುಗಳು
ಮೌನಗಳು 
ಚುಚ್ಚಿದಾಗಲೆಲ್ಲ ನೋವ ಸಹಿಸಿ
 ಸಹಿಸಲಾಗದೆ ನುಂಗಿ ನುಂಗಿ
 ನವಮಾಸ ತಡೆದು 
ತಡೆಯಲಾಗದೆ ಹಡೆದಿದ್ದೇನೆ 
ಕವಿತೆಗಳ.
ಇದೀಗ ನನ್ನ ಸುತ್ತ 
ಕವಿತೆಗಳದ್ದೇ ಅಳು
 ಕಿಲಕಿಲ ನಗು
 ಯಾರ ಮಾತು ಕೇಳದಷ್ಟು
 ಚುಚ್ಚೋ ಮೌನವ ಸೀಳುವಷ್ಟು
*


ಲೀಲಾವತಿ ಅವರ ಕವಿತೆಗಳಲ್ಲಿ ಹೆಣ್ಣಿನ ಸಂಕಥನಗಳು ಹೀಗಿವೆ:

9. ಅರಿಯದೆ ದುಡುಕಿದ
 ಸೀತೆಯಲ್ಲ ಇವಳು 
ಅಸಮಾನತೆಯ ಉರಿಯಲ್ಲಿ
 ತೆಪ್ಪಗಿರಲಾಗದೆ ಸಿಡಿದ
 ಒಗ್ಗರಣೆಯ ಸಾಸಿವೆ ಇವಳು.
 ಹೌದು, ಸಹನಾಮೂರ್ತಿ 
ಪಟ್ಟದೊಡತಿ 
ಪಟ್ಟ ತೊರೆದಿದ್ದಾಳೆ
 ನಡೆವ ಹಾದಿಯಲ್ಲಿ ಗೆರೆ 
ಮೂಡಿಸುವ ಛಲದಿ
 ಗೆರೆ ದಾಟಿದ್ದಾಳೆ.


13. ಅವಳು 
ಸುತ್ತಿಟ್ಟ ಚಾಪೆಯೊಳಗೆ 
ಮಡಿಚಿಟ್ಟ ಸುಕ್ಕು ಸುಕ್ಕಾದ
 ನೆನಪುಗಳನ್ನೇ
 ಪದೇ ಪದೇ ಮೆಲ್ಲುತ್ತಾ
 ನಾಳೆಯ ಕನಸಿಗೆ
 ಬಸುರಾದವಳು.


ಮನುಷ್ಯ, ಮನುಷ್ಯತ್ವದ ಹುಡುಕಾಟ ಹಲವು ಕವಿತೆಗಳಲ್ಲಿವೆ:

22. ದಾಹ ತೀರದ 
ಮನುಷ್ಯ 
ಮಣ್ಣನ್ನೇ ಬಗೆದು 
ಸಿಕ್ಕಿಸಿಕ್ಕಿದ್ದನ್ನು 
ದೋಚಿದ 
ಹಗೆ ಸಾಧಿಸಿದ ಮಣ್ಣು
 ತನ್ನೊಳಗೆ 
ಹೂತುಹಾಕಿತು!

129. ಎಲ್ಲರಿಗಿಂತ ಹೆಚ್ಚಾಗಿ
 ಬಿಡದೆ ಹುಚ್ಚಾಗಿ
 ನಮ್ಮನ್ನೇ ನಾವು 
ಪ್ರೀತಿಸುತ್ತೇವೆ 
ಉದಾಹರಣೆಗೆ ಗ್ರೂಪ್ ಫೋಟೋದಲ್ಲಿ 
ನಮ್ಮನ್ನೇ ಹುಡುಕುತ್ತೇವೆ

158.  ನಿನ್ನ ನೆನಪಿನ ಸುತ್ತ 
ಬೇಕಂತಲೇ 
ಮರೆವಿನ ಹುತ್ತ
 ಬೆಳೆಸಿಕೊಂಡಿದ್ದೆ.
ಅಲ್ಲೂ ಅಲ್ಲಲ್ಲಿ 
ಹರಿದಾಡಿದ ನೆನಪ
ಗೆದ್ದಲು ನಿನ್ನನ್ನೇ 
ನೆನಪಿಸಿದವು 
ಹುತ್ತ ಕೆಡವಿದ್ದೇನೆ!


190 ಹೃದಯ ಹೊಲವ 
ಉಳುಮೆ ಮಾಡಿ 
ನೆನಪ ಬೀಜ ಬಿತ್ತಿ ಅಲ್ಲಿ 
ಮೊಳೆವ ಬಾಲ್ಯದ ಚಿಗುರಿಗಾಗಿ 
ಕಾಯುತ್ತಿರುವೆನು 
ಮನದ ಬನದೊಳಲ್ಲಿ
 ನಿನ್ನ ಹುಡುಕುತ್ತಿರುವೆನು


ನಿಸರ್ಗದ ಬೆರಗು ಕಾವ್ಯವಾಗುವ ಬಗೆ ಹೀಗೆ:

55.
 ತಂತಿ ಮೇಲಣ
 ಇಬ್ಬನಿಯಲ್ಲಿ 
ಎಷ್ಟೊಂದು ಕನಸುಗಳು 
ಬಿದ್ದರೆ ನುಚ್ಚುನೂರು 
ಇದ್ದರೆ ಭಾಷ್ಪೀಕರಣ
 ಬೊಗಸೆ ಹಿಡಿದು
 ಕಾಪಿಟ್ಟರಷ್ಟೆ ಕನಸರಳುವುದು.

ತತ್ವ ಸಿದ್ಧಾಂತಗಳಿಗಿಂತ ಮಾನವೀಯತೆಯೇ ಮುಖ್ಯ ಎನ್ನುವ ಕವಿತೆಗಳು ಹೆಚ್ಚು ಜೀವ ಪರವಾಗಿ ಕಾಣಿಸುತ್ತವೆ:

101 ಕೆರಳಿಸಿದ್ದು ಅವರ 
ತತ್ವ ಸಿದ್ಧಾಂತಗಳು
 ಬಲಿಯಾಗಿದ್ದು 
ಅವರು
 ಸಿದ್ಧಾಂತಗಳು ಅಜರಾಮರ!


106 ಕಾಲದ ಗಾಳಿಯ
 ರಭಸವನ್ನೆದುರಿಸಿ 
ನೆಲ ಹಾಗೇ ಇದೆ 
ಮರ ಹಾಗೇ ಇದೆ
 ಬೇಲಿಯೂ ಇದೆ
 ಬೇಲಿ ಆ ಕಡೆ ಈ ಕಡೆ
 ಝಳಪಿಸಿದ ಕತ್ತಿಯೂ ಇದೆ
 ಸುರಿದ ರಕ್ತದ ಕುರುಹು ಇದೆ
 ಝಳಪಿಸಿದವರು ಮಾತ್ರ
 ಎಲ್ಲೂ ಕಾಣಲಿಲ್ಲ!

210 ಎಡಬಲ ನಿಂತವರ
 ಕೂಗಾಟ ಹಾರಾಟ
 ಅಬ್ಬರ ಆರ್ಭಟ
 ಧಿಕ್ಕಾರ ಮುಷ್ಕರ
 ಇದ್ದಕ್ಕಿದ್ದಂತೆ ಇಬ್ಬರನ್ನೂ 
 ಬಾಧಿಸಿದ್ದು ಮಾತ್ರ ಹಸಿವು
 ಉಂಡಿದ್ದು ಅನ್ನ 
ಹೊಟ್ಟೆ ತುಂಬಿದ ಮೇಲೆ 
ಮತ್ತೆ ಕೆಸರೆರಚಾಟ 
ಹೊಟ್ಟೆ ತುಂಬಿಸಿದವನು ಮಾತ್ರ
 ಇನ್ನೂ ಕೆಸರಲ್ಲೇ ಇದ್ದ 
ತನ್ನ ಎಡಬಲ ಸುತ್ತಮುತ್ತ 
ಹಸಿರಾಗಿಸಲು!


'ಹನಿ ಹನಿ ಇಬ್ಬನಿ'ಯಲ್ಲಿ ಶಬ್ದದ ಅಬ್ಬರವಿಲ್ಲ. ಹನಿಗವನಗಳು ಕೇವಲ ಶಬ್ದ ಚಮತ್ಕಾರವಲ್ಲ ಎಂಬ ಅರಿವು ಲೀಲಾಕುಮಾರಿ ತೊಡಿಕಾನ ಅವರಿಗಿರುವುದು ಸಂತೋಷದ ಸಂಗತಿ. (ಆದರೆ ಭಾಷೆ ಮತ್ತು ಭಾವಗಳನ್ನು ಇನ್ನಷ್ಟೂ ಘನೀಕರಿಸಿ ಹೇಳಿದರೆ ಹೆಚ್ಚು ಅರ್ಥ ಮತ್ತು ಧ್ವನಿಯನ್ನು ಪಡೆದುಕೊಳ್ಳುತ್ತವೆ).  ಕೃತಿಯ ಮುನ್ನುಡಿ ಬರೆದ ಅವರ ಅವರ ಗುರುಗಳಾದ ಎಂ ಶಿವಣ್ಣ ನೆಲಮನೆ ಅವರು ಈ ಕೃತಿ ಬಿಡುಗಡೆಯಾಗುವ ಹೊತ್ತಿನಲ್ಲಿ ಬದುಕುಳಿದಿರಲಿಲ್ಲ ಎನ್ನುವುದು ದುಃಖದ ಸಂಗತಿ.
*
ಕಾಜೂರು ಸತೀಶ್ 

Thursday, August 17, 2023

ಗೊಂಬೆ



ಹಾಲಿನ ಪರಿಮಳ ಹೊದ್ದ ಹಸುಳೆಯ ಭೋಗಿಸಿ ಎಸೆದ ಮೇಲೆ
ಮುದ್ದಾದ ಗೊಂಬೆಯೊಂದನ್ನು ಕೊಂಡು ಮನೆಗೆ ಮರಳಿದ.
*


ಮಲಯಾಳಂ ಮೂಲ- ಸಿನಿ ಪ್ರದೀಶ್

ಕನ್ನಡಕ್ಕೆ- ಕಾಜೂರು ಸತೀಶ್ 

ದೂರ


ವರುಷಗಳ ಅನಂತರ
ದಿವಾಕರ
ಅಪ್ಪನನ್ನು ನೋಡಲು
ವೃದ್ಧಾಶ್ರಮಕ್ಕೆ ತಲುಪಿದ

ಒಂದಿಷ್ಟೂ ಆಸಕ್ತಿ ತೋರದೆ
ದಿವಾಕರನ ಹೆಂಡತಿ
ಸಾಕುನಾಯಿ ಜಿಮ್ಮಿಯೊಡನೆ
ಕಾರಿನಲ್ಲೇ ಕುಳಿತಳು

ಜಿಮ್ಮಿಯನ್ನು ಕರ್ಕೊಂಡ್ಬರ್ಲಿಲ್ವಾ?
ಅಪ್ಪ ಕೇಳಿದರು
ಇಷ್ಟು ದೂರ ಬರುವಾಗ 
ಹೇಗಪ್ಪಾ ಅವ್ನನ್ನು
ಒಬ್ನೇ ಮನೇಲಿ ಬಿಟ್ಟು ಬರೋದು?
*


ಮಲಯಾಳಂ ಮೂಲ- ಸತೀಶನ್ ಮೋರಾಯಿ

ಕನ್ನಡಕ್ಕೆ- ಕಾಜೂರು ಸತೀಶ್ 

Monday, July 31, 2023

ನನ್ನ ಮಾತು



ನನ್ನ ಮಾತು
ಬಸ್ಸಿನ ಕಿಟಕಿಯ ಸೀಟು ಬಿಟ್ಟು
ಈಚೆಗೆ ಬಂದು ಕೂರುತ್ತದೆ
ಗಾಳಿಮಳೆಯಲ್ಲಿ ನೆನೆದ
ಹಾಡುಗಳನ್ನು ಆಸ್ವಾದಿಸದೆ
ಮರುದಿನದ ಮಧ್ಯಾಹ್ನದ ಊಟಕ್ಕೆ
ಮಕ್ಕಳಿಗೇನು ಸಾರು ಮಾಡಲೆಂದು
ಲೆಕ್ಕ ಹಾಕುತ್ತದೆ

ಬಸ್ಸಿಂದಿಳಿದು
ಹಾದಿಬದಿಯ ಚೆಲುವನ್ನು ಆಸ್ವಾದಿಸದೆ
ಬಹುಬೇಗ ಹಾದಿ ಸಾಗಲೆಂದು
ಬಿರಬಿರನೆ ಹೆಜ್ಜೆಯಿಟ್ಟು
ಬೆವರಲ್ಲಿ ಸ್ನಾನಮಾಡಿ ಮನೆಸೇರುತ್ತದೆ

ಕತ್ತಲಾಗುವ ಕುರುಹುಗಳನ್ನು
ಒಲೆಯಲ್ಲಿಟ್ಟು ಕುದಿಸುತ್ತದೆ

ಬೆಳುಬೆಳದಿಂಗಳು ಮನೆಯನ್ನಾವರಿಸುವ
ಬೆರಗನ್ನು ಅರಿತೂ ಅರಿಯದಂತೆ
ಬಟ್ಟೆಗಳ ಮಡಚಿಟ್ಟು
ಪಾತ್ರೆಗಳ ತೊಳೆದಿಟ್ಟು
ತಡವಾಗಿ ಮಲಗುತ್ತದೆ
ನುಸುಳುವ ಕನಸುಗಳನ್ನು
ಮುಲಾಜಿಲ್ಲದೆ ಹೊರಗೇ ನಿಲ್ಲಿಸುತ್ತದೆ

ನನ್ನ ಮಾತು
ಬೆಳಿಗ್ಗೆ ಬೇಗ ಎದ್ದು
ಕಲ್ಪನೆಗಳಲಿ ಮುಳುಗೇಳದೆ
ಕಾಫಿ ಕುಡಿದು
ಯಾರ ಗಮನಕ್ಕೂ ಬರದಂತೆ
ಮನೆಯ ಒಳಗೆ, ಹಿತ್ತಿಲಿನಲ್ಲಿ
ಬಾವಿಯಲ್ಲಿ ಅಲೆದು 'ತೀರು'ತ್ತದೆ.
*
ಮಲಯಾಳಂ ಮೂಲ- ರಗಿಲ ಸಜಿ


ಕನ್ನಡಕ್ಕೆ- ಕಾಜೂರು ಸತೀಶ್

Sunday, July 30, 2023

ಎಲ್ಲವೂ ರಹಸ್ಯವಾಗಿಯೇ ಉಳಿದಿತ್ತು


ಅಪಾರ ಜನಸಂದಣಿಯಲ್ಲಿ
ಬೆರಳಿಗೆ ಬೆರಳು ಸೇರಿಸಿ ನಡೆದದ್ದು

ಡೈನಿಂಗ್ ಟೇಬಲಿನಲ್ಲಿ ಎದುರುಬದುರಾಗಿ ಕುಳಿತು
ಕಾಲಿಗೆ ಕಾಲು ತಾಗಿಸಿದ್ದು

ಸ್ಕೂಟರಿನ ಕನ್ನಡಿಯನ್ನು 
ನಿನಗೆ ನಾನು ನನಗೆ ನೀನು ಕಾಣುವ ಹಾಗೆ
ಜಾಣ್ಮೆಯಿಂದ ಹೊಂದಿಸಿ
ಹಿಂದೆ ಮುಂದೆ ರಸ್ತೆಯ ತುಂಬಾ ಸಾಗಿ
ಪರಸ್ಪರ ಮುಖನೋಡಿಕೊಂಡಿದ್ದು

ಹೆಸರನ್ನೇ ಬರೆಯದ ಉಡುಗೊರೆಗಳಿಗೆ
ಪ್ರೀತಿಯ ಹೊದಿಕೆ ಹಾಕಿ ರವಾನಿಸಿದ್ದು

ಯಾರನ್ನೋ ನೋಡುತ್ತಿರುವ ಹಾಗೆ
ರೆಪ್ಪೆಗಳ ಮಿಟುಕಿಸದೆ
ಸನಿಹಕೆ ಬಂದು ಕಡಲ ತಡಿಯಲ್ಲಿ ನಿಂತದ್ದು

ಒಂದೇ ಅಲೆಯಲ್ಲಿ ಮಿಂದ
ನಮ್ಮಿಬ್ಬರ ನಿಶ್ವಾಸವನ್ನು ಪರಸ್ಪರ ಉಸಿರಾಡಿದ್ದು

ಎಲ್ಲವೂ ರಹಸ್ಯವಾಗಿಯೇ ಉಳಿದಿತ್ತು.

