ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Showing posts with label ಪುಸ್ತಕ ಪರಿಚಯ. Show all posts
Showing posts with label ಪುಸ್ತಕ ಪರಿಚಯ. Show all posts

Tuesday, February 18, 2025

ಆರಿಹೋದ 'ಪ್ರಕಾಶ' ಮತ್ತು ಉಳಿಸಿಹೋದ ಬೆಳಕು - ಭಾಗ -1

ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು.

ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆಲ್ಲಿಹುದಿಕೇರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದ ರೋಹಿತ್ ಕೆ.ಮತ್ತೊಬ್ಬರು ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದ ಡಾ. ಪ್ರಕಾಶ್ ಬಿ.


ಆ ದಿನ ರೋಹಿತ್ ಸರ್ ಅವರು ಜಿ ಟಿ ನಾರಾಯಣರಾವ್ ಅವರ ಕುರಿತು ಮಾತನಾಡಿದರೆ ಪ್ರಕಾಶ್ ಸರ್ ಅವರು ಕಟ್ಟೀಮನಿ ಅವರ ಕುರಿತು ಮಾತನಾಡಿದ್ದರು.

 ಇವರಿಬ್ಬರಲ್ಲಿ ನನಗೆ ಮೊದಲು ಪರಿಚಿತರಾದವರು ರೋಹಿತ್ ಸರ್. ಕೊಡ್ಲಿಪೇಟೆಯಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ರೋಹಿತ್ ಸರ್, ಗೂಗಿಯ ಬಗ್ಗೆ ಪ್ರಸ್ತಾಪಿಸಿದಾಗ ಅವರ ಮಾತುಗಳಿಂದ ಪ್ರೇರಿತನಾಗಿ ಅವರನ್ನು ಮಾತನಾಡಿಸಿದ್ದೆ.

 ಆಮೇಲೆ 2013ರಲ್ಲಿ ಮಡಿಕೇರಿ ತಾಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ್ದೆ. 'ಸಾಹಿತ್ಯ ಸಮ್ಮೇಳನಗಳಲ್ಲಿ ಇಷ್ಟು ಡೀಪ್ ಆಗಿ ಮಾತನಾಡಬಾರದು' ಎಂದು ನನ್ನ ಮಾತುಗಳ ಕೊರತೆಯನ್ನು ಅವರು ಬೊಟ್ಟು ಮಾಡಿ ತೋರಿಸಿದ್ದರು. ನನಗದು ಸರಿ ಎನ್ನಿಸಿ ಅವರ ಮೇಲಿನ ಅಭಿಮಾನ ಹೆಚ್ಚಾಗಿತ್ತು.

 ರೋಹಿತ್ ಸರ್ ಅವರು ಈ ಜಿಲ್ಲೆಯನ್ನು ಬಿಟ್ಟು ಹಾಸನಕ್ಕೆ ತೆರಳಿದಾಗ ವಿದ್ವತ್ಪೂರ್ಣ ಮಾತುಗಳಿಗಾಗಿ ಉಳಿದವರು ಡಾ. ಪ್ರಕಾಶ್ ಸರ್. ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಗಳಲ್ಲಿ ಅವರ ಮಾತುಗಳನ್ನು ತಪ್ಪದೇ ಧ್ವನಿಮುದ್ರಿಸಿಕೊಳ್ಳುತ್ತಿದ್ದೆ.(ಕೇವಲ ಇಬ್ಬರ ಮಾತುಗಳನ್ನಷ್ಟೇ ಧ್ವನಿಮುದ್ರಿಸಿಕೊಳ್ಳುತ್ತಿದ್ದೆ-ಮತ್ತೊಬ್ಬರು ಬಾಲಸುಬ್ರಮಣ್ಯ ಕಂಜರ್ಪಣೆ). ಆದರೆ ಕಡೆಗೂ ಅವುಗಳನ್ನು ಉಳಿಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. 


 ಹಲವು ಗೋಷ್ಠಿಗಳಲ್ಲಿ ಪ್ರಕಾಶ್ ಸರ್ ಅವರೊಂದಿಗೆ ಭಾಗವಹಿಸಿದ್ದೆ. ನಟರಾಜು ಬೂದಾಳು ಸರ್ ಅವರ ಶೈಲಿಯಂತೆಯೇ ಅನಿಸುತ್ತಿದ್ದ ಅವರ ಮಾತುಗಳು ನನಗೆ ಬೆರಗಿನ ಹಾಗೆ ತೋರುತ್ತಿದ್ದವು. ಅವರು ತರುಣ ಡಿ ಆರ್ ರಂತೆ ಕಾಣಿಸುತ್ತಿದ್ದರು. 

ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕಥಾ ಕಮ್ಮಟದಲ್ಲಿ ಅವರ ಮಾತುಗಳನ್ನು ಜೀರ್ಣಿಸಿಕೊಳ್ಳಲು ಅಲ್ಲಿದ್ದ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿರಲಿಲ್ಲ. (ನನಗೇ ಅರ್ಥವಾಗಲಿಲ್ಲ ಎಂದು ಪಕ್ಕದಲ್ಲಿದ್ದ ಸಂಪನ್ಮೂಲ ವ್ಯಕ್ತಿಯೊಬ್ಬರು ಹೇಳಿದ್ದರು!). ಅಷ್ಟು ಆಳಕ್ಕಿಳಿದು ತಮ್ಮನ್ನು ತಾವು ಹುಡುಕುತ್ತಿದ್ದರು - ಕಳೆದುಕೊಳ್ಳುತ್ತಿದ್ದರು!


 ಪ್ರಕಾಶ್ ಸರ್ ಯಾವುದೇ ವಿಷಯದ ಆಳ-ಅಗಲಗಳನ್ನು ತಿಳಿದು ಮಾತನಾಡುವ ಪ್ರೌಢಿಮೆಯನ್ನು ಗಳಿಸಿಕೊಂಡಿದ್ದರು. ವಿಷಯವೊಂದರ ಋಣಾತ್ಮಕ ಆಯಾಮಗಳ ಬಗ್ಗೆ ಅವರು ಕಠೋರವಾಗಿ ಟೀಕಿಸುತ್ತಿರಲಿಲ್ಲ-ಮೌನವಾಗಿಬಿಡುತ್ತಿದ್ದರು. ವಿಶ್ವವಿದ್ಯಾನಿಲಯದ ವಿಚಾರಗೋಷ್ಠಿಯಲ್ಲಿ ನಾವಿಬ್ಬರು ಪ್ರತಿಕ್ರಿಯೆ ನೀಡಬೇಕಿತ್ತು. ಪ್ರಕಾಶ್ ಸರ್, ವಿಚಾರವನ್ನು ಮಂಡಿಸಿದವರ ತೀರಾ ತೆಳುವಾದ ಗ್ರಹಿಕೆಯನ್ನು ಮನಸಾರೆ ಖಂಡಿಸಿದರೂ ಎಲ್ಲೂ ಅದನ್ನು ಪ್ರಸ್ತಾಪಿಸದೆ ತಮ್ಮದೇ ಆದ ವಿಭಿನ್ನ ಒಳನೋಟಗಳನ್ನು ನೀಡಿದ್ದರು.


 ಪ್ರಕಾಶ್ ಸರ್ ಅವರು ಮೊಬೈಲ್ ಬಳಕೆಯಿಂದ ದೂರ ಉಳಿದಿದ್ದರು. ಏನಾದರೂ ಕಳಿಸುವುದಿದ್ದರೆ ಸ್ವಾಮಿ ಸರ್ ಅವರಿಗೆ ಕಳಿಸಿ ಎನ್ನುತ್ತಿದ್ದರು. ತೀರಾ ತಡವಾಗಿ ಫೇಸ್ಬುಕ್ಕಿಗೆ ಎಂಟ್ರಿ ಕೊಟ್ಟಿದ್ದರು. ಮಡಿಕೇರಿಗೆ ಬರುವಾಗಲೆಲ್ಲ ಮೊಹಿದ್ದೀನ್ ಸರ್, ಅವರ ಜೊತೆಯಾಗಿರುತ್ತಿದ್ದರು. ಕಣಿವೆಯ ಭಾರದ್ವಾಜ್ ಸರ್ ಅವರು, ಅವರ ವಿದ್ವತ್ ಶಕ್ತಿಗೆ ಬೆರಗಾಗಿದ್ದರು.

 2015ರ ಮಡಿಕೇರಿ ದಸರಾ ಕವಿಗೋಷ್ಠಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಕಾಶ್ ಸರ್ ಆಹ್ವಾನಿತರಾಗಿದ್ದರು. ಕುತೂಹಲದಿಂದ ಅವರ ಮಾತುಗಳನ್ನು ತುಂಬಿಕೊಂಡಿದ್ದೆ. ಆ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ನಾನು ವಹಿಸಿದ್ದೆ. ಪ್ರಕಾಶ್ ಸರ್ ಸ್ವಾಮಿ ಸರ್ ರವರೊಂದಿಗೆ ಆಗ ಆಗಮಿಸಿದ್ದರು. ಅವರಿಬ್ಬರೂ ಒಟ್ಟಿಗೆ ಕುಳಿತು ನನ್ನ ಭಾಷಣವನ್ನು ಕೇಳಿಸಿಕೊಳ್ಳುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟುವಂತಿದೆ.


 2017ರ ಕೊಡಗಿನ ಗೌರಮ್ಮ ಪುಸ್ತಕ ಬಹುಮಾನಕ್ಕೆ ನಾನು ಮತ್ತು ಅವರು ತೀರ್ಪುಗಾರರಾಗಿದ್ದೆವು(ಬಹುಮಾನ ವಿತರಣೆಯ ಸಂದರ್ಭದಲ್ಲಿ, ತೀರ್ಪುಗಾರರ ಅನಿಸಿಕೆ ಸಂದರ್ಭದಲ್ಲಿ ನನಗದು ತಿಳಿದದ್ದು ).ತೀರ್ಪುಗಾರರ ಅನಿಸಿಕೆಯ ಸಂದರ್ಭದಲ್ಲಿ ನಾವಿಬ್ಬರು ಮಾತನಾಡಿದ್ದೆವು. ಶಾಂತಿ ಅಪ್ಪಣ್ಣ ಅವರ ಕೃತಿಗೆ ಬಹುಮಾನ ಬಂದಿದ್ದನ್ನು ನಾವಿಬ್ಬರು ಸಂಭ್ರಮಿಸಿದ್ದೆವು.


ಆಮೇಲೆ ಪ್ರಕಾಶ್ ಸರ್ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿ ಕೊಣನೂರು ಸರ್ಕಾರಿ ಪದವಿ ಕಾಲೇಜಿಗೆ ತೆರಳಿದರು. ಆಗಲೂ 'ಇವರ ಜ್ಞಾನ ಭಂಡಾರದ ವಿಸ್ತಾರಕ್ಕೆ ಅದು ವೇದಿಕೆಯಲ್ಲ' ಎಂದು ಮನಸಾರೆ ಅಂದುಕೊಂಡಿದ್ದೆ. ಸಿಕ್ಕಾಗಲೆಲ್ಲ 'ನೀವೂ ಪರೀಕ್ಷೆ ಬರೆಯಬೇಕಿತ್ತು ಸತೀಶ್' ಎನ್ನುತ್ತಿದ್ದರು.

 ಪ್ರಕಾಶ್ ಸರ್ ಉಪನ್ಯಾಸಕ್ಕೆ ಬರುತ್ತಿದ್ದದ್ದು ಒಂದು ದೊಡ್ಡ ದಿನಚರಿಯನ್ನು ಕೈಯಲ್ಲಿ ಹಿಡಿದುಕೊಂಡು. ಅದರಲ್ಲಿ ಹಲವು ಉಪನ್ಯಾಸಗಳಿಗೆ ಮಾಡಿಕೊಂಡಿದ್ದ ಟಿಪ್ಪಣಿಗಳಿದ್ದವು. ಯಾವುದೇ ಉಪನ್ಯಾಸಕ್ಕೆ ಅವರು ಅದನ್ನು ತರುತ್ತಿದ್ದರು. ಉಪನ್ಯಾಸಕ್ಕೂ ಮುನ್ನ ಒಂದು ಸಿಗರೇಟ್ ಹಚ್ಚಿಬರುತ್ತಿದ್ದರು. 

 ಆ ದಿನ ಭಾರದ್ವಾಜ್ ಸರ್ ಅವರು ಕರೆ ಮಾಡಿ 'ಪ್ರಕಾಶ್ ಹೋಗ್ಬಿಟ್ರು' ಎಂದಾಗ 'ಯಾವ ಪ್ರಕಾಶ್?' ಎಂದು ಕೇಳಿದ್ದೆ. ಎಂಥಾ ಮೇರು ಪ್ರತಿಭೆಯೊಂದರ ನಿರ್ಗಮನವಾಯಿತು ಎಂದು ನರಳಿದ್ದೆ!

ಪ್ರಕಾಶ್ ಸರ್ ನಮ್ಮನ್ನು ಅಗಲಿದ್ದು ತುಂಬಲಾರದ ನಷ್ಟ. ಕುಶಾಲನಗರದ ಪದವಿ ಕಾಲೇಜಿನಲ್ಲಿ ನಡೆದ ಸೆಮಿನಾರಿನಲ್ಲಿ ಮಾಡಿಕೊಂಡಿದ್ದ ವಿಡಿಯೋ ತುಣುಕಿನಲ್ಲಿ ಪ್ರಕಾಶ್ ಸರ್ ಅವರ ಆಗಮನದ ದೃಶ್ಯವೊಂದಿದೆ. ಒಮ್ಮೊಮ್ಮೆ ಅದನ್ನು ನೋಡಿಕೊಳ್ಳುತ್ತೇನೆ.
**


 'ಸೋಮಾರಿ ಪ್ರಕಾಶ' ಎಂದೇ ನೆನಪಿಸಿಕೊಳ್ಳುವ ಡಾ. ಸುಕನ್ಯಾ ಅವರು ತಮ್ಮ ಪತಿಯ ಬದುಕು ಬರೆಹ ಮತ್ತು ಭಾಷಣಗಳನ್ನು 'ನುಡಿ ಸಂಕಥನ'ದಲ್ಲಿ ದಾಖಲಿಸಿದ್ದಾರೆ. ಪ್ರಕಾಶರ ಕುರಿತ ಬರೆವಣಿಗೆಯು ಬೆಳೆದಂತಲ್ಲ ಹೆಣ್ಣೊಬ್ಬಳ ಬದುಕಿನ ಸಂಕಟಗಳನ್ನು, ಅವಳು ಮಾಡಬೇಕಾದ /ಮಾಡಿರುವ ತ್ಯಾಗವನ್ನು ಬಿಚ್ಚಿಡುತ್ತಾರೆ. ಕಣ್ಣುಗಳನ್ನು ತೋಯಿಸುತ್ತವೆ ಅವು. ಅತ್ಯಂತ ಪ್ರಾಮಾಣಿಕ ಅನಿಸಿಕೆಗಳವು. ತಮ್ಮ ಅಧ್ಯಯನದ ಮಿತಿಗಳನ್ನು ಒಪ್ಪಿಕೊಳ್ಳುತ್ತಲೇ ಎರಡನೆಯ ಗುರುವಾದ ಪತಿಯ ಏಳಿಗೆಯನ್ನು ಬಯಸಿದವರು ಸುಕನ್ಯಾ . ಅದಕ್ಕಾಗಿ ಪತಿಯ ಸಿದ್ಧಾಂತಗಳನ್ನು ತಾವೂ ಪಾಲಿಸಿದವರು. ತಮ್ಮ ಆದ್ಯತೆ/ ಅಧ್ಯಯನವನ್ನೆಲ್ಲ ಬದಿಗಿಟ್ಟು ಗಂಡನ, ಮಕ್ಕಳ ಆರೈಕೆಯಲ್ಲೇ ಸುಖವನ್ನು ಕಾಣುವ, ಪತಿಯ ಅಧ್ಯಯನಕ್ಕೆ ಸಮಯವನ್ನು ಕಲ್ಪಿಸಿಕೊಡುವ , ಖಾಸಗಿ ವಾಹನವಿಲ್ಲದೆ ಬದುಕುವುದನ್ನು ಕಲಿಯುವ ಮುಂತಾದ ಹಲವು ತ್ಯಾಗಗಳನ್ನು ಮಾಡಿದವರು ಡಾ.ಸುಕನ್ಯಾ ಮೇಡಂ.  

ಗಂಡನೊಂದಿಗಿನ ಪ್ರೀತಿ, ಮುನಿಸು, ರೇಗಿಸುವಿಕೆ ರಾಜಿಗಳೊಂದಿಗೆ ಆದರ್ಶ ಬದುಕನ್ನು ಕಟ್ಟಿಕೊಳ್ಳಲು ಹವಣಿಸುವ ಹೆಣ್ಣಿನ ದಿನಚರಿಯು ಕೃತಿಯ ಪೂರ್ವಾರ್ಧದಲ್ಲಿದೆ. 

 ಎಲ್ಲರೂ ಕಾರು-ಬೈಕಿನಲ್ಲಿ ಸಂಚರಿಸುವಾಗ ತಾವು ಸಾರ್ವಜನಿಕ ವಾಹನಕ್ಕಾಗಿ ಕಾಯುವ, ಹಣ-ಆಸ್ತಿಗಳ ಹಿಂದೆ ಬೀಳುವವರ ನಡುವೆ ಬಾಡಿಗೆಮನೆಯಲ್ಲಿ ಸುಖ ಕಾಣುವ ಸಂಸಾರ ಇವರದಾಗಿತ್ತು . ತಾವು ನಂಬಿದ ಸಿದ್ಧಾಂತದಂತೆ ಬದುಕಲು ಹೊರಟ ಪ್ರಕಾಶರನ್ನು ಅನುಸರಿಸಿಕೊಂಡು ಹೋದವರು ಸುಕನ್ಯಾ. ಮದುವೆ ಮತ್ತಿತರ ಲೌಕಿಕ ಸಂಗತಿಗಳಿಂದ ವಿಮುಖರಾಗಿದ್ದ ಪ್ರಕಾಶರನ್ನು ಸೆಳೆದದ್ದು ಸುಕನ್ಯಾ ಅವರ ಪ್ರೀತಿ ಮತ್ತು ತ್ಯಾಗ . ಅದು ಇಷ್ಟು ಬೇಗ ಮುಗಿಯುತ್ತದೆ ಎನ್ನುವುದೇ ದುಃಖಕರ ಸಂಗತಿ.  

ವೈಚಾರಿಕವಾಗಿ ಪ್ರಕಾಶರಾಗಿದ್ದ ಪ್ರಕಾಶರ ಬದುಕನ್ನು ಪ್ರೊ. ರಹಮತ್ ತರೀಕೆರೆ, ಡಾ. ರಾಜಪ್ಪ ದಳವಾಯಿ ಅವರು ಬರೆದುಕೊಂಡಿದ್ದಾರೆ. ತಮ್ಮ ಶಿಷ್ಯನ ಅಧ್ಯಯನ, ಪ್ರೀತಿ, ಕಾಳಜಿಗಳ ಕುರಿತ ಅಪಾರ ಗೌರವ ಇವರಲ್ಲಿದೆ.

 ಡಾ. ಪ್ರಕಾಶ್ ಸರ್ ಬರೆದದ್ದು ತೀರಾ ಕಡಿಮೆ. ಪುಸ್ತಕಗಳಿಗೆ ಮುನ್ನುಡಿ/ ಬೆನ್ನುಡಿ/ಪ್ರತಿಕ್ರಿಯೆಯ ರೂಪದಲ್ಲಿ ಬರೆದ ಬರೆಹಗಳನ್ನು ಬಿಟ್ಟರೆ, ಅವರ ವಿದ್ವತ್ಪೂರ್ಣ ಭಾಷಣಗಳೆಲ್ಲ ರೆಕಾರ್ಡ್ ಆಗಲಿಲ್ಲ. ಆದರೆ ಅವರು ಮಾಡಿಟ್ಟ ಟಿಪ್ಪಣಿಗಳು ಇಲ್ಲಿ ಹಲವರಿಂದ ಬರೆಹ ರೂಪ ಪಡೆದುಕೊಂಡಿವೆ. ಭಾಗ ಎರಡರಲ್ಲಿ ಕಾಣಸಿಗುವ ಪ್ರಕಾಶರ ಬಹುಮುಖೀ ಅಧ್ಯಯನಗಳು, ಜೀವಪರ ಕಾಳಜಿಗಳು, ಶಿಸ್ತಿನ ಅಧ್ಯಯನಗಳು ನಮ್ಮನ್ನು ಗಾಢವಾಗಿ ತಟ್ಟುತ್ತವೆ. 
*
ಕಾಜೂರು ಸತೀಶ್ 

Wednesday, July 31, 2024

ನಶೆಯ ಲೇಖನಿಯಲ್ಲಿನ ಕವಿತೆಗಳು

ಮನದ ಬೇಗುದಿಗೆ
ಮುಲಾಮು ಹಚ್ಚಲು
ನನ್ನೀ ಲೇಖನಿಯೊಟ್ಟಿಗೆ ಹೊರಟಿರುವೆ

ಹೀಗೆ ತಮ್ಮ ಕವಿತೆಗಳ ಸ್ವರೂಪದ ಕುರಿತು ಹೇಳುತ್ತಾ ಸೌಮ್ಯ ಹೆಗ್ಗಡಹಳ್ಳಿ ಅವರು ಶ್ರಮಸಂಸ್ಕೃತಿಯ ಬೇರುಗಳನ್ನು ಅವ್ವ ಅಪ್ಪ ಆದಿಮ ಕೃಷಿಯ ರೂಪಕದೊಂದಿಗೆ ತಮ್ಮ ಕವಿತೆ ನಶೆಯ ಲೇಖನಿಯಲ್ಲಿ ನೋಡುತ್ತಾರೆ. ಶ್ರಮದ ಹಿಂದಿರುವ ಸಹಜ ಅಸಹಾಯಕತೆಗಷ್ಟೇ ಅದು ನಿಲ್ಲುವುದಿಲ್ಲ. ದುಃಖವನ್ನು ಹತಾಶೆಯನ್ನು ಮೀರುವ ಛಲವೂ  ಈ ಕವಿತೆಗಳಿಗಿವೆ.


