ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, December 25, 2021

ಗುಂಡಿ


ಗುಂಡಿ-೧
----------

ಹಾವುಗಳ ಹಾವಳಿ ಹೆಚ್ಚಾಗಿ ಕಪ್ಪೆಗಳು ರಸ್ತೆಯ ಚಿಕ್ಕ ಗುಂಡಿಗಳಲ್ಲಿ ಮನೆಮಾಡಿದ್ದರಿಂದ ಚಕ್ರಕ್ಕೆ ಸಿಲುಕಿ ಅವುಗಳ ಸಂತತಿ ವಿನಾಶದತ್ತ ಸಾಗಿತು. ಕಡೆಗೆ ರಸ್ತೆಯ ದೊಡ್ಡ ಗುಂಡಿಗಳಲ್ಲಿ ಮನೆಮಾಡಿದವು.

ನಾಯಕ ಕಪ್ಪೆ ಹೇಳಿತು- 'ಈಗ ಸತ್ತರೆ ನಾವಷ್ಟೇ ಸಾಯುವುದಿಲ್ಲ!'

*

ಗುಂಡಿ-೨
----------

ರಸ್ತೆಯ ದೊಡ್ಡ ಗುಂಡಿಗಳು ಆಶ್ರಯ ನೀಡಿದ ಖುಷಿಗೆ ಕಪ್ಪೆಗಳೆಲ್ಲಾ ಸೇರಿ 'ಗೆಲ್ಲಿಸಿದವರಿಗೆ'  ಸನ್ಮಾನ ಸಮಾರಂಭವನ್ನು ಏರ್ಪಡಿಸಿದವು.

*



ಕಾಜೂರು ಸತೀಶ್

Friday, December 24, 2021

'ಕಣ್ಣಲ್ಲಿಳಿದ ಮಳೆಹನಿ'ಯ ಕುರಿತು ದಾದಾಪೀರ್ ಜೈಮನ್



ಕಾಜೂರು ಸತೀಶ್ ಅವರ 'ಕಣ್ಣಲ್ಲಿಳಿದ ಮಳೆಹನಿ' ಕವನಸಂಕಲನ ಓದಿದೆ. ಸಹಜತೆಯನ್ನೇ ಜೀವವಾಗಿಸಿಕೊಂಡ ನಿರಾಭರಣ ಸೌಂದರ್ಯವಿದೆ ಈ ಕವಿತೆಗಳಲ್ಲಿ. 'ಒಂದೇ ಒಂದು ಸಾಲು, ಪದ, ಅಕ್ಷರ, ಉಪಮೆ, ರೂಪಕ, ಪ್ರತಿಮೆಗಳನ್ನು ಅನಗತ್ಯವಾಗಿ ಬಳಸಲಾರೆ ಎಂಬ ಹಠ ತೊಟ್ಟಂತಿದೆ.' ಎಂಬ ತೀರ್ಪುಗಾರರ ಅಭಿಪ್ರಾಯಕ್ಕೆ ಮುದ್ರೆಯೊತ್ತುವ ಹಾಗೆ ಇಲ್ಲಿನ ಎಲ್ಲಾ ಕವಿತೆಗಳಿವೆ.

ಒಂದು ಆತ್ಯಂತಿಕ ವಿಷಾದವನ್ನು ದಾಟಿಸುವಾಗಲೂ ಕವಿ ತುಂಬಾ ಸಂಯಮದಿಂದ ದಾಟಿಸುತ್ತಾರೆ. ಈ ಸಂಕಲನದಲ್ಲಿ ಕವಿತೆಯ ಕುರಿತಾದ ಹಲವು ಕವಿತೆಗಳಿವೆ. ಕವಿತೆಯೆಂದರೇನು ಎಂಬ ಶೋಧದ ಜೊತೆಗೆ 'ಸಾವು' ಈ ಕವಿಯನ್ನು ತೀವ್ರವಾಗಿ ಕಾಡಿದೆ. ನೆರಳಂತೆ ಸುಳಿಯುವ ಇವೆರಡನ್ನೂ ಒಂದು ದಿವ್ಯಮೌನದ ಏಕಾಂತದಲ್ಲಿ ಎದುರುಗೊಂಡು ಬರೆದ ಹಾಗಿವೆ. ಅದರ ತೀವ್ರತೆ ಪುಸ್ತಕ ಓದಿ ಮುಗಿಸಿದ ಮೇಲೂ ನಮ್ಮೊಳಗೆ ಕುಳಿತುಬಿಡುವಷ್ಟು ಶಕ್ತವಾಗಿವೆ ಎನಿಸಿದೆ. ಅಂತೆಯೇ ಬದುಕಿನ ಹಾಗೂ ಸಮಾಜದ ದಂದುಗಗಳನ್ನು ಹೇಳುವಾಗ ಕವಿ ವಾಚಾಳಿಯಾಗದೆ ತಣ್ಣಗೆ ಸಾತ್ವಿಕ ಪ್ರತಿರೋಧದ ದನಿಯಾಗಿಯೆ ಹೇಳುತ್ತಾರೆ.

ಕವಿತೆಗಳು ಇಷ್ಟವಾದವು.



- ದಾದಾಪೀರ್ ಜೈಮನ್

Sunday, December 19, 2021

ಕಣ್ಣಲ್ಲಿಳಿದ ಮಳೆಹನಿಯ ಕುರಿತು ಶಿವಾನಂದ ಉಳ್ಳಿಗೇರಿ

ನಿಮ್ಮ ಕವನ ಸಂಕಲನ ಕಣ್ಣಲ್ಲಿಳಿದ ಮಳೆಹನಿ ಓದಿದೆ.
ತುಂಬಾ ಒಳ್ಳೆಯ ಕವಿತೆಗಳನ್ನು ಬರೆದಿರುವಿರಿ ಮೊದಲಿಗೆ ತಮಗೆ ಅಭಿನಂದನೆಗಳು.

ತುಂಬಾ ಸೊಗಸಾದ ಆಕರ್ಷಕ ಮುಖಪುಟ ಹಾಗೂ ಶೀರ್ಷಿಕೆ.

ಪುಟ ತೆರೆದು ಒಂದೊಂದೆ ಕವಿತೆಗಳನ್ನು ಓದಲಾರಂಭಿಸಿದರೆ ನಿರಂತರವಾಗಿ ಓದಿಸಿಕೊಂಡು ಹೋಗುವ ಉತ್ತಮ, ಅರ್ಥಪೂರ್ಣ ವಿಶಿಷ್ಟವಾದ ಕವಿತೆಗಳು.
ಕವಿತೆಯ ವಿಷಯ, ಕಾವ್ಯ ಶೈಲಿ, ಭಾಷೆ ಎಲ್ಲವೂ ತುಂಬಾ ಚೆನ್ನಾಗಿದೆ. ಎಲ್ಲ ಕವಿತೆಗಳನ್ನು ಓದಿ ಖುಷಿಯಾಯ್ತು.

ನಿಮ್ಮಿಂದ ಇನ್ನಷ್ಟು ಕವನ ಸಂಕಲನಗಳು ಮೂಡಿ ಬರಲಿ
ಶುಭವಾಗಲಿ ತಮಗೆ
💐💐💐💐💐
*

ಶಿವಾನಂದ ಉಳ್ಳಿಗೇರಿ

ಕವಿ, ಶಿಕ್ಷಕ
ಬೈಲಹೊಂಗಲ, ಬೆಳಗಾವಿ.

ಕಣ್ಣಲ್ಲಿಳಿದ ಮಳೆಹನಿಯ ಕುರಿತು ಡಾ.ಎಂ.ಡಿ.ಒಕ್ಕುಂದ




ಕಾಡು ಹಾಗೂ ಪ್ರಕೃತಿ (ನಾಶದ ವಿಷಾದ), ಕವಿತೆ ಮತ್ತು ಸಾವು ಇವರ ಸೃಜನಶೀಲತೆಯ ಕೇಂದ್ರ ಕಾಳಜಿಯಾಗಿವೆ. ಇವುಗಳೊಂದಿಗೆ ವರ್ತಮಾನದ ತಲ್ಲಣಗಳು, ಬದುಕನ್ನು ಕುರಿತಾದ ತಾತ್ವಿಕ ಜಿಜ್ಞಾಸೆಗಳೂ ಸೇರಿಕೊಂಡಿವೆ. ಇವು ಒಂದರೊಳಗೊಂದು ಬೆಸೆದೂ ಹೋಗಿವೆ. ಕನ್ನಡ ಕಾವ್ಯಕ್ಕೆ ಇವು ಹೊಸ ಸಂಗತಿಗಳೇನಲ್ಲ. ಆದರೆ ಇಲ್ಲಿಯ ಎಲ್ಲ ಕವಿತೆಗಳೂ ತಮ್ಮ ಸಂವೇದನಾಕ್ರಮ, ಪ್ರತಿಮಾವಿಧಾನ ಹಾಗೂ ಭಾಷಿಕ ಬಳಕೆಯ ಭಿನ್ನತೆ, ಸ್ವಂತಿಕೆ ಹಾಗೂ ತಾಜಾತನಗಳಿಂದ ಈ ಕೇಂದ್ರಗಳಿಗೆ ಹೊಸ ರೂಪಧಾರಣೆ ನೀಡಿವೆ. ಆಕರ್ಷಣೆಯನ್ನು ಸೃಷ್ಟಿಸಿವೆ. ಕಾಡನ್ನು ಕೇಂದ್ರದಲ್ಲಿರಿಸಿಕೊಂಡ ಕವಿತೆಗಳಂತೂ ಕನ್ನಡ ಕಾವ್ಯಕ್ಕೆ ಹೊಸದಾದ ಗ್ರಹಿಕೆಗಳನ್ನು, ಹೊಚ್ಚಹೊಸ ಪ್ರತಿಮೆಗಳನ್ನು ಹಾಗೂ ಭಾಷಿಕ ಆಯಾಮಗಳನ್ನು ಸೇರಿಸುವಷ್ಟು ಶಕ್ತಿಶಾಲಿಯಾಗಿವೆ. ಸಾವನ್ನು ಕುರಿತ ಕವಿತೆಗಳು ಭಯ ತಲ್ಲಣ ಆಘಾತ ನಿರಾಸೆಗಳಿಗಿಂತ ಪ್ರಬುದ್ಧವಾಗಿ ಸಾವನ್ನು ಕುರಿತಂತೆ ತಾತ್ವಿಕ ಜಿಜ್ಞಾಸೆಗೆ ತೊಡಗುತ್ತವೆ. ‘ಕವಿತೆ’ ಕೇಂದ್ರಿತ ಕವಿತೆಗಳು ಸೃಜನಶೀಲತೆಯ ಎಚ್ಚರದ ದಾರಿಗಳನ್ನು ಶೋಧಿಸುತ್ತವೆ.

ಅತಿಭಾವುಕತೆ, ಭಾವಾವೇಶ, ವಾಗಾಡಂಬರ, ಉಪಮೆ ರೂಪಕ ಪ್ರತಿಮೆಗಳನ್ನು ಕಟ್ಟುವ ತಿಣುಕಾಟಗಳು ವಿಜೃಂಭಿಸುವುದಿಲ್ಲ. ಒಂದು ಸಾಲು, ಒಂದು ಪದ, ಒಂದು ಅಕ್ಷರ, ಒಂದೇ ಒಂದು ಉಪಮೆ ರೂಪಕ ಪ್ರತಿಮೆಗಳನ್ನು ಅನಗತ್ಯವಾಗಿ ಬಳಸಲಾರೆ ಎಂಬ ಹಠ ತೊಟ್ಟಂತಿದೆ. ಇದು ಹೊಸತಲೆಮಾರಿಗೆ ಅಪರೂಪದ ಗುಣ.
*


- ಎಂ.ಡಿ.ಒಕ್ಕುಂದ

------------------------------------
ಕಣ್ಣಲ್ಲಿಳಿದ ಮಳೆಹನಿ
ಲೇ : ಕಾಜೂರು ಸತೀಶ್
ಬೆಲೆ : 80 ರೂ.

ಸಂಗಾತ ಪುಸ್ತಕ
8431113501

Saturday, November 13, 2021

ಯಾರು?

ಯುವಕ- ಯುವತಿಯರು ಉದ್ಯಾನವನದಲ್ಲಿ ಕುಣಿದಾಡುತ್ತಿದ್ದರು. ಸುಮಾರು ದೂರದವರೆಗೆ ಅವರ ಕೂಗಾಟ ಕೇಳಿಸುತ್ತಿತ್ತು.

ಕೋಟು ಧರಿಸಿ ಎದುರಿಗೆ ಬಂದ ವೈದ್ಯರು ಕೂಗಾಡುತ್ತಿರುವುದು ಯಾರೆಂದು ನನ್ನನ್ನು ಕೇಳಿದರು.

'ಹಾರ್ಮೋನುಗಳು' ಮನಸ್ಸಿನಲ್ಲೇ ಹೇಳಿಕೊಂಡೆ.
*
ಕಾಜೂರು ಸತೀಶ್ 

ಕನಸು

ಅಪ್ಪ ತೀರಿಕೊಂಡ ಕನಸು ಕಂಡೆ
ಕನಸ ತುಂಬ ಅತ್ತುಬಿಟ್ಟೆ
ಎಚ್ಚರಗೊಂಡಾಗ
ಅಪ್ಪ ತೀರಿ ವರ್ಷವಾಗಿತ್ತು
*
ಕಾಜೂರು ಸತೀಶ್ 

Thursday, October 7, 2021

ರಾಜ

ಪ್ರಾಮಾಣಿಕನಿಗೆ ಅಧಿಕಾರ ಸಿಕ್ಕಿತು. ಅವನು ವಾಹನವನ್ನೇರುವಾಗ , ಭೋಜನಾಲಯದಲ್ಲಿ ತಿಂಡಿ ತಿನ್ನುವಾಗ ಒಬ್ಬನೇ ಇರುತ್ತಿದ್ದ. ಅಲ್ಲಿ ಗೆಳೆಯರು ಸಿಕ್ಕಿದರೆ ತಾನೇ ಹಣ ಕೊಡುತ್ತಿದ್ದ. ದಾರಿಯಲ್ಲಿ ನಡೆದುಹೋಗುವಾಗ ಒಬ್ಬನೇ ಇರುತ್ತಿದ್ದ.

ಅವನಿಂದ ಏನೂ ತೊಂದರೆಯಾಗುವುದಿಲ್ಲ ಎಂದುಕೊಂಡ ಪ್ರಜೆಗಳು ಸೋಮಾರಿಗಳಾದರು. ಕಂಡರೂ ಕಾಣದಂತೆ ವರ್ತಿಸಿದರು. ಪ್ರಾಮಾಣಿಕವಾಗಿ ದುಡಿಯುವವರು ಮಾತ್ರ ಎಂದಿನಂತೆ ದುಡಿಯತೊಡಗಿದರು.

ಒಂದು ದಿನ ಅವನುಅಧಿಕಾರ ಕಳೆದುಕೊಂಡ.

ಆ ಸ್ಥಾನಕ್ಕೆ ಮತ್ತೊಬ್ಬ ಬಂದ. ಹತ್ತಾರು ಸಾಮ್ರಾಜ್ಯಗಳನ್ನು ಮುಳುಗಿಸಿ ಬಂದಿದ್ದ. ಸುದ್ದಿಯನ್ನು ಮೊದಲೇ ಅರಿತಿದ್ದ ಪ್ರಜೆಗಳು ವಾಹನದಿಂದ ಇಳಿಯುವಾಗಲೆಲ್ಲ ಹಾರ ಹಾಕಿ ಸ್ವಾಗತಿಸುತ್ತಿದ್ದರು. ಸೀದಾ ಖಾನಾವಳಿಗೆ ಕರೆದುಕೊಂಡು ಹೋಗಿ ಬೇಕಾದ್ದನ್ನೆಲ್ಲ ತಿನ್ನಿಸುತ್ತಿದ್ದರು. ಅವನ ಬೆನ್ನಿಗೆ ಹತ್ತಾರು ಮಂದಿ ಇದ್ದೇ ಇರುತ್ತಿದ್ದರು. ಅವರೆಲ್ಲರೂ ಕಳ್ಳ-ಖದೀಮರೇ ಆಗಿರುತ್ತಿದ್ದರು.

ಅವನು ಜೀವಮಾನದಲ್ಲಿ ಒಮ್ಮೆಯೂ ಬಿಡಿಗಾಸು ಬಿಚ್ಚಿರಲಿಲ್ಲ.

ದಾರಿಯ ಮೇಲೆ ಅವನ ಹೆಜ್ಜೆಗಳು ಬೀಳುತ್ತಿರಲಿಲ್ಲ. ಇವನಿಗಾಗಿ ವಾಹನಗಳು ಸಾಲುಗಟ್ಟಿ ನಿಂತಿರುತ್ತಿದ್ದವು. ಇಲ್ಲದಿದ್ದರೆ ಇವನೇ ಆದೇಶ ಹೊರಡಿಸುತ್ತಿದ್ದ. ತಟ್ಟೆ ತೊಳೆಯಲು ಒಬ್ಬನನ್ನು ನೇಮಕ ಮಾಡಿಕೊಂಡಿದ್ದ. ಕಪ್ಪ ವಸೂಲಾತಿಗೆ ಅವನಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಇಸ್ತ್ರಿ ಮಾಡಲು ಒಬ್ಬ, ಚಾಡಿ ಹೇಳಲು ಒಬ್ಬ, ಬಹುಪರಾಕ್ ಹೇಳಲು ಒಬ್ಬ....ಹೀಗೆ.

ತಮಗೆ ಶಿಕ್ಷೆಯಾಗುವ ಭಯದಲ್ಲಿ ಪ್ರಜೆಗಳು ಅವನನ್ನು ಹೆಗಲ ಮೇಲೆ ಹೊತ್ತು ನಡೆದರು. ಎಲ್ಲರ ಮೇಲೂ ಇಲ್ಲದ ತೆರಿಗೆ ವಿಧಿಸಿದ. ತನ್ನನ್ನು ವಿರೋಧಿಸುತ್ತಿದ್ದ ಕೆಲವೇ ಕೆಲವರ ಮೇಲೆ ಕಣ್ಣಿರಿಸಲು ಸೇವಕರನ್ನು ನಿಯೋಜಿಸಿದ; ಅವರಿಂದ ವರದಿ ಪಡೆಯುತ್ತಿದ್ದ.  ಓದಲು, ಬರೆಯಲು ತಿಳಿಯದಿದ್ದರೂ ಮಹಾಪಂಡಿತನಾದ. ಹೊಗಳುವವರಿಗೆ ಕೆಲಸದಿಂದ ವಿನಾಯಿತಿ ನೀಡಿದ. ರಾಜ್ಯವನ್ನೇ ಲೂಟಿಮಾಡಿದ. ಅದು ಕಾಣದಿರಲೆಂದು ಎಲ್ಲ ಊರುಗಳನ್ನೂ ಸಿಂಗರಿಸುವಂತೆ ಮಾಡಿದ. ಎಲ್ಲ ಸಭೆಗಳಲ್ಲಿ 'ಪುಣ್ಯ- ಪಾಪ', 'ನ್ಯಾಯ- ಅನ್ಯಾಯ'ಗಳ ಕುರಿತು ಮಾತನಾಡಿದ.