ನಮ್ಮಿಬ್ಬರ ಸ್ಕೂಟರುಗಳು
ಒಂದೇ ಲಾರಿಯ ಚಕ್ರಕ್ಕೆ ಸಿಲುಕಿ
ನರಳಾಡಿ ಸಾಯುವವರೆಗೆ
ಎಲ್ಲವೂ ರಹಸ್ಯವಾಗಿಯೇ ಉಳಿದಿತ್ತು.
*
ಮಲಯಾಳಂ ಮೂಲ- ರಗಿಲ ಸಜಿ


ಕನ್ನಡಕ್ಕೆ- ಕಾಜೂರು ಸತೀಶ್ 

Saturday, July 29, 2023

ತೋಳ


-1-
ತೋಳದ ಕಣ್ಣುಗಳು ಕೆಂಪು ಕೆಂಡದಂತಿವೆ.

ದಿಟ್ಟಿಸಿ ನೋಡಿ ನೀವು ಅದನ್ನು
ಅದರ ಕಣ್ಣ ಕೆಂಪು ನಿಮ್ಮ ಕಣ್ಣಿಗೆ ಬರುವವರೆಗೆ 

ಇನ್ನೇನು ಮಾಡಲು ಸಾಧ್ಯ ನಿಮಗೆ
ಅದು ನಿಮ್ಮೆದುರಿಗೇ  ನಿಂತುಬಿಟ್ಟರೆ?

ನೀವು ಮುಖ ಮುಚ್ಚಿಕೊಳ್ಳಬಹುದು
ತಪ್ಪಿಸಿಕೊಂಡು ಓಡಬಹುದು
ಆದರೂ ನಿಮ್ಮ ಒಳಗೊಂದು ತೋಳ
ನಿಂತುಬಿಟ್ಟಿರುತ್ತದೆ ಹಾಗೇ ಒಂದಿಷ್ಟೂ ಕದಲದ ಹಾಗೆ

ತೋಳದ ಕಣ್ಣುಗಳು ಕೆಂಪು ಕೆಂಡದಂತಿವೆ
ಮತ್ತೀಗ ನಿಮ್ಮ ಕಣ್ಣುಗಳು ?

-2-
ತೋಳ ಊಳಿಡುತ್ತದೆ
ನೀವೊಂದು ದೀಪ ಬೆಳಗಿಸಿ
ಅದರ ಮೈಮೇಲೆ ಬೆಳಕ ಚೆಲ್ಲಿ
ನಿಮ್ಮ ಮೈಯ್ಯ ಮೇಲೂ

ಒಂದೇ ಒಂದು ವ್ಯತ್ಯಾಸವೆಂದರೆ
ತೋಳಕ್ಕೆ ದೀಪ ಹಚ್ಚಲು ಬರುವುದಿಲ್ಲ 

ಈಗ ಆ ದೀಪವನ್ನೆತ್ತಿಕೊಳ್ಳಿ
ತೋಳದ ಬಳಿ ಸಾಗಿರಿ
 ಓಟಕ್ಕೀಳುತ್ತವೆ ಅವೆಲ್ಲಾ 

ಸಾವಿರ ಸಾವಿರ ಕೈಗಳಲ್ಲಿ
ಕಂದೀಲು ಹಿಡಿದು
ಪೊದೆಯಿಂದ ಪೊದೆಗೆ ನುಗ್ಗಿರಿ
ದಿಕ್ಕು ತಪ್ಪಿ ಓಡುತ್ತವೆ ಅವು
ಒಂದೂ ಉಳಿಯದಂತೆ

ಆಮೇಲೆ ಕಾಡಿನಿಂದ ಹೊರಗೆಸೆಯಿರಿ 
ಎಸೆದುಬಿಡಿ ಅವನ್ನು ಹಿಮದ ಮೇಲೆ
ಹಸಿದ ಅವು ಊಳಿಡುತ್ತವೆ ತಮ್ಮತಮ್ಮಲ್ಲೇ
ಸಿಗಿದು ತಿನ್ನುತ್ತವೆ ಒಂದನ್ನೊಂದು

ತೋಳಗಳು ಸಾಯುತ್ತವೆ
ಮತ್ತೆ ನೀವು?

- 3-
ಮತ್ತೆ ಬರುತ್ತದೆ ತೋಳ

ಇದ್ದಕ್ಕಿದ್ದಂತೆ ಒಂದು ದಿನ
ನಿಮ್ಮಲ್ಲೊಬ್ಬರು ತೋಳವಾಗುತ್ತೀರಿ
ಒಂದು, ನೂರು, ಸಾವಿರವಾಗಿ
ವೃದ್ಧಿಸುತ್ತದೆ ಸಂತತಿ

ನಿಜಕ್ಕೂ ಬರಬೇಕಿದೆ ತೋಳ
ನಿಮ್ಮನ್ನು ನೀವು ನೋಡಿಕೊಳ್ಳಲು
ನಿಮ್ಮ ನೀವು ಪ್ರೀತಿಸಲು
ಭಯರಹಿತ ಸ್ಥಿತಿಯನ್ನು ಸುಖಿಸಲು
ಗೆಲುವಿನಿಂದ ದೀಪ ಹಚ್ಚಲು

ಚರಿತ್ರೆಯ ಕಾಡಿನಲ್ಲಿ 
ಗುಂಪಿನಿಂದ ಹೊರಹಾಕಲ್ಪಡುತ್ತದೆ ತೋಳ ಪ್ರತೀ ಬಾರಿಯೂ
ಆಗ ಮನುಜರೆಲ್ಲ ಒಂದಾಗಿ
ಕಂದೀಲು ಹಿಡಿದು ನಿಲ್ಲುತ್ತಾರೆ

ಚರಿತ್ರೆ ಜೀವಂತವಾಗುತ್ತದೆ
ನೀವೂ
ಮತ್ತು
ತೋಳವೂ.
*
ಹಿಂದಿ ಮೂಲ- ಸರ್ವೇಶ್ವರ ದಯಾಳ್ ಸಕ್ಸೇನ


ಕನ್ನಡಕ್ಕೆ- ಕಾಜೂರು ಸತೀಶ್

Wednesday, July 26, 2023

ಪ್ರೇಯಸಿಯೂ ಮತ್ತು ಹೆಂಡತಿಯೂ


ಹೆಂಡತಿ ತೀರಿಕೊಂಡ ದಿನ
ಬೆಳ್ಳಂಬೆಳಿಗ್ಗೆಯೇ ಅವಳು ಕರೆಮಾಡಿದಳು
'ಯಾವಾಗ ಬರ್ತೀಯ?'
'ಬೆಳಿಗ್ಗೆ'- ಅವನೆಂದ.

ಮುಖ ತೊಳೆದು
ಇಸ್ತ್ರಿ ಮಾಡಿದ ಬಟ್ಟೆ ಹಾಕ್ಬೇಡ
ಶೇವ್ ಮಾಡ್ಬೇಡ
ಮನೆಯ ಹಿಂದೆ ಬ್ಲ್ಯಾಕ್ ಟೀ ಮಾಡ್ತಿರ್ತಾರೆ
ಒಂದ್ಕಪ್ಪು ಕುಡಿದ್ಬಿಡು
ತೀರ್ಕೊಂಡವಳು ಬರ್ತಾಳಾ ಅಂತ
ಅಂಗಳದಲ್ಲಿ ಕಾಯ್ಕೊಂಡಿರು-
ನೆನಪಿಸಿದಳು ಅವಳು.

ನಂಗೆ ಕರಿಕಾಫಿ ಇಷ್ಟವಿಲ್ಲ
ಸಾವಿನ ಮನೆಯಲ್ಲಿ 
ಹಾಲು ಯಾಕೆ ಬಳಸ್ಬಾರ್ದು- ಕುಪಿತನಾದ
ಇವತ್ತೊಂದಿನ ತಡಿ- ಅವಳೆಂದಳು
ಸುಮ್ಮನಾದ.

ಬೇಜಾರಾ? ಕೇಳಿದಳು
ಗೊತ್ತಿಲ್ಲ ಎಂದ
ಇವತ್ತು ಅಳೋದೇ ಇರ್ಬೇಡ
ಜನ ನೋಡ್ತಿರ್ತಾರೆ- ಅವಳೆಂದಳು
ಅಳು ಬರದೆ ಹೇಗೆ ಅಳೋದು- ಅವನೆಂದ

ಹಳೆಯದೇನಾದ್ರೂ ನೆನಪಿಸ್ಕೊ
ಸುಡುಬೇಸಿಗೆಯ ಬಾವಿಯ ಹಾಗೆ
ಮಾತಲ್ಲಿ ನೋಟದಲ್ಲಿ
ಆಳದ ಪ್ರೀತಿಯನ್ನೆಲ್ಲ ಹೊರತೆಗೆದು 
ಬತ್ತುವ ಮೊದಲಿನ ಕಾಲದ ಏನನ್ನಾದರೂ ನೆನಪಿಸ್ಕೊ

ಏನೂ ನೆನಪಾಗಲಿಲ್ಲ
ನೀರಲ್ಲದ್ದಿದ ಬಣ್ಣಗಳಂತೆ
ಬೆರೆತುಹೋದವು ಒಂದರೊಳಗೊಂದು
ಏನಾದ್ರೂ ಸಿಕ್ಕೇ ಸಿಗುತ್ತೆ  ಯೋಚಿಸ್ತಿರು-
ಅವಳ ಸಲಹೆ

ಮದುವೆ ಸೀರೆ 
ಕಡುಹಸಿರು ಬಣ್ಣದ್ದೇ ಬೇಕೆಂದೂ
ಕುಪ್ಪಸದಲ್ಲಿ ನಕ್ಷತ್ರಾಕಾರದ 
ಸ್ವರ್ಣವರ್ಣದ ಚುಕ್ಕಿಗಳಿರಬೇಕೆಂದೂ
ಬರೆದ ಪತ್ರಗಳ ಭೂತಕಾಲದೊಳಗಿಣುಕಿ ನೆನೆದ
ಚಿಂತಿಸಿದ

ಕಡುಹಸಿರಿನ ಬದಲಿಗೆ
ಕಡುಗೆಂಪು ಸೀರೆಯ ಕೊಟ್ಟ
ನಕ್ಷತ್ರಗಳ ಬದಲು ಖಾಲಿ ಕುಪ್ಪಸ
ಅವಳ ನೋಯಿಸಿದೆನೆಂದು ಯೋಚಿಸಿದ
ಇನ್ನು ಅದೆಲ್ಲಾ ಅಸಾಧ್ಯವೆಂದು ನೆನೆದು
ನಿಜಕ್ಕೂ ದುಃಖಿಸಿದ.

ಯೋಚಿಸುತ್ತಲೇ ಇದ್ದ
ಅವಳಿಗೆ ನೀಡಲಾಗದ್ದು
ಅವಳಿಂದ ಪಡೆಯಲಾಗದ್ದು..
ಲೆಕ್ಕವಿಲ್ಲ.
ತಪ್ಪಿತಸ್ಥನ ಭಾವ ಮೂಡಿ
ಕಣ್ಣು ತುಂಬಿ ಕೆಂಪಗಾಗುತ್ತದೆಂದು
ನೆನಪಿಸಿದಳು ಫೋನಿನಲ್ಲಿ.

ನಾನೂ ಬರುತ್ತಿರುವೆ
ಅವಳನ್ನು ಮೊದಲು ಮತ್ತು ಕಡೆಯ ಬಾರಿ ನೋಡಲು
ನೀನು- ತೀರಿಕೊಂಡ ಅವಳ ಬಳಿ
ದುಃಖಿತನಾಗಿರುವುದ ನೋಡಿ
ನನ್ನ ಕಣ್ಣುಗಳು ತುಂಬುತ್ತವೆ
ಕಪ್ಪು ಗೆರೆಗಳುಳ್ಳ ಸೀರೆಯ ಸೆರಗ ತುದಿಯಲ್ಲಿ
ಬಾಯ್ಮುಚ್ಚಿ ಅಳು ನಿಲ್ಲಿಸುತ್ತೇನೆ
ಅವಳ ಮೇಲಿನ ಪ್ರೀತಿಯಿಂದಲ್ಲ
ಅವಳ ನೆನೆನೆನೆದು ಅಳುವ ನಿನ್ನ ಕಂಡು-
ಅವಳೆಂದಳು ಫೋನಿನಲ್ಲಿ.
*
ಮಲಯಾಳಂ ಮೂಲ- ಜಿಸಾ ಜೋಸ್


ಕನ್ನಡಕ್ಕೆ- ಕಾಜೂರು ಸತೀಶ್

Monday, July 24, 2023

ಪಾಪಪ್ರಜ್ಞೆ, ಪತನ ಮತ್ತು ವಿಮೋಚನೆ

ಪ್ರೇಮ್ ಸಾಗರ್ ಕಾರಕ್ಕಿ ಅವರು ಇಂಗ್ಲಿಷ್ ಸಾಹಿತ್ಯ ಅಧ್ಯಯನಕಾರರು. ವೃತ್ತಿಯಲ್ಲಿ ಆಂಗ್ಲ ಉಪನ್ಯಾಸಕರು. ಅವರ ಚಿಂತನಾಕ್ರಮದಲ್ಲಿ ಪೂರ್ವಗ್ರಹಗಳಿಂದ ಹೊರತಾದ ಅನನ್ಯ ನೋಟಗಳನ್ನು ಗಮನಿಸಬಹುದು. ವರ್ತಮಾನಕ್ಕೆ ಸ್ಪಂದಿಸುವಾಗ, ಅಥವಾ ಎಂತಹದ್ದೇ ಸಾಹಿತ್ಯಿಕ/ರಾಜಕೀಯ/ ಮಾನವಿಕ ವಿಷಯಗಳ ವಿಶ್ಲೇಷಣೆಯ ಸಂದರ್ಭದಲ್ಲಿ ಹೆಚ್ಚು ಖಚಿತವಾದ ನಿಲುವುಗಳನ್ನು ವ್ಯಕ್ತಪಡಿಸಬಲ್ಲವರು ಪ್ರೇಮ್ ಸಾಗರ್.


