ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, April 16, 2023

ಅಪ್ಪಟ ಭೂಮಿಗೀತ


ಹದಿಮೂರು ವರ್ಷಗಳ ಹಿಂದೆ ಒಂದು ಸಾಹಿತ್ಯ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಹೋಗಿದ್ದೆ. ಕೊಡಗಿನಿಂದ ಅಲ್ಲಿಗೆ ಯಾರೂ ಬರುವುದಿಲ್ಲ ಎಂದುಕೊಂಡಿದ್ದೆ. ಅದು ಸುಮಾರು ಹೊತ್ತು ನಿಜವೂ ಆಗಿತ್ತು. ಆಮೇಲೆ ನನ್ನ ಮುಂದೆ ಒಬ್ಬರು ನಡೆದುಹೋಗುತ್ತಿದ್ದರು. 'ಮೇಡಂ ,ಗೊತ್ತಾಯ್ತಾ? ಕೇಳಿದೆ. 'ಇಲ್ಲ , ನನಗೆ ಅಷ್ಟು ಬೇಗ ಗುರ್ತಾ ಸಿಗುವುದಿಲ್ಲ ಆಯ್ತಾ' ಎಂದರು.

ಕಳೆದ ಮಾರ್ಚ್ 26ಕ್ಕೆ ಅವರು ಸಿಕ್ಕರು.

ಈ ನಡುವೆ ಹಲವಾರು ಬಾರಿ ಅವರನ್ನು ನೋಡಿದ್ದೇನೆ, ಭಾಷಣ ಆಲಿಸಿದ್ದೇನೆ , ಕವಿತೆ ಕೇಳಿದ್ದೇನೆ, ಲೇಖನಗಳನ್ನು ಓದಿದ್ದೇನೆ. ಮುಂದುವರಿದು 'ಸಹನಾ ಕಾಂತಬೈಲು ಅವರ ಪುಸ್ತಕಗಳನ್ನು ಕಳಿಸಿ' ಎಂದು ಪ್ರಕಾಶಕರಿಗೆ ಸಂದೇಶ ಕಳಿಸಿದ್ದೇನೆ.



ಈಚೆಗೆ , ಆಯಿರಸುಳಿ ಜಂಗಲ್ ಹಾಡಿಯಲ್ಲಿ ಕವಿತೆ ಓದುತ್ತಿದ್ದೆವು. ಹಿನ್ನೆಲೆಯಲ್ಲಿ ಆನೆ ಘೀಳಿಡುವ ಸದ್ದು ಕೇಳಿಸುತ್ತಿತ್ತು. ಅಲ್ಲಿ ಸಹನಾ ಕಾಂತಬೈಲು ಅವರು ನನ್ನ ಕೈಗೆ 'ಆನೆ ಸಾಕಲು ಹೊರಟವಳು' ಕೃತಿಯನ್ನು ನೀಡಿ ಇದು ಈಗ ನಾಲ್ಕನೆಯ ಮುದ್ರಣ ಎಂದರು (ಶ್ರೀರಾಮ ಬುಕ್ ಸೆಂಟರ್ ,ಮಂಡ್ಯ). ಡಾ. ಹಾ.ಮಾ.ನಾಯಕ ಅಂಕಣ ಬರಹ ಪುರಸ್ಕಾರ ಪಡೆದಿದೆ ಈ ಕೃತಿ.



*
ಸಹನಾ ಕಾಂತಬೈಲು ಅವರು ತುಂಬಾ progressive thoughtಗಳಿಂದ ಆಗಿರುವವರು. ಈ ಅಂಕಣಮಾಲೆ 'ಅಂಕಣ' ಆಗಬೇಕಾದ ತುರ್ತಿನಲ್ಲಿ ಹುಟ್ಟಿರುವವು. ಆದರೆ, ಅಂಕಣದ ಹಿಂದಿನ ಸಿದ್ಧತೆಗಳೆಂದರೆ ಮಂಗಳೂರಿಗೆ ತೆರಳಿ laptop ರಿಪೇರಿ ಮಾಡಿಸುವುದು, ಅದಕ್ಕಾಗಿ ಪಟ್ಟುಬಿಡದೆ ಕತ್ತಲಾಗುವವರೆಗೆ ಅಂಗಡಿಯಲ್ಲಿ ಕುಳಿತುಕೊಳ್ಳುವುದು!. ದೈನಿಕದ ಕ್ಷಣಗಳು ಹುಟ್ಟಿಸಿದ ಸೃಷ್ಟಿ ಅವು. ಆದರೂ ಬರೆದು ಮುಗಿಸಿದ ಮೇಲೆ / ಪ್ರಕಟವಾದ ಮೇಲೆ outdated ಆಗದ ಹಾಗೆ ತಾಜಾ ಆಗಿ ಉಳಿದುಕೊಂಡಿದೆ. ಅದೇ ನಾಲ್ಕನೆಯ ಮುದ್ರಣದವರೆಗೆ ಈ ಕೃತಿ ಕ್ರಮಿಸಿದ ಹಿನ್ನೆಲೆ.