ಜೀವಭಯದಿಂದ ಪ್ರಜೆಗಳು ಅವನ ಕಾಲಿಗೆ ಬಿದ್ದರು. 
ಅವನು ಕೇಳಿದ್ದೆಲ್ಲವನ್ನೂ ಕೊಟ್ಟರು. ಅವನು ಹೇಳಿದ್ದಕ್ಕೆಲ್ಲಾ ಹೂಂಗುಟ್ಟಿದರು.

ಇಷ್ಟಾದರೂ ಪ್ರಾಮಾಣಿಕ ವರ್ಗವು ಅವನ ನಿದ್ದೆಯಲ್ಲಿ ಒಮ್ಮೊಮ್ಮೆ  ಬಂದು  ಕಾಡತೊಡಗಿದರು. 
*



ಕಾಜೂರು ಸತೀಶ್ 




Wednesday, October 6, 2021

ನ್ಯಾಯ

ಜಿಂಕೆಗೆ ಅನ್ಯಾಯವಾದಾಗ ನ್ಯಾಯ ಕೋರಿ
ನೂರಾರು ಮೈಲಿ ಕ್ರಮಿಸಿ ನ್ಯಾಯಾಧಿಪತಿಯಾಗಿದ್ದ
ಬಸವನಹುಳುವಿಗೆ ಹೇಳಿತು. ನ್ಯಾಯ ಕೊಡಿಸುತ್ತೇನೆ ಎಂಬ ಭರವಸೆಯೊಂದಿಗೆ
ಬಸವನ ಹುಳುವು ಸ್ಥಳ ಪರಿಶೀಲನೆಗೆ ಹೊರಟಿತು.
*


ಕಾಜೂರು ಸತೀಶ್ 

ಸಂಗಮ

ನಿನ್ನ ಕೂಡಿದ ದಿನ
ಇರಲಿಲ್ಲ ಈ ನಾನು ಆ ನೀನು

ನನ್ನ ಆತ್ಮದ ಕಾಯ
ನಿನ್ನಾತ್ಮದ ಕಾಯದ ಕೂಡ
ಕೂಡಿತು ನೀರೊಳಗಣ ಆಗಸವಾಗಿ

ತಲೆಗೂದಲು ತುದಿಯೇ?
ಕಾಲ್ಬೆರಳು ಕೊನೆಯೇ?
ಎಡಬಲಗಳ ಕೈಯ ನಡುಬೆರಳ ತುದಿಯೇ ಮಿತಿಯೇ?

ನೀನು ಭೂಮಿ
ನಾನು ಆಕಾಶ
ಕೂಡಿದ ಸಾಕ್ಷಿಗೆ
ವೀರ್ಯದ ಕಡಲು

ನೋಡಿಲ್ಲಿ
ನೀನು ಪ್ರಸವಿಸಿದ
ಜೀವಜಾಲ
ಅಪಾರ ಹಸಿರು
*


ಕಾಜೂರು ಸತೀಶ್ 

Sunday, October 3, 2021

ಒಂದು ಬಹುಪರಾಕ್ ಕವಿತೆ



ನನ್ನ ರಕ್ತ ಹೀರಲು ಬರುವ ಸೊಳ್ಳೆಗಳೇ
ನಿಮ್ಮ ಕುರಿತು ಕವಿತೆ ಬರೆದು ಮಾನ ಕಳೆವೆನು

ಕವಿಗಳೆಲ್ಲರೂ ಓದುವ ಪತ್ರಿಕೆಗೆ ಕಳಿಸಿ
ದುಂಬಾಲುಬಿದ್ದು ಪ್ರಕಟಿಸುವವರೆಗೂ ಬಿಡೆನು

ಸಿಗುವ ಸಂಭಾವನೆಯಲ್ಲಿ ಕವಿಗೋಷ್ಠಿ ನಡೆಸುವೆನು
ಹಿರಿಯ ಕವಿಗಳಿಗೆ ಹಾರಗಳನ್ನರ್ಪಿಸುವೆನು

ಹೋಗಿರಿ ಬಸ್ ನಿಲ್ದಾಣಗಳಿಗೆ ಹೋಗಿರಿ ರೈಲು ನಿಲ್ದಾಣಗಳಿಗೆ
ಹೋಗಿರಿ  ಸ್ಲಮ್ಮುಗಳಿಗೆ ಹೋಗಿರಿ ಗುಡಿಸಲುಗಳಿಗೆ

ನನಗಿಲ್ಲಿ ಕೆಲಸವಿದೆ ಕವಿತೆ ಬರೆವ ಕೆಲಸ
ನೋಡಿ ಇಲ್ಲಿ ನಿದ್ದೆಗೆಟ್ಟು ಬರೆಯುತ್ತಿದ್ದೇನೆ
 ನನ್ನ ಕಣ್ಣುಗಳ ಮೇಲಾದರೂ ಕರುಣೆಯಿರಲಿ
*



ಕಾಜೂರು ಸತೀಶ್ 

Friday, August 27, 2021

ಪಾಪದ ಕುರಿಂಜಿ ಹೂವುಗಳೂ ಮತ್ತು ಪಾಪಿ ಮನುಷ್ಯರೂ..

ರಂಜಿತ್ ಕವಲಪಾರ ಕಳೆದ ವರ್ಷ ಕೋಟೆಬೆಟ್ಟದ ಕುರಿಂಜಿಯ ಹೂಗಳನ್ನು facebookನಲ್ಲಿ ಚೆಲ್ಲಿದ್ದರು. ಕೆಲವು ದಿನಗಳ ಅನಂತರ ಗೆಳೆಯ ಸಂತೋಷನೊಂದಿಗೆ ಅಲ್ಲಿಗೆ ಹೋಗಿದ್ದೆ. ಇನ್ನು ಸದ್ಯಕ್ಕೆ ಕಾಣಸಿಗುವುದಿಲ್ಲವಲ್ಲಾ ಎಂದು ಕಣ್ಣಿನೊಳಗೆ ಸ್ವಲ್ಪವೂ ಜಾಗವಿರಬಾರದು- ಅಷ್ಟು ತುಂಬಿಕೊಂಡು ಬಂದಿದ್ದೆ.


ಇದೇ ಆಗಸ್ಟ್ ತಿಂಗಳು. ಒಂದು ದಿನ ಕ್ಯಾಮೆರಾ ತುಂಬಿಕೊಂಡು ಎಲ್ಲಿಗಾದರೂ ಹೋಗಬೇಕೆನಿಸಿ ರಸ್ತೆಗೆ ಇಳಿದಾಗ ಕಡೆಗೆ ದಾರಿ ಸೂರ್ಲಬ್ಬಿಯ ಕಡೆಗೆ ಸಾಗಿತು. ಸಿಕ್ಕಾಪಟ್ಟೆ ಮಳೆ. ಕೋಟಿನೊಳಗಿಂದ ಮೆಲ್ಲೆಮೆಲ್ಲೆ ನುಗ್ಗಿ ಬೆಚ್ಚಗಿನ ಆಕಾಶದ ಕತೆಹೇಳುವ ಹಾಗೆ ನನ್ನನ್ನಾವರಿಸುತ್ತಿತ್ತು. ಮೇದುರ ಜಲಪಾತವನ್ನು ಸೆರೆಹಿಡಿಯಬೇಕೆಂಬ ಆಸೆ. ಆದರೆ ಮಳೆಗೆ ಹೊಟ್ಟೆಕಿಚ್ಚು. ಕಡೆಗೆ ನಾನೇ ಮಳೆಯೆದುರು ಸೋತು ಸುಣ್ಣವೋ ಬಣ್ಣವೋ ಮತ್ತೊಂದೋ ಆಗಿ ಕ್ಯಾಮರಾವನ್ನು ಹೊರತೆಗೆಯದೆ ಮುಂದೆ ಸಾಗಿದ್ದೆ.


ಇಬ್ಬರು ನಿಂತಿದ್ದರು. ಮಂಡಿಯವರೆಗೆ ಪ್ಯಾಂಟು ಮಡಚಿಕೊಂಡು ಅಗಲವಾದ ಕೊಡೆ ಹಿಡಿದು ಮತ್ತ್ಯಾರೂ ಕಾಣಿಸದ ಆ ರಸ್ತೆ ಬದಿಯಲ್ಲಿ ನಿಂತು ಈ ಮಳೆಯ ಕುರಿತೋ ಅಥವಾ ರಾಜಕೀಯದ ಕುರಿತೋ ಅಥವಾ ತಾವು ಮೇಯಿಸುವ ಹಸುವಿನ ಕುರಿತೋ ಮಾತನಾಡುತ್ತಿದ್ದರು. ನಾನು ನಿಲ್ಲಿಸಿದೆ. 'ಏನು ಇಲ್ಲಿ' ಎಂದೆ. 'ಗೊತ್ತಾಗಲಿಲ್ಲ' ಎಂದರು. 'ನನಗೆ ನಿಮ್ಮನ್ನು ಗೊತ್ತು' ಎಂದೆ. 'ಎಲ್ಲಿಗೆ' ಎಂದರು.

ನಿಜಕ್ಕೂ ತಬ್ಬಿಬ್ಬಾದೆ!! ನಾನು ಮುಂದೆ ಸಿಗಬಹುದಾದ ಒಂದು ಊರಿನ ಹೆಸರು ಹೇಳಿ ' ಬದುಕಿದೆಯಾ ಬಡಜೀವವೇ' ಎಂದು ನಿಟ್ಟುಸಿರಿಟ್ಟೆ(ನಿಜಕ್ಕೂ ನಾನು ಎಲ್ಲಿಗೆ ಹೋಗುತ್ತಿರುವುದೆಂದು ನನಗೆ ಗೊತ್ತಿರಲಿಲ್ಲ).

'ಹೋಗಿ ಅವರ ಜೊತೆ' ಎಂದರು ನನಗೆ ಅಪರಿಚಿತರಾಗಿದ್ದ ಆ ಮತ್ತೊಬ್ಬರು.
'ಬೇಡ ಬೇಡ.. ನಾನು ಇಲ್ಲೇ ಹೋಗ್ತೇನೆ, ಮಳೆ ಜಾಸ್ತಿ ಆದ್ರೆ ಕಷ್ಟ' ಎಂದು ತುಸು ಸಂಕೋಚದಿಂದ ಇವರೆಂದರು.

'ಬನ್ನಿ' ಎಂದಾಗ ಬಂದರು. ಸ್ವಲ್ಪ ಮುಂದೆ ಹೋದಾಗ ಕಳೆದ ವರ್ಷ ನೋಡಿದ್ದ ಕುರಿಂಜಿ ಹೂಗಳು! 'ಅರೆ! ಈ ಹೂವು ಈ ವರ್ಷವೂ ಅರಳಿದೆಯಲ್ಲಾ?' ಕೇಳಿದೆ. 'ಈ ವರ್ಷ ಕಟ್ಟೆ ಬರ್ತದೆ ಮುಂದಿನ ವರ್ಷ ಆಗಲ್ಲ.'
'ಏನು ಹೇಳ್ತೀರಿ ಇದಕ್ಕೆ' ಕೇಳಿದೆ.

ನನ್ನ ಪರಿಚಯ ಹೇಳಿದೆ. ಆಗ ಮತ್ತಷ್ಟೂ ಪ್ರೀತಿಯಿಂದ ಮಾತನಾಡಿದರು. ಪೂವಯ್ಯ ಮಾಷ್ಟ್ರು. CRPF ನಲ್ಲಿ 12 ವರ್ಷ ಕೆಲಸ ಮಾಡಿ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮೇಷ್ಟ್ರಾಗಿ ಕೆಲಸ ಮಾಡುತ್ತಿರುವವರು. ಶಾಲೆಯಿಂದ ಮನೆಗೆ ಸುಮಾರು ಐದಾರು ಕಿಮೀ ದೂರ. ಒಂದು ಒಳದಾರಿಯನ್ನು ಕಂಡುಕೊಂಡು (ಜಿಗಣೆಗಳಿಗೆ ರಕ್ತದಾನ ಮಾಡದೆ) ಅಷ್ಟು ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸುವವರು. ಕುರಿಂಜಿಗೂ ಈ ಆರ್ಲ್ ಪೂವಿಗೂ ವ್ಯತ್ಯಾಸ ಹೇಳಿದಾಗ ನನಗೆ ಖುಷಿಯಾಯಿತು. ಏಕೆಂದರೆ ಹಲವರನ್ನು ನಾನು ಕೇಳಿದ್ದೇನೆ. ಸಾಕ್ರಟೀಸನ ಹಾಗೆ ತಲೆ ತಿಂದಿದ್ದೇನೆ. ಅವರಲ್ಲಿ ಪೂವಯ್ಯ ಮಾಷ್ಟ್ರ ಮಾತು ಹಿಡಿಸಿತು. ನಿಖರವಾಗಿ ಖಚಿತವಾಗಿ ಅವರು ಮಾಹಿತಿ ನೀಡಿದರು.

ಈ ಹೂವಿಗೆ ಕಟ್ಟೆ ಬರುವ ಕುರಿತು, ಕೊಟ್ಟಿಗೆಯಲ್ಲಿ ಬಳಸುವ ಕುರಿತು ಅವರು ಮಾತನಾಡಿದರು. ಹುತ್ತರಿ ,ಮಂದ್, ಕೋಲಾಟ, ಒಕ್ಕ.. ಹೀಗೆ ಮಾತನಾಡುತ್ತಾ ದಾರಿ ಸಾಗಿದ್ದೇ ತಿಳಿಯಲಿಲ್ಲ .

'ಮನೆ ತೋರಿಸುತ್ತೇನೆ' ಎಂದು ದೂರದಲ್ಲಿ 'ಓ ಅಲ್ಲಿ ' ಎಂದು ಚಿಕ್ಕದರಲ್ಲಿ ನಾವು ಮನೆಯಾಟ ಆಡುತ್ತಿದ್ದೆವಲ್ಲಾ ಅಷ್ಟೇ ಕಿರಿದಾಗಿ ಕಾಣುತ್ತಿದ್ದ ಒಂದು ಮನೆಯ ಆಕೃತಿಯನ್ನು ತೋರಿಸಿದರು. ಮಂಜು 'ಆ' ಮಾಡಿ ಆ ಜಾಗವನ್ನು ನುಂಗಿಹಾಕುವ ಧಾವಂತದಲ್ಲಿತ್ತು.


ಎಲ್ಲಿಗೆ ಹೋಗಬೇಕೆಂಬ ಗುರಿಯಿಲ್ಲದೆ ಹೊರಟ ನನಗೆ ಇವರ ಬದುಕು ಮುಂದೆ ಸಾಗಲಿರುವ ಹಾದಿಗೆ ಸ್ಫೂರ್ತಿಯಾಯಿತು. ಹೊರಟೆ. ತುಸು ಮುಂದೆ ಹೋದರೆ ನೀಲಿ ನೀಲಿ. ಮಳೆಮಳೆಯಾಗಿ ಕಾಣುತ್ತಿದ್ದ ಹೂವುಗಳು!

ಹಾಗೆ ಎಲ್ಲೋ ಸಾಗಿ, 'ಮನುಷ್ಯರೇ ಇಲ್ಲದ ಈ ಜಗತ್ತು ಎಷ್ಟು ಚಂದ ಅಲ್ವಾ ಸತೀಶ' ಎಂದು ನನಗೇ ಕೇಳಿಸುವಂತೆ ಜೋರಾಗಿ ಕೇಳಿ ಒದ್ದೆಯಾದ ಮನಸ್ಸಲ್ಲಿ ಮನೆ ಸೇರಿದೆ. ಅದನ್ನು ಹಿಂಡಿ ಒಣಗಿಸಬೇಕೆಂಬ ಮನಸ್ಸಾಗಲಿಲ್ಲ!
*
2008, ಜನವರಿ 5. ಗೆಳೆಯ ಜಾನ್ ಸರ್ ಜೊತೆಗೆ ಬೆಳಿಗ್ಗೆ 6 ಗಂಟೆಗೆ ನಾವು ತಡಿಯಂಡಮೋಳ್ ಬೆಟ್ಟಕ್ಕೆ ಹೊರಟಿದ್ದೆವು. ಗಡಗಡ ಚಳಿ. ಕ್ಯಾಮರಾದ ರೀಲು ಮುಗಿದಿತ್ತು. ಮೊಬೈಲು ಇಲ್ಲ. ಗುಡ್ಡದ ತುದಿಗೆ 'ಎತ್ತಿದರೆ' ಒಂದು ಜಾತಿಯ ಗಿಡಗಳು ಬೆಟ್ಟಕ್ಕೆ ಬೇಲಿ ಹಾಕಿದ ಹಾಗೆ ಬೆಳೆದು ನಿಂತಿದ್ದವು. 'ಇವೇನು ಸರ್' ಕೇಳಿದ್ದೆ. 'ಇವೇ ಸಾರ್ ಕುರುಂಜಿ' ಎಂದಿದ್ದರು.
*

ಈ ವರ್ಷ ಮಾಂದಲ್ಪಟ್ಟಿ ,ತಡಿಯಂಡಮೋಳ್, ಪುಷ್ಪಗಿರಿ , ಕೋಟೆಬೆಟ್ಟ ಮುಂತಾದ ಕಡೆಗಳಲ್ಲಿ ಒಂದು ಜಾತಿಯ ಹೂವರಳಿದೆ. ಅದು ಆರೇಳು ವರ್ಷಗಳಿಗೊಮ್ಮೆ ಪೂರ್ಣವಾಗಿ ಅರಳುವ ಹೂವು. ಕೆಲವೊಮ್ಮೆ ಪ್ರತೀ ವರ್ಷ ಅಲ್ಲಲ್ಲಿ ಕಣ್ಣಿಗೆ ಬೀಳುವುದೂ ಉಂಟು. Strobilanthes sessilis ಎನ್ನುವ ಈ ಹೂವು ಮಾಳ ಕಾರ್ವಿ ಅಥವಾ ಟೋಪಲೀ ಕಾರ್ವಿ. ಪೂರ್ಣ ಅರಳಿದ ಮೇಲೆ 'ಕಟ್ಟೆ ' ಬಂದು ಗಿಡ ಒಣಗಿ ಬೀಜಗಳು ಮಣ್ಣಿಗೆ ಬಿದ್ದು, ಮಣ್ಣು ಪುಳಕಗೊಂಡು, ಅದನ್ನು ತನ್ನೊಳಗೆ ಜತನವಾಗಿ ಕಾಪಿಟ್ಟು, ಮತ್ತೆ ಅವಕ್ಕೆ ಹಸಿರು ಕೈಕಾಲುಗಳು ಮೊಳೆತು ಹೂವಾಗಬೇಕೆಂದರೆ ಎಷ್ಟೆಲ್ಲಾ ಸಂಕಟಗಳು (ತಾಯಂದಿರಿಗೇ ಗೊತ್ತು!). ಆಮೇಲೆ ಪಡ್ಡೆ ಹುಡುಗರು ಬಂದು ಹೂವಿನ ಪಕ್ಕ ನಿಂತು, ಮಲಗಿ, ಕುಣಿದು, ಎಣ್ಣೆ ಕುಡಿದು, ದಮ್ಮು ಹೊಡೆದು, 'ಲೋ ಮಚ್ಚಾ' ಎಂದು ಕಣ್ಣರಳಿಸಿ , ತುಟಿ ಉಬ್ಬಿಸಿ ಪಟ ತೆಗೆದುಕೊಳ್ಳುವುದನ್ನು ಆ ಹೂವುಗಳೇನಾದರೂ ನೋಡಿದರೆ ಮುಂದೆ ಅರಳುವುದನ್ನೇ ನಿಲ್ಲಿಸಿಬಿಟ್ಟಾವು!