ಕಮೂವನ್ನು ಅವರು ಎಷ್ಟು ಆವಾಹಿಸಿಕೊಂಡಿದ್ದಾರೆ ಎನ್ನುವುದಕ್ಕೆ ಈ ಕೃತಿ ಸಾಕ್ಷಿ. ಕಮೂ ಬಂದು ಅವರ ಒಳಗೆ ಕುಳಿತು ಕತೆ ಹೇಳುತ್ತಿರುವಾಗಿನ ಧಾಟಿ ಅದು. ಅನುವಾದ ಮುಗಿದ ಮೇಲೆ 'ನಾನೊಂದು ಕಾದಂಬರಿ ಬರೆದು ಮುಗಿಸಿದೆ' ಎಂಬ ಭಾವ ಅವರಿಗೆ ಬಂದಿರುವಷ್ಟು 'ಒಳಗಿನಿಂದ' ಈ ಕೃತಿ ರಚನೆಯಾಗಿದೆ (ಒಂದು ದಶಕದ ಧ್ಯಾನದ ಫಲ !).
*
ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಆಲ್ಜೀರಿಯನ್ ಮೂಲದ ಫ್ರೆಂಚ್ ಬರಹಗಾರ ಆಲ್ಬರ್ಟ್ ಕಮೂ . ದಿ ಫಾಲ್ ಅವನ ಕೊನೆಯ ಕಾದಂಬರಿ. ಅವನ ಹಿಂದಿನ ಕಾದಂಬರಿಗಳಾದ 'ದಿ ಸ್ಟ್ರೇಂಜರ್' ಮತ್ತು 'ದ ಪ್ಲೇಗ್' ನಲ್ಲಿ ಕಂಡುಬರುವ ತಂತ್ರ 'ದಿ ಫಾಲ್' ನಲ್ಲಿಲ್ಲದಿದ್ದರೂ, ಆ ಕೃತಿಗಳಲ್ಲಿ ಇರುವಂತೆ ವೈಯಕ್ತಿಕ ಸ್ವಾತಂತ್ರ್ಯ, ಮಾನವ ಸಂಬಂಧಗಳು, ಪ್ರಾಮಾಣಿಕ ಜೀವನದ ಸ್ವರೂಪ, ಸತ್ಯ, ನ್ಯಾಯ ನಿರ್ಣಯ, ಸಾವು, ಅಸ್ತಿತ್ವದ ಆಲೋಚನೆಗಳಿವೆ. ಪಾಪಪ್ರಜ್ಞೆಯ ಹಲವು ನೆಲೆಗಳನ್ನು ಶೋಧಿಸುವ ಕೃತಿ ಇದು. ಬಯೋಗ್ರಫಿಕಲ್ ಚಹರೆಗಳೂ ಹೆಚ್ಚಿವೆ ಇಲ್ಲಿ.


ಇದೊಂದು ಸ್ವಗತಗಳ ಸರಣಿ. ಕಥಾನಾಯಕ ಜ್ಯೀನ್ ಬಾಪ್ಟಿಸ್ಟ್ ಕ್ಲೆಮೆನ್ಸ್ ಸ್ವಗತದ ಮೂಲಕ ತನ್ನ ಬದುಕನ್ನೂ ಸಮಾಜವನ್ನೂ ಮುಚ್ಚುಮರೆಯಿಲ್ಲದೆ ತೆರೆದು ತೋರಿಸುತ್ತಾನೆ. ಆತ ಮಾಜಿ ನ್ಯಾಯವಾದಿ. ಕಾದಂಬರಿಯು ಆಮ್ಸ್ಟರ್ಡಾಂನ ಮೆಕ್ಸಿಕೋ ಸಿಟಿ ಎಂಬ ಬಾರಿನಲ್ಲಿ ಫ್ರೆಂಚ್ ಅಪರಿಚಿತನೊಡನೆ ಬಾರಿನ ಡಚ್ ಮಾಲೀಕನ ಕುರಿತು ಹೇಳುವಲ್ಲಿ ತೆರೆದುಕೊಳ್ಳುತ್ತದೆ. ಇಡೀ ಕಾದಂಬರಿಯ ಏಕಮಾತ್ರ ಧ್ವನಿ ಕ್ಲೆಮೆನ್ಸ್ . ಕಾದಂಬರಿಯು ತೀರಾ ಸಹಜವಾದ ಸಂಗತಿಗಳನ್ನು ಮಾತಿಗೆ ತೆಗೆದುಕೊಂಡು ಮುಂದೆ ಗಂಭೀರವಾಗಿ ಫಿಲಾಸಾಫಿಕಲ್ ನೆಲೆಗಳನ್ನು ಮುಟ್ಟುತ್ತದೆ. ಅದು ಏರ್ಪಡುವುದು ಬಾರಿನಲ್ಲಿ ಮತ್ತು ಆಮ್ಸ್ಟರ್ಡಾಂನ ರಸ್ತೆಗಳಲ್ಲಿ. ಓದುಗರನ್ನು ಹಿಡಿದಿಡಲು ತಾನೇ ಸಹವರ್ತಿಯ ಪ್ರಶ್ನೆಗಳನ್ನು ಸೃಷ್ಟಿಸಿಕೊಂಡು ಅದಕ್ಕೆ ಪರಿಹಾರವನ್ನು ಹುಡುಕುತ್ತಾನೆ ಕ್ಲೆಮೆನ್ಸ್.


ಮೊದಮೊದಲ ಅವನ ವೈಯಕ್ತಿಕ ಜೀವನಾನುಭವಗಳು ಗೆಲುವಿನಿಂದಲೂ ಪ್ರಾಮಾಣಿಕತೆಯಿಂದಲೂ ಕೂಡಿದ್ದವು. ಆ ಸಂಭ್ರಮ ಅವನ ಮಾತುಗಳಲ್ಲೇ ಧ್ವನಿಸುತ್ತಿತ್ತು. ಅಸಹಾಯಕರಿಗೆ ವಿಧವೆಯರಿಗೆ ಮಾತ್ರ ನ್ಯಾಯದಾನ ಮಾಡುತ್ತಿದ್ದವನು. ಎಂದೂ ಭ್ರಷ್ಟನಾಗದೆ ದುಡಿಯುತ್ತಿದ್ದವನು ಕ್ಲೆಮೆನ್ಸ್ . ಲೋಕಚಿಂತನೆಯ ಹಿನ್ನೆಲೆಯಲ್ಲಿ ನ್ಯಾಯವಾದಿ ವೃತ್ತಿಗೆ ರಾಜೀನಾಮೆ ನೀಡಿದ ಮೇಲೆ ಅವನ ಬೆನ್ನುಬೀಳುವುದು ಪಾಪಪ್ರಜ್ಞೆ ಮತ್ತು ಅವನ ಹೆಸರಿನೊಂದಿಗೇ ಇರುವ ಪಶ್ಚಾತ್ತಾಪ.

ಮನುಷ್ಯನ ನೈತಿಕ ಪತನ ಮತ್ತು ಅದರಿಂದ ಪಾರಾಗಲು ನಡೆಸುವ ಹೋರಾಟವೇ 'The Fall'. ಆತ್ಮರತಿಯಲ್ಲಿ ಮುಳುಗಿಹೋದವನಿಗೆ ಉಳಿದುದೇನೂ ನೆನಪಾಗುವುದಿಲ್ಲ. ಮಾಡಿದ ಹಲವು ಹೆಣ್ಣುಗಳ ಸಂಪರ್ಕದ ನೆನಪಿರುವುದಿಲ್ಲ, ಸೇತುವೆಯ ಬಳಿ ನಿಂತುಕೊಂಡಿದ್ದ ಹೆಂಗಸು ಇವನು ಮುಂದೆ ಸಾಗುವಷ್ಟರಲ್ಲಿ ನದಿಗೆ ಬಿದ್ದು ಆರ್ತನಾದಗೈಯ್ದರೂ ಇವನಿಗೆ ಹಿಂತಿರುಗಿ ನೋಡಬೇಕೆನಿಸುವುದಿಲ್ಲ.


ಕೊನೆಗೆ ತನ್ನ ಪತನದ ಸುಳಿವುಗಳನ್ನು ಅರಿತ ಕ್ಲೆಮೆನ್ಸ್ ಬದುಕಿನ ನಿರರ್ಥಕತೆಯನ್ನು ಪ್ರಶ್ನಿಸಿದ. ಫ್ರಾನ್ಸ್ ತೊರೆದು ಆಮ್ಸ್ಟರ್ಡಾಂಗೆ ಬಂದರೂ ತನ್ನ ಪತನದ ನೆನಪುಗಳು ಅವನ ಬೆನ್ನುಹತ್ತಿದವು.
ತನ್ನ ತಪ್ಪುಗಳನ್ನು ಕ್ರಿಸ್ತನ ತಪ್ಪುಗಳೊಂದಿಗೆ ಸಮೀಕರಿಸಿ ಹಗುರಾಗಲು ಬಯಸಿದ  . ನಾಸ್ತಿಕನಾದ ಅವನು ತನ್ನನ್ನು ದೈವವು ಶಿಕ್ಷಿಸುವುದಿಲ್ಲ. ಶಿಕ್ಷಿಸುವುದೇನಿದ್ದರೂ ಮನುಷ್ಯರು ಮಾತ್ರ  ಎಂದು ನಂಬಿದ. ಮನುಷ್ಯನು ಮಾತ್ರ ತೀರ್ಪು ನೀಡಬಹುದು. ತೀರ್ಪು ನೀಡುವ ವ್ಯಕ್ತಿಯು ತಪ್ಪಿತಸ್ಥನಾದರೆ, ಅವನು ಅಪಹಾಸ್ಯಕ್ಕೆ ಒಳಗಾಗುತ್ತಾನೆ, ಕಪಟಿ ಎಂದು ನಿರ್ಣಯಿಸಲ್ಪಡುತ್ತಾನೆ. ಈ ಸಾಕ್ಷಾತ್ಕಾರಗಳಿಂದ ಕ್ಲೆಮೆನ್ಸ್  ಪರಿಹಾರವನ್ನು ಕಂಡುಕೊಂಡ: ಅವನು ತನ್ನ ಪಾಪಗಳನ್ನು ಇತರರಲ್ಲಿ ಹೇಳಿಕೊಂಡ, ಇದರಿಂದ ಅವನು ಎಲ್ಲರ ಮೇಲೆ ತೀರ್ಪು ನೀಡಲು ಸಾಧ್ಯವಾಗುತ್ತದೆ ಎಂದುಕೊಂಡ.


ಕಮೂವಿನ ಪತ್ರಕರ್ತನ ಭಾಷೆ ಮತ್ತು ನಿರೂಪಣೆ ಈ ಕೃತಿಯಲ್ಲೂ ಕಾಣಸಿಗುತ್ತದೆ. ಓದುಗನ ಓದಿನೊಂದಿಗೆ ಓಡುವ ಭಾಷೆಯದು. ಇಡೀ ಕೃತಿಯು ಸ್ವಗತದಿಂದ ಕೂಡಿರುವಾಗ ಏಕತಾನತೆ ನುಸುಳುವುದು ಸಹಜ. ಆದರೆ ಕಮೂವಿನ ಅಸ್ತಿತ್ವವಾದದ ಪ್ರಶ್ನೆಗಳು ಓದುಗನನ್ನು ಚಿಂತನೆಗೆ ಹಚ್ಚಿ ಏಕತಾನತೆಯಿಂದ ಹೊರತರುತ್ತದೆ(ಅದಕ್ಕೆ ಕಾರಕ್ಕಿಯವರ ಸಹಜ, ಸಲೀಸು ಅನುವಾದವೂ ಬೆಂಬಲ ನೀಡುತ್ತದೆ). ಕಮೂವಿಗೆ ನೊಬೆಲ್ ಬಂದಾಗ ಮಾಡಿದ ಭಾಷಣದ ಅನುವಾದವೂ ಈ ಕೃತಿಯಲ್ಲಿದೆ.

*
ಕಾಜೂರು ಸತೀಶ್ 

Saturday, July 22, 2023

ಕಡಲಾಚೆಯ ಹುಡುಗಿಗೆ


ಪ್ರಿಯ ಹುಡುಗಿ,
ತೀರದ ನಕ್ಷತ್ರ ಮೀನುಗಳ ಕಡಲಿಗೆ ನೂಕುವಾಗ
ನಿನ್ನ ನೆನಪಾಗುತ್ತದೆ;
ಅಲ್ಲಿಗೆ ಓಡಿ ಬರಬೇಕೆನಿಸುತ್ತದೆ.
ನಿನ್ನ ಚರ್ಮಕ್ಕೆ,ರಕ್ತಕ್ಕೆ
ಎಷ್ಟು ಮಂದಿ ಕಾವಲಿರಬಹುದೆಂಬುದ ನೆನೆದಾಗ
ಭಯವಾಗುತ್ತದೆ-ಭಯವೂ ಭಯಗೊಳ್ಳುವ ಹಾಗೆ.

ಕಡಲಿನ ಆಚೆಬದಿಯಲ್ಲಿ ನಿನ್ನದೊಂದು ತೊಟ್ಟು ರಕ್ತ
ಈಚೆಬದಿಯಲ್ಲಿ ನನ್ನದೊಂದು ತೊಟ್ಟು ರಕ್ತ
ಚೆಲ್ಲಿಬಿಡೋಣ
ಸುತ್ತಲಿನ ಶಾರ್ಕುಗಳು ಏನು ಮಾಡುತ್ತವೆಂದು ಕಾದು ಕೂರೋಣ.

ಅಥವಾ
ಅವೆರಡು ತೊಟ್ಟು ರಕ್ತವನ್ನು ಒಟ್ಟುಗೂಡಿಸಲು
ನಾವಿಬ್ಬರೇ ಶಾರ್ಕುಗಳಾಗೋಣ.

ಈ ಕತ್ತಲಲ್ಲಿ ನಿನ್ನ ಸಂದೇಶಗಳು
ಚಂದ್ರನಿಂದ ರವಾನೆಯಾಗುತ್ತಿವೆ.
ನೀನಲ್ಲಿ ಹಿಂಡುತ್ತಿರುವ ಕಣ್ಣ ಬೆವರ ಸದ್ದನ್ನು
ಇಬ್ಬನಿಗಳು ಅನುಕರಿಸುತ್ತಿವೆ ಇಲ್ಲಿ.
ನಿನ್ನೂರಿನ ಸಿಂಡು ಹೊತ್ತ ಹಕ್ಕಿ
ಹಿಕ್ಕೆ ಹಾಕುತಿದೆ ನನ್ನ ನೆತ್ತಿಯ ಮೇಲೆ.

ನನ್ನ ನಿನ್ನ ನೆತ್ತರ ವರ್ಣವನ್ನು ಅಂಟಿಸಿಕೊಂಡ
ಈ ಹೂವುಗಳನ್ನು ಮುಟ್ಟಲು
ಸುಟ್ಟುಹೋಗುತ್ತೇನೋ ಎಂಬ ಭಯವಿದೆ ನನಗೆ.

ಕಡಲಿಲ್ಲ ನನ್ನ-ನಿನ್ನ ನಡುವೆ
ಅಳಿಸಿದರಾಯಿತು ಗಡಿಯ ಒಂದು ಗೆರೆಯನ್ನು
ಅಥವಾ ನೆತ್ತಿಯೊಳಗಿನ ಒಂದು ಗೆರೆಯನ್ನು
ನಾವಿಬ್ಬರು ಒಂದಾಗಲಿಕ್ಕೆ,
ಕನ್ನಡಿಯಾಗಲಿಕ್ಕೆ.

ನನ್ನವ್ವನಂಥ ಹುಡುಗಿ,
ನನ್ನ ಮುಟ್ಟುವ ಸೂರ್ಯ
ಮರುದಿನ ನಿನ್ನ ಮುಟ್ಟಿ
ನಮ್ಮಿಬ್ಬರನ್ನು ಒಂದಾಗಿಸುತ್ತದೆ.
ಅಂಗ ಮೀರಿದ ನಮ್ಮ ಪ್ರೀತಿಯ ಸಂಗವನ್ನು
ಒಂದಾಗಿಸುತ್ತಲೇ ಇರುತ್ತದೆ.
*************
-ಕಾಜೂರು ಸತೀಶ್

To the Girl Overseas

------------------------

Dear girl,
while pushing the starfish
into the sea from the seashore
I remember you.
I want to come running to you.
But when I think of the number of guards
who may be guarding your skin, your blood,
I am so frightened
that even my fear is afraid.

Spill a drop of your blood
on the other side of the sea,
I will spill a drop of blood
on this side of the sea.
Let us wait and see what the sharks around here
will do.

Or
to bring those two drops of blood together,
let us become sharks.

In this darkness
your messages are being sent from the moon.
The sound of sweat dripping from your eyes
are being mimicked here by dew.
The bird carrying the smell of your village
is pooping on my head.

I am afraid I will burn
in my effort to touch these flowers
that bear the colour of blood
—yours and mine.

There is no sea between you and me.
We can erase that single line
representing the border
or the line within our heads,
so that we can be one,
mirroring each other.

My dear girl,
the sun who touches me today,
touches you the next day
and unites us in that touch.
And keeps uniting
our disembodied love.
*



Translation- Dr. Kamalakara Kadave

ಮಳೆಬಿಲ್ಲು



The Rainbow

  - Christina Rossetti

Boats sail in the rivers,
And ships sail on the seas;
But clouds that sail across the sky
Are prettier far than these.

