ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Showing posts with label ದಿನಚರಿ. Show all posts
Showing posts with label ದಿನಚರಿ. Show all posts

Monday, March 23, 2026

ಶಿಫಾರಸ್ಸು

"ಸರ್, ನೀವು ಮನಸ್ಸು ಮಾಡಿದ್ರೆ ನನ್ನ ಪುಸ್ತಕವನ್ನು ಪ್ರಶಸ್ತಿಗಾಗಿ ಶಿಫಾರಸ್ಸು ಮಾಡಬಹುದು"

"ಸತೀಶ್, ಹೀಗೆ ಹೇಳಿದ್ರು. ಪ್ರಶಸ್ತಿಗಳನ್ನು ಕೇಳಿ ಪಡೆಯುವಷ್ಟರ ಮಟ್ಟಿಗೆ ಜನ ಬೆಳೆದಿದ್ದಾರೆ!"

ನನಗೆ ಆತ್ಮೀಯರಾಗಿರುವ ವ್ಯಕ್ತಿಯ ಕುರಿತು ಅವರು ಮಾತನಾಡುತ್ತಿದ್ದರು!
*
✍️ ಕಾಜೂರು ಸತೀಶ್

Thursday, October 9, 2025

ನನ್ನಲ್ಲಿ ಇರದ ಒಳ್ಳೆಯತನ...

ದಿನಾಂಕ 30/07/2025.
ನಮ್ಮೂರು ವಿದ್ಯುತ್ ಕಾಣದೆ ಎಂಟನೇ ದಿನದ ಸಂಭ್ರಮದಲ್ಲಿದ್ದಾಗ ಮೊಬೈಲ್ ಚಾರ್ಜ್ ಮಾಡಲೆಂದು ಕೂಡಿಗೆಗೆ ತೆರಳಿದ್ದೆ. ಚಾರ್ಜ್ ಮಾಡಿ ಹೊರಬಂದಾಗ ನನ್ನ ಕೈಜಾರಿದ ಚಾರ್ಜರ್ ರಸ್ತೆಯ ಕೆಸರಿನಲ್ಲಿ ಮುಳುಗಿತು. ಅದನ್ನು ಎತ್ತಿಕೊಳ್ಳುವುದನ್ನೇ ನೋಡುತ್ತಿದ್ದ ಆಟೋ ಡ್ರೈವರ್ ಒಬ್ಬರು ತಾವು ಕುಡಿಯಲು ಇಟ್ಟಿದ್ದ ನೀರನ್ನೇ ನೀಡಿ ಚಾರ್ಜರಿನ ಕೆಸರನ್ನು ತೊಳೆಯಲು ಸಹಕರಿಸಿದರು(ನನ್ನೊಳಗಿನ ಕೆಸರನ್ನೂ).
*
ಆ ಡ್ರೈವರಿನ ಜಾಗದಲ್ಲಿ ನಾನಿದ್ದಿದ್ದರೆ ಖಂಡಿತವಾಗಿಯೂ ಕುಡಿಯಲು ಇಟ್ಟಿದ್ದ ನೀರನ್ನು ಕೊಡುತ್ತಿರಲಿಲ್ಲ. ನಾನು 'ಬೇಡ' ಎಂದಾಗಲೂ ಮತ್ತೆ ಒತ್ತಾಯಿಸಿದ ಆ ಮುಖ ಈಗ ನನ್ನೊಳಗೆ save ಆಗಿದೆ. ಇನ್ನು ಆ ದಾರಿಯಲ್ಲಿ ಕ್ರಮಿಸುವಾಗಲೆಲ್ಲ ಅದೇ ಮುಖಕ್ಕಾಗಿ ಕಣ್ಣುಗಳು ಹುಡುಕತೊಡಗುತ್ತವೆ.
*
ಸಣ್ಣ ಸಣ್ಣ ಸಂಗತಿಗಳು ಹೇಗೆಲ್ಲಾ ಕಾಡುತ್ತವೆ, ಎಷ್ಟೆಲ್ಲಾ ಕಲಿಸುತ್ತವೆ, ಸದಾ ಡವಗುಟ್ಟುತ್ತಲೇ ಇರುವ ಈ ಪುಟ್ಟ ಹೃದಯದ ಭಾರವನ್ನು ಹೇಗೆಲ್ಲಾ ಹೆಚ್ಚಿಸುತ್ತಲೇ ಇರುತ್ತವೆ ಅಲ್ಲವೇ?
ಇದೊಂದು ಸೋಜಿಗ.
**

✍️ ಕಾಜೂರು ಸತೀಶ್

Wednesday, October 8, 2025

ಒಂದು ಕ್ರೌರ್ಯವನ್ನು ನೆನೆದು...

ಜಗತ್ತು ಎಷ್ಟು ಭಯಾನಕವಾಗಿದೆ ಎಂಬುದಕ್ಕೆ ಇಂದಿನ ಘಟನೆಯೂ ಸೇರ್ಪಡೆಗೊಂಡಿತು.

ಈ ಮಧ್ಯಾಹ್ನ ನನಗೊಂದು ಕರೆ ಬಂದಿತು. ವೃತ್ತಿ ಸಂಬಂಧಿತ ಕರೆ ಅದು. 'ಈಗ ಬರಬಹುದಾ?' ಎಂದಾಗ 'ನಾಳೆ' ಎಂದು ಮೊದಲು ಹೇಳಿದೆನಾದರೂ ಆಮೇಲೆ ಒಪ್ಪಿಕೊಂಡು ಹೊರಟೆ. ಹೊರಟುಹೋಗುತ್ತಿರುವಾಗಲೂ ಕರೆಮಾಡಿದೆ. 'ಊಟ ಮಾಡಿ ಬರುವೆ' ಎಂದಿತು.

ಸುಮಾರು ಮೂರು ಗಂಟೆಗಳಷ್ಟು ಕಾದೆ. ಈ ನಡುವೆ ಮೂರು ಬಾರಿ ಕರೆ ಮಾಡಲಾಗಿ ಅದರಲ್ಲಿ ಒಮ್ಮೆ ಕರೆ ಸ್ವೀಕೃತಗೊಂಡು 'ಇನ್ನೇನು ಬರುವೆ' ಎಂದಿತು! ಒಂದು ಸಂದೇಶವನ್ನೂ ಎಸೆದೆ; ಅದೂ 'ಅದರ' ಕಣ್ಣಿನ ಕಸದಬುಟ್ಟಿ ಸೇರಿತು.

ಆಮೇಲೆ 'ಅದು' ಬರಲಿಲ್ಲ. ನಾನು ಮನೆಗೆ ಹಿಂತಿರುಗಿದೆ.
*
ನಾನು ಹಿಂತಿರುಗಿ ಒಂದು ಗಂಟೆ ಕಳೆದರೂ ಅತ್ತಲಿಂದ ಒಂದು ಎಲೆಯಲುಗುವಷ್ಟಾದರೂ ಸದ್ದು ಕೇಳಿಸಲಿಲ್ಲ. 'ನನಗಾಗಿ ಕಾದವನು ಏನಾದ' ( ಅದು ನನ್ನ ಕೆಲಸ ಅಲ್ಲ ಎನ್ನುವುದು ಒತ್ತಟ್ಟಿಗಿರಲಿ! )ಎಂಬ ಕನಿಷ್ಟ ಮನುಷ್ಯಪ್ರಜ್ಞೆಯೂ ಅದಕ್ಕಿಲ್ಲವಲ್ಲ ಎಂಬ ಭಯಾನಕ ಸ್ಥಿತಿಯ ಬಗ್ಗೆ ನೆನೆದು ನಾನೀಗ ಮರುಗುತ್ತಿರುವೆ.
*
ಈಗ ಹೊರಗಡೆ ಗುಡುಗಿನ ಸದ್ದು ಕೇಳಿಸುತ್ತಿದೆ. ನನ್ನೊಳಗೂ ಅದೇ ಸದ್ದು! ಹೀಗೆ ಬರೆಯುತ್ತಿರುವ ಈ ಶಬ್ದಗಳಲ್ಲಿ ಗುಡುಗು ಅಡಗಿದೆಯೋ ನಾನರಿಯೆ..
*
✍️ಕಾಜೂರು ಸತೀಶ್

Monday, September 8, 2025

ಒಂದು ಫೋನ್ ಕರೆ ಮತ್ತು...

ಮೂರು ವರ್ಷಗಳ ಹಿಂದೆ ಒಂದು ಸಂಜೆ ನನಗೆ ಕರೆಮಾಡಿ ತಮ್ಮನ್ನು ಪರಿಚಯಿಸಿಕೊಂಡು 'ಸತೀಶ್ ನಿಮ್ಮ ಪುಸ್ತಕ ಓದಿದೆ...' ಎನ್ನುತ್ತಾ ಮಾತಿಗಿಳಿದರು. ನೋವಿನ ಆಳಬಾವಿಯಿಂದ ಪ್ರತಿಧ್ವನಿಸುತ್ತಿದೆಯೇನೋ ಎಂಬಂತಿದ್ದವು ಅವರ ಮಾತುಗಳು. ನಡುನಡುವೆ ಜೀವವನ್ನು ಹಿಸುಕುತ್ತಿವೆಯೇನೋ ಎಂಬಂಥ ಕೆಮ್ಮು.

ಕವಿತೆ ಹೇಗಿರಬೇಕು ಎಂಬುವುದರ ಕುರಿತು ಹೇಳುತ್ತಾ 'ನಾವು ಏನು ಹೇಳುತ್ತಿದ್ದೇವೆ ಎಂಬ ಖಚಿತತೆ ಬರೆಯುವವರಿಗೇ ಇಲ್ಲದಿದ್ದಾಗ ದೊಡ್ಡ ದೊಡ್ಡ ಉಪಮೆ ಪ್ರತಿಮೆಗಳೆಲ್ಲ ಸೊರಗುತ್ತವೆ' ಎಂದರು. ಅದನ್ನು ಪುಷ್ಟೀಕರಿಸಲು ತಾವು ಓದಿದ ಕವನ ಸಂಕಲನವನ್ನು ಉದಾಹರಿಸಿದ್ದರು.


ಸರ್ಕಾರಿ ಕೆಲಸ ದಕ್ಕದಿರುವುದು, ಮದುವೆಯಾಗದಿರುವುದು ಮತ್ತು ಅನಾರೋಗ್ಯ- ಈ ಮೂರೂ ಅವರನ್ನು ಹಸಿಹಸಿ ತಿಂದುಹಾಕಿದ್ದವು. ಖಾಸಗಿ ಸಂಸ್ಥೆಯಲ್ಲಿ ಇಂಗ್ಲಿಷ್ ವಿಷಯವನ್ನು ಬೋಧಿಸುತ್ತಾ ಪ್ರಾಂಶುಪಾಲರ ಹುದ್ದೆಯನ್ನು ನಿರ್ವಹಿಸಿ ಕಡೆಗೆ ಸರಿಯಾದ ಸಂಬಳ ದೊರೆಯದೆ, ಪ್ರಶ್ನಿಸಿದಕ್ಕಾಗಿ ಕೆಲಸವನ್ನೂ ಕಳೆದುಕೊಂಡು, ಒಂದಷ್ಟು ವರ್ಷ ವಕೀಲರಾಗಿ ದುಡಿದು ಕೊನೆಗೆ ಎಲ್ಲವನ್ನೂ ತೊರೆದು ಸಹೋದರಿಯೊಂದಿಗೆ ಬದುಕುತ್ತಿರುವ ಕಥೆಯನ್ನು ವಿಷಾದದಿಂದಲೇ ಹೇಳಿಕೊಂಡಿದ್ದರು.


ಅವರು ನನ್ನ ಕೃತಿಯ ಬಗ್ಗೆ ಮಾತನಾಡಿದ್ದು ನನಗೆ ಮುಖ್ಯವೆನಿಸಲೇ ಇಲ್ಲ. ಅವರ ಧ್ವನಿಯ ಕಂಪನಾಂಕದ ದುಃಖಭರಿತ ಕಂಪನಗಳಷ್ಟೇ ನನ್ನೊಳಗೆ ರಿಂಗಣಿಸತೊಡಗಿದ್ದು.

ಆ ಮಾತುಗಳು ನನ್ನ ಕಿವಿಯಿಂದ ಇನ್ನೂ ತಪ್ಪಿಸಿಕೊಂಡಿರಲಿಲ್ಲ- ತಿಂಗಳು ಕೂಡ ಕಂತಿರಲಿಲ್ಲ - ಒಂದು ಮುಂಜಾವ ಎಂದಿನಂತೆ ಪ್ರಜಾವಾಣಿ ಓದುತ್ತಿದ್ದಾಗ ಕಸ್ತೂರಿ ಬಾಯರಿ ಎಂಬ ಆ ಲೇಖಕಿಯ ನಿಧನದ ಕುರಿತು ಸುದ್ದಿ ಓದಿದೆ!
*


ನಿನ್ನೆ ಮುದೋಳದಿಂದ ಒಂದು ಕರೆ ಬಂದಿತ್ತು. ಹಿರಿಯರಾದ ಮಲ್ಲಿಕಾರ್ಜುನ ಹೆಗ್ಗಳಗಿ ಸರ್ ಕರೆ ಮಾಡಿ 'ಸಂಗಾತ'ದಲ್ಲಿ ಪ್ರಕಟಗೊಂಡ ನನ್ನ ಮಿನಿಕತೆಗಳ ಕುರಿತು ಮಾತನಾಡಿದರು. ಅವರ ಪ್ರೊಫೈಲ್ ಹುಡುಕುತ್ತಿದ್ದಾಗ ಕಸ್ತೂರಿ ಬಾಯರಿ ಅವರ ಕುರಿತು ಬರೆದ ಲೇಖನವೊಂದು ಕಾಣಿಸಿತು- ಇದೆಲ್ಲ ನೆನಪಾಯಿತು.


ಸಂಗಾತ ಪುಸ್ತಕವು ಕಸ್ತೂರಿ ಬಾಯರಿಯವರ ಸಮಗ್ರ ಕಥೆಗಳನ್ನು ಪ್ರಕಟಿಸಿದೆ. ನನ್ನ ಕೃತಿಯನ್ನು ಪ್ರಕಟಿಸಿದ್ದ ಸಂಗಾತ ಇಂತಹ ನೆನಪುಗಳಿಗೆ ಕಾರಣವಾಗಿದೆ. ಸಂಗಾತದ ಟಿ ಎಸ್ ಗೊರವರ ಇಂತಹ ನೆನಪುಗಳಿಗೆ ಸೇತುವೆಯಾಗಿದ್ದಾರೆ.
*

✍️ ಕಾಜೂರು ಸತೀಶ್

Saturday, July 19, 2025

ಒಂದು ಗಸಗಸೆ ಮರದ ಸುತ್ತ...

ಹರಗ ಶಾಲೆಗೆ ಹೋಗಿದ್ದಾಗ ಫ್ಲವರ್ ಪೆಕರ್ ಹಕ್ಕಿಗಳನ್ನು ಗಸಗಸೆ ಮರದಲ್ಲಿ ಗಮನಿಸಿದ್ದೆ. ನನ್ನ ಮನೆಯ ಸುತ್ತ ಇವು ತೀರಾ ಅಪರೂಪ. ಮರದಲ್ಲಿ ಪರೋಪ ಸಸ್ಯವಾಗಿ ಬೆಳೆದುಕೊಳ್ಳುವ ಬಂದಣಿಕೆ/ಬದನಿಕೆ ಹೂವನ್ನು ಹುಡುಕಿಕೊಂಡು ಬರುವ ಫ್ಲವರ್ ಪೆಕರನ್ನು ಗಮನಿಸಿದ್ದೆ. ಆ ಬಂದಣಿಕೆಯು ಮೂಲ ಮರವನ್ನೇ ಸಾಯಿಸಿದ ಮೇಲೆ ಈ ಹಕ್ಕಿಯ ಅನುಪಸ್ಥಿತಿ ನನ್ನನ್ನು ಕಾಡುತ್ತಿತ್ತು.






