ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, July 26, 2022

ನಮ್ಮೊಳಗೆ ಉಳಿದ ರಂಜನ್ ಸರ್

ಒಂದು ದೀರ್ಘಾವಧಿಯ(ಹೆಚ್ಚು ನೆನಪಲ್ಲುಳಿದಿರುವುದರಿಂದ ಅದು ದೀರ್ಘವಾದ ಬದುಕೆನಿಸಿರುವುದು) ನನ್ನ ಬದುಕಿನಲ್ಲಿ 'ಕಚೇರಿ' ಎಂಬ ಪದವು corruptionನ ಅವತಾರವಾಗಿಯೇ ಉಳಿದಿದೆ. 
*

ಅದಕ್ಕೆ ಅಪವಾದವಾದವೊಂದು ನನ್ನ ಅನುಭವಕ್ಕೆ ಬಂದಿರುವುದು ನನ್ನ ಭಾಗ್ಯ.
ಕಳೆದೆರಡು ವರ್ಷಗಳಲ್ಲಿ ಸೋಮವಾರಪೇಟೆ ಬಿಇಓ ಕಚೇರಿಯಲ್ಲಿ ಕಚೇರಿ ಸಹಾಯಕರಾಗಿ ಸೇವೆ ಸಲ್ಲಿಸಿ ಪ್ರಾಮಾಣಿಕತೆಯ ಉತ್ತುಂಗದಲ್ಲಿರುವಾಗಲೇ ವರ್ಗಾವಣೆಗೊಂಡು ನಮ್ಮೊಳಗೆ ಉಳಿದ ರಂಜನ್ ಸರ್ ಅವರ ಕುರಿತ ಮಾತುಗಳಿವು.


'ತಮ್ಮ ಪಾಡಿಗೆ ತಾವು' ಇದ್ದುಕೊಳ್ಳುತ್ತಲೇ ಮಾಡಬೇಕಾದ ಕೆಲಸಗಳನ್ನು ನಮ್ಮ ಅರಿವಿಗೆ ಬಾರದಂತೆ ಮುಗಿಸಿ ಅದನ್ನು ಮುಗಿಸಿರುವ ಕುರಿತೂ ಮಾತನಾಡದ ಅವರ ಮುಗ್ಧತೆಗೆ ಹಲವಾರು ಬಾರಿ ಮನಸ್ಸಿನಲ್ಲೇ ಬೆನ್ನುತಟ್ಟಿದ್ದೇನೆ. ಅವರು ಇಲ್ಲಿರುವಾಗಲೇ ಅದನ್ನು ಬರೆಯಬೇಕು ಎಂದುಕೊಂಡಿದ್ದೆ. ಅಷ್ಟರಲ್ಲೇ ಅವರು ವರ್ಗಾವಣೆಗೊಂಡರು!


ಈ ಅಲ್ಪ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವುದು ಹೀಗೇ ಅಲ್ಲವೇ?
*
ಕಾಜೂರು ಸತೀಶ್

Sunday, July 17, 2022

ಈ ಕೊರಳನುಳಿಸು ಪ್ರಭುವೇ..



ಕಳೆದ ತಿಂಗಳು. ಹತ್ತಾರು ಬಾರಿ ಕರೆ ಪ್ರಯತ್ನಿಸಿದ ಒಂದು ಸಂಖ್ಯೆಯಿಂದ 'ನಿಮಗೆ ಒಂದು ಪ್ರಶಸ್ತಿ ಬಂದಿದೆ, ದಯವಿಟ್ಟು ಕರೆ ಮಾಡಿ' ಎಂಬ ಸಂದೇಶ ಬಂದಿತ್ತು.

 'ಯಾವ ಪ್ರಶಸ್ತಿ' ಮರುಪ್ರಶ್ನೆ.

 "......................"

ಮೊದಲನೆಯದಾಗಿ -ನನಗೆ ಕಿರಿಕಿರಿ ಉಂಟುಮಾಡಿದ ಕ್ಷೇತ್ರವದು. ಅಲ್ಲಿ 'ಸಾರಥಿ'ಯಾಗಲಾರೆ. 