There are bridges on the rivers,
As pretty as you please;
But the bow that bridges heaven,
And overtops the trees,
And builds a road from earth to sky,
Is prettier far than these.

 ಮಳೆಬಿಲ್ಲು

ದೋಣಿ ಸಾಗಿದೆ ನದಿಯ ನಾದಕೆ
ಹಡಗು ಸಾಗಿದೆ ಕಡಲ ಲಾಲಿಗೆ
ಇದಕೂ ಸುಂದರ ಗಗನ ಗಾನಕೆ  ಮೋಡದ ಸಾಲು

ಸೇತುವೆಗಳಿವೆ ನದಿಯ ಚೆಲುವಿಗೆ
ಎಷ್ಟು ಸುಂದರ ನರನ ಕಾಣಿಕೆ
ಆದರಿದೋ  ಮಳೆಯಬಿಲ್ಲು
ಸಪ್ತ ವರ್ಣದ ಕಾಮನಬಿಲ್ಲು 
ಸ್ವರ್ಗಕ್ಕೆ ಸೇತುವೆ ಕಟ್ಟಿ 
ಜಗಕೆ ಮುಡಿಸಿದೆ ಬೆರಗ ದೃಷ್ಟಿ 
ಮರದ ಮೇರೆಯ ಮೀರಿಮೀರಿ
ಭೂಮಿ-ಬಾನಿಗೆ ಮಾಡಿ ದಾರಿ 
 ಸಹಜ ಸೃಷ್ಟಿಯ ಚೆಲುವ ಗೆಲುವಿದು ಸುಂದರ ಅತಿ ಸುಂದರ
*
ಇಂಗ್ಲಿಷ್ ಮೂಲ- ಕ್ರಿಸ್ಟೀನಾ ರೊಸೆಟಿ


ಕನ್ನಡಕ್ಕೆ- ಕಾಜೂರು ಸತೀಶ್ 



Tuesday, July 4, 2023

ಪತ್ರಿಕೋದ್ಯಮದ ಸಮಗ್ರ ಚಿತ್ರಣ - 'ಸೊಡರು'

'ಶಕ್ತಿ' ದಿನಪತ್ರಿಕೆಯ ಸಲಹಾ ಸಂಪಾದಕರಾದ ಬಿ ಜಿ ಅನಂತಶಯನ ಅವರ ಪತ್ರಿಕಾ ರಂಗದ ಅನುಭವ ಕಥನ 'ಸೊಡರು'. ಪತ್ರಿಕಾ ರಂಗದಲ್ಲಿ ಅವರಿಗೆ ನಾಲ್ಕೂವರೆ ದಶಕಗಳ ಅನುಭವ; ತಮ್ಮ ಹದಿನೇಳನೆಯ ವಯಸ್ಸಿಗೇ ಈ ಕ್ಷೇತ್ರವನ್ನು ಪ್ರವೇಶಿಸಿದವರು ಅನಂತಶಯನ ಸರ್. ಅದರೊಂದಿಗೆ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು. UNI, ವಿಜಯ ಟೈಮ್ಸ್, ಸ್ಟಾರ್ ಆಫ್ ಮೈಸೂರ್, ಟೈಮ್ಸ್ ಆಫ್ ಡೆಕ್ಕನ್ ಮುಂತಾದ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವಿರುವವರು.
ಈ ಸುದೀರ್ಘ ಅವಧಿಯ ಕೆಲವು ರೋಚಕ ಅನುಭವಗಳನ್ನು
'ಸೊಡರು' ಕೃತಿಯಲ್ಲಿ ಬೆಳಗಿದ್ದಾರೆ. ಪತ್ರಿಕಾ ಕ್ಷೇತ್ರಕ್ಕೆ ಬರುವವರಿಗೆ ಇದು ದಿಕ್ಸೂಚಿ .ಅದರಿಂದ ಹೊರತಾದವರಿಗೂ ರೋಚಕ ಅನುಭವಗಳ ಗುಚ್ಛ. ಯಾರು ಬೇಕಾದರೂ ಓದಿ ಅರ್ಥೈಸಿಕೊಳ್ಳಬಹುದಾದ ಕೃತಿ.


ಪತ್ರಕರ್ತನಿಗಿರಬೇಕಾದ ಮಾನಸಿಕ ದೂರ, ವಿಷಯ ಜ್ಞಾನ, ಬಹುಭಾಷಾ ಅರಿವು, ಪ್ರಾಮಾಣಿಕತೆ , ನಿಖರತೆ, ಧೈರ್ಯ ,ತಾಳ್ಮೆ , ಸ್ವಾಭಿಮಾನ ಮೊದಲಾದ ವಿಷಯಗಳ ಕುರಿತ ಅನುಭವ ಕಥನಗಳಿವು.

ಸ್ವತಃ ಅನುಭವಿಸಿದ ಜೀವ ಬೆದರಿಕೆಗಳು, ಪ್ರಾಣಾಪಾಯದಿಂದ ಪಾರಾಗಿ ಬಂದ ಅನುಭವ, ಪೊಲೀಸ್ ವಿಚಾರಣೆ, ನ್ಯಾಯಾಲಯದಲ್ಲಿ ಹಾಜರಾದ ವಿವರಗಳು, ವರದಿಗಾಗಿ ಗಣ್ಯರ ಭೇಟಿಯ ಸಂದರ್ಭದ ಸ್ವಾರಸ್ಯಗಳು ಕೃತಿಯಲ್ಲಿವೆ. ಕನ್ನಡ ಪತ್ರಿಕಾ ಇತಿಹಾಸದ ಕುರಿತ ಸಣ್ಣ ಟಿಪ್ಪಣಿಗಳಿವೆ.
*
ಕಾಜೂರು ಸತೀಶ್

Saturday, June 24, 2023

ಉದ್ಯೋಗ

ತೋಟದಲ್ಲಿ ಕೂಲಿ ಮಾಡಿ ಪದವಿಯವರೆಗೆ ಓದಿದ. ನಿತ್ಯ ಓದುತ್ತಿದ್ದ. ಸರ್ಕಾರಿ ಕೆಲಸಕ್ಕೆ ಆಯ್ಕೆಯಾದ. ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ .

ಪರಿಶೀಲನೆಯ ವೇಳೆಯಲ್ಲಿ ಅವನ ದಾಖಲಾತಿ ಪುಸ್ತಕದಲ್ಲಿ ತಾಯಿಯ ಹೆಸರು 'ಚೆನ್ನಮ್ಮ' ಎಂದಿದ್ದು ಉಳಿದ ದಾಖಲೆಗಳಲ್ಲೆಲ್ಲ 'ಚೆನ್ನಿ' ಎಂದಾಗಿತ್ತು. ಜಾತಿ ಕಾಲಮ್ಮಿನಲ್ಲಿ 'ಮಾತೃಭಾಷೆ' ಬಂದು ಸೇರಿಕೊಂಡಿತ್ತು.

ಹೀಗಾಗಿ ಅವನ ಸರ್ಕಾರಿ ಕೆಲಸದ ಕನಸು ಕಮರಿತು.
*
ಯಜಮಾನರ ತೋಟದಲ್ಲಿ ಮರಕಪಾತು ಮಾಡುವಾಗ, ಎರತೆ- ಅಗತೆ ಮಾಡುವಾಗ ಒಮ್ಮೊಮ್ಮೆ ಯೋಚಿಸುತ್ತಿದ್ದ- "ಒಂದೊಮ್ಮೆ ನನಗೆ ಸರ್ಕಾರಿ ಕೆಲಸ ಸಿಕ್ಕಿದ್ದಿದ್ದರೆ ಕೆಲಸ ಮಾಡಬೇಕಾಗಿದ್ದವರು ನನ್ನ ಜಾತಿಯೋ ಅಥವಾ ನನ್ನಮ್ಮನ ಹೆಸರೋ?"

ಅಂದಿನಿಂದ ಎಲ್ಲಾ ದಾಖಲೆಗಳಿಂದಲೂ ತನ್ನ ಹೆಸರು ತೆಗೆಸಿದ.

ಬಿಡುವಾದಾಗಲೆಲ್ಲ 'ದೇಶಭಕ್ತಿ ಎಂದರೇನು?' 'ಮರಣದಂಡನೆ ಹೇಗಿರುತ್ತದೆ' ಎಂದು ಓದುತ್ತಿದ್ದ.
*
ಕಾಜೂರು ಸತೀಶ್

Wednesday, May 24, 2023

ರಾಜಕೀಯ ಮತ್ತು ಪ್ರಕೃತಿ


ಬಾಳೆಯಡ ಕಿಶನ್ ಪೂವಯ್ಯ ಅವರನ್ನು ಭೇಟಿ ಮಾಡಿಸಿದ್ದು ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ೮೦ನೆಯ ಸಾಹಿತ್ಯ ಸಮ್ಮೇಳನ.ಅವರು ಸ್ವಾಗತ ಸಮಿತಿಯ ಸಂಚಾಲಕರಾಗಿದ್ದಾಗ ಅದೇ ತಂಡದಲ್ಲಿ ನಾನು ಸಹ- ಸಂಚಾಲಕನಾಗಿದ್ದೆ. ಕಡಿಮೆ ಮಾತನಾಡುವ, ಶಿಸ್ತಿನ ವ್ಯಕ್ತಿ. ವಕೀಲ ಮತ್ತು ನೋಟರಿಯವರಾಗಿ, ಕ್ರೀಡಾಪಟುವಾಗಿ, ಅಂಕಣಕಾರರಾಗಿ, ರಾಜಕೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಸಂಘಟಕರಾಗಿ, ಕೃಷಿಕರಾಗಿ ತಮ್ಮನ್ನು ವಿಸ್ತರಿಸಿಕೊಂಡವರು ಬಾಳೆಯಡ ಕಿಶನ್ ಪೂವಯ್ಯ.


'ರಾಜಕೀಯ ಮತ್ತು ಪ್ರಕೃತಿ' ಕೃತಿಯಲ್ಲಿ ೨೭ ಲೇಖನಗಳಿವೆ. ಈ ಲೇಖನಗಳಿಗೆ 'ಕೊಡಗು' ಎಂಬ ಭೌಗೋಳಿಕ ಮತ್ತು ಸಾಂಸ್ಕೃತಿಕ ಆವರಣವಿದೆ. ಮಡಿಕೇರಿ ದಸರಾ, ಕಾವೇರಿ, ಕೊಡಗಿನ ರಾಜಕಾರಣ, ಕೊಡಗಿನ ಪ್ರವಾಸೋದ್ಯಮ, ಪ್ರಕೃತಿ ವಿನಾಶ- ಇವುಗಳನ್ನು ಕೊಡಗಿನ ನೆಲೆಯಲ್ಲಿ ವಿಶ್ಲೇಷಿಸಿದರೆ, ಜಾತಿ ರಾಜಕಾರಣ , ಪಕ್ಷಾಂತರ, ಮೌಲ್ಯಾಧಾರಿತ ರಾಜಕೀಯ , ಬೇಟೆ ಮತ್ತು ಕಾನೂನು ಮುಂತಾದವುಗಳನ್ನು ದೇಶಾತೀತವಾಗಿ ಹಿಡಿದಿಡುತ್ತಾರೆ.


ಈ ಲೇಖನಗಳೆಲ್ಲಾ ಹುಟ್ಟಿರುವುದು ಸಮ-ಸಖೀ-ಸಮಾಜದ ನಿರೀಕ್ಷೆಯಲ್ಲಿ. ಅದಕ್ಕಿರುವ ಅಡ್ಡಿಗಳಲ್ಲಿ ಮುಖ್ಯವಾದದ್ದು 'ರಾಜಕೀಯ'( ರಾಜಕೀಯ ಎಂದರೆ ಅಧಿಕಾರದ/ಪಕ್ಷಗಳ/ ಚುನಾವಣೆಗೆ ಸಂಬಂಧಿಸಿದ ಸಂಗತಿ ಮಾತ್ರ ಅಲ್ಲ; ಎಲ್ಲ ರಂಗಗಳಲ್ಲಿ ಸ್ವಾರ್ಥಪರ ಅಭಿವೃದ್ಧಿಗಾಗಿ ಮನುಷ್ಯ ತೋರುವ ಅಧಿಕಾರದ ದುರ್ಬಳಕೆಯೂ, ಕಪಟತನವೂ ರಾಜಕೀಯವೇ ಆಗುತ್ತದೆ). ಮತ್ತೊಂದು- ಪ್ರಕೃತಿ ಮತ್ತು ಸಂಸ್ಕೃತಿಯ ನಾಶ. ಮಡಿಕೇರಿ ದಸರಾ ಆಚರಣೆಯ ಮೇಲೆ ರಾಜಕೀಯ ಪ್ರವೇಶ, ಕಾವೇರಿ(ಧಾರ್ಮಿಕ ಮತ್ತು ಸಾಂಸ್ಕೃತಿಕ ಆಯಾಮದಲ್ಲಿ) ಮತ್ತು ಎರಡು ಜನಾಂಗಗಳ ಸ್ವಪ್ರತಿಷ್ಠೆ, ಕೊಡಗಿನ ಪರಿಸರದ ಮೇಲೆ ಪ್ರವಾಸೋದ್ಯಮದ ಪರಿಣಾಮ - ಈ ಬಗೆಯ ಪ್ರಧಾನ ಸಂಗತಿಗಳನ್ನು ಚರ್ಚೆಗೆ ಎತ್ತಿಕೊಳ್ಳುವುದು ಅವರಿಗಿರುವ ಪ್ರಗತಿಪರ ಚಿಂತನೆಗಳ ಬಲದಿಂದಲೇ; ಉತ್ತಮ ಪರಿಣಾಮದ ಹಂಬಲದಿಂದಲೇ. ಪ್ರತಿಕ್ರಿಯೆಯ ರೂಪದಲ್ಲಿಯೂ ಕೆಲವು ಲೇಖನಗಳು ಕಾಣಿಸುತ್ತವೆ.
ಕಿಶನ್ ಪೂವಯ್ಯ ಅವರ ಚಿಂತನೆಗಳು ಮತ್ತಷ್ಟೂ ಎಲ್ಲರನ್ನೂ ತಲುಪಲಿ ಎಂಬ ಆಶಯ ನನ್ನದು.
*
ಕಾಜೂರು ಸತೀಶ್ 



Thursday, April 27, 2023

ಮೌನದೊಡಲಿನ ಗಜ಼ಲ್

ಅಂಬವ್ವ ಪ್ರತಾಪ್ ಸಿಂಗ್ ಅವರು ಮೌನದೊಡಲ ಮಾತು(ಗಜ಼ಲ್) ಸಂಕಲನವನ್ನು ತಿಂಗಳ ಹಿಂದೆಯೇ ಕಳಿಸಿ ಅದು ತಲುಪಿರುವ/ ಓದಿರುವ ಸಂಗತಿಯನ್ನೇನೂ ವಿಚಾರಿಸದೆ ಕಾವ್ಯಧ್ಯಾನದಲ್ಲಿರುವಂತೆ ಮೌನವಾಗಿದ್ದಾರೆ. (ನನಗೆ ಅವರ ಪರಿಚಯವಿಲ್ಲ, ಬಹುಶಃ ಅವರಿಗೂ!)