ವಿಚಿತ್ರವೆಂದರೆ ಈ ಹಕ್ಕಿಗೂ ಕನ್ನಡದಲ್ಲಿ ಬದನಿಕೆ ಹಕ್ಕಿ ಎಂದೇ ನಾಮಕರಣ ಮಾಡಿದ್ದಾರೆ!


*

ಅರಣ್ಯ ಇಲಾಖೆಯ ವತಿಯಿಂದ ದಿನಾಂಕ 29-12-2022ರಂದು ಸೋಮವಾರಪೇಟೆ ತಾಲೂಕಿನ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದ ಹೊಣೆಯನ್ನು ಹೆಗಲಲ್ಲಿಟ್ಟುಕೊಂಡಿದ್ದವರು ವಲಯ ಅರಣ್ಯಾಧಿಕಾರಿ ಗಾನಶ್ರೀ ಮೇಡಂ.


ಕಾರ್ಯಕ್ರಮ ಮುಗಿದು ವರ್ಷ ಕಳೆದ ಮೇಲೆ ಈ ಗಿಡವನ್ನು ಅವರ ಬಳಿಯೇ ಕೇಳುವುದೊಳಿತು ಎಂದು 'ಕೇಳಿದೆ'. ಅವರು ಸಸ್ಯಕ್ಷೇತ್ರದಲ್ಲಿ ಪಡೆದುಕೊಳ್ಳಿ ಎಂದರು. 30-08-2023ರಂದು ಐದು ಗಿಡಗಳನ್ನು ಪಡೆದು ಅದರಲ್ಲಿ ಮೂರನ್ನು ಬೆಟ್ಟದಳ್ಳಿ ಶಾಲೆಯಲ್ಲೂ ಎರಡನ್ನು ಮನೆಯಲ್ಲೂ ನೆಟ್ಟೆ. ಅಧಿಕ ಮಳೆಬೀಳುವ ತಾಣ ಬೆಟ್ಟದಳ್ಳಿ. ನಾನು ದಸರಾ ರಜೆಮುಗಿಸಿ ತೆರಳಿದಾಗ ಅವು ಬುಡಕೊಳೆತು ಕಪ್ಪಾಗಿ ಅಂತ್ಯಕಂಡಿದ್ದವು!


ಆದರೆ ಮನೆಯಂಗಳದಲ್ಲಿ ನೆಟ್ಟಿದ್ದ ಎರಡು ಗಿಡಗಳಲ್ಲಿ ಕಾಯಿಗಳು ಹುಟ್ಟಿ ಅದನ್ನು ಹುಡುಕಿಕೊಂಡು ಬರುವ ಬದನಿಕೆ ಹಕ್ಕಿಯನ್ನೂ, ಅದರ ಹಸಿವನ್ನು ಹಿಂಗಿಸುತ್ತಿರುವ ಆ ಮರದ ತಾಯ್ತನವನ್ನೂ, ಅದು ಜೀವಪಡೆಯಲು ಕಾರಣಕರ್ತರಾದ ಸಸ್ಯಕ್ಷೇತ್ರದ ಆ ಅನಾಮಿಕ ಮನುಷ್ಯನನ್ನೂ, ಅದನ್ನು ನನಗೆ ಕರುಣಿಸಿದ ಗಾನಶ್ರೀ ಮೇಡಂ ಅವರನ್ನೂ, ಈ ಮಣ್ಣನ್ನೂ, ಹಸಿರೆಂಬೋ ವಿಸ್ಮಯವನ್ನೂ ಒಟ್ಟೊಟ್ಟಿಗೆ ಸ್ಮೃತಿಯ ಬುಟ್ಟಿಯೊಳಗಿಟ್ಟು ಕಾಪಿಟ್ಟುಕೊಳ್ಳುವಂತೆ ಮಾಡಿದೆ.


ಎಲ್ಲಿಯೋ ಇರುವ ಆ ಹಕ್ಕಿಗೆ ಇಲ್ಲಿ ಈ ಗಿಡ ಇದೆಯೆಂದು ಯಾರು ಹೇಳಿಕೊಟ್ಟರೋ ನಾನರಿಯೆ.
*
✍️ಕಾಜೂರು ಸತೀಶ್

Saturday, October 12, 2024

ಆ ಹುಡುಗ

ನಾನು ಪ್ರಥಮ ಪಿ ಯು ಸಿ ಯಲ್ಲಿದ್ದಾಗ ಸಹಪಠ್ಯ ಸ್ಪರ್ಧೆಗೆಂದು ಮಡಿಕೇರಿಗೆ ಹೋಗಿದ್ದೆ. (ಜೂನಿಯರ್ ಕಾಲೇಜು FMC ಸಭಾಂಗಣದಲ್ಲಿ ಕಾರ್ಯಕ್ರಮ.)

ಅಲ್ಲಿ ,ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಿತರನ್ನು ಮತ್ತೊಮ್ಮೆ ವೇದಿಕೆಯಲ್ಲಿ ಹಾಡಿಸುತ್ತಿದ್ದರು. ದ್ವಿತೀಯ ಪಿಯುಸಿ ಓದುತ್ತಿದ್ದ ವಿರಾಜಪೇಟೆಯ ಹುಡುಗನೊಬ್ಬ 'ನೀಲಗಗನದೊಳು ಮೇಘಗಳಾ..' ಗೀತೆಯನ್ನು ಅದ್ಭುತವಾಗಿ ಹಾಡಿದ(ಅವನ ಬಲಗೈ ಮುರಿದಿತ್ತು, ಅದನ್ನು ಹೊಟ್ಟೆಗೆ ಆತುಕೊಂಡೇ ಹಾಡಿದ್ದ).

ಅಷ್ಟು ಗಾಢವಾಗಿ ಅವನು ನನ್ನನ್ನು ಕಲಕಿದ್ದ!

ಆಮೇಲೆ ಅವನು ಎಲ್ಲಾದರೂ ಸಿಗುತ್ತಾನೆಯೇ ಎಂದು ಕಾಯುತ್ತಿದ್ದೆ; ಹಲವು ವೇದಿಕೆಗಳಲ್ಲಿ ಹುಡುಕುತ್ತಿದ್ದೆ.


ಮೊನ್ನೆ ಮಡಿಕೇರಿ ದಸರಾ ಕವಿಗೋಷ್ಠಿಯಲ್ಲಿ ಅದೇ ಹುಡುಗನನ್ನು ಹೋಲುವ ವ್ಯಕ್ತಿಯೊಬ್ಬರು ಬಂದು ತಮ್ಮ ಸಂಗೀತ ಯಾನದ ಜಾಡುಗಳನ್ನು ಭಾವುಕವಾಗಿ ನೆನಪಿಸಿಕೊಳ್ಳುತ್ತಿದ್ದರು! ನನ್ನ ನೆನಪುಗಳಲ್ಲಿ ಬಾಳುತ್ತಿರುವ ಆ ಹುಡುಗ ಇವರೇ ಆಗಿದ್ದರೆ, ಈ ನೆನಪಿನಿಂದ ಬಿಡುಗಡೆಗೊಂಡು ಕೃತಾರ್ಥನಾಗುತ್ತೇನೆ!
*
ಹೀಗೆ ಬರೆದು ಗೆಳೆಯ ರಂಜಿತ್ ಕವಲಪಾರ ಅವರಿಗೆ ಕಳಿಸಿದ್ದೆ. ಅವರು ಅದನ್ನು ನಾನು ಅಂದುಕೊಂಡಿದ್ದ ಸಂಗೀತ ನಿರ್ದೇಶಕರ ತಾಯಿಯೊಂದಿಗೆ ಚರ್ಚಿಸಿ 'ಅವರ ತಾಯಿಯೊಡನೆ ಈಗ ಮಾತನಾಡಿದೆ. ಆ ಹುಡುಗ ಚರಣ್ ಅವರು ಅಲ್ಲ... ಹುಡುಕಾಟ ಮುಂದುವರೆಯಲಿ..' ಎಂದು ಸಂದೇಶ ಕಳುಹಿಸಿದರು!

ಆ ಹುಡುಗನಿಗೂ ಈ ಸಂಗೀತ ನಿರ್ದೇಶಕರಿಗೂ ಹೆಚ್ಚು ತಾಳೆಹೊಂದುತ್ತದಾದ್ದರಿಂದ ಮತ್ತೊಂದು ಸಂದೇಶ ಎಸೆದೆ - 'ಉಳಿದದ್ದು ಮರೆತಿರಬಹುದು. ಕೈ ಮುರಿದಿದ್ದು ನೆನಪಿನಲ್ಲಿರುತ್ತೆ' .



ಈ ದಿನ ರಂಜಿತ್ ಕಡೆಯಿಂದ ಮತ್ತೊಂದು ಸಂದೇಶ : ' ನೀವು ಹುಡುಕುತ್ತಿದ್ದ ವ್ಯಕ್ತಿ ಇವರೇ!' ಹೀಗೆನ್ನುತ್ತಾ ಆ ಹುಡುಗನೆಂಬೋ ಪ್ರತಿಭಾವಂತ ಸಂಗೀತ ನಿರ್ದೇಶಕ ಚರಣ್ ರಾಜ್ ಅವರ ಅಮ್ಮನ ದೂರವಾಣಿ ಸಂಖ್ಯೆ ನೀಡಿ ಮಾತನಾಡಿ ಎಂದರು.


'ಅವನ ಕೈ ಮುರಿದಿಲ್ಲ' ಎಂದರಂತೆ ಅವರ ಅಮ್ಮ. ಖಚಿತಪಡಿಸಿಕೊಳ್ಳಲು ಮಗನನ್ನೇ ಕೇಳಿದರಂತೆ. ಮಗ ' ನಾನೇ ಅವನು' ಎಂದರಂತೆ.

ಈಗ ಮಾತನಾಡಿದೆ. ಚರಣ್ ರಾಜ್ ( ಇಲ್ಲಿ ಕ್ಲಿಕ್ಕಿಸಿ) ಅವರೊಂದಿಗೂ!

ಇನ್ನು , ಎರಡು ದಶಕಗಳಿಂದ ಜೊತೆಗಿದ್ದ ಆ ನೆನಪುಗಳನ್ನು ಬಿಡುಗಡೆಗೊಳಿಸುವೆ. ಅದೇ ಬುತ್ತಿಯಲ್ಲಿ ಚರಣ್ ರಾಜ್ ಅವರ ಸಂಗೀತಯಾನದ ದಾರಿಗಳನ್ನು ಮತ್ತದರ ನೆನಪುಗಳನ್ನು ತುಂಬಿಕೊಳ್ಳುವೆ.
*
ಕಾಜೂರು ಸತೀಶ್


Friday, July 5, 2024

ಎಲ್ಲಿ ಹೋದರು?

ಆ ಮನುಷ್ಯ ಈ ಬೆಳಿಗ್ಗೆ  ನೆನಪಾದರು.ಅವರಿಂದ ಸಂದೇಶ ಬರದೆ ಮೂರು ತಿಂಗಳಾಗಿದ್ದವು!

'ನಿಮ್ಮ ಓದಿಗೆ' ಎಂಬ ಆರಂಭ ಅವರ ಸಂದೇಶಗಳಿಗೆ. ಪ್ರತಿಕ್ರಿಯಿಸಿದರೆ ಅವರ ಸಂಭ್ರಮ ನೋಡಬೇಕು!

ಫೇಸ್ಬುಕ್ ನಲ್ಲಿ ಅವರನ್ನು ಹುಡುಕಿದೆ. ಜನ ಅವರಿಗೆ ಅಂತಿಮ ನಮನವನ್ನು ಸಲ್ಲಿಸಿ ಮೂರು ತಿಂಗಳು ಕಳೆದಿದ್ದವು!


ಮಾಲಿಂಗರಾಯ ಹೂಗಾರ ಎಂಬ ಈ ಅಪ್ಪಟ ಕಾವ್ಯಪ್ರೇಮಿ ಅನಾರೋಗ್ಯದಿಂದ ತೀರಿಹೋಗಿದ್ದರು! ನನ್ನಂಥ ನೂರಾರು ಜನರೊಂದಿಗೆ ಕವಿತೆಯ ಕಾರಣಕ್ಕಾಗಿ ಪರಿಚಿತರಾಗಿ ಇದ್ದಕ್ಕಿದ್ದ ಹಾಗೆ ಕವಿತೆಯನ್ನೂ ಅದರಂತೆಯೇ ಇರುವ ಅವರ ದೇಹವನ್ನೂ ತೊರೆದುಹೋದ ಆ ಮನುಷ್ಯ ಈ ದಿನವೆಲ್ಲ ನನ್ನನ್ನು ಮತ್ತಷ್ಟೂ ಭಾರವಾಗಿಸಲೆಂಬಂತೆ ಉಳಿದುಹೋಗಿದ್ದಾರೆ.
*
ಕಾಜೂರು ಸತೀಶ್

Monday, May 27, 2024

ಅವ್ಯವಸ್ಥೆ ಎಂದರೆ..


ಆ ಮೇಷ್ಟ್ರನ್ನು ಆ... ಶಾಲೆಗೆ ನಿಯೋಜಿಸಿದ್ದರು! (ಅಷ್ಟು ಹೊಟ್ಟೆಕಿಚ್ಚು?)

ಅಲ್ಲಿ ಇಬ್ಬರು ಮಕ್ಕಳು. ಒಂದೇ ಮನೆಯ ಇಬ್ಬರು ಮಕ್ಕಳು! ತಂತ್ರಜ್ಞಾನ/ facebook/whatsappಗಳನ್ನೇ ಅರಿಯದ ಇಬ್ಬರು. ಗುದ್ದಲಿ ತೆಗೆದು ಅಗೆಯುವುದೆಂದರೆ ಅಷ್ಟು ಇಷ್ಟ ಆ ಮಕ್ಕಳಿಗೆ.

ಅಲ್ಲಿ ಮಧ್ಯಾಹ್ನದ ಬಿಸಿಯೂಟ ಸಿದ್ಧಪಡಿಸುವವರಿಲ್ಲ. ಇದ್ದರೂ ಊರುಬಿಟ್ಟು ಹೊರಟುಹೋಗಿದ್ದಾರೆ. ಯಾರನ್ನಾದರೂ ಕೇಳೋಣವೆಂದರೆ ಮೊಬೈಲ್ ಸಿಗ್ನಲ್ ಇಲ್ಲ. ನೇಮಿಸೋಣವೆಂದರೆ ಅಂಥವರು ಆ ಊರಲ್ಲಿಲ್ಲ.