ಇರಲಿ, ಅವು ಅರಳಿ ನಿಂತಿತೆಂದರೆ ನೀಲಿಬೆಟ್ಟ. ಬೆಟ್ಟಕ್ಕೆ ನೀಲಿ ಶಾಲುಹೊದಿಸಿ ಸನ್ಮಾನ ಮಾಡಿದ ಹಾಗೆ. ಮಾಧ್ಯಮಗಳು ಗೂಗಲಿಸಿ ಅದನ್ನು strobilanthes kunthiana ಎಂದು ನಂಬಿಸಿ ಅರಳಿನಿಂತ ಆ ಹೂವುಗಳಿಗಿಂತಲೂ ಖುಷಿಪಡುತ್ತಾರೆ. Youtuberಗಳ ಆಟ ನೋಡಬೇಕು!

ಚಿತ್ರ ಕೃಪೆ- ಶಶಿ, DRFO, ಪುಷ್ಪಗಿರಿ, 2018. (strobilanthes kunthiana)

ಆದರೆ 12 ವರ್ಷಗಳಿಗೊಮ್ಮೆ ಅರಳುವ ಕುರಿಂಜಿ 2018ರಲ್ಲಿ ಅರಳಿತ್ತು. ಇಷ್ಟು ಅಗಾಧವಾಗಿ ಅವು ಕಣ್ಣಿಗೆ ಬೀಳಲಿಲ್ಲ.

ಒಳ್ಳೆಯದೇ ಆಯಿತು!
*


ಕಾಜೂರು ಸತೀಶ್

Tuesday, August 24, 2021

A view on Manasu Abhisarike

Shanthi K Appanna is a brilliant storyteller of our times. Her 'Manasu Abhisaarike', a collection of kannada story stories ,published in 2016, bagged many awards including the prestigious Kendra Saahithya Academy. Being a Nurse,by profession,she richly deserves it as she brought a new perspective to the genre of Kannada Short Story.



In her stories, Shanthi Appanna, moves through several corners of the world- the rustic, the urban, male-female relationships, the subalterns, the oppressed and oppressor.

The notable critic H S Raghavendra Rao writes of her stories: “Shanthi Appanna confronts the philosophical question of whether it is life itself that is monotonous to the end, or just the ways in which we perceive life".


The art of perceiving nuances of the life, grand narration, elegant thoughtfulness of analysing the philosophical logic of human relationships(especially ,male and female ), the mind, material sciences , the environment - are rather impressive. Moreover, she tells the stories boldly and that becomes the pith of her story telling .

*


Kajooru Sathish

Thursday, July 29, 2021

ಎಷ್ಟು ಸುಖಿ ನೀನು ಕವಿತೆಯೇ

ಎಷ್ಟು ಸುಖಿ ನೀನು ಕವಿತೆಯೇ

ನೋಡಲ್ಲಿ ಮರ 
ನೋಡಲ್ಲಿ ಹಕ್ಕಿ
ನೋಡಲ್ಲಿ ನೆಲ
ನೋಡಲ್ಲಿ ಬಾನು
ನೋಡಿಲ್ಲಿ ನಾನು
ಎಷ್ಟು ಸುಖಿ ನೀನು ಕವಿತೆಯೇ

ನೋಡೀ ಮನೆ
ನೋಡೀ ಬಿಸಿಲು
ನೋಡೀ ಮಳೆ
ನೋಡೀ ಮಾಳಿಗೆ
ನೋಡೀ ಗಾಳಿ
ಎಷ್ಟು ಸುಖಿ ನೀನು ಕವಿತೆಯೇ

ನೋಡೀ ಹೃದಯ
ನೋಡೀ  ಮೆದುಳು 
ನೋಡೀ ರಕುತ
ನೋಡೀ ಬೆವರು
ನೋಡೀ ಕಣ್ಣು
ಎಷ್ಟು ಸುಖಿ ನೀನು ಕವಿತೆಯೇ

ನೋಡು ಈ ಜನನ
ನೋಡು ಈ ಮರಣ
ಹುಟ್ಟದ ಸಾಯದ
ಕಾಣದ ಕೇಳದ
ಇರುವ ಬರೀ ಇರುವ 
ಎಷ್ಟು ಸುಖಿ ನೀನು ಕವಿತೆಯೇ
*


ಕಾಜೂರು ಸತೀಶ್ 

ಯುದ್ಧ


ಗಡಿಯಲ್ಲಿ ಯುದ್ಧ ನಡೆಯುತ್ತಿತ್ತು.

ಬಂಕರ್ ನಲ್ಲಿ ಬಿದ್ದಿದ್ದ ಆಹಾರದ ತುಣುಕೊಂದನ್ನು ಎತ್ತಿಕೊಳ್ಳಲು ಇರುವೆಗಳು ಗಡಿದಾಟಿ ಸಾಲುಸಾಲಾಗಿ ಬರತೊಡಗಿದವು.
*

ಕಾಜೂರು ಸತೀಶ್ 

Wednesday, July 28, 2021

ಸಾವು

ಆ ದಿನ ಸಾಯಬೇಕೆಂದು ನಿರ್ಧರಿಸಿದ್ದ.

ಒಂದು ಉಪನ್ಯಾಸಕ್ಕೆ ಆಹ್ವಾನ ಬಂದಿತ್ತು. ಹಾಡಿಯ ಯುವಕರಿಗೆ 'ಆತ್ಮವಿಶ್ವಾಸ ಹೆಚ್ಚಿಸುವುದು ಹೇಗೆ?' ಎಂಬ ವಿಷಯದ ಕುರಿತು ಉಪನ್ಯಾಸ ಕೊಡಬೇಕಿತ್ತು.

ರೋಮಗಳು ನಿಮಿರಿ ನಿಲ್ಲುವ ಹಾಗೆ ಮಾತನಾಡಿದ. ಯುವಕರು ರೋಮಾಂಚನಗೊಂಡರು. ಅವರೊಳಗೆ ಬದುಕುವ ಛಲ ಹುಟ್ಟಿತು.ಅವರ ಕನಸುಗಳು ಗರಿಗೆದರಿದವು.

ಮಾತಿನ ವೀಡಿಯೊ ವೈರಲ್ ಆಯಿತು. ಅವನಿಗೆ ಅದನ್ನು ನೋಡುವ ಮನಸ್ಸಾಗಲಿಲ್ಲ.

ಮನೆಗೆ ಬಂದು ಕೊರಳಿಗೆ ಹಗ್ಗ ಕಟ್ಟಿ ಸತ್ತ. ಸಾಯುವ ಮುನ್ನ ಬರೆದ: ' ಬದುಕುವುದಕ್ಕಿಂತಲೂ ಸಾಯುವಾಗ ಹೆಚ್ಚಿನ ಆತ್ಮವಿಶ್ವಾಸ ಬೇಕು'.

*


ಕಾಜೂರು ಸತೀಶ್

Tuesday, July 27, 2021

ನೀವೂ ದೇಶಭಕ್ತರೇ?!

ನಿಜವಾದ ದೇಶಭಕ್ತಿಯುಳ್ಳವರು:

- ಲಂಚ ತೆಗೆದುಕೊಳ್ಳುವುದಿಲ್ಲ; ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ.

- ಸರ್ಕಾರಿ/ಸಮುದಾಯದ ಹಣ/ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ.

- ತಮ್ಮ ಊರು, ಜಿಲ್ಲೆ, ರಾಜ್ಯ, ದೇಶವನ್ನು ಪ್ರೀತಿಸುತ್ತಾರೆ. ಪ್ರಗತಿಯನ್ನು ಮೆಚ್ಚುತ್ತಾರೆ. ದೇಶಕ್ಕೆ ಸಂಭವಿಸುವ ಆಪತ್ತು/ನಷ್ಟಗಳಿಗೆ ಮರುಗುತ್ತಾರೆ. ಅನ್ಯಾಯವನ್ನು ಸಹಿಸಿಕೊಳ್ಳುವುದಿಲ್ಲ.

- ತಮ್ಮ ಭಾಷೆಯ ಬಗ್ಗೆ ಅಭಿಮಾನ ಹೊಂದಿರುತ್ತಾರೆ. ಇತರ ಭಾಷೆಗಳನ್ನೂ ಸಹಿಸಿಕೊಳ್ಳುತ್ತಾರೆ.

- ಈ ನೆಲದಲ್ಲಿರುವ ಎಲ್ಲರನ್ನೂ ತರತಮಗಳಿಲ್ಲದೆ ಪ್ರೀತಿಸುತ್ತಾರೆ.

- ಸಾರ್ವಜನಿಕ (ಸಂವಿಧಾನ)ನಿಯಮಗಳನ್ನು ಪಾಲಿಸುತ್ತಾರೆ.

- ಯಾವುದೇ ಪಕ್ಷದ ಪ್ರಚಾರಕರಾಗಿರುವುದಿಲ್ಲ

- ಒಳ್ಳೆಯದನ್ನು ಮೆಚ್ಚುವ, ಅನ್ಯಾಯವನ್ನು ಪ್ರಶ್ನಿಸುವ ಗುಣವುಳ್ಳವರಾಗಿರುತ್ತಾರೆ.

- ಪರಿಸರವನ್ನು ಪ್ರೀತಿಸುತ್ತಾರೆ. ಮಾಲಿನ್ಯ ಉಂಟುಮಾಡುವುದಿಲ್ಲ.

- ಅಸಮಾನತೆಯನ್ನು ವಿರೋಧಿಸುತ್ತಾರೆ

- ಒಳ್ಳೆಯ ವ್ಯಕ್ತಿಗೆ /ಕಡಿಮೆ ಭ್ರಷ್ಟರಾದವರಿಗೆ ಮತ ನೀಡುತ್ತಾರೆ. ಹಣ/ಹೆಂಡ ಪಡೆಯುವುದಿಲ್ಲ/ಹಂಚುವುದಿಲ್ಲ

- ಸಮಯಪ್ರಜ್ಞೆ ಹೊಂದಿರುತ್ತಾರೆ.

- ಸೋಮಾರಿಗಳಾಗಿರುವುದಿಲ್ಲ.

- ಜನಸಾಮಾನ್ಯರನ್ನು ಹಿಂಸಿಸುವುದಿಲ್ಲ.

- ಕನಿಷ್ಟ ಒಬ್ಬ ಪ್ರಾಮಾಣಿಕನಿಂದ ಒಳ್ಳೆಯ ಮಾತನ್ನು ಆಡಿಸಿಕೊಂಡಿರುತ್ತಾರೆ.

- ಕೇಳಿ, ಬೇಡಿ, ಬೆದರಿಸಿ ಸನ್ಮಾನ ಪಡೆದುಕೊಳ್ಳುವುದಿಲ್ಲ.

- ಸುಳ್ಳನ್ನು ಸತ್ಯ ಎಂದು ಹಬ್ಬಿಸುವುದಿಲ್ಲ.


ಹೇಳಿ, ನಾನೂ ನೀವೂ ದೇಶಭಕ್ತರೇ?
*


ಕಾಜೂರು ಸತೀಶ್ 


Sunday, July 11, 2021

ಲೆಕ್ಕ

ಮೀನುಗಾರರಿಗೆ ಹೊಳೆಯಲ್ಲಿರುವ ಮೀನುಗಳನ್ನು ಎಣಿಸಲು ತಿಳಿಸಲಾಯಿತು.

'ನಾವು ಮೀನು ಹಿಡಿಯುವವರು, ಎಣಿಸುವವರಲ್ಲ' ಎಂದಾಗ 'ಶಿಕ್ಷೆ ನೀಡಲಾಗುವುದು' ಎಂದು ಭಯ ಹುಟ್ಟಿಸಲಾಯಿತು.

ಎಚ್ಚರದಿಂದ ಎಣಿಸಿದ ಒಬ್ಬ ಮೀನುಗಾರ ತನ್ನ ಲೆಕ್ಕವನ್ನು ಸ್ವಲ್ಪ ತಡವಾಗಿ ಒಪ್ಪಿಸಿದನು.

ಏನೂ ಎಣಿಸದ ಮೀನುಗಾರನೊಬ್ಬ 'ಇಷ್ಟು ಮೀನುಗಳಿವೆ' ಎಂದು ಲೆಕ್ಕ ಒಪ್ಪಿಸಿದನು.

ಹೀಗೆ ಹಲವರು ಸುಳ್ಳು ಲೆಕ್ಕ ಕೊಟ್ಟರು.
*
ಹೆಚ್ಚು ಲೆಕ್ಕ ನೀಡಿದ ಮೀನುಗಾರರಿಂದಾಗಿ ಯಜಮಾನನಿಗೆ ಪ್ರಶಂಸೆಗಳ ಸುರಿಮಳೆಯಾಯಿತು.

ಸನ್ಮಾನ ಸಮಾರಂಭದಲ್ಲಿ ಹೆಚ್ಚು ಹೆಚ್ಚು ಸಂಖ್ಯೆ ನೀಡಿದ ಮೀನುಗಾರರನ್ನು ಯಜಮಾನನು ಬಾಯ್ತುಂಬ ಹೊಗಳಿದನು.
*

ಕಾಜೂರು ಸತೀಶ್ 

ಎಲೆ, ಹಕ್ಕಿ ಮತ್ತು ನಾನು


ನಾನು ಎಲೆಯ ಮಗು

ಅದು ನನ್ನ ಮಗು

ಪರಸ್ಪರ ಉಸಿರು ಉಸಿರು ಬೆರೆತು ಹುಟ್ಟಿದ್ದು


ಹಕ್ಕಿಯೊಂದು ದಿನ ಹಾರಿಬಂದು

ಎಲೆಯ ಮೈಗೆ ಮೈತಾಕಿಸಿತು

ಪುಳಕಗೊಂಡ ಎಲೆಗೆ ಸತ್ತು ಹಾರುವ ತವಕ


ಸಾವು ಹುಟ್ಟಿದ ದಿನ

ಎಂದೋ ಹಕ್ಕಿ ಹಾರಿದ ದಾರಿಯಲ್ಲಿ

ಹಾರಿತು ಎಲೆ ಸಂಭ್ರಮದಿಂದ

ತನ್ನುಸಿರು ನನ್ನುಸಿರು ಹಕ್ಕಿಯುಸಿರು ಬೆರೆತ

ಗೆರೆಯಿರದ ದಾರಿಯಲ್ಲಿ.
*



ಕಾಜೂರು ಸತೀಶ್ 

ಚುನಾವಣೆ

ರಂಗನು ಚುನಾವಣೆಗೆ ನಿಂತನು. ಹೆಚ್ಚಿನ ಜನರಿಗೆ ಅವನ ಪರಿಚಯ ಇರಲಿಲ್ಲ. ಆದರೆ, ಅವನು 'ಅಕ್ಷಯ ಪಾತ್ರೆ' ಗುರುತಿನ ಪಕ್ಷವನ್ನು ಪ್ರತಿನಿಧಿಸಿದ ಕಾರಣದಿಂದಾಗಿ ಚುನಾವಣೆಯಲ್ಲಿ ಜಯಿಸಿದನು.

ಮಾತು ಕೊಟ್ಟಂತೆ ತನ್ನ ಕಾರ್ಯಕರ್ತರಿಗೆ ಸರ್ಕಾರದ ಎಲ್ಲಾ  ಸೌಲಭ್ಯಗಳನ್ನು ಕೊಡಿಸಿದನು. ಕಾರ್ಯಕರ್ತರ ಜೀವನಮಟ್ಟ ಸುಧಾರಿಸಿತು. ಐದು ವರ್ಷಗಳಲ್ಲಿ ರಂಗನ ಸಾಧನೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. 

ರಂಗನು ಶ್ರೀಮಂತನಾದನು. ಅವನ ಗೌರವ ಹೆಚ್ಚಿತು.

ಮುಂದಿನ ಚುನಾವಣೆಯಲ್ಲಿ ಕಾರ್ಯಕರ್ತನಾಗಿದ್ದ ಒಬ್ಬನಿಗೆ ಸೀಟು ಸಿಕ್ಕಿತು. ಅವನು ಹೆಚ್ಚಿನ ಮತ ಪಡೆದು ಗೆಲುವು ಸಾಧಿಸಿದನು. ಅವನ ಮನೆಯವರು ಮತ್ತು ಕಾರ್ಯಕರ್ತರು ಸಂಭ್ರಮಿಸಿದರು!
*



ಕಾಜೂರು ಸತೀಶ್ 

Thursday, July 1, 2021

ಮಚ್ಚಾಡೋ ಸರ್

ಅಕ್ಟೋಬರ್ 10,2003. ಮೊದಲ ದಿನದ ತರಗತಿ. ಭಾಗ್ಯಲಕ್ಷ್ಮಿ ಮೇಡಂ ನಮ್ಮನ್ನು ಸ್ವಾಗತಿಸಿ ಹಿರಿಯ ಉಪನ್ಯಾಸಕರೊಬ್ಬರಿಗೆ ಮಾತನಾಡಲು ತಿಳಿಸಿದರು. ಎದ್ದು ನಿಂತು ಮಾತನಾಡತೊಡಗಿದ ಅವರು- " ವಿದ್ಯಾರ್ಥಿಗಳಾದವರು ಶಿಕ್ಷಕರ ಒಳಗಿರುವ ಜ್ಞಾನದ ಖಜಾನೆಯನ್ನು ತೆರೆಸಬೇಕು. ಅವರ ಜ್ಞಾನ ಹೊರಬರಬೇಕೆಂದರೆ ನಿಮ್ಮ ತೊಡಗಿಸಿಕೊಳ್ಳುವಿಕೆ ಅಷ್ಟು ಮುಖ್ಯವಾಗುತ್ತದೆ" ಎಂದರು. ಆ ದಿನ ಸ್ವಾಗತ ಮಾಡಿದ ಸೌಮ್ಯ ಶೆಟ್ಟಿ, ವಂದನೆಗಳನ್ನು ಅರ್ಪಿಸಿದ ಜಾನ್ ಪಾವ್ಲ್ ಡಿಸೋಜ ಅವರಿಂದ ಕೇಳಿಸಿಕೊಂಡ ಆ ಹೆಸರು- ಪೆರಿಗ್ರಿನ್ ಎಸ್ ಮಚ್ಚಾಡೋ.
*
ಕೂಡಿಗೆಯಲ್ಲಿದ್ದರು. ನಿತ್ಯ ಬ್ಯಾಗು ನೇತುಹಾಕಿಕೊಂಡು ನಡೆದುಬರುತ್ತಿದ್ದಾಗ ನಾನು ಸಿಗುತ್ತಿದ್ದೆ. 'ನಮಸ್ತೆ ಸರ್'- ಅಷ್ಟೆ. (ಎಷ್ಟೋ ಸಲ ಅವರ ct100 ಬೈಕಿನಲ್ಲಿ)


ಒಮ್ಮೆ 'ಯೌವನ' ಪದದ ಮೊದಲ ಅಕ್ಷರದ ಔತ್ವವನ್ನು ಕೆಳಗೆ ಇಳಿಸಿದ್ದೆ. 'ಏನಿದು' ಎಂದು ಗದರಿಸಿದರು. 'ಯೌವನ' ಎಂದೆ. 'ಅದು ಯೌವನ ಅಲ್ಲ ಯಾವನ' ಎಂದರು. ಔತ್ವವನ್ನು ಕೆಳಗಿನವರೆಗೆ ಇಳಿಸಬಾರದೆಂದು ಅಂದು ಕಲಿತುಕೊಂಡೆ.
*
ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ, ಕ್ಷೇತ್ರಶಿಕ್ಷಣಾಧಿಕಾರಿ(ಪ್ರಭಾರ) ಹುದ್ದೆಯಲ್ಲಿದ್ದರು. ಘಟನೆಯೊಂದು ಅವರನ್ನು ಜಿಲ್ಲೆಯ ಗಡಿದಾಟಿಸಿತು. ಮಂಗಳೂರಿನ ಸಿಟಿಇನಲ್ಲಿದ್ದಾಗ ಮತ್ತೆ ಮೇಷ್ಟ್ರಾಗುವ ಭಾಗ್ಯ ಒದಗಿತು.

