ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, July 1, 2021

ಮಚ್ಚಾಡೋ ಸರ್

ಅಕ್ಟೋಬರ್ 10,2003. ಮೊದಲ ದಿನದ ತರಗತಿ. ಭಾಗ್ಯಲಕ್ಷ್ಮಿ ಮೇಡಂ ನಮ್ಮನ್ನು ಸ್ವಾಗತಿಸಿ ಹಿರಿಯ ಉಪನ್ಯಾಸಕರೊಬ್ಬರಿಗೆ ಮಾತನಾಡಲು ತಿಳಿಸಿದರು. ಎದ್ದು ನಿಂತು ಮಾತನಾಡತೊಡಗಿದ ಅವರು- " ವಿದ್ಯಾರ್ಥಿಗಳಾದವರು ಶಿಕ್ಷಕರ ಒಳಗಿರುವ ಜ್ಞಾನದ ಖಜಾನೆಯನ್ನು ತೆರೆಸಬೇಕು. ಅವರ ಜ್ಞಾನ ಹೊರಬರಬೇಕೆಂದರೆ ನಿಮ್ಮ ತೊಡಗಿಸಿಕೊಳ್ಳುವಿಕೆ ಅಷ್ಟು ಮುಖ್ಯವಾಗುತ್ತದೆ" ಎಂದರು. ಆ ದಿನ ಸ್ವಾಗತ ಮಾಡಿದ ಸೌಮ್ಯ ಶೆಟ್ಟಿ, ವಂದನೆಗಳನ್ನು ಅರ್ಪಿಸಿದ ಜಾನ್ ಪಾವ್ಲ್ ಡಿಸೋಜ ಅವರಿಂದ ಕೇಳಿಸಿಕೊಂಡ ಆ ಹೆಸರು- ಪೆರಿಗ್ರಿನ್ ಎಸ್ ಮಚ್ಚಾಡೋ.
*
ಕೂಡಿಗೆಯಲ್ಲಿದ್ದರು. ನಿತ್ಯ ಬ್ಯಾಗು ನೇತುಹಾಕಿಕೊಂಡು ನಡೆದುಬರುತ್ತಿದ್ದಾಗ ನಾನು ಸಿಗುತ್ತಿದ್ದೆ. 'ನಮಸ್ತೆ ಸರ್'- ಅಷ್ಟೆ. (ಎಷ್ಟೋ ಸಲ ಅವರ ct100 ಬೈಕಿನಲ್ಲಿ)


ಒಮ್ಮೆ 'ಯೌವನ' ಪದದ ಮೊದಲ ಅಕ್ಷರದ ಔತ್ವವನ್ನು ಕೆಳಗೆ ಇಳಿಸಿದ್ದೆ. 'ಏನಿದು' ಎಂದು ಗದರಿಸಿದರು. 'ಯೌವನ' ಎಂದೆ. 'ಅದು ಯೌವನ ಅಲ್ಲ ಯಾವನ' ಎಂದರು. ಔತ್ವವನ್ನು ಕೆಳಗಿನವರೆಗೆ ಇಳಿಸಬಾರದೆಂದು ಅಂದು ಕಲಿತುಕೊಂಡೆ.
*
ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ, ಕ್ಷೇತ್ರಶಿಕ್ಷಣಾಧಿಕಾರಿ(ಪ್ರಭಾರ) ಹುದ್ದೆಯಲ್ಲಿದ್ದರು. ಘಟನೆಯೊಂದು ಅವರನ್ನು ಜಿಲ್ಲೆಯ ಗಡಿದಾಟಿಸಿತು. ಮಂಗಳೂರಿನ ಸಿಟಿಇನಲ್ಲಿದ್ದಾಗ ಮತ್ತೆ ಮೇಷ್ಟ್ರಾಗುವ ಭಾಗ್ಯ ಒದಗಿತು.