ಅಂಬವ್ವ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನವರು, ಶಿಕ್ಷಕಿ. ಶಿಕ್ಷಕರೊಬ್ಬರು ಸೃಜನಶೀಲರಾಗಿದ್ದರೆ ಅವರಿಂದ ಹೊಮ್ಮುವ ಪ್ರಭಾವ/ ಪ್ರೇರಣೆಗಳು ವ್ಯಕ್ತಿ-ಕಾಲದೇಶಗಳನ್ನು ಸ್ಪರ್ಶಿಸಿ ಬೆಳೆಯುತ್ತದೆ. ಅದರಲ್ಲೂ, ಬರೆಯುವ ಪ್ರಕ್ರಿಯೆಯ ಹಿಂದೆ ಓದುವ, ಧ್ಯಾನಿಸುವ ಪ್ರಕ್ರಿಯೆ ಜೊತೆಯಾಗಿರುತ್ತದೆ. ಬೇರೆಯವರ ಮಾತು ಬಿಡಿ, ಮಕ್ಕಳೊಂದಿಗೆ ಒಡನಾಡುವ ಶಿಕ್ಷಕರಿಗೇ ಓದಿನ ಬಲವಿಲ್ಲದೆ ಇರುವ ಕಾಲದಲ್ಲಿರುವಾಗ ಅಂಬವ್ವ ಟೀಚರ್ ಅವರ ನಡೆ ಇಷ್ಟವಾಗುತ್ತದೆ.


ಅಂಬವ್ವ ಪ್ರತಾಪ್ ಸಿಂಗ್ ಅವರು ಈಗಾಗಲೇ ನಾಲ್ಕು ಕೃತಿಗಳನ್ನು ರಚಿಸಿದ್ದಾರೆ. ಮೌನದೊಡಲ ಮಾತು ಅವರ ಐದನೆಯ ಕೃತಿ. ಅರುವತ್ತು ಗಜ಼ಲ್ ಗಳ ಗುಚ್ಛ. ಗಜ಼ಲ್ - ಹೆಚ್ಚು ಚರ್ಚೆಗೆ ಒಳಪಡುವ ಮಾದರಿ. ಮೂಲ ಮಾದರಿ(ಪಾರ್ಸಿ, ಉರ್ದು), ಕನ್ನಡದ ಮಾದರಿ ಮತ್ತು ರೂಪಾಂತರದ ಮಾದರಿ- ಇವುಗಳ ನಡುವೆ ಯಾವುದು ಗಜ಼ಲ್ ಯಾವುದು ಅಲ್ಲ ಎನ್ನುವ ಜಿಜ್ಞಾಸೆ ಇದೆ(ಅದೇನೇ ಇದ್ದರೂ ಬರೆದ ಒಂದೆರಡು ಸಾಲುಗಳಲ್ಲೇ ಕಾವ್ಯಶಕ್ತಿಯನ್ನು ಗ್ರಹಿಸಬಹುದು).

ಅಂಬವ್ವ ಅವರು ತೀರಾ ಗಹನವಾದ ತಾತ್ತ್ವಿಕತೆಗೆ ಹೊರಳುವುದಿಲ್ಲ. ಸರಳ, ಸಹಜವಾದ ಮಾತುಗಳು ಅಲ್ಲಿವೆಯಾದರೂ ಯಾವುದಕ್ಕಾಗಿ ಅವರ ಮನಸ್ಸು ತುಡಿಯುತ್ತದೆ ಎನ್ನುವಲ್ಲಿ ಪ್ರಗತಿಪರವಾದ ಧೋರಣೆಗಳಿವೆ. 'ಅಂತರ್ಮುಖಿ' ಎಂಬ ಮಂಗಳಮುಖಿಯರ ಬಗೆಗಿನ ಕಥನಗಳನ್ನು ಪ್ರಕಟಿಸಿರುವಲ್ಲಿಯೇ ಈ ಧೋರಣೆ ವ್ಯಕ್ತವಾಗುತ್ತದೆ.

ಇಲ್ಲಿನ ಬಿಡಿ ಸಾಲುಗಳು ಅವರು ಮತ್ತಷ್ಟೂ ಒಳ್ಳೆಯ ಕಾವ್ಯವನ್ನು ಸೃಷ್ಟಿಸಬಲ್ಲರು ಎನ್ನುವುದಕ್ಕೆ ನಿದರ್ಶನ:

ನಿನ್ನ ಸ್ವಾಗತಕ್ಕಾಗಿ ನದಿಯು ಸಂಗೀತ ನುಡಿಸುತ್ತಿದೆ
ಅದಕ್ಕೆ ನನ್ನ ಹೃದಯದ ತಾಳವು ಮಿಳಿತಗೊಳ್ಳುತ್ತಿದೆ(ಗಜ಼ಲ್ -5)

ನಿನಗಾಗಿ ಗಾಳಿಯೂ ಖುಷಿಯಾಗಿ ಕೊಳಲನೂದುತ್ತಿದೆ
ಅದಕ್ಕೆ ನನ್ನ ಉಸಿರಾಟ ಜುಗಲ್ಬಂದಿಯಾಗುತ್ತಿದೆ(ಗಜ಼ಲ್ -5)

ರೈತನ ಕೊರಳು ನೇಣಿನ ಹಗ್ಗಕ್ಕೆ ಉರುಳುತ್ತಿದ್ದರೆ
ದಲ್ಲಾಳಿಗಳ ಕುತ್ತಿಗೆ ಚಿನ್ನದ ಭಾರಕ್ಕೆ ಮಣಿಯುತ್ತಿದೆ( ಗಜ಼ಲ್-7)

ಕೊನೆಗೊಮ್ಮೆ ನನ್ನ ಶವವನ್ನಾದರೂ ತೋರಿಸಿಬಿಡಿ
ವನಿತಾ ಹೇಗೆ ಕಾಣುವಳೆಂದು ನೋಡುವೆ ನಾನು( ಗಜ಼ಲ್ -14)

ಪ್ರೀತಿಸುವ ಜೋಡಿಯ ನೋಡಿ ಜಗವೇಕೆ ದ್ವೇಷ ಕಾರುತಿಹುದು
ಸಮಾಧಿಯ ಒಳಗೆ ಲೈಲಾ ಮಜುನೂ ಜೋಡಿ ರೋದಿಸುತ್ತಿದೆ(ಗಜ಼ಲ್ -36)

ಬಿಸಿಲು ಬೆಳದಿಂಗಳಾಗಿ ತಂಪು ಸೂಸುತ್ತಿದೆ ನಿನ್ನ ನೆರಳಿನಲ್ಲಿ
ಇರುಳ ಬೇಗೆ ಕಳೆಯುತ್ತಿದೆ ನಿನ್ನನು ಸೇರಿದ ಮೇಲೆ( ಗಜ಼ಲ್ -55)

ಹೀಗೆ ಅಂಬಮ್ಮ ಟೀಚರ್ ಅವರ ದೊಡ್ಡ ಆಶಯಗಳು ಇಷ್ಟವಾಗುತ್ತವೆ. ಅಂತೆಯೇ,ಇವು ಗಜ಼ಲ್ ಕುರಿತ ಹೆಚ್ಚಿನ ಅಧ್ಯಯನವನ್ನೂ, ಕಲಾತ್ಮಕತೆಯನ್ನೂ, ಮಾತಿನ ಮಿತಬಳಕೆಯನ್ನೂ ನಿರೀಕ್ಷಿಸುತ್ತವೆ. ಕೃತಿಯಲ್ಲಿ ಅಕ್ಷರದೋಷ ಇಲ್ಲದಿರುವುದು ತುಂಬಾ ಖುಷಿಯ ಸಂಗತಿ.
*

ಕಾಜೂರು ಸತೀಶ್


Sunday, April 23, 2023

ಬದುಕನ್ನೇ ಬಸಿದು ಬರೆದ ಕಾವ್ಯ



ತಮ್ಮ ಬದುಕನ್ನು ಬಸಿದು , ಅದರ ಹಸಿವಲ್ಲಿ, ಅವಮಾನದಲ್ಲಿ, ಅದು ಎದುರಿಗಿಟ್ಟ ಕತ್ತಲಲ್ಲಿ ಕಾವ್ಯಹೊಸೆದವರು ರಾಮಪ್ಪ ಕೋಟಿಹಾಳ. ಅವರ ಜಿರಾಫೆ ಕತ್ತಿನ ಅವ್ವ ಕೃತಿಗೆ ಈ ಬಾರಿಯ ಚಿ. ಶ್ರೀನಿವಾಸರಾಜು ಕಾವ್ಯ ಪುರಸ್ಕಾರ ಸಂದಿದೆ. ಓದುವವನ ಕರುಳನ್ನೇ ಕೊರೆಯುವ ಹಸಿವಿನ ಭಯಾನಕ ಚಿತ್ರಣ ಹಸಿಹಸಿಯಾಗಿವೆ ಇಲ್ಲಿ:

ಅನ್ನದ ಕನಸಿಗೆ
ಕಣ್ಣು ಕೊಟ್ಟ ಅಪ್ಪ
ಮನೆ ಮುಂದೆ ಜಮಾಯಿಸಿದ
ಜನರ
ತೀರ್ಪಿಗಾಗಿ ಕಾಯುವನು( ಅವ್ವನ ಸೂರ್ಯ)

ಹಸಿದಾಗ ಚಂದ್ರ ರೊಟ್ಟಿಯಾಗಿ
ಅಣಕಿಸುತ್ತಾನೆ
ಚುಕ್ಕಿಗಳು ಅನ್ನದ ಅಗುಳಾಗಿ
ಕೆಣಕುತ್ತವೆ (ಭೂಮಿ ಒಂದು ಕ್ಷಣ ನಿಂತುಬಿಟ್ಟರೆ..)

ಸೂರ್ಯ ಚಂದ್ರರನು ಹುರಿದು
ಸಾರುಮಾಡಿದ ಅವ್ವ
ಉಣ್ಣದೆ ಮಲಗುವಳು
( ಜಿರಾಫೆ ಕತ್ತಿನ ಅವ್ವ)

ಅವ್ವನ ಹರಿದ ಸೆರಗಿಗೆ ಅಂಟಿದ
ಅನ್ನದ ಅಗುಳು ಹಂಚಿತಿಂದ ನೆನಪು.
(ಮಣ್ಣ ಪರಿಮಳ)

ನನ್ನ ಗುಂಡಿಗೆ
ನಾಯಿಯಂತೆ ಒದರುತ್ತದೆ
ತುತ್ತ ನೆನೆದು
ಜೊಲ್ಲು ಸುರಿಸುತ್ತದೆ.
(ಗುಂಡಿಗೆ ನಾದ)


ಹೀಗೆ ಹಸಿವಿನ ಭೀಕರ ಸ್ಥಿತಿಯಲ್ಲಿರುವಾಗ ತಿನ್ನುವ ಆಹಾರವನ್ನೂ ನಿರ್ಧರಿಸುವ ಸಮಾಜ ಎದುರಾಗುತ್ತದೆ. ಇದು ನಿಷಿದ್ಧ ಎಂದು ಕಟ್ಟಪ್ಪಣೆ ವಿಧಿಸಿ ಅವರ ಮೇಲೆ ದಾಳಿಮಾಡುತ್ತದೆ:

ಮಾಂಸದ ಪರಿಮಳ ಕೇರಿಗೆ ಹರಡಿ
ಕತ್ತಲಲ್ಲೂ ಎದ್ದು ಬಂದವು..

ಕಡೆಗೆ 'ಅವರ' ಆಕ್ರಮಣದಿಂದ ತತ್ತರಿಸಿ-

ಅವ್ವ
ಕಣ್ಣಲ್ಲೇ ದೀಪ ಮೂಡಿಸಿದಳು
ಅಪ್ಪನ ಮೈತುಂಬ ಬೆತ್ತದೇಟು
ಬಾರಿನ ಗೆರೆಗುಂಟ ಹೆಪ್ಪುಗಟ್ಟಿದ ನೆತ್ತರು
ಅವ್ವ
ಕಣ್ಣೀರು ಕುಡಿದು ಮಲಗಿದಳು
(ಉಪ್ಪು ನೀರು)

ಸದ್ಯದ ಅಮಾನುಷ ವರ್ತನೆಯನ್ನು ಎದೆಕಲಕುವಂತೆ ಚಿತ್ರಿಸುತ್ತಾರೆ ರಾಮಪ್ಪ ಕೋಟಿಹಾಳ. ಎನ್ ಕೆ ಹನುಮಂತಯ್ಯ ಅವರ ಕಾವ್ಯದ ಮುಂದುವರಿಕೆಯಾಗಿ ಅವರ ಕವಿತೆಗಳು ಓದಿಸಿಕೊಳ್ಳುತ್ತವೆ. ಅವ್ವ,ಅಪ್ಪ, ಅಕ್ಕ, ತಮ್ಮ, ತಂಗಿ, ಪ್ರೇಯಸಿಯ ಸುತ್ತ ಹೆಣೆದ ಸಾಲುಗಳು ವೈಯಕ್ತಿಕತೆಯನ್ನು ಮೀರುವ ಗುಣವುಳ್ಳವುಗಳು. ನೋವಿನ ರಕ್ತದಲ್ಲದ್ದಿ ಹಾಳೆಗೆ ಅಂಟಿಸಿದ ಚಿತ್ರದಂತಿರುವ ಕವಿತೆಗಳು ಇವರವು.


ಅವರ ಕಾವ್ಯಪ್ರತಿಭೆಗೆ ಈ ಕವಿತೆಯೇ ಸಾಕ್ಷಿ

ಆ ಕೈಗಳು

ಆ ಕೈಗಳು
ತೆರೆದ ಅಂಗೈಗಳು

ಕಪ್ಪು ಬಣ್ಣದಲೆ ಅದ್ದಿದಂತವು
ಕಲ್ಲುಮುಳ್ಳುಗಳಲಿ ಸಿಕ್ಕು ಮಾಸಿದ ಗೆರೆಗಳು
ಸಪೂರ ದೇಹದ ಈ ಕೈಗಳು
ಆಕಾಶವನು ಬಳಸಿ ಬಂದಿವೆ
ಹಕ್ಕಿಯ ಒಲವು
ಚುಕ್ಕಿಯ ಬೆರಗು
ಈ ಕಪ್ಪು ಕೈಗಳು ಸೂರ್ಯನ ಸವರಿ ಬಂದಿವೆ
ಚಂದ್ರನಲಿ ಕಲೆಯಾಗಿ ನಿಂತಿವೆ

*
ಕಾಜೂರು ಸತೀಶ್

Sunday, April 16, 2023

ಅಪ್ಪಟ ಭೂಮಿಗೀತ


ಹದಿಮೂರು ವರ್ಷಗಳ ಹಿಂದೆ ಒಂದು ಸಾಹಿತ್ಯ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಹೋಗಿದ್ದೆ. ಕೊಡಗಿನಿಂದ ಅಲ್ಲಿಗೆ ಯಾರೂ ಬರುವುದಿಲ್ಲ ಎಂದುಕೊಂಡಿದ್ದೆ. ಅದು ಸುಮಾರು ಹೊತ್ತು ನಿಜವೂ ಆಗಿತ್ತು. ಆಮೇಲೆ ನನ್ನ ಮುಂದೆ ಒಬ್ಬರು ನಡೆದುಹೋಗುತ್ತಿದ್ದರು. 'ಮೇಡಂ ,ಗೊತ್ತಾಯ್ತಾ? ಕೇಳಿದೆ. 'ಇಲ್ಲ , ನನಗೆ ಅಷ್ಟು ಬೇಗ ಗುರ್ತಾ ಸಿಗುವುದಿಲ್ಲ ಆಯ್ತಾ' ಎಂದರು.

ಕಳೆದ ಮಾರ್ಚ್ 26ಕ್ಕೆ ಅವರು ಸಿಕ್ಕರು.

ಈ ನಡುವೆ ಹಲವಾರು ಬಾರಿ ಅವರನ್ನು ನೋಡಿದ್ದೇನೆ, ಭಾಷಣ ಆಲಿಸಿದ್ದೇನೆ , ಕವಿತೆ ಕೇಳಿದ್ದೇನೆ, ಲೇಖನಗಳನ್ನು ಓದಿದ್ದೇನೆ. ಮುಂದುವರಿದು 'ಸಹನಾ ಕಾಂತಬೈಲು ಅವರ ಪುಸ್ತಕಗಳನ್ನು ಕಳಿಸಿ' ಎಂದು ಪ್ರಕಾಶಕರಿಗೆ ಸಂದೇಶ ಕಳಿಸಿದ್ದೇನೆ.