ಮೇಷ್ಟ್ರು ಅಂದಿನಿಂದ ಅಡುಗೆ ಭಟ್ಟರಾದರು.(ಇದನ್ನೆಲ್ಲ ವಿಚಾರಿಸಬೇಕಾದ ಮಂದಿ ಮನೆಯಲ್ಲೇ ಕುಳಿತು ಭರ್ಜರಿ ಅಡುಗೆ ಮಾಡಿ ಊಟಮಾಡಿ ಹಾಯಾಗಿದ್ದರು!).
ಅಡುಗೆ ಸಾಮಗ್ರಿಗಳನ್ನು ತಂದು, ಗ್ಯಾಸ್ ತಂದು ( ಅಡುಗೆ ಸಿಬ್ಬಂದಿ ಇಲ್ಲದಿದ್ದರೆ ಹಣ ಮುಟ್ಟುವಂತಿಲ್ಲ!) ಅಡುಗೆ ಮಾಡಿ ,ಪಾತ್ರೆ ತೊಳೆದು ಎರಡು ತಿಂಗಳು professional cook ಆದ ಆ ಮೇಷ್ಟ್ರು ಹೊಸ ಕೆಲಸಕ್ಕೆ ಒಗ್ಗಿಕೊಳ್ಳುತ್ತಿರುವಾಗಲೇ ಆ ಮಕ್ಕಳೆರಡು ದೂರದ ವಸತಿನಿಲಯಕ್ಕೆ ಸೇರಿಕೊಂಡರು. ಆ ಮೂಲಕ ಆ ಶಾಲೆಯ ಬಾಗಿಲು ಸಂಪೂರ್ಣವಾಗಿ ಮುಚ್ಚಿಕೊಂಡಿತು.

ಇತ್ತ ಮೂಲ ಶಾಲೆಯ ಮಕ್ಕಳು ಒಬ್ಬರಾದ ಮೇಲೆ ಒಬ್ಬರು ವರ್ಗಾವಣೆ ಪತ್ರ ಪಡೆದುಕೊಂಡು ಬೇರೆ ಕಡೆಗೆ ಹೊರಟುಹೋಗಿದ್ದರು.

ಪ್ರತೀ ಮಾನ್ಸೂನ್ ಆರಂಭದಲ್ಲಿ ಇದು ಮುಂದುವರಿಯುವಾಗ ಆ ಮೇಷ್ಟ್ರು ಇರುವ ಮೂಲ ಶಾಲೆಯ ಬಾಗಿಲು 'ಮುಚ್ಬಿಡ್ಲಾ ಮೇಷ್ಟ್ರೇ' ಎಂದು ಮುಗ್ಧವಾಗಿ ಕೇಳಿದಂತೆ ಅನ್ನಿಸುತ್ತದೆ.

Sunday, January 14, 2024

ಒಂದನೇ ಇಯತ್ತೆ ಮತ್ತು ನನ್ನ ನೆನಪಿನಂತಹ ಆ ಬೆಟ್ಟ


ಒಂದನೇ ತರಗತಿಗೆ ದಾಖಲಾದ ವರ್ಷ ಮನೆಯಿಂದ ಶಾಲೆಗಿರುವ ಹಾದಿಯಲ್ಲಿದ್ದ ನಿಸರ್ಗವೇ ನನ್ನ ಕಲಿಕಾ ಕೇಂದ್ರವಾಗಿತ್ತು. ಶಾಲೆ ಎಂಬ ನರಕದಿಂದ ತಪ್ಪಿಸಿಕೊಳ್ಳಲು ಎಷ್ಟೋ ಸಲ ಮನೆಯವರನ್ನು ಯಾಮಾರಿಸಿ ಮನುಷ್ಯರಿಲ್ಲದ ಜಾಗದಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದೆ. ಆಗೆಲ್ಲ ನಿತ್ಯದ ಹಾದಿಯಲ್ಲಿ ಎದುರಾಗುತ್ತಿದ್ದ ಎರಡು ಬೆಟ್ಟಗಳನ್ನು ತಪ್ಪದೇ ನೋಡುತ್ತಿದ್ದೆ. ಒಂದು ಬೆಟ್ಟವು ಮರಗಿಡಗಳ ನಡುವೆ ದೊಡ್ಡ ಬಂಡೆಗಳಿಂದ ಮೈದುಂಬಿಕೊಂಡಿದ್ದರೆ, ಮತ್ತೊಂದು ಭತ್ತವನ್ನು ರಾಶಿ ಮಾಡಿಟ್ಟ ಹಾಗೆ ಮೈಪಡೆದಿತ್ತು( ಆದರೆ ಆ ಬೆಟ್ಟವು ನಾನು ಆಗ ಕಾಣುತ್ತಿದ್ದ ಸ್ವರೂಪವನ್ನು ಇಂದು ಹೊಂದಿಲ್ಲ. ಯಾರೋ ಮಹಾಶಯರು ಆ ಬೋಳು ಗುಡ್ಡದ ಮೇಲೆ ಅಕೇಶಿಯಾ ನೆಟ್ಟು ಬಂದರು. ಯಾರಿಗೋ ಲಾಭವಾಯಿತು! ನಾನು ನೊಂದುಕೊಳ್ಳುತ್ತಿರುವೆ!).



ಮೂರು ವರ್ಷ ಅದೇ ಶಾಲೆಯಲ್ಲಿ ಕಳೆದ ನನಗೆ ಆಮೇಲೆ ನನ್ನ ಸಹಪಾಠಿಗಳ ದರ್ಶನವಾಗಲೇ ಇಲ್ಲ( ನನ್ನ ಸಂಬಂಧಿಯೊಬ್ಬರ ಹೊರತು). ಅವರೆಲ್ಲ ಈಗ ಎಲ್ಲಿರುವರು?  ಹೇಗಿರುವರು?ನನ್ನ ನೆನಪು ಅವರಲ್ಲಿರಬಹುದೇ? ಎಂಬೆಲ್ಲ ಕುತೂಹಲಗಳು ನಿತ್ಯ ನನ್ನನ್ನು ಎಡತಾಕುತ್ತವೆ.


ಆ ಶಾಲೆಯ ಮುಖವನ್ನು ಆಗಾಗ ನೋಡುತ್ತೇನೆ.  ನಾನು ಬಾಲ್ಯದಲ್ಲಿ ಕಂಡ ಆ ಊರಿನ ಮುಖಗಳನ್ನು ಅಲ್ಲಿ- ಸೋಮವಾರದ ಸಂತೆಯಲ್ಲಿ- ಸಂಚರಿಸುವ ದಾರಿಯಲ್ಲಿ ನೋಡುತ್ತೇನಾದರೂ ಅವರೊಂದಿಗೆ  ಮಾತಿರಲಿ, ನಗುವನ್ನೂ ವಿನಿಮಯಿಸಿಕೊಳ್ಳುವುದಿಲ್ಲ. ಹಾಗೊಮ್ಮೆ ಮಾಡಿದೆನೆಂದರೆ  ನನ್ನ ಪೂರ್ವಾಪರಗಳನ್ನು ಅವರ ತಲೆಯಲ್ಲಿ ತುಂಬಬೇಕಾಗುತ್ತದೆ, ಅದು ಬೆಂಕಿಯಂತೆ ಊರೆಲ್ಲ ತಲುಪುತ್ತದೆ. ಆಮೇಲೆ ಅವರು ನನ್ನನ್ನು ನೋಡಲು ಬಯಸುವುದು ಮತ್ತೆ ಪರಿಚಯವಾಗುವುದು ಇವೆಲ್ಲ ನನಗೆ ಬೇಕಿರದ ಸಂಗತಿಗಳೇ ಆಗಿವೆ. ನನಗೆ ಮಾತ್ರ ಪರಿಚಯವಿರುವ ಅವರ ನೆನಪನ್ನೂ, ನನ್ನ ಅಮಾಯಕ ಬಾಲ್ಯವನ್ನೂ ಒಟ್ಟುಮಾಡಿ ಗಾಳಿಗೆ ಬಿಟ್ಟುಬಿಡುತ್ತೇನೆ.
**


ಮೊನ್ನೆ ಭತ್ತದ ರಾಶಿಯಂತಿದ್ದ ಆ ಗುಡ್ಡಕ್ಕೆ ಹೋಗುತ್ತಿದ್ದೆವು. ವಾಹನದ ನೆತ್ತಿಯು ಕೊಂಬೆಯೊಂದಕ್ಕೆ ತಗುಲಿದಾಗ ಅಲ್ಲೇ ಸನಿಹದಲ್ಲಿದ್ದ ಮನೆಯಿಂದ ಹೊರಬಂದ ವ್ಯಕ್ತಿ 'ಇದಲ್ಲ ದಾರಿ, ಅದು' ಎಂದು ಕೈತೋರಿಸಿದ.  'ತೋರಿಸ್ತೀರಾ?'ಎಂದಿದ್ದಕ್ಕೆ ಸ್ಕೂಟರ್ ಏರಿ  ಮಗಳನ್ನು ಕೂರಿಸಿಕೊಂಡು ಮುಂದೆ ಮುಂದೆ ಸಾಗಿ ನಮಗೆ ದಾರಿ ತೋರಿಸಿದ.

'ನಾನು ಈ ಬೆಟ್ಟವನ್ನು ಯಾವಾಗಲೂ ಒಮ್ಮೆ ನೋಡಿದ್ದೆ' ಎಂದ . ನಾನು 'ನಡ್ಕೊಂಡು ಹೋಗಿದ್ದೇನೆ  ಇಲ್ಲೆಲ್ಲಾ' ಎಂದೆ.  

'ಏನ್ಹೆಸ್ರು?' ಕೇಳಿದೆ.
ಅವನು ಅವನ ಹೆಸರು ಹೇಳುವುದಕ್ಕೂ ನನ್ನ ಒಂದನೆಯ ತರಗತಿಯ ಆ  ಹುಡುಗನ ಮುಖಕ್ಕೂ ಇವನ ಮುಖಕ್ಕೂ, ಆ ಹೆಸರಿಗೂ ಈ ಹೆಸರಿಗೂ  ತಾಳೆಯಾಗಿ ಒಂದು ಕ್ಷಣ 'ವಾವ್' ಎಂದೆ ಮನಸ್ಸಿನೊಳಗೇ! ಒಬ್ನಾದ್ರೂ ಸಿಕ್ಬಿಟ್ಟ!

ನನ್ನ ಬಗ್ಗೆ ವಿಚಾರಿಸಿದ. ನಾನು ಓದಿದ ಆ ಶಾಲೆಯನ್ನು ಬಿಟ್ಟು ಉಳಿದೆಲ್ಲ ಶಾಲೆಗಳ ಹೆಸರು ಹೇಳಿದೆ. ಅವನು ಹತ್ತನೆಯವರೆಗೆ ಓದಿರುವ ಸಂಗತಿ ಹೇಳಿದ. ಏನೂ ತಿಳಿಯದವರಂತೆ ಅವನ ಬಾಲ್ಯವನ್ನು ಕೆದಕಿದೆ. ಈಗಿನ ಮಕ್ಕಳಂತೆ ಏನೂ ನೆನಪಿಲ್ಲದ ವ್ಯಕ್ತಿಯೇನೂ ಅವನಲ್ಲ. ಹಲವು ಮೇಷ್ಟ್ರುಗಳನ್ನು ಅವನು ನೆನಪಿಸಿಕೊಂಡ. (ಅದರಲ್ಲಿ ನನ್ನ ಜನ್ಮದಿನಾಂಕವನ್ನೂ, ಜಾತಿಯನ್ನೂ ಸೃಷ್ಟಿಸಿದವರೆಲ್ಲರೂ ಬಂದುಹೋದರು!)  ಅವನಿಗಿರುವ ಕ್ರೀಡೆಯ ಮೇಲಿರುವ ಒಲವನ್ನು ಹೇಳಿದ . ಒಂದನೇ ತರಗತಿಯಲ್ಲಿದ್ದಾಗಲೇ ನಾವಿಬ್ಬರು ಪ್ರಚಂಡ ಕಬಡ್ಡಿ ಆಟಗಾರರಾಗಿದ್ದೆವು.  'ನಾನು ಓದೋದ್ರಲ್ಲಿ ಕ್ಲಾಸಿಗೇ ಫಸ್ಟ್ ಇದ್ದೆ' ಎಂದ. ಅವನು ನನ್ನನ್ನು ಗುರುತಿಸಲಿಲ್ಲ ಎಂಬ ಖುಷಿ ನನ್ನೊಳಗೆ ಕುಣಿದಾಡುತ್ತಿತ್ತು. ನಾನು ಪಿಯುಸಿ ಮುಗಿಸುವಷ್ಟರಲ್ಲಿ ಅವನು ಹುಡುಗಿಯೊಬ್ಬಳ ತಂದೆಯಾಗಿದ್ದ! ( ಅವಳು ಅಲ್ಲಿ ಅವನಿಗಿಂತ ತುಸು ದೂರದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು). ಕೆಲವು ಚಿತ್ರಗಳನ್ನು ಸೆರೆಹಿಡಿದು ಒಂದೆರಡನ್ನು ಮಾತ್ರ ಅವನಿಗೆ whatsapp ಮಾಡಿ ಹೇಳಲು ಉಳಿಸಿದ ನನ್ನ ಮಾತುಗಳಂತೆ ಅವುಗಳನ್ನೂ ಉಳಿಸಿಕೊಂಡೆ.
*
ಕಾಜೂರು ಸತೀಶ್ 

Thursday, December 22, 2022

ಸಿದ್ದೇಶಿ ಸರ್ ಎಂಬ ಪ್ರೇರಕ ಶಕ್ತಿ

28-11-2014. ಜಿಲ್ಲಾ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಯ ಸ್ಪರ್ಧೆಗೆ ಹೋಗಿದ್ದೆ. ಅದು ನಡೆಯುತ್ತಿದ್ದ ಶೂನ್ಯ ವೇಳೆಯಲ್ಲಿ ಮುಂದೆ ಬಂದ ಯುವ ಉಪನ್ಯಾಸಕರೊಬ್ಬರು ಅಲ್ಲಿದ್ದವರನ್ನು ಉದ್ದೇಶಿಸಿ 'ರಂಗಣ್ಣನ ಕನಸಿನ ದಿನಗಳು ಗೊತ್ತಾ?' ಎಂದರು.

ಮೂಲೆಯಲ್ಲಿ ನಿಂತಿದ್ದ ನಾನು 'ಇದ್ಯಾರು ಸಾಹಿತ್ಯ ಕೃತಿಯ ಕುರಿತು ಹೇಳುತ್ತಿರುವರಲ್ಲಾ' (ಅದೂ ಮಡಿಕೇರಿಯಲ್ಲಿ!)  ಎಂದುಕೊಂಡೆ ಬೆರಗಿನಿಂದ.
*



ಎಂ.ಆರ್. ಶ್ರೀನಿವಾಸಮೂರ್ತಿಯವರ ರಂಗಣ್ಣನ ಕನಸಿನ ದಿನಗಳು ಕಾದಂಬರಿಯಲ್ಲಿ ನಾಯಕ ರಂಗಣ್ಣ ಶಿಕ್ಷಕನಾಗಿ, ಅಧಿಕಾರಿಯಾಗಿ ಕಂಡು ಅನುಭವಿಸಿದ ಶಿಕ್ಷಣ ವ್ಯವಸ್ಥೆಯ ಕುರಿತ ಅನನ್ಯ ಒಳನೋಟಗಳಿರುವ ಕಾದಂಬರಿ. ರಂಗಣ್ಣನ ಕಾಳಜಿ, ಸೇವಾತತ್ಪರತೆಯೇ ವ್ಯವಸ್ಥೆಯ ಒಳಗಿಳಿದು ವಸ್ತುಸ್ಥಿತಿಯನ್ನು ವಿವೇಚಿಸಲು ಪ್ರೇರಣೆ.
*
ಮತ್ತೆ ಮಡಿಕೇರಿಯ ಟೋಲ್ ಗೇಟಿನಲ್ಲಿ ಒಂದು ಬ್ಯಾಗು ನೇತುಹಾಕಿಕೊಂಡು ಬಸ್ ಹತ್ತುವ/ಇಳಿಯುವ ಅವರನ್ನು ದೂರದಿಂದ ಗಮನಿಸುತ್ತಿದ್ದೆ. ಆಗ ಅವರು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾಗಿದ್ದರು.