ನಿಗಿ ಕೆಂಡಕೆ ನೀರಟ್ಟಿದಂತೆ
ಕಾವುತಾಗಿಸಿ ಬಿಡಲೊಲ್ಲಳು ಅವ್ವ
ಹಣೆಯಲ್ಲಿ ಬೆವರುಟ್ಟುವ ತನಕ
(ಮೀಯುವುದೆಂದರೆ ಚೈತನ್ಯಗಳ ಹುಟ್ಟು)

ಕುದಿಯೊಳಗಿನ ಬೆಂದಕ್ಕಿಯು
ಎಡೆಗೆ ಅನ್ನವಾಗಿ
ಹಸಿವ ತಣಿಯುವಾಗ
ಮನದ ಬೇಗುದಿಗೆ
ಕಣ್ಣೀರಾಗುವುದೇಕೆ?
ನಿನ್ನೊಳಗಿನ ಛಲದ ಚಿಗುರಿಗೆ
ಚುಮುಕಿಸಿದ ನೀರಾಗಲಿ ಬಿಡು
( ನಿನ್ನೊಳಗಿನ ನೀನು)

ಈ ಶ್ರಮಸಂಸ್ಕೃತಿಯ ಛಲ ಹಠತ್ತಾಗಿ ಕುಸಿಯುವುದು ಸಾವಿನ ಮೂಲಕ:

ಅಪ್ಪ ಅಜ್ಜನಾಗಿ ತಲೆಗೊಂದು ಪೇಟಕಟ್ಟಿ
ಕೋಲಿಡಿದು ನಮ್ಮೊಟ್ಟಿಗೆ ಸುತ್ತಿ ಬರುವೆನೆಂದು ಕನಸ ಕಂಡಿದ್ದೆ
ಕೋಲಿನ ಹಿಡಿಕೆ ಸವೆಯಲ್ಲಿಲ್ಲ ನೆರಿಗೆ ಹತ್ತಲಿಲ್ಲ ಬಟ್ಟೆ ಹೀಗೆಂದು ಮಾತಿಲ್ಲದೆ ಸಾಗಿಬಿಟ್ಟ ಅಪ್ಪ
(ಅಪ್ಪನೆಂಬ ಅನಂತ)

ಹೀಗೆ ಸಮಾಜವು ಹುಟ್ಟುವ ಅಸಮಾನತೆಯ ಫಲಿತವಾದ ಅಸಹಾಯಕತೆಯನ್ನು ದಾಟುವ ಅದಮ್ಯ ಛಲ ಮತ್ತೆ ಮತ್ತೆ ಆವರ ಕವಿತೆಗಳಲ್ಲಿ ಮರಳುತ್ತದೆ.

ಎಂಜಲೆಲೆಗೆ ಕೈಯಿಟ್ಟು
ಹಸಿವ ತಣಿವ ಕೈಗಳಿರುವಾಗ
ಮೃಷ್ಟಾನ್ನದ ಬಯಕೆ
ನನಗೇಕೆ?
(ಛಲ)

'ಅಕ್ಷರ'ವೆಂಬ ಬೆಳಕು ಇಂತಹ ಅಸಮಾನತೆಗಳನ್ನು ದೂರಮಾಡುತ್ತದೆ ಎಂಬ ನಿಲುವು ಕವಿಯದು.

ತಗ್ಗಿದ ತಲೆಯೊಳಗೆ
ಹೊಕ್ಕಿದ ವಿಚಾರಗಳು
ತಲೆಯೆತ್ತಿ ನಡೆಯಲೇಬೇಕು
ಅದೊಮ್ಮೆ
ಅಕ್ಷರವಾಗಿ ಪುಟಿದು
ಓದುವ ಕೈಗಳಿಗೆ
ತಾಗಲೇಬೇಕು
(ಓದು)

ಬಡತನ, ಶೋಷಣೆ, ಹಸಿವು, ಅಸಮಾನತೆಗಳ ಮೇಲಿನ ಕಾವ್ಯವಿದು; ನೆಲಮೂಲದ ಕಾವ್ಯವಿದು. ಅಕ್ಷಯ ಪಾತ್ರೆಯಂತಹ ಇಂತಹ ಆಶಯಗಳು ಎಲ್ಲ ಕಾಲದಲ್ಲೂ ಹುಟ್ಟುವಂತವುಗಳು. ಇನ್ನಷ್ಟೂ ತೀವ್ರವಾಗಿ ಹಾಗೂ ಸೂಕ್ಷ್ಮವಾಗಿ ಅವುಗಳನ್ನು ಹೇಳಿದರೆ ಈ ಕವಿತೆಗಳಿಗೆ ಹೆಚ್ಚು ಪರಿಣಾಮ ದಕ್ಕಬಲ್ಲದು.
*
ಕಾಜೂರು ಸತೀಶ್ 

Tuesday, January 16, 2024

ಪೋಸ್ಟಾಫೀಸಿನಲ್ಲಿ ಪ್ರಬಂಧಗಳ ಜಡ್ಜ್ಮೆಂಟ್

ಈಚೆಗೆ ಲಲಿತ ಪ್ರಬಂಧ ಕೃತಿಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಕೆಲವು ಲಲಿತ ಪ್ರಬಂಧಗಳನ್ನು ಓದಿದ ಅನಂತರ ಇವು ಆತ್ಮ ಚರಿತ್ರೆಯಾಗುತ್ತಿರುವುದರ ಬಗ್ಗೆ ಕಳವಳವೆನಿಸಿದ್ದಿದೆ. ತದ್ವಿರುದ್ಧವಾಗಿ , ರಹಮತ್ ತರೀಕೆರೆ ಅವರ ಬಿಡಿ ಪ್ರಬಂಧಗಳನ್ನು ಓದಿದಾಗಲೆಲ್ಲ ಪ್ರಬಂಧಗಳಿಗಿರುವ ಅಗಾಧ ಸಾಮರ್ಥ್ಯಗಳ ಬಗ್ಗೆ ಬೆರಗಾಗಿದ್ದೇನೆ.

ತಿಂಗಳುಗಳ ಹಿಂದೆ ಅಮರೇಶ ಗಿಣಿವಾರರು ತಮ್ಮ 'ಪೋಸ್ಟಾಫೀಸಿನಲಿ ಅಕ್ಕನ ಜಡ್ಜಮೆಂಟು' ಎಂಬ ಪ್ರಬಂಧಗಳ ಸಂಕಲನ ಕಳಿಸಿದ್ದರು. ಹಿಂಡುಕುಳ್ಳು (👈ಇಲ್ಲಿ ಕ್ಲಿಕ್ಕಿಸಿ) ಕಥಾ ಸಂಕಲನದ ಮೂಲಕ ಗಮನ ಸೆಳೆದಿದ್ದ ಗಿಣಿವಾರರ ಈ ಸಂಕಲನವನ್ನು ಓದಿ ಬೆರಗುಗೊಂಡೆ. ಅಂಚೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ಸಾಹಿತ್ಯದ ಅಕಡೆಮಿಕ್ ಜ್ಞಾನವನ್ನು ಗಳಿಸಿ ತಮ್ಮ ನೆಲದ(ಸಿಂಧನೂರು) ನುಡಿಯಲ್ಲಿ/ ನುಡಿಗಟ್ಟುಗಳಲ್ಲಿ ವಿವಿಧ ಆಕರಗಳೊಂದಿಗೆ ಮಂಡಿಸುತ್ತಾರೆ ಎಂದರೆ ಸಾಹಿತ್ಯವು ಅಷ್ಟರಮಟ್ಟಿಗೆ ಅವರನ್ನು ಸೆಳೆದಿದೆ/ಆವರಿಸಿದೆ ಎಂದರ್ಥ. ಪ್ರಬಂಧವನ್ನು ಅವರು ರಸಾಸ್ವಾದಕ್ಕೂ ರಿಸೋರ್ಸ್ ಆಗುವುದಕ್ಕೂ ಕಡೆದಿಟ್ಟಿದ್ದಾರೆ. ಕೇಂದ್ರ ಪ್ರಜ್ಞೆಯೊಂದನ್ನು ಅನುಭವದ- ಮಾಹಿತಿಯ ಮೂಸೆಯಲ್ಲಿ ಲಲಿತವಾಗಿ ಹೊಸೆಯುವ ಮೂಲಕ ಏಕಕಾಲದಲ್ಲಿ ಕೃತಿಕಾರನ ಭಾವ ಪ್ರಪಂಚಕ್ಕೂ ಜಗತ್ತಿನ ದರ್ಶನಕ್ಕೂ ಸೇತುವಾಗುವ ಹಾಗೆ ನೋಡಿಕೊಂಡಿದ್ದಾರೆ.




ಬಸಿರು ,ಹೆಂಡತಿ ,ಸಾವು, ಬಸ್ಸು, ಪೋಸ್ಟ್ ಆಫೀಸ್, ಬಾಲ್ಯ, ಊರು, ರೇಡಿಯೋ , ಜೀರಂಗಿ, ,ಅಂಗಾಂಗ, ಅಪಾನವಾಯು- ಇಂತಹ ಸಹಜ ಸಂಗತಿಗಳ ಮೇಲೆ ಪ್ರಬಂಧಗಳು ಹರಿದಿದ್ದರೂ, ಸಿದ್ಧ ಹಾದಿಯನ್ನು ಮುರಿದು, ಖಾಸಗಿಗೊಳ್ಳಬಹುದಾದ ಪ್ರಬಂಧವನ್ನು ಸಮುದಾಯದತ್ತ ಜಿಗಿಸಿ ಮಾನವೀಯಗೊಳಿಸುತ್ತಾರೆ. ತಾವು ಓದಿದ ಸಾಹಿತ್ಯ ಕೃತಿಗಳ/ವಸ್ತುಗಳ ಪ್ರಸ್ತಾಪ ಮಾಡುತ್ತಾರೆ.


ಅಂಗಗಳೇ ತಮ್ಮನ್ನು ತಾವು ಪರಿಚಯಿಸುವ/ನಿರೂಪಿಸುವ 'ಅಂಗಾಂಗಗಳ ನೆನೆದು' ಹೊಸ ಮಾದರಿಯ ಪ್ರಬಂಧ. ಅವರನ್ನು ತೀವ್ರವಾಗಿ ಕಾಡುವ 'ಸಾವು' (ಸಾವೆಂಬುದು ಸಾಯದ ನೆನಪು, ಸಾವಿಗೆ ಒಂದು ಪತ್ರ) 'ದೇಹಮೀಮಾಂಸೆ'( ಅಂಗಾಂಗಗಳ ನೆನೆದು, ಬಸಿರಾಯಣ) 'ಅಸ್ತಿತ್ವವಾದ'ದ ವಿವರಗಳು ಸಾಹಿತ್ಯ ಪರಂಪರೆಯ ಕೆಲವು ಟಿಪ್ಪಣಿಗಳೊಂದಿಗೆ ವ್ಯಕ್ತವಾಗಿವೆ(ಅನಂತಮೂರ್ತಿ, ಕಮೂ,ಕಾಫ್ಕ, ಗೂಗಿ, ಸಾರ್ತ್ರ, ಮಾರ್ಕ್ವೆಜ಼್...)


ಮುಗ್ಧ ಜನ ವಲಯದಲ್ಲಿ ಬೆರೆತುಹೋಗಿರುವ ಹಾಸ್ಯವನ್ನು ಅವರು ಹೆಕ್ಕುತ್ತಾರೆ. ಬಸಿರು, ಹೆಂಡತಿ ಮುಂತಾದವುಗಳ ಬಗ್ಗೆ ಹೇಳುವಾಗ 'ಪರ' ವಹಿಸುವುದಿಲ್ಲ. ಅಮರೇಶ ಗಿಣಿವಾರರಿಗೆ ಪ್ರಬಂಧದ ಓಘ ಮತ್ತು ಭಾಷಿಕ ಹಿಡಿತ ಎಷ್ಟರಮಟ್ಟಿಗೆ ಇದೆಯೆಂದರೆ, 'ಅಪಾನವಾಯು ಸಿಡಿದಾಗ' ಪ್ರಬಂಧದ ಆರಂಭವನ್ನೇ ಗಮನಿಸಿ:

ಈ ಪ್ರಬಂಧದ ತಲೆಬರಹ 'ಅಪಾನವಾಯು ಸಿಡಿದಾಗ' ಅಂತ ಬಳಸುವುದು ನನಗೆ ಸೂಕ್ತವೆನಿಸಿತು. 'ಹೂಸು ಬಿಟ್ಟಾಗ' ಅಂತ ಇಟ್ಟಿದ್ದರೆ ಓದುಗರಿಗೆ ಆರಂಭದಲ್ಲಿ ವಾಸನೆ ಹಿಡಿಸಿದಂತಾಗುತ್ತಿತ್ತು .ಅಪಾನ ವಾಯು ಎಂಬ ಶಬ್ದ ಸ್ವಲ್ಪ ನನ್ನ ಬಗ್ಗೆ ಗೌರವ ಉಳಿಸಿದೆ. ಬೇರೆ ಯಾವುದೇ ಮೂಲ ಕನ್ನಡ ಪದಗಳ ಬದಲಾಗಿ ಸಂಸ್ಕೃತ ಅಥವಾ ಪಾರಿಭಾಷಿಕ ಶಬ್ದ ಬಳಸುವುದರಿಂದ ಮೂಲ ಕನ್ನಡ ಪದಗಳ ಬಗ್ಗೆ ಕೀಳರಿಮೆ ಹುಟ್ಟುತ್ತದೆ ಎಂಬ ದಾಟಿಯಲ್ಲಿ ಕೀಲಾರ ನಾಗೇಗೌಡ ಇನ್ನಿತರರು ಜಾಲತಾಣದಲ್ಲಿ ಚರ್ಚೆಗಿಳಿದಿದ್ದರು...
*

ಕಾಜೂರು ಸತೀಶ್

Friday, October 13, 2023

ಸತ್ ಛಾಯಾ -ಕವನ ಸಂಕಲನದ ಕುರಿತು

ವಿಕ್ರಾಂತ್ ಕೇಳ್ಕರ್ ಅವರು ಸೃಜನಶೀಲ ಶಿಕ್ಷಕರು. ಮಾಹಿತಿ ತಂತ್ರಜ್ಞಾನದ ಹಲವು ಶಾಖೆಗಳನ್ನು ಸ್ಪರ್ಶಿಸಿದ ಅನುಭವವಿರುವವರು. ಆ ಕ್ಷೇತ್ರದಲ್ಲಿ ರಾಷ್ಟ್ರೀಯ ಪುರಸ್ಕಾರವನ್ನು ಪಡೆದವರು. ಫೋಟೋಗ್ರಫಿಯಲ್ಲೂ ಆಸಕ್ತಿಯನ್ನು ಹೊಂದಿರುವ ಅವರು ಹಲವಾರು ಸೊಗಸಾದ ಪಕ್ಷಿಗಳ ಚಿತ್ರಗಳನ್ನು ಕ್ಲಿಕಿಸಿದ್ದಾರೆ. ಇಂಗ್ಲಿಷ್ ಭಾಷಾ ಶಿಕ್ಷಕರಾಗಿ ತಂತ್ರಜ್ಞಾನವನ್ನು ಅನುಕೂಲಿಸುವಿಕೆಯ ಭಾಗವಾಗಿಸಿಕೊಂಡಿದ್ದಾರೆ.



ಹೀಗೆ ಸಕ್ರಿಯರಾಗಿರುವ ವಿಕ್ರಾಂತ್ ಕೇಳ್ಕರ್ ಅವರು ನಮ್ಮೆದುರಿಗೆ ಪ್ರತ್ಯಕ್ಷವಾಗಿದ್ದು ಸತ್ ಛಾಯಾ ಎಂಬ ಕವನ ಸಂಕಲನದೊಂದಿಗೆ. ಅದರೊಂದಿಗೆ ಅವರು ಕವಿತೆ ಬರೆಯುತ್ತಾರೆ ಎಂಬ ಸಂಗತಿಯೂ ನಮಗೆ ತಿಳಿಯಿತು! ಅವರು ಅದನ್ನು ಸಾಹಿತ್ಯ ಶಿಶುವಿನ ಗೀಚು ಸಾಹಿತ್ಯ ಎಂದು ಮುಖಪುಟದಲ್ಲೇ ಬರೆದುಕೊಂಡಿದ್ದಾರೆ. ಅಂತ್ಯಪ್ರಾಸವುಳ್ಳ ರಚನೆಗಳಿವು. ಅವರ ಕವಿತೆಗಳ ಮಾದರಿ ಹೀಗಿದೆ:
ಸಾಹಿತಿಯು ನಾನಲ್ಲ ಸಾಧುವೂ ಅಲ್ಲ
ಕವಿಯಂತೂ ನಾನಲ್ಲವೇ ಅಲ್ಲ
ಛಂದಾಲಂಕಾರಗಳು ಎನಗೆ ತಿಳಿದಿಲ್ಲ
ಆದರೂ ಗೀಚುವ ದಾಹ ತೀರಿಲ್ಲ

ಪ್ರತಿಕ್ರಿಯಾತ್ಮಕ ಮಾದರಿಯ ಕವಿತೆಗಳಿವು.ಈ ಕೃತಿಗೆ ತಾ.ಶ್ರೀ.ಗುರುರಾಜ್, ಸದಾಶಿವ ಸೊರಟೂರು ಮುಂತಾದ ಲೇಖಕರ ಅಮೂಲ್ಯವಾದ ಮುನ್ನುಡಿಗಳಿವೆ. ಕನ್ನಡದ/ಜಗತ್ತಿನ ಹಲವು ಕಾವ್ಯಧಾರೆಗಳಿಗೆ ಮುಖಾಮುಖಿಯಾಗುತ್ತಾ ವಿಕ್ರಾಂತ್ ಸರ್ ಅವರು ಹೆಚ್ಚು ಹೆಚ್ಚು ಬರೆಯುವಂತಾಗಲಿ.
ಅವರಿಗೆ ಶುಭಾಶಯಗಳು.

*


ಕಾಜೂರು ಸತೀಶ್

Sunday, August 20, 2023

ಹನಿಹನಿಗಳಲ್ಲಿ ಜೀವನದರ್ಶನ

'ಹನಿ ಹನಿ ಇಬ್ಬನಿ' ಲೀಲಾಕುಮಾರಿ ತೊಡಿಕಾನ ಅವರ ಹನಿಗವನಗಳ ಸಂಕಲನ. ಬದುಕಿನ ವಿವಿಧ ಕಾಲಘಟ್ಟಗಳಲ್ಲಿ ಬರೆದಿರುವ ಹನಿಗವನಗಳಿವು. ಹೀಗಿರುವುದರಿಂದ ಸಹಜವಾಗಿ ಅಭಿವ್ಯಕ್ತಿಯಲ್ಲಿ ಏಕರೂಪದ ಮಾದರಿಗಳಿಲ್ಲ. (ಏಕೆಂದರೆ ಪ್ರೌಢಶಾಲೆಯಲ್ಲಿದ್ದಾಗ, ಕಾಲೇಜಿನಲ್ಲಿದ್ದಾಗ ಬರೆದ ಹನಿಗಳೂ ಇಲ್ಲಿವೆ). ಒಟ್ಟು 213 ಹನಿಗವನಗಳಿರುವ ಸಂಕಲನವಿದು.


ಕೇವಲ ವರ್ಣನೆಗೆ ಸೀಮಿತಗೊಳ್ಳದ ಕವಿತೆಗಳಿವು. ಸಮಕಾಲಿನ ಸಮಾಜದ ವೈರುಧ್ಯಗಳ ಮೇಲೆ ಹನಿಗಳ ಕುಟುಕು ಇದೆ. ಯಾವುದೇ ಸೀಮಿತ ಸಿದ್ಧಾಂತಕ್ಕೆ ಕಟ್ಟು ಬೀಳದೆ ಆಯಾ ಕಾಲಘಟ್ಟದಲ್ಲಿ ಕವಿಯೋರ್ವ ಮುಖಾಮುಖಿಯಾಗುವ ಸಂಗತಿಗಳನ್ನೇ ಅವರು ಕವಿತೆಯಾಗಿಸಿದ್ದಾರೆ. ಕವಿತೆಯಾಗುವಿಕೆ/ಆಗದಿರುವಿಕೆಯ ಕುರಿತು ಅವರಿಗೆ ಸ್ಪಷ್ಟತೆ ಇದೆ.

155. ನನ್ನ ಕವಿತೆಗಳೇ
ನನ್ನ ವಿರುದ್ಧ
ದಂಗೆಯೆದ್ದಿವೆ.
ಗೀಚಿದ್ದಕ್ಕೆಲ್ಲ
ಕವಿತೆ ಎಂದು
ಹೆಸರಿಟ್ಟಿದ್ದಕ್ಕೆ..
ಕವಿ ಎಂದು ಬೀಗಿದ್ದಕ್ಕೆ.

191. ಪ್ರತಿ ಏಕಾಂತದ
ಮೌನದಲ್ಲೂ
ಹೃದಯಕ್ಕೊಂದೊಂದು
ಸುಖ ಪ್ರಸವ
ಬಿಳಿ ಹಾಳೆಯ ಮೇಲೆ.
ಮಲಗಿದ
ಕವಿತೆ ಮರಿ
ಕಣ್ಣುಮಿಟಿಕುಸುತ್ತಿದೆ.