ಈಚೆಗೆ , ಆಯಿರಸುಳಿ ಜಂಗಲ್ ಹಾಡಿಯಲ್ಲಿ ಕವಿತೆ ಓದುತ್ತಿದ್ದೆವು. ಹಿನ್ನೆಲೆಯಲ್ಲಿ ಆನೆ ಘೀಳಿಡುವ ಸದ್ದು ಕೇಳಿಸುತ್ತಿತ್ತು. ಅಲ್ಲಿ ಸಹನಾ ಕಾಂತಬೈಲು ಅವರು ನನ್ನ ಕೈಗೆ 'ಆನೆ ಸಾಕಲು ಹೊರಟವಳು' ಕೃತಿಯನ್ನು ನೀಡಿ ಇದು ಈಗ ನಾಲ್ಕನೆಯ ಮುದ್ರಣ ಎಂದರು (ಶ್ರೀರಾಮ ಬುಕ್ ಸೆಂಟರ್ ,ಮಂಡ್ಯ). ಡಾ. ಹಾ.ಮಾ.ನಾಯಕ ಅಂಕಣ ಬರಹ ಪುರಸ್ಕಾರ ಪಡೆದಿದೆ ಈ ಕೃತಿ.



*
ಸಹನಾ ಕಾಂತಬೈಲು ಅವರು ತುಂಬಾ progressive thoughtಗಳಿಂದ ಆಗಿರುವವರು. ಈ ಅಂಕಣಮಾಲೆ 'ಅಂಕಣ' ಆಗಬೇಕಾದ ತುರ್ತಿನಲ್ಲಿ ಹುಟ್ಟಿರುವವು. ಆದರೆ, ಅಂಕಣದ ಹಿಂದಿನ ಸಿದ್ಧತೆಗಳೆಂದರೆ ಮಂಗಳೂರಿಗೆ ತೆರಳಿ laptop ರಿಪೇರಿ ಮಾಡಿಸುವುದು, ಅದಕ್ಕಾಗಿ ಪಟ್ಟುಬಿಡದೆ ಕತ್ತಲಾಗುವವರೆಗೆ ಅಂಗಡಿಯಲ್ಲಿ ಕುಳಿತುಕೊಳ್ಳುವುದು!. ದೈನಿಕದ ಕ್ಷಣಗಳು ಹುಟ್ಟಿಸಿದ ಸೃಷ್ಟಿ ಅವು. ಆದರೂ ಬರೆದು ಮುಗಿಸಿದ ಮೇಲೆ / ಪ್ರಕಟವಾದ ಮೇಲೆ outdated ಆಗದ ಹಾಗೆ ತಾಜಾ ಆಗಿ ಉಳಿದುಕೊಂಡಿದೆ. ಅದೇ ನಾಲ್ಕನೆಯ ಮುದ್ರಣದವರೆಗೆ ಈ ಕೃತಿ ಕ್ರಮಿಸಿದ ಹಿನ್ನೆಲೆ.


ತಮ್ಮ ಮನೆಯ ಎದುರಲ್ಲಿ ಗೆಳತಿಯರೊಂದಿಗೆ

'ನಾನು ಕೃಷಿಕ ಮಹಿಳೆ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸಹನಾ ಕಾಂತಬೈಲು ಅವರ ಪ್ರತೀ ವಾಕ್ಯದಲ್ಲೂ ಉತ್ಸಾಹ ಪುಟಿಯುತ್ತದೆ. ತಮಗೆ ತಿಳಿಯದ್ದನ್ನು ಕಲಿಯುವ ಅಪಾರ ಹಂಬಲವಿದೆ ಅಲ್ಲಿ. ಕೊಟ್ಟಿಗೆಯಿಂದ ಕಟ್ಟುಬಿಚ್ಚಿದ ಕರುವಿನ ಕುಣಿದಾಟದ ಹಾಗಿರುವ ಉತ್ಸಾಹ ಅದು. ಮುಂಬೈ ವಿವಿಯಲ್ಲಿ ಆಹ್ವಾನಿತರಾಗಿ ಹೋಗುವಾಗ, ಅಮೇರಿಕದ ಗ್ರಂಥಾಲಯವನ್ನು ಭೇಟಿಮಾಡುವಾಗ ಅವರ ಕುತೂಹಲ, ಮುಜುಗರ, ಆತ್ಮವಿಶ್ವಾಸ, ಕೊರಗು- ಒಟ್ಟೊಟ್ಟಿಗೆ ವ್ಯಕ್ತವಾಗುತ್ತದೆ. ಜೋಪಡಿ ಮನೆಯ ಹೆಣ್ಣಿನ ಬದುಕನ್ನೂ ಅಪಾರ್ಟ್ಮೆಂಟಿನಿಂದ ಇಣುಕಿನೋಡಿ ನೋಯುವ ಹೃದಯವಿರುವ ಬರೆಹವಿದು.

ಚೆಂಬುವಿನಿಂದ ಮುಂಬಯಿಗೆ ತಲುಪುವಾಗ ಅಮೇರಿಕಾಕ್ಕೆ ಹಾರುವಾಗ ಅಂಕಣದ ವಸ್ತುವನ್ನಷ್ಟೇ ಅರಸಲು ತಮ್ಮನ್ನು limit ಮಾಡಿಕೊಂಡಿದ್ದರೆ ಬರೆಹ ಸೋಲುತ್ತಿತ್ತು. ಜಗತ್ತು ಮರೆತೇಬಿಟ್ಟಿರುವ ordinarinessಗಳನ್ನು ನೆನಪಿಸಿ celebrate ಮಾಡುವ(ಬಾಳೆ ಎಲೆ, ಅಡಿಕೆ ಹಾಳೆ, ಸ್ನಾನದ ಹಂಡೆ) , ಅವು ಉಳಿಯಬೇಕಾದ ಅನಿವಾರ್ಯತೆಯನ್ನು ತಿಳಿಸುವ ಮಾದರಿಯವು. ಹಲಸಿನ ಹಣ್ಣಿನ ಮೂಲಕ ಕೌಟುಂಬಿಕ ಸಂಬಂಧಗಳನ್ನು ಗ್ರಹಿಸುವ , ಆನೆಗೆ ಕಾಡಲ್ಲಿ ಆಹಾರ ಬೆಳೆಯಲು ಹೊರಡುವ(ಕಲ್ಲುಬಾಳೆ), ತನ್ನ ಹೆಂಡತಿಗೆ ಏನೂ ಕೆಲಸವಿಲ್ಲ ಎನ್ನುವ ರೇಡಿಯೋ ಜಾಹೀರಾತನ್ನೂ ಉಲ್ಲೇಖಿಸುವ (ಒಂದು ಪದವನ್ನೂ ಬಿಡದ ಹಾಗೆ- ಧ್ಯಾನಸ್ಥ ಬದುಕಿದ್ದರೆ ಮಾತ್ರ ಇವೆಲ್ಲಾ ಹೊಳೆಯುವುದು), ತಮ್ಮ ಹೋರಿಯನ್ನು ಮಾರಾಟ ಮಾಡದೆ ಕಾಡಿಗೆ ಅಟ್ಟುವ ಸಂದಿಗ್ಧತೆಯನ್ನೂ ವಿವರಿಸುವ - ಕ್ರಮ ಅನನ್ಯ.

ದೇಸೀ ಸಂಸ್ಕೃತಿಯ, ಹಸಿರುಮೂಲ ಸ್ತ್ರೀಪರ ಆಲೋಚನೆಗಳ, ಕೃಷಿ ಸಂಸ್ಕೃತಿಯ, ಹಳ್ಳಿ-ನಗರಗಳ, ಹಳತು- ಹೊಸತರ ಮುಖಾಮುಖಿಯ , ವೈಜ್ಞಾನಿಕ ತಳಹದಿಯ ಬರೆಹಮಾಲೆಗಳಿವು. ಇದಕ್ಕಿಂತ ಸರಳಗೊಳಿಸಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗಿನ ಭಾಷಾ ಸರಳತೆ ಇಲ್ಲಿದೆ. ಅಲ್ಲಲ್ಲಿ ವಾಸ್ತವ ಹಾಸ್ಯ ಬರೆಹದ ಶಕ್ತಿಯನ್ನು ಹೆಚ್ಚಿಸುತ್ತದೆ.
*
ಕಾಜೂರು ಸತೀಶ್ 

Tuesday, April 11, 2023

ರಂಧ್ರ

ಜನರೆಂದರು:
'ಎಷ್ಟು ದೊಡ್ಡ ಹಡಗು
ತಿಮಿಂಗಿಲಕ್ಕೂ ಜಗ್ಗುವುದಿಲ್ಲ'

ಒಂದು ಸೂಜಿಮೊನೆಯಷ್ಟಿರುವ ರಂಧ್ರ ನಕ್ಕಿತು.

- ಕಾಜೂರು ಸತೀಶ್ 

Sunday, April 9, 2023

ಕೊಲೆ

ಕಲಾವಿದನ ಮೇಲೆ ಒಂದು ವರ್ಗದವರಿಗೆ ಸಿಟ್ಟಿತ್ತು. ಕೊಲ್ಲೋಣವೆಂದರೆ ಜನರು ಹೋರಾಟಕ್ಕಿಳಿಯುತ್ತಾರೆ ಎಂಬ ಭಯ ಅವರಲ್ಲಿತ್ತು.

ಒಂದು ಉಪಾಯ ಹೂಡಿದರು. ಕಲಾವಿದನ ನೆಂಟರ ಪಟ್ಟಿ ತಯಾರಿಸಿದರು. ಅವರಿಗೆ ಆಮಿಷವೊಡ್ಡಿ ಒಬ್ಬರಾದ ಮೇಲೊಬ್ಬರು ಕಲಾವಿದನ ಮನೆಗೆ ತೆರಳಿ ಅಲ್ಲಿದ್ದು ಬರಲು ತಿಳಿಸಲಾಯಿತು.

ಕಲಾವಿದ ಆತ್ಮಹತ್ಯೆ ಮಾಡಿಕೊಂಡ.
*
ಕಾಜೂರು ಸತೀಶ್ 

ಕತ್ತಲು


ಮೂವರು ಗೆಳೆಯರು ಪುಣ್ಯಕ್ಷೇತ್ರ ಭೇಟಿಗೆಂದು ಹೊರಟರು. 'ಮದುವೆಯಾಗಿ ಎಷ್ಟೋ ವರ್ಷಗಳಾಗಿವೆ,  ಜೀವನ ಸಾಕಾಗಿದೆ ಒಮ್ಮೆ ಹೋಗಿಬರೋಣ' ಅವಳೆಂದಳು. ಹಳೆಯ ಗೆಳೆಯ ಒಪ್ಪಿಕೊಂಡ. ಮೊನ್ನೆ ಮೊನ್ನೆ ಪರಿಚಯಕ್ಕೆ ಸಿಕ್ಕ ಹೊಸಗೆಳೆಯನನ್ನೂ ಅವಳು ಹೊರಡಿಸಿದಳು.

ಉರಿಬಿಸಿಲು. ಮೂವರೂ ಆಧಾರಕ್ಕೆಂದು ಕೋಲು ಊರುತ್ತಾ ಕಲ್ಲುಬಂಡೆಯ ಮೇಲೆ ಕಾಲು ಎತ್ತಿಡುತ್ತಾ ನಡೆಯತೊಡಗಿದರು.

"ಹೇಗಿದ್ದೇವೆ ನೋಡಿ ನಾವು ಮೂವರು..." ಅವಳೆಂದಳು. "...ಮೂರು ಯುಗಕ್ಕೆ ಸೇರಿದವರ ಹಾಗೆ. ನಾನು ಮದುವೆಯಾಗಿ ದಶಕಗಳು ಸಂದವು. ಇವನು ಮದುವೆಯ ಸಿದ್ಧತೆಯಲ್ಲಿರುವವನು. ಇನ್ನು ಇವನೋ, ಮದುವೆ ಸಂಸಾರ ಯಾವುದೂ ಬೇಡ ಎಂದುಕೊಂಡಿರುವವನು.."

 ''ಬದುಕು ನಶ್ವರ ಕಣ್ರೋ'' ಅವಳೆಂದಳು. ''ಎಂತ ಮಣ್ಣೂ ಅಲ್ಲ ವರ್ತಮಾನವನ್ನು ಎಂಜಾಯ್ ಮಾಡ್ಬೇಕು'' ಹೊಸ ಗೆಳೆಯ ಅಂದ. ''ನಿಜ, ಸ್ವಾತಂತ್ರ್ಯವೇ ಬದುಕು''
ಹಳೆಯ ಗೆಳೆಯ ನಕ್ಕು ಪ್ರತಿಕ್ರಿಯಿಸಿದ.

ಹೊಸ ಗೆಳೆಯ ಹಾಗೆ ಹೇಳುವಾಗ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದ. ಕಿರುಬೆರಳುಗಳನ್ನು ಮೆಲ್ಲನೆ ತೀಡುತ್ತಿದ್ದ. ಆ ಉರಿ ಬಿಸಿಲಿನಲ್ಲೂ ಅವಳು ಗೆಲುವಾಗಿ ಕಾಣತೊಡಗಿದಳು.
ಹಳೆಗೆಳೆಯ ಅವಳ ಗೆಲುವನ್ನು ಸಂಭ್ರಮಿಸಿದ.

ಆ ಕಾದ ದಾರಿಯಲ್ಲಿ ಇರುವೆಗಳು ಸಾಲುಸಾಲಾಗಿ ನಡೆದು ಬಿಸಿಲಿನ ಕಾವಿಗೆ ಸುಟ್ಟುಹೋಗಿದ್ದವು. ಹಳೆಗೆಳೆಯ ತೋರಿಸಿದ. ''ಒಂದು ಮಳೆ ಬಂದಿದ್ದಿದ್ದರೆ..'' ಅವನೆಂದ. ಅವರಿಬ್ಬರೂ ಅದನ್ನು ಕೇಳಿಸಿಕೊಳ್ಳದವರಂತೆ ಮುಂದೆ ನಡೆದರು.

ಒಂದು ಸುಂಟರಗಾಳಿ ಬಂದು ಹಳೆಗೆಳೆಯನ ಕಣ್ಣುಗಳನ್ನು ಕೆಂಪುಮಾಡಿ ಹೋಯಿತು. ಅವರಿಬ್ಬರೂ ಪರಸ್ಪರ ಮುಖಕ್ಕೆ ಮುಖಕೊಟ್ಟು ಅದರಿಂದ  ತಪ್ಪಿಸಿಕೊಂಡರು.

ನವಿಲೊಂದು ಹಾರಿತು. ಹಳೆಗೆಳೆಯ ತೋರಿಸಿದ. ಅವರಿಗದು ಕಾಣಿಸಲಿಲ್ಲ. ''ಪಾಂಡವರು ತುಳಿದ ಗುಡ್ಡ'' ಎನ್ನುತ್ತಾ ಹೊಸಗೆಳೆಯ ಕಲ್ಲಿನಲ್ಲಿ ಮೂಡಿದ್ದ ಪಾದದ ಗುರುತಿನ ಮೇಲೆ ತನ್ನ ಕಾಲನ್ನು ಇರಿಸಿದ. ಪಾದ ಮುಕ್ಕಾಲು ಭಾಗ ಆವರಿಸಿತು. ಅವಳು ಅವನ ಪಾದದ ಮೇಲೇ ತನ್ನ ಕಾಲನ್ನು  ಇರಿಸಿದಳು. ಅರ್ಧಭಾಗವಷ್ಟೇ ಆವರಿಸಿತು.
''ಯಾರೋ ಕೆತ್ತಿರ್ಬಹುದು'' ಹಳೆಯ ಗೆಳೆಯ ಅಂದ. ಅವರಿಬ್ಬರ ಮೌನ. ಇವನು ಮತ್ತೆ ಅದನ್ನು ಬೆಳೆಸಲು ಹೋಗಲಿಲ್ಲ.