ಅದೇ ಸಮಯದಲ್ಲಿ ನಾನಿದ್ದ ಶಾಲೆಗೆ ಬಂದಿದ್ದರು. ನನ್ನ ಪರಿಚಯವೂ ಆಯಿತು.
*
ಎಂಟು ವರ್ಷಗಳು ಸಂದಿವೆ. ಆ ಕಾದಂಬರಿಯ ಕುರಿತು ಪ್ರಸ್ತಾಪಿಸಿದ ಸಿದ್ದೇಶಿ ಸರ್ ಚಿತ್ರದುರ್ಗಕ್ಕೆ ಹಿಂತಿರುಗಿದರೂ ನನಗೀಗ ರಂಗಣ್ಣನಂತೆ ಅಪಾರ ಕನಸುಗಳನ್ನು ಹೊತ್ತ ಜೀವದ ಹಾಗೆ ಕಾಣಿಸುತ್ತಿದ್ದಾರೆ.



*



ನಾವಿಬ್ಬರು ಭೇಟಿಯಾದಾಗಲೆಲ್ಲಾ ನಮ್ಮನಮ್ಮ ಕನಸುಗಳ ಬಗ್ಗೆ ಚರ್ಚಿಸಿದ್ದೇವೆ: ಚಿತ್ರದುರ್ಗದ ನಿಜಲಿಂಗಪ್ಪ ಸಮಾಧಿಯ ಬಳಿ, ದೊಡ್ಡಮಳ್ತೆಯ ಹೊನ್ನಮ್ಮನಕೆರೆ ಗುಡ್ಡದಲ್ಲಿ, ಡಯಟ್ ಗೋಡೆ-ಗೋಡೆಗಳಾಚೆ. ಪಠ್ಯಪುಸ್ತಕಗಳನ್ನು ಮೀರಿದ , ಸಿದ್ಧಮಾದರಿಗಳನ್ನು ಮುರಿಯುವ ಆಲೋಚನೆಗಳೇ ಅವು; ಜೀವಪರ ಚಿಂತನೆಗಳು.



ಅವರಿರುವಲ್ಲಿ ಧನಾತ್ಮಕ ಶಕ್ತಿ ಪ್ರವಹಿಸುತ್ತಿರುತ್ತದೆ. ಪರಿಣಾಮದ ಬಗ್ಗೆ ಆಲೋಚಿಸದೆ, ತಮ್ಮ ನಿಲುವುಗಳನ್ನು ನೇರವಾಗಿ ಹೇಳಿಬಿಡುವ ಜಾಯಮಾನ ಅವರದು. ಜಿಲ್ಲೆಯ ಹಲವು ಶಿಕ್ಷಕರು ಅವರ ಪ್ರೋತ್ಸಾಹದ ಮಾತಿಗೆ ದುಡಿಯುವ ಕಸುವನ್ನು ಹೆಚ್ಚಿಸಿಕೊಂಡಿದ್ದಾರೆ, ಹೊಸತನವನ್ನು ಮೈದುಂಬಿಕೊಂಡಿದ್ದಾರೆ.



ಮಾತನಾಡುವಾಗ ಕೇಳುಗ/ನೋಡುಗರನ್ನು ಗಮನದಲ್ಲಿಟ್ಟುಕೊಂಡು , ಅವರನ್ನು ಮಾತಿಗೆಳೆಯುತ್ತಾ ಮುಂದುವರಿಯುವ , ಹಲವು ವಾಸ್ತವ ಅನುಭವಗಳನ್ನು ಮಾತಿನ ಕೇಂದ್ರಕ್ಕೆ ಲಿಂಕ್ ಮಾಡುವ ಬಗೆ ಇವರದು.



(ಯಾವತ್ತೂ ನಿದ್ರಿಸುವ ನನ್ನ ಮೊಬೈಲಿನ ಬಗ್ಗೆ ಅವರಿಗೆ ಬೇಸರ/ಸಿಟ್ಟು. ಹಲವು ಭೇಟಿಗಳಿಂದ ತಪ್ಪಿಸಿಕೊಳ್ಳುವ ನನ್ನ ನಿಲುವುಗಳ ಬಗ್ಗೆಯೂ).



ಸಿದ್ದೇಶಿ ಸರ್ ಸುಮಾರು ಒಂದು ದಶಕವನ್ನು ಇಲ್ಲಿ ಬಾಳಿದ್ದಾರೆ. ಹಲವು ಶಿಕ್ಷಕ/ವಿದ್ಯಾರ್ಥಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.
ಈ ಅನುಭವಗಳು ಅವರನ್ನು ಆಯುಷ್ಯವಿಡೀ ಬೆಚ್ಚಗಿರಿಸುತ್ತವೆ!

*

ಕಾಜೂರು ಸತೀಶ್

Tuesday, July 26, 2022

ನಮ್ಮೊಳಗೆ ಉಳಿದ ರಂಜನ್ ಸರ್

ಒಂದು ದೀರ್ಘಾವಧಿಯ(ಹೆಚ್ಚು ನೆನಪಲ್ಲುಳಿದಿರುವುದರಿಂದ ಅದು ದೀರ್ಘವಾದ ಬದುಕೆನಿಸಿರುವುದು) ನನ್ನ ಬದುಕಿನಲ್ಲಿ 'ಕಚೇರಿ' ಎಂಬ ಪದವು corruptionನ ಅವತಾರವಾಗಿಯೇ ಉಳಿದಿದೆ. 
*

ಅದಕ್ಕೆ ಅಪವಾದವಾದವೊಂದು ನನ್ನ ಅನುಭವಕ್ಕೆ ಬಂದಿರುವುದು ನನ್ನ ಭಾಗ್ಯ.
ಕಳೆದೆರಡು ವರ್ಷಗಳಲ್ಲಿ ಸೋಮವಾರಪೇಟೆ ಬಿಇಓ ಕಚೇರಿಯಲ್ಲಿ ಕಚೇರಿ ಸಹಾಯಕರಾಗಿ ಸೇವೆ ಸಲ್ಲಿಸಿ ಪ್ರಾಮಾಣಿಕತೆಯ ಉತ್ತುಂಗದಲ್ಲಿರುವಾಗಲೇ ವರ್ಗಾವಣೆಗೊಂಡು ನಮ್ಮೊಳಗೆ ಉಳಿದ ರಂಜನ್ ಸರ್ ಅವರ ಕುರಿತ ಮಾತುಗಳಿವು.


'ತಮ್ಮ ಪಾಡಿಗೆ ತಾವು' ಇದ್ದುಕೊಳ್ಳುತ್ತಲೇ ಮಾಡಬೇಕಾದ ಕೆಲಸಗಳನ್ನು ನಮ್ಮ ಅರಿವಿಗೆ ಬಾರದಂತೆ ಮುಗಿಸಿ ಅದನ್ನು ಮುಗಿಸಿರುವ ಕುರಿತೂ ಮಾತನಾಡದ ಅವರ ಮುಗ್ಧತೆಗೆ ಹಲವಾರು ಬಾರಿ ಮನಸ್ಸಿನಲ್ಲೇ ಬೆನ್ನುತಟ್ಟಿದ್ದೇನೆ. ಅವರು ಇಲ್ಲಿರುವಾಗಲೇ ಅದನ್ನು ಬರೆಯಬೇಕು ಎಂದುಕೊಂಡಿದ್ದೆ. ಅಷ್ಟರಲ್ಲೇ ಅವರು ವರ್ಗಾವಣೆಗೊಂಡರು!


ಈ ಅಲ್ಪ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವುದು ಹೀಗೇ ಅಲ್ಲವೇ?
*
ಕಾಜೂರು ಸತೀಶ್

Sunday, July 17, 2022

ಈ ಕೊರಳನುಳಿಸು ಪ್ರಭುವೇ..



ಕಳೆದ ತಿಂಗಳು. ಹತ್ತಾರು ಬಾರಿ ಕರೆ ಪ್ರಯತ್ನಿಸಿದ ಒಂದು ಸಂಖ್ಯೆಯಿಂದ 'ನಿಮಗೆ ಒಂದು ಪ್ರಶಸ್ತಿ ಬಂದಿದೆ, ದಯವಿಟ್ಟು ಕರೆ ಮಾಡಿ' ಎಂಬ ಸಂದೇಶ ಬಂದಿತ್ತು.

 'ಯಾವ ಪ್ರಶಸ್ತಿ' ಮರುಪ್ರಶ್ನೆ.

 "......................"

ಮೊದಲನೆಯದಾಗಿ -ನನಗೆ ಕಿರಿಕಿರಿ ಉಂಟುಮಾಡಿದ ಕ್ಷೇತ್ರವದು. ಅಲ್ಲಿ 'ಸಾರಥಿ'ಯಾಗಲಾರೆ. 

ಎರಡನೆಯದಾಗಿ - ಕೊರಳಿಗೆ ಹಾರ, ಹೆಗಲಿಗೆ ಬಟ್ಟೆ, ಮನಸ್ಸಿಗೆ ಪ್ರಾಣಸಂಕಟ!

ಎಂದಿನಂತೆ ಮುಲಾಜಿಲ್ಲದೆ 'ಬೇಡ' ಎಂದೆ.
*****

ಮತ್ತೊಂದು ಆಮಂತ್ರಣ. 

ಹೋಗಿದ್ದರೆ ಕೊರಳಿಗೆ ಹಾರ ಹೆಗಲಿಗೆ ಬಟ್ಟೆ ಖಾತ್ರಿ. 

ತಪ್ಪಿಸಿಕೊಂಡೆ.
****



(ಚಿತ್ರಕೃಪೆ- ಅಂತರ್ಜಾಲ)
                                 ****

ಮಗದೊಂದು! 

ಬದುಕಿದ್ದಾಗ ಸರಿಯಾಗಿ ನೋಡಿಕೊಳ್ಳದವರು ತೀರಿಕೊಂಡ ಮೇಲೆ ಅದ್ದೂರಿ ತಿಥಿ ಮಾಡುತ್ತಾರೆ. 

ಹಾಗೆಯೇ ಒಂದು ಸಮಾರಂಭ! 

ಬೇಕೆಂದೇ ಹೋಗಲಿಲ್ಲ! ಹೋಗಿದ್ದರೆ ಎಷ್ಟೋ ದಿನಗಳು ನಿದ್ದೆಯಿರುತ್ತಿರಲಿಲ್ಲ.
*

ಕಪಟ ಗೌರವಗಳಿಂದ  ಈ ಕೊರಳನುಳಿಸು ಪ್ರಭುವೇ



Sunday, July 10, 2022

ಅವನು ಹೊರಟುಹೋದ!

ಅವನು ಈ ಸಂಜೆ ಹೋಗಿಬಿಟ್ಟ.

ತುಸು ಮೊದಲು ನನ್ನ ಮುಖವನ್ನೇ ನೋಡುತ್ತಿದ್ದ. ಬೈಯ್ಯುತ್ತಾರೆಂದು ಹೆದರಿ ಔಷಧಿ ಕುಡಿದ. 'ನೀರು ಬೇಕಾ?' ಎಂದಾಗ ಮತ್ತೆ ಮುಖವನ್ನೇ ನೋಡಿದ. ಹೊಟ್ಟೆತುಂಬುವಷ್ಟು ಕುಡಿದ.

ಆ ತಿಂಡಿ ಎಂದರೆ ಅಷ್ಟು ಇಷ್ಟ ಅವನಿಗೆ. ಅಡುಗೆ ಮನೆಯಿಂದ ವಾಸನೆ ಬಂದರೆ ಕೇಳಿ ತಿನ್ನುತ್ತಿದ್ದ. ಈ ಸಂಜೆಯೂ ಅದೇ ತಿಂಡಿ ಮಾಡಿದ್ದರು ಅಮ್ಮ. ಅವನು ಕೇಳಲಿಲ್ಲ. ಒಂದೆರಡು ಸಣ್ಣ ತುಂಡುಗಳನ್ನು ತಿಂದು ಮತ್ತೆ ಬೇಡವೆಂದ.

ಕೆಲವು ದಿನಗಳಿಂದ ಅವನ ಧ್ವನಿ ಹೊರಟುಹೋಗಿತ್ತು. ವೈದ್ಯರನ್ನು ಕರೆಸಿದಾಗ ಅವರನ್ನೇ ಗದರಿಸಿ ಕಳುಹಿಸಿದ್ದ.

ನಿಧಾನಕ್ಕೆ ಊಟಬಿಟ್ಟ. ಮೂರು ಹೊತ್ತು ನಾನ್ವೆಜ್ ಇಲ್ಲದೆ ಏನೂ ತಿನ್ನುವವನಲ್ಲ . ಅದೂ ಬೇಡವೆಂದ.

ಇಡೀ ದಿನ ಮಲಗಿದ್ದಲ್ಲೇ ಇದ್ದ. ಹಾಗೆಂದು ಒಂದು ಎರಡು ಅಲ್ಲೇ ಮಾಡಿಕೊಳ್ಳುವವನಲ್ಲ. ಅದನ್ನೆಲ್ಲ ತಡೆದುಕೊಂಡೇ ಇದ್ದ. ಅಥವಾ ಮಧ್ಯರಾತ್ರಿ ಯಾರಿಗೂ ತಿಳಿಯದಂತೆ ಹೋಗಿಬರುತ್ತಿದ್ದನೋ ಗೊತ್ತಿಲ್ಲ.

ಈ ಸಂಜೆ ಅವನು ಏನೂ ಮಾತನಾಡದೆ ನನ್ನ ಮುಖವನ್ನೇ ದಿಟ್ಟಿಸುತ್ತಿದ್ದಾಗ ನನ್ನ ಹೃದಯ ಕರಗುತ್ತಿರುವಂತೆ ಅನಿಸುತ್ತಿತ್ತು. 'ಸ್ವಲ್ಪ ಬಿಸಿಲು ಬಂದರೆ ಸರಿಯಾಗುತ್ತಾನೆ' ಅಮ್ಮ ಹೇಳುತ್ತಿದ್ದರು.

ನಿಜಕ್ಕೂ ಅವನು ಹೋದನೇ? ನಂಬಲಾಗುತ್ತಿಲ್ಲ ನನಗೆ.
*
೨೦೧೩ರಲ್ಲಿ ಅಪ್ಪ ಇದೇ ಊರಿನಿಂದ ಅವನನ್ನು ತಂದಿದ್ದರು. ಇಷ್ಟೇ ಇಷ್ಟಿದ್ದ ಅವನನ್ನು ನೋಡಿ 'ಇವನನ್ಯಾಕೆ ತಂದ್ರಿ!?' ಎಂದಿದ್ದೆ. ಆಮೇಲೆ ಅವನ ದುರ್ಬಲ ಕಾಲುಗಳನ್ನು ನೋಡಿ 'ಅಯ್ಯೋ.. ಬೇರೆ ಸಿಗ್ಲಿಲ್ವಾ' ಎಂದು ಕೇಳಿದ್ದೆ.


ಅಪ್ಪನ ಏಟು ತಿಂದು ಭಯದ ವಾತಾವರಣದಲ್ಲೇ ಬೆಳೆದ. ಕೂರು ಎಂದರೆ ಕೂರಬೇಕು, ನಿಲ್ಲು ಎಂದರೆ ನಿಲ್ಲಬೇಕು! ಹೊರಗೆ ಹೋಗಬೇಕೆಂದಿದ್ದರೆ ಒಂದೆರಡು ನಿಮಿಷಗಳಲ್ಲಿ ಹಿಂತಿರುಗಬೇಕು! ಅವನ ಧ್ವನಿಯೋ ಒಂದು ಶಬ್ದಕ್ಕೆ ಕಿವಿಯೇ ಒಡೆದುಹೋಗುವಷ್ಟು!