ಎರಡನೆಯದಾಗಿ - ಕೊರಳಿಗೆ ಹಾರ, ಹೆಗಲಿಗೆ ಬಟ್ಟೆ, ಮನಸ್ಸಿಗೆ ಪ್ರಾಣಸಂಕಟ!

ಎಂದಿನಂತೆ ಮುಲಾಜಿಲ್ಲದೆ 'ಬೇಡ' ಎಂದೆ.
*****

ಮತ್ತೊಂದು ಆಮಂತ್ರಣ. 

ಹೋಗಿದ್ದರೆ ಕೊರಳಿಗೆ ಹಾರ ಹೆಗಲಿಗೆ ಬಟ್ಟೆ ಖಾತ್ರಿ. 

ತಪ್ಪಿಸಿಕೊಂಡೆ.
****



(ಚಿತ್ರಕೃಪೆ- ಅಂತರ್ಜಾಲ)
                                 ****

ಮಗದೊಂದು! 

ಬದುಕಿದ್ದಾಗ ಸರಿಯಾಗಿ ನೋಡಿಕೊಳ್ಳದವರು ತೀರಿಕೊಂಡ ಮೇಲೆ ಅದ್ದೂರಿ ತಿಥಿ ಮಾಡುತ್ತಾರೆ. 

ಹಾಗೆಯೇ ಒಂದು ಸಮಾರಂಭ! 

ಬೇಕೆಂದೇ ಹೋಗಲಿಲ್ಲ! ಹೋಗಿದ್ದರೆ ಎಷ್ಟೋ ದಿನಗಳು ನಿದ್ದೆಯಿರುತ್ತಿರಲಿಲ್ಲ.
*

ಕಪಟ ಗೌರವಗಳಿಂದ  ಈ ಕೊರಳನುಳಿಸು ಪ್ರಭುವೇ



Friday, July 15, 2022

ಕಣ್ಣಲ್ಲಿಳಿದ ಮಳೆಹನಿಗಳ ಕುರಿತು


'ಕಣ್ಣಲ್ಲಿಳಿದ ಮಳೆಹನಿ' ಕವನ ಸಂಕಲನ
ನಿಮ್ಮದೇ ಅಲ್ವಾ. ತಿಳಿದು ತುಂಬಾ ಖುಷಿಯಾಯ್ತು.
ನಿಮ್ಮ ಕವನಗಳು ತುಂಬಾ ನೈಜವಾಗಿವೆ, ಎಲ್ಲೂ ದೊಡ್ಡ ದೊಡ್ಡ ಪದಗಳ ಪ್ರದರ್ಶನ ಮಾಡದೆ ನೈಜ ಅನ್ನಿಸೊ ಹಾಗಿದೆ ನಿಮ್ಮ ಬರಹ. ಕವನಗಳಲ್ಲಿ Mild satirical nature(ರೊಟ್ಟಿ..ಮ್ಯಾನ್ಹೋಲಿನಲ್ಲಿ ಸತ್ತ ಕವಿತೆ etc..) ಇದೆ ಅದು ತುಂಬಾ ಚೆನ್ನಾಗಿ ಮೂಡಿ ಬಂದಿದೆ.

ನಿಮ್ಮ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದೆ.
ನಿಮ್ಮನ್ನ ನೋಡಿದ ನೆನಪು ಈಗ ಬಂತು.
ನಿಮ್ಮ ಬರಹಗಳಿಗೆ ಒಳ್ಳೆಯದಾಗಲಿ. ಇನ್ನಷ್ಟು ಬರಹಗಳು ಹೀಗೆ ಬರಲಿ.
ಶುಭಾಶಯ ನಿಮಗೆ💐💐
*
ಸುವರ್ಣ ಚೆಳ್ಳೂರು