ತಮ್ಮ ಮನೆಯ ಎದುರಲ್ಲಿ ಗೆಳತಿಯರೊಂದಿಗೆ

'ನಾನು ಕೃಷಿಕ ಮಹಿಳೆ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸಹನಾ ಕಾಂತಬೈಲು ಅವರ ಪ್ರತೀ ವಾಕ್ಯದಲ್ಲೂ ಉತ್ಸಾಹ ಪುಟಿಯುತ್ತದೆ. ತಮಗೆ ತಿಳಿಯದ್ದನ್ನು ಕಲಿಯುವ ಅಪಾರ ಹಂಬಲವಿದೆ ಅಲ್ಲಿ. ಕೊಟ್ಟಿಗೆಯಿಂದ ಕಟ್ಟುಬಿಚ್ಚಿದ ಕರುವಿನ ಕುಣಿದಾಟದ ಹಾಗಿರುವ ಉತ್ಸಾಹ ಅದು. ಮುಂಬೈ ವಿವಿಯಲ್ಲಿ ಆಹ್ವಾನಿತರಾಗಿ ಹೋಗುವಾಗ, ಅಮೇರಿಕದ ಗ್ರಂಥಾಲಯವನ್ನು ಭೇಟಿಮಾಡುವಾಗ ಅವರ ಕುತೂಹಲ, ಮುಜುಗರ, ಆತ್ಮವಿಶ್ವಾಸ, ಕೊರಗು- ಒಟ್ಟೊಟ್ಟಿಗೆ ವ್ಯಕ್ತವಾಗುತ್ತದೆ. ಜೋಪಡಿ ಮನೆಯ ಹೆಣ್ಣಿನ ಬದುಕನ್ನೂ ಅಪಾರ್ಟ್ಮೆಂಟಿನಿಂದ ಇಣುಕಿನೋಡಿ ನೋಯುವ ಹೃದಯವಿರುವ ಬರೆಹವಿದು.

ಚೆಂಬುವಿನಿಂದ ಮುಂಬಯಿಗೆ ತಲುಪುವಾಗ ಅಮೇರಿಕಾಕ್ಕೆ ಹಾರುವಾಗ ಅಂಕಣದ ವಸ್ತುವನ್ನಷ್ಟೇ ಅರಸಲು ತಮ್ಮನ್ನು limit ಮಾಡಿಕೊಂಡಿದ್ದರೆ ಬರೆಹ ಸೋಲುತ್ತಿತ್ತು. ಜಗತ್ತು ಮರೆತೇಬಿಟ್ಟಿರುವ ordinarinessಗಳನ್ನು ನೆನಪಿಸಿ celebrate ಮಾಡುವ(ಬಾಳೆ ಎಲೆ, ಅಡಿಕೆ ಹಾಳೆ, ಸ್ನಾನದ ಹಂಡೆ) , ಅವು ಉಳಿಯಬೇಕಾದ ಅನಿವಾರ್ಯತೆಯನ್ನು ತಿಳಿಸುವ ಮಾದರಿಯವು. ಹಲಸಿನ ಹಣ್ಣಿನ ಮೂಲಕ ಕೌಟುಂಬಿಕ ಸಂಬಂಧಗಳನ್ನು ಗ್ರಹಿಸುವ , ಆನೆಗೆ ಕಾಡಲ್ಲಿ ಆಹಾರ ಬೆಳೆಯಲು ಹೊರಡುವ(ಕಲ್ಲುಬಾಳೆ), ತನ್ನ ಹೆಂಡತಿಗೆ ಏನೂ ಕೆಲಸವಿಲ್ಲ ಎನ್ನುವ ರೇಡಿಯೋ ಜಾಹೀರಾತನ್ನೂ ಉಲ್ಲೇಖಿಸುವ (ಒಂದು ಪದವನ್ನೂ ಬಿಡದ ಹಾಗೆ- ಧ್ಯಾನಸ್ಥ ಬದುಕಿದ್ದರೆ ಮಾತ್ರ ಇವೆಲ್ಲಾ ಹೊಳೆಯುವುದು), ತಮ್ಮ ಹೋರಿಯನ್ನು ಮಾರಾಟ ಮಾಡದೆ ಕಾಡಿಗೆ ಅಟ್ಟುವ ಸಂದಿಗ್ಧತೆಯನ್ನೂ ವಿವರಿಸುವ - ಕ್ರಮ ಅನನ್ಯ.

ದೇಸೀ ಸಂಸ್ಕೃತಿಯ, ಹಸಿರುಮೂಲ ಸ್ತ್ರೀಪರ ಆಲೋಚನೆಗಳ, ಕೃಷಿ ಸಂಸ್ಕೃತಿಯ, ಹಳ್ಳಿ-ನಗರಗಳ, ಹಳತು- ಹೊಸತರ ಮುಖಾಮುಖಿಯ , ವೈಜ್ಞಾನಿಕ ತಳಹದಿಯ ಬರೆಹಮಾಲೆಗಳಿವು. ಇದಕ್ಕಿಂತ ಸರಳಗೊಳಿಸಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗಿನ ಭಾಷಾ ಸರಳತೆ ಇಲ್ಲಿದೆ. ಅಲ್ಲಲ್ಲಿ ವಾಸ್ತವ ಹಾಸ್ಯ ಬರೆಹದ ಶಕ್ತಿಯನ್ನು ಹೆಚ್ಚಿಸುತ್ತದೆ.
*
ಕಾಜೂರು ಸತೀಶ್ 

No comments:

Post a Comment