ಗಾಳಿಯಲ್ಲಿ ಎಸೆದ ಬಿಸ್ಕತ್ತನ್ನು ಬಾಯಲ್ಲಿ ಹಿಡಿಯುವುದು, ನೆಗೆಯುವುದು, ಬೇಟೆಯಾಡುವುದು, ಬಂದ ಅಪರಿಚಿತರನ್ನು ಗದರಿಸಿ ಓಡಿಸುವುದು, ಕಾಡಿಗೆ ತೆರಳುವಾಗ ಸಂಭ್ರಮದಿಂದ ಬರುವುದು, ಹಾವು,ಮೊಲಗಳನ್ನು ಅಟ್ಟಾಡಿಸುವುದು.. ಹೀಗೆ ಅವನು ಬೆಳೆದು ದೊಡ್ಡವನಾಗುತ್ತಿರುವಾಗಲೇ ಅಪ್ಪ ಹೊರಟುಹೋದರು.


ಅವನ ಜೊತೆಗಾರನೂ ಹೊರಟುಹೋದ. ತರುವಾಯ ಮತ್ತೊಬ್ಬನೂ.


ಇವನು ಅಮ್ಮನ ಜೊತೆಗಿದ್ದ. ಅವನೊಡನೆ ಮಾತನಾಡುತ್ತಾ ಅವನ ತುಂಟತನಗಳನ್ನು ಸಹಿಸುತ್ತಾ ಅವನು 'ಅಮ್ಮಾ' ಎನ್ನುವುದನ್ನು ಕೇಳಿ ಸಂಭ್ರಮಿಸುತ್ತಾ ಅಮ್ಮ ಇರುತ್ತಿದ್ದಳು.


ಒಂದು ಬೈಗುಳಕ್ಕೆ ಅವನು ಎಷ್ಟು ಹೆದರುತ್ತಿದ್ದ! ಅವನಿಗೆ ಎಷ್ಟು ಚೆನ್ನಾಗಿ ಭಾಷೆ ಬರುತ್ತಿತ್ತು. ಬೆಳಿಗ್ಗೆ ಏಳುವುದು ತಡವಾದರೆ ಕರೆಯುತ್ತಿದ್ದ. ಹಾವು ಬಂದರೆ ತಿಳಿಸುತ್ತಿದ್ದ. ಟ್ಯಾಪಿನಲ್ಲಿ ನೀರು ವ್ಯಯವಾಗುತ್ತಿದ್ದರೆ ಸೂಚನೆ ಕೊಡುತ್ತಿದ್ದ. ಆನೆ ಬಂದರೆ ಸದ್ದು ಮಾಡದೆ ಹೋಗಿ ಮಲಗಿಬಿಡುತ್ತಿದ್ದ. ಪಟಾಕಿಯ ಸದ್ದು ಕೇಳಿದರಂತೂ ನಾಪತ್ತೆ.



 ಒಂದು ಎಲೆ ಬಿದ್ದರೂ ಎಚ್ಚರಿಸುತ್ತಿದ್ದ. ಹಸಿವಾದರೆ, ನೀರಡಿಕೆಯಾದರೆ, ಬಿಸಿಲು ಹೆಚ್ಚಾದರೆ, ಮಳೆಯಾದರೆ, ಚಳಿಯಾದರೆ, ಮನೆಯಲ್ಲಿ ಜೋರಾಗಿ ಮಾತಾಡಿದರೆ ಅವನು ಸಿಗ್ನಲ್ ಕೊಡುತ್ತಿದ್ದ. ಅವನು ಇದ್ದಾಗ ಅಪರಿಚಿತರಿಗೆ ಪ್ರವೇಶವಿರಲಿಲ್ಲ.

ಮಗುವಿನಂತಿದ್ದ. 'ಡ್ಯಾನ್ಸ್ ಮಾಡು ಬಾ' ಎಂದರೆ ಉರುಳಾಡಿ ಕುಣಿಯುತ್ತಿದ್ದ.

ಅವನು ಹೋಗಿಬಿಟ್ಟ. ಎಷ್ಟು ಸುಖವಾಗಿ ಬಾಳಿದ! ಇನ್ನುಮುಂದೆ ಅದಕ್ಕೂ ಹೆಚ್ಚಿನ ಸುಖ ಅವನಿಗೆ!!


Thursday, July 7, 2022

ದುರುಳನೊಬ್ಬನನ್ನು ವಂಚಿಸಿದ ಕಥೆ!

ಕೆಲವು ವರ್ಷಗಳ ಹಿಂದಿನ ಘಟನೆ. ಅವನ ಕುರಿತಾದದ್ದು.

ಅವನು( ಮನುಷ್ಯತ್ವವೇ ಇಲ್ಲದವನಾದ್ದರಿಂದ ಈ ಸಂಬೋಧನೆ) ಯಾವುದೇ ಸಭೆ ಸಮಾರಂಭಗಳಲ್ಲಿ ಶಿಕ್ಷಕರನ್ನುದ್ದೇಶಿಸಿ ಹೇಳುತ್ತಿದ್ದಿದ್ದಿಷ್ಟೇ: " ನಿಮಗೆ ನಾವು ಸಂಬಳ ಕೊಡುವುದು ಯಾಕೆ ಗೊತ್ತಾ...?!"

ಮೂಲತಃ ಶಿಕ್ಷಕನಾಗಿದ್ದ ಆತ ಕೆಲಸ ಕಷ್ಟವೆಂದು ಕಚೇರಿಯಲ್ಲಿ ಬೀಡುಬಿಟ್ಟಿದ್ದ. ಎಲ್ಲರೂ ಅವನನ್ನು ಅಧಿಕಾರಿ ಎಂದೇ ಅಂದುಕೊಂಡಿದ್ದರು. ಹಣ ಮಾಡುವುದರಲ್ಲೂ ನಿಸ್ಸೀಮ!

ಆ ದಿನ ಸಂಜೆ ನಾಲ್ಕರ ವೇಳೆ ಒಂದು ಶಾಲೆಗೆ ಹೋಗಿದ್ದ. ಮುಖ್ಯಶಿಕ್ಷಕರು ಪುರುಷನಾದ ಕಾರಣ ಉಳಿದ ಮಹಿಳಾ ಶಿಕ್ಷಕರನ್ನು ಮನೆಗೆ ಕಳುಹಿಸಿದ. 'ಆ ವಹಿ ಕೊಡಿ ಈ ವಹಿ ಕೊಡಿ' ಎನ್ನುತ್ತಾ ಸಂಜೆ ಆರೂವರೆ ಆಯಿತು. ಇವನು ಇವತ್ತು ನನ್ನನ್ನು ಬಿಡುವುದಿಲ್ಲ ಎಂದುಕೊಂಡ ಆ ಮುಖ್ಯ ಶಿಕ್ಷಕರು 'ಈಗ ಬಂದೆ ಸರ್' ಎಂದು ಕಿರುಬೆರಳನ್ನೆತ್ತಿ ತೋರಿಸಿ ಹೊರಹೋದವರೇ main switch ಆಫ್ ಮಾಡಿ ಒಳಗೆ ಬಂದರು. ಒಳಗೆ ಕತ್ತಲಿದ್ದ ಕಾರಣ 'ಕ್ಯಾಂಡಲ್ ಕೊಡಿ' ಎಂದ. ಇಲ್ಲ ಎಂದಿದ್ದಕ್ಕೆ ನಿಧಾನಕ್ಕೆ ಕಚೇರಿಯಿಂದ ಹೊರಬಂದ!

ಆ ಸಮಯಕ್ಕೆ ಬಸ್ ಇಲ್ಲದ್ದರಿಂದ ಮುಖ್ಯ ಶಿಕ್ಷಕರು ಆಟೋವನ್ನೂ ಕರೆಸದೆ ನಾಲ್ಕು ಕಿಲೋಮೀಟರ್ ನಡೆಸಿಕೊಂಡು ಹೋದರು! ಅವನ ಗುಡಾಣ ಹೊಟ್ಟೆಯನ್ನು ಸ್ವಲ್ಪಮಟ್ಟಿಗೆ ಕರಗಿಸಿದ ಈ ಸ್ವಾರಸ್ಯವನ್ನು ಅವರೇ ನನಗೆ ಹೇಳಿದ್ದು.
*
ಒಂದೆರಡು ವರ್ಷಗಳ ನಂತರ ಕಚೇರಿಯ ಗೂಟ ಕಳಚಿ ಶಾಲೆಗೆ ಹೋಗಬೇಕಾದಾಗ ನೊಂದುಕೊಂಡರೂ, ಅಲ್ಲೂ ಅಧಿಕಾರಿಯಂತೆ ವರ್ತಿಸತೊಡಗಿದನಂತೆ! ಯಾರೂ ಅವನ ಮಾತು ಕೇಳದಿದ್ದಾಗ ಒಮ್ಮೆ ಬೇಗ ನಿವೃತ್ತಿ ಆಗಿದ್ದರೆ ಸಾಕು ಎಂದು ದೇವರಲ್ಲಿ ಬೇಡುತ್ತಿದ್ದನಂತೆ!
*
ಈಚೆಗೆ whatsapp ನೋಡುತ್ತಿದ್ದಾಗ ಯಾರೋ ಒಬ್ಬರು ಹಂಚಿಕೊಂಡಿದ್ದ statusನ ಪಟದಲ್ಲಿ ಹಾರ ಹಾಕಿಸಿಕೊಳ್ಳುತ್ತಿದ್ದವರ ಪೈಕಿ ಇವನೂ ಇದ್ದ.

ಜಗತ್ತಿನ ಚಿತ್ರ ಎಂದುಕೊಂಡೆ.
*
ಕಾಜೂರು ಸತೀಶ್

ಇಂಗ್ಲಿಷ್ ಎಂಬ ಅವಮಾನ ಮತ್ತು ವ್ಯಾಮೋಹ

ಯಾರಾದರೂ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿದ್ದರೆ 'ಆಽ' ಎಂದು ಬಾಯಗಲಿಸಿ ನೋಡುತ್ತಿದ್ದೆವು. ಶಾಲೆಯಲ್ಲಿ ಆಂಗ್ಲ ಭಾಷೆಯನ್ನು ಕನ್ನಡದಲ್ಲೇ ಹೇಳಿಕೊಡುತ್ತಿದ್ದುದರಿಂದ ಇಂಗ್ಲಿಷ್ ನಮಗೆ ಅಪರೂಪದ ಭಾಷೆಯಾಗಿತ್ತು.

ಮನೆಯಲ್ಲೂ ಹಾಗೆಯೇ- ರೇಡಿಯೋದಲ್ಲಿ English News ಬಂತೆಂದರೆ ಆಫ್ ಮಾಡಬೇಕಿತ್ತು! 'ಏನದು ಕೊಂಯ್ಕೊಂಯ್, ಆಫ್ ಮಾಡು' ಎನ್ನುತ್ತಿದ್ದರು!

ಭಾಷೆಯನ್ನು ಸ್ವಯಂ ಕಲಿಯುವ ಪ್ರಕ್ರಿಯೆ(ನನ್ನೊಂದಿಗೆ ನಾನೇ ಮಾತಾಡಿಕೊಂಡು) ಬಾಲಿಶವೂ ಅಮಾನವೀಯವೂ ಆದದ್ದು. ಆದರೂ , ಅವಮಾನವನ್ನು ಮೀರಲು, ತುಸು ಆತ್ಮವಿಶ್ವಾಸವನ್ನು ಗಳಿಸಲು ನಾವು ಸ್ವಲ್ಪವಾದರೂ English ಕಲಿಯಬೇಕಿತ್ತು.
*
ನನ್ನ ಅದೃಷ್ಟವೋ ಏನೋ- ನಾನು ಒಂದನೇ ತರಗತಿಯಲ್ಲಿದ್ದಾಗ ಐದನೇ ತರಗತಿಯ ಇಂಗ್ಲೀಷ್ ಪಠ್ಯಪುಸ್ತಕದ ಪರಿಚಯವಾಯಿತು. ಹಾಗಾಗಿ , ಐದನೇ ತರಗತಿಗೆ ಹೋದಾಗ ತುಂಬಾ ಹೊಡೆಯುವ ಟೀಚರೊಬ್ಬರು ಇಂಗ್ಲೀಷ್ ಪಾಠ ಮಾಡಲು ಬಂದಾಗ ನನಗೆ ನಿಜಕ್ಕೂ ಖುಷಿ ಆಗಿತ್ತು!

ಆರನೆಯ ಇಯತ್ತೆಯ ಇಂಗ್ಲೀಷ್ ಪಾಠದಲ್ಲಿ ಒಂದು ಮಜಾ ಇರುತ್ತಿತ್ತು . ಮಧ್ಯಾಹ್ನದ ಅನಂತರದ ಮೊದಲ ಅವಧಿಯದು. ಹೋಟೆಲಿನಲ್ಲಿ ಊಟಮಾಡಿ ಒಂದು ಪ್ಯಾಕೆಟ್ ಏರಿಸಿಕೊಂಡು ಎಲೆ- ಅಡಿಕೆ ಜಗಿದು ಕಣ್ಣು ಕೆಂಪಗೆ ಮಾಡಿಕೊಂಡು ಬರುವಾಗ ಪಾಠಗಳನ್ನು ಮೊದಲೇ ಓದಿ ಡೈಜೆಸ್ಟಿನಲ್ಲಿ ಅರ್ಥ ತಿಳಿದುಕೊಂಡಿರುತ್ತಿದ್ದ ನನಗೆ ಖುಷಿಯೋ ಖುಷಿ. 'ಕತ್ತೆಗಳಾ, ದರ್ವೇಸಿಗಳಾ, ಬ್ಯಾವರ್ಸಿಗಳ ತಂದು ನಿಮ್ಮ..' ಎಂದು ಬೈಯ್ಯುತ್ತಾ ಉದ್ದ ಬೆತ್ತದಲ್ಲಿ ಬೀಳುವ ಏಟು ಇಂಗ್ಲೀಷ್ ಓದಲು ಬಾರದವರಿಗೆ ನರಕವಾಗಿತ್ತು.

ಏಳನೆಯ ಇಯತ್ತೆಯಲ್ಲಿ ಐದನೇ ತರಗತಿಯ ಅದೇ ಟೀಚರು ಇಂಗ್ಲೀಷ್ ಪಾಠಕ್ಕೆ. ಒಂದು ಪಾಠ ಒಂದು ಪದ್ಯ ಮುಗಿಸಿ ಕಿರು ಪರೀಕ್ಷೆ ಮಾಡಿ ಇಪ್ಪತ್ತಕ್ಕೆ ಹದಿನೈದು ಬಂದಿದ್ದರಿಂದ ಬಿಸಿಬಿಸಿ ಕಜ್ಜಾಯ ಕೂಡ ಕೊಟ್ಟ ಅವರಿಗೆ ಮರುದಿನವೇ ವರ್ಗಾವಣೆಯಾದಾಗ ಖುಷಿಪಟ್ಟಿದ್ದೆವು! ಆ ವರ್ಷ ಇಂಗ್ಲೀಷ್ ಪಾಠ ಮಾಡುವವರಿಲ್ಲದೆ ಡೈಜೆಸ್ಟೇ ನಮ್ಮ ಇಂಗ್ಲೀಷ್ ಮೇಷ್ಟ್ರಾಯಿತು. ಇನ್ನೇನು ಪಬ್ಲಿಕ್ ಪರೀಕ್ಷೆ ಬರಬೇಕು ಎನ್ನುವಾಗ ಆ ವಿಷಯವನ್ನು ಹಂಚಿಕೊಂಡಿದ್ದ ಮುಖ್ಯ ಶಿಕ್ಷಕರು ಬಂದು ವ್ಯಾಕರಣ ಪುಸ್ತಕದಲ್ಲಿದ್ದ Degrees of comparison ಬರೆಸಿ ಹೋಗಿದ್ದರು. ನಾವದನ್ನು ಉರುಹೊಡೆದುಕೊಂಡಿದ್ದೆವು!