26. ಅವರಿವರ ಮಾತುಗಳು
ಮೌನಗಳು 
ಚುಚ್ಚಿದಾಗಲೆಲ್ಲ ನೋವ ಸಹಿಸಿ
 ಸಹಿಸಲಾಗದೆ ನುಂಗಿ ನುಂಗಿ
 ನವಮಾಸ ತಡೆದು 
ತಡೆಯಲಾಗದೆ ಹಡೆದಿದ್ದೇನೆ 
ಕವಿತೆಗಳ.
ಇದೀಗ ನನ್ನ ಸುತ್ತ 
ಕವಿತೆಗಳದ್ದೇ ಅಳು
 ಕಿಲಕಿಲ ನಗು
 ಯಾರ ಮಾತು ಕೇಳದಷ್ಟು
 ಚುಚ್ಚೋ ಮೌನವ ಸೀಳುವಷ್ಟು
*


ಲೀಲಾವತಿ ಅವರ ಕವಿತೆಗಳಲ್ಲಿ ಹೆಣ್ಣಿನ ಸಂಕಥನಗಳು ಹೀಗಿವೆ:

9. ಅರಿಯದೆ ದುಡುಕಿದ
 ಸೀತೆಯಲ್ಲ ಇವಳು 
ಅಸಮಾನತೆಯ ಉರಿಯಲ್ಲಿ
 ತೆಪ್ಪಗಿರಲಾಗದೆ ಸಿಡಿದ
 ಒಗ್ಗರಣೆಯ ಸಾಸಿವೆ ಇವಳು.
 ಹೌದು, ಸಹನಾಮೂರ್ತಿ 
ಪಟ್ಟದೊಡತಿ 
ಪಟ್ಟ ತೊರೆದಿದ್ದಾಳೆ
 ನಡೆವ ಹಾದಿಯಲ್ಲಿ ಗೆರೆ 
ಮೂಡಿಸುವ ಛಲದಿ
 ಗೆರೆ ದಾಟಿದ್ದಾಳೆ.


13. ಅವಳು 
ಸುತ್ತಿಟ್ಟ ಚಾಪೆಯೊಳಗೆ 
ಮಡಿಚಿಟ್ಟ ಸುಕ್ಕು ಸುಕ್ಕಾದ
 ನೆನಪುಗಳನ್ನೇ
 ಪದೇ ಪದೇ ಮೆಲ್ಲುತ್ತಾ
 ನಾಳೆಯ ಕನಸಿಗೆ
 ಬಸುರಾದವಳು.


ಮನುಷ್ಯ, ಮನುಷ್ಯತ್ವದ ಹುಡುಕಾಟ ಹಲವು ಕವಿತೆಗಳಲ್ಲಿವೆ:

22. ದಾಹ ತೀರದ 
ಮನುಷ್ಯ 
ಮಣ್ಣನ್ನೇ ಬಗೆದು 
ಸಿಕ್ಕಿಸಿಕ್ಕಿದ್ದನ್ನು 
ದೋಚಿದ 
ಹಗೆ ಸಾಧಿಸಿದ ಮಣ್ಣು
 ತನ್ನೊಳಗೆ 
ಹೂತುಹಾಕಿತು!

129. ಎಲ್ಲರಿಗಿಂತ ಹೆಚ್ಚಾಗಿ
 ಬಿಡದೆ ಹುಚ್ಚಾಗಿ
 ನಮ್ಮನ್ನೇ ನಾವು 
ಪ್ರೀತಿಸುತ್ತೇವೆ 
ಉದಾಹರಣೆಗೆ ಗ್ರೂಪ್ ಫೋಟೋದಲ್ಲಿ 
ನಮ್ಮನ್ನೇ ಹುಡುಕುತ್ತೇವೆ

158.  ನಿನ್ನ ನೆನಪಿನ ಸುತ್ತ 
ಬೇಕಂತಲೇ 
ಮರೆವಿನ ಹುತ್ತ
 ಬೆಳೆಸಿಕೊಂಡಿದ್ದೆ.
ಅಲ್ಲೂ ಅಲ್ಲಲ್ಲಿ 
ಹರಿದಾಡಿದ ನೆನಪ
ಗೆದ್ದಲು ನಿನ್ನನ್ನೇ 
ನೆನಪಿಸಿದವು 
ಹುತ್ತ ಕೆಡವಿದ್ದೇನೆ!


190 ಹೃದಯ ಹೊಲವ 
ಉಳುಮೆ ಮಾಡಿ 
ನೆನಪ ಬೀಜ ಬಿತ್ತಿ ಅಲ್ಲಿ 
ಮೊಳೆವ ಬಾಲ್ಯದ ಚಿಗುರಿಗಾಗಿ 
ಕಾಯುತ್ತಿರುವೆನು 
ಮನದ ಬನದೊಳಲ್ಲಿ
 ನಿನ್ನ ಹುಡುಕುತ್ತಿರುವೆನು


ನಿಸರ್ಗದ ಬೆರಗು ಕಾವ್ಯವಾಗುವ ಬಗೆ ಹೀಗೆ:

55.
 ತಂತಿ ಮೇಲಣ
 ಇಬ್ಬನಿಯಲ್ಲಿ 
ಎಷ್ಟೊಂದು ಕನಸುಗಳು 
ಬಿದ್ದರೆ ನುಚ್ಚುನೂರು 
ಇದ್ದರೆ ಭಾಷ್ಪೀಕರಣ
 ಬೊಗಸೆ ಹಿಡಿದು
 ಕಾಪಿಟ್ಟರಷ್ಟೆ ಕನಸರಳುವುದು.

ತತ್ವ ಸಿದ್ಧಾಂತಗಳಿಗಿಂತ ಮಾನವೀಯತೆಯೇ ಮುಖ್ಯ ಎನ್ನುವ ಕವಿತೆಗಳು ಹೆಚ್ಚು ಜೀವ ಪರವಾಗಿ ಕಾಣಿಸುತ್ತವೆ:

101 ಕೆರಳಿಸಿದ್ದು ಅವರ 
ತತ್ವ ಸಿದ್ಧಾಂತಗಳು
 ಬಲಿಯಾಗಿದ್ದು 
ಅವರು
 ಸಿದ್ಧಾಂತಗಳು ಅಜರಾಮರ!


106 ಕಾಲದ ಗಾಳಿಯ
 ರಭಸವನ್ನೆದುರಿಸಿ 
ನೆಲ ಹಾಗೇ ಇದೆ 
ಮರ ಹಾಗೇ ಇದೆ
 ಬೇಲಿಯೂ ಇದೆ
 ಬೇಲಿ ಆ ಕಡೆ ಈ ಕಡೆ
 ಝಳಪಿಸಿದ ಕತ್ತಿಯೂ ಇದೆ
 ಸುರಿದ ರಕ್ತದ ಕುರುಹು ಇದೆ
 ಝಳಪಿಸಿದವರು ಮಾತ್ರ
 ಎಲ್ಲೂ ಕಾಣಲಿಲ್ಲ!

210 ಎಡಬಲ ನಿಂತವರ
 ಕೂಗಾಟ ಹಾರಾಟ
 ಅಬ್ಬರ ಆರ್ಭಟ
 ಧಿಕ್ಕಾರ ಮುಷ್ಕರ
 ಇದ್ದಕ್ಕಿದ್ದಂತೆ ಇಬ್ಬರನ್ನೂ 
 ಬಾಧಿಸಿದ್ದು ಮಾತ್ರ ಹಸಿವು
 ಉಂಡಿದ್ದು ಅನ್ನ 
ಹೊಟ್ಟೆ ತುಂಬಿದ ಮೇಲೆ 
ಮತ್ತೆ ಕೆಸರೆರಚಾಟ 
ಹೊಟ್ಟೆ ತುಂಬಿಸಿದವನು ಮಾತ್ರ
 ಇನ್ನೂ ಕೆಸರಲ್ಲೇ ಇದ್ದ 
ತನ್ನ ಎಡಬಲ ಸುತ್ತಮುತ್ತ 
ಹಸಿರಾಗಿಸಲು!


'ಹನಿ ಹನಿ ಇಬ್ಬನಿ'ಯಲ್ಲಿ ಶಬ್ದದ ಅಬ್ಬರವಿಲ್ಲ. ಹನಿಗವನಗಳು ಕೇವಲ ಶಬ್ದ ಚಮತ್ಕಾರವಲ್ಲ ಎಂಬ ಅರಿವು ಲೀಲಾಕುಮಾರಿ ತೊಡಿಕಾನ ಅವರಿಗಿರುವುದು ಸಂತೋಷದ ಸಂಗತಿ. (ಆದರೆ ಭಾಷೆ ಮತ್ತು ಭಾವಗಳನ್ನು ಇನ್ನಷ್ಟೂ ಘನೀಕರಿಸಿ ಹೇಳಿದರೆ ಹೆಚ್ಚು ಅರ್ಥ ಮತ್ತು ಧ್ವನಿಯನ್ನು ಪಡೆದುಕೊಳ್ಳುತ್ತವೆ).  ಕೃತಿಯ ಮುನ್ನುಡಿ ಬರೆದ ಅವರ ಅವರ ಗುರುಗಳಾದ ಎಂ ಶಿವಣ್ಣ ನೆಲಮನೆ ಅವರು ಈ ಕೃತಿ ಬಿಡುಗಡೆಯಾಗುವ ಹೊತ್ತಿನಲ್ಲಿ ಬದುಕುಳಿದಿರಲಿಲ್ಲ ಎನ್ನುವುದು ದುಃಖದ ಸಂಗತಿ.
*
ಕಾಜೂರು ಸತೀಶ್ 

Monday, July 24, 2023

ಪಾಪಪ್ರಜ್ಞೆ, ಪತನ ಮತ್ತು ವಿಮೋಚನೆ

ಪ್ರೇಮ್ ಸಾಗರ್ ಕಾರಕ್ಕಿ ಅವರು ಇಂಗ್ಲಿಷ್ ಸಾಹಿತ್ಯ ಅಧ್ಯಯನಕಾರರು. ವೃತ್ತಿಯಲ್ಲಿ ಆಂಗ್ಲ ಉಪನ್ಯಾಸಕರು. ಅವರ ಚಿಂತನಾಕ್ರಮದಲ್ಲಿ ಪೂರ್ವಗ್ರಹಗಳಿಂದ ಹೊರತಾದ ಅನನ್ಯ ನೋಟಗಳನ್ನು ಗಮನಿಸಬಹುದು. ವರ್ತಮಾನಕ್ಕೆ ಸ್ಪಂದಿಸುವಾಗ, ಅಥವಾ ಎಂತಹದ್ದೇ ಸಾಹಿತ್ಯಿಕ/ರಾಜಕೀಯ/ ಮಾನವಿಕ ವಿಷಯಗಳ ವಿಶ್ಲೇಷಣೆಯ ಸಂದರ್ಭದಲ್ಲಿ ಹೆಚ್ಚು ಖಚಿತವಾದ ನಿಲುವುಗಳನ್ನು ವ್ಯಕ್ತಪಡಿಸಬಲ್ಲವರು ಪ್ರೇಮ್ ಸಾಗರ್.


ಕಮೂವನ್ನು ಅವರು ಎಷ್ಟು ಆವಾಹಿಸಿಕೊಂಡಿದ್ದಾರೆ ಎನ್ನುವುದಕ್ಕೆ ಈ ಕೃತಿ ಸಾಕ್ಷಿ. ಕಮೂ ಬಂದು ಅವರ ಒಳಗೆ ಕುಳಿತು ಕತೆ ಹೇಳುತ್ತಿರುವಾಗಿನ ಧಾಟಿ ಅದು. ಅನುವಾದ ಮುಗಿದ ಮೇಲೆ 'ನಾನೊಂದು ಕಾದಂಬರಿ ಬರೆದು ಮುಗಿಸಿದೆ' ಎಂಬ ಭಾವ ಅವರಿಗೆ ಬಂದಿರುವಷ್ಟು 'ಒಳಗಿನಿಂದ' ಈ ಕೃತಿ ರಚನೆಯಾಗಿದೆ (ಒಂದು ದಶಕದ ಧ್ಯಾನದ ಫಲ !).
*
ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಆಲ್ಜೀರಿಯನ್ ಮೂಲದ ಫ್ರೆಂಚ್ ಬರಹಗಾರ ಆಲ್ಬರ್ಟ್ ಕಮೂ . ದಿ ಫಾಲ್ ಅವನ ಕೊನೆಯ ಕಾದಂಬರಿ. ಅವನ ಹಿಂದಿನ ಕಾದಂಬರಿಗಳಾದ 'ದಿ ಸ್ಟ್ರೇಂಜರ್' ಮತ್ತು 'ದ ಪ್ಲೇಗ್' ನಲ್ಲಿ ಕಂಡುಬರುವ ತಂತ್ರ 'ದಿ ಫಾಲ್' ನಲ್ಲಿಲ್ಲದಿದ್ದರೂ, ಆ ಕೃತಿಗಳಲ್ಲಿ ಇರುವಂತೆ ವೈಯಕ್ತಿಕ ಸ್ವಾತಂತ್ರ್ಯ, ಮಾನವ ಸಂಬಂಧಗಳು, ಪ್ರಾಮಾಣಿಕ ಜೀವನದ ಸ್ವರೂಪ, ಸತ್ಯ, ನ್ಯಾಯ ನಿರ್ಣಯ, ಸಾವು, ಅಸ್ತಿತ್ವದ ಆಲೋಚನೆಗಳಿವೆ. ಪಾಪಪ್ರಜ್ಞೆಯ ಹಲವು ನೆಲೆಗಳನ್ನು ಶೋಧಿಸುವ ಕೃತಿ ಇದು. ಬಯೋಗ್ರಫಿಕಲ್ ಚಹರೆಗಳೂ ಹೆಚ್ಚಿವೆ ಇಲ್ಲಿ.


ಇದೊಂದು ಸ್ವಗತಗಳ ಸರಣಿ. ಕಥಾನಾಯಕ ಜ್ಯೀನ್ ಬಾಪ್ಟಿಸ್ಟ್ ಕ್ಲೆಮೆನ್ಸ್ ಸ್ವಗತದ ಮೂಲಕ ತನ್ನ ಬದುಕನ್ನೂ ಸಮಾಜವನ್ನೂ ಮುಚ್ಚುಮರೆಯಿಲ್ಲದೆ ತೆರೆದು ತೋರಿಸುತ್ತಾನೆ. ಆತ ಮಾಜಿ ನ್ಯಾಯವಾದಿ. ಕಾದಂಬರಿಯು ಆಮ್ಸ್ಟರ್ಡಾಂನ ಮೆಕ್ಸಿಕೋ ಸಿಟಿ ಎಂಬ ಬಾರಿನಲ್ಲಿ ಫ್ರೆಂಚ್ ಅಪರಿಚಿತನೊಡನೆ ಬಾರಿನ ಡಚ್ ಮಾಲೀಕನ ಕುರಿತು ಹೇಳುವಲ್ಲಿ ತೆರೆದುಕೊಳ್ಳುತ್ತದೆ. ಇಡೀ ಕಾದಂಬರಿಯ ಏಕಮಾತ್ರ ಧ್ವನಿ ಕ್ಲೆಮೆನ್ಸ್ . ಕಾದಂಬರಿಯು ತೀರಾ ಸಹಜವಾದ ಸಂಗತಿಗಳನ್ನು ಮಾತಿಗೆ ತೆಗೆದುಕೊಂಡು ಮುಂದೆ ಗಂಭೀರವಾಗಿ ಫಿಲಾಸಾಫಿಕಲ್ ನೆಲೆಗಳನ್ನು ಮುಟ್ಟುತ್ತದೆ. ಅದು ಏರ್ಪಡುವುದು ಬಾರಿನಲ್ಲಿ ಮತ್ತು ಆಮ್ಸ್ಟರ್ಡಾಂನ ರಸ್ತೆಗಳಲ್ಲಿ. ಓದುಗರನ್ನು ಹಿಡಿದಿಡಲು ತಾನೇ ಸಹವರ್ತಿಯ ಪ್ರಶ್ನೆಗಳನ್ನು ಸೃಷ್ಟಿಸಿಕೊಂಡು ಅದಕ್ಕೆ ಪರಿಹಾರವನ್ನು ಹುಡುಕುತ್ತಾನೆ ಕ್ಲೆಮೆನ್ಸ್.


ಮೊದಮೊದಲ ಅವನ ವೈಯಕ್ತಿಕ ಜೀವನಾನುಭವಗಳು ಗೆಲುವಿನಿಂದಲೂ ಪ್ರಾಮಾಣಿಕತೆಯಿಂದಲೂ ಕೂಡಿದ್ದವು. ಆ ಸಂಭ್ರಮ ಅವನ ಮಾತುಗಳಲ್ಲೇ ಧ್ವನಿಸುತ್ತಿತ್ತು. ಅಸಹಾಯಕರಿಗೆ ವಿಧವೆಯರಿಗೆ ಮಾತ್ರ ನ್ಯಾಯದಾನ ಮಾಡುತ್ತಿದ್ದವನು. ಎಂದೂ ಭ್ರಷ್ಟನಾಗದೆ ದುಡಿಯುತ್ತಿದ್ದವನು ಕ್ಲೆಮೆನ್ಸ್ . ಲೋಕಚಿಂತನೆಯ ಹಿನ್ನೆಲೆಯಲ್ಲಿ ನ್ಯಾಯವಾದಿ ವೃತ್ತಿಗೆ ರಾಜೀನಾಮೆ ನೀಡಿದ ಮೇಲೆ ಅವನ ಬೆನ್ನುಬೀಳುವುದು ಪಾಪಪ್ರಜ್ಞೆ ಮತ್ತು ಅವನ ಹೆಸರಿನೊಂದಿಗೇ ಇರುವ ಪಶ್ಚಾತ್ತಾಪ.

ಮನುಷ್ಯನ ನೈತಿಕ ಪತನ ಮತ್ತು ಅದರಿಂದ ಪಾರಾಗಲು ನಡೆಸುವ ಹೋರಾಟವೇ 'The Fall'. ಆತ್ಮರತಿಯಲ್ಲಿ ಮುಳುಗಿಹೋದವನಿಗೆ ಉಳಿದುದೇನೂ ನೆನಪಾಗುವುದಿಲ್ಲ. ಮಾಡಿದ ಹಲವು ಹೆಣ್ಣುಗಳ ಸಂಪರ್ಕದ ನೆನಪಿರುವುದಿಲ್ಲ, ಸೇತುವೆಯ ಬಳಿ ನಿಂತುಕೊಂಡಿದ್ದ ಹೆಂಗಸು ಇವನು ಮುಂದೆ ಸಾಗುವಷ್ಟರಲ್ಲಿ ನದಿಗೆ ಬಿದ್ದು ಆರ್ತನಾದಗೈಯ್ದರೂ ಇವನಿಗೆ ಹಿಂತಿರುಗಿ ನೋಡಬೇಕೆನಿಸುವುದಿಲ್ಲ.


ಕೊನೆಗೆ ತನ್ನ ಪತನದ ಸುಳಿವುಗಳನ್ನು ಅರಿತ ಕ್ಲೆಮೆನ್ಸ್ ಬದುಕಿನ ನಿರರ್ಥಕತೆಯನ್ನು ಪ್ರಶ್ನಿಸಿದ. ಫ್ರಾನ್ಸ್ ತೊರೆದು ಆಮ್ಸ್ಟರ್ಡಾಂಗೆ ಬಂದರೂ ತನ್ನ ಪತನದ ನೆನಪುಗಳು ಅವನ ಬೆನ್ನುಹತ್ತಿದವು.
ತನ್ನ ತಪ್ಪುಗಳನ್ನು ಕ್ರಿಸ್ತನ ತಪ್ಪುಗಳೊಂದಿಗೆ ಸಮೀಕರಿಸಿ ಹಗುರಾಗಲು ಬಯಸಿದ  . ನಾಸ್ತಿಕನಾದ ಅವನು ತನ್ನನ್ನು ದೈವವು ಶಿಕ್ಷಿಸುವುದಿಲ್ಲ. ಶಿಕ್ಷಿಸುವುದೇನಿದ್ದರೂ ಮನುಷ್ಯರು ಮಾತ್ರ  ಎಂದು ನಂಬಿದ. ಮನುಷ್ಯನು ಮಾತ್ರ ತೀರ್ಪು ನೀಡಬಹುದು. ತೀರ್ಪು ನೀಡುವ ವ್ಯಕ್ತಿಯು ತಪ್ಪಿತಸ್ಥನಾದರೆ, ಅವನು ಅಪಹಾಸ್ಯಕ್ಕೆ ಒಳಗಾಗುತ್ತಾನೆ, ಕಪಟಿ ಎಂದು ನಿರ್ಣಯಿಸಲ್ಪಡುತ್ತಾನೆ. ಈ ಸಾಕ್ಷಾತ್ಕಾರಗಳಿಂದ ಕ್ಲೆಮೆನ್ಸ್  ಪರಿಹಾರವನ್ನು ಕಂಡುಕೊಂಡ: ಅವನು ತನ್ನ ಪಾಪಗಳನ್ನು ಇತರರಲ್ಲಿ ಹೇಳಿಕೊಂಡ, ಇದರಿಂದ ಅವನು ಎಲ್ಲರ ಮೇಲೆ ತೀರ್ಪು ನೀಡಲು ಸಾಧ್ಯವಾಗುತ್ತದೆ ಎಂದುಕೊಂಡ.


ಕಮೂವಿನ ಪತ್ರಕರ್ತನ ಭಾಷೆ ಮತ್ತು ನಿರೂಪಣೆ ಈ ಕೃತಿಯಲ್ಲೂ ಕಾಣಸಿಗುತ್ತದೆ. ಓದುಗನ ಓದಿನೊಂದಿಗೆ ಓಡುವ ಭಾಷೆಯದು. ಇಡೀ ಕೃತಿಯು ಸ್ವಗತದಿಂದ ಕೂಡಿರುವಾಗ ಏಕತಾನತೆ ನುಸುಳುವುದು ಸಹಜ. ಆದರೆ ಕಮೂವಿನ ಅಸ್ತಿತ್ವವಾದದ ಪ್ರಶ್ನೆಗಳು ಓದುಗನನ್ನು ಚಿಂತನೆಗೆ ಹಚ್ಚಿ ಏಕತಾನತೆಯಿಂದ ಹೊರತರುತ್ತದೆ(ಅದಕ್ಕೆ ಕಾರಕ್ಕಿಯವರ ಸಹಜ, ಸಲೀಸು ಅನುವಾದವೂ ಬೆಂಬಲ ನೀಡುತ್ತದೆ). ಕಮೂವಿಗೆ ನೊಬೆಲ್ ಬಂದಾಗ ಮಾಡಿದ ಭಾಷಣದ ಅನುವಾದವೂ ಈ ಕೃತಿಯಲ್ಲಿದೆ.