ಕೂರ್ಗ್ ರೆಜಿಮೆಂಟ್ - ಬಂದೂಕು ಹಿಡಿದವರ ನಾಡಿಮಿಡಿತ


ಮೇಜರ್ ಡಾ| ಕುಶ್ವಂತ್ ಕೋಳಿಬೈಲು , ಇವರು ಕೊಡಗಿನ ಭಾಗಮಂಡಲದವರು. ಸೇನೆಯಲ್ಲಿ ಮೇಜರ್ ಆದ ಬಳಿಕ ನಿವೃತ್ತಿ ಪಡೆದು ಈಗ ಮಡಿಕೇರಿಯ Kodagu Institute of Medical Scienceನಲ್ಲಿ ಮಕ್ಕಳ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿರುವವರು. ಕೂರ್ಗ್ ರೆಜಿಮೆಂಟ್ , ಕಾವೇರಿ ತೀರದ ಕಥೆಗಳು, ಮುತ್ತಿನಹಾರ - ಇವರ ಪ್ರಕಟಿತ ಕೃತಿಗಳು.


'ಕೂರ್ಗ್ ರೆಜಿಮೆಂಟ್', ಮೇಜರ್ ಡಾ| ಕುಶ್ವಂತ್ ಕೋಳಿಬೈಲು ಅವರ ಪುಟ್ಟಪುಟ್ಟ 12 ಕತೆಗಳಿರುವ ಮೊದಲ ಕಥಾಸಂಕಲನ.
*
ಮುಖ್ಯವಾಗಿ ಎರಡು ಕಥಾಮಾದರಿಗಳು ನಮ್ಮ ಎದುರಿಗಿವೆ: ೧. ಹೇಳುವ ಮೂಲಕ ಮತ್ತೊಂದು ಅರ್ಥದ ನೆಲೆಗೆ ಜಿಗಿಯುವ, ಬೆಳೆಯುವ ಕತೆಗಳು; ಅಧ್ಯಯನಕಾರರಿಗಷ್ಟೇ ಅರ್ಥವಾಗುವ ಕತೆಗಳು.
೨. ಸ್ವಾರಸ್ಯಕರವಾಗಿ ಕೇಳಿಸಿಕೊಳ್ಳುವ, ಯಾರಿಗೂ ಅರ್ಥವಾಗುವ, 'ಕಥಾಂತ್ಯ'ವಿರುವ ಕತೆಗಳು; ಜನಪ್ರಿಯ ಮಾದರಿಯ ಕತೆಗಳು.

'ಕೂರ್ಗ್ ರೆಜಿಮೆಂಟ್', ಎರಡನೆಯ ಮಾದರಿಯವು




ಸೈನ್ಯ , ನಿವೃತ್ತಿಯ ಬದುಕು, ಸೈನಿಕರ ವೃದ್ಧ ತಂದೆ-ತಾಯಿಯರ ಬದುಕು, ಯುವ ಸೈನಿಕರ ಪ್ರೇಮ ಪ್ರಸಂಗಗಳು, ಸೈನಿಕರ ಪತ್ನಿಯರ ಬದುಕು, ನಿವೃತ್ತಿಯ ನಂತರದ ಕೃಷಿಕ ಬದುಕು, ಬೇಟೆಯ ಪ್ರಸಂಗಗಳು- ಇವುಗಳ ಸುತ್ತ ಸಾಗುವ ಕತೆಗಳಿವು.

ಸೈನಿಕರ ಬದುಕಿನಲ್ಲಿ ಎರಡು ಬಗೆಯ alien ಆದ ಭಾವಗಳಿರುತ್ತವೆ. ೧. ನಿವೃತ್ತಿ ಹೊಂದಿ ಮನೆಗೆ ಮರಳುವ ತವಕ, ೨. ಮನೆಗೆ ಹಿಂತಿರುಗಿದ ನಂತರ ಕಾಡುವ ಸೈನ್ಯದ ನೆನಪುಗಳು. ಇದು ಜಗತ್ತಿನ ಎಲ್ಲಾ ಸೈನಿಕರು ಎದುರಿಸುವ ಸಾಮಾನ್ಯ ಸಂಗತಿಗಳು. ಆದರೆ, ಸೈನಿಕನೊಬ್ಬನ ಸಾಂಸ್ಕೃತಿಕ ಬದುಕು ಇವುಗಳನ್ನು ಅನುಭವಿಸುವ ಕ್ರಮದಲ್ಲಿ ಭಿನ್ನತೆಗಳನ್ನು ತರುತ್ತವೆ. ಕೊಡಗಿನ ಕೊಡವ/ಅರೆಭಾಷಿಕ ನಿವೃತ್ತ ಸೈನಿಕನ ಅನುಭವವು ಅಲ್ಲಿಯೇ ಇರುವ ಕೃಷಿಕನಲ್ಲದ ಸೈನಿಕನ ಬದುಕಿಗಿಂತ ಭಿನ್ನವಾಗಿರುತ್ತದೆ.