ಎಂಟನೇ ತರಗತಿಗೆ ಬಂದಾಗ 'ಇಂಗ್ಲೀಷ್ ಪುಸ್ತಕ ತಕೊಂಡ್ಬಾ' ಎಂದು ಮೇಷ್ಟ್ರು ಹೇಳಿದಾಗ ಕಚೇರಿಯಲ್ಲಿದ್ದ ಅವರ ಪುಸ್ತಕವನ್ನು ತರುವಾಗ ಮೆಲ್ಲಗೆ ತೆರೆದು ನೋಡಿದ್ದೆ. ಅದರ ತುಂಬ ಪೆನ್ಸಿಲಿನಲ್ಲಿ ಬರೆದಿದ್ದ ಕನ್ನಡ ಅರ್ಥಗಳು! 'ಪಾಪ! ಮೇಷ್ಟ್ರಿಗೆ ಇಂಗ್ಲೀಷ್ ಬರುವುದಿಲ್ಲ' ಲೆಕ್ಕಹಾಕಿದೆ.
*
ಹೀಗೆ ಮುಂದುವರಿದ ನನ್ನ ಇಂಗ್ಲೀಷ್ ಕಲಿಕೆ ಕಡೆಗೂ ಗುರಿಮುಟ್ಟಲಿಲ್ಲ. ಯಾರಾದರೂ ಏನಾದರೂ ಕೇಳಿದರೆ ಉತ್ತರಿಸುವ ಹಿಂಸೆಗೆ ,ಅವಮಾನಕ್ಕೆ ಆ ರಾತ್ರಿಯ ನಿದ್ದೆಯೂ ಇಂಗ್ಲೀಷ್ ಪಾಲಾಗುತ್ತಿತ್ತು!

ತುಂಬಾ ಅವಮಾನವಾದ ಆ ದಿನವೊಂದಿದೆ. ಅವರು- "Did you get it?" ಎಂದರು. ನಾನು ತಲೆಯಾಡಿಸಿದರೆ ಒಳ್ಳೆಯದಿತ್ತು, ಬದಲಿಗೆ "I didn't got" ಎಂದೆ!! ಅವರು "Oh, you didn't get?!" ಎಂದರು.
ನನಗೆ ನನ್ನ ತಪ್ಪಿನ ಅರಿವಾಯಿತು!

ಅಂದಿನಿಂದ ಓದಿದೆ. ನನ್ನೊಡನೆ ಮಾತನಾಡಿಕೊಂಡೆ. ಸಾಹಿತ್ಯ , ತತ್ತ್ವಶಾಸ್ತ್ರ, ಎಲ್ಲವೂ ಇಂಗ್ಲೀಷಿನಲ್ಲಿ! ವ್ಯಾವಹಾರಿಕ ಇಂಗ್ಲೀಷ್ ಮಂಕಾದರೂ ದೊಡ್ಡ ದೊಡ್ಡ ಪದಗಳೂ, ವಿಚಾರಗಳೂ ಬರತೊಡಗಿದವು. ಮುಂದೆ ಇಂಗ್ಲೀಷ್ ಮೇಷ್ಟ್ರಾದೆ!


ಈಗ ಯಾವ ದೇಶದಲ್ಲಾದರೂ ಸರಿ, ಬದುಕಿ ಬರುವೆ!

*

ಕಾಜೂರು ಸತೀಶ್

Thursday, June 30, 2022

ತಿಂದು ಬದುಕುವ ವೈಖರಿ

ಯಾಕೋ ಗೊತ್ತಿಲ್ಲ, ಫೋನ್ ಕಾಲ್ ಗಳೆಂದರೆ ನನಗಾಗುವ ಅಲರ್ಜಿ ಅಷ್ಟಿಷ್ಟಲ್ಲ.

ನನ್ನ ಫೋನ್ ಆನ್ ಆಗಿದೆಯೆಂದಿಟ್ಟುಕೊಳ್ಳಿ. ಬರುವ ಮೊದಲ ಕರೆ ಹಣದ ಬೇಡಿಕೆಯಾಗಿರುತ್ತದೆ. ಎರಡನೆಯ ಕರೆ ಅವರ ವೈಯಕ್ತಿಕ (ಅವರೇ ಮಾಡಬಹುದಾದ )ಕೆಲಸವನ್ನು ಮಾಡಿಕೊಡಿ ಎಂದಾಗಿರುತ್ತದೆ... ಮೂರನೆಯದು ತಮ್ಮ ಸಾಧನೆಯನ್ನು ಹೇಳಿಕೊಳ್ಳಲು ಕೊರೆಯುವವರಾಗಿರುತ್ತಾರೆ(ಅವೆಲ್ಲವನ್ನೂ ಕೇಳಿ ಕೇಳಿ ನನಗೆ ಬಾಯಿಪಾಠ ಆಗಿದ್ದರೂ ಮತ್ತೆ ಹೊಸದೆಂಬಂತೆ ಕೇಳಿಸಿಕೊಳ್ಳಬೇಕಾದ ದುಸ್ಥಿತಿ!)

ಹಣ ಪಡೆದುಕೊಳ್ಳುವವರು ಹಿಂತಿರುಗಿಸುವುದಿಲ್ಲ . ಆದರೆ ತಮಾಷೆ ಹಾಗೂ ಭಯಾನಕವಾದ ಸಂಗತಿಯೆಂದರೆ ಅವರನ್ನು ಕಂಡಾಗ ನಾವೇ ತಲೆಮರೆಸಿ ಹೋಗಬೇಕಾದ ಪರಿಸ್ಥಿತಿ. ಮತ್ತೆ ಬೇಡಿಕೆಯಿಟ್ಟರೆ?!

ಹಾಗೆ ಹಣಪಡೆದುಕೊಂಡವನೊಬ್ಬ ಮುಖವನ್ನು ಆಚೆ ತಿರುಗಿಸಿ ಹೋಗುತ್ತಿದ್ದ. ಇನ್ನು ಅವನು ಹಣ ಹಿಂತಿರುಗಿಸುವುದಿರಲಿ, ನನ್ನೊಂದಿಗೆ ಮಾತನಾಡುವುದೂ ಸಂದೇಹ!

ಅಕ್ಷರ ಕಲಿತು ಉದ್ಯೋಗ ಗಿಟ್ಟಿಸಿಕೊಂಡ ವ್ಯಕ್ತಿಗಳು 'ನನಗೊಂದು ಕವನ/ಕತೆ/ಪ್ರಬಂಧ/ಭಾಷಣ ಬರೆದುಕೊಡಿ' ಎಂದು ನಿರ್ಲಿಪ್ತವಾಗಿ ಹೇಳುವಾಗ ಮೊಬೈಲಿನಲ್ಲಿ block option ಸೃಷ್ಟಿಸಿದವನ ಪಾದದ ಛಾಯಾಪ್ರತಿ ಇಟ್ಟು ಪೂಜಿಸಬೇಕೆನಿಸುತ್ತದೆ!

ಫೋನ್ ಆಫ್ ಮಾಡಿಟ್ಟುಕೊಂಡರೆ ಸ್ನೇಹಿತರು ದೂರವಾಗುತ್ತಾರೆ!

*




ಕಾಜೂರು ಸತೀಶ್ 

Friday, August 27, 2021

ಪಾಪದ ಕುರಿಂಜಿ ಹೂವುಗಳೂ ಮತ್ತು ಪಾಪಿ ಮನುಷ್ಯರೂ..

ರಂಜಿತ್ ಕವಲಪಾರ ಕಳೆದ ವರ್ಷ ಕೋಟೆಬೆಟ್ಟದ ಕುರಿಂಜಿಯ ಹೂಗಳನ್ನು facebookನಲ್ಲಿ ಚೆಲ್ಲಿದ್ದರು. ಕೆಲವು ದಿನಗಳ ಅನಂತರ ಗೆಳೆಯ ಸಂತೋಷನೊಂದಿಗೆ ಅಲ್ಲಿಗೆ ಹೋಗಿದ್ದೆ. ಇನ್ನು ಸದ್ಯಕ್ಕೆ ಕಾಣಸಿಗುವುದಿಲ್ಲವಲ್ಲಾ ಎಂದು ಕಣ್ಣಿನೊಳಗೆ ಸ್ವಲ್ಪವೂ ಜಾಗವಿರಬಾರದು- ಅಷ್ಟು ತುಂಬಿಕೊಂಡು ಬಂದಿದ್ದೆ.


ಇದೇ ಆಗಸ್ಟ್ ತಿಂಗಳು. ಒಂದು ದಿನ ಕ್ಯಾಮೆರಾ ತುಂಬಿಕೊಂಡು ಎಲ್ಲಿಗಾದರೂ ಹೋಗಬೇಕೆನಿಸಿ ರಸ್ತೆಗೆ ಇಳಿದಾಗ ಕಡೆಗೆ ದಾರಿ ಸೂರ್ಲಬ್ಬಿಯ ಕಡೆಗೆ ಸಾಗಿತು. ಸಿಕ್ಕಾಪಟ್ಟೆ ಮಳೆ. ಕೋಟಿನೊಳಗಿಂದ ಮೆಲ್ಲೆಮೆಲ್ಲೆ ನುಗ್ಗಿ ಬೆಚ್ಚಗಿನ ಆಕಾಶದ ಕತೆಹೇಳುವ ಹಾಗೆ ನನ್ನನ್ನಾವರಿಸುತ್ತಿತ್ತು. ಮೇದುರ ಜಲಪಾತವನ್ನು ಸೆರೆಹಿಡಿಯಬೇಕೆಂಬ ಆಸೆ. ಆದರೆ ಮಳೆಗೆ ಹೊಟ್ಟೆಕಿಚ್ಚು. ಕಡೆಗೆ ನಾನೇ ಮಳೆಯೆದುರು ಸೋತು ಸುಣ್ಣವೋ ಬಣ್ಣವೋ ಮತ್ತೊಂದೋ ಆಗಿ ಕ್ಯಾಮರಾವನ್ನು ಹೊರತೆಗೆಯದೆ ಮುಂದೆ ಸಾಗಿದ್ದೆ.


ಇಬ್ಬರು ನಿಂತಿದ್ದರು. ಮಂಡಿಯವರೆಗೆ ಪ್ಯಾಂಟು ಮಡಚಿಕೊಂಡು ಅಗಲವಾದ ಕೊಡೆ ಹಿಡಿದು ಮತ್ತ್ಯಾರೂ ಕಾಣಿಸದ ಆ ರಸ್ತೆ ಬದಿಯಲ್ಲಿ ನಿಂತು ಈ ಮಳೆಯ ಕುರಿತೋ ಅಥವಾ ರಾಜಕೀಯದ ಕುರಿತೋ ಅಥವಾ ತಾವು ಮೇಯಿಸುವ ಹಸುವಿನ ಕುರಿತೋ ಮಾತನಾಡುತ್ತಿದ್ದರು. ನಾನು ನಿಲ್ಲಿಸಿದೆ. 'ಏನು ಇಲ್ಲಿ' ಎಂದೆ. 'ಗೊತ್ತಾಗಲಿಲ್ಲ' ಎಂದರು. 'ನನಗೆ ನಿಮ್ಮನ್ನು ಗೊತ್ತು' ಎಂದೆ. 'ಎಲ್ಲಿಗೆ' ಎಂದರು.

ನಿಜಕ್ಕೂ ತಬ್ಬಿಬ್ಬಾದೆ!! ನಾನು ಮುಂದೆ ಸಿಗಬಹುದಾದ ಒಂದು ಊರಿನ ಹೆಸರು ಹೇಳಿ ' ಬದುಕಿದೆಯಾ ಬಡಜೀವವೇ' ಎಂದು ನಿಟ್ಟುಸಿರಿಟ್ಟೆ(ನಿಜಕ್ಕೂ ನಾನು ಎಲ್ಲಿಗೆ ಹೋಗುತ್ತಿರುವುದೆಂದು ನನಗೆ ಗೊತ್ತಿರಲಿಲ್ಲ).

'ಹೋಗಿ ಅವರ ಜೊತೆ' ಎಂದರು ನನಗೆ ಅಪರಿಚಿತರಾಗಿದ್ದ ಆ ಮತ್ತೊಬ್ಬರು.
'ಬೇಡ ಬೇಡ.. ನಾನು ಇಲ್ಲೇ ಹೋಗ್ತೇನೆ, ಮಳೆ ಜಾಸ್ತಿ ಆದ್ರೆ ಕಷ್ಟ' ಎಂದು ತುಸು ಸಂಕೋಚದಿಂದ ಇವರೆಂದರು.

'ಬನ್ನಿ' ಎಂದಾಗ ಬಂದರು. ಸ್ವಲ್ಪ ಮುಂದೆ ಹೋದಾಗ ಕಳೆದ ವರ್ಷ ನೋಡಿದ್ದ ಕುರಿಂಜಿ ಹೂಗಳು! 'ಅರೆ! ಈ ಹೂವು ಈ ವರ್ಷವೂ ಅರಳಿದೆಯಲ್ಲಾ?' ಕೇಳಿದೆ. 'ಈ ವರ್ಷ ಕಟ್ಟೆ ಬರ್ತದೆ ಮುಂದಿನ ವರ್ಷ ಆಗಲ್ಲ.'
'ಏನು ಹೇಳ್ತೀರಿ ಇದಕ್ಕೆ' ಕೇಳಿದೆ.

ನನ್ನ ಪರಿಚಯ ಹೇಳಿದೆ. ಆಗ ಮತ್ತಷ್ಟೂ ಪ್ರೀತಿಯಿಂದ ಮಾತನಾಡಿದರು. ಪೂವಯ್ಯ ಮಾಷ್ಟ್ರು. CRPF ನಲ್ಲಿ 12 ವರ್ಷ ಕೆಲಸ ಮಾಡಿ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮೇಷ್ಟ್ರಾಗಿ ಕೆಲಸ ಮಾಡುತ್ತಿರುವವರು. ಶಾಲೆಯಿಂದ ಮನೆಗೆ ಸುಮಾರು ಐದಾರು ಕಿಮೀ ದೂರ. ಒಂದು ಒಳದಾರಿಯನ್ನು ಕಂಡುಕೊಂಡು (ಜಿಗಣೆಗಳಿಗೆ ರಕ್ತದಾನ ಮಾಡದೆ) ಅಷ್ಟು ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸುವವರು. ಕುರಿಂಜಿಗೂ ಈ ಆರ್ಲ್ ಪೂವಿಗೂ ವ್ಯತ್ಯಾಸ ಹೇಳಿದಾಗ ನನಗೆ ಖುಷಿಯಾಯಿತು. ಏಕೆಂದರೆ ಹಲವರನ್ನು ನಾನು ಕೇಳಿದ್ದೇನೆ. ಸಾಕ್ರಟೀಸನ ಹಾಗೆ ತಲೆ ತಿಂದಿದ್ದೇನೆ. ಅವರಲ್ಲಿ ಪೂವಯ್ಯ ಮಾಷ್ಟ್ರ ಮಾತು ಹಿಡಿಸಿತು. ನಿಖರವಾಗಿ ಖಚಿತವಾಗಿ ಅವರು ಮಾಹಿತಿ ನೀಡಿದರು.