ಆಗ ಕೊಂಕಣಿಯಲ್ಲಿ MA ಮಾಡೋಣ ಎಂದು ಗೆಳೆಯನಿಗೆ ಹೇಳಿದರು. ಒಂದು ದೀರ್ಘಾವಧಿಯಲ್ಲಿ ತಪ್ಪಿಹೋಗಿದ್ದ ಅಧ್ಯಯನದಲ್ಲಿ ಜೀವಂತಿಕೆಯನ್ನು ಕಾಯ್ದುಕೊಂಡರು. ಅಲ್ಲಿದ್ದಾಗಲೇ ಶಿವಮೊಗ್ಗದ ಡಿಡಿಪಿಐ ಆಗುವ ಭಾಗ್ಯ ಒದಗಿತು. ಅಲ್ಲಿ , ಅವರ ಕಚೇರಿಗೆ ಹೊಸರೂಪವನ್ನು ನೀಡಿದರು(ನಮ್ಮ ಕಚೇರಿಗೆ ಬಂದಾಗ ಆ ವೀಡಿಯೊ ತೋರಿಸಿದ್ದರು). ಕೊಡಗಿಗೆ ಬಂದಾಗಲೂ ಮಡಿಕೇರಿಯ ಡಿಡಿಪಿಐ ಕಚೇರಿಗೆ ಕಲೆಯ ಚೆಲುವನ್ನು ಮೂಡಿಸಲು ಕಾರಣಕರ್ತರಾದರು.


ಯೋಜನೆಗಳನ್ನು ರೂಪಿಸಿ ವಿಶ್ಲೇಷಿಸುವುದರಲ್ಲಿ ಅವರು ಪ್ರವೀಣರು. ಶಿಸ್ತು , ಕೆಲಸವನ್ನು ತೆಗೆದುಕೊಳ್ಳುವ ಜಾಣ್ಮೆ, ಖಡಕ್ ಗುಣ, ಕೆಲಸ ಆಗದಿದ್ದಲ್ಲಿ ಸಿಡಿದೇಳುವ ಪ್ರವೃತ್ತಿ ,ಮರುಕ್ಷಣದಲ್ಲೇ ಶಾಂತರಾಗುವ ಗುಣ.. ಮಚ್ಚಾಡೋ ಸರ್ ಅವರದು. ಅವರ ಅಧೀನದಲ್ಲಿ ಬರುವ ಎಂತಹ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳುವಷ್ಟು ನಿಪುಣರು.

*
ನಿಮಿಷಕ್ಕೊಂದು ಮೊಬೈಲ್ ಕರೆ, whatsappನಲ್ಲಿ ನಿಮಿಷಕ್ಕೊಂದು ಬರುವ ಕೆಲಸಗಳ ಪಟ್ಟಿ- ಇವುಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಮಚ್ಚಾಡೋ ಸರ್ ಜೂನ್ 30ಕ್ಕೆ ನಿವೃತ್ತರಾಗಿದ್ದಾರೆ.

ಅವರಿದ್ದಾಗ ಏನೋ ಒಂದು ಅವ್ಯಕ್ತ ಧೈರ್ಯ ನಮಗೆ. ಅವರ ಹಾಗೆ ಕೆಲಸವನ್ನು ನಿಭಾಯಿಸುವ ವ್ಯಕ್ತಿ ಆ ಸ್ಥಾನಕ್ಕೆ ಬರುವುದು ಸಂದೇಹ. ಅನೇಕ ಕಹಿ ಅನುಭವಗಳ ನಡುವೆಯೂ ಈ ಜಿಲ್ಲೆಯನ್ನು ಪ್ರೀತಿಸಿದವರು ಅವರು.
*
ಬ್ಯಾಡ್ಮಿಂಟನ್ ,ವಾಲಿಬಾಲ್ ಕ್ರೀಡೆಗಳನ್ನು ಚೆನ್ನಾಗಿ ಆಡುತ್ತಿದ್ದರು. ಅವರೊಡನೆ ಆಟವಾಡುತ್ತಿದ್ದೆವು. ನಿವೃತ್ತಿಯ ಜೀವನದಲ್ಲಿ ಅವರ ಪ್ರವೃತ್ತಿಗಳನ್ನು ಮತ್ತೆ ರೂಢಿಸಿಕೊಂಡರೆ ಬದುಕು ಸುಖಕರವಾಗುತ್ತದೆ.

ಶುಭಾಶಯಗಳು ಸರ್.
*
ಕಾಜೂರು ಸತೀಶ್ 

No comments:

Post a Comment