ಈ ಕತೆಗಳು ಕೂರ್ಗ್ ಜನಪದವನ್ನು ನೆನಪಿಗೆ ತರುತ್ತವೆ( ದಕ್ಷಿಣ ಕೊಡಗಿನ ಜನಪದ!)(ಸಮಕಾಲೀನ ಕನ್ನಡದ ಕವಿತಾ ರೈ ಅವರ ಕತೆಗಳಲ್ಲಿ ಕೂರ್ಗ್ ಜನಪದವನ್ನು ಗುರುತಿಸಬಹುದು). ಅದರಲ್ಲೂ ಭಾಗಮಂಡಲವೆಂಬ 'ಕೇಂದ್ರ'ದ'ದ ಮೇಲಿನ ಸಾಂಸ್ಕೃತಿಕ ಕಾಳಜಿ ಕತೆಗಾರರಿಗೆ ತುಂಬಾ ಇದ್ದಂತಿದೆ. ಈ ನೆಲದ ನೈಸರ್ಗಿಕ ಚೆಲುವಿನ ವರ್ಣನೆ ಎಲ್ಲೂ ಕಾಣುವುದಿಲ್ಲ. ಬದಲಿಗೆ ಪ್ರಾದೇಶಿಕ ಅನನ್ಯತೆ, ಜೀವನ ವಿಧಾನದ ಮೇಲೆ ಪಾತ್ರಗಳು ಆಸ್ಥೆವಹಿಸುತ್ತವೆ.

ಕತೆಹೇಳುವುದರಲ್ಲಿಯೇ ಸಂಭ್ರಮಿಸುವ ಕತೆಗಾರರಿಗೆ ಸಾಹಿತ್ಯದ ಗಂಭೀರ ವಲಯವು ಬಯಸುವ ಫಿಲಾಸಾಫಿಕಲ್ ಥಿಯರಿ/ಸಂಗತಿಗಳನ್ನು ತಂದೊಡ್ಡುವ ಆಕಾಂಕ್ಷೆಗಳಿಲ್ಲ. ಎಲ್ಲಕ್ಕೂ ಮಿಗಿಲಾಗಿ,ಇವು ಸೈನಿಕರ ಜೀವನದ ವೈಭವೀಕರಣವಾಗಿಯಷ್ಟೇ ಉಳಿಯದೆ ಒಪ್ಪಿಕೊಳ್ಳುವ ಕಥಾವಾಸ್ತವವನ್ನು ಆಗುಮಾಡಿಕೊಳ್ಳುತ್ತವೆ. ಸ್ವಿಫ್ಟ್ ತನ್ನ ಗಲಿವರ್ಸ್ ಟ್ರಾವಲ್ಸ್ ಕತೆಯನ್ನು ಪುಟ್ಟ ಮಕ್ಕಳಿಂದ ಆದಿಯಾಗಿ ಗಂಭೀರ ಓದುಗರಿಂದಲೂ ಓದಿಸಿಕೊಳ್ಳುತ್ತಾರೆ. ಹಾಗೆ ಯಾರು ಬೇಕಾದರೂ ಓದಬಹುದಾದ ಮತ್ತು ಕೇಳಿಸಿಕೊಳ್ಳಬಹುದಾದ ಕತೆಗಳಿವು.
*

                    ಕಾಜೂರು ಸತೀಶ್

Sunday, July 10, 2022

ಅವನು ಹೊರಟುಹೋದ!