ಈ ಹೂವಿಗೆ ಕಟ್ಟೆ ಬರುವ ಕುರಿತು, ಕೊಟ್ಟಿಗೆಯಲ್ಲಿ ಬಳಸುವ ಕುರಿತು ಅವರು ಮಾತನಾಡಿದರು. ಹುತ್ತರಿ ,ಮಂದ್, ಕೋಲಾಟ, ಒಕ್ಕ.. ಹೀಗೆ ಮಾತನಾಡುತ್ತಾ ದಾರಿ ಸಾಗಿದ್ದೇ ತಿಳಿಯಲಿಲ್ಲ .

'ಮನೆ ತೋರಿಸುತ್ತೇನೆ' ಎಂದು ದೂರದಲ್ಲಿ 'ಓ ಅಲ್ಲಿ ' ಎಂದು ಚಿಕ್ಕದರಲ್ಲಿ ನಾವು ಮನೆಯಾಟ ಆಡುತ್ತಿದ್ದೆವಲ್ಲಾ ಅಷ್ಟೇ ಕಿರಿದಾಗಿ ಕಾಣುತ್ತಿದ್ದ ಒಂದು ಮನೆಯ ಆಕೃತಿಯನ್ನು ತೋರಿಸಿದರು. ಮಂಜು 'ಆ' ಮಾಡಿ ಆ ಜಾಗವನ್ನು ನುಂಗಿಹಾಕುವ ಧಾವಂತದಲ್ಲಿತ್ತು.


ಎಲ್ಲಿಗೆ ಹೋಗಬೇಕೆಂಬ ಗುರಿಯಿಲ್ಲದೆ ಹೊರಟ ನನಗೆ ಇವರ ಬದುಕು ಮುಂದೆ ಸಾಗಲಿರುವ ಹಾದಿಗೆ ಸ್ಫೂರ್ತಿಯಾಯಿತು. ಹೊರಟೆ. ತುಸು ಮುಂದೆ ಹೋದರೆ ನೀಲಿ ನೀಲಿ. ಮಳೆಮಳೆಯಾಗಿ ಕಾಣುತ್ತಿದ್ದ ಹೂವುಗಳು!

ಹಾಗೆ ಎಲ್ಲೋ ಸಾಗಿ, 'ಮನುಷ್ಯರೇ ಇಲ್ಲದ ಈ ಜಗತ್ತು ಎಷ್ಟು ಚಂದ ಅಲ್ವಾ ಸತೀಶ' ಎಂದು ನನಗೇ ಕೇಳಿಸುವಂತೆ ಜೋರಾಗಿ ಕೇಳಿ ಒದ್ದೆಯಾದ ಮನಸ್ಸಲ್ಲಿ ಮನೆ ಸೇರಿದೆ. ಅದನ್ನು ಹಿಂಡಿ ಒಣಗಿಸಬೇಕೆಂಬ ಮನಸ್ಸಾಗಲಿಲ್ಲ!
*
2008, ಜನವರಿ 5. ಗೆಳೆಯ ಜಾನ್ ಸರ್ ಜೊತೆಗೆ ಬೆಳಿಗ್ಗೆ 6 ಗಂಟೆಗೆ ನಾವು ತಡಿಯಂಡಮೋಳ್ ಬೆಟ್ಟಕ್ಕೆ ಹೊರಟಿದ್ದೆವು. ಗಡಗಡ ಚಳಿ. ಕ್ಯಾಮರಾದ ರೀಲು ಮುಗಿದಿತ್ತು. ಮೊಬೈಲು ಇಲ್ಲ. ಗುಡ್ಡದ ತುದಿಗೆ 'ಎತ್ತಿದರೆ' ಒಂದು ಜಾತಿಯ ಗಿಡಗಳು ಬೆಟ್ಟಕ್ಕೆ ಬೇಲಿ ಹಾಕಿದ ಹಾಗೆ ಬೆಳೆದು ನಿಂತಿದ್ದವು. 'ಇವೇನು ಸರ್' ಕೇಳಿದ್ದೆ. 'ಇವೇ ಸಾರ್ ಕುರುಂಜಿ' ಎಂದಿದ್ದರು.
*

ಈ ವರ್ಷ ಮಾಂದಲ್ಪಟ್ಟಿ ,ತಡಿಯಂಡಮೋಳ್, ಪುಷ್ಪಗಿರಿ , ಕೋಟೆಬೆಟ್ಟ ಮುಂತಾದ ಕಡೆಗಳಲ್ಲಿ ಒಂದು ಜಾತಿಯ ಹೂವರಳಿದೆ. ಅದು ಆರೇಳು ವರ್ಷಗಳಿಗೊಮ್ಮೆ ಪೂರ್ಣವಾಗಿ ಅರಳುವ ಹೂವು. ಕೆಲವೊಮ್ಮೆ ಪ್ರತೀ ವರ್ಷ ಅಲ್ಲಲ್ಲಿ ಕಣ್ಣಿಗೆ ಬೀಳುವುದೂ ಉಂಟು. Strobilanthes sessilis ಎನ್ನುವ ಈ ಹೂವು ಮಾಳ ಕಾರ್ವಿ ಅಥವಾ ಟೋಪಲೀ ಕಾರ್ವಿ. ಪೂರ್ಣ ಅರಳಿದ ಮೇಲೆ 'ಕಟ್ಟೆ ' ಬಂದು ಗಿಡ ಒಣಗಿ ಬೀಜಗಳು ಮಣ್ಣಿಗೆ ಬಿದ್ದು, ಮಣ್ಣು ಪುಳಕಗೊಂಡು, ಅದನ್ನು ತನ್ನೊಳಗೆ ಜತನವಾಗಿ ಕಾಪಿಟ್ಟು, ಮತ್ತೆ ಅವಕ್ಕೆ ಹಸಿರು ಕೈಕಾಲುಗಳು ಮೊಳೆತು ಹೂವಾಗಬೇಕೆಂದರೆ ಎಷ್ಟೆಲ್ಲಾ ಸಂಕಟಗಳು (ತಾಯಂದಿರಿಗೇ ಗೊತ್ತು!). ಆಮೇಲೆ ಪಡ್ಡೆ ಹುಡುಗರು ಬಂದು ಹೂವಿನ ಪಕ್ಕ ನಿಂತು, ಮಲಗಿ, ಕುಣಿದು, ಎಣ್ಣೆ ಕುಡಿದು, ದಮ್ಮು ಹೊಡೆದು, 'ಲೋ ಮಚ್ಚಾ' ಎಂದು ಕಣ್ಣರಳಿಸಿ , ತುಟಿ ಉಬ್ಬಿಸಿ ಪಟ ತೆಗೆದುಕೊಳ್ಳುವುದನ್ನು ಆ ಹೂವುಗಳೇನಾದರೂ ನೋಡಿದರೆ ಮುಂದೆ ಅರಳುವುದನ್ನೇ ನಿಲ್ಲಿಸಿಬಿಟ್ಟಾವು!


ಇರಲಿ, ಅವು ಅರಳಿ ನಿಂತಿತೆಂದರೆ ನೀಲಿಬೆಟ್ಟ. ಬೆಟ್ಟಕ್ಕೆ ನೀಲಿ ಶಾಲುಹೊದಿಸಿ ಸನ್ಮಾನ ಮಾಡಿದ ಹಾಗೆ. ಮಾಧ್ಯಮಗಳು ಗೂಗಲಿಸಿ ಅದನ್ನು strobilanthes kunthiana ಎಂದು ನಂಬಿಸಿ ಅರಳಿನಿಂತ ಆ ಹೂವುಗಳಿಗಿಂತಲೂ ಖುಷಿಪಡುತ್ತಾರೆ. Youtuberಗಳ ಆಟ ನೋಡಬೇಕು!

ಚಿತ್ರ ಕೃಪೆ- ಶಶಿ, DRFO, ಪುಷ್ಪಗಿರಿ, 2018. (strobilanthes kunthiana)

ಆದರೆ 12 ವರ್ಷಗಳಿಗೊಮ್ಮೆ ಅರಳುವ ಕುರಿಂಜಿ 2018ರಲ್ಲಿ ಅರಳಿತ್ತು. ಇಷ್ಟು ಅಗಾಧವಾಗಿ ಅವು ಕಣ್ಣಿಗೆ ಬೀಳಲಿಲ್ಲ.

ಒಳ್ಳೆಯದೇ ಆಯಿತು!
*


ಕಾಜೂರು ಸತೀಶ್

Thursday, July 1, 2021

ಮಚ್ಚಾಡೋ ಸರ್

ಅಕ್ಟೋಬರ್ 10,2003. ಮೊದಲ ದಿನದ ತರಗತಿ. ಭಾಗ್ಯಲಕ್ಷ್ಮಿ ಮೇಡಂ ನಮ್ಮನ್ನು ಸ್ವಾಗತಿಸಿ ಹಿರಿಯ ಉಪನ್ಯಾಸಕರೊಬ್ಬರಿಗೆ ಮಾತನಾಡಲು ತಿಳಿಸಿದರು. ಎದ್ದು ನಿಂತು ಮಾತನಾಡತೊಡಗಿದ ಅವರು- " ವಿದ್ಯಾರ್ಥಿಗಳಾದವರು ಶಿಕ್ಷಕರ ಒಳಗಿರುವ ಜ್ಞಾನದ ಖಜಾನೆಯನ್ನು ತೆರೆಸಬೇಕು. ಅವರ ಜ್ಞಾನ ಹೊರಬರಬೇಕೆಂದರೆ ನಿಮ್ಮ ತೊಡಗಿಸಿಕೊಳ್ಳುವಿಕೆ ಅಷ್ಟು ಮುಖ್ಯವಾಗುತ್ತದೆ" ಎಂದರು. ಆ ದಿನ ಸ್ವಾಗತ ಮಾಡಿದ ಸೌಮ್ಯ ಶೆಟ್ಟಿ, ವಂದನೆಗಳನ್ನು ಅರ್ಪಿಸಿದ ಜಾನ್ ಪಾವ್ಲ್ ಡಿಸೋಜ ಅವರಿಂದ ಕೇಳಿಸಿಕೊಂಡ ಆ ಹೆಸರು- ಪೆರಿಗ್ರಿನ್ ಎಸ್ ಮಚ್ಚಾಡೋ.
*
ಕೂಡಿಗೆಯಲ್ಲಿದ್ದರು. ನಿತ್ಯ ಬ್ಯಾಗು ನೇತುಹಾಕಿಕೊಂಡು ನಡೆದುಬರುತ್ತಿದ್ದಾಗ ನಾನು ಸಿಗುತ್ತಿದ್ದೆ. 'ನಮಸ್ತೆ ಸರ್'- ಅಷ್ಟೆ. (ಎಷ್ಟೋ ಸಲ ಅವರ ct100 ಬೈಕಿನಲ್ಲಿ)


ಒಮ್ಮೆ 'ಯೌವನ' ಪದದ ಮೊದಲ ಅಕ್ಷರದ ಔತ್ವವನ್ನು ಕೆಳಗೆ ಇಳಿಸಿದ್ದೆ. 'ಏನಿದು' ಎಂದು ಗದರಿಸಿದರು. 'ಯೌವನ' ಎಂದೆ. 'ಅದು ಯೌವನ ಅಲ್ಲ ಯಾವನ' ಎಂದರು. ಔತ್ವವನ್ನು ಕೆಳಗಿನವರೆಗೆ ಇಳಿಸಬಾರದೆಂದು ಅಂದು ಕಲಿತುಕೊಂಡೆ.
*
ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ, ಕ್ಷೇತ್ರಶಿಕ್ಷಣಾಧಿಕಾರಿ(ಪ್ರಭಾರ) ಹುದ್ದೆಯಲ್ಲಿದ್ದರು. ಘಟನೆಯೊಂದು ಅವರನ್ನು ಜಿಲ್ಲೆಯ ಗಡಿದಾಟಿಸಿತು. ಮಂಗಳೂರಿನ ಸಿಟಿಇನಲ್ಲಿದ್ದಾಗ ಮತ್ತೆ ಮೇಷ್ಟ್ರಾಗುವ ಭಾಗ್ಯ ಒದಗಿತು.

ಆಗ ಕೊಂಕಣಿಯಲ್ಲಿ MA ಮಾಡೋಣ ಎಂದು ಗೆಳೆಯನಿಗೆ ಹೇಳಿದರು. ಒಂದು ದೀರ್ಘಾವಧಿಯಲ್ಲಿ ತಪ್ಪಿಹೋಗಿದ್ದ ಅಧ್ಯಯನದಲ್ಲಿ ಜೀವಂತಿಕೆಯನ್ನು ಕಾಯ್ದುಕೊಂಡರು. ಅಲ್ಲಿದ್ದಾಗಲೇ ಶಿವಮೊಗ್ಗದ ಡಿಡಿಪಿಐ ಆಗುವ ಭಾಗ್ಯ ಒದಗಿತು. ಅಲ್ಲಿ , ಅವರ ಕಚೇರಿಗೆ ಹೊಸರೂಪವನ್ನು ನೀಡಿದರು(ನಮ್ಮ ಕಚೇರಿಗೆ ಬಂದಾಗ ಆ ವೀಡಿಯೊ ತೋರಿಸಿದ್ದರು). ಕೊಡಗಿಗೆ ಬಂದಾಗಲೂ ಮಡಿಕೇರಿಯ ಡಿಡಿಪಿಐ ಕಚೇರಿಗೆ ಕಲೆಯ ಚೆಲುವನ್ನು ಮೂಡಿಸಲು ಕಾರಣಕರ್ತರಾದರು.


ಯೋಜನೆಗಳನ್ನು ರೂಪಿಸಿ ವಿಶ್ಲೇಷಿಸುವುದರಲ್ಲಿ ಅವರು ಪ್ರವೀಣರು. ಶಿಸ್ತು , ಕೆಲಸವನ್ನು ತೆಗೆದುಕೊಳ್ಳುವ ಜಾಣ್ಮೆ, ಖಡಕ್ ಗುಣ, ಕೆಲಸ ಆಗದಿದ್ದಲ್ಲಿ ಸಿಡಿದೇಳುವ ಪ್ರವೃತ್ತಿ ,ಮರುಕ್ಷಣದಲ್ಲೇ ಶಾಂತರಾಗುವ ಗುಣ.. ಮಚ್ಚಾಡೋ ಸರ್ ಅವರದು. ಅವರ ಅಧೀನದಲ್ಲಿ ಬರುವ ಎಂತಹ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳುವಷ್ಟು ನಿಪುಣರು.

*
ನಿಮಿಷಕ್ಕೊಂದು ಮೊಬೈಲ್ ಕರೆ, whatsappನಲ್ಲಿ ನಿಮಿಷಕ್ಕೊಂದು ಬರುವ ಕೆಲಸಗಳ ಪಟ್ಟಿ- ಇವುಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಮಚ್ಚಾಡೋ ಸರ್ ಜೂನ್ 30ಕ್ಕೆ ನಿವೃತ್ತರಾಗಿದ್ದಾರೆ.