ಮಧ್ಯಾಹ್ನ ಗುಡ್ಡದ ತುದಿ ತಲುಪಿದರು. ''ನಿಜ್ವಾಗ್ಲೂ ಲೈಫ್ ಏನೂ ಇಲ್ಲ ಅಂದ್ಕೊಂಡಿದ್ದೆ. ಇದು ಗೋಲ್ಡನ್ ಟೈಮ್. ಮನೆಯಲ್ಲಿದ್ದಿದ್ರೆ ಅಂಗಡಿ, ತೋಟ, ಮಕ್ಳು, ನೆಂಟ್ರು ಅಂತ ಸಾಯ್ಬೇಕಿತ್ತು'' ಅವಳೆಂದಳು. 'ಗುಡ್' ಹೊಸಗೆಳೆಯ ಅವಳ ತೋಳುಬಳಸಿ ಅಂದ.

ದೂರದಲ್ಲಿ ಗಂಟೆಯ ಸದ್ದು. ಜನಜಂಗುಳಿ. ಕೊಳದಲ್ಲಿ ಸ್ನಾನಮಾಡುತ್ತಿದ್ದ ಶ್ವೇತವಸ್ತ್ರಧಾರಿಗಳು. ಇನ್ನೂ ಒಂದು ಗಂಟೆ ನಡೆಯುವಷ್ಟು ದೂರ.   ''ಸಾಕು ಬಿಡ್ರೋ, ಅಲ್ಲಿ ಹೋಗೋದು ಬೇಡ'' ಅವಳೆಂದಳು. ಹೊಸಗೆಳೆಯ ಒಪ್ಪಿಕೊಂಡ.

ಹಳೆಗೆಳೆಯ ''ಬದುಕು ನಶ್ವರ, ಅನೂಹ್ಯ'' ಹೇಳಿಕೊಂಡ ತನಗಷ್ಟೇ ಕೇಳಿಸುವಂತೆ.
ಅವನು ಒಂದು ಹಾಡು ಹಾಡಿದ. 'ಸ್ಥಿರವಲ್ಲ ಕಾಯ ಸ್ಥಿರವಲ್ಲ..'  ಅವರಿಬ್ಬರು ನರ್ತಿಸಿದರು.' ನಿನ್ನ ಗರ್ಲ್ಫ್ರೆಂಡ್ ಕರ್ಕೊಂಡು ಬರ್ಬೇಕಿತ್ತು' ಹೊಸಗೆಳೆಯನ ಸೊಂಟವನ್ನು ಹಿಡಿಯುವ ಮೊದಲು  ಅವಳೆಂದಳು. ನರ್ತಿಸಿದ ಮೇಲೆ ಮೂವರೂ  ಅಲ್ಲೇ ಕುಳಿತು ತಂದಿದ್ದ ಹಣ್ಣುಗಳನ್ನು ತಿಂದರು. ಅವಳು ಹಳೆಗೆಳೆಯನ ಬಾಯಿಗೆ ಸೇಬಿನ ತುಂಡೊಂದನ್ನು ಪ್ರೀತಿಯಿಂದ ನೀಡಿದಳು. ಇವನೂ.

''ಇಲ್ಲಿಂದ ಹಾರಿದ್ರೆ ಹೇಗಿರುತ್ತೆ'' ಹಳೆಗೆಳೆಯ ಕೇಳಿದ. ''ಎಂಥಾ ಮಾತು ಆಡ್ತಿಯ, ಸುಮ್ನಿರು'' ಮುಖವನ್ನು ಸಪ್ಪೆಮಾಡಿಕೊಂಡು ಅವಳೆಂದಳು.

ಹಳೆಗೆಳೆಯ ಎದ್ದು ದೂರದ ಗುಡ್ಡಗಳ ಬಣ್ಣ ಬದಲಾವಣೆಯನ್ನು ಗಮನಿಸತೊಡಗಿದ. ಹಾರುವ ಬೆಳ್ಳಕ್ಕಿಯೂ ಕಪ್ಪಗೆ ಕಾಣತೊಡಗಿತು.

ಅವರಿಬ್ಬರು  ಮಾತಿನಲ್ಲಿ ಮೈಮರೆತರು. ಕೂದಲು ಬೆಳ್ಳಗಾಗುತ್ತಿರುವ ಬಗ್ಗೆ, ಹೊಟ್ಟೆ ಮುಂಚಾಚುತ್ತಿರುವ ಬಗ್ಗೆ, ಮಂಡಿಯಿಂದ ಟಕಟಕ ಸದ್ದುಬರುತ್ತಿರುವ ಬಗ್ಗೆ, ಗೂನುಬೆನ್ನಾಗುತ್ತಿರುವ ಬಗ್ಗೆ,ಬುದ್ಧನ ಬಗ್ಗೆ...

ಸೂರ್ಯ ಬಾಡತೊಡಗಿದ. ಅವರು ನಿಧಾನಕ್ಕೆ ಇಳಿಯತೊಡಗಿದರು . ಹಳೆಗೆಳೆಯ ಮುಂದೆ ಮುಂದೆ ಸಾಗಿ ದಾರಿತೋರಿದ. ಅವರಿಬ್ಬರು ಅದೇ ಹಾದಿಯಲ್ಲಿ ಸಾಗಿದರು. ಅವರಿಗಿಂತಲೂ ಮುಂದೆ ಬರುತ್ತಿದ್ದ ನೆರಳು ಕ್ರಮೇಣ ಒಂದೇ ಆಗಿ ನಡೆಯತೊಡಗಿತು. ಇದ್ದಕ್ಕಿದ್ದಂತೆ ಸಂಶಯದ ಹುಳು ಹಳೆಗೆಳೆಯನನ್ನು ಹೊಕ್ಕಿತು. ಬಂಡೆಯ ಮರೆಯಲ್ಲಿ ನಿಂತು ಗಮನಿಸಿದ. ಅವರಿಬ್ಬರ ಕೈಗಳು ಪರಸ್ಪರ ಕೈಗಳನ್ನು ಹಿಡಿದುಕೊಂಡು ಮುಂದೆ ಸಾಗುತ್ತಿದ್ದಂತೆ ಅನಿಸಿತು. ' ಅನಿಸಿದ್ದು ನಿಜವೇ ಆದರೆ ಎಷ್ಟು ಪ್ರೀತಿ! ತನಗೂ ಒಮ್ಮೆ ಇದೇ ಪ್ರೀತಿ ಲಭಿಸಿತ್ತು, ಈಗ ಅದು ಇಲ್ಲವೇ?' ಹೇಳಿಕೊಂಡ. ಅವಳ ಮುದ್ದುಮುಖದ ಕಾಂತಿ ಮತ್ತಷ್ಟೂ ಏರಿತ್ತು. ಹಳೆಗೆಳೆಯ ಸಂಭ್ರಮಿಸಿದ. ಮುಂದೆ ಮುಂದೆ ಕ್ರಮಿಸಿದ.

ಸೂರ್ಯ ಕಣ್ಮರೆಯಾದ ಮೇಲೆ ಹಳೆಯ ಗೆಳೆಯ ಅವರಿಬ್ಬರಿಗಾಗಿ ಕಾದು ಕುಳಿತ. ಕೈಚಾಚಿದ.ಕತ್ತಲು ಕೈಗೆ ಅಂಟಿಕೊಂಡಿತು. ಕಣ್ಣಿಗೂ. ತನ್ನನ್ನು ಈ ಕ್ಷಣದಲ್ಲಿ ಮರೆತರೇ? ಅಥವಾ ತನಗಾಗಿ ಹುಡುಕುತ್ತಿರುವರೇ? ಕರೆಯುವ ದನಿಯಾದರೂ ಯಾಕೆ ಕೇಳುತ್ತಿಲ್ಲ.ಉಸಿರ ಸಪ್ಪಳ ಹೋಗಲಿ, ಕನಿಷ್ಟ ಹೆಜ್ಜೆಯ ಸಪ್ಪಳವಾದರೂ?

ಹಗಲಿನ ಬಿಸಿಲನ್ನು ಮರೆಸುವಂತಿದ್ದ ಆ ರಾತ್ರಿಯ ಚಳಿ ಅವನನ್ನು ಮರಗಟ್ಟುವಂತೆ ಮಾಡಿತು. ''ಬದುಕು ಸತ್ಯದಂತಿರುವ ಸುಳ್ಳು ಅಥವಾ ಸುಳ್ಳಿನಂತಿರುವ ಸತ್ಯ'' ಅವನೆಂದ. ಕಣ್ಣುಗಳು ಮುಚ್ಚಿದರೂ ತೆರೆದರೂ ವ್ಯತ್ಯಾಸವಿಲ್ಲದ ಕತ್ತಲದು.
ಮರುದಿನದ ಸೂರ್ಯ ಕಣ್ಣುಬಿಟ್ಟಾಗ ಅವನಿಗೆ ಅದು ಕಾಣಲಿಲ್ಲ.

 
ಅವಳು ಅವಳ ಮನೆಯಲ್ಲಿ ಯಾರಿಗೂ ತಿಳಿಯದ ಹಾಗೆ ಕಣ್ಣೀರು ಸುರಿಸುತ್ತಿದ್ದಳು. 'ನಿನ್ನ ಸ್ಥಾನವನ್ನು ತುಂಬುವವರು ಈ ಜಗತ್ತಿನಲ್ಲಿ ಯಾರೂ ಇಲ್ಲ. ಹೀಗೆ ಮಾಡಬಾರದಿತ್ತು ನೀನು' ಸಾವಿರ ಬಾರಿ ಅವಳೆಂದಳು. ಅಮ್ಮಾ 'ಕಕ್ಕ' ಮಗ ಐದಾರು ಬಾರಿ ಹೇಳಿದ್ದು ಅವಳಿಗೆ ಕೇಳಿಸಲೇ ಇಲ್ಲ.

*



-ಕಾಜೂರು ಸತೀಶ್ 

Wednesday, February 8, 2023

ಎಡ-ಬಲ

ನಿಲ್ದಾಣ ಬಂದಿತು. ಊಟ ಮಾಡಲು ಸಮಯ ಸಿಗಲಿಲ್ಲ. ನೀರು ಕುಡಿಯದೆ ಹೊಟ್ಟೆ ಸುಟ್ಟಿತ್ತು. ಪಕ್ಕದಲ್ಲಿದ್ದ ಹುಡುಗನಿಗೆ ಸೀಟು ಕಾಯ್ದಿರಿಸಲು ತಿಳಿಸಿ ಒಂದು ನೀರು ಬಾಟಲಿ ತರಲು ಬಸ್ಸು ಇಳಿದೆ.

ಹುಡುಗ ಹಿಂದಿನ ನಿಲ್ದಾಣದಲ್ಲಿ ಹತ್ತಿದ್ದ. ತನ್ನ ಗುಂಪಿಗೆ ಕೆಲವರು ಸೇರುತ್ತಿಲ್ಲವೆಂದೂ, ತನ್ನ ಹಾಗೆ ಅವರು ಚಿಂತಿಸುತ್ತಿಲ್ಲವೆಂದೂ ಫೋನಿನಲ್ಲಿ ಯಾರೊಂದಿಗೋ ಹೇಳುತ್ತಿದ್ದ: 'ನಿಮ್ಮ ಯೋಚನಾಕ್ರಮವೇ ಸರಿಯಿಲ್ಲ...'

ನೀರು ತಂದು ನಿಟ್ಟುಸಿರು ಚೆಲ್ಲಿದೆ. ಮುಚ್ಚಳ ತೆಗೆದೆ. ಅಷ್ಟರಲ್ಲಿ 'ನೀರು' ಎಂದ ಆ ಹುಡುಗ. ಕೊಟ್ಟೆ.

ಅವನು ಮಗುವಿನ ಹಾಗೆ ನೀರು ಕುಡಿದ. ಒಂದು ಹನಿ ಉಳಿಸಿದ್ದ. 'Sorry ಜಾಸ್ತಿ ಕುಡಿದುಬಿಟ್ಟೆ' ಎಂದ.

ಬಸ್ಸು ಹೊರಟಿತು. ಬಾಟಲಿಯಲ್ಲಿ ಉಳಿದ ಆ ಹನಿ ಕರುವಿನ ಹಾಗೆ ಚಂಗನೆ ಕುಣಿದು ಕುಪ್ಪಳಿಸುತ್ತಿತ್ತು.ಬೆರಗಿನಿಂದ ಅದನ್ನೇ ನೋಡಿದೆ.

*
ಕಾಜೂರು ಸತೀಶ್

Thursday, February 2, 2023

I will light a lamp

#Kannada poetry in English translation

#Kajooru Satish: “Belaka Hacchuttene”

#Translation: Kamalakar Kadave

“I will light a lamp”

I won’t speak of darkness
I will light a lamp

If there are no matches
I will strike stone upon stone
If there are no stones
I will use weapons

Weapons will always be there
I will light a lamp

I won’t speak about even light
I will light a lamp
And light a lamp I will.

ಬೆಳಕ ಹಚ್ಚುತ್ತೇನೆ

ಕತ್ತಲ ಕುರಿತು ಮಾತನಾಡುವುದಿಲ್ಲ.
ಬೆಳಕ ಹಚ್ಚುತ್ತೇನೆ.

ಕಡ್ಡಿಯಿಲ್ಲದಿದ್ದರೆ
ಕಲ್ಲುಗಳನೇ ತೀಡಿ
ಕಲ್ಲುಗಳೇ ಇಲ್ಲದಿದ್ದರೆ
ಆಯುಧಗಳನೇ ತೀಡಿ

ಆಯುಧಗಳು ಇದ್ದೇ ಇರುತ್ತವೆ
ಬೆಳಕ ಹಚ್ಚುತ್ತೇನೆ

ಬೆಳಕಿನ ಕುರಿತೂ ಮಾತನಾಡುವುದಿಲ್ಲ
ಬೆಳಕ ಹಚ್ಚುತ್ತೇನೆ
ಹಚ್ಚುತ್ತೇನೆ ಬೆಳಕ

*
ಕನ್ನಡ ಮೂಲ- ಕಾಜೂರು ಸತೀಶ್ 



ಇಂಗ್ಲಿಷ್ ಅನುವಾದ- ಕಮಲಾಕರ ಕಡವೆ

ಕಣ್ಣಲ್ಲಿಳಿದ ಮಳೆಹನಿಗಳ ಕುರಿತು ಡಾ. ಕಮಲಾಕರ ಕಡವೆ

ಓದಿದರೆ 'ಉಫ್ ' ಎಂಬ ಉದ್ಗಾರ ಹೊರಬೀಳಬೇಕು, ಅದು ಕವಿತೆ. ಅರೆನಿಮಿಷ ಮುಂದೆ ಓದುವುದು ಅಸಾಧ್ಯವಾಗುವ ಧ್ಯಾನದಲ್ಲಿ ಮುಳುಗಬೇಕು. ಅದು ಕವಿತೆ. ಗಾತ್ರ ಕುಗ್ಗಿ ಕುಗ್ಗಿ ಗೆರೆ ಹೊಡೆದಷ್ಟು ಕಿರಿದಾದ ಸಾಲು, ಚರಣ ಅರ್ಥದ ಕಿಡಿ ಹೊತ್ತಿಸಬೇಕು. ಅದು ಕವಿತೆ. ಹೀಗೆ ಒಮ್ಮೊಮ್ಮೆ ಅನಿಸುತ್ತದೆ. ಅಪರೂಪಕ್ಕೆ ಕವಿ ಇಂತಹ ಕವಿತೆಗಳನ್ನೇ ನಮ್ಮ ಮುಂದೆ ಇಡುತ್ತಾರೆ. ಅಂತಹ ಒಂದು ಸಂಕಲನ ನನ್ನ ಕೈಯಲ್ಲಿದೆ. ಅದು ಕಾಜೂರು ಸತೀಶ್ ಅವರ "ಕಣ್ಣಲ್ಲಿಳಿದ ಮಳೆಹನಿ". (ಸಂಗಾತ ಪುಸ್ತಕ, ರಾಜೂರ. ಪ್ರತಿಗಳಿಗೆ 9341757653).