ಅವನು ಈ ಸಂಜೆ ಹೋಗಿಬಿಟ್ಟ.

ತುಸು ಮೊದಲು ನನ್ನ ಮುಖವನ್ನೇ ನೋಡುತ್ತಿದ್ದ. ಬೈಯ್ಯುತ್ತಾರೆಂದು ಹೆದರಿ ಔಷಧಿ ಕುಡಿದ. 'ನೀರು ಬೇಕಾ?' ಎಂದಾಗ ಮತ್ತೆ ಮುಖವನ್ನೇ ನೋಡಿದ. ಹೊಟ್ಟೆತುಂಬುವಷ್ಟು ಕುಡಿದ.

ಆ ತಿಂಡಿ ಎಂದರೆ ಅಷ್ಟು ಇಷ್ಟ ಅವನಿಗೆ. ಅಡುಗೆ ಮನೆಯಿಂದ ವಾಸನೆ ಬಂದರೆ ಕೇಳಿ ತಿನ್ನುತ್ತಿದ್ದ. ಈ ಸಂಜೆಯೂ ಅದೇ ತಿಂಡಿ ಮಾಡಿದ್ದರು ಅಮ್ಮ. ಅವನು ಕೇಳಲಿಲ್ಲ. ಒಂದೆರಡು ಸಣ್ಣ ತುಂಡುಗಳನ್ನು ತಿಂದು ಮತ್ತೆ ಬೇಡವೆಂದ.

ಕೆಲವು ದಿನಗಳಿಂದ ಅವನ ಧ್ವನಿ ಹೊರಟುಹೋಗಿತ್ತು. ವೈದ್ಯರನ್ನು ಕರೆಸಿದಾಗ ಅವರನ್ನೇ ಗದರಿಸಿ ಕಳುಹಿಸಿದ್ದ.

ನಿಧಾನಕ್ಕೆ ಊಟಬಿಟ್ಟ. ಮೂರು ಹೊತ್ತು ನಾನ್ವೆಜ್ ಇಲ್ಲದೆ ಏನೂ ತಿನ್ನುವವನಲ್ಲ . ಅದೂ ಬೇಡವೆಂದ.

ಇಡೀ ದಿನ ಮಲಗಿದ್ದಲ್ಲೇ ಇದ್ದ. ಹಾಗೆಂದು ಒಂದು ಎರಡು ಅಲ್ಲೇ ಮಾಡಿಕೊಳ್ಳುವವನಲ್ಲ. ಅದನ್ನೆಲ್ಲ ತಡೆದುಕೊಂಡೇ ಇದ್ದ. ಅಥವಾ ಮಧ್ಯರಾತ್ರಿ ಯಾರಿಗೂ ತಿಳಿಯದಂತೆ ಹೋಗಿಬರುತ್ತಿದ್ದನೋ ಗೊತ್ತಿಲ್ಲ.

ಈ ಸಂಜೆ ಅವನು ಏನೂ ಮಾತನಾಡದೆ ನನ್ನ ಮುಖವನ್ನೇ ದಿಟ್ಟಿಸುತ್ತಿದ್ದಾಗ ನನ್ನ ಹೃದಯ ಕರಗುತ್ತಿರುವಂತೆ ಅನಿಸುತ್ತಿತ್ತು. 'ಸ್ವಲ್ಪ ಬಿಸಿಲು ಬಂದರೆ ಸರಿಯಾಗುತ್ತಾನೆ' ಅಮ್ಮ ಹೇಳುತ್ತಿದ್ದರು.

ನಿಜಕ್ಕೂ ಅವನು ಹೋದನೇ? ನಂಬಲಾಗುತ್ತಿಲ್ಲ ನನಗೆ.
*
೨೦೧೩ರಲ್ಲಿ ಅಪ್ಪ ಇದೇ ಊರಿನಿಂದ ಅವನನ್ನು ತಂದಿದ್ದರು. ಇಷ್ಟೇ ಇಷ್ಟಿದ್ದ ಅವನನ್ನು ನೋಡಿ 'ಇವನನ್ಯಾಕೆ ತಂದ್ರಿ!?' ಎಂದಿದ್ದೆ. ಆಮೇಲೆ ಅವನ ದುರ್ಬಲ ಕಾಲುಗಳನ್ನು ನೋಡಿ 'ಅಯ್ಯೋ.. ಬೇರೆ ಸಿಗ್ಲಿಲ್ವಾ' ಎಂದು ಕೇಳಿದ್ದೆ.