ಆಗ ಕೊಂಕಣಿಯಲ್ಲಿ MA ಮಾಡೋಣ ಎಂದು ಗೆಳೆಯನಿಗೆ ಹೇಳಿದರು. ಒಂದು ದೀರ್ಘಾವಧಿಯಲ್ಲಿ ತಪ್ಪಿಹೋಗಿದ್ದ ಅಧ್ಯಯನದಲ್ಲಿ ಜೀವಂತಿಕೆಯನ್ನು ಕಾಯ್ದುಕೊಂಡರು. ಅಲ್ಲಿದ್ದಾಗಲೇ ಶಿವಮೊಗ್ಗದ ಡಿಡಿಪಿಐ ಆಗುವ ಭಾಗ್ಯ ಒದಗಿತು. ಅಲ್ಲಿ , ಅವರ ಕಚೇರಿಗೆ ಹೊಸರೂಪವನ್ನು ನೀಡಿದರು(ನಮ್ಮ ಕಚೇರಿಗೆ ಬಂದಾಗ ಆ ವೀಡಿಯೊ ತೋರಿಸಿದ್ದರು). ಕೊಡಗಿಗೆ ಬಂದಾಗಲೂ ಮಡಿಕೇರಿಯ ಡಿಡಿಪಿಐ ಕಚೇರಿಗೆ ಕಲೆಯ ಚೆಲುವನ್ನು ಮೂಡಿಸಲು ಕಾರಣಕರ್ತರಾದರು.


ಯೋಜನೆಗಳನ್ನು ರೂಪಿಸಿ ವಿಶ್ಲೇಷಿಸುವುದರಲ್ಲಿ ಅವರು ಪ್ರವೀಣರು. ಶಿಸ್ತು , ಕೆಲಸವನ್ನು ತೆಗೆದುಕೊಳ್ಳುವ ಜಾಣ್ಮೆ, ಖಡಕ್ ಗುಣ, ಕೆಲಸ ಆಗದಿದ್ದಲ್ಲಿ ಸಿಡಿದೇಳುವ ಪ್ರವೃತ್ತಿ ,ಮರುಕ್ಷಣದಲ್ಲೇ ಶಾಂತರಾಗುವ ಗುಣ.. ಮಚ್ಚಾಡೋ ಸರ್ ಅವರದು. ಅವರ ಅಧೀನದಲ್ಲಿ ಬರುವ ಎಂತಹ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳುವಷ್ಟು ನಿಪುಣರು.

*
ನಿಮಿಷಕ್ಕೊಂದು ಮೊಬೈಲ್ ಕರೆ, whatsappನಲ್ಲಿ ನಿಮಿಷಕ್ಕೊಂದು ಬರುವ ಕೆಲಸಗಳ ಪಟ್ಟಿ- ಇವುಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಮಚ್ಚಾಡೋ ಸರ್ ಜೂನ್ 30ಕ್ಕೆ ನಿವೃತ್ತರಾಗಿದ್ದಾರೆ.

ಅವರಿದ್ದಾಗ ಏನೋ ಒಂದು ಅವ್ಯಕ್ತ ಧೈರ್ಯ ನಮಗೆ. ಅವರ ಹಾಗೆ ಕೆಲಸವನ್ನು ನಿಭಾಯಿಸುವ ವ್ಯಕ್ತಿ ಆ ಸ್ಥಾನಕ್ಕೆ ಬರುವುದು ಸಂದೇಹ. ಅನೇಕ ಕಹಿ ಅನುಭವಗಳ ನಡುವೆಯೂ ಈ ಜಿಲ್ಲೆಯನ್ನು ಪ್ರೀತಿಸಿದವರು ಅವರು.
*
ಬ್ಯಾಡ್ಮಿಂಟನ್ ,ವಾಲಿಬಾಲ್ ಕ್ರೀಡೆಗಳನ್ನು ಚೆನ್ನಾಗಿ ಆಡುತ್ತಿದ್ದರು. ಅವರೊಡನೆ ಆಟವಾಡುತ್ತಿದ್ದೆವು. ನಿವೃತ್ತಿಯ ಜೀವನದಲ್ಲಿ ಅವರ ಪ್ರವೃತ್ತಿಗಳನ್ನು ಮತ್ತೆ ರೂಢಿಸಿಕೊಂಡರೆ ಬದುಕು ಸುಖಕರವಾಗುತ್ತದೆ.

ಶುಭಾಶಯಗಳು ಸರ್.
*
ಕಾಜೂರು ಸತೀಶ್ 

Wednesday, June 30, 2021

ಎಲೆ



ಪುಟ್ಟ ಮಗು ಬಲೂನು ಊದುವುದ ನೋಡಿರಬೇಕು
ಅಂತೆ ಗಾಳಿಯನ್ನೂದುತ್ತಿತ್ತು ಎಲೆ
ಈ ಶೂನ್ಯ ಈ ಜೀವ ತುಂತುಂಬಿಕೊಂಡು ಒಡೆಯುವ ಹಾಗೆ

ಎಲೆ ಊದಿ ತುಂಬಿಸಿದ ಗಾಳಿಯಲ್ಲಿ
ತೊಟ್ಟು ಕಳಚಿಕೊಂಡು
ತನ್ನ ಸಾವನ್ನು ಅತ್ತಿಂದಿತ್ತ ಇತ್ತಿಂದತ್ತ ಹಾರಾಡಿ ಸುಖಿಸುತ್ತಿತ್ತು.

ಎಲೆ ಹಿಡಿವ ಆಟವಾಡುವ ಮಕ್ಕಳು
ಓಡೋಡಿ ಹಿಡಿದರು

ಪುಟ್ಟ ಹಸ್ತಗಳಲ್ಲಿ ಸಾವಿಗೆ ಪುಳಕ.
*


ಕಾಜೂರು ಸತೀಶ್

Thursday, June 17, 2021

ಸೋಮಾರಿಗಳ ಸುಖ ಮತ್ತು...

ಸೋಮಾರಿಗಳು ಜೀವನದಲ್ಲಿ ಇತರರಿಗಿಂತ ಸುಖಿಗಳಾಗಿರುತ್ತಾರೆ. ಅವರು ಹಾಗೆ ಇರುವುದರಿಂದ ಅವರಿಗೆ ಕೆಲಸಗಳನ್ನು ಹಂಚಲಾಗುವುದಿಲ್ಲ. ಅವರ ಕೆಲಸಗಳೆಲ್ಲ ಮೈಮುರಿದು ದುಡಿಯುವವರ ಹೆಗಲಿಗೆ ಬೀಳುತ್ತವೆ.

ಇದನ್ನೇ ಬಂಡವಾಳ ಮಾಡಿಕೊಳ್ಳುವ ಸೋಮಾರಿಗಳು ತಮ್ಮ ವೈಯಕ್ತಿಕ ಕೆಲಸಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಅಲ್ಲಿ ಮೈಮುರಿದು ದುಡಿಯುತ್ತಾರೆ. ಹಣ, ಆಸ್ತಿ, ಆರೋಗ್ಯ ಅವರ ಪರವಾಗಿರುತ್ತದೆ. ಅವರ ಕುಟುಂಬ ಸುಖದಿಂದ ಕೂಡಿರುತ್ತದೆ.


ಇತ್ತ, ಅವರ ಕೆಲಸಗಳನ್ನೂ ಹೆಗಲಲ್ಲಿರಿಸಿ ದುಡಿಯುವ ಪ್ರಾಮಾಣಿಕ ವರ್ಗ( ಇವರ ಸಂಖ್ಯೆ ಅತ್ಯಂತ ವಿರಳ)ಕ್ಕೆ ಬಹುಬೇಗ ಕಾಯಿಲೆಗಳು ಬಾಧಿಸುತ್ತವೆ. ಅವರಿಗೆ ಕುಟುಂಬದ ತಿರಸ್ಕಾರದ ಮಾತುಗಳು ವರವಾಗಿ ಲಭಿಸುತ್ತದೆ. ಹಣ, ಆಸ್ತಿಗಳ ಗೊಡವೆಗೆ ಹೋಗದ ಇವರು ಬೇಗ ಮಣ್ಣುಸೇರುತ್ತಾರೆ.
*
ಸೋಮಾರಿತನ ಎನ್ನುವುದು ಭ್ರಷ್ಟನೊಬ್ಬನ ಮೊದಲ ಆಯುಧ. ಒಬ್ಬನನ್ನು ಕೆಲಸದಿಂದ ಕೈಬಿಟ್ಟಿದ್ದಾರೆ ಎಂದರೆ ಅವನೊಬ್ಬ ಕೆಟ್ಟ ಮನುಷ್ಯ ಆಗಿರುತ್ತಾನೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ಅವರ ಕುರಿತು ಯಾರಲ್ಲೂ ಒಳ್ಳೆಯ ಅಭಿಪ್ರಾಯಗಳಿರುವುದಿಲ್ಲ. 'ಭೂಮಿಗೆ ಭಾರ' ಎಂಬ ಪದಪುಂಜಕ್ಕೆ ಅನ್ವರ್ಥವಾಗಿರುವವರಿವರು.


ಎಲ್ಲರ ಭಾರಗಳನ್ನು ಹೊರುವ ಮತ್ತೊಂದು ಗುಂಪಿದೆಯಲ್ಲಾ- ಅದು ಹಲವರ ಮನಸ್ಸುಗಳಲ್ಲಿ ,ನೆನಪುಗಳಲ್ಲಿ ಉಳಿಯುತ್ತದೆ. ಹೀಗೆ ಕೆಲಕಾಲ ಬದುಕಿ ಸಾಯುವುದು, ಹಲವರ ಒಳಗೆ ಮತ್ತೆಮತ್ತೆ ಹುಟ್ಟುವುದು ಶ್ರೇಷ್ಠ ಬದುಕು.

ಬೆರಳೆಣಿಕೆಯ ಈ ಸಂತತಿ ಸಾವಿರವಾಗಬೇಕು.

*


ಕಾಜೂರು ಸತೀಶ್



Sunday, June 13, 2021

ಸರಳ ಮತ್ತು ಸ್ಪಷ್ಟ ಶೈಲಿಯ ತಾಜಾ ಕಾವ್ಯ

ಲೇಖಕರೊಬ್ಬರ ಮೊದಲ ಕವನ ಸಂಕಲನ ಎಂದರೆ ಒಂದು ಬಗೆಯ ಕುತೂಹಲವಿರುತ್ತದೆ. ಅದು ಉತ್ತಮ ಕೃತಿಯಾಗಿದ್ದರೆ ಪ್ರಾಮಾಣಿಕ ಓದುಗರು ಅದರ ಕುರಿತು ಅಭಿಪ್ರಾಯ ತಿಳಿಸುತ್ತಾರೆ. ಒಂದಷ್ಟು ಮಂದಿಗೆ ಅದು ತಲುಪಲು ಕಾರಣವಾಗುತ್ತದೆ.

ದುರಂತ ಎಂದರೆ, ಅದರ ಕುರಿತು ಮಾತನಾಡುವ, ಚರ್ಚಿಸುವ ಅದೇ ತಲೆಮಾರಿನ ಸಂಖ್ಯೆ (ಹಂಚಿಕೊಳ್ಳುವ ಹಲವು ಸಾಧ್ಯತೆಗಳಿದ್ದಾಗಿಯೂ )ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಹೋಗುತ್ತಿದೆ. Utility ತತ್ತ್ವ ಅವರನ್ನು ಹಲವು ಬಗೆಯಲ್ಲಿ ಬಂಧಿಸಿರುತ್ತದೆ. 'ಹೀಗೆ ಮಾಡಿದರೆ ನನಗೇನು ಲಾಭ' ಎಂಬ ಸಂಗತಿ. ಈ ಸಂಕಲನದ ಕುರಿತು ಬರೆದರೆ/ಹೇಳಿದರೆ ನನ್ನ ಸಂಕಲನದ ಕುರಿತು ಅವರು ಬರೆಯಬಹುದೇ? ಅಥವಾ ನಮ್ಮ ಪರಿಚಯ ಗಾಢವಾಗಬಹುದೇ? ಇತ್ಯಾದಿ

ಇರಲಿ!
*

ಈಚೆಗೆ ಮೌಲ್ಯ ಸ್ವಾಮಿ ಮತ್ತು ಗುರುಗಣೇಶರ ಕವಿತೆಗಳನ್ನು ಓದಿದಾಗ ಮೊದಲ ಸಂಕಲನದಲ್ಲೇ ಅವು ತೋರಿದ ಪ್ರೌಢಿಮೆ ಗಮನ ಸೆಳೆಯಿತು. ಈ ಎರಡು ಸಂಕಲನಗಳು ಪರಸ್ಪರ ವಿರುದ್ಧ ಧ್ರುವಗಳಲ್ಲಿದ್ದರೂ, ಹೊಸತನ್ನು ಆಳವಾಗಿ ಗಂಭೀರವಾಗಿ ಶೋಧಿಸಿ ಹೇಳುತ್ತವೆ.

ಮತ್ತೊಂದು ಸಂಕಲನ 'ಗಾಯಗೊಂಡವರಿಗೆ'. ಗಣಿತ ಶಿಕ್ಷಕಿ ಮಂಜುಳಾ ಹಿರೇಮಠ ಅವರ ಚೊಚ್ಚಿಲ ಸಂಕಲನ. ಸರಳತೆಯಲ್ಲಿ ಸರಳ ಅಭಿವ್ಯಕ್ತಿಯ ಮೂಲಕ ಹೊಸ ಅರ್ಥಗಳ ಅಲೆಯನ್ನು ಎಬ್ಬಿಸುವ ಅಪರೂಪದ ಸಂಕಲನ. (ಎಷ್ಟು ಮತ್ತು ಹೇಗೆ ಹೇಳಬೇಕೆನ್ನುವುದನ್ನು ಅವರು ಗಣಿತದಿಂದ ಕಲಿತ ಹಾಗೆ ಬರೆದಿದ್ದಾರೆ!)


ಹಕ್ಕಿ ಗೂಡುಕಟ್ಟಿ ಮೊಟ್ಟೆಯಿಟ್ಟು ಕಾವು ಕೂತು 'ತನ್ನ ಮರಿಗಳನ್ನು /ಆಕಾಶಕ್ಕೆ ಅರ್ಪಿಸುವುದು' ಎಂಬ ವಿಶಿಷ್ಟ ದರ್ಶನ ಮಾಡಿಸುವ 'ಹಕ್ಕಿ ಆಕಾಶದ್ದು' ಎಂಬ ನಿಲುವು ಝೆನ್, ತಾವೊ ಮಾದರಿಗಳ ಹಾಗೆ ಚಿಂತನಶೀಲ. ಹಾಗೆಯೇ,

ಮಳೆಯನ್ನು
ಹಾಡುವುದು ಎಂದರೆ
ಕೊನೆ- ಮೊದಲಿರದ
ಒಂದು ಹರಿವನ್ನು
ನುಡಿಸುವುದು ಎಂದರ್ಥ

ಮಳೆಯನ್ನು
ನುಡಿಸುವುದು ಎಂದರೆ
ಕತ್ತರಿಸಿಹೋದ ಬೆರಳುಗಳಿಂದ
ಆಕಾಶದ ವೀಣೆಯನ್ನು
ನೇವರಿಸುವುದು ಎಂದರ್ಥ
(ಒಂದು ಮಳೆಯನ್ನು ಏನೆಲ್ಲಾ ಮಾಡಬಹುದು)
🦅

ಈಗ ನನಗರ್ಥವಾಗತೊಡಗಿದೆ
ನಿನ್ನನು ಮರೆಯುವುದೆಂದರೆ ಅದು ಸಾವೆಂದು
ನಾನು, ನೀನು ಮಾತ್ರವೆಂದು
(ವಿಲೀನ)

philosophical ಸಂಗತಿಗಳನ್ನು ಇಷ್ಟು ಸರಳವಾಗಿ ಹೀಗೂ ಹೇಳಬಹುದು!
*
ಹಕ್ಕಿ-ಆಕಾಶ, ನೀನು-ನಾನು, ನೀವು-ಆಕೆ.. ಹೀಗೆ ಸಂಬಂಧಗಳನ್ನು ನಿಸರ್ಗದ ಭಾವಪರವಾದ ಸಂಗತಿಗಳೊಡನೆ ಕಲ್ಪಿಸುತ್ತಾ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಧ್ವನಿಯಲ್ಲಿ ಹೇಳುವ ಕವಿತೆಗಳಿವು. ಈ ರೂಪಕಗಳು ಪರಸ್ಪರ ಪೂರಕವಾಗಿ ಸಂಬಂಧಗಳನ್ನು ಕಲ್ಪಿಸುತ್ತವೆ.

'ಅಹಲ್ಯೆ' ಕವಿತೆ ಹೀಗಿದೆ:

ಜೊತೆಯಲ್ಲಿ
ಬಾಳುವೆ ಮಾಡುತ್ತಿರುವವಳನ್ನು
ಹೂವೆಂದು
ಮೊದಮೊದಲು ಭಾವಿಸುವರು
ಬರುಬರುತ್ತಾ
ಅವಳನ್ನೊಂದು
ಕಲ್ಲನ್ನಾಗಿ ಗಣಿಸುವರು.

ಅಲ್ಲದಿದ್ದರೂ
ಅಸಡ್ಡೆಯ
ನಿಂದನೆಯ
ಅಸಂಖ್ಯ
ಅನುಭವಗಳ ಮೂಲಕ
ಹಾದು ಹೋಗುವಾಗ
ಯಾವುದೇ ಹೂವು
ಕಲ್ಲಾಗಿ ಬಿಡುವುದು

ಅಹಲ್ಯೆ-ಹೂವು-ಕಲ್ಲು ಎಷ್ಟು ಅದ್ಭುತವಾಗಿ ಅರ್ಥಗಳನ್ನು ಮಿಂಚಿಸುತ್ತಿವೆ.

'ಹೆಬ್ಬಂಡೆ ಮೌನ' ಕವನದಲ್ಲಿ ನೀನು ಮತ್ತು ನಾನು- ಇವುಗಳ ಪ್ರೇಮದ ಹಂಬಲವು-

'ನೀನು' ಆಗಮನಕ್ಕೆ ಕಾಯುವಾಗ- 'ನಾನು' ಕೋಗಿಲೆ
ನೋಟಕ್ಕೆ ಕಾಯುವಾಗ- ಪಾರಿವಾಳ
ಸ್ಪರ್ಶಕ್ಕೆ ಯತ್ನಿಸುವಾಗ- ಬೆಟ್ಟದ ನವಿಲು
ಒಲವಿಗೆ ಪರಿತಪಿಸುವಾಗ- ಅರಗಿಣಿ

ಆಗಿದ್ದಾಗ

ಇವಳ ನಿವೇದನೆಗೆ ಸಿಗುವುದು ಅವನ ಹೆಬ್ಬಂಡೆ ಮೌನ.