ನನ್ನ ಮಿತ್ರರಾದ ಜಯಶ್ರೀನಿವಾಸ್ ರಾವ್ ಕಾವ್ಯದ ಕುರಿತಾದ ಕವನಗಳ ಬಗೆಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ಅವರಿಂದಾಗಿ ನನಗೂ ಅಂತಹ ಕವನಗಳ ಬಗ್ಗೆ ವಿಶೇಷ ಕುತೂಹಲ. ಇಲ್ಲಿ ನೋಡಿದರೆ, ಕಾಜೂರು ಸತೀಶ್ ಅವರು ಅನೇಕ ಕವನಗಳಲ್ಲಿ ಕಾವ್ಯ, ಕಾವ್ಯರಚನೆಗಳ ಕುರಿತಾಗಿಯೇ ಕವಿತೆಗಳನ್ನು ಬರೆದಿದ್ದಾರೆ. ಅದೂ ತುಂಬಾ ನವಿರಾಗಿ, ತುಂಬಾ ಸೂಕ್ಷ್ಮವಾಗಿ, ತುಂಬಾ ಸಂವೇದನಾಶೀಲತೆಯಿಂದ. ಕವನವನ್ನು ಶೃಂಗಾರ ಎಂದೇನೂ ಅವರು ನೋಡುವುದಿಲ್ಲ, ಖಡ್ಗವೆಂತಲೂ ನೋಡುವುದಿಲ್ಲ. "ಕೊಲೆ" ಎಂಬ ಕವನದಲ್ಲಿ ಎದೆ ಸೀಳಲು ಬಂದವರಿಗೆ ಹೂ ಕೊಡುವ ಕವಿತೆಯ ಚಿತ್ರಣವಿದೆ. ಆಹಾ, ಅದ್ಭುತ ಕಲ್ಪನೆ. ಅಂದರೆ, ಇಲ್ಲಿ ಧ್ಯಾನಕ್ಕೆ ಒಳಗಾಗಿರುವುದು ಕವಿತೆ ಆಗಿದ್ದರೂ, ಅರ್ಥವಿಸ್ತಾರದಲ್ಲಿ ನಮಗೆ ಇದರ ಹಿಂದೆ ಒಂದು ಆರ್ದ್ರ ಮಾನವೀಯತೆಯೇ ಕಾಣುತ್ತದೆ.

 "ರೊಟ್ಟಿ" ಎಂಬ ಕವನದಲ್ಲಿ "ನನ್ನ ಹೊಟ್ಟೆಗಿಳಿವ ರೊಟ್ಟಿ/ ಅವಳ ಹೆಬ್ಬೆಟ್ಟು ಸಹಿಗಳ ಜೀರ್ಣಿಸಿ/ ಕವಿತೆಗಳ ಜನನ" ಎಂದಾಗಲೂ ನಮ್ಮ ಲಕ್ಷ ಹೋಗುವುದು ತಾಯಿಯ ಕುರಿತಾಗಿ ಕವಿ ಹೇಳುವ ಮಾತಿನೆಡೆಗೆ. ಅತ್ಯಂತ ಏಕಾಗ್ರತೆಯಿಂದ, ಹೇಳ ಬೇಕಿರುವ ಮಾತಿನಲ್ಲಿ ಅತ್ಯವಶ್ಯಕವಾದುದನ್ನು ಮಾತ್ರ ಉಳಿಸಿ, ಎಲ್ಲಿಯೂ ಕ್ಲಿಷ್ಟತೆಗೆ ಆಸ್ಪದ ಕೊಡದೆ, ಎಲ್ಲಿಯೂ ವಾಚಾಳಿ ಆಗದೇ, ಸಮರ್ಥ ಪ್ರತಿಮೆಗಳ ಮೂಲಕವೇ ಕಮ್ಯುನಿಕೇಟ್ ಮಾಡುತ್ತಾರೆ ಸತೀಶ್. ಬಿಗಿ ಬಂಧದ ಅವರ ಈ ಕವನಗಳಲ್ಲಿ ಅಳೆದು ಅಳೆದು ಇಟ್ಟಂತಿವೆ ಪದಗಳು. ಬಹುತೇಕ ಕವನಗಳಲ್ಲಿ ಇಟ್ಟ ಪದಗಳು ವ್ಯರ್ಥವಲ್ಲ. ಹಾಗೆಯೇ, ಕವಿತೆಗಳು ಸ್ಫುರಿಸುವ ಭಾವಗಳೂ ಕೂಡ ತೋರಿಕೆಯದಲ್ಲ. ಅವರ ನೇರ, ನಿಖರ, ನಿರ್ದಿಷ್ಟ ಶೈಲಿಯ ಹಾಗೆಯೇ ಭಾವಗಳೂ ಸುಸ್ಪಷ್ಟ ಮತ್ತು ಸೂಕ್ಷ್ಮ. ಅನೇಕ ಕವನಗಳಲ್ಲಿ ಮುನ್ನೆಲೆಗೆ ಬರುವ ರೂಪಕಗಳು ಸತ್ವಶಾಲಿಯಾಗಿವೆ, ತಟ್ಟನೆ ನಮ್ಮನ್ನು ಆವರಿಸಿ ಬಿಡುತ್ತವೆ. ಹಾಗೆಂದೇ ಇಲ್ಲಿನ ಕವನಗಳು ತುಂಬಾ ಸಂಕ್ಷಿಪ್ತ. ದನಿಯೂ ಮೃದು - ಚೀರಾಟ, ಕೂಗಾಟಗಳಿಲ್ಲ. ಚರ್ವಿತ ಚರ್ವಣ ದಾರಿ ತೊರೆದು ತನ್ನದೇ ಆದ ದಾರಿ ಹುಡುಕುವ ಕವಿಗೆ ದೊರೆಯುವ ಯಶಸ್ಸು ಕಾಜೂರು ಸತೀಶ್ ಅವರಿಗೆ ದೊರಕಿದೆ.
 ಸುಳ್ಳಾ, ನೀವೇ ನೋಡಿ:

"ಬುಡ್ಡಿ ದೀಪದ ಬುಡ"

ಹಚ್ಚಿಟ್ಟರೆ ಬುಡ್ಡಿ ದೀಪ
ಹಸಿದ ಕೀಟಕ್ಕೆ ಹಣ್ಣಾಗಿ ತೋರುವುದು

ಆಮೇಲೆ
ಬುಡ್ಡಿ ದೀಪದ ಬುಡದ ಕಪ್ಪುಗಂಬಳಿ
ಲಾಲಿ ಹಾಡುವುದು
ಸಾವನು ಲಾಲಿ ಹಾಡುವುದು

ಹಸಿದು ಸತ್ತವರಿಗೆಲ್ಲ ಹೀಗೇ
ಒಂದು ಹಣ್ಣು ಕಂಡಿರಬಹುದು
ಬೆಳಕ ಭ್ರಮೆಯಲ್ಲಿ.

*


  ✍️ಕಮಲಾಕರ ಕಡವೆ

Sunday, January 1, 2023

ಮೊದಲ ಮಳೆಯ ಕವಿತೆಗಳ ಗಂಧ


ಅವರು 
ನಮ್ಮಿಬ್ಬರ ನಡುವೆ
ಗೆರೆ ಕೊರೆದರು

ನಮ್ಮ 
ಅಗಲಿಕೆಯನು 
ನಿರೀಕ್ಷಿಸಿದರು

ನಮ್ಮ 
ಕಂಪನದ ತೀವ್ರತೆಗೆ
ಮಾಪಕ ಹಿಡಿದು ನಿಂತರು

ನಾವು 
ಕೋನವಾಗಿ
ನೆಲೆ ನಿಂತೆವು
(ಅದೃಷ್ಟ ರೇಖೆ)
*


ಚೈತ್ರಾ ಶಿವಯೋಗಿಮಠ ಅವರ ಪೆಟ್ರಿಕೋರ್ ಸಂಕಲನದ ಮೊದಲ ಕವಿತೆಯಿದು(ಜಾನ್ ಡನ್ ಈ ಬಗೆಯ conceitಗಳನ್ನು ಬಳಸಿ ಪ್ರೇಮದ ಅಮರತ್ವವನ್ನು ಸಾರಿದ್ದ). ಇದು  ನಾನು-ನೀನು, ಅವನು-ಅವಳುಗಳ ಪ್ರೇಮದ ಮೊದಲ ಮಳೆಯ ಮಣ್ಣ ಗಂಧ(ಪೆಟ್ರಿಕೋರ್)ವನ್ನು ಮೈದುಂಬಿಕೊಂಡ ಸಂಕಲನ.

  ಈ ನಾನು-ನೀನುಗಳ ಕೋನವು ಸಮಾಂತರ ರೇಖೆಗಳಾಗಿ ಚಲಿಸಿ ಸಂಧಿಸಿ ಕೋನವಾಗುವ ಬಯಕೆ ಕವಿಯದು. 

 ಈ ಜೋಡಿ 
ಸಮಾಂತರ ರೇಖೆಗಳು 
ಸಂಧಿಸಿ ಕೋನವಾಗುವ ಕಾಲ
(ಸಮಾಂತರ ರೇಖೆಗಳು)

ಈ ನಟ್ಟಿರುಳಲಿ
ಗೋಡೆ ತಬ್ಬಿದ ಗಡಿಯಾರದ
ಮೂರು ಬಾಹುಗಳನ್ನ ಬಿಗಿಯಾಗಿ ಕಟ್ಟಿ
ಒಂದಾಗಿ ಜೇನುಹನಿ
ಹನಿಹನಿಯಾಗಿ ಸ್ರವಿಸುವ ಸುಖಕೆ
(ನಮ್ಮಿಬ್ಬರ ನಡುವಿನ ಹೂವು)

ಈ ತುಟಿಪಕಳೆಗಳು 
ಅಹರ್ನಿಶಿ ಸೋಕಿದವು
ಆದರೂ ಅದು
ಚುಂಬನವಲ್ಲ ಮಹಾಮೈತ್ರಿ
(ಇದೊಂದು ಅದೃಷ್ಟ )
*

ಗಂಡು ಹೆಣ್ಣುಗಳ ಧ್ಯಾನ ಅಲೌಕಿಕವಾಗಿಯೂ ಇಲ್ಲಿ ಸಾಗುತ್ತದೆ:

ತಳುಕು ಬಿದ್ದ 
ನಾಗರ ಜೋಡಿ
ಅವನಿವಳ ಇವಳವನ
ಅದ್ವೈತವಾಗಿಸಿಕೊಂಡು ಬಿಡು.
( ಈ ಮರ್ತ್ಯದೊಳಗೆ)

ಹೆಣ್ಣಿನ ಒಳಹೊರಗುಗಳು ನಿಸರ್ಗದ  ಪರಿಭಾಷೆಯಲ್ಲಿ ವ್ಯಕ್ತವಾಗುತ್ತದೆ. ಚಿತ್ರಕ ಶಕ್ತಿಯಿದೆ ಕವಿಗೆ. ಇಲ್ಲಿ ಈಗಾಗಲೇ ಚೌಕಟ್ಟಿಗೆ  ಒಳಗಾಗಿರುವ ಸ್ತ್ರೀವಾದವಿಲ್ಲ. ಎಂದರೆ, ಸ್ತ್ರೀಯ ಮೇಲಿನ ಶೋಷಣೆ-ಮೆಚ್ಚುಗೆಗಳ ಮೇಲೆ  ಅವರು ಕವಿತೆ ಕಟ್ಟುವುದಿಲ್ಲ. ಇರುವ ಮಾದರಿಯನ್ನು ಮುರಿಯುವ ಕ್ರಮವದು.

ಅವಳ ಮಣ್ಣಿನ ಹುಂಡಿಯಲಿ
ಚೂರುಪಾರಾದ
ಕೂಡಿಸಿಟ್ಟ ಚಿಲ್ಲರೆ ಗೋಲಕ
ಪಳಾರನೆ ಒಡೆಯಲು
ಚೆಲ್ಲಾಪಿಲ್ಲಿಯಾಗಿ ಗಗನ ತುಂಬುವ ಬಿಲ್ಲೆಗಳು
ಒಡೆದ ಕುಡಿಕೆಯ ಪದರುಪದರು ಮೋಡಗಳು
(ಬೆಳದಿಂಗಳ ಬಯಕೆ)

 ನಿವೇದನೆಗಳ ಮಾದರಿಯಿವು. ಪ್ರೇಮ, ಭಕ್ತಿ, ವಿರಹ, ಮುಗ್ಧತೆ, ಪ್ರಾರ್ಥನೆ ಇಲ್ಲಿನ ವಸ್ತು. ಅನುಭಾವದ ಸೆಳಕಿವೆ ಇಲ್ಲಿ(ಕೆಲವೊಮ್ಮೆ ಒಂದೇ ಕೇಂದ್ರದ ಸುತ್ತ ಮತ್ತೆಮತ್ತೆ ಚಲಿಸಿದಂತೆಯೂ ಅನಿಸುತ್ತದೆ).
ಆಧುನಿಕ ಪರಿಭಾಷೆ ಅಲ್ಲಲ್ಲಿವೆ(ಜಿಪ್ ಲೈನ್, ಬ್ಲ್ಯಾಕ್ ಹೋಲ್, ಸಾಫ್ಟ್ ಸಂತೆ, ಇತ್ಯಾದಿ). ಸಾಮಾಜಿಕಗೊಳ್ಳುವ ಬಗ್ಗೆ ಕವಿಗೆ ಆಸಕ್ತಿಯಿಲ್ಲದಿದ್ದರೂ, 'ಬಣ್ಣ' ಕವಿತೆಯಲ್ಲಿ 

ಬಟ್ಟೆ ತೊಟ್ಟ
ಈ ಬೆತ್ತಲೆ
ಜನರ ನಡುವೆ

ಆಗಾಗ 
ನಾನು ಕಳಚುತ್ತೇನೆ
ಬಿಳಿ ಹಸಿರು ಕಪ್ಪು ಕೇಸರಿ
ಬಣ್ಣದ ಚಿಟ್ಟೆ

ಆದರೆ

ನನ್ನದೇ ಜನ
ನೋಡುತ್ತಾರೆ ನನ್ನ
ಅವರದೇ ಕಾಮಾಲೆ ಕಣ್ಣಿನಿಂದ

ಎಂದು ಸಾಮಾಜಿಕ ಅಮಲಿನ ಮೇಲೂ ಕಣ್ಣುಹಾಯಿಸುತ್ತಾರೆ.ಆದರೆ, ಈ ಬಗೆಯ ನೋಟಕ್ರಮದ ಅನುಪಸ್ಥಿತಿ ಉಳಿದ ಕವಿತೆಗಳಲ್ಲಿ ಕಾಣಿಸುತ್ತದೆ. 


ಚೈತ್ರಾ ಶಿವಯೋಗಿಮಠ ಅವರ ಮೊದಲ ಸಂಕಲನವಿದು. ಹೊಸತನಕ್ಕೆ ಜಿಗಿಯುವ ಗುಣಗಳಿವೆ ಈ ಕವಿತೆಗಳಿಗೆ.  ಹಲವು ಕವಿತೆ/ಕತೆಗಳನ್ನು ಆಕರ್ಷಕವಾಗಿ ಓದಿ ಕೇಳಿಸುವ ಮೂಲಕ ಗಮನ ಸೆಳೆಯುತ್ತಿರುವ ಚೈತ್ರಾ ಶಿವಯೋಗಿಮಠ ಅವರು ವೃತ್ತಿಯಲ್ಲಿ ಇಂಜಿನಿಯರ್ .
 
ಈ ಪುಸ್ತಕದ ಗುಣಮಟ್ಟ ಹಾಗೂ ವಿನ್ಯಾಸ ಅತ್ಯುತ್ತಮವಾಗಿದೆ( ಆತ್ಮಿಕಾ ಪುಸ್ತಕ ಬೆಂಗಳೂರು).  ಚೈತ್ರಾ  ಅವರ ಕಾವ್ಯಯಾನ ಅವರನ್ನು ಮತ್ತಷ್ಟೂ  ಮುನ್ನಡೆಸಲಿ.
*
ಕಾಜೂರು ಸತೀಶ್