*
ಕಾಜೂರು ಸತೀಶ್ 

Tuesday, July 4, 2023

ಪತ್ರಿಕೋದ್ಯಮದ ಸಮಗ್ರ ಚಿತ್ರಣ - 'ಸೊಡರು'

'ಶಕ್ತಿ' ದಿನಪತ್ರಿಕೆಯ ಸಲಹಾ ಸಂಪಾದಕರಾದ ಬಿ ಜಿ ಅನಂತಶಯನ ಅವರ ಪತ್ರಿಕಾ ರಂಗದ ಅನುಭವ ಕಥನ 'ಸೊಡರು'. ಪತ್ರಿಕಾ ರಂಗದಲ್ಲಿ ಅವರಿಗೆ ನಾಲ್ಕೂವರೆ ದಶಕಗಳ ಅನುಭವ; ತಮ್ಮ ಹದಿನೇಳನೆಯ ವಯಸ್ಸಿಗೇ ಈ ಕ್ಷೇತ್ರವನ್ನು ಪ್ರವೇಶಿಸಿದವರು ಅನಂತಶಯನ ಸರ್. ಅದರೊಂದಿಗೆ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು. UNI, ವಿಜಯ ಟೈಮ್ಸ್, ಸ್ಟಾರ್ ಆಫ್ ಮೈಸೂರ್, ಟೈಮ್ಸ್ ಆಫ್ ಡೆಕ್ಕನ್ ಮುಂತಾದ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವಿರುವವರು.
ಈ ಸುದೀರ್ಘ ಅವಧಿಯ ಕೆಲವು ರೋಚಕ ಅನುಭವಗಳನ್ನು
'ಸೊಡರು' ಕೃತಿಯಲ್ಲಿ ಬೆಳಗಿದ್ದಾರೆ. ಪತ್ರಿಕಾ ಕ್ಷೇತ್ರಕ್ಕೆ ಬರುವವರಿಗೆ ಇದು ದಿಕ್ಸೂಚಿ .ಅದರಿಂದ ಹೊರತಾದವರಿಗೂ ರೋಚಕ ಅನುಭವಗಳ ಗುಚ್ಛ. ಯಾರು ಬೇಕಾದರೂ ಓದಿ ಅರ್ಥೈಸಿಕೊಳ್ಳಬಹುದಾದ ಕೃತಿ.


ಪತ್ರಕರ್ತನಿಗಿರಬೇಕಾದ ಮಾನಸಿಕ ದೂರ, ವಿಷಯ ಜ್ಞಾನ, ಬಹುಭಾಷಾ ಅರಿವು, ಪ್ರಾಮಾಣಿಕತೆ , ನಿಖರತೆ, ಧೈರ್ಯ ,ತಾಳ್ಮೆ , ಸ್ವಾಭಿಮಾನ ಮೊದಲಾದ ವಿಷಯಗಳ ಕುರಿತ ಅನುಭವ ಕಥನಗಳಿವು.

ಸ್ವತಃ ಅನುಭವಿಸಿದ ಜೀವ ಬೆದರಿಕೆಗಳು, ಪ್ರಾಣಾಪಾಯದಿಂದ ಪಾರಾಗಿ ಬಂದ ಅನುಭವ, ಪೊಲೀಸ್ ವಿಚಾರಣೆ, ನ್ಯಾಯಾಲಯದಲ್ಲಿ ಹಾಜರಾದ ವಿವರಗಳು, ವರದಿಗಾಗಿ ಗಣ್ಯರ ಭೇಟಿಯ ಸಂದರ್ಭದ ಸ್ವಾರಸ್ಯಗಳು ಕೃತಿಯಲ್ಲಿವೆ. ಕನ್ನಡ ಪತ್ರಿಕಾ ಇತಿಹಾಸದ ಕುರಿತ ಸಣ್ಣ ಟಿಪ್ಪಣಿಗಳಿವೆ.
*
ಕಾಜೂರು ಸತೀಶ್

Wednesday, May 24, 2023

ರಾಜಕೀಯ ಮತ್ತು ಪ್ರಕೃತಿ


ಬಾಳೆಯಡ ಕಿಶನ್ ಪೂವಯ್ಯ ಅವರನ್ನು ಭೇಟಿ ಮಾಡಿಸಿದ್ದು ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ೮೦ನೆಯ ಸಾಹಿತ್ಯ ಸಮ್ಮೇಳನ.ಅವರು ಸ್ವಾಗತ ಸಮಿತಿಯ ಸಂಚಾಲಕರಾಗಿದ್ದಾಗ ಅದೇ ತಂಡದಲ್ಲಿ ನಾನು ಸಹ- ಸಂಚಾಲಕನಾಗಿದ್ದೆ. ಕಡಿಮೆ ಮಾತನಾಡುವ, ಶಿಸ್ತಿನ ವ್ಯಕ್ತಿ. ವಕೀಲ ಮತ್ತು ನೋಟರಿಯವರಾಗಿ, ಕ್ರೀಡಾಪಟುವಾಗಿ, ಅಂಕಣಕಾರರಾಗಿ, ರಾಜಕೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಸಂಘಟಕರಾಗಿ, ಕೃಷಿಕರಾಗಿ ತಮ್ಮನ್ನು ವಿಸ್ತರಿಸಿಕೊಂಡವರು ಬಾಳೆಯಡ ಕಿಶನ್ ಪೂವಯ್ಯ.


'ರಾಜಕೀಯ ಮತ್ತು ಪ್ರಕೃತಿ' ಕೃತಿಯಲ್ಲಿ ೨೭ ಲೇಖನಗಳಿವೆ. ಈ ಲೇಖನಗಳಿಗೆ 'ಕೊಡಗು' ಎಂಬ ಭೌಗೋಳಿಕ ಮತ್ತು ಸಾಂಸ್ಕೃತಿಕ ಆವರಣವಿದೆ. ಮಡಿಕೇರಿ ದಸರಾ, ಕಾವೇರಿ, ಕೊಡಗಿನ ರಾಜಕಾರಣ, ಕೊಡಗಿನ ಪ್ರವಾಸೋದ್ಯಮ, ಪ್ರಕೃತಿ ವಿನಾಶ- ಇವುಗಳನ್ನು ಕೊಡಗಿನ ನೆಲೆಯಲ್ಲಿ ವಿಶ್ಲೇಷಿಸಿದರೆ, ಜಾತಿ ರಾಜಕಾರಣ , ಪಕ್ಷಾಂತರ, ಮೌಲ್ಯಾಧಾರಿತ ರಾಜಕೀಯ , ಬೇಟೆ ಮತ್ತು ಕಾನೂನು ಮುಂತಾದವುಗಳನ್ನು ದೇಶಾತೀತವಾಗಿ ಹಿಡಿದಿಡುತ್ತಾರೆ.


ಈ ಲೇಖನಗಳೆಲ್ಲಾ ಹುಟ್ಟಿರುವುದು ಸಮ-ಸಖೀ-ಸಮಾಜದ ನಿರೀಕ್ಷೆಯಲ್ಲಿ. ಅದಕ್ಕಿರುವ ಅಡ್ಡಿಗಳಲ್ಲಿ ಮುಖ್ಯವಾದದ್ದು 'ರಾಜಕೀಯ'( ರಾಜಕೀಯ ಎಂದರೆ ಅಧಿಕಾರದ/ಪಕ್ಷಗಳ/ ಚುನಾವಣೆಗೆ ಸಂಬಂಧಿಸಿದ ಸಂಗತಿ ಮಾತ್ರ ಅಲ್ಲ; ಎಲ್ಲ ರಂಗಗಳಲ್ಲಿ ಸ್ವಾರ್ಥಪರ ಅಭಿವೃದ್ಧಿಗಾಗಿ ಮನುಷ್ಯ ತೋರುವ ಅಧಿಕಾರದ ದುರ್ಬಳಕೆಯೂ, ಕಪಟತನವೂ ರಾಜಕೀಯವೇ ಆಗುತ್ತದೆ). ಮತ್ತೊಂದು- ಪ್ರಕೃತಿ ಮತ್ತು ಸಂಸ್ಕೃತಿಯ ನಾಶ. ಮಡಿಕೇರಿ ದಸರಾ ಆಚರಣೆಯ ಮೇಲೆ ರಾಜಕೀಯ ಪ್ರವೇಶ, ಕಾವೇರಿ(ಧಾರ್ಮಿಕ ಮತ್ತು ಸಾಂಸ್ಕೃತಿಕ ಆಯಾಮದಲ್ಲಿ) ಮತ್ತು ಎರಡು ಜನಾಂಗಗಳ ಸ್ವಪ್ರತಿಷ್ಠೆ, ಕೊಡಗಿನ ಪರಿಸರದ ಮೇಲೆ ಪ್ರವಾಸೋದ್ಯಮದ ಪರಿಣಾಮ - ಈ ಬಗೆಯ ಪ್ರಧಾನ ಸಂಗತಿಗಳನ್ನು ಚರ್ಚೆಗೆ ಎತ್ತಿಕೊಳ್ಳುವುದು ಅವರಿಗಿರುವ ಪ್ರಗತಿಪರ ಚಿಂತನೆಗಳ ಬಲದಿಂದಲೇ; ಉತ್ತಮ ಪರಿಣಾಮದ ಹಂಬಲದಿಂದಲೇ. ಪ್ರತಿಕ್ರಿಯೆಯ ರೂಪದಲ್ಲಿಯೂ ಕೆಲವು ಲೇಖನಗಳು ಕಾಣಿಸುತ್ತವೆ.
ಕಿಶನ್ ಪೂವಯ್ಯ ಅವರ ಚಿಂತನೆಗಳು ಮತ್ತಷ್ಟೂ ಎಲ್ಲರನ್ನೂ ತಲುಪಲಿ ಎಂಬ ಆಶಯ ನನ್ನದು.
*
ಕಾಜೂರು ಸತೀಶ್ 



Thursday, April 27, 2023

ಮೌನದೊಡಲಿನ ಗಜ಼ಲ್

ಅಂಬವ್ವ ಪ್ರತಾಪ್ ಸಿಂಗ್ ಅವರು ಮೌನದೊಡಲ ಮಾತು(ಗಜ಼ಲ್) ಸಂಕಲನವನ್ನು ತಿಂಗಳ ಹಿಂದೆಯೇ ಕಳಿಸಿ ಅದು ತಲುಪಿರುವ/ ಓದಿರುವ ಸಂಗತಿಯನ್ನೇನೂ ವಿಚಾರಿಸದೆ ಕಾವ್ಯಧ್ಯಾನದಲ್ಲಿರುವಂತೆ ಮೌನವಾಗಿದ್ದಾರೆ. (ನನಗೆ ಅವರ ಪರಿಚಯವಿಲ್ಲ, ಬಹುಶಃ ಅವರಿಗೂ!)

ಅಂಬವ್ವ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನವರು, ಶಿಕ್ಷಕಿ. ಶಿಕ್ಷಕರೊಬ್ಬರು ಸೃಜನಶೀಲರಾಗಿದ್ದರೆ ಅವರಿಂದ ಹೊಮ್ಮುವ ಪ್ರಭಾವ/ ಪ್ರೇರಣೆಗಳು ವ್ಯಕ್ತಿ-ಕಾಲದೇಶಗಳನ್ನು ಸ್ಪರ್ಶಿಸಿ ಬೆಳೆಯುತ್ತದೆ. ಅದರಲ್ಲೂ, ಬರೆಯುವ ಪ್ರಕ್ರಿಯೆಯ ಹಿಂದೆ ಓದುವ, ಧ್ಯಾನಿಸುವ ಪ್ರಕ್ರಿಯೆ ಜೊತೆಯಾಗಿರುತ್ತದೆ. ಬೇರೆಯವರ ಮಾತು ಬಿಡಿ, ಮಕ್ಕಳೊಂದಿಗೆ ಒಡನಾಡುವ ಶಿಕ್ಷಕರಿಗೇ ಓದಿನ ಬಲವಿಲ್ಲದೆ ಇರುವ ಕಾಲದಲ್ಲಿರುವಾಗ ಅಂಬವ್ವ ಟೀಚರ್ ಅವರ ನಡೆ ಇಷ್ಟವಾಗುತ್ತದೆ.


ಅಂಬವ್ವ ಪ್ರತಾಪ್ ಸಿಂಗ್ ಅವರು ಈಗಾಗಲೇ ನಾಲ್ಕು ಕೃತಿಗಳನ್ನು ರಚಿಸಿದ್ದಾರೆ. ಮೌನದೊಡಲ ಮಾತು ಅವರ ಐದನೆಯ ಕೃತಿ. ಅರುವತ್ತು ಗಜ಼ಲ್ ಗಳ ಗುಚ್ಛ. ಗಜ಼ಲ್ - ಹೆಚ್ಚು ಚರ್ಚೆಗೆ ಒಳಪಡುವ ಮಾದರಿ. ಮೂಲ ಮಾದರಿ(ಪಾರ್ಸಿ, ಉರ್ದು), ಕನ್ನಡದ ಮಾದರಿ ಮತ್ತು ರೂಪಾಂತರದ ಮಾದರಿ- ಇವುಗಳ ನಡುವೆ ಯಾವುದು ಗಜ಼ಲ್ ಯಾವುದು ಅಲ್ಲ ಎನ್ನುವ ಜಿಜ್ಞಾಸೆ ಇದೆ(ಅದೇನೇ ಇದ್ದರೂ ಬರೆದ ಒಂದೆರಡು ಸಾಲುಗಳಲ್ಲೇ ಕಾವ್ಯಶಕ್ತಿಯನ್ನು ಗ್ರಹಿಸಬಹುದು).

ಅಂಬವ್ವ ಅವರು ತೀರಾ ಗಹನವಾದ ತಾತ್ತ್ವಿಕತೆಗೆ ಹೊರಳುವುದಿಲ್ಲ. ಸರಳ, ಸಹಜವಾದ ಮಾತುಗಳು ಅಲ್ಲಿವೆಯಾದರೂ ಯಾವುದಕ್ಕಾಗಿ ಅವರ ಮನಸ್ಸು ತುಡಿಯುತ್ತದೆ ಎನ್ನುವಲ್ಲಿ ಪ್ರಗತಿಪರವಾದ ಧೋರಣೆಗಳಿವೆ. 'ಅಂತರ್ಮುಖಿ' ಎಂಬ ಮಂಗಳಮುಖಿಯರ ಬಗೆಗಿನ ಕಥನಗಳನ್ನು ಪ್ರಕಟಿಸಿರುವಲ್ಲಿಯೇ ಈ ಧೋರಣೆ ವ್ಯಕ್ತವಾಗುತ್ತದೆ.

ಇಲ್ಲಿನ ಬಿಡಿ ಸಾಲುಗಳು ಅವರು ಮತ್ತಷ್ಟೂ ಒಳ್ಳೆಯ ಕಾವ್ಯವನ್ನು ಸೃಷ್ಟಿಸಬಲ್ಲರು ಎನ್ನುವುದಕ್ಕೆ ನಿದರ್ಶನ:

ನಿನ್ನ ಸ್ವಾಗತಕ್ಕಾಗಿ ನದಿಯು ಸಂಗೀತ ನುಡಿಸುತ್ತಿದೆ
ಅದಕ್ಕೆ ನನ್ನ ಹೃದಯದ ತಾಳವು ಮಿಳಿತಗೊಳ್ಳುತ್ತಿದೆ(ಗಜ಼ಲ್ -5)

ನಿನಗಾಗಿ ಗಾಳಿಯೂ ಖುಷಿಯಾಗಿ ಕೊಳಲನೂದುತ್ತಿದೆ
ಅದಕ್ಕೆ ನನ್ನ ಉಸಿರಾಟ ಜುಗಲ್ಬಂದಿಯಾಗುತ್ತಿದೆ(ಗಜ಼ಲ್ -5)

ರೈತನ ಕೊರಳು ನೇಣಿನ ಹಗ್ಗಕ್ಕೆ ಉರುಳುತ್ತಿದ್ದರೆ
ದಲ್ಲಾಳಿಗಳ ಕುತ್ತಿಗೆ ಚಿನ್ನದ ಭಾರಕ್ಕೆ ಮಣಿಯುತ್ತಿದೆ( ಗಜ಼ಲ್-7)

ಕೊನೆಗೊಮ್ಮೆ ನನ್ನ ಶವವನ್ನಾದರೂ ತೋರಿಸಿಬಿಡಿ
ವನಿತಾ ಹೇಗೆ ಕಾಣುವಳೆಂದು ನೋಡುವೆ ನಾನು( ಗಜ಼ಲ್ -14)

ಪ್ರೀತಿಸುವ ಜೋಡಿಯ ನೋಡಿ ಜಗವೇಕೆ ದ್ವೇಷ ಕಾರುತಿಹುದು
ಸಮಾಧಿಯ ಒಳಗೆ ಲೈಲಾ ಮಜುನೂ ಜೋಡಿ ರೋದಿಸುತ್ತಿದೆ(ಗಜ಼ಲ್ -36)

ಬಿಸಿಲು ಬೆಳದಿಂಗಳಾಗಿ ತಂಪು ಸೂಸುತ್ತಿದೆ ನಿನ್ನ ನೆರಳಿನಲ್ಲಿ
ಇರುಳ ಬೇಗೆ ಕಳೆಯುತ್ತಿದೆ ನಿನ್ನನು ಸೇರಿದ ಮೇಲೆ( ಗಜ಼ಲ್ -55)

ಹೀಗೆ ಅಂಬಮ್ಮ ಟೀಚರ್ ಅವರ ದೊಡ್ಡ ಆಶಯಗಳು ಇಷ್ಟವಾಗುತ್ತವೆ. ಅಂತೆಯೇ,ಇವು ಗಜ಼ಲ್ ಕುರಿತ ಹೆಚ್ಚಿನ ಅಧ್ಯಯನವನ್ನೂ, ಕಲಾತ್ಮಕತೆಯನ್ನೂ, ಮಾತಿನ ಮಿತಬಳಕೆಯನ್ನೂ ನಿರೀಕ್ಷಿಸುತ್ತವೆ. ಕೃತಿಯಲ್ಲಿ ಅಕ್ಷರದೋಷ ಇಲ್ಲದಿರುವುದು ತುಂಬಾ ಖುಷಿಯ ಸಂಗತಿ.
*

ಕಾಜೂರು ಸತೀಶ್


Sunday, April 23, 2023

ಬದುಕನ್ನೇ ಬಸಿದು ಬರೆದ ಕಾವ್ಯ



ತಮ್ಮ ಬದುಕನ್ನು ಬಸಿದು , ಅದರ ಹಸಿವಲ್ಲಿ, ಅವಮಾನದಲ್ಲಿ, ಅದು ಎದುರಿಗಿಟ್ಟ ಕತ್ತಲಲ್ಲಿ ಕಾವ್ಯಹೊಸೆದವರು ರಾಮಪ್ಪ ಕೋಟಿಹಾಳ. ಅವರ ಜಿರಾಫೆ ಕತ್ತಿನ ಅವ್ವ ಕೃತಿಗೆ ಈ ಬಾರಿಯ ಚಿ. ಶ್ರೀನಿವಾಸರಾಜು ಕಾವ್ಯ ಪುರಸ್ಕಾರ ಸಂದಿದೆ. ಓದುವವನ ಕರುಳನ್ನೇ ಕೊರೆಯುವ ಹಸಿವಿನ ಭಯಾನಕ ಚಿತ್ರಣ ಹಸಿಹಸಿಯಾಗಿವೆ ಇಲ್ಲಿ:

ಅನ್ನದ ಕನಸಿಗೆ
ಕಣ್ಣು ಕೊಟ್ಟ ಅಪ್ಪ
ಮನೆ ಮುಂದೆ ಜಮಾಯಿಸಿದ
ಜನರ
ತೀರ್ಪಿಗಾಗಿ ಕಾಯುವನು( ಅವ್ವನ ಸೂರ್ಯ)

ಹಸಿದಾಗ ಚಂದ್ರ ರೊಟ್ಟಿಯಾಗಿ
ಅಣಕಿಸುತ್ತಾನೆ
ಚುಕ್ಕಿಗಳು ಅನ್ನದ ಅಗುಳಾಗಿ
ಕೆಣಕುತ್ತವೆ (ಭೂಮಿ ಒಂದು ಕ್ಷಣ ನಿಂತುಬಿಟ್ಟರೆ..)

ಸೂರ್ಯ ಚಂದ್ರರನು ಹುರಿದು
ಸಾರುಮಾಡಿದ ಅವ್ವ
ಉಣ್ಣದೆ ಮಲಗುವಳು
( ಜಿರಾಫೆ ಕತ್ತಿನ ಅವ್ವ)

ಅವ್ವನ ಹರಿದ ಸೆರಗಿಗೆ ಅಂಟಿದ
ಅನ್ನದ ಅಗುಳು ಹಂಚಿತಿಂದ ನೆನಪು.
(ಮಣ್ಣ ಪರಿಮಳ)

ನನ್ನ ಗುಂಡಿಗೆ
ನಾಯಿಯಂತೆ ಒದರುತ್ತದೆ
ತುತ್ತ ನೆನೆದು
ಜೊಲ್ಲು ಸುರಿಸುತ್ತದೆ.
(ಗುಂಡಿಗೆ ನಾದ)


ಹೀಗೆ ಹಸಿವಿನ ಭೀಕರ ಸ್ಥಿತಿಯಲ್ಲಿರುವಾಗ ತಿನ್ನುವ ಆಹಾರವನ್ನೂ ನಿರ್ಧರಿಸುವ ಸಮಾಜ ಎದುರಾಗುತ್ತದೆ. ಇದು ನಿಷಿದ್ಧ ಎಂದು ಕಟ್ಟಪ್ಪಣೆ ವಿಧಿಸಿ ಅವರ ಮೇಲೆ ದಾಳಿಮಾಡುತ್ತದೆ:

ಮಾಂಸದ ಪರಿಮಳ ಕೇರಿಗೆ ಹರಡಿ
ಕತ್ತಲಲ್ಲೂ ಎದ್ದು ಬಂದವು..

ಕಡೆಗೆ 'ಅವರ' ಆಕ್ರಮಣದಿಂದ ತತ್ತರಿಸಿ-

ಅವ್ವ
ಕಣ್ಣಲ್ಲೇ ದೀಪ ಮೂಡಿಸಿದಳು
ಅಪ್ಪನ ಮೈತುಂಬ ಬೆತ್ತದೇಟು
ಬಾರಿನ ಗೆರೆಗುಂಟ ಹೆಪ್ಪುಗಟ್ಟಿದ ನೆತ್ತರು
ಅವ್ವ
ಕಣ್ಣೀರು ಕುಡಿದು ಮಲಗಿದಳು
(ಉಪ್ಪು ನೀರು)

ಸದ್ಯದ ಅಮಾನುಷ ವರ್ತನೆಯನ್ನು ಎದೆಕಲಕುವಂತೆ ಚಿತ್ರಿಸುತ್ತಾರೆ ರಾಮಪ್ಪ ಕೋಟಿಹಾಳ. ಎನ್ ಕೆ ಹನುಮಂತಯ್ಯ ಅವರ ಕಾವ್ಯದ ಮುಂದುವರಿಕೆಯಾಗಿ ಅವರ ಕವಿತೆಗಳು ಓದಿಸಿಕೊಳ್ಳುತ್ತವೆ. ಅವ್ವ,ಅಪ್ಪ, ಅಕ್ಕ, ತಮ್ಮ, ತಂಗಿ, ಪ್ರೇಯಸಿಯ ಸುತ್ತ ಹೆಣೆದ ಸಾಲುಗಳು ವೈಯಕ್ತಿಕತೆಯನ್ನು ಮೀರುವ ಗುಣವುಳ್ಳವುಗಳು. ನೋವಿನ ರಕ್ತದಲ್ಲದ್ದಿ ಹಾಳೆಗೆ ಅಂಟಿಸಿದ ಚಿತ್ರದಂತಿರುವ ಕವಿತೆಗಳು ಇವರವು.


ಅವರ ಕಾವ್ಯಪ್ರತಿಭೆಗೆ ಈ ಕವಿತೆಯೇ ಸಾಕ್ಷಿ

ಆ ಕೈಗಳು

ಆ ಕೈಗಳು
ತೆರೆದ ಅಂಗೈಗಳು

ಕಪ್ಪು ಬಣ್ಣದಲೆ ಅದ್ದಿದಂತವು
ಕಲ್ಲುಮುಳ್ಳುಗಳಲಿ ಸಿಕ್ಕು ಮಾಸಿದ ಗೆರೆಗಳು
ಸಪೂರ ದೇಹದ ಈ ಕೈಗಳು
ಆಕಾಶವನು ಬಳಸಿ ಬಂದಿವೆ
ಹಕ್ಕಿಯ ಒಲವು
ಚುಕ್ಕಿಯ ಬೆರಗು
ಈ ಕಪ್ಪು ಕೈಗಳು ಸೂರ್ಯನ ಸವರಿ ಬಂದಿವೆ
ಚಂದ್ರನಲಿ ಕಲೆಯಾಗಿ ನಿಂತಿವೆ

*
ಕಾಜೂರು ಸತೀಶ್

Sunday, April 16, 2023

ಅಪ್ಪಟ ಭೂಮಿಗೀತ


ಹದಿಮೂರು ವರ್ಷಗಳ ಹಿಂದೆ ಒಂದು ಸಾಹಿತ್ಯ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಹೋಗಿದ್ದೆ. ಕೊಡಗಿನಿಂದ ಅಲ್ಲಿಗೆ ಯಾರೂ ಬರುವುದಿಲ್ಲ ಎಂದುಕೊಂಡಿದ್ದೆ. ಅದು ಸುಮಾರು ಹೊತ್ತು ನಿಜವೂ ಆಗಿತ್ತು. ಆಮೇಲೆ ನನ್ನ ಮುಂದೆ ಒಬ್ಬರು ನಡೆದುಹೋಗುತ್ತಿದ್ದರು. 'ಮೇಡಂ ,ಗೊತ್ತಾಯ್ತಾ? ಕೇಳಿದೆ. 'ಇಲ್ಲ , ನನಗೆ ಅಷ್ಟು ಬೇಗ ಗುರ್ತಾ ಸಿಗುವುದಿಲ್ಲ ಆಯ್ತಾ' ಎಂದರು.

ಕಳೆದ ಮಾರ್ಚ್ 26ಕ್ಕೆ ಅವರು ಸಿಕ್ಕರು.

ಈ ನಡುವೆ ಹಲವಾರು ಬಾರಿ ಅವರನ್ನು ನೋಡಿದ್ದೇನೆ, ಭಾಷಣ ಆಲಿಸಿದ್ದೇನೆ , ಕವಿತೆ ಕೇಳಿದ್ದೇನೆ, ಲೇಖನಗಳನ್ನು ಓದಿದ್ದೇನೆ. ಮುಂದುವರಿದು 'ಸಹನಾ ಕಾಂತಬೈಲು ಅವರ ಪುಸ್ತಕಗಳನ್ನು ಕಳಿಸಿ' ಎಂದು ಪ್ರಕಾಶಕರಿಗೆ ಸಂದೇಶ ಕಳಿಸಿದ್ದೇನೆ.



ಈಚೆಗೆ , ಆಯಿರಸುಳಿ ಜಂಗಲ್ ಹಾಡಿಯಲ್ಲಿ ಕವಿತೆ ಓದುತ್ತಿದ್ದೆವು. ಹಿನ್ನೆಲೆಯಲ್ಲಿ ಆನೆ ಘೀಳಿಡುವ ಸದ್ದು ಕೇಳಿಸುತ್ತಿತ್ತು. ಅಲ್ಲಿ ಸಹನಾ ಕಾಂತಬೈಲು ಅವರು ನನ್ನ ಕೈಗೆ 'ಆನೆ ಸಾಕಲು ಹೊರಟವಳು' ಕೃತಿಯನ್ನು ನೀಡಿ ಇದು ಈಗ ನಾಲ್ಕನೆಯ ಮುದ್ರಣ ಎಂದರು (ಶ್ರೀರಾಮ ಬುಕ್ ಸೆಂಟರ್ ,ಮಂಡ್ಯ). ಡಾ. ಹಾ.ಮಾ.ನಾಯಕ ಅಂಕಣ ಬರಹ ಪುರಸ್ಕಾರ ಪಡೆದಿದೆ ಈ ಕೃತಿ.



*
ಸಹನಾ ಕಾಂತಬೈಲು ಅವರು ತುಂಬಾ progressive thoughtಗಳಿಂದ ಆಗಿರುವವರು. ಈ ಅಂಕಣಮಾಲೆ 'ಅಂಕಣ' ಆಗಬೇಕಾದ ತುರ್ತಿನಲ್ಲಿ ಹುಟ್ಟಿರುವವು. ಆದರೆ, ಅಂಕಣದ ಹಿಂದಿನ ಸಿದ್ಧತೆಗಳೆಂದರೆ ಮಂಗಳೂರಿಗೆ ತೆರಳಿ laptop ರಿಪೇರಿ ಮಾಡಿಸುವುದು, ಅದಕ್ಕಾಗಿ ಪಟ್ಟುಬಿಡದೆ ಕತ್ತಲಾಗುವವರೆಗೆ ಅಂಗಡಿಯಲ್ಲಿ ಕುಳಿತುಕೊಳ್ಳುವುದು!. ದೈನಿಕದ ಕ್ಷಣಗಳು ಹುಟ್ಟಿಸಿದ ಸೃಷ್ಟಿ ಅವು. ಆದರೂ ಬರೆದು ಮುಗಿಸಿದ ಮೇಲೆ / ಪ್ರಕಟವಾದ ಮೇಲೆ outdated ಆಗದ ಹಾಗೆ ತಾಜಾ ಆಗಿ ಉಳಿದುಕೊಂಡಿದೆ. ಅದೇ ನಾಲ್ಕನೆಯ ಮುದ್ರಣದವರೆಗೆ ಈ ಕೃತಿ ಕ್ರಮಿಸಿದ ಹಿನ್ನೆಲೆ.


ತಮ್ಮ ಮನೆಯ ಎದುರಲ್ಲಿ ಗೆಳತಿಯರೊಂದಿಗೆ

'ನಾನು ಕೃಷಿಕ ಮಹಿಳೆ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸಹನಾ ಕಾಂತಬೈಲು ಅವರ ಪ್ರತೀ ವಾಕ್ಯದಲ್ಲೂ ಉತ್ಸಾಹ ಪುಟಿಯುತ್ತದೆ. ತಮಗೆ ತಿಳಿಯದ್ದನ್ನು ಕಲಿಯುವ ಅಪಾರ ಹಂಬಲವಿದೆ ಅಲ್ಲಿ. ಕೊಟ್ಟಿಗೆಯಿಂದ ಕಟ್ಟುಬಿಚ್ಚಿದ ಕರುವಿನ ಕುಣಿದಾಟದ ಹಾಗಿರುವ ಉತ್ಸಾಹ ಅದು. ಮುಂಬೈ ವಿವಿಯಲ್ಲಿ ಆಹ್ವಾನಿತರಾಗಿ ಹೋಗುವಾಗ, ಅಮೇರಿಕದ ಗ್ರಂಥಾಲಯವನ್ನು ಭೇಟಿಮಾಡುವಾಗ ಅವರ ಕುತೂಹಲ, ಮುಜುಗರ, ಆತ್ಮವಿಶ್ವಾಸ, ಕೊರಗು- ಒಟ್ಟೊಟ್ಟಿಗೆ ವ್ಯಕ್ತವಾಗುತ್ತದೆ. ಜೋಪಡಿ ಮನೆಯ ಹೆಣ್ಣಿನ ಬದುಕನ್ನೂ ಅಪಾರ್ಟ್ಮೆಂಟಿನಿಂದ ಇಣುಕಿನೋಡಿ ನೋಯುವ ಹೃದಯವಿರುವ ಬರೆಹವಿದು.

ಚೆಂಬುವಿನಿಂದ ಮುಂಬಯಿಗೆ ತಲುಪುವಾಗ ಅಮೇರಿಕಾಕ್ಕೆ ಹಾರುವಾಗ ಅಂಕಣದ ವಸ್ತುವನ್ನಷ್ಟೇ ಅರಸಲು ತಮ್ಮನ್ನು limit ಮಾಡಿಕೊಂಡಿದ್ದರೆ ಬರೆಹ ಸೋಲುತ್ತಿತ್ತು. ಜಗತ್ತು ಮರೆತೇಬಿಟ್ಟಿರುವ ordinarinessಗಳನ್ನು ನೆನಪಿಸಿ celebrate ಮಾಡುವ(ಬಾಳೆ ಎಲೆ, ಅಡಿಕೆ ಹಾಳೆ, ಸ್ನಾನದ ಹಂಡೆ) , ಅವು ಉಳಿಯಬೇಕಾದ ಅನಿವಾರ್ಯತೆಯನ್ನು ತಿಳಿಸುವ ಮಾದರಿಯವು. ಹಲಸಿನ ಹಣ್ಣಿನ ಮೂಲಕ ಕೌಟುಂಬಿಕ ಸಂಬಂಧಗಳನ್ನು ಗ್ರಹಿಸುವ , ಆನೆಗೆ ಕಾಡಲ್ಲಿ ಆಹಾರ ಬೆಳೆಯಲು ಹೊರಡುವ(ಕಲ್ಲುಬಾಳೆ), ತನ್ನ ಹೆಂಡತಿಗೆ ಏನೂ ಕೆಲಸವಿಲ್ಲ ಎನ್ನುವ ರೇಡಿಯೋ ಜಾಹೀರಾತನ್ನೂ ಉಲ್ಲೇಖಿಸುವ (ಒಂದು ಪದವನ್ನೂ ಬಿಡದ ಹಾಗೆ- ಧ್ಯಾನಸ್ಥ ಬದುಕಿದ್ದರೆ ಮಾತ್ರ ಇವೆಲ್ಲಾ ಹೊಳೆಯುವುದು), ತಮ್ಮ ಹೋರಿಯನ್ನು ಮಾರಾಟ ಮಾಡದೆ ಕಾಡಿಗೆ ಅಟ್ಟುವ ಸಂದಿಗ್ಧತೆಯನ್ನೂ ವಿವರಿಸುವ - ಕ್ರಮ ಅನನ್ಯ.

ದೇಸೀ ಸಂಸ್ಕೃತಿಯ, ಹಸಿರುಮೂಲ ಸ್ತ್ರೀಪರ ಆಲೋಚನೆಗಳ, ಕೃಷಿ ಸಂಸ್ಕೃತಿಯ, ಹಳ್ಳಿ-ನಗರಗಳ, ಹಳತು- ಹೊಸತರ ಮುಖಾಮುಖಿಯ , ವೈಜ್ಞಾನಿಕ ತಳಹದಿಯ ಬರೆಹಮಾಲೆಗಳಿವು. ಇದಕ್ಕಿಂತ ಸರಳಗೊಳಿಸಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗಿನ ಭಾಷಾ ಸರಳತೆ ಇಲ್ಲಿದೆ. ಅಲ್ಲಲ್ಲಿ ವಾಸ್ತವ ಹಾಸ್ಯ ಬರೆಹದ ಶಕ್ತಿಯನ್ನು ಹೆಚ್ಚಿಸುತ್ತದೆ.
*
ಕಾಜೂರು ಸತೀಶ್ 

Sunday, January 1, 2023

ಮೊದಲ ಮಳೆಯ ಕವಿತೆಗಳ ಗಂಧ


ಅವರು 
ನಮ್ಮಿಬ್ಬರ ನಡುವೆ
ಗೆರೆ ಕೊರೆದರು

ನಮ್ಮ 
ಅಗಲಿಕೆಯನು 
ನಿರೀಕ್ಷಿಸಿದರು

ನಮ್ಮ 
ಕಂಪನದ ತೀವ್ರತೆಗೆ
ಮಾಪಕ ಹಿಡಿದು ನಿಂತರು

ನಾವು 
ಕೋನವಾಗಿ
ನೆಲೆ ನಿಂತೆವು
(ಅದೃಷ್ಟ ರೇಖೆ)
*


ಚೈತ್ರಾ ಶಿವಯೋಗಿಮಠ ಅವರ ಪೆಟ್ರಿಕೋರ್ ಸಂಕಲನದ ಮೊದಲ ಕವಿತೆಯಿದು(ಜಾನ್ ಡನ್ ಈ ಬಗೆಯ conceitಗಳನ್ನು ಬಳಸಿ ಪ್ರೇಮದ ಅಮರತ್ವವನ್ನು ಸಾರಿದ್ದ). ಇದು  ನಾನು-ನೀನು, ಅವನು-ಅವಳುಗಳ ಪ್ರೇಮದ ಮೊದಲ ಮಳೆಯ ಮಣ್ಣ ಗಂಧ(ಪೆಟ್ರಿಕೋರ್)ವನ್ನು ಮೈದುಂಬಿಕೊಂಡ ಸಂಕಲನ.

  ಈ ನಾನು-ನೀನುಗಳ ಕೋನವು ಸಮಾಂತರ ರೇಖೆಗಳಾಗಿ ಚಲಿಸಿ ಸಂಧಿಸಿ ಕೋನವಾಗುವ ಬಯಕೆ ಕವಿಯದು. 

 ಈ ಜೋಡಿ 
ಸಮಾಂತರ ರೇಖೆಗಳು 
ಸಂಧಿಸಿ ಕೋನವಾಗುವ ಕಾಲ
(ಸಮಾಂತರ ರೇಖೆಗಳು)

ಈ ನಟ್ಟಿರುಳಲಿ
ಗೋಡೆ ತಬ್ಬಿದ ಗಡಿಯಾರದ
ಮೂರು ಬಾಹುಗಳನ್ನ ಬಿಗಿಯಾಗಿ ಕಟ್ಟಿ
ಒಂದಾಗಿ ಜೇನುಹನಿ
ಹನಿಹನಿಯಾಗಿ ಸ್ರವಿಸುವ ಸುಖಕೆ
(ನಮ್ಮಿಬ್ಬರ ನಡುವಿನ ಹೂವು)

ಈ ತುಟಿಪಕಳೆಗಳು 
ಅಹರ್ನಿಶಿ ಸೋಕಿದವು
ಆದರೂ ಅದು
ಚುಂಬನವಲ್ಲ ಮಹಾಮೈತ್ರಿ
(ಇದೊಂದು ಅದೃಷ್ಟ )
*

ಗಂಡು ಹೆಣ್ಣುಗಳ ಧ್ಯಾನ ಅಲೌಕಿಕವಾಗಿಯೂ ಇಲ್ಲಿ ಸಾಗುತ್ತದೆ:

ತಳುಕು ಬಿದ್ದ 
ನಾಗರ ಜೋಡಿ
ಅವನಿವಳ ಇವಳವನ
ಅದ್ವೈತವಾಗಿಸಿಕೊಂಡು ಬಿಡು.
( ಈ ಮರ್ತ್ಯದೊಳಗೆ)

ಹೆಣ್ಣಿನ ಒಳಹೊರಗುಗಳು ನಿಸರ್ಗದ  ಪರಿಭಾಷೆಯಲ್ಲಿ ವ್ಯಕ್ತವಾಗುತ್ತದೆ. ಚಿತ್ರಕ ಶಕ್ತಿಯಿದೆ ಕವಿಗೆ. ಇಲ್ಲಿ ಈಗಾಗಲೇ ಚೌಕಟ್ಟಿಗೆ  ಒಳಗಾಗಿರುವ ಸ್ತ್ರೀವಾದವಿಲ್ಲ. ಎಂದರೆ, ಸ್ತ್ರೀಯ ಮೇಲಿನ ಶೋಷಣೆ-ಮೆಚ್ಚುಗೆಗಳ ಮೇಲೆ  ಅವರು ಕವಿತೆ ಕಟ್ಟುವುದಿಲ್ಲ. ಇರುವ ಮಾದರಿಯನ್ನು ಮುರಿಯುವ ಕ್ರಮವದು.

ಅವಳ ಮಣ್ಣಿನ ಹುಂಡಿಯಲಿ
ಚೂರುಪಾರಾದ
ಕೂಡಿಸಿಟ್ಟ ಚಿಲ್ಲರೆ ಗೋಲಕ
ಪಳಾರನೆ ಒಡೆಯಲು
ಚೆಲ್ಲಾಪಿಲ್ಲಿಯಾಗಿ ಗಗನ ತುಂಬುವ ಬಿಲ್ಲೆಗಳು
ಒಡೆದ ಕುಡಿಕೆಯ ಪದರುಪದರು ಮೋಡಗಳು
(ಬೆಳದಿಂಗಳ ಬಯಕೆ)

 ನಿವೇದನೆಗಳ ಮಾದರಿಯಿವು. ಪ್ರೇಮ, ಭಕ್ತಿ, ವಿರಹ, ಮುಗ್ಧತೆ, ಪ್ರಾರ್ಥನೆ ಇಲ್ಲಿನ ವಸ್ತು. ಅನುಭಾವದ ಸೆಳಕಿವೆ ಇಲ್ಲಿ(ಕೆಲವೊಮ್ಮೆ ಒಂದೇ ಕೇಂದ್ರದ ಸುತ್ತ ಮತ್ತೆಮತ್ತೆ ಚಲಿಸಿದಂತೆಯೂ ಅನಿಸುತ್ತದೆ).
ಆಧುನಿಕ ಪರಿಭಾಷೆ ಅಲ್ಲಲ್ಲಿವೆ(ಜಿಪ್ ಲೈನ್, ಬ್ಲ್ಯಾಕ್ ಹೋಲ್, ಸಾಫ್ಟ್ ಸಂತೆ, ಇತ್ಯಾದಿ). ಸಾಮಾಜಿಕಗೊಳ್ಳುವ ಬಗ್ಗೆ ಕವಿಗೆ ಆಸಕ್ತಿಯಿಲ್ಲದಿದ್ದರೂ, 'ಬಣ್ಣ' ಕವಿತೆಯಲ್ಲಿ 

ಬಟ್ಟೆ ತೊಟ್ಟ
ಈ ಬೆತ್ತಲೆ
ಜನರ ನಡುವೆ

ಆಗಾಗ 
ನಾನು ಕಳಚುತ್ತೇನೆ
ಬಿಳಿ ಹಸಿರು ಕಪ್ಪು ಕೇಸರಿ
ಬಣ್ಣದ ಚಿಟ್ಟೆ

ಆದರೆ

ನನ್ನದೇ ಜನ
ನೋಡುತ್ತಾರೆ ನನ್ನ
ಅವರದೇ ಕಾಮಾಲೆ ಕಣ್ಣಿನಿಂದ

ಎಂದು ಸಾಮಾಜಿಕ ಅಮಲಿನ ಮೇಲೂ ಕಣ್ಣುಹಾಯಿಸುತ್ತಾರೆ.ಆದರೆ, ಈ ಬಗೆಯ ನೋಟಕ್ರಮದ ಅನುಪಸ್ಥಿತಿ ಉಳಿದ ಕವಿತೆಗಳಲ್ಲಿ ಕಾಣಿಸುತ್ತದೆ. 


ಚೈತ್ರಾ ಶಿವಯೋಗಿಮಠ ಅವರ ಮೊದಲ ಸಂಕಲನವಿದು. ಹೊಸತನಕ್ಕೆ ಜಿಗಿಯುವ ಗುಣಗಳಿವೆ ಈ ಕವಿತೆಗಳಿಗೆ.  ಹಲವು ಕವಿತೆ/ಕತೆಗಳನ್ನು ಆಕರ್ಷಕವಾಗಿ ಓದಿ ಕೇಳಿಸುವ ಮೂಲಕ ಗಮನ ಸೆಳೆಯುತ್ತಿರುವ ಚೈತ್ರಾ ಶಿವಯೋಗಿಮಠ ಅವರು ವೃತ್ತಿಯಲ್ಲಿ ಇಂಜಿನಿಯರ್ .
 
ಈ ಪುಸ್ತಕದ ಗುಣಮಟ್ಟ ಹಾಗೂ ವಿನ್ಯಾಸ ಅತ್ಯುತ್ತಮವಾಗಿದೆ( ಆತ್ಮಿಕಾ ಪುಸ್ತಕ ಬೆಂಗಳೂರು).  ಚೈತ್ರಾ  ಅವರ ಕಾವ್ಯಯಾನ ಅವರನ್ನು ಮತ್ತಷ್ಟೂ  ಮುನ್ನಡೆಸಲಿ.
*
ಕಾಜೂರು ಸತೀಶ್ 




Tuesday, August 9, 2022

'ನೆನಪುಗಳು ಮಾಸುವ ಮುನ್ನ' ಎಂಸಿಎನ್

ಓರ್ವ ವ್ಯಕ್ತಿಯನ್ನು ಕೇಂದ್ರವಾಗಿಟ್ಟುಕೊಳ್ಳುವ ಕೃತಿಗಳು ಸಾಮಾನ್ಯವಾಗಿ ಆರಾಧನೆಯ ನೆಲೆಯದ್ದಾಗಿರುತ್ತವೆ. ಅದರಲ್ಲೂ ರಾಜಕೀಯ ರಂಗದ ವ್ಯಕ್ತಿಯ ಕುರಿತ ಚಿತ್ರಣಗಳು ಕೃತಿಯ ಪ್ರವೇಶಕ್ಕೂ ಮುನ್ನವೇ ಋಣಾತ್ಮಕ ಪೂರ್ವಗ್ರಹವನ್ನು ಓದುಗರಲ್ಲಿ ಸೃಷ್ಟಿಸಿಬಿಡುತ್ತವೆ.

 ಎಂದರೆ:

೧. ಇವರು ಈ ಪಕ್ಷಕ್ಕೆ ಸೇರಿದವರು. ನನಗೂ ಈ ಪಕ್ಷದ ಮೇಲೆ ಒಲವಿದೆ. ಹಾಗಾಗಿಯೇ ಕೃತಿಯನ್ನು ಪ್ರೀತಿಯಿಂದ ಓದಬೇಕು.

೨. ಇವರು ನಾನು ಇಷ್ಟಪಡುವ ಪಕ್ಷದವರಲ್ಲ, ಆದ್ದರಿಂದ ಇದರಲ್ಲಿ ಏನಿದೆ ಎಂಬ ಕುತೂಹಲವಿದೆ .ಅಥವಾ ಇದರಲ್ಲಿ ಏನೂ ಇರಲಿಕ್ಕಿಲ್ಲ.

೩. ನನಗೆ ಯಾವ ಪಕ್ಷದ ಸಿದ್ಧಾಂತಗಳ ಮೇಲೆ ಒಲವಿಲ್ಲ. ಇವರ ನಿಜವಾದ ಸೈದ್ಧಾಂತಿಕ ಆಯ್ಕೆಯ ಕೇಂದ್ರ ಯಾವುದಿರಬಹುದು?

ಹೀಗೆ.

****

ಸಾರ್ವಜನಿಕ ಕ್ಷೇತ್ರದ(ಅದರಲ್ಲೂ ರಾಜಕೀಯ) ವ್ಯಕ್ತಿಯ ಕುರಿತ ಮಾಹಿತಿಯನ್ನು ಕಲೆಹಾಕುವಾಗ ವಿವರಗಳು ಸುಲಭವಾಗಿ ದಕ್ಕುತ್ತವೆ. ರಾಜಕೀಯದಲ್ಲಿದ್ದುಕೊಂಡೇ ಭಿನ್ನ ದಾರಿಯಲ್ಲಿ ಸಾಗುವ ವ್ಯಕ್ತಿಗಳ ಮೇಲೆ ಸಮಾಜಕ್ಕೆ ವಿಶೇಷವಾದ ಆಸ್ಥೆ ಇರುತ್ತದೆ. ಇಂಥವರ ಮೇಲೆ ಪತ್ರಕರ್ತರಾದವರ ನೋಟಕ್ರಮವು ಮತ್ತೂ ಒಂದು ಹೆಜ್ಜೆ ಮುಂದೆ ಇರುತ್ತದೆ.
*


'ರಾಜಕೀಯ ವಿಶ್ಲೇಷಣೆ ನನ್ನ ಮೆಚ್ಚಿನ ಕ್ಷೇತ್ರ' ಎನ್ನುವ ಕಣಿವೆ ಭಾರದ್ವಾಜ ಅವರ ಸರಳವಾದ ನಿರೂಪಣೆಯಲ್ಲಿ  'ನೆನಪುಗಳು ಮಾಸುವ ಮುನ್ನ' ಕೃತಿ ಚಿತ್ರಿತವಾಗಿದೆ. ಎಂ ಸಿ ನಾಣಯ್ಯ ಅವರ ರಾಜಕೀಯ ಬದುಕನ್ನು ಸಮಗ್ರವಾಗಿ ಕಟ್ಟಿಕೊಡುವ ಕೃತಿಯಿದು.


Fact ಮತ್ತು fictionಗಳೆರಡರ genreಗಳಲ್ಲೂ ಭಾರದ್ವಾಜರದು ಒಂದೇ ಭಾಷಾ ಕ್ರಮ. 'ಪತ್ರಿಕಾ ಭಾಷೆ' ಅಷ್ಟು ಅವರನ್ನು ಆವರಿಸಿದೆ:

"....ಅಲ್ಲಿ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ನಾಣಯ್ಯರನ್ನು ಭೇಟಿಮಾಡಲು ಬಂದ ಕಾರ್ಯಕರ್ತರು ಕೂಡ ಅಲ್ಲೇ ಊಟಮಾಡಿದರು. ಇದನ್ನು ಅಲ್ಲಿಯ ಇಂಜಿನಿಯರ್ ವ್ಯವಸ್ಥೆಗೊಳಿಸಿರುವ ವಿಷಯವನ್ನು ತಿಳಿದೊಡನೆ ಅವರು, ಅಧಿಕಾರಿಗಳು ಹಾಕಿದ ಊಟ ತಿಂದು ತಾವು ಎಷ್ಟರಮಟ್ಟಿಗೆ ಅವರ ಕಳಪೆ ಕಾಮಗಾರಿಗಳನ್ನು ನೋಡಬಹುದು ಎಂದು ತಮ್ಮೊಂದಿಗಿದ್ದ ಕಾರ್ಯಕರ್ತರಿಗೆ ಹೇಳಿ , ಸುಮಾರು 25 ಜನರ ಊಟದ ವೆಚ್ಚವನ್ನು ಇವರೇ ಸದರಿ ಅಧಿಕಾರಿಗೆ ಪಾವತಿ ಮಾಡಿ ಬಂದರು".



ಲೇಖಕರು ಎಂಸಿಎನ್ ಅವರ ನಡೆ-ನುಡಿಗಳನ್ನು ಇಷ್ಟಪಟ್ಟಿದ್ದರಿಂದಲೇ ಈ ಕೃತಿಯು ಒಡಮೂಡಲು ಕಾರಣ (ಹಾಗೆಂದು ಇದು ಅಷ್ಟಾದಶ ವರ್ಣನೆಯಲ್ಲ). ಎಂಸಿಎನ್ ಅವರ ಆದರ್ಶಪ್ರಾಯವಾದ ಬದುಕನ್ನು ಕಟ್ಟಿಕೊಡುವುದಷ್ಟೇ ಲೇಖಕರ ಕೆಲಸ. ಸುಮಾರು ೨೯ ವರ್ಷಗಳ ಕಾಲ ರಾಜಕೀಯ ರಂಗದಲ್ಲಿದ್ದ ಅವರನ್ನು ಗ್ರಹಿಸಲು ಲೇಖಕರೂ ಒಂದೆರಡು ದಶಕಗಳನ್ನು ಸವೆಸಿರಲೇಬೇಕು. ಹಾಗಾಗಿ fiction ಮಾದರಿಯಂತೆ ಧುತ್ತೆಂದು ಒಡಮೂಡಿದ ಕೃತಿ ಇದಲ್ಲ. ಅವ್ಯಕ್ತ ರೂಪದಲ್ಲಿ ಹಿಂದೆಯೇ ಮೊಳಕೆಯೊಡೆದಿರಬಹುದಾದ ಈ ಕೃತಿಗೆ ಅವರ ಹಲವು ವರ್ಷಗಳ ಮಾನಸಿಕ ಸಿದ್ಧತೆಯೂ ಕಾರಣವಾಗಿರಬಹುದು.

ಭಾರದ್ವಾಜರು ಹೇಳುವಂತೆ " ಸತತ ಮೂರು ತಿಂಗಳ ಪ್ರಯತ್ನದ ನಂತರ ಅವರ ಒಪ್ಪಿಗೆ ಪಡೆಯಲು ಯಶಸ್ವಿಯಾದೆ. ಆರಂಭದಲ್ಲಿ ತೀರಾ ಬಿಗಿಯಾದ ನಿಲುವು ಹೊಂದಿದ್ದ ಅವರು ಅಂತಿಮವಾಗಿ ಒಪ್ಪಿಗೆ ಸೂಚಿಸಿದರು."
*


ನಾಣಯ್ಯ ಅವರ ಕುಟುಂಬ, ಬಾಲ್ಯ, ಶಿಕ್ಷಣದಿಂದ ಮೊದಲ್ಗೊಂಡು; ವಿದ್ಯಾರ್ಥಿ ಸಂಘ, ವಕೀಲ ವೃತ್ತಿ(1962-78) , ಏಲಕ್ಕಿ ಸೊಸೈಟಿ, ಪುರಸಭೆ, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಕಾಫಿ ಬೆಳೆಗಾರರ ಸೊಸೈಟಿ, ವಿಧಾನ ಸಭೆ ಚುನಾವಣೆ, ಎಂ ಎಲ್ ಸಿ, ಮಂತ್ರಿ, ವಿರೋಧ ಪಕ್ಷದ ನಾಯಕತ್ವ, ಪಕ್ಷದ ಉಪಾಧ್ಯಕ್ಷ ಸ್ಥಾನ.. ಹೀಗೆ ಹಲವು ರಾಜಕೀಯ ಬದುಕಿನ ಘಟ್ಟಗಳನ್ನು ಚಿತ್ರಿಸಲಾಗಿದೆ. ಇಡೀ ಕೃತಿಯೇ ಸ್ವಾನುಭವದ, ಹಲವರೊಂದಿಗಿನ ಮಾತುಕತೆಯ ಫಲಿತವಾದರೂ, ಪ್ರಾತಿನಿಧಿಕವಾಗಿಯೂ 'ಮಾತುಕತೆ'ಯ ಭಾಗವೊಂದು ಇಲ್ಲಿ ಅಡಕವಾಗಿದೆ. ಎಂಸಿಎನ್ ಅವರು ಕಂಡ ಅಪರೂಪದ ಅಧಿಕಾರಿಗಳ, ರಾಜಕಾರಣಿಗಳ , ಸ್ನೇಹಿತರ ವ್ಯಕ್ತಿಚಿತ್ರಗಳಿವೆ. ಅವರನ್ನು ಹತ್ತಿರದಿಂದ ಬಲ್ಲ ಕುಟುಂಬದವರ, ಸ್ನೇಹಿತರ, ಒಡನಾಡಿಗಳ ಅಭಿಪ್ರಾಯಗಳಿವೆ. ಪತ್ರಿಕೆಗಳು ಬರೆದ ರಾಜಕೀಯ ನಡೆಗಳ ವರದಿಗಳಿವೆ(ಅವರ ಶ್ರೀಮತಿಯವರು ಕತ್ತರಿಸಿಟ್ಟಿದ್ದು). ಅವಿಸ್ಮರಣೀಯ ಭಾವಚಿತ್ರಗಳಿವೆ.


ಉತ್ತಮ ಪುರುಷ ಹಾಗೂ ಪ್ರಥಮ ಪುರುಷದಲ್ಲಿ ಕೃತಿಯ ನಿರೂಪಣೆ ಸಾಗುತ್ತದೆ.


*
ವೈಯಕ್ತಿಕ ನಿಂದನೆ, ಸುಳ್ಳನ್ನೇ ಸತ್ಯವಾಗಿಸುವುದು, ಧರ್ಮಾಧಾರಿತ/ಜಾತ್ಯಾಧಾರಿತ ರಾಜಕೀಯ, ಕುಟುಂಬ ರಾಜಕಾರಣ, ಭ್ರಷ್ಟಾಚಾರ - ಇಂತಹವುಗಳನ್ನೇ 'ರಾಜಕೀಯ' ಎಂದು ನಂಬಿ ಬದುಕಬೇಕಾದ ಕಾಲದಲ್ಲಿ ಎಂಸಿಎನ್  ಗಮನಾರ್ಹರಾಗುತ್ತಾರೆ:

* ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೇ ಪಡೆಯದ, ಆ ಪಕ್ಷದ ಸಿದ್ಧಾಂತಗಳನ್ನು ವಿರೋಧಿಸುವ ವ್ಯಕ್ತಿಗೆ ಚುನಾವಣೆಯ ಉಮೇದುವಾರಿಕೆ ಲಭಿಸಿ, ಗೆದ್ದು ಶಾಸಕನಾಗುವುದು, ಮಂತ್ರಿಯಾಗುವುದು ಕೌತುಕವಲ್ಲದೆ ಮತ್ತೇನು!

* ತಮಗೆ ಅಷ್ಟಾಗಿ ಪರಿಚಯವಿರದಿದ್ದ ಜಿಲ್ಲಾಧಿಕಾರಿ ವಿದ್ಯಾಶಂಕರ್ ಅವರನ್ನು ಪ್ರಾಮಾಣಿಕ ಅಧಿಕಾರಿ ಎಂಬ ಕಾರಣದಿಂದ ಇಲ್ಲಿ ನೆನಪಿಸಿಕೊಂಡಿದ್ದಾರೆ.

* ಎ.ಕೆ. ಸುಬ್ಬಯ್ಯ ಅವರ ಪಕ್ಷದ ವಿರೋಧಿಯಾಗಿದ್ದರೂ, ವ್ಯಕ್ತಿಗತ ನೆಲೆಯಲ್ಲಿ ಅವರನ್ನು ಚುನಾವಣೆಯ ಸಂದರ್ಭದಲ್ಲಿ ಬೆಂಬಲಿಸುತ್ತಾರೆ.


* ಜನರಲ್ ತಿಮ್ಮಯ್ಯ ಪ್ರತಿಮೆ ನಿರ್ಮಾಣದ ರೂವಾರಿಯಾದರೂ ಶಿಲೆಯಲ್ಲಿ ತಮ್ಮ ಹೆಸರು ಬರದಂತೆ ನೋಡಿಕೊಳ್ಳುತ್ತಾರೆ.
(ಮತ್ತು ಆ ದಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಗೈರುಹಾಜರಾದ ಕುರಿತು ತಲೆಕೆಡಿಸಿಕೊಳ್ಳುತ್ತಾರೆ)

* ನಿಷ್ಠಾವಂತ IAS ಅಧಿಕಾರಿ ವಾಸುದೇವ್ ಅವರಿಗೆ ನ್ಯಾಯಾಂಗ ನಿಂದನೆಯ ಆರೋಪದಲ್ಲಿ ಒಂದು ತಿಂಗಳ ಸೆರೆವಾಸವಾದ ಕುರಿತು ನೊಂದುಕೊಳ್ಳುತ್ತಾರೆ:

"ನ್ಯಾಯಾಂಗಗಳಲ್ಲಿ, ಉನ್ನತ ಸ್ಥಾನದಲ್ಲಿ ಕುಳಿತಿರುವ ಹಲವು ನ್ಯಾಯಾಧೀಶರು ಕಾನೂನಿಗಿಂತಲೂ ತಮ್ಮ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಇವರ ವೈಯಕ್ತಿಕ ವಿಚಾರಗಳು ಕಾನೂನಿನ ಮೇಲೆ ಸವಾರಿ ಮಾಡುತ್ತವೆ.."

* ಕಾಂಗ್ರೆಸ್ ಸಿದ್ಧಾಂತಗಳಿಗೆ ವಿರೋಧಿಯಾಗಿ ಅರಸು ಕಾಂಗ್ರೆಸ್ ಅನ್ನು ಮಾತ್ರ ಬೆಂಬಲಿಸುತ್ತಾರೆ. ತಮ್ಮ ತತ್ತ್ವ ಸಿದ್ಧಾಂತಗಳಿಗೆ ಬದ್ಧರಾಗುತ್ತಾರೆ.

* ಜಾತ್ಯತೀತ ನಿಲುವು, ಸಮಾಜವಾದಿ ಚಿಂತನೆ, ಕಮ್ಯೂನಿಸ್ಟ್ ವಿಚಾರಧಾರೆಗಳ ಮೇಲೆ ಒಲವು- ಹೀಗೆ ವಿಚಾರಗಳ ಬಲವಿರುವ ರಾಜಕಾರಣಿಯಾಗುತ್ತಾರೆ. ಜನಸಂಘದ ವಿರೋಧಿಯಾದರೂ ಉತ್ತಮಾಂಶಗಳನ್ನೂ ಗುರುತಿಸುತ್ತಾರೆ (ಬದಲಾಯಿಸಿಕೊಳ್ಳಬೇಕಾದದ್ದನ್ನೂ).

* ಅಪರಿಚಿತ ವ್ಯಕ್ತಿಯ ಪತ್ರಕ್ಕೂ ಸ್ಪಂದಿಸಿ ನ್ಯಾಯಕೊಡಿಸುತ್ತಾರೆ.

* ಅರಣ್ಯ ಹಾಗೂ ಕಾನೂನು ಮಂತ್ರಿಯಾಗಿದ್ದಾಗ ಅವರು ಮಾಡಿದ ಸುಧಾರಣಾ ಕ್ರಮಗಳು.

ಏಳು ಮುಖ್ಯಮಂತ್ರಿಗಳನ್ನು ಕಂಡಿರುವ ನಾಣಯ್ಯ ಅವರು, ಅವರೆಲ್ಲರ  ಕುರಿತು ಹೇಳುವಾಗ ಗ್ರಹೀತರಾಗುವುದಿಲ್ಲ; ಮುಚ್ಚಿಡುವುದಿಲ್ಲ. 

ಇನ್ನೂ ಹತ್ತು ಹಲವು.
*
ಎಂಸಿಎನ್ ಬಗೆಗಿನ ಈ ಕೃತಿಯ ವಿವರಗಳು ಅವರೊಬ್ಬರದೇ ಆಗಿರದೇ ಮೂರು ದಶಕಗಳ ಕರ್ನಾಟಕದ ರಾಜಕೀಯ ಇತಿಹಾಸದ ಚಿತ್ರಣವಾಗಿದೆ. ಪ್ರಸ್ತುತ ರಾಜಕೀಯ ಸ್ಥಿತಿಗತಿಗಳೆದುರು ಇಟ್ಟು ಅಳೆದು ನೋಡಲು ಈ ಕೃತಿ ನೆರವಾಗುತ್ತದೆ . ಹಾರ ತುರಾಯಿಗಳನ್ನು ಹಾಕಿಸಿಕೊಳ್ಳದೆ, ಹಿಂಬಾಲಕರೊಂದಿಗೆ ತೆರಳದೆ, ದ್ವೇಷವನ್ನು ಬಿತ್ತದೆ ಬೆಳೆದ ಎಂಸಿಎನ್,   ನಮ್ಮ ತಲೆಮಾರಿಗೆ ನಿಜದ ರಾಜಕಾರಣದ-ರಾಜಕಾರಣಿಗಳ ಅಗತ್ಯತೆಯನ್ನು ನೆನಪಿಸುತ್ತಾರೆ.


ಭಾರದ್ವಾಜರ ಕೃತಿಗಳ ಪೈಕಿ ಹೆಚ್ಚು ಶ್ರಮವಹಿಸಿ ತಂದಿರುವ ಕೃತಿಯಿದು. ಓದಿಗೆ ಮುದ್ರಣ ದೋಷದ ತೊಡಕುಗಳಿಲ್ಲ. ಎಂಸಿಎನ್ ಅವರ ಆದರ್ಶಗುಣಗಳ ಅನುಸರಣೆ ಯುವ ರಾಜಕಾರಣಿಗಳು ಮಾಡಬೇಕಿದೆ. ಪೂರ್ವಗ್ರಹಗಳಿಲ್ಲದೆ ಎಲ್ಲರೂ ಈ ಕೃತಿಯನ್ನು ಓದಬೇಕಿದೆ.
*
ಕಾಜೂರು ಸತೀಶ್

Saturday, August 6, 2022

'ಹನಿ'ಗಳ ಮುತ್ತಿನಹಾರ

ಮೇಜರ್ ಡಾ| ಕುಶ್ವಂತ್ ಕೋಳಿಬೈಲು ಅವರ 'ಮುತ್ತಿನಹಾರ' ಹನಿಗವನಗಳ ಸಂಕಲನವು ಪ್ರತಿಕ್ರಿಯಾತ್ಮಕ ಮಾದರಿಯದು. 'ಆ ಕ್ಷಣದ ವರ್ತಮಾನ'ದಲ್ಲಿ ಸೃಷ್ಟಿಯಾದ ಹನಿಗವನಗಳವು.


ಎಂ ಜಿ ರೋಡಿನಲ್ಲಿ
ಟ್ರಾಫಿಕ್ ಜಾಮಿದೆ
ಗಾಂಧಿ ತೋರಿಸಿದ ಹಾದಿ
ಇಂದಿಗೂ ಖಾಲಿಯಿದೆ
*
ದೇವರು
ಸ್ವರ್ಗದಲ್ಲಿ ಆರಾಮದಲ್ಲಿದ್ದಾನೆ
ಮನುಷ್ಯ ಭೂಮಿಯನ್ನು
ನರಕ ಮಾಡುತ್ತಿದ್ದಾನೆ
*
ಹೊಸಾ ದೇವರುಗಳು
ಧರ್ಮ ಸಂದೇಶಗಳು ಇನ್ನು ಬೇಡ
ಕೊಲ್ಲಲು ಜನರೇ ಉಳಿದಿಲ್ಲ
ಪ್ರಪಂಚಕ್ಕೆ ಬೆಂಕಿ
ಹಾಕಿದ ನಂತರವೂ
ಹೃದಯದೊಳಗೆ ಬೆಳಕು ಏಕಿಲ್ಲ?!
*
ಪಾಸು ಬೇಕೆಂದು ಜನರು
ಬಹಳ ಸರ್ಕಸ್ ಮಾಡಿದ್ದಾರೆ
ಟೋಲ್ಗೇಟಿನಲ್ಲಿ ನೋಡಿದೆ
ತಿಮ್ಮಯ್ಯಜ್ಜನನ್ನೂ ಹೊರಗೆ ನಿಲ್ಲಿಸಿದ್ದಾರೆ.


ಇಂತಹ ಸಾರ್ವಕಾಲಿಕ ಸ್ವರೂಪವುಳ್ಳ ಹನಿಗಳೊಂದಿಗೆ ಒಂದು ನಿರ್ದಿಷ್ಟ ಕಾಲಮಾನದ ಕುರಿತ ಪ್ರತಿಕ್ರಿಯೆಯ ಹನಿಗಳೂ ಈ ಸಂಕಲನದಲ್ಲಿವೆ:

ಟೊಮೆಟೋ
ಜಾಸ್ತಿ ಬೀಗಬೇಡ
ಆಲೂಗಡ್ಡೆಯ ಮೇಲೆ ರೇಗಬೇಡ!
*
ಏಬಿಡಿಗೆ ಒಂದು ಬಿರಿಯಾನಿ
ಉಳಿದವರಿಗೆ ಹೇಳಿ ಕುಷ್ಕಾ
ಆರ್ಸಿಬಿ ಪಂದ್ಯ ಗೆಲ್ಲುವುದಿಲ್ಲ
ನೋಡಲು ಬಂದರೆ ಅನುಷ್ಕಾ!
*
ರಾಖಿ ಸಾವಂತ್
ರಾಖಿ ಕಟ್ಟುವುದಿಲ್ಲ
ಅವಳಿಗೆ ಹುಡುಗರ
ಶಾಪ ತಟ್ಟುವುದಿಲ್ಲ!
*

ಈ ಹನಿಗಳಲ್ಲಿ pun, funಗಳಿವೆ; Punchಗಳಿವೆ; ಒಳನೋಟಗಳಿವೆ. ವರ್ತಮಾನವನ್ನು ಪದ್ಯಕ್ಕೊಳಪಡಿಸುವ ತುರ್ತಿನಲ್ಲಿ ಇವು ಹುಟ್ಟಿವೆ.

ಹಾಗೆಯೇ, ನಿರ್ದಿಷ್ಟ ಘಟನೆ/ ಕಾಲಘಟ್ಟದ ಬಗೆಗಿನ ಪ್ರತಿಕ್ರಿಯೆಯು 'ಸದಾ ಸಮಕಾಲೀನ' ಅಥವಾ ಸಾರ್ವಕಾಲಿಕ ಲಕ್ಷಣವನ್ನು ಪಡೆದುಕೊಳ್ಳಬೇಕಿದೆ.
*
ಕಾಜೂರು ಸತೀಶ್ 

Friday, March 18, 2022

ಬಾಲ್ಯದ ಉಡದಾರ

ಯುವ ಕತೆಗಾರ ಶರಣಬಸವ ಕೆ ಗುಡದಿನ್ನಿ ಅವರ ಉಡದಾರ ಓದಿದೆ. Nostalgic ಅನುಭವಗಳನ್ನು ಹತ್ತು ಪುಟ್ಟ-ಪುಟ್ಟ ಪ್ರಬಂಧದಲ್ಲಿ ರಮ್ಯವಾಗಿ ಕಟ್ಟಿರುವ ಸಂಕಲನವಿದು. ಕೆಲವು ಪಾತ್ರಗಳು, ಸಂಗತಿಗಳು ಅವರ ಕಥಾ ಸಂಕಲನ ದಣೇರ ಬಾವಿಯಲ್ಲಿ ಎದುರುಗೊಂಡಿದ್ದವು.


ಹಳ್ಳಿಯ ಮುಗ್ಧ ಬದುಕು, ಬಡತನ ತಂದೊಡ್ಡುವ ಭಿನ್ನ ಅನುಭವಗಳು.. ಹೀಗೆ ಸ್ವ-ಅನುಭವಗಳು ಪ್ರಬಂಧಗಳಾಗಿವೆ. ಮೊಬೈಲ್ ಪೂರ್ವ ಕಾಲದ ಬಾಲ್ಯದ ದಟ್ಟವಾದ ಚಿತ್ರಣಗಳಿವು: ಉಡದಾರ,ಲಾಡಿ, ಗಡಿಯಾರ ಚೌಕ, ನಾಯಿ, ಕರ್ಚಿಕಾಯಿ, ಅವ್ವ, ಜಾತ್ರೆ, ಬಯಲಾಟ, ಬಸ್ಸು, ಕಟಿಂಗ್ ಶಾಪು. ಈ ಚಿತ್ರಗಳಲ್ಲಿ ಧರ್ಮ-ಜಾತಿ ಮುಂತಾದ ಬದುಕಿನ ಸಾಮರಸ್ಯದ ನೆಲೆಗಳಿವೆ; ಎಲ್ಲವನ್ನೂ ಮಗನಿಗಾಗಿ ಮುಡಿಪಿಡುವ ತಾಯಿಯ ಪಾತ್ರವಿದೆ;

ಇದು- ಕಾಲವೊಂದು ಆಗಿಹೋಗಿರುವ ಕುರಿತ ಇತಿಹಾಸವೂ ಆಗಿದೆ. ಮುಂದಿನ ತಲೆಮಾರು 'ಹೀಗೂ ಒಂದು ಬದುಕಿತ್ತೇ' ಎಂದು ಮೂಗುಮುರಿದು ನೋಡುವ ಚಿತ್ರಣಗಳಿವೆ.

(ಪ್ರಬಂಧ ಎಂಬ ಸಿದ್ಧಪ್ರಕಾರದ ಆಚೆಗೆ ಇವುಗಳನ್ನು ನೋಡಬೇಕಿದೆ. )

ಶುಭಾಶಯಗಳು ಶರಣಬಸವ ಕೆ ಗುಡದಿನ್ನಿ ಅವರಿಗೆ.
*

ಕಾಜೂರು ಸತೀಶ್ 

Saturday, February 5, 2022

ಮುಟ್ಟದೆಯೇ ಮುತ್ತಿಡುವ ಮೋಹಕತೆ



ಮಂಜುಳಾ ಹುಲಿಕುಂಟೆ ಅವರ ದೀಪದುಳುವಿನ ಕಾತರ ಕವನ ಸಂಕಲನವನ್ನು ಈ ಬೆಳಿಗ್ಗೆ ಓದಿದೆ. ಮುಗ್ಧ ಹುಡುಗಿಯೊಬ್ಬಳ  ಪ್ರೇಮದ ಕುರಿತ ಭಾಷ್ಯ, ಲೋಕ ಗ್ರಹಿಕೆ, ದಿನಚರಿ, ಆತ್ಮಕಥಾನಕಗಳಿವು. ಪ್ರೇಮ-ವಿರಹ, ಹತಾಶೆ-ಜೀವಂತಿಕೆಗಳ ಮಿಶ್ರಣ, 
'ಮುಟ್ಟದೆಯೇ ಮುತ್ತಿಡುವ ಮೋಹಕತೆ'

ಹಾಡಿಕೊಳ್ಳಲು ಬಿಟ್ಟುಬಿಡಿ
ನನ್ನ ಪಾಲಿನ ಹಾಡುಗಳ
*

ಹಚ್ಚಿಟ್ಟ ಹಣತೆಯಲ್ಲಿ
ನನ್ನ ನಾನೇ ಸುಟ್ಟುಕೊಳ್ಳುವಾಗ
ಬೆಳಕೆಂದು ಭ್ರಮಿಸುವ ಅವನು
ಮುಗ್ಧನೋ ಕ್ರೂರಿಯೋ
ಅರಿವಾಗುವುದಿಲ್ಲ.
*


'ದೀಪದ ಹುಳು' ಹೆಣ್ಣಿನ ಕುರಿತ ಸಶಕ್ತ ಪ್ರತೀಕ . ದೀಪದ ಹುಳುವಿನ ಕನಸು ಬಗೆಬಗೆಯದಾದರೂ ಕಡೆಗೆ ಸುಟ್ಟು ಕರಕಲಾಗುವ ಹಿಂಸೆ. ಆದರೆ ಕರಕಲಾಗುವ ಮೊದಲಿನ ಕ್ಷಣಗಳ ಉತ್ಕಟ ಪ್ರೇಮದ ಧ್ಯಾನ ಈ ಕವಿತೆಗಳು.


ನನ್ನವ್ವ ನನ್ನ ಹೆರುವ ಮೊದಲೇ
ಸ್ವಾಭಿಮಾನವನ್ನು ಹೆತ್ತಿದ್ದಳು

ಪ್ರೇಮ
ಕೊರಳ ಮೇಲಿನ ಕುಣಿಕೆಯಾದಾಗಲೂ
ಸಾವ ಕ್ಷಣಕ್ಷಣವನ್ನು ಇನ್ನಿಲ್ಲದಂತೆ ಅಪ್ಪಿಕೊಂಡಿದ್ದೇನೆ.
*
ಇನ್ನೂ deep ಆಗಿ ಈ ಮುಗ್ಧ ಲೋಕದೊಳಗೆ ಇಳಿದಾಗ ಪದ್ಯಗಳು ಹೆಚ್ಚು ಕಾಡುತ್ತವೆ. ಮಂಜುಳಾ ಹುಲಿಕುಂಟೆ  ಅವರಿಗೆ ಶುಭಾಶಯಗಳು 

*
ಕಾಜೂರು ಸತೀಶ್ 



ಪ್ರೀತಿ ಮತ್ತು ಪ್ರಾಯಶ್ಚಿತ್ತ ಮತ್ತು ಉಲುಹಿನ ವೃಕ್ಷದ ನೆಳಲು


'ಸಂಕಥನ'ದ ಗೆಳೆಯ ರಾಜೇಂದ್ರ ಪ್ರಸಾದ್ ಅವರ 'ಪ್ರೀತಿ ಮತ್ತು ಪ್ರಾಯಶ್ಚಿತ್ತ' ಮತ್ತು 'ಉಲುಹಿನ ವೃಕ್ಷದ ನೆಳಲು' ಎಂಬ ಎರಡು ಕೃತಿಗಳನ್ನು ಓದಿದೆ. ಸಿದ್ಧಮಾದರಿಯ 'ಮುನ್ನುಡಿ ಬೆನ್ನುಡಿ'ಗಳ ಬದಲಿಗೆ ಕೃತಿಯ ಕೇಂದ್ರಪ್ರಜ್ಞೆಯ ಕುರಿತು ಮಾತುಗಳನ್ನು ತಾವೇ ಬರೆದುಕೊಂಡಿದ್ದಾರೆ. "ಉಲುಹಿನ ವೃಕ್ಷದ ನೆಳಲು' ಕೃತಿಯ ಬಗೆಗಿನ ಮಾತುಗಳು mature ಆಗಿವೆ. ಸೃಜನಶೀಲ ಅಭಿವ್ಯಕ್ತಿಯ ನಡುನಡುವೆ ವೈಚಾರಿಕ ನೆಲೆಗಳನ್ನು ಶೋಧಿಸಿ ಹೇಳುವ ಗದ್ಯಕ್ರಮವೂ ಈ ತಲೆಮಾರಿಗೆ ಬೇಕು. ರಾಜೇಂದ್ರ ಪ್ರಸಾದ್ ಮುಂದೆ ಇಂತಹ ಆಲೋಚನೆಗಳಿರುವ ಗದ್ಯಕೃತಿಗೆ ಮುಂದಾಗಲಿ.

Sunday, January 2, 2022

'ಯಾವುದೂ ಏನೂ ಅಲ್ಲದ ಪ್ರೀತಿ, ಆನಂದ ಮತ್ತು ಬೆಳಕು!'



ಜ ನಾ ತೇಜಶ್ರೀ ಅವರ ಮಾಗಿಕಾಲದ ಸಾಲುಗಳು ಸಂಕಲವನ್ನು ಓದಿದೆ. ಕವಿತೆಯನ್ನೂ ಮಗುವನ್ನೂ ಉದರದಲ್ಲಿಟ್ಟುಕೊಂಡು ಒಟ್ಟೊಟ್ಟಿಗೆ ಜನ್ಮನೀಡಲು ಹಪಿಹಪಿಸುವ ತಾಯೊಬ್ಬಳ ಕವಿತೆಗಳಂತಿವೆ ಇವು.

ನೀನು ನನ್ನನ್ನು ನಿನ್ನ ಹೊರಗೆ ಸೃಷ್ಟಿಸುತ್ತೀಯ
ನಾನು ನನ್ನ ಒಳಗೆ ನಿನ್ನನ್ನು

(ನಿತ್ಯ)

ಕಾಯದ ಬಿಡುಗಡೆಗಾಗಿ ಹಂಬಲಿಸುವ ಬಗೆ ಒಂದೆಡೆಯಾದರೆ ಇರುವ ಕಾಯದ ಪೊರೆಹರಿದುಕೊಂಡು ಹೊಸಮೈಯ್ಯನ್ನು ಪಡೆಯುವ/ಧರಿಸುವುದಕ್ಕಾಗಿನ ಧ್ಯಾನ ಮತ್ತೊಂದೆಡೆ.ಇಲ್ಲಿನ ಬಿಡುಗಡೆಯ ಹಂಬಲಕ್ಕೆ ಅಲ್ಲಲ್ಲಿ ಸಾವಿನ ಪರಿಮಳವಿದೆ.

ಜಗದ ಬಂಧನಗಳಾಚೆಗೆ
ಕನಸಲ್ಲಿ ಕಂಡ ಪಂಜರದ ಗಿಳಿ
ಬಟ್ಟಬಯಲಿಗಿಳಿದು ನವಿಲಾಗಬೇಕಿದೆ
ನವಿಲ ತೊಡೆಯಿಂದ ಗಿಳಿ
ಮತ್ತೆ ಹುಟ್ಟಬೇಕಿದೆ
ದಡದ ಹಂಗು ಆಗಲೇ ಕಳಚಾಗಿದೆ

(ಗುಟುಕು)

ನಿನ್ನ ಪವಿತ್ರ ಕೈಗಳೊಳಗೆ ಆಡಲು
ಈ ದೇಹ ಮುಕ್ತವಾಗಬೇಕು

(ದೇಹ)

ಇವು 'ನಾನು ನೀನು ಆನು ತಾನು'ಗಳ ಮಾದರಿಯದ್ದು.

'ನಾನು' ಕರಗದೆ
ನೀನು ಕವಿತೆಯಾಗುವುದು
ಹೇಗೆ ಹೇಳು?

(ನೀನು ಹೇಳು)

ನಾನು ನಿನಗೆ ಸಂಬಂಧಿಸಿಕೊಳ್ಳುವುದು
ಹೀಗೆ ಈ ಕವಿತೆಯ ಹಾಗೆ

(ಕವಿತೆಯ ಹಾಗೆ)

ಮಂಡಿಯೂರಿ ನನ್ನ ಹಣೆಯ ನಿನ್ನಡಿಗಳಿಗೆ ಒತ್ತುತ್ತೇನೆ
ಕವಿತೆ ಜನ್ಮ ತಾಳುತ್ತದೆ
ಪದಗಳ ನಡುವಿನ ಖಾಲಿಯಲ್ಲಿ
ಜೀವಮಿಡಿತದ ಸದ್ದು

(ಹಿಡಿ)



'ನೀನು' ಇಹ-ಪರಗಳಿಗೂ ಸಲ್ಲುವ ಅಥವಾ ಅವೆರಡೂ ಆಗಬಲ್ಲ ಸಾವಿನ ಸ್ವರೂಪದ್ದು. ಈ ನೀನು ಕೆಲವೊಮ್ಮೆ ಮಗುವಾಗಿ, ಇನಿಯನಾಗಿ ಬೆಳಕಾಗಿ ನಿರಾಕಾರವಾಗಿಯೂ ಕಾಣುತ್ತದೆ.

ನಿನ್ನ ದೇಹವ ಹಿಡಿಯಲೆತ್ನಿಸುತ್ತೇನೆ
ನೀನು ಮನಸ್ಸಾಗಿಬಿಡುತ್ತೀಯ
ಆ ಮನಸ್ಸಿಗೆ ಆಕಾರ ಕೊಡಲು ಕೂರುತ್ತೇನೆ
ಗಂಡು ನೀನು ಹೆಣ್ಣಾಗುತ್ತೀಯ
ಹೆಣ್ಣ ಬಿಡಿಸತೊಡಗುತ್ತೇನೆ
ಪಕ್ಷಿಯೊಂದು ರೆಕ್ಕೆ ಪಟಪಟಿಸುತ್ತದೆ
ಅದರೊಂದಿಗೆ ಹಾರುತ್ತೇನೆ
ಹೂವ ಸುಗಂಧ ಬಾಚಿ ತಬ್ಬುತ್ತದೆ...

ಮಾಗಿಕಾಲದ ನಿಸರ್ಗವು ವರ್ಣನೆಯಾಗಿ ಕಾಣುವುದಿಲ್ಲ ; ಕೊರತೆಯಾಗಿಯೂ ಕಾಣುವುದಿಲ್ಲ. ಜೀವದ, ಆತ್ಮ ಪರಮಾತ್ಮಗಳ (ನೀನು-ಅವನು)ಬೆರಗುಗಳನ್ನು ಶೋಧಿಸುವ ಕ್ರಮವದು. ಪಂಚಭೂತಗಳನ್ನಾವರಿಸುವ ಅನಾವರಿಸುವ ಬಗೆಯದು. ಅದ್ವೈತವೂ ಹೌದು .

ಬೆಳಕಲ್ಲಿ ನಾನು ಮತ್ತು ಅವನು
ಬೇರೆಬೇರೆಯಲ್ಲ

(ಮಹಾ ಆರತಿ)

ಹುಟ್ಟಿಲ್ಲದ ಮಗು ನಾನು
ತೇಲುತ್ತಿದ್ದೇನೆ ನಿನ್ನ ಅನಂತ ಅಲೆಗಳ ಮೇಲೆ ಕೆಳಗೆ ಒಳಗೆ

(ಹುಟ್ಟಿಲ್ಲ)

ಒಳಗೆ ಮುಲುಕುವ ಜೀವ
ಯಾರದ್ದೆಂದು ಹೇಳಬೇಕಿಲ್ಲ

(ಹೆಸರು)
*
ದೀರ್ಘ ಮೌನದಲ್ಲಿ ತುಂಬಿಕೊಳ್ಳಬಹುದಾದ ಕವಿತೆಗಳಿವು. ಈ ಕವಿತೆಗಳಲ್ಲಿ ಸಾವಿನ ನೆರಳಿದೆ, ಹುಟ್ಟಿನ ಪುಳಕವಿದೆ,ಬೆಳಕಿನ ಸೆಳಕಿದೆ, ಬೆರಗಿನ ಬೀಜವಿದೆ, ಅಧ್ಯಾತ್ಮದ ಗಂಧವಿದೆ.
*


ಕಾಜೂರು ಸತೀಶ್ 

Tuesday, August 24, 2021

A view on Manasu Abhisarike

Shanthi K Appanna is a brilliant storyteller of our times. Her 'Manasu Abhisaarike', a collection of kannada story stories ,published in 2016, bagged many awards including the prestigious Kendra Saahithya Academy. Being a Nurse,by profession,she richly deserves it as she brought a new perspective to the genre of Kannada Short Story.



In her stories, Shanthi Appanna, moves through several corners of the world- the rustic, the urban, male-female relationships, the subalterns, the oppressed and oppressor.

The notable critic H S Raghavendra Rao writes of her stories: “Shanthi Appanna confronts the philosophical question of whether it is life itself that is monotonous to the end, or just the ways in which we perceive life".


The art of perceiving nuances of the life, grand narration, elegant thoughtfulness of analysing the philosophical logic of human relationships(especially ,male and female ), the mind, material sciences , the environment - are rather impressive. Moreover, she tells the stories boldly and that becomes the pith of her story telling .

*


Kajooru Sathish

Sunday, June 13, 2021

ಸರಳ ಮತ್ತು ಸ್ಪಷ್ಟ ಶೈಲಿಯ ತಾಜಾ ಕಾವ್ಯ

ಲೇಖಕರೊಬ್ಬರ ಮೊದಲ ಕವನ ಸಂಕಲನ ಎಂದರೆ ಒಂದು ಬಗೆಯ ಕುತೂಹಲವಿರುತ್ತದೆ. ಅದು ಉತ್ತಮ ಕೃತಿಯಾಗಿದ್ದರೆ ಪ್ರಾಮಾಣಿಕ ಓದುಗರು ಅದರ ಕುರಿತು ಅಭಿಪ್ರಾಯ ತಿಳಿಸುತ್ತಾರೆ. ಒಂದಷ್ಟು ಮಂದಿಗೆ ಅದು ತಲುಪಲು ಕಾರಣವಾಗುತ್ತದೆ.

ದುರಂತ ಎಂದರೆ, ಅದರ ಕುರಿತು ಮಾತನಾಡುವ, ಚರ್ಚಿಸುವ ಅದೇ ತಲೆಮಾರಿನ ಸಂಖ್ಯೆ (ಹಂಚಿಕೊಳ್ಳುವ ಹಲವು ಸಾಧ್ಯತೆಗಳಿದ್ದಾಗಿಯೂ )ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಹೋಗುತ್ತಿದೆ. Utility ತತ್ತ್ವ ಅವರನ್ನು ಹಲವು ಬಗೆಯಲ್ಲಿ ಬಂಧಿಸಿರುತ್ತದೆ. 'ಹೀಗೆ ಮಾಡಿದರೆ ನನಗೇನು ಲಾಭ' ಎಂಬ ಸಂಗತಿ. ಈ ಸಂಕಲನದ ಕುರಿತು ಬರೆದರೆ/ಹೇಳಿದರೆ ನನ್ನ ಸಂಕಲನದ ಕುರಿತು ಅವರು ಬರೆಯಬಹುದೇ? ಅಥವಾ ನಮ್ಮ ಪರಿಚಯ ಗಾಢವಾಗಬಹುದೇ? ಇತ್ಯಾದಿ

ಇರಲಿ!
*

ಈಚೆಗೆ ಮೌಲ್ಯ ಸ್ವಾಮಿ ಮತ್ತು ಗುರುಗಣೇಶರ ಕವಿತೆಗಳನ್ನು ಓದಿದಾಗ ಮೊದಲ ಸಂಕಲನದಲ್ಲೇ ಅವು ತೋರಿದ ಪ್ರೌಢಿಮೆ ಗಮನ ಸೆಳೆಯಿತು. ಈ ಎರಡು ಸಂಕಲನಗಳು ಪರಸ್ಪರ ವಿರುದ್ಧ ಧ್ರುವಗಳಲ್ಲಿದ್ದರೂ, ಹೊಸತನ್ನು ಆಳವಾಗಿ ಗಂಭೀರವಾಗಿ ಶೋಧಿಸಿ ಹೇಳುತ್ತವೆ.

ಮತ್ತೊಂದು ಸಂಕಲನ 'ಗಾಯಗೊಂಡವರಿಗೆ'. ಗಣಿತ ಶಿಕ್ಷಕಿ ಮಂಜುಳಾ ಹಿರೇಮಠ ಅವರ ಚೊಚ್ಚಿಲ ಸಂಕಲನ. ಸರಳತೆಯಲ್ಲಿ ಸರಳ ಅಭಿವ್ಯಕ್ತಿಯ ಮೂಲಕ ಹೊಸ ಅರ್ಥಗಳ ಅಲೆಯನ್ನು ಎಬ್ಬಿಸುವ ಅಪರೂಪದ ಸಂಕಲನ. (ಎಷ್ಟು ಮತ್ತು ಹೇಗೆ ಹೇಳಬೇಕೆನ್ನುವುದನ್ನು ಅವರು ಗಣಿತದಿಂದ ಕಲಿತ ಹಾಗೆ ಬರೆದಿದ್ದಾರೆ!)


ಹಕ್ಕಿ ಗೂಡುಕಟ್ಟಿ ಮೊಟ್ಟೆಯಿಟ್ಟು ಕಾವು ಕೂತು 'ತನ್ನ ಮರಿಗಳನ್ನು /ಆಕಾಶಕ್ಕೆ ಅರ್ಪಿಸುವುದು' ಎಂಬ ವಿಶಿಷ್ಟ ದರ್ಶನ ಮಾಡಿಸುವ 'ಹಕ್ಕಿ ಆಕಾಶದ್ದು' ಎಂಬ ನಿಲುವು ಝೆನ್, ತಾವೊ ಮಾದರಿಗಳ ಹಾಗೆ ಚಿಂತನಶೀಲ. ಹಾಗೆಯೇ,

ಮಳೆಯನ್ನು
ಹಾಡುವುದು ಎಂದರೆ
ಕೊನೆ- ಮೊದಲಿರದ
ಒಂದು ಹರಿವನ್ನು
ನುಡಿಸುವುದು ಎಂದರ್ಥ

ಮಳೆಯನ್ನು
ನುಡಿಸುವುದು ಎಂದರೆ
ಕತ್ತರಿಸಿಹೋದ ಬೆರಳುಗಳಿಂದ
ಆಕಾಶದ ವೀಣೆಯನ್ನು
ನೇವರಿಸುವುದು ಎಂದರ್ಥ
(ಒಂದು ಮಳೆಯನ್ನು ಏನೆಲ್ಲಾ ಮಾಡಬಹುದು)
🦅

ಈಗ ನನಗರ್ಥವಾಗತೊಡಗಿದೆ
ನಿನ್ನನು ಮರೆಯುವುದೆಂದರೆ ಅದು ಸಾವೆಂದು
ನಾನು, ನೀನು ಮಾತ್ರವೆಂದು
(ವಿಲೀನ)

philosophical ಸಂಗತಿಗಳನ್ನು ಇಷ್ಟು ಸರಳವಾಗಿ ಹೀಗೂ ಹೇಳಬಹುದು!
*
ಹಕ್ಕಿ-ಆಕಾಶ, ನೀನು-ನಾನು, ನೀವು-ಆಕೆ.. ಹೀಗೆ ಸಂಬಂಧಗಳನ್ನು ನಿಸರ್ಗದ ಭಾವಪರವಾದ ಸಂಗತಿಗಳೊಡನೆ ಕಲ್ಪಿಸುತ್ತಾ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಧ್ವನಿಯಲ್ಲಿ ಹೇಳುವ ಕವಿತೆಗಳಿವು. ಈ ರೂಪಕಗಳು ಪರಸ್ಪರ ಪೂರಕವಾಗಿ ಸಂಬಂಧಗಳನ್ನು ಕಲ್ಪಿಸುತ್ತವೆ.

'ಅಹಲ್ಯೆ' ಕವಿತೆ ಹೀಗಿದೆ:

ಜೊತೆಯಲ್ಲಿ
ಬಾಳುವೆ ಮಾಡುತ್ತಿರುವವಳನ್ನು
ಹೂವೆಂದು
ಮೊದಮೊದಲು ಭಾವಿಸುವರು
ಬರುಬರುತ್ತಾ
ಅವಳನ್ನೊಂದು
ಕಲ್ಲನ್ನಾಗಿ ಗಣಿಸುವರು.

ಅಲ್ಲದಿದ್ದರೂ
ಅಸಡ್ಡೆಯ
ನಿಂದನೆಯ
ಅಸಂಖ್ಯ
ಅನುಭವಗಳ ಮೂಲಕ
ಹಾದು ಹೋಗುವಾಗ
ಯಾವುದೇ ಹೂವು
ಕಲ್ಲಾಗಿ ಬಿಡುವುದು

ಅಹಲ್ಯೆ-ಹೂವು-ಕಲ್ಲು ಎಷ್ಟು ಅದ್ಭುತವಾಗಿ ಅರ್ಥಗಳನ್ನು ಮಿಂಚಿಸುತ್ತಿವೆ.

'ಹೆಬ್ಬಂಡೆ ಮೌನ' ಕವನದಲ್ಲಿ ನೀನು ಮತ್ತು ನಾನು- ಇವುಗಳ ಪ್ರೇಮದ ಹಂಬಲವು-

'ನೀನು' ಆಗಮನಕ್ಕೆ ಕಾಯುವಾಗ- 'ನಾನು' ಕೋಗಿಲೆ
ನೋಟಕ್ಕೆ ಕಾಯುವಾಗ- ಪಾರಿವಾಳ
ಸ್ಪರ್ಶಕ್ಕೆ ಯತ್ನಿಸುವಾಗ- ಬೆಟ್ಟದ ನವಿಲು
ಒಲವಿಗೆ ಪರಿತಪಿಸುವಾಗ- ಅರಗಿಣಿ

ಆಗಿದ್ದಾಗ

ಇವಳ ನಿವೇದನೆಗೆ ಸಿಗುವುದು ಅವನ ಹೆಬ್ಬಂಡೆ ಮೌನ.

ಆ ಮೌನ ಕರಗಿಸಲು ಬರುವ
'ಇವಳ' ಕೋಗಿಲೆಗೆ- 'ಅವನ' ಮತಧರ್ಮಗಳ ಛೂ ಬಿಡುವಿಕೆ
ಪಾರಿವಾಳಕ್ಕೆ- ನೀತಿ ನಿಯತಿಗಳ ಛೂ ಬಿಡುವಿಕೆ
ನವಿಲಿಗೆ- ಹೀನ ಕುಲೀನಗಳ ಛೂ
ಅರಗಿಣಿಗೆ- ಹತಾಶೆ ಹೇಡಿತನಗಳ ಛೂ


ಮುಂದಿನದು suppression . ಅವನ ಹೆಬ್ಬಂಡೆ ಮೌನವು
ಕೋಗಿಲೆ -ಹಾಡಿಲ್ಲ-ಕೊರಳು ಬಿಗಿದಿದೆ
ಪಾರಿವಾಳ- ಹಾರುವುದಿಲ್ಲ- ರೆಕ್ಕೆ ಮುರಿದಿದೆ
ನವಿಲು- ಕುಣಿಯುವುದಿಲ್ಲ- ಗರಿ ತರಿದಿದೆ
ಅರಗಿಣಿ - ಉಲಿಯುವುದಿಲ್ಲ- ಧ್ವನಿ ಉಡುಗಿಸಿದೆ

ಕಡೆಯ ಭಾಗದ ಹೋಲಿಕೆಗಳು-

ಕಣ್ಣಿಗೆ ತಂಪಾಗದ ಕುಸುಮ - ನಿಹಾರಿಕೆ
ದಾಹ ತಣಿಸದ ನದಿ- ಸಾಗರದ ಉಪ್ಪು ನೊರೆ
ನೆರಳು ಕೊಡದ ಮರ- ಅಗ್ನಿಮುಖ
ಮಹಾತ್ಮ- ಹಾಡು

ಹೀಗೆ ಹೇಳುತ್ತಾ ಪ್ರೀತಿಯನ್ನು ಉರಿದು ತೀರುವ ಮೇಣದ ಬತ್ತಿ ಎಂದು 'ಅದು ಇರುವಷ್ಟು ಕಾಲ ಮಾತ್ರ ಬೆಳಕು' ಎಂಬ ನಿಲುವನ್ನು ತಾಳುತ್ತದೆ .

ಈ ದೀರ್ಘ ಕವಿತೆಯಲ್ಲಿ ಸ್ಪಷ್ಟತೆ ಇದೆ. ಪ್ರತಿಮೆ- ರೂಪಕಗಳ ಚಕ್ರಗತಿಯ ಚಲನೆಯಿದೆ. ಹೆಣ್ಣಿನ ಪ್ರೀತಿಯ ಎದುರಿಗಿರುವ ಗಂಡಿನ ಪ್ರೀತಿಯನ್ನು ಮುಖಾಮುಖಿಯಾಗಿಸಿ ಆರ್ಭಟಿಸದೆ ಸರಳವಾಗಿ ಹೇಳಲಾಗಿದೆ.
*



ಮನುಷ್ಯನ ಗುಣಗಳನ್ನು ನಿಸರ್ಗದ ಅಂಶಗಳೊಂದಿಗೆ ಹೋಲಿಸುವ , ಸಂಬಂಧ ಕಲ್ಪಿಸುವ ಈ ಕ್ರಮದಲ್ಲಿ ಅಸಂಗತತೆಯೂ ಇದೆ

'ವಿರಾಮ' ಕವಿತೆಯಲ್ಲಿ

ಸಮುದ್ರ - ನೋವು
ಬಾಂದಳ- ತಿರಸ್ಕಾರ
ಹಾದಿ- ವೇಷ
ಕವಿತೆ-ಸಾವು

ಹೀಗೆ.

ಒಬ್ಬಂಟಿಯಾಗಿ
ಈಜಬೇಕಿರುವ ಸಮುದ್ರಗಳಿವೆ
ಯಾರೂ ಜೊತೆಗಿಲ್ಲದೆ
ಯಾವ ಅವಲಂಬನೆಯೂ ಇಲ್ಲದೆ

ಕೆಲ ನೋವುಗಳು ಅಂತೆಯೇ
ಹಂಚಿಕೊಳ್ಳಲು ಆಗುವುದಿಲ್ಲ
ಅನುಭವಿಸಲೇಬೇಕು
(ವಿರಾಮ)
*
ಹಳ್ಳಿಯ ಸಾಮಾನ್ಯ ಮಹಿಳೆಯೊಬ್ಬಳು ಹೇಳಿಕೊಳ್ಳುತ್ತಿರುವ ಕವಿತೆಗಳಂತಿರುವ ಇವು ಮೊಬೈಲ್ ಫೋನುಗಳು ಕಾಲಿಡುವುದಕ್ಕೂ ಹಿಂದಿನ ಕಾಲದ ಮುಗ್ಧತೆಯನ್ನು ಉಳಿಸಿಕೊಂಡಿವೆ. ಕೇವಲ ಗಂಡಿನ ಕೊರತೆಗಳನ್ನು ಶೋಧಿಸುವ, ಆಕ್ರೋಶ ವ್ಯಕ್ತಪಡಿಸುವ ಮಾದರಿಯಲ್ಲ ಇವು.

ಕಿರುಗುಟ್ಟಿದ ತೊಟ್ಟಿಲ ಸದ್ದಿಗೆ
ಎಚ್ಚೆತ್ತು ಬರುವಷ್ಟರಲ್ಲಿ
ರಚ್ಚೆ ಹಿಡಿದ ಮಗಳ
ಹಗುರವಾಗಿ ಮೇಲೆತ್ತಿ
ರಮಿಸಿ, ಮುತ್ತಿಟ್ಟು
ಎದೆಗೆ ಹಾಕಿ
ಹಾಲೂಡಿಸುತ್ತಾ
ಬರೆದ ಸಾಲುಗಳು
ಹೆಂಗಸರು ಬರೆದ ಪದ್ಯಗಳು
ಯಾವಾಗಲೂ
ಅಕ್ಕರೆಯನು ಜಿನುಗಿಸುತ್ತವೆ. (ಹೆಂಗಸರ ಪದ್ಯ)

ಇನ್ನೇನು ಪೂರ್ಣ ವಾಚ್ಯವಾಗಿಬಿಡಬೇಕು ಎನ್ನುವಷ್ಟರಲ್ಲಿ ಕೊನೆಯ ಸಾಲು mutation ಗೆ ಒಳಗಾಗಿ ಕವಿತೆಯ ಅರ್ಥ ಮತ್ತು ಲಯವನ್ನು ಬೇರೆ ಕಡೆಗೆ ಕೊಂಡೊಯ್ಯುತ್ತದೆ.

ಅಡುಗೆ ಮನೆಯ ಪ್ರಯೋಗಗಳು ಇದುವರೆಗೆ ಯಾರೂ ಬಳಸದ ಪದಾರ್ಥಗಳನ್ನು ಮತ್ತು ವಿಧಾನಗಳನ್ನು ಒಳಗೊಂಡಿವೆ:

ಕನಸುಗಳೇನಾದರೂ
ಬಾಕಿ ಉಳಿದಿದ್ದರೆ ಅವನ್ನು
ಸಣ್ಣದಾಗಿ ಹೆಚ್ಚಿ
ಆ ಕಣ್ಣೀರಿನಲ್ಲಿ ಹಾಕಿರಿ.

ಕೊನೆಗೊಮ್ಮೆ ಹದಕ್ಕೆ ಬಂದಾಗ
ಸಿಡಿದು ಬೀಳುವ ಕೆಲವು
ಪ್ರತಿಭಟನೆಯ ಸ್ವರಗಳು ಕೇಳಿರಬಹುದು
ಪರವಾಗಿಲ್ಲ
ಸ್ವಲ್ಪ ಹೊತ್ತು ಮುಚ್ಚಿಟ್ಟಿರಿ
(ಹೊಸ ರುಚಿಯ ಅಡುಗೆಗೊಂದು ಟಿಪ್ಪಣಿ)

*
ಮಂಜುಳಾ ಹಿರೇಮಠ ಅವರು ಗಂಡು-ಹೆಣ್ಣಿನ ಸಂಬಂಧ, ದಾಂಪತ್ಯದ ಬದುಕು- ಇವನ್ನು matured ಆದ ಕೋನದಲ್ಲಿ ಅಳೆಯುತ್ತಾರೆ. ಅದರ ವೈರುಧ್ಯವನ್ನೂ ಹುಸಿತನವನ್ನೂ ತೆರೆದಿಡುತ್ತಾರೆ. ಆದರ್ಶವನ್ನೂ.

ನಿನ್ನ ಮಂದಿರವ
ನೀ ಬಿಟ್ಟು ಬಾ
ನನ್ನ ಗೋಪುರವ
ನಾ ಬಿಟ್ಟು ಬರುವೆ

ನಿನ್ನೊಳಗಿನ ಬೇಹುಗಾರಿಕೆಯ
ಬಿಟ್ಟು ಬಾ
ನನ್ನೊಳಗಿನ ಶಂಕೆಗಳ
ಬಿಟ್ಟು ಬರುವೆ

ನೀನು ನೀನಾಗಿಯೇ
ನಾನು ನಾನಾಗಿಯೇ
ನಾವೆಂಬ ಪ್ರೇಮಕ್ಕೆ
ಪ್ರತಿಮೆಯಾಗೋಣ
(ಪ್ರತಿಮೆಯಾಗೋಣ ಬಾ)
*

ಸ್ವಾತಂತ್ರ್ಯಕ್ಕಾಗಿನ ಹಂಬಲ , ಪಡೆಯುವ ಸ್ವಾತಂತ್ರ್ಯವನ್ನು ಪ್ರಕೃತಿಯ ಸಹಜ ಚೆಲುವಿಕೆಗಳ ಜೊತೆ ಅನುಭವಿಸಬೇಕೆಂಬ ವಾಂಛೆ ಹಲವು ಕವಿತೆಗಳಲ್ಲಿವೆ:

ನಾನು ಬರೆಯುವಾಗಲೆಲ್ಲಾ
ಒಬ್ಬಳು ವಸಂತದೊಡನೆ
ಮಾತನಾಡುವ ಹಾಗೆ
ಕಣ್ಣುಗಳನ್ನು ಅರಳಿಸಿ
ನಾಸಿಕವನ್ನು ಮೇಲೇರಿಸಿ
ನನಗೊತ್ತರಿಸಿ ಕೂರುತ್ತಾಳೆ
ಅವಳ ಪ್ರೇಮದ ಹೊತ್ತಗೆಯನ್ನು
ತೆರೆದಿಡುತ್ತಾಳೆ
(ನಾನು ಬರೆಯುವಾಗ)

ಆಗಾಗ
ಅವಳ ಕನಸಿನಲ್ಲೊಂದು ಕೊಕ್ಕರೆ
ಅಪ್ಪಣೆ ಇಲ್ಲದೆ ಪ್ರವೇಶಿಸುತ್ತದೆ 
ಅವಳ ದೇಹ ಆಗ
ಮರಿಮೀನುಗಳು ಓಡಾಡುವ 
ಕಿರುತೊರೆಯಾಗುತ್ತದೆ
ಆ ಕಿರುತೊರೆಯಿಂದ
ಕುಣಿದು ಕುಪ್ಪಳಿಸುವ ಮೀನುಗಳನ್ನು 
ತನ್ನ ಉದ್ದದ ಚೂಪು ಕೊಕ್ಕಿನಿಂದ
ಕೊಕ್ಕರೆ ಕುಟುಕಿ ಕುಟುಕಿ ತೆಗೆಯುತ್ತದೆ 
ಬಳಿಕ ಹಾರಿ ಮರೆಯಾಗುತ್ತದೆ.
(ಮತ್ತೊಬ್ಬಳು)
*

ಮಂಜುಳಾ ಹಿರೇಮಠ ಅವರ ಸ್ತ್ರೀವಾದದ ಮಾದರಿ ಹೀಗಿದೆ:

ಅವಳ ಕಾವ್ಯದಲ್ಲಿ 
ಬಾಹ್ಯ ಪ್ರಪಂಚ ಇಲ್ಲವೆಂದು 
ಸಾರ್ವತ್ರಿಕ ವಸ್ತುಗಳಿಲ್ಲವೆಂದು
ಹೊರಗೆ
ಜನಜಂಗುಳಿಯಿಂದೊಬ್ಬ
ಪುರುಷ ವಿಮರ್ಶಿಸುವಾಗ
ಹೊರಗಿನಿಂದ ಈ ಬಾಗಿಲಿಗೆ 
ಬೀಗ ಜಡಿದವರು ಯಾರೆಂದು
ಒಳಗೆ ಕವಿಯೊಬ್ಬಳು
ಬಾಗಿಲನ್ನು ತಟ್ಟುತ್ತಿರುತ್ತಾಳೆ

ಕಾವ್ಯದೆಡೆಗೆ ಕವಿಯೊಬ್ಬ
ನಡೆವ ದೂರವಲ್ಲ
ಕವಿಯೊಬ್ಬಳು ನಡೆವ ದೂರ!
(ಕವಿಯೊಬ್ಬಳು ನಡೆವ ದೂರ)
*

ಏಕಾಗ್ರತೆಯೇ ಇಲ್ಲದ ಈ ಕಾಲದಲ್ಲಿ ಹಳೆಯ ಏಕಾಗ್ರತೆಯನ್ನು ಸೋರಿಹೋಗದ ಹಾಗೆ ನೋಡಿಕೊಂಡು ಹೊಸ ನುಡಿಗಟ್ಟಿನ ಅಪರೂಪದ ಕವಿತೆಗಳನ್ನು ಕೊಟ್ಟಿರುವ ಮಂಜುಳಾ ಹಿರೇಮಠ ಅವರಿಗೆ ಅಭಿನಂದನೆಗಳು.
*


ಕಾಜೂರು ಸತೀಶ್