ಆ ಮೌನ ಕರಗಿಸಲು ಬರುವ
'ಇವಳ' ಕೋಗಿಲೆಗೆ- 'ಅವನ' ಮತಧರ್ಮಗಳ ಛೂ ಬಿಡುವಿಕೆ
ಪಾರಿವಾಳಕ್ಕೆ- ನೀತಿ ನಿಯತಿಗಳ ಛೂ ಬಿಡುವಿಕೆ
ನವಿಲಿಗೆ- ಹೀನ ಕುಲೀನಗಳ ಛೂ
ಅರಗಿಣಿಗೆ- ಹತಾಶೆ ಹೇಡಿತನಗಳ ಛೂ


ಮುಂದಿನದು suppression . ಅವನ ಹೆಬ್ಬಂಡೆ ಮೌನವು
ಕೋಗಿಲೆ -ಹಾಡಿಲ್ಲ-ಕೊರಳು ಬಿಗಿದಿದೆ
ಪಾರಿವಾಳ- ಹಾರುವುದಿಲ್ಲ- ರೆಕ್ಕೆ ಮುರಿದಿದೆ
ನವಿಲು- ಕುಣಿಯುವುದಿಲ್ಲ- ಗರಿ ತರಿದಿದೆ
ಅರಗಿಣಿ - ಉಲಿಯುವುದಿಲ್ಲ- ಧ್ವನಿ ಉಡುಗಿಸಿದೆ

ಕಡೆಯ ಭಾಗದ ಹೋಲಿಕೆಗಳು-

ಕಣ್ಣಿಗೆ ತಂಪಾಗದ ಕುಸುಮ - ನಿಹಾರಿಕೆ
ದಾಹ ತಣಿಸದ ನದಿ- ಸಾಗರದ ಉಪ್ಪು ನೊರೆ
ನೆರಳು ಕೊಡದ ಮರ- ಅಗ್ನಿಮುಖ
ಮಹಾತ್ಮ- ಹಾಡು

ಹೀಗೆ ಹೇಳುತ್ತಾ ಪ್ರೀತಿಯನ್ನು ಉರಿದು ತೀರುವ ಮೇಣದ ಬತ್ತಿ ಎಂದು 'ಅದು ಇರುವಷ್ಟು ಕಾಲ ಮಾತ್ರ ಬೆಳಕು' ಎಂಬ ನಿಲುವನ್ನು ತಾಳುತ್ತದೆ .

ಈ ದೀರ್ಘ ಕವಿತೆಯಲ್ಲಿ ಸ್ಪಷ್ಟತೆ ಇದೆ. ಪ್ರತಿಮೆ- ರೂಪಕಗಳ ಚಕ್ರಗತಿಯ ಚಲನೆಯಿದೆ. ಹೆಣ್ಣಿನ ಪ್ರೀತಿಯ ಎದುರಿಗಿರುವ ಗಂಡಿನ ಪ್ರೀತಿಯನ್ನು ಮುಖಾಮುಖಿಯಾಗಿಸಿ ಆರ್ಭಟಿಸದೆ ಸರಳವಾಗಿ ಹೇಳಲಾಗಿದೆ.
*



ಮನುಷ್ಯನ ಗುಣಗಳನ್ನು ನಿಸರ್ಗದ ಅಂಶಗಳೊಂದಿಗೆ ಹೋಲಿಸುವ , ಸಂಬಂಧ ಕಲ್ಪಿಸುವ ಈ ಕ್ರಮದಲ್ಲಿ ಅಸಂಗತತೆಯೂ ಇದೆ

'ವಿರಾಮ' ಕವಿತೆಯಲ್ಲಿ

ಸಮುದ್ರ - ನೋವು
ಬಾಂದಳ- ತಿರಸ್ಕಾರ
ಹಾದಿ- ವೇಷ
ಕವಿತೆ-ಸಾವು

ಹೀಗೆ.

ಒಬ್ಬಂಟಿಯಾಗಿ
ಈಜಬೇಕಿರುವ ಸಮುದ್ರಗಳಿವೆ
ಯಾರೂ ಜೊತೆಗಿಲ್ಲದೆ
ಯಾವ ಅವಲಂಬನೆಯೂ ಇಲ್ಲದೆ

ಕೆಲ ನೋವುಗಳು ಅಂತೆಯೇ
ಹಂಚಿಕೊಳ್ಳಲು ಆಗುವುದಿಲ್ಲ
ಅನುಭವಿಸಲೇಬೇಕು
(ವಿರಾಮ)
*
ಹಳ್ಳಿಯ ಸಾಮಾನ್ಯ ಮಹಿಳೆಯೊಬ್ಬಳು ಹೇಳಿಕೊಳ್ಳುತ್ತಿರುವ ಕವಿತೆಗಳಂತಿರುವ ಇವು ಮೊಬೈಲ್ ಫೋನುಗಳು ಕಾಲಿಡುವುದಕ್ಕೂ ಹಿಂದಿನ ಕಾಲದ ಮುಗ್ಧತೆಯನ್ನು ಉಳಿಸಿಕೊಂಡಿವೆ. ಕೇವಲ ಗಂಡಿನ ಕೊರತೆಗಳನ್ನು ಶೋಧಿಸುವ, ಆಕ್ರೋಶ ವ್ಯಕ್ತಪಡಿಸುವ ಮಾದರಿಯಲ್ಲ ಇವು.

ಕಿರುಗುಟ್ಟಿದ ತೊಟ್ಟಿಲ ಸದ್ದಿಗೆ
ಎಚ್ಚೆತ್ತು ಬರುವಷ್ಟರಲ್ಲಿ
ರಚ್ಚೆ ಹಿಡಿದ ಮಗಳ
ಹಗುರವಾಗಿ ಮೇಲೆತ್ತಿ
ರಮಿಸಿ, ಮುತ್ತಿಟ್ಟು
ಎದೆಗೆ ಹಾಕಿ
ಹಾಲೂಡಿಸುತ್ತಾ
ಬರೆದ ಸಾಲುಗಳು
ಹೆಂಗಸರು ಬರೆದ ಪದ್ಯಗಳು
ಯಾವಾಗಲೂ
ಅಕ್ಕರೆಯನು ಜಿನುಗಿಸುತ್ತವೆ. (ಹೆಂಗಸರ ಪದ್ಯ)

ಇನ್ನೇನು ಪೂರ್ಣ ವಾಚ್ಯವಾಗಿಬಿಡಬೇಕು ಎನ್ನುವಷ್ಟರಲ್ಲಿ ಕೊನೆಯ ಸಾಲು mutation ಗೆ ಒಳಗಾಗಿ ಕವಿತೆಯ ಅರ್ಥ ಮತ್ತು ಲಯವನ್ನು ಬೇರೆ ಕಡೆಗೆ ಕೊಂಡೊಯ್ಯುತ್ತದೆ.

ಅಡುಗೆ ಮನೆಯ ಪ್ರಯೋಗಗಳು ಇದುವರೆಗೆ ಯಾರೂ ಬಳಸದ ಪದಾರ್ಥಗಳನ್ನು ಮತ್ತು ವಿಧಾನಗಳನ್ನು ಒಳಗೊಂಡಿವೆ:

ಕನಸುಗಳೇನಾದರೂ
ಬಾಕಿ ಉಳಿದಿದ್ದರೆ ಅವನ್ನು
ಸಣ್ಣದಾಗಿ ಹೆಚ್ಚಿ
ಆ ಕಣ್ಣೀರಿನಲ್ಲಿ ಹಾಕಿರಿ.

ಕೊನೆಗೊಮ್ಮೆ ಹದಕ್ಕೆ ಬಂದಾಗ
ಸಿಡಿದು ಬೀಳುವ ಕೆಲವು
ಪ್ರತಿಭಟನೆಯ ಸ್ವರಗಳು ಕೇಳಿರಬಹುದು
ಪರವಾಗಿಲ್ಲ
ಸ್ವಲ್ಪ ಹೊತ್ತು ಮುಚ್ಚಿಟ್ಟಿರಿ
(ಹೊಸ ರುಚಿಯ ಅಡುಗೆಗೊಂದು ಟಿಪ್ಪಣಿ)

*
ಮಂಜುಳಾ ಹಿರೇಮಠ ಅವರು ಗಂಡು-ಹೆಣ್ಣಿನ ಸಂಬಂಧ, ದಾಂಪತ್ಯದ ಬದುಕು- ಇವನ್ನು matured ಆದ ಕೋನದಲ್ಲಿ ಅಳೆಯುತ್ತಾರೆ. ಅದರ ವೈರುಧ್ಯವನ್ನೂ ಹುಸಿತನವನ್ನೂ ತೆರೆದಿಡುತ್ತಾರೆ. ಆದರ್ಶವನ್ನೂ.

ನಿನ್ನ ಮಂದಿರವ
ನೀ ಬಿಟ್ಟು ಬಾ
ನನ್ನ ಗೋಪುರವ
ನಾ ಬಿಟ್ಟು ಬರುವೆ

ನಿನ್ನೊಳಗಿನ ಬೇಹುಗಾರಿಕೆಯ
ಬಿಟ್ಟು ಬಾ
ನನ್ನೊಳಗಿನ ಶಂಕೆಗಳ
ಬಿಟ್ಟು ಬರುವೆ

ನೀನು ನೀನಾಗಿಯೇ
ನಾನು ನಾನಾಗಿಯೇ
ನಾವೆಂಬ ಪ್ರೇಮಕ್ಕೆ
ಪ್ರತಿಮೆಯಾಗೋಣ
(ಪ್ರತಿಮೆಯಾಗೋಣ ಬಾ)
*

ಸ್ವಾತಂತ್ರ್ಯಕ್ಕಾಗಿನ ಹಂಬಲ , ಪಡೆಯುವ ಸ್ವಾತಂತ್ರ್ಯವನ್ನು ಪ್ರಕೃತಿಯ ಸಹಜ ಚೆಲುವಿಕೆಗಳ ಜೊತೆ ಅನುಭವಿಸಬೇಕೆಂಬ ವಾಂಛೆ ಹಲವು ಕವಿತೆಗಳಲ್ಲಿವೆ:

ನಾನು ಬರೆಯುವಾಗಲೆಲ್ಲಾ
ಒಬ್ಬಳು ವಸಂತದೊಡನೆ
ಮಾತನಾಡುವ ಹಾಗೆ
ಕಣ್ಣುಗಳನ್ನು ಅರಳಿಸಿ
ನಾಸಿಕವನ್ನು ಮೇಲೇರಿಸಿ
ನನಗೊತ್ತರಿಸಿ ಕೂರುತ್ತಾಳೆ
ಅವಳ ಪ್ರೇಮದ ಹೊತ್ತಗೆಯನ್ನು
ತೆರೆದಿಡುತ್ತಾಳೆ
(ನಾನು ಬರೆಯುವಾಗ)

ಆಗಾಗ
ಅವಳ ಕನಸಿನಲ್ಲೊಂದು ಕೊಕ್ಕರೆ
ಅಪ್ಪಣೆ ಇಲ್ಲದೆ ಪ್ರವೇಶಿಸುತ್ತದೆ 
ಅವಳ ದೇಹ ಆಗ
ಮರಿಮೀನುಗಳು ಓಡಾಡುವ 
ಕಿರುತೊರೆಯಾಗುತ್ತದೆ
ಆ ಕಿರುತೊರೆಯಿಂದ
ಕುಣಿದು ಕುಪ್ಪಳಿಸುವ ಮೀನುಗಳನ್ನು 
ತನ್ನ ಉದ್ದದ ಚೂಪು ಕೊಕ್ಕಿನಿಂದ
ಕೊಕ್ಕರೆ ಕುಟುಕಿ ಕುಟುಕಿ ತೆಗೆಯುತ್ತದೆ 
ಬಳಿಕ ಹಾರಿ ಮರೆಯಾಗುತ್ತದೆ.
(ಮತ್ತೊಬ್ಬಳು)
*

ಮಂಜುಳಾ ಹಿರೇಮಠ ಅವರ ಸ್ತ್ರೀವಾದದ ಮಾದರಿ ಹೀಗಿದೆ:

ಅವಳ ಕಾವ್ಯದಲ್ಲಿ 
ಬಾಹ್ಯ ಪ್ರಪಂಚ ಇಲ್ಲವೆಂದು 
ಸಾರ್ವತ್ರಿಕ ವಸ್ತುಗಳಿಲ್ಲವೆಂದು
ಹೊರಗೆ
ಜನಜಂಗುಳಿಯಿಂದೊಬ್ಬ
ಪುರುಷ ವಿಮರ್ಶಿಸುವಾಗ
ಹೊರಗಿನಿಂದ ಈ ಬಾಗಿಲಿಗೆ 
ಬೀಗ ಜಡಿದವರು ಯಾರೆಂದು
ಒಳಗೆ ಕವಿಯೊಬ್ಬಳು
ಬಾಗಿಲನ್ನು ತಟ್ಟುತ್ತಿರುತ್ತಾಳೆ

ಕಾವ್ಯದೆಡೆಗೆ ಕವಿಯೊಬ್ಬ
ನಡೆವ ದೂರವಲ್ಲ
ಕವಿಯೊಬ್ಬಳು ನಡೆವ ದೂರ!
(ಕವಿಯೊಬ್ಬಳು ನಡೆವ ದೂರ)
*

ಏಕಾಗ್ರತೆಯೇ ಇಲ್ಲದ ಈ ಕಾಲದಲ್ಲಿ ಹಳೆಯ ಏಕಾಗ್ರತೆಯನ್ನು ಸೋರಿಹೋಗದ ಹಾಗೆ ನೋಡಿಕೊಂಡು ಹೊಸ ನುಡಿಗಟ್ಟಿನ ಅಪರೂಪದ ಕವಿತೆಗಳನ್ನು ಕೊಟ್ಟಿರುವ ಮಂಜುಳಾ ಹಿರೇಮಠ ಅವರಿಗೆ ಅಭಿನಂದನೆಗಳು.
*


ಕಾಜೂರು ಸತೀಶ್ 





Wednesday, June 9, 2021

ಶೋಷಣೆ

ಯಾವುದು ತಳದಲ್ಲಿರುತ್ತದೋ ಅದು ಎಲ್ಲ ಭಾರಗಳನ್ನೂ ಹೊರಬೇಕಾಗುತ್ತದೆ( 'ಭಾರ' ಎನ್ನುವುದರ ಒಳಗೇ ನೇತ್ಯಾತ್ಮಕವಾದ ಧ್ವನಿ ಇದೆ). ಉದಾಹರಣೆಗೆ - ಪಾದ, ಅದಕ್ಕೂ ತಳದಲ್ಲಿರುವ ಚಪ್ಪಲಿಗಳು, ಇನ್ನೂ ಕೆಳಗಿರುವ ಭೂಮಿ. ಅವುಗಳ ಅಭೂತಪೂರ್ವ ಸೇವೆಯ ನಡುವೆಯೂ ಅವು ತುಳಿಸಿಕೊಳ್ಳುತ್ತವೆ; ನಿಷೇಧಕ್ಕೊಳಪಡುತ್ತವೆ(ಹಾಗೆಂದು ಅವು ಹೇಳಿಕೊಳ್ಳುವುದಿಲ್ಲ, ಸಹಿಸಿಕೊಳ್ಳುತ್ತವೆ!).

ಕತ್ತಿನ ಭಾರವನ್ನು ಹೆಗಲಿಗೆ ವರ್ಗಾಯಿಸಬಹುದು. ಹೆಗಲಿನ ಭಾರವನ್ನು ತೋಳು, ಎದೆ, ಹೊಟ್ಟೆಗೆ ವರ್ಗಾಯಿಸಬಹುದು. ಆದರೆ ಕಾಲುಗಳ ಭಾರವನ್ನು ಶರೀರದ ಹೊರಗಿರುವ ಚಪ್ಪಲಿಗಳಿಗೆ ಅಥವಾ ನೆಲಕ್ಕೆ ವರ್ಗಾಯಿಸಬೇಕು.
*
ನಮ್ಮೆದುರಿಗಿರುವ ವ್ಯಕ್ತಿ ಪಾಪದವನಂತೆ ಕಂಡರೆ ನಮ್ಮ ದನಿ ಏರುತ್ತದೆ. ಏನೂ ಮಾತನಾಡದಿದ್ದರೂ ಮಾನಸಿಕವಾಗಿ , ಸಂವೇಗಾತ್ಮಕವಾಗಿ ನಾವು ಅವನನ್ನು ಶೋಷಿಸಲು ತೊಡಗುತ್ತೇವೆ. ನಮ್ಮ ಒಳಗೇ ಆ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ. ಒಬ್ಬ ಶೋಷಿತ ತನಗಿಂತ ಅಮಾಯಕನಾದ ಮತ್ತೊಬ್ಬನನ್ನು ಶೋಷಿಸುತ್ತಾನೆ. ಅದಕ್ಕೆ ಜಾತಿ, ಧರ್ಮ, ಲಿಂಗ/ಜೆಂಡರ್, ಅಧಿಕಾರ, ಅಂತಸ್ತು , ವರ್ಣ, ನಿಲುವು, ವೃತ್ತಿ... ಇವೆಲ್ಲ ಮಾನಕಗಳಾಗುತ್ತವೆ.

ಒಂದನ್ನು ಒಂದು ಕೊಂದು, ತಿಂದು ಬದುಕುವ ಸೃಷ್ಟಿಯ ನಿಯಮದಂತಲ್ಲ ಇದು.
*


ಕಾಜೂರು ಸತೀಶ್ 

Saturday, May 29, 2021

ಮೌಲ್ಯ , ಶಿಕ್ಷಣ, ಅಹಂ, ಕಾಮನ್ ಸೆನ್ಸ್ ಮತ್ತು ಭ್ರಷ್ಟಾಚಾರ

ನಾನು ಪ್ರತಿದಿನ ಸಂಚರಿಸುವ ರಸ್ತೆಯ ಮಧ್ಯಭಾಗದಲ್ಲಿ ಬಿಳಿಯ ಗೆರೆಯೊಂದನ್ನು ಎಳೆಯಲಾಗಿದೆ. ಹೋಗುವವರಿಗೆ ಬರುವವರಿಗೆ ಅದೊಂದು ಸೂಚನೆ; ಮುಟ್ಟಬಾರದೆಂಬ ಸೂಚನೆ; ಆಚೆ ದಾಟಬಾರದೆಂಬ ಸೂಚನೆ.

ನಿತ್ಯ ಎದುರಿಗೆ ವಾಹನಗಳಲ್ಲಿ ಬರುವ ಮಂದಿ ಆ ಗೆರೆಯನ್ನು ಮುಟ್ಟಿ, ದಾಟಿ ಇನ್ನೂ ಈಚೆಗೆ ಬರುತ್ತಾರೆ. ಅವರ ಲೆಕ್ಕ ಇಡುತ್ತೇನೆ. ನೋಡಿದರೆ, ಅವರಲ್ಲಿ white collar ಮಂದಿಯಂತೆ ಕಾಣುವ ಜನರೇ ಹೆಚ್ಚು. 

ನಮಗೆ ರಸ್ತೆಯಲ್ಲಿ ಜಾಗವಿಲ್ಲದಿದ್ದರೆ ಅವರಿಗೇನಂತೆ!
*

ರಸ್ತೆಯಲ್ಲಿ ಹೋಗುತ್ತಿರುತ್ತೇನೆ. ಹಿಂದಿಕ್ಕಿ ಹೋಗುವ ಬೆಲೆಬಾಳುವ (ಕೆಲವೊಮ್ಮೆ ಅಗ್ಗದ ) ಕಾರಿನ ಕಿಟಕಿಯಿಂದ ಪ್ಲಾಸ್ಟಿಕ್ ಬಾಟಲಿ/ತಿಂಡಿಪೊಟ್ಟಣ ರಸ್ತೆಗೆ ಬೀಳುತ್ತದೆ. ನನ್ನನ್ನು ಅವಮಾನಿಸುವ ಹಾಗೆ ರಸ್ತೆಯಲ್ಲೇ ಆ ಬಾಟಲಿ/ಪ್ಲಾಸ್ಟಿಕ್ಕುಗಳು ರಾಜಾರೋಷವಾಗಿ ಮಲಗಿಬಿಡುತ್ತವೆ.
*

ನಿನ್ನೆ ದಿನವೂ ನೋಡಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಾರು ನಿಲ್ಲಿಸಿದ ಬಿಳಿಯ ಅಂಗಿ ಧರಿಸಿದ ಆ ವ್ಯಕ್ತಿ ತನ್ನ ಬಲಗೈಯಲ್ಲಿ ಮೂಗನ್ನು ಹಿಡಿದು ಸೀಟಿ ಜನರು ನಡೆದಾಡುವ ರಸ್ತೆಬದಿಗೆ ಸಿಂಬಳದ ಪಾದಸ್ಪರ್ಶವಾಗುವ ಹಾಗೆ ಮಾಡಿ ಎರಡೂ ಕೈಗಳನ್ನು ಉಜ್ಜಿಕೊಳ್ಳುತ್ತಾ ಕಾರು ಹತ್ತಿ ಹೊರಟುಹೋದ.

ಅವನ ವೇಷಭೂಷಣದಿಂದ ಅವನು ಕನಿಷ್ಟ ಒಂದು ಪದವಿಯ ಒಡೆಯನಾದರೂ ಆಗಿರಬಹುದು ಎಂದುಕೊಂಡೆ.
*

ಇದನ್ನು ಓದುತ್ತಿರುವ ಹಲವರು ಅಂದುಕೊಳ್ಳುತ್ತಿರುತ್ತಾರೆ: 'ಅವರು ಏನಾದರೂ ಮಾಡಿಕೊಳ್ಳಲಿ. ಇವನಿಗೇನು? ಅದು ಅವರವರ ಸ್ವಾತಂತ್ರ್ಯ.. ಇವನಿಗೇನು ನಷ್ಟ?!'

ಹಾಗೆ ಓದುತ್ತಿರುವವರೆಲ್ಲರೂ ವಿದ್ಯಾವಂತರು. ಪಂಡಿತರು! ಹಲವರು ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು!
*

ಬಸ್ ನಿಲ್ದಾಣದ ಪಕ್ಕದ ಅಂಗಡಿಯವನಿಗೆ - 'ವ್ಯಾಪಾರ ಹೇಗೋ ಆಗುತ್ತದೆ, ಆದರೆ ಕಸ ಬಾಚೋರ್ಯಾರು?' ಎಂಬ ಚಿಂತೆ. ಅಷ್ಟಕ್ಕೂ ಅಲ್ಲಿ ಕಸ ಹಾಕುವವರು ಪ್ರತಿಷ್ಠಿತ ಎನಿಸಿಕೊಂಡ ಸಂಸ್ಥೆಗಳಲ್ಲಿ ಓದುತ್ತಿರುವ ಶಾಲಾ-ಕಾಲೇಜು ವಿದ್ಯಾರ್ಥಿಗಳು!

*
ಹತ್ತು ಗಂಟೆಗೆ ಸಭೆ/ ಕಾರ್ಯಕ್ರಮ ಎಂದು ಸಮಯ ನೀಡಲಾಗಿರುತ್ತದೆ. ಆಯೋಜಕ/ಕಿ ಶಿಸ್ತಿನ ವ್ಯಕ್ತಿಯಾಗಿದ್ದು ಮೊದಲೇ ಸಿದ್ಧನಾಗಿದ್ದಾನೆ/ಳೆ ಎಂದುಕೊಂಡರೆ, ಭಾಗಿಯಾಗಬೇಕಾದವರು ಆ ಹೊತ್ತಿಗೆ ಇನ್ನೂ ತಲೆಯೇ ಬಾಚಿರುವುದಿಲ್ಲ. ಕೆಲವರು ಹಾಸಿಗೆಯಿಂದ ಎದ್ದೇ ಇರುವುದಿಲ್ಲ. ಅಥವಾ ಇವರಲ್ಲನೇಕರು ಸರಿಯಾದ ಸಮಯಕ್ಕೆ ಬಂದು ಹಾಜರಿದ್ದರೂ, ಆಯೋಜಕನ ನಿದ್ದೆ ಬಿಟ್ಟೇ ಇರುವುದಿಲ್ಲ!
*

ಗುಡ್ಡದ ಮೇಲೆ ಚಾರಣ ಹೋದಾಗ ನನ್ನ ಗೆಳೆಯ ಹೇಳುತ್ತಿರುತ್ತಾರೆ- 'ಮನುಷ್ಯರೇ ಇಲ್ಲದಿದ್ದರೆ ಈ ಪರಿಸರ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ? ಮನುಷ್ಯ ಇಲ್ಲದಿದ್ದರೂ ಇದು ಇದ್ದೇ ಇರುತ್ತದೆ , ಮನುಷ್ಯರನ್ನು ಅದು ಅವಲಂಬಿಸಿಲ್ಲ. ಆದರೆ ಅದು ಇಲ್ಲದೆ ಮನುಷ್ಯರಿರುವುದಿಲ್ಲ...'

'ಮತ್ತೆ ಇಷ್ಟು ಉಳಿದಿದೆ ಅಂದ್ರೆ ಅದಕ್ಕೆ ಅಮಾಯಕ, ಅನಕ್ಷರಸ್ಥರೇ ಕಾರಣ!'
*

ನೀತಿ ಹೇಳಿಕೊಡುವ ಗುರುಗಳಲ್ಲಿ/ಸಮಾಜದಲ್ಲಿ ಆ ನೀತಿಗಳ ಕೊರತೆಯನ್ನು ವಿದ್ಯಾರ್ಥಿಗಳು/ಕಿರಿಯರು ಕಂಡುಕೊಂಡಾಗ ಇಡೀ ಮೌಲ್ಯ ವ್ಯವಸ್ಥೆ ಬುಡಮೇಲಾಗುತ್ತದೆ. ಸರಿಯಾಗಿ ಓದಲು- ಬರೆಯಲು ತಿಳಿಯದ, ವಿದ್ಯಾರ್ಥಿಯ ಸಮಸ್ಯೆಗೆ ಪರಿಹಾರ ಸೂಚಿಸಲಾಗದ, ಅವರ ವೇಗದಲ್ಲಿ ಮುನ್ನುಗ್ಗಲಾಗದ ಗುರುಗಳಿದ್ದಾಗ 'ಮೌಲ್ಯ' ಎನ್ನುವುದು ಹೇಳುವುದಕ್ಕೆ ಮಾತ್ರ ಇರುವ ಸಂಗತಿಯಾಗುತ್ತದೆ.
*

' ನಮ್ಮ ಜನಕ್ಕೆ ಯಾಕೆ common sense ಇಲ್ಲ' ಎಂದರು ಗೆಳೆಯರೊಬ್ಬರು. ' ಭ್ರಷ್ಟಾಚಾರ ಸರ್' ಎಂದೆ!!
ತಲೆಬುಡ ಅರ್ಥವಾಗದವರಂತೆ ನೋಡಿದರು. ಎಳೆಎಳೆಯನ್ನೂ ವಿವರಿಸಿದೆ.

'ನಿಜ ಸರ್' 'ಛೆ' ಎಂದರು.
*


ಕಾಜೂರು ಸತೀಶ್

Thursday, May 27, 2021

ಬರೆಯಲಾರೆ

ಈ ರಾತ್ರಿ
ಮಿಡತೆಯ ಹಾಡು
ಕಾಡಾನೆಯ ಘೀಳು
ನಾಯಿಗಳ ಬೊಗಳು
ಮೈಸೋಕುವ ಗಾಳಿ
ಮಳೆಯ ಸಪ್ಪಳ
ಇರದಿದ್ದರೆ
ಕವಿತೆ ಬರೆಯುತ್ತಿದ್ದೆ
ನಿನ್ನ ಕುರಿತು


ಈ ರಾತ್ರಿ
ಗಡಿಯಾರದ ಮುಳ್ಳಿನ ನಡಿಗೆ
ಹೆಂಚಿನ ಸೆರೆಯಿಂದ ಇಳಿವ ಮಳೆಹನಿ
ಕನವರಿಸುವ ಅಮ್ಮನ ದಣಿವು
ಭದ್ರವಿರದ ಗೋಡೆ
ಕಿರುಗುಡುವ ಹಾಸಿಗೆ
ಚರವಾಣಿಯ ರಿಂಗಣ
ಇರದಿದ್ದರೆ
ಕವಿತೆ ಬರೆಯುತ್ತಿದ್ದೆ
ನನ್ನ ಕುರಿತು


ಕ್ಷಮಿಸಿ
ಬರೆಯಲಾರೆ
ನಿಮ್ಮ ಕುರಿತು
ಹಗಲಿನಲ್ಲೂ


ಅಳುತ್ತೇನೆ
ಅಷ್ಟೇ.
*


ಕಾಜೂರು ಸತೀಶ್ 

Wednesday, May 26, 2021

Status ಎಂಬ ಮಾಯೆ ಮತ್ತು ಮೂರ್ಖತನದ ಪರಮಾವಧಿ

ಸಾಮಾಜಿಕ ಜಾಲತಾಣ(facebook ,whatsapp ,instagram ಇತ್ಯಾದಿ)ಗಳ Statusಗಳನ್ನು ನೋಡಿದರೆ ಒಂದು 'ವ್ಯವಸ್ಥೆ'(system) ಕಣ್ಣಮುಂದೆ ಪ್ರತ್ಯಕ್ಷವಾಗುತ್ತದೆ. ನಮ್ಮ ನಮ್ಮ ನಿಲುವುಗಳು-ಅದರಲ್ಲಿರುವ ಸೂಕ್ಷ್ಮತೆ- ನಮ್ಮನ್ನು ಅಷ್ಟರ ಮಟ್ಟಿಗೆ ಸಿದ್ಧಗೊಳಿಸಿರುವ ಪದ್ಧತಿ(ಶಿಕ್ಷಣ,ಸಮಾಜ,ಸಂಸ್ಕೃತಿ), ನಮ್ಮ ಹವ್ಯಾಸ -ಅಭ್ಯಾಸಗಳು, ವೃತ್ತಿ-ಪ್ರವೃತ್ತಿಗಳು,ವ್ಯಾಪಾರ- ವಹಿವಾಟು, ಆಸಕ್ತಿಯ ಕ್ಷೇತ್ರಗಳು, ಕೌಟುಂಬಿಕ - ಸ್ನೇಹಿತ ವಲಯ.. ಹೀಗೆ.


ಗಂಡ/ಹೆಂಡತಿ ತಮ್ಮ ಪಕ್ಕದಲ್ಲೇ ಇರುವ ಹೆಂಡತಿ/ಗಂಡನಿಗೆ ಪರಸ್ಪರ ಶುಭಾಶಯ ಹೇಳಿಕೊಳ್ಳಬಹುದಾದ ಅವಕಾಶವನ್ನು ಈ statusಗಳು ಕಸಿದಿವೆ. ಹೀಗೆ, ಕುಟುಂಬದ ಸದಸ್ಯರ ಖಾಸಗಿ ಸಂಗತಿಗಳು ಲೋಕದ ಕಣ್ಣು ಸೇರುತ್ತವೆ. 

ಹುಟ್ಟಿದ್ದೇನೆ/ಮದುವೆಯಾಗಿದ್ದೇನೆ ಎನ್ನುವ ಕಾರಣಕ್ಕೆ ಪ್ರತೀ ವರ್ಷ ಕೇಕು ಕತ್ತರಿಸುವ ಸಂಗತಿ ಮನೆಯ ಗೋಡೆಗಳಿಗೆ ತಿಳಿದರೆ ಸಾಲದೇ? ನಿಜಕ್ಕೂ ಅದು ಸಾಮಾಜಿಕವಾಗಿ ಸಂಭ್ರಮಿಸುವ ಸಂಗತಿಯೇ? 

ಇಂತಹ ಕೃತಕ ಶುಭಾಶಯಗಳು ಯಾವ ಬಗೆಯ ಸುಖವನ್ನು  ನಮಗೆ ನೀಡುತ್ತದೋ- ತಿಳಿಯುತ್ತಿಲ್ಲ.

ಯಾವುದು ವ್ಯಕ್ತಿಗತ ,ಯಾವುದು ಸಾಮಾಜಿಕ ಎನ್ನುವ ಕನಿಷ್ಟ ಅರಿವು ಕೂಡ ನಮ್ಮಿಂದ ದೂರ ಸರಿದಿದೆ. ಹೀಗಾಗಿ ಖಾಸಗಿ ಸಂಗತಿಗಳೇ ವಿಜ್ರಂಭಿಸುತ್ತಿವೆ.


ಇರುವ ಕೆಲವೇ ಕೆಲವು ಸಂವೇದನಾಶೀಲ ಜನರು ಇದರಿಂದ ಬಳಲಿಹೋಗುತ್ತಾರೆ. ಅವರ ಮೌನ ಇವರ ಆರ್ಭಟದಲ್ಲಿ ಮತ್ತಷ್ಟೂ ನಿರ್ವಾತ ಸ್ಥಿತಿಯನ್ನು ಮುಟ್ಟುತ್ತದೆ.


ಎಷ್ಟಾದರೂ, ನಾವು ಹಂಚಿಕೊಳ್ಳುವ statusಗಳು ನಮ್ಮ maturityಯನ್ನು ಪರೋಕ್ಷವಾಗಿ(ಪ್ರತ್ಯಕ್ಷವಾಗಿಯೂ) ಮಾಪನ ಮಾಡುತ್ತಿರುತ್ತವೆ. ನಮ್ಮ ಶೂನ್ಯಸಂಪಾದನೆ ಮಾತ್ರ ಯಾರಿಗೂ ತಿಳಿಯುವುದಿಲ್ಲ.
*


- ಕಾಜೂರು ಸತೀಶ್

Tuesday, May 25, 2021

ಭಾಗ್ಯ

ಹಿನ್ನೀರಿನ ಮೇಲಿನ ಹಕ್ಕಿ
ನೀರು ಮುಟ್ಟದೆ
ಗಾಳಿ ಮುಟ್ಟದೆ
ಗಗನ ಮುಟ್ಟದೆ
ಈಜಿ ಈಜಿ
ನೀರು ಮುಗಿದು
ನೆಲ ಬಂದರೆ
ಹಾರತೊಡಗುತ್ತದೆ
ಗಾಳಿಯಲ್ಲಿ
ಗಗನ ಆಗ ಪ್ಯಾರಾಚೂಟು
ಬಿಚ್ಚಿಕೊಳುವುದು ಮೆಲ್ಲನೆ

ನೆಲದ ಒಳಗಿನ ನೀರಿಗೆ 
ಹಾರಲು ಈಜಲು
ರೆಕ್ಕೆಯ ಭಾಗ್ಯವಿಲ್ಲ


ಎಲಾ! ಕಪ್ಪೆಯ ಭಾಗ್ಯವೇ!
*



ಕಾಜೂರು ಸತೀಶ್ 

ಬೇಸಿಗೆಯಲಿ ಗಾಯಗೊಳ್ಳಬಾರದು

ಬೇಸಿಗೆಯಲಿ ಗಾಯಗೊಳ್ಳಬಾರದು

ಅಕಾಸ್ಮಾತ್ ಪಾದದಲ್ಲಿ 
ಅಥವಾ ತುಸು ಮೇಲೆ
ಮಂಡಿಯಲ್ಲಿ ತೊಡೆಯಲ್ಲಿ
...................................
ಗಾಯಗೊಂಡರೆ...


ಹೊಟ್ಟೆಪಾಡು ಬಿಸಿಲಿಗೆ ಬೆಂದು
ಕಡಲು ಅಪ್ಪಳಿಸಿ
ಹನಿಹನಿ
ಕೆಳಜಾರಿ
ತಾಗಿದರೆ
'ಚುರುಕ್'


ಅದಕ್ಕೇ ಹೇಳುತ್ತಿರುವುದು
ಮಳೆಸುರಿಯುತ್ತಿರಬೇಕು
ಕಾಲ ಚಂಡಿಯಾಗಿರಬೇಕು
ತಿಳಿಯಬಾರದು ಕಣ್ಣಿಗೂ..

ನಾಲಿಗೆಯೂ ಒಣಗಬಾರದು.
*




ಕಾಜೂರು ಸತೀಶ್ 

Thursday, May 20, 2021

ಸಂತೆ

ಈ ಸಂತೆಯನ್ನು ನನ್ನ ಕಣ್ಣುಗಳು ನುಂಗಿವೆ
ಕಿವಿಗಳು ಕುಡಿದಿವೆ
ನಾನೀಗ ಒಂಟಿ
ಯೋಗಿ


ಒಳಗೆ ಸರಿಯುವ ನೂರಾರು ಚಕ್ರಗಳು 
ಸಾವಿರಾರು ಕರೆಗಳು
ದಾರಿಯಲ್ಲಿ ನಾನು
ಒಂಟಿ


ಇಲ್ಲಿ ಮೇಲೆತ್ತುವ ಕೈಗಳು ಬೆಳಗುವ ಹಲ್ಲುಗಳು
ನಕ್ಕು ಕೆನ್ನೆ ನೋವು
ಹೆಗಲ ಮೇಲಿದೆ ಕೈ
ನನ್ನದೇ



ಯಾರೋ ಕೈಮುಗಿದು ಕೈಚಾಚುತ್ತಾರೆ
ಕೊಟ್ಟು ಆಚೆ ತಿರುವಿಗೆ ಬಂದರೆ
ಮತ್ತೆ ಅವೇ ಕೈಗಳು
ಸಂತೆಯದು

*


ಕಾಜೂರು ಸತೀಶ್



ಅಂತರ

'....ಇದೇ ಕೆಲಸವನ್ನು ಖಾಸಗಿಯವರಿಗೆ ಹಂಚಿದ್ದಿದ್ದರೆ..' ಗೆಳೆಯರೊಬ್ಬರು ಕೇಳಿದರು.

'ಕೆಲಸ ಬೇಗ ಮುಗಿಯುತ್ತಿತ್ತು, discipline ಇರುತ್ತಿತ್ತು, ಮಾಡುವ ಕೆಲಸದಲ್ಲಿ dedication ಇರುತ್ತಿತ್ತು', ಹೇಳಿದೆ.

'ಅವರೂ ಮನುಷ್ಯರಲ್ಲವೇ? ಕೆಲಸದ ವಿಷಯದಲ್ಲಿ ಅವರಿಗೇಕೆ ವಿಶೇಷ ಗುಣಗಳು ಪ್ರಾಪ್ತವಾಗುವುದು? ಅವರ ಕೆಲಸ ಯಾಕೆ ಅಷ್ಟು ವೇಗವನ್ನು ಪಡೆದುಕೊಳ್ಳುತ್ತದೆ?' ಕೇಳಿದರು.

'ಬದುಕು', ಹೇಳಿದೆ.

'ಅದು ಕೊರತೆಯನ್ನು ಸೃಷ್ಟಿಸಿದಷ್ಟೂ ನಮ್ಮ ಆಲಸ್ಯ ನೀಗುತ್ತಾ ಹೋಗುತ್ತದೆ. ಅದಕ್ಕಾಗಿ ನಾವು ನಿಷ್ಠೆಯಿಂದ ದುಡಿಯಬೇಕಾಗುತ್ತದೆ. ಆಗ ನಮ್ಮನ್ನು ನಿಯಂತ್ರಿಸುವ ಕೈಗಳು ಶಕ್ತವಾಗಿರುತ್ತವೆ. ಅನಿವಾರ್ಯವಾಗಿ ನಾವು ಒಪ್ಪಿಕೊಂಡು ಸಹಿಸಿಕೊಂಡು ದುಡಿಯುವವರಾಗುತ್ತೇವೆ'.

' ಹಾಗಾದರೆ ಇಲ್ಲಿ ಅದು ಸಾಧ್ಯವಿಲ್ಲವೇ?'

' ಸಾಧ್ಯ, ನಿಯಂತ್ರಿಸುವವರ ಮನಸ್ಸು, ಕೈಗಳು ಶುದ್ಧವಾಗಿದ್ದರೆ ಅದು ಸಾಧ್ಯ'

'ಅಥವಾ, ಈಗ ಕೆಲವೇ ಕೆಲವರಿಗಿರುವ ಸ್ವಯಂಶಿಸ್ತು ಎಲ್ಲರಲ್ಲೂ ತುಂಬಿಕೊಂಡಾಗ..'

'ಅಥವಾ ದುಡಿದಷ್ಟು ಪಗಾರ ನೀಡಿದಾಗ, ಸಾಮರ್ಥ್ಯ ಇರುವವರಿಗೆ ಬಡ್ತಿ ನೀಡಿದಾಗ..'
*


ಕಾಜೂರು ಸತೀಶ್

ಹುಟ್ಟು

ಪ್ರೀತಿ ಬಂದು ಹಾಸಿಗೆಯಲಿ ಕುಳಿತಿತು
ಮುತ್ತು ಮತ್ತು ಅಪ್ಪುಗೆ ಹುಟ್ಟಿದವು

ಪ್ರೀತಿ ಮತ್ತು ಕಾಮ ಹಾಸಿಗೆಯಲಿ ಕುಳಿತವು
ಅಳುಅಳುತಾ ಮಕ್ಕಳು ಹುಟ್ಟಿದವು.
*


ಕಾಜೂರು ಸತೀಶ್ 

Monday, May 10, 2021

ಸಾವು



ಬೀದಿ ದೀಪ ಕೆಟ್ಟುಹೋದ ಹಾಗೆ ಸೂರ್ಯ ಕಂತಿದ ಮೇಲೆ
ಕತ್ತಲಿಗೆ ಕಂಬಗಾಲುಗಳು ಹುಟ್ಟಿ ಅಗಲ ಕಿವಿಗಳು ಮೊಳೆತು
ಉದ್ದ ಮೂಗಲ್ಲಿ ಮೂಸುತ್ತಾ ನಡೆವಾಗ
ಎದುರಿಗೆ ಬತ್ತಿದ ಕೆರೆ - ಬತ್ತಿ ಇಟ್ಟು ಬೆಳಗಿಸಲೂ ಆಗದಂತೆ
ತೇಗದ ಒಳಗೆ ಅವಿತ ಚಿಲ್ಲರೆ ಹಣ
ಜಣ ಝಣ ಝ್ಜಣ ಪೊಟರೆ ತುಂಬ ಹಣ


ಕಡೆಗೆ ರಸ್ತೆಗಿಳಿದು- ಆ ಕಪ್ಪು ಈ ಕಪ್ಪು  ಒಂದಾದ ಹಾಗೆ
ಹಾಲು ಜೇನು ಬೆರೆತ ಹಾಗೆ ಜೀವ ಗಟಗಟಗಟ
ನೆಟ್ಟ ಬೆವರು ಬುಡಸಮೇತ ಕಿತ್ತು
ಅರ್ಜಿ ಹಾಕಿದರೆ ಕಾಲಾತೀತ ಉತ್ತರ


ಸಂಜೆ ನಂದಿಹೋಗುವ ಬೀದಿ ದೀಪದ ಸೂರ್ಯ
ಮರುದಿನ ಕಣ್ಣು ತೆರೆದವರ ಬೆಳಕಲ್ಲಿ ಉರಿದು
ಅಳಿದುಳಿದ ಕತ್ತಲು ಮರಳಿ  ಕಾಡಿಗೆ 
ನೋಡಬೇಕು ನೀವದರ ನಡಿಗೆ
*


- ಕಾಜೂರು ಸತೀಶ್ 

ಸೇತುವೆ ಮತ್ತು ಬಸ್ಸು



ಬಸ್ಸು ಸೇತುವೆಯ ಮೇಲಿದ್ದಾಗ
ನದಿಯ ಮೈಗೆ ಮೈತಾಕಿಸಿ ಹರಿವ ಬಸ್ಸು

ಬಸ್ಸು ಸೇತುವೆಯಲ್ಲಿ ಚಲಿಸುವಾಗ
ನೆರಳ ಮೈತಾಕಿಸಿ ಪುಳಕಗೊಳ್ಳುವ ನದಿ

ಬಸ್ಸಿಗೂ ನದಿಯ ತಣ್ಣನೆಯ ಮೈಯ್ಯೆಂದರೆ ಪ್ರೀತಿ
ಅಲೆಯ ಉಬ್ಬುತಗ್ಗುಗಳಲ್ಲಿ ಈಜು ಕಲಿಯುವುದು ಕನಸ್ಸಲ್ಲಿ

ಬಸ್ಸಿಗೆ ಹರಿಯುವ
ನದಿಗೆ ಚಲಿಸುವ
ಬಸ್ಸಿಗೆ ತಣ್ಣಗಾಗುವ
ನದಿಗೆ ಬೆಚ್ಚಗಾಗುವ
ಕನಸು
ವಿರಹ

ಒಂದು ದಿನ
ಮನೆಬಿಟ್ಟು ಓಡಿಹೋದ ಪ್ರೇಮಿಯ ಹಾಗೆ
ದಾರಿತಪ್ಪಿದ ಬಸ್ಸು
ರಸ್ತೆಯಿಂದ ಹಾರಿ
ನದಿಯ ತೋಳಲ್ಲಿ ಬಂಧಿ

ನದಿಗೂ ಬಸ್ಸಿಗೂ
ತುಂಬುಪ್ರೀತಿ
ಸಾವಿನಂಥ ಪ್ರೀತಿ

ಸಾವಿನ ಜನನ.
*


ಕಾಜೂರು ಸತೀಶ್

Sunday, May 9, 2021

ನಿವೃತ್ತಿ ಮತ್ತು ಸುಲಿಗೆ

ನಿವೃತ್ತಿ !

ಸಾಮಾನ್ಯವಾಗಿ ಸರ್ಕಾರಿ ನೌಕರರು ನಿವೃತ್ತಿ ಹೊಂದಿದಾಗ ಆ ದಿನ ಕೆಲವು ಗಣ್ಯವ್ಯಕ್ತಿಗಳು ಅವರ ಕೆಲಸದ ಸ್ಥಳಕ್ಕೆ ತೆರಳಿ ಕೊರಳಿಗೆ ಹಾರ ಹಾಕಿ ಶಾಲು ಹೊದಿಸಿ ಬಾಯಿ ತುಂಬಾ ಹೊಗಳಿ (ಅಟ್ಟಕ್ಕೇರಿಸಿ) ಪಟ ತೆಗೆಸಿಕೊಂಡು ಮಾರನೆಯ ದಿನ ಪತ್ರಿಕೆ/ಟಿವಿಯಲ್ಲಿ ಬರುವಂತೆ ಮಾಡುತ್ತಾರೆ.

'ಇಷ್ಟು ಕಾಲ ದುಡಿದದ್ದಾಯಿತು- ಇನ್ನು ಮನೆಯಲ್ಲಿ ಹಾಯಾಗಿರೋಣ' ಎಂಬ ಕನಸು ಯಾರಿಗಿರುವುದಿಲ್ಲ ಹೇಳಿ? ಆದರೆ, ಹಾಗೆ ಮನೆಯಲ್ಲಿ ಇರಲು ಸಾಧ್ಯವೇ? ಪಿಂಚಣಿ ಬೇಡವೇ? ಮನೆಯಲ್ಲಿ ಸುಮ್ಮನೆ ಕುಳಿತರೆ ಅದು ಸಿಗುವುದೇ?

ಸನ್ಮಾನ ಮಾಡಿದ ಮಂದಿ ತಮ್ಮ ಪಟ/ವೀಡಿಯೊಗಳನ್ನು ಪತ್ರಿಕೆ/ದೃಶ್ಯ ಮಾಧ್ಯಮದಲ್ಲಿ ನೋಡಿ ಹಿರಿಹಿರಿ ಹಿಗ್ಗಿ ತಮ್ಮ ಬೆನ್ನುಗಳನ್ನು ಇತರರಿಗೆ ಕೇಳಿಸುವಷ್ಟು ಜೋರಾಗಿ ತಟ್ಟಿಕೊಳ್ಳುತ್ತಾರೆ.
ಅಂದ ಹಾಗೆ, ಮೊನ್ನೆ ಗೆಳೆಯರೊಬ್ಬರು ಕರೆಮಾಡಿ ಹೇಳುತ್ತಿದ್ದರು: 'ಸನ್ಮಾನ ಮಾಡ್ತಾರಲ್ವಾ.. ಹಾರ- ಶಾಲು-ಹಣ್ಣು.. ಇವೆಲ್ಲಾ ಅವ್ರ ಹತ್ರಾನೇ ಸುಲಿಗೆ ಮಾಡಿ ತಗೊಂಡಿರ್ತಾರೆ'!

ಕೆಲಸಕ್ಕೆ ಸೇರುವಾಗಲೇ ಸುಲಿಗೆ ಮಾಡುವ ಕಚೇರಿ, ನಿವೃತ್ತಿ ಹೊಂದಿದಾಗ ಮತ್ತೆ ಸುಲಿಗೆ ಮಾಡುತ್ತದೆ. ನಿವೃತ್ತಿ ಹೊಂದಿದ ದಿನ ಬಹುಪರಾಕ್ ಹೇಳಿದ ಮಂದಿಯೆಲ್ಲ ಲಂಚಕ್ಕೆ ಬೇಡಿಕೆಯಿಡುತ್ತಾರೆ. ಕೊಡದಿದ್ದರೆ ಪಿಂಚಣಿಯೇ ಇಲ್ಲ!

ಸೇವೆಯಲ್ಲಿರುವಾಗಲೇ ನಿಧನಹೊಂದಿದರೆ ಮುಗಿಯಿತು- ಕೆಲಸ ಬಯಸಿ ಬರುವ ಅವರ ಮಕ್ಕಳನ್ನು ಸುಲಿದು ನುಂಗಿ ನೀರುಕುಡಿಯುತ್ತಾರೆ.

ಹಾಗೆ ಕೆಲಸ ಪಡೆದುಕೊಂಡ ಮಕ್ಕಳೇ ಮತ್ತೊಂದಷ್ಟು ನಿವೃತ್ತರ, ಮರಣ ಹೊಂದಿದ ನೌಕರರ ಮಕ್ಕಳ ರಕ್ತ ಹೀರುತ್ತಾರೆ.

ಹಿಂಸೆ ಮುಂದುವರಿಯುತ್ತದೆ..
*




- ಕಾಜೂರು ಸತೀಶ್

Sunday, April 18, 2021

ದೇಹ ಮೀಮಾಂಸೆ


ಚರುಮದ ಒಳಗೆ ಕೊಬ್ಬು ತುಂಬಿ
ಮೈಯ್ಯು ತುಸು ಹೆಚ್ಚೇ ಗಾಳಿಯ ಜಾಗವನು ಅತಿಕ್ರಮಿಸಿಕೊಂಡಾಗ
ಪಟ ನೋಡಿದ ಹುಡುಗಿ ತಿರಸ್ಕರಿಸಿದ ಹಾಗೆ ಬದುಕು

ಚೆಲುವು ತುಂಬಿದ ಹುಡುಗಿ ಕಣ್ಣಿಗೆ ಬಿದ್ದಾಗ
ಹಾದಿಯಲಿದ್ದ ಗಂಡಸರು 'ಬೇಕು' ಎಂದರು, 'ಸುಂದರಿ' ಎಂದರು.
ಅವಳಿಗೆ ಸಂಧಿವಾತವಿತ್ತು, ನೋಯುತ್ತಿದ್ದಳು ನಡೆಯುವಾಗ.

ಮುಖದ ಕಲೆಗಳಲಿ ಬಣ್ಣಗಳು ತುಂಬಿ
ತುಟಿಯ ಕಪ್ಪು ಕೆಂಪಾಗಿ ಹರಡಿ
ಕ್ಯೂ ನಿಂತ ಸುಕ್ಕುಗಳ ಸಾಲು ಯಾರಿಗೂ ಕಾಣದು


ಸರದಿ ಬರುವ ಹೊತ್ತಿಗೆ ಬೆನ್ನುಹುರಿಗೆ ಉರಿ

ಉಬ್ಬುಗಳು ಬಂದಾಗ ನಿಧಾನ ಸಾಗಬೇಕು

ಬೇಡ ಸಪಾಟು ಬಣ್ಣಗಳು ಕಣ್ಣಿಗೆ 


ಕಣ್ಣು ಮಾಂಸದ ಮಾರುಕಟ್ಟೆ



ಕಾಜೂರು ಸತೀಶ್ 

Wednesday, April 7, 2021

ಅರ್ಜಿ



ಅರ್ಜಿ ಕೊಟ್ಟು ಸ್ವೀಕೃತಿ ಪಡೆದು..

ಒಂದು ಮಳೆಗಾಲ ಆಕಾಶದಿಂದ ಬಿದ್ದು ತಲೆಯೊಡೆದುಕೊಂಡು ಆಸ್ಪತ್ರೆ ಸೇರಿತ್ತು
ಬೇಸಿಗೆಯು ಬೆವರಿ ಬೆವರಿ ಮೈಸುಟ್ಟು ಕಪ್ಪಾಗಿ ಮೂರ್ಛೆ ಹೋಗಿತ್ತು
ಚಳಿಗಾಲಕ್ಕೆ ಮದುವೆಯಾಗಿ ಮೂರ್ನಾಲ್ಕು ಮಕ್ಕಳು - 'ಕಂಯ್ಯೋ..'

ಒಂದು ತಡರಾತ್ರಿ ನಿದ್ದೆ ಹತ್ತಿತ್ತು

ಭಯಾನಕ ಕನಸು!
ನಾನವರ ರಕ್ತ ಹೀರುತ್ತಿದ್ದೆ!
ರಕ್ತಕ್ಕೆ ಬೆವರ ನಾತ
ನೂರು ಸಾವಿರ ಮಂದಿ ಒಂದಾದ ರಕುತ
ಅಲ್ಲಲ್ಲಿ ಸೂರ್ಯಗುಳ್ಳೆ ಥಳಥಳ ತಳತಳ
ಸಾಸಿವೆಯಿದ್ದಿದ್ದರೆ ಚಿಟಿಚಿಟಿಚಿಟಿ
ಆಹಾ.. ಕರಿಬೇವು ಇದ್ದಿದ್ದರೆ..

ಅದರಲ್ಲಿದ್ದ ನನ್ನ ರಕುತವೂ ನಾಲಗೆಗೆ ತಾಗಲು..
ಎಚ್ಚರಗೊಂಡೆ

ಕತ್ತಲು ಕೆಂಪಾಗಿತ್ತು
ಮೂಡಣ ಸೂರ್ಯ!
*



ಕಾಜೂರು ಸತೀಶ್

Monday, April 5, 2021

ಆ ಮೇಷ್ಟ್ರು , ಮೌಲ್ಯ ಮತ್ತು ಭ್ರಷ್ಟಾಚಾರ

ಕನ್ನಡ ವಿಷಯವನ್ನು ಬೋಧಿಸುತ್ತಿದ್ದರು. ಸಹಜವಾಗಿ ಪುನರ್ ಆವರ್ತನೆಯಾಗುವ 'ಕ್ಯಾಸೆಟ್ ಸಂಪ್ರದಾಯ' ಇವರಲ್ಲೂ ಇತ್ತು. ಮೌಲ್ಯದ ಕುರಿತು ಅವರು ಕೆಲವೊಮ್ಮೆ ಮಾತನಾಡುತ್ತಿದ್ದರು. ವಿಕೃತ ಜೀವಿಗಳು ಆ ಸಂಸ್ಥೆಯಲ್ಲಿ ಇಂತಹ ಪವಿತ್ರ ಕೆಲಸಕ್ಕೆ ಬಂದದ್ದರಿಂದ, ಇವರು ನಮಗೆ ಆದರ್ಶ ವ್ಯಕ್ತಿಯಾಗಿಯೇ ಇದ್ದರು.

ಒಂದು ಕಾರ್ಯಕ್ರಮವನ್ನು ಸಂಘಟಿಸುವ ಜವಾಬ್ದಾರಿ ಅವರ ಹೆಗಲಿಗೇರಿದಾಗ, 'ಹಣ' ಅವರ ಕಣ್ಣಲ್ಲಿ ನಲಿದಾಡುತ್ತಿದ್ದದ್ದು ಕಾಣಿಸಿತು. ಆದರೆ, ಅದೇನೂ ನಮಗೆ ಆಗ ಮಹತ್ವದ ಸಂಗತಿಯಾಗಿರಲಿಲ್ಲ.
*
ಮೇಷ್ಟ್ರು(ಕಲಿಸುವ ಎಲ್ಲರಿಗೂ ಅನ್ವಯ) ಭ್ರಷ್ಟರಾಗುವುದು ಎಂದರೆ ಸಹಿಸಲು ಅಸಾಧ್ಯವಾದ ಸಂಗತಿ. ಯಾರೂ ಅದನ್ನು ಒಪ್ಪಲಾರರು;ಒಪ್ಪಬಾರದು.

ಇಂದು, ಅವರ ಕುರಿತ ಭ್ರಷ್ಟಾಚಾರದ ಯಶೋಗಾಥೆಯನ್ನು ಕೇಳಿಸಿಕೊಳ್ಳುತ್ತಿದ್ದೆ.
ಹಣದ ಹಸಿವು ಅವರನ್ನು ಯಾವ ಮಟ್ಟಕ್ಕೆ ಇಳಿಸಿದೆ ಎಂಬುದನ್ನು ನೆನಪಿಸಿಕೊಂಡಾಗ ನನ್ನೊಳಗಿನ ಖಿನ್ನತೆಯು ಎದ್ದು ನಿಲ್ಲಲು ಹವಣಿಸಿತು.(ಅದರ ಕತ್ತು ಹಿಸುಕಿದೆ)

RIP dear Sir!
*

ಕಾಜೂರು ಸತೀಶ್

Sunday, April 4, 2021

ತರುಣ ಕವಿಯ ಕಾವ್ಯಮೀಮಾಂಸೆ

20ನೇ ಶತಮಾನದ ಅಂತ್ಯದಲ್ಲಿ - 21ನೇ ಶತಮಾನದ ಆದಿಯಲ್ಲಿ ಜನಿಸಿದ ಯುವಕರ ಪೈಕಿ ನೆನಪಿನಲ್ಲಿ ಉಳಿಯುವ ಹಾಗೆ ಕವಿತೆ ಬರೆದದ್ದು/ಬರೆಯುತ್ತಿರುವವರು ನನ್ನ ಗಮನಕ್ಕೆ ಬಂದಿಲ್ಲ. ಹಾಗೆ ಬರೆದವರ  ಕೃತಿಗಳಲ್ಲಿರುವ ವ್ಯಾಕರಣ ದೋಷಗಳು ಓದುಗರನ್ನು ನುಂಗಿ ನೀರು ಕುಡಿಯುತ್ತವೆ. ಕವಿಗೋಷ್ಠಿಗಳಲ್ಲಿ ಅವರನ್ನು ನೋಡುವಾಗ ಎಲ್ಲಿಯಾದರೂ ಓಡಿಹೋಗಿ ಪ್ರಾಣರಕ್ಷಣೆ ಮಾಡಿಕೊಳ್ಳಬೇಕು ಎನಿಸುತ್ತದೆ.



ಆದರೆ, ಮಿತಿ ಎನ್ನುವುದು ಗುರುಗಣೇಶನಂಥವರ ರೂಪದಲ್ಲಿ ಇದ್ದೇ ಇರುತ್ತದೆ. 'ಇದುವರೆಗಿನ ಪ್ರಾಯ' ಎಂಬ ಕೃತಿ ಬಿಡುಗಡೆಯಾಗುವವರೆಗೆ ಆ ವ್ಯಕ್ತಿಯ, ಅವರಂತಹದೇ ಕವಿತೆಗಳ ಪರಿಚಯವಿರಲಿಲ್ಲ. ೨೩ರ ಪ್ರಾಯದ ಈ ಯುವಕ ಇಷ್ಟೆಲ್ಲಾ ಕಾವ್ಯ ಸಾಹಸಕ್ಕೆ ಇಳಿದು ಇದುವರೆಗಿನ ಹೆಚ್ಚು ಪ್ರಾಯದ ಕವಿಗಳೆನಿಸಿಕೊಂಡವರ ಕಣ್ಣು ತೆರೆಸಲು ಹೊರಟಿದ್ದಾರೆ.


ಇದುವರೆಗಿನ ಪ್ರಾಯವು ಕಾವ್ಯ ಶಿಸ್ತು ಮತ್ತು ಸೃಜನಶೀಲ ನೆಲೆಯಿಂದ ಹೆಚ್ಚು ಇಷ್ಟವಾದ ಕೃತಿ. 'ಕಾವ್ಯ ವೈಚಾರಿಕತೆ'ಯನ್ನು ಮುಗ್ಧತೆಯಿಂದ ಹೇಳಹೊರಡುವ ಅವರ ಕ್ರಮ ಆಹ್ಲಾದವನ್ನುಂಟುಮಾಡುವಂತಹದು.

ತಾಜಾತನ ಈ ಸಂಕಲನದ ಮುಖ್ಯ ಗುಣ. ನಿಸರ್ಗದ ಘಟಕಗಳನ್ನು ಕವಿತೆಯಾಗಿಸುತ್ತಾ ಚಂಗನೆ ಅವೇ ಘಟಕಗಳು personification ಆಗಿ ಜಿಗಿಯುವ ಮತ್ತು ಹೊಸ ಅರ್ಥವನ್ನು ಸೃಷ್ಟಿಸುವ ವಿಶಿಷ್ಟ ಶಕ್ತಿ ಕವಿತೆಗಳಲ್ಲಿವೆ.

ಸಂಜೆಹೊತ್ತಿನ ಹೊಳೆ
ನಿಧಾನ ನಿಧಾನವಾಗಿ ಹರಿಯುತ್ತದೆ

ಸ್ವಲ್ಪ ತಡವಾದರೆ
ಮಕ್ಕಳು ಕಿರುಚಿ ಅತ್ತು ಕಾದುಕಾದು
ನಿದ್ದೆಮಾಡಿ ಕೊನೆಗೆ
ಅವಳೂ ಬೈದು..

ಹೀಗೆ.
*


ಕವಿತೆಯನ್ನು ತೀವ್ರವಾಗಿ ಬಾಳುವವರಿಗೆ, ಈಗಾಗಲೇ ಇರುವ ಸವೆದ ದಾರಿಗಳನ್ನು ಬಿಟ್ಟು ಕವಿತೆಯ ನಡಿಗೆಯಲ್ಲಿ ಅನನ್ಯತೆಯನ್ನು ತರಲು ಬಯಸುವವರಿಗೆ, ಕವಿತೆಯ ಕುರಿತ ಜಿಜ್ಞಾಸೆಯು ತಮ್ಮದೇ ಕಾವ್ಯ ಮೀಮಾಂಸೆಯನ್ನು ಸೃಷ್ಟಿಸಬಯಸುತ್ತದೆ. ಆಗ ಹುಟ್ಟುವ ಕವಿತೆಗಳು ಕೊನೆಗೆ ಕಾವ್ಯಮೀಮಾಂಸೆಯನ್ನು ಮುಟ್ಟುತ್ತವೆ. ಗುರುಗಣೇಶರ ಅನೇಕ ಕವಿತೆಗಳಲ್ಲಿ ಈ ಬಗೆಯ ಜಿಜ್ಞಾಸೆಗಳಿವೆ:

ಕವಿ
ಅಂದರೆ
ಒಬ್ಬ ಮನುಷ್ಯ
*
ತೀವ್ರ ಸ್ಫೋಟ
ಜನ ಸಾಯಲಿಲ್ಲ
ಕವಿತೆ ಹುಟ್ಟಿತು
*
ಮೀನು ಈಜುವ ಮುನ್ನ
ನೀರು
ಎಲೆ ಚಿಗುರುವ ಮುನ್ನ
ಬೇರು
ಭಕ್ತ ಕೈಮುಗಿವ ಮುನ್ನ
ದೇವರು
ಬರೆಯುವ ಮುನ್ನ ಕವಿತೆ

ಇರುತ್ತದೆ
ಇರಬೇಕು
*
ಗುರುಗಣೇಶರ ಕವಿತೆಗಳಿಗೆ ಎ.ಕೆ.ರಾಮಾನುಜನ್ ಅವರ ಲಯ ಹಾಗೂ ಶಿಲ್ಪವಿದೆ. ಎಸ್. ದಿವಾಕರ್ ಅವರು ಸೃಷ್ಟಿಸುವ ಚಮತ್ಕಾರವಿದೆ. ಆದರೆ ಅವರು ಇದರ ಆಚೆಗೆ ತಮ್ಮದೇ ಆದ ಅಸ್ಮಿತೆಯನ್ನು ಸ್ಥಾಪಿಸಿದ್ದಾರೆ.


ನದಿ, ಬೆಟ್ಟ, ಆಕಾಶ, ಮಳೆ, ನಾಯಿ, ಬೆಕ್ಕು , ಮರ, ಬೀಜ, ಎಲೆ, ಅಮ್ಮ ಗಾಳಿ, ಮಣ್ಣು, ಹಕ್ಕಿ, ಮೀನು, ನೆಲ, ಇಂತಹ ಸಂಗತಿಗಳನ್ನು ಹೊಸ ದೃಷ್ಟಿಯಿಂದ ಕಾವ್ಯವನ್ನಾಗಿಸಿದ ಗುರುಗಣೇಶರ ಸಾಹಿತ್ಯಕ್ಕೆ ಒಳ್ಳೆಯ ಭವಿಷ್ಯವಿದೆ.
*


-ಕಾಜೂರು ಸತೀಶ್

Wednesday, March 31, 2021

ಖಡ್ಗದ ಹೂವು



ಯಾರೋ ಅಡಗಿಸಿಟ್ಟ
ಈ ಖಡ್ಗವ ಹಾಗೇ ಹಿಡಿದು ನಿಲ್ಲು
ಅದರ ಹೊಕ್ಕುಳ ಹೊಳಪಲ್ಲಿ
ಮುಖ ನೋಡಿಕೊಳ್ಳಬೇಕಿದೆ

ಸ್ವಲ್ಪ ಓರೆ
ಅದರ ಚೂಪು ತುದಿಯನ್ನಿತ್ತ ತಾ
ಹುಬ್ಬು ಕಣ್ರೆಪ್ಪೆಗಳ ತೀಡಿ
ಬಿಲ್ಲೊಂದ ಕಟ್ಟಬೇಕು ಸ್ವಯಂವರಕ್ಕೆ

ನೋಡು
ಕೋಗಿಲೆಯ ಹಾಡು
ದಾಟುತಿದೆ ಅದರ ಮೈಮುಟ್ಟಿಕೊಂಡೇ
ಹರಿತದಂಚಿನ ತುಟಿಯಲ್ಲಿ
ಗಾಯಗೊಳ್ಳದ ಇರುವೆಯ ನಡಿಗೆ

ಮುಖಕ್ಕೆ ಸವರು
ಯೌವ್ವನದ ಮೊಡವೆಯ ಮೋಡ ತಾಗಲು
ಕರಗಿ ನಿನ್ನ ಖಡ್ಗವ ಮೀಯಿಸಿ
ಕೆಂಪು ಹೂವಾಗಿಸುವುದು

ಕೊಡು ಈಗ
ಖಡ್ಗದ ಹೂವ
ನಿನಗೆ
ಮು
ಡಿ
ಸಿ
ಬಿ
ಡು
ವೆ.
*




ಕಾಜೂರು ಸತೀಶ್ 

ಮರೆತುಬಿಟ್ಟೆ


ಕಿಟಕಿ ಮುಚ್ಚಿ
ಬಾಗಿಲು ಹಾಕಿ
ಹೊರಟುಬಂದೆ.

ದೀಪ ಹಚ್ಚಲು
ಗೋಡೆಯನ್ನೇ ದಿಟ್ಟಿಸಲು
ನೆಲ_ಕಣ್ಣುಗಳನ್ನು ಒರೆಸಲು
ಕರವಸ್ತ್ರ ಒಗೆಯಲು
ಒಲೆ ಹಚ್ಚಲು
ಅಡುಗೆ ಮಾಡಿ ತಿನ್ನಲು
ನೆರೆಮನೆಯ ಹಿಂಸೆ ಸಹಿಸಲು
ಮನೆಯ ಯಜಮಾನನ ಅನುಮಾನಗಳ ಪರಿಹರಿಸಲು
ಬಾಗಿಲು ಬಡಿಯುವವರಿಗೆ ನಾನಿಲ್ಲವೆನ್ನಲು
ದಿನಚರಿ ಬರೆಯಲು
ಚಿತ್ರ ಬಿಡಿಸಲು
ಫೊಟೊ ಕ್ಲಿಕ್ಕಿಸಲು
ಹಾಡು ಗುನುಗುನಿಸಲು
ಮುಸುಕು ಹೊದ್ದು ಮಲಗಲು...

ಛೆ! ಮರೆತುಬಿಟ್ಟೆ ಹೇಳಿಕೊಡಲು
ಕೋಣೆಯೊಳಗೇ ಬಂಧಿಯಾದ ನನ್ನ ನಿಶ್ವಾಸಕ್ಕೆ!
*


-ಕಾಜೂರು ಸತೀಶ್

ಕಾವ್ಯಮೀಮಾಂಸೆ

ಈ ಘನಮೌನವನು ಕವಿತೆಗಾಗಿ ಧಾರೆಯೆರೆದೆ:
'ನೀನು ಹೂವು ನಾನದರ ಪರಿಮಳ
ನೀನೊಂದು ನವಿಲು ನಾನದರ ಬಣ್ಣ..'

ಗೋಡೆಯಲಿ ಕುಳಿತ ಹಲ್ಲಿ ಲೊಚಗುಟ್ಟಿತು

ಮೌನ ತ್ಶು ತ್ಶು ಎನುತ ಹಿಡಿತ ತಪ್ಪಿ ದೊಪ್ಪನೆ ಕುಸಿಯಿತು ನೆಲಕೆ

ಈಗ ನಾನೊಂದು ಪೂರ್ಣವಿರಾಮ
*


ಕಾಜೂರು ಸತೀಶ್ 

ಬಾ



ನನ್ನ ಮಾತು
ನಮ್ಮಿಬ್ಬರ ನಡುವಿನ ಅವರಿಂದಾಗಿ
ನನ್ನ ತುಟಿಯ ದಿವ್ಯ ಮೌನಕ್ಕೆ ಸಿಕ್ಕು
ಹೂತುಹೋಗಿದೆ
ಬಾ ತುಟಿಯೊತ್ತಿ ಎತ್ತಿಬಿಡು
ಮಾಗಿಯ ನಮ್ಮ ಬಿರಿದ ತುಟಿಗಳಿಂದ ಒಸರುವ ರಕುತದಿಂದಾದರೂ
ನಮ್ಮಿಬ್ಬರ ಮಾತುಗಳು ಬಟವಾಡೆಯಾಗಲಿ.

ನನ್ನ ಅಂಗೈಯ ಗೆರೆಗಳು
ನಿನ್ನತ್ತ ಹಳಿಗಳ ನಿರ್ಮಿಸಿವೆ
ಅವರು ಕೊಟ್ಟ ಸಲಾಕೆಯ ಬಿಗಿಹಿಡಿತಕ್ಕೆ
ಹಳಿಗಳು ಸವೆದುಹೋಗಿವೆ
ಜೋರುಮಳೆ ನಮ್ಮಿಬ್ಬರ ನಡುವೆ
ಬಾ ಬೇಗ
ರೈಲು ಹೊರಡುವ ಹೊತ್ತಾಗಿದೆ.

ನನ್ನ ಎದೆಯ ದಾರಿಗಳು
ಬೃಹತ್ ವಾಹನಗಳು ಸಂಚರಿಸಿ ದುರಸ್ತಿಯಲ್ಲಿವೆ
ನಮ್ಮಿಬ್ಬರ ನಡುವಿನ ಅವರು
ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ
ನಿನ್ನ ಕೆಂಬಟ್ಟೆಯ ತುಂಡೊಂದನ್ನು
ಬಾವುಟದಂತೆ ನೇತುಹಾಕಲಾಗಿದೆ ಅಲ್ಲಿ
ಟಾರು ಕುದಿಯುವ ಮುನ್ನವೇ
ಆ ಕೆಂಪು ಧ್ವಜವನ್ನಿಳಿಸಿ ಬಾ
ಎದೆಯೊಳಗಿನ ಮಗು ಮಲಗಲು ಹೊತ್ತಾಗಿದೆ
ಅಪ್ಪಿ ಹಾಲುಣಿಸಿಬಿಡು ಬೇಗ.

ವಸಂತ ಬಂದಿದೆ
ನಮ್ಮಿಬ್ಬರ ನಡುವಿನ ಅವರಿಗೆ
ಬಾ
ಗೂಡು ಕಟ್ಟಿಕೊಡೋಣ
ಕಾವು ಕೊಟ್ಟುಬಿಡೋಣ
ಬಿರಿದು ಕುಹೂ ಕುಹೂ ಹಾಡಿಕೊಳ್ಳಲಿ

ಇನ್ನು ಅಟ್ಟಾಡಿಸುವುದು ಬೇಡ
ಕಪ್ಪು ಸಾಕು ನಮಗೆ
ಕಪ್ಪು
ಸಾಕು.
*






ಕಾಜೂರು ಸತೀಶ್ 

Monday, March 29, 2021

ನಮ್ಮಿಸ್ಕೂಲ್ನ ಪುಟ್ಟ



ರಸ್ತೆಯಲ್ಲಿ ಓಡೋಡ್ಬಂದ
ನಮ್ಮಿಸ್ಕೂಲ್ನ ಪುಟ್ಟ;
ಎಲೆ,ಹೂವು,ಹಣ್ಣನ್ನೆಲ್ಲ
ಕಿತ್ತು ಬ್ಯಾಗಲ್ಲಿಟ್ಟ.

'ಬಾಯೊಳಗೇನೋ?' ಎಂದರೆ ಟೀಚರ್
'ಹಲ್ನೋವು ಟೀಚರ್' ಎಂದ್ಬಿಟ್ಟ;
'ಸರಿ ಮತ್ತೆ ತೋರ್ಸು' ಅಂದ್ರೆ
ನೆಲ್ಲಿಕಾಯಿ ಉಗಿದ್ಬಿಟ್ಟ.

'ನೋಟ್ಸ್ ಎಲ್ಲೋ?' ಎಂದರೆ ಟೀಚರ್
ಎಲೆಗಳ ಕಟ್ಟನು ತೋರ್ಸ್ಬಿಟ್ಟ;
'ಸರಿ ಮತ್ತೆ ಬರಿ' ಅಂದ್ರೆ
ಮುಳ್ಳಲಿ ಚೆನ್ನಾಗಿ ಬರ್ದ್ಬಿಟ್ಟ.

'ಬಣ್ಣ ಎಲ್ಲೋ?' ಎಂದರೆ ಟೀಚರ್
ಹೂಗಳ ರಾಶಿಯ ತೆಗೆದಿಟ್ಟ;
'ಸರಿ ಮತ್ತೆ ಹಚ್ಚು' ಅಂದ್ರೆ
ಹೂವನೆ ತೀಡುತ ಹಚ್ಬಿಟ್ಟ.

ರಸ್ತೆಯಲ್ಲಿ ಓಡೋಡ್ಬಂದ
ನಮ್ಮಿಸ್ಕೂಲ್ನ ಪುಟ್ಟ;
ಕಲಿತದ್ನೆಲ್ಲ ತಲೇಲಿಟ್ಟು
ಮನೆ ಕಡೆ ಹೊರಟ.

**

-ಕಾಜೂರು ಸತೀಶ್

ನೀರು ಕಾಗೆ



ನೀರು ಕಾಗೆ ಊರ ನದಿಯ ನೀರಿನಲ್ಲಿ ಸ್ನಾನ ಮಾಡಿ
ಬಂಡೆ ಮೇಲೆ ಹಿಕ್ಕೆ ಹಾಕಿ ಚಿತ್ರವನ್ನು ಬಿಡಿಸುತ್ತೆ.

ಮೈಯೆಲ್ಲ ಇದ್ದಿಲ ಕಪ್ಪು ಹಿಕ್ಕೆ ಮಾತ್ರ ಬೆಳ್ಳಂಬಿಳಿ
ಕಲ್ಲಮೇಲೆ ಚೆಲ್ಲಿಬಿಟ್ಟರೆ ಕೊಕ್ಕರೆಯೇ ನಿಂತಂತೆ. ||ನೀರು ಕಾಗೆ||

ಸೂರ್ಯ ಸಂಜೆ ಬಣ್ಣ ಹಚ್ಚಿ ಅಲಂಕಾರ ಮಾಡುವಾಗ
ಹಾರಿ ಅದರ ಕೆಂಪು ಕಣ್ಣಿಗೆ ಕಾಡಿಗೆ ಹಚ್ಚುತ್ತೆ.||ನೀರು ಕಾಗೆ||

ಮುಸ್ಸಂಜೇಲಿ ಸ್ನಾನ ಮಾಡಿ ಅತ್ತಿಮರವ ಹತ್ತಿ ಕುಳಿತು
ಮೈಯ ಕಪ್ಪುಹರಡಿ ಹರಡಿ ಕತ್ತಲ ತರ್ಸುತ್ತೆ.||ನೀರು ಕಾಗೆ||

**


-ಕಾಜೂರು ಸತೀಶ್