ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, December 19, 2021

ಕಣ್ಣಲ್ಲಿಳಿದ ಮಳೆಹನಿಯ ಕುರಿತು ಡಾ.ಎಂ.ಡಿ.ಒಕ್ಕುಂದ




ಕಾಡು ಹಾಗೂ ಪ್ರಕೃತಿ (ನಾಶದ ವಿಷಾದ), ಕವಿತೆ ಮತ್ತು ಸಾವು ಇವರ ಸೃಜನಶೀಲತೆಯ ಕೇಂದ್ರ ಕಾಳಜಿಯಾಗಿವೆ. ಇವುಗಳೊಂದಿಗೆ ವರ್ತಮಾನದ ತಲ್ಲಣಗಳು, ಬದುಕನ್ನು ಕುರಿತಾದ ತಾತ್ವಿಕ ಜಿಜ್ಞಾಸೆಗಳೂ ಸೇರಿಕೊಂಡಿವೆ. ಇವು ಒಂದರೊಳಗೊಂದು ಬೆಸೆದೂ ಹೋಗಿವೆ. ಕನ್ನಡ ಕಾವ್ಯಕ್ಕೆ ಇವು ಹೊಸ ಸಂಗತಿಗಳೇನಲ್ಲ. ಆದರೆ ಇಲ್ಲಿಯ ಎಲ್ಲ ಕವಿತೆಗಳೂ ತಮ್ಮ ಸಂವೇದನಾಕ್ರಮ, ಪ್ರತಿಮಾವಿಧಾನ ಹಾಗೂ ಭಾಷಿಕ ಬಳಕೆಯ ಭಿನ್ನತೆ, ಸ್ವಂತಿಕೆ ಹಾಗೂ ತಾಜಾತನಗಳಿಂದ ಈ ಕೇಂದ್ರಗಳಿಗೆ ಹೊಸ ರೂಪಧಾರಣೆ ನೀಡಿವೆ. ಆಕರ್ಷಣೆಯನ್ನು ಸೃಷ್ಟಿಸಿವೆ. ಕಾಡನ್ನು ಕೇಂದ್ರದಲ್ಲಿರಿಸಿಕೊಂಡ ಕವಿತೆಗಳಂತೂ ಕನ್ನಡ ಕಾವ್ಯಕ್ಕೆ ಹೊಸದಾದ ಗ್ರಹಿಕೆಗಳನ್ನು, ಹೊಚ್ಚಹೊಸ ಪ್ರತಿಮೆಗಳನ್ನು ಹಾಗೂ ಭಾಷಿಕ ಆಯಾಮಗಳನ್ನು ಸೇರಿಸುವಷ್ಟು ಶಕ್ತಿಶಾಲಿಯಾಗಿವೆ. ಸಾವನ್ನು ಕುರಿತ ಕವಿತೆಗಳು ಭಯ ತಲ್ಲಣ ಆಘಾತ ನಿರಾಸೆಗಳಿಗಿಂತ ಪ್ರಬುದ್ಧವಾಗಿ ಸಾವನ್ನು ಕುರಿತಂತೆ ತಾತ್ವಿಕ ಜಿಜ್ಞಾಸೆಗೆ ತೊಡಗುತ್ತವೆ. ‘ಕವಿತೆ’ ಕೇಂದ್ರಿತ ಕವಿತೆಗಳು ಸೃಜನಶೀಲತೆಯ ಎಚ್ಚರದ ದಾರಿಗಳನ್ನು ಶೋಧಿಸುತ್ತವೆ.

ಅತಿಭಾವುಕತೆ, ಭಾವಾವೇಶ, ವಾಗಾಡಂಬರ, ಉಪಮೆ ರೂಪಕ ಪ್ರತಿಮೆಗಳನ್ನು ಕಟ್ಟುವ ತಿಣುಕಾಟಗಳು ವಿಜೃಂಭಿಸುವುದಿಲ್ಲ. ಒಂದು ಸಾಲು, ಒಂದು ಪದ, ಒಂದು ಅಕ್ಷರ, ಒಂದೇ ಒಂದು ಉಪಮೆ ರೂಪಕ ಪ್ರತಿಮೆಗಳನ್ನು ಅನಗತ್ಯವಾಗಿ ಬಳಸಲಾರೆ ಎಂಬ ಹಠ ತೊಟ್ಟಂತಿದೆ. ಇದು ಹೊಸತಲೆಮಾರಿಗೆ ಅಪರೂಪದ ಗುಣ.
*


- ಎಂ.ಡಿ.ಒಕ್ಕುಂದ

------------------------------------
ಕಣ್ಣಲ್ಲಿಳಿದ ಮಳೆಹನಿ
ಲೇ : ಕಾಜೂರು ಸತೀಶ್
ಬೆಲೆ : 80 ರೂ.

ಸಂಗಾತ ಪುಸ್ತಕ
8431113501

No comments:

Post a Comment