ಅವರಿದ್ದಾಗ ಏನೋ ಒಂದು ಅವ್ಯಕ್ತ ಧೈರ್ಯ ನಮಗೆ. ಅವರ ಹಾಗೆ ಕೆಲಸವನ್ನು ನಿಭಾಯಿಸುವ ವ್ಯಕ್ತಿ ಆ ಸ್ಥಾನಕ್ಕೆ ಬರುವುದು ಸಂದೇಹ. ಅನೇಕ ಕಹಿ ಅನುಭವಗಳ ನಡುವೆಯೂ ಈ ಜಿಲ್ಲೆಯನ್ನು ಪ್ರೀತಿಸಿದವರು ಅವರು.
*
ಬ್ಯಾಡ್ಮಿಂಟನ್ ,ವಾಲಿಬಾಲ್ ಕ್ರೀಡೆಗಳನ್ನು ಚೆನ್ನಾಗಿ ಆಡುತ್ತಿದ್ದರು. ಅವರೊಡನೆ ಆಟವಾಡುತ್ತಿದ್ದೆವು. ನಿವೃತ್ತಿಯ ಜೀವನದಲ್ಲಿ ಅವರ ಪ್ರವೃತ್ತಿಗಳನ್ನು ಮತ್ತೆ ರೂಢಿಸಿಕೊಂಡರೆ ಬದುಕು ಸುಖಕರವಾಗುತ್ತದೆ.

ಶುಭಾಶಯಗಳು ಸರ್.
*
ಕಾಜೂರು ಸತೀಶ್ 

Saturday, May 29, 2021

ಮೌಲ್ಯ , ಶಿಕ್ಷಣ, ಅಹಂ, ಕಾಮನ್ ಸೆನ್ಸ್ ಮತ್ತು ಭ್ರಷ್ಟಾಚಾರ

ನಾನು ಪ್ರತಿದಿನ ಸಂಚರಿಸುವ ರಸ್ತೆಯ ಮಧ್ಯಭಾಗದಲ್ಲಿ ಬಿಳಿಯ ಗೆರೆಯೊಂದನ್ನು ಎಳೆಯಲಾಗಿದೆ. ಹೋಗುವವರಿಗೆ ಬರುವವರಿಗೆ ಅದೊಂದು ಸೂಚನೆ; ಮುಟ್ಟಬಾರದೆಂಬ ಸೂಚನೆ; ಆಚೆ ದಾಟಬಾರದೆಂಬ ಸೂಚನೆ.

ನಿತ್ಯ ಎದುರಿಗೆ ವಾಹನಗಳಲ್ಲಿ ಬರುವ ಮಂದಿ ಆ ಗೆರೆಯನ್ನು ಮುಟ್ಟಿ, ದಾಟಿ ಇನ್ನೂ ಈಚೆಗೆ ಬರುತ್ತಾರೆ. ಅವರ ಲೆಕ್ಕ ಇಡುತ್ತೇನೆ. ನೋಡಿದರೆ, ಅವರಲ್ಲಿ white collar ಮಂದಿಯಂತೆ ಕಾಣುವ ಜನರೇ ಹೆಚ್ಚು. 

ನಮಗೆ ರಸ್ತೆಯಲ್ಲಿ ಜಾಗವಿಲ್ಲದಿದ್ದರೆ ಅವರಿಗೇನಂತೆ!
*

ರಸ್ತೆಯಲ್ಲಿ ಹೋಗುತ್ತಿರುತ್ತೇನೆ. ಹಿಂದಿಕ್ಕಿ ಹೋಗುವ ಬೆಲೆಬಾಳುವ (ಕೆಲವೊಮ್ಮೆ ಅಗ್ಗದ ) ಕಾರಿನ ಕಿಟಕಿಯಿಂದ ಪ್ಲಾಸ್ಟಿಕ್ ಬಾಟಲಿ/ತಿಂಡಿಪೊಟ್ಟಣ ರಸ್ತೆಗೆ ಬೀಳುತ್ತದೆ. ನನ್ನನ್ನು ಅವಮಾನಿಸುವ ಹಾಗೆ ರಸ್ತೆಯಲ್ಲೇ ಆ ಬಾಟಲಿ/ಪ್ಲಾಸ್ಟಿಕ್ಕುಗಳು ರಾಜಾರೋಷವಾಗಿ ಮಲಗಿಬಿಡುತ್ತವೆ.
*

ನಿನ್ನೆ ದಿನವೂ ನೋಡಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಾರು ನಿಲ್ಲಿಸಿದ ಬಿಳಿಯ ಅಂಗಿ ಧರಿಸಿದ ಆ ವ್ಯಕ್ತಿ ತನ್ನ ಬಲಗೈಯಲ್ಲಿ ಮೂಗನ್ನು ಹಿಡಿದು ಸೀಟಿ ಜನರು ನಡೆದಾಡುವ ರಸ್ತೆಬದಿಗೆ ಸಿಂಬಳದ ಪಾದಸ್ಪರ್ಶವಾಗುವ ಹಾಗೆ ಮಾಡಿ ಎರಡೂ ಕೈಗಳನ್ನು ಉಜ್ಜಿಕೊಳ್ಳುತ್ತಾ ಕಾರು ಹತ್ತಿ ಹೊರಟುಹೋದ.

ಅವನ ವೇಷಭೂಷಣದಿಂದ ಅವನು ಕನಿಷ್ಟ ಒಂದು ಪದವಿಯ ಒಡೆಯನಾದರೂ ಆಗಿರಬಹುದು ಎಂದುಕೊಂಡೆ.
*

ಇದನ್ನು ಓದುತ್ತಿರುವ ಹಲವರು ಅಂದುಕೊಳ್ಳುತ್ತಿರುತ್ತಾರೆ: 'ಅವರು ಏನಾದರೂ ಮಾಡಿಕೊಳ್ಳಲಿ. ಇವನಿಗೇನು? ಅದು ಅವರವರ ಸ್ವಾತಂತ್ರ್ಯ.. ಇವನಿಗೇನು ನಷ್ಟ?!'

ಹಾಗೆ ಓದುತ್ತಿರುವವರೆಲ್ಲರೂ ವಿದ್ಯಾವಂತರು. ಪಂಡಿತರು! ಹಲವರು ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು!
*

ಬಸ್ ನಿಲ್ದಾಣದ ಪಕ್ಕದ ಅಂಗಡಿಯವನಿಗೆ - 'ವ್ಯಾಪಾರ ಹೇಗೋ ಆಗುತ್ತದೆ, ಆದರೆ ಕಸ ಬಾಚೋರ್ಯಾರು?' ಎಂಬ ಚಿಂತೆ. ಅಷ್ಟಕ್ಕೂ ಅಲ್ಲಿ ಕಸ ಹಾಕುವವರು ಪ್ರತಿಷ್ಠಿತ ಎನಿಸಿಕೊಂಡ ಸಂಸ್ಥೆಗಳಲ್ಲಿ ಓದುತ್ತಿರುವ ಶಾಲಾ-ಕಾಲೇಜು ವಿದ್ಯಾರ್ಥಿಗಳು!

*
ಹತ್ತು ಗಂಟೆಗೆ ಸಭೆ/ ಕಾರ್ಯಕ್ರಮ ಎಂದು ಸಮಯ ನೀಡಲಾಗಿರುತ್ತದೆ. ಆಯೋಜಕ/ಕಿ ಶಿಸ್ತಿನ ವ್ಯಕ್ತಿಯಾಗಿದ್ದು ಮೊದಲೇ ಸಿದ್ಧನಾಗಿದ್ದಾನೆ/ಳೆ ಎಂದುಕೊಂಡರೆ, ಭಾಗಿಯಾಗಬೇಕಾದವರು ಆ ಹೊತ್ತಿಗೆ ಇನ್ನೂ ತಲೆಯೇ ಬಾಚಿರುವುದಿಲ್ಲ. ಕೆಲವರು ಹಾಸಿಗೆಯಿಂದ ಎದ್ದೇ ಇರುವುದಿಲ್ಲ. ಅಥವಾ ಇವರಲ್ಲನೇಕರು ಸರಿಯಾದ ಸಮಯಕ್ಕೆ ಬಂದು ಹಾಜರಿದ್ದರೂ, ಆಯೋಜಕನ ನಿದ್ದೆ ಬಿಟ್ಟೇ ಇರುವುದಿಲ್ಲ!
*

ಗುಡ್ಡದ ಮೇಲೆ ಚಾರಣ ಹೋದಾಗ ನನ್ನ ಗೆಳೆಯ ಹೇಳುತ್ತಿರುತ್ತಾರೆ- 'ಮನುಷ್ಯರೇ ಇಲ್ಲದಿದ್ದರೆ ಈ ಪರಿಸರ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ? ಮನುಷ್ಯ ಇಲ್ಲದಿದ್ದರೂ ಇದು ಇದ್ದೇ ಇರುತ್ತದೆ , ಮನುಷ್ಯರನ್ನು ಅದು ಅವಲಂಬಿಸಿಲ್ಲ. ಆದರೆ ಅದು ಇಲ್ಲದೆ ಮನುಷ್ಯರಿರುವುದಿಲ್ಲ...'

'ಮತ್ತೆ ಇಷ್ಟು ಉಳಿದಿದೆ ಅಂದ್ರೆ ಅದಕ್ಕೆ ಅಮಾಯಕ, ಅನಕ್ಷರಸ್ಥರೇ ಕಾರಣ!'
*

ನೀತಿ ಹೇಳಿಕೊಡುವ ಗುರುಗಳಲ್ಲಿ/ಸಮಾಜದಲ್ಲಿ ಆ ನೀತಿಗಳ ಕೊರತೆಯನ್ನು ವಿದ್ಯಾರ್ಥಿಗಳು/ಕಿರಿಯರು ಕಂಡುಕೊಂಡಾಗ ಇಡೀ ಮೌಲ್ಯ ವ್ಯವಸ್ಥೆ ಬುಡಮೇಲಾಗುತ್ತದೆ. ಸರಿಯಾಗಿ ಓದಲು- ಬರೆಯಲು ತಿಳಿಯದ, ವಿದ್ಯಾರ್ಥಿಯ ಸಮಸ್ಯೆಗೆ ಪರಿಹಾರ ಸೂಚಿಸಲಾಗದ, ಅವರ ವೇಗದಲ್ಲಿ ಮುನ್ನುಗ್ಗಲಾಗದ ಗುರುಗಳಿದ್ದಾಗ 'ಮೌಲ್ಯ' ಎನ್ನುವುದು ಹೇಳುವುದಕ್ಕೆ ಮಾತ್ರ ಇರುವ ಸಂಗತಿಯಾಗುತ್ತದೆ.
*

' ನಮ್ಮ ಜನಕ್ಕೆ ಯಾಕೆ common sense ಇಲ್ಲ' ಎಂದರು ಗೆಳೆಯರೊಬ್ಬರು. ' ಭ್ರಷ್ಟಾಚಾರ ಸರ್' ಎಂದೆ!!
ತಲೆಬುಡ ಅರ್ಥವಾಗದವರಂತೆ ನೋಡಿದರು. ಎಳೆಎಳೆಯನ್ನೂ ವಿವರಿಸಿದೆ.

'ನಿಜ ಸರ್' 'ಛೆ' ಎಂದರು.
*


ಕಾಜೂರು ಸತೀಶ್

Sunday, May 9, 2021

ನಿವೃತ್ತಿ ಮತ್ತು ಸುಲಿಗೆ

ನಿವೃತ್ತಿ !

ಸಾಮಾನ್ಯವಾಗಿ ಸರ್ಕಾರಿ ನೌಕರರು ನಿವೃತ್ತಿ ಹೊಂದಿದಾಗ ಆ ದಿನ ಕೆಲವು ಗಣ್ಯವ್ಯಕ್ತಿಗಳು ಅವರ ಕೆಲಸದ ಸ್ಥಳಕ್ಕೆ ತೆರಳಿ ಕೊರಳಿಗೆ ಹಾರ ಹಾಕಿ ಶಾಲು ಹೊದಿಸಿ ಬಾಯಿ ತುಂಬಾ ಹೊಗಳಿ (ಅಟ್ಟಕ್ಕೇರಿಸಿ) ಪಟ ತೆಗೆಸಿಕೊಂಡು ಮಾರನೆಯ ದಿನ ಪತ್ರಿಕೆ/ಟಿವಿಯಲ್ಲಿ ಬರುವಂತೆ ಮಾಡುತ್ತಾರೆ.

'ಇಷ್ಟು ಕಾಲ ದುಡಿದದ್ದಾಯಿತು- ಇನ್ನು ಮನೆಯಲ್ಲಿ ಹಾಯಾಗಿರೋಣ' ಎಂಬ ಕನಸು ಯಾರಿಗಿರುವುದಿಲ್ಲ ಹೇಳಿ? ಆದರೆ, ಹಾಗೆ ಮನೆಯಲ್ಲಿ ಇರಲು ಸಾಧ್ಯವೇ? ಪಿಂಚಣಿ ಬೇಡವೇ? ಮನೆಯಲ್ಲಿ ಸುಮ್ಮನೆ ಕುಳಿತರೆ ಅದು ಸಿಗುವುದೇ?

ಸನ್ಮಾನ ಮಾಡಿದ ಮಂದಿ ತಮ್ಮ ಪಟ/ವೀಡಿಯೊಗಳನ್ನು ಪತ್ರಿಕೆ/ದೃಶ್ಯ ಮಾಧ್ಯಮದಲ್ಲಿ ನೋಡಿ ಹಿರಿಹಿರಿ ಹಿಗ್ಗಿ ತಮ್ಮ ಬೆನ್ನುಗಳನ್ನು ಇತರರಿಗೆ ಕೇಳಿಸುವಷ್ಟು ಜೋರಾಗಿ ತಟ್ಟಿಕೊಳ್ಳುತ್ತಾರೆ.
ಅಂದ ಹಾಗೆ, ಮೊನ್ನೆ ಗೆಳೆಯರೊಬ್ಬರು ಕರೆಮಾಡಿ ಹೇಳುತ್ತಿದ್ದರು: 'ಸನ್ಮಾನ ಮಾಡ್ತಾರಲ್ವಾ.. ಹಾರ- ಶಾಲು-ಹಣ್ಣು.. ಇವೆಲ್ಲಾ ಅವ್ರ ಹತ್ರಾನೇ ಸುಲಿಗೆ ಮಾಡಿ ತಗೊಂಡಿರ್ತಾರೆ'!

ಕೆಲಸಕ್ಕೆ ಸೇರುವಾಗಲೇ ಸುಲಿಗೆ ಮಾಡುವ ಕಚೇರಿ, ನಿವೃತ್ತಿ ಹೊಂದಿದಾಗ ಮತ್ತೆ ಸುಲಿಗೆ ಮಾಡುತ್ತದೆ. ನಿವೃತ್ತಿ ಹೊಂದಿದ ದಿನ ಬಹುಪರಾಕ್ ಹೇಳಿದ ಮಂದಿಯೆಲ್ಲ ಲಂಚಕ್ಕೆ ಬೇಡಿಕೆಯಿಡುತ್ತಾರೆ. ಕೊಡದಿದ್ದರೆ ಪಿಂಚಣಿಯೇ ಇಲ್ಲ!

ಸೇವೆಯಲ್ಲಿರುವಾಗಲೇ ನಿಧನಹೊಂದಿದರೆ ಮುಗಿಯಿತು- ಕೆಲಸ ಬಯಸಿ ಬರುವ ಅವರ ಮಕ್ಕಳನ್ನು ಸುಲಿದು ನುಂಗಿ ನೀರುಕುಡಿಯುತ್ತಾರೆ.

ಹಾಗೆ ಕೆಲಸ ಪಡೆದುಕೊಂಡ ಮಕ್ಕಳೇ ಮತ್ತೊಂದಷ್ಟು ನಿವೃತ್ತರ, ಮರಣ ಹೊಂದಿದ ನೌಕರರ ಮಕ್ಕಳ ರಕ್ತ ಹೀರುತ್ತಾರೆ.

ಹಿಂಸೆ ಮುಂದುವರಿಯುತ್ತದೆ..
*




- ಕಾಜೂರು ಸತೀಶ್