ಅಪ್ಪನ ಏಟು ತಿಂದು ಭಯದ ವಾತಾವರಣದಲ್ಲೇ ಬೆಳೆದ. ಕೂರು ಎಂದರೆ ಕೂರಬೇಕು, ನಿಲ್ಲು ಎಂದರೆ ನಿಲ್ಲಬೇಕು! ಹೊರಗೆ ಹೋಗಬೇಕೆಂದಿದ್ದರೆ ಒಂದೆರಡು ನಿಮಿಷಗಳಲ್ಲಿ ಹಿಂತಿರುಗಬೇಕು! ಅವನ ಧ್ವನಿಯೋ ಒಂದು ಶಬ್ದಕ್ಕೆ ಕಿವಿಯೇ ಒಡೆದುಹೋಗುವಷ್ಟು!


ಗಾಳಿಯಲ್ಲಿ ಎಸೆದ ಬಿಸ್ಕತ್ತನ್ನು ಬಾಯಲ್ಲಿ ಹಿಡಿಯುವುದು, ನೆಗೆಯುವುದು, ಬೇಟೆಯಾಡುವುದು, ಬಂದ ಅಪರಿಚಿತರನ್ನು ಗದರಿಸಿ ಓಡಿಸುವುದು, ಕಾಡಿಗೆ ತೆರಳುವಾಗ ಸಂಭ್ರಮದಿಂದ ಬರುವುದು, ಹಾವು,ಮೊಲಗಳನ್ನು ಅಟ್ಟಾಡಿಸುವುದು.. ಹೀಗೆ ಅವನು ಬೆಳೆದು ದೊಡ್ಡವನಾಗುತ್ತಿರುವಾಗಲೇ ಅಪ್ಪ ಹೊರಟುಹೋದರು.


ಅವನ ಜೊತೆಗಾರನೂ ಹೊರಟುಹೋದ. ತರುವಾಯ ಮತ್ತೊಬ್ಬನೂ.


ಇವನು ಅಮ್ಮನ ಜೊತೆಗಿದ್ದ. ಅವನೊಡನೆ ಮಾತನಾಡುತ್ತಾ ಅವನ ತುಂಟತನಗಳನ್ನು ಸಹಿಸುತ್ತಾ ಅವನು 'ಅಮ್ಮಾ' ಎನ್ನುವುದನ್ನು ಕೇಳಿ ಸಂಭ್ರಮಿಸುತ್ತಾ ಅಮ್ಮ ಇರುತ್ತಿದ್ದಳು.


ಒಂದು ಬೈಗುಳಕ್ಕೆ ಅವನು ಎಷ್ಟು ಹೆದರುತ್ತಿದ್ದ! ಅವನಿಗೆ ಎಷ್ಟು ಚೆನ್ನಾಗಿ ಭಾಷೆ ಬರುತ್ತಿತ್ತು. ಬೆಳಿಗ್ಗೆ ಏಳುವುದು ತಡವಾದರೆ ಕರೆಯುತ್ತಿದ್ದ. ಹಾವು ಬಂದರೆ ತಿಳಿಸುತ್ತಿದ್ದ. ಟ್ಯಾಪಿನಲ್ಲಿ ನೀರು ವ್ಯಯವಾಗುತ್ತಿದ್ದರೆ ಸೂಚನೆ ಕೊಡುತ್ತಿದ್ದ. ಆನೆ ಬಂದರೆ ಸದ್ದು ಮಾಡದೆ ಹೋಗಿ ಮಲಗಿಬಿಡುತ್ತಿದ್ದ. ಪಟಾಕಿಯ ಸದ್ದು ಕೇಳಿದರಂತೂ ನಾಪತ್ತೆ.



 ಒಂದು ಎಲೆ ಬಿದ್ದರೂ ಎಚ್ಚರಿಸುತ್ತಿದ್ದ. ಹಸಿವಾದರೆ, ನೀರಡಿಕೆಯಾದರೆ, ಬಿಸಿಲು ಹೆಚ್ಚಾದರೆ, ಮಳೆಯಾದರೆ, ಚಳಿಯಾದರೆ, ಮನೆಯಲ್ಲಿ ಜೋರಾಗಿ ಮಾತಾಡಿದರೆ ಅವನು ಸಿಗ್ನಲ್ ಕೊಡುತ್ತಿದ್ದ. ಅವನು ಇದ್ದಾಗ ಅಪರಿಚಿತರಿಗೆ ಪ್ರವೇಶವಿರಲಿಲ್ಲ.

ಮಗುವಿನಂತಿದ್ದ. 'ಡ್ಯಾನ್ಸ್ ಮಾಡು ಬಾ' ಎಂದರೆ ಉರುಳಾಡಿ ಕುಣಿಯುತ್ತಿದ್ದ.

ಅವನು ಹೋಗಿಬಿಟ್ಟ. ಎಷ್ಟು ಸುಖವಾಗಿ ಬಾಳಿದ! ಇನ್ನುಮುಂದೆ ಅದಕ್ಕೂ ಹೆಚ್ಚಿನ ಸುಖ ಅವನಿಗೆ!!


Thursday, July 7, 2022

ದುರುಳನೊಬ್ಬನನ್ನು ವಂಚಿಸಿದ ಕಥೆ!

ಕೆಲವು ವರ್ಷಗಳ ಹಿಂದಿನ ಘಟನೆ. ಅವನ ಕುರಿತಾದದ್ದು.

ಅವನು( ಮನುಷ್ಯತ್ವವೇ ಇಲ್ಲದವನಾದ್ದರಿಂದ ಈ ಸಂಬೋಧನೆ) ಯಾವುದೇ ಸಭೆ ಸಮಾರಂಭಗಳಲ್ಲಿ ಶಿಕ್ಷಕರನ್ನುದ್ದೇಶಿಸಿ ಹೇಳುತ್ತಿದ್ದಿದ್ದಿಷ್ಟೇ: " ನಿಮಗೆ ನಾವು ಸಂಬಳ ಕೊಡುವುದು ಯಾಕೆ ಗೊತ್ತಾ...?!"

ಮೂಲತಃ ಶಿಕ್ಷಕನಾಗಿದ್ದ ಆತ ಕೆಲಸ ಕಷ್ಟವೆಂದು ಕಚೇರಿಯಲ್ಲಿ ಬೀಡುಬಿಟ್ಟಿದ್ದ. ಎಲ್ಲರೂ ಅವನನ್ನು ಅಧಿಕಾರಿ ಎಂದೇ ಅಂದುಕೊಂಡಿದ್ದರು. ಹಣ ಮಾಡುವುದರಲ್ಲೂ ನಿಸ್ಸೀಮ!

ಆ ದಿನ ಸಂಜೆ ನಾಲ್ಕರ ವೇಳೆ ಒಂದು ಶಾಲೆಗೆ ಹೋಗಿದ್ದ. ಮುಖ್ಯಶಿಕ್ಷಕರು ಪುರುಷನಾದ ಕಾರಣ ಉಳಿದ ಮಹಿಳಾ ಶಿಕ್ಷಕರನ್ನು ಮನೆಗೆ ಕಳುಹಿಸಿದ. 'ಆ ವಹಿ ಕೊಡಿ ಈ ವಹಿ ಕೊಡಿ' ಎನ್ನುತ್ತಾ ಸಂಜೆ ಆರೂವರೆ ಆಯಿತು. ಇವನು ಇವತ್ತು ನನ್ನನ್ನು ಬಿಡುವುದಿಲ್ಲ ಎಂದುಕೊಂಡ ಆ ಮುಖ್ಯ ಶಿಕ್ಷಕರು 'ಈಗ ಬಂದೆ