ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, December 6, 2020

ಹಿಂಡುಕುಳ್ಳೆ ಕಥಾಸಂಕಲನದ ಕುರಿತು

ಅಮರೇಶ ಗಿಣಿವಾರರ 'ಹಿಂಡೆಕುಳ್ಳು' ಓದಿದೆ. ಹೊಸತಲೆಮಾರಿನ ಒಬ್ಬ ಅನನ್ಯ ಕತೆಗಾರನ ದರ್ಶನವಾಯಿತು. ನಿರ್ದಿಷ್ಟ ಕೇಂದ್ರವನ್ನಿಟ್ಟುಕೊಳ್ಳದೆ ಕಥನಕ್ರಮದ ಕುರಿತು ತಲೆಕೆಡಿಸಿಕೊಳ್ಳದೆ ಹೇಳುವ ವಿವರಗಳೆಲ್ಲವನ್ನೂ ಕತೆಯಾಗಿಸುವ ಪ್ರತಿಭಾವಂತ. ಅವು ಕೊಲಾಜುಗಳ ಹಾಗೆ ಕಾಣುತ್ತವೆ. ಆದರೆ ಅವುಗಳ ಒಟ್ಟು ನೋಟ ಮಾತ್ರ ದಟ್ಟ ಹಳ್ಳಿಯದು.


ಗಂಡೊಬ್ಬನು ಹಡೆದ ಹೆಣ್ಣಿನ ಕತೆಗಳಿವು. ಇಲ್ಲಿನ ಕತೆಗಳ ಆತ್ಮ- ಹೆಣ್ಣು. ಹೆಣ್ತನವನ್ನು ಪುರುಷ ಯಾಜಮಾನಿಕೆಯ ಜೊತೆಗೆ ಮುಖಾಮುಖಿಯಾಗಿಸಿ ನೋಡುತ್ತವೆ.



ರಾಯಚೂರಿನ ದೇಸೀ ಬದುಕು ಇಲ್ಲಿ ಕತೆಯಾಗಿದೆ.
ಪ್ರೇಮ, ಕಾಮ, ಹಸಿವು, ಬಾಯಾರಿಕೆ,ಮದುವೆ, ಕುಲಕಸುಬು, ಕೂಲಿ, ಹಿಂಸೆ, ಶೋಷಣೆ, ಬಡತನ, ಕಾಯಿಲೆ, ಸಾವು, ಮೌಢ್ಯ, ಕನಸು, ಮುಗ್ಧತೆ, ಅಸಹಾಯಕತೆ- ಈ ಕತೆಗಳ ಒಟ್ಟು ಸಾರ. ಕೇವಲ ಕತೆ ಹೇಳುವುದರ ಜೊತೆಗೆ ಎಲ್ಲಿಯೂ ನೇರವಾಗಿ ಬಡಬಡಿಸದ ವೈಚಾರಿಕ ನಿಲುವುಗಳು ಇಷ್ಟವಾಗುತ್ತವೆ. ಈ ಕಾಲದಲ್ಲೂ ಇಂತಹ ಕರುಳುಹಿಂಡುವ ಬಡತನವನ್ನು , ಮುಗ್ಧತೆಯನ್ನು ಬಾಳುತ್ತಿರುವ ನಮ್ಮ ನೆಲದ ದರ್ಶನವಾಗುತ್ತದೆ.


ಕತೆಗಳು ಮೈಪಡೆದ ಪ್ರಾದೇಶಿಕ ಭಾಷೆಯಂತೂ ಒಂದು ಸುದೀರ್ಘ ಓದನ್ನು ಬೇಡುವಂತೆ ಮಾಡುವುದರ ಜೊತೆಗೆ ಕನ್ನಡದ ವಿಶಿಷ್ಟತೆಯನ್ನು ಸಾರುತ್ತದೆ. ಕನ್ನಡ ಸಣ್ಣಕತೆಗಳ ಪರಂಪರೆಯ ಗಮನಿಸಬೇಕಾದ ಕತೆಗಳ ಸಾಲಿಗೆ ಇವು ನಿಲ್ಲುತ್ತವೆ.

ವಿಳಾಸ ಕೇಳದೆ, ಪುಸ್ತಕ ತಲುಪಿರುವ ಬಗ್ಗೆಯೂ ವಿಚಾರಿಸದೆ, ಓದಿ ಆಯಿತಾ ಎನ್ನದೆ ತಮ್ಮ ಕತೆಗಳ ಹಾಗೆ ಮುಗ್ಧತೆಯನ್ನು ತೋರಿಸಿದ ಅಮರೇಶ ಗಿಣಿವಾರರಿಗೆ ಇಂತಹ ಒಳ್ಳೆಯ ಪುಸ್ತಕವನ್ನು ಕಳುಹಿಸಿ ಓದಲು ಅವಕಾಶ ಕಲ್ಪಿಸಿದ್ದಕ್ಕೆ ಪ್ರಣಾಮಗಳು.

*


ಕಾಜೂರು ಸತೀಶ್ 

No comments:

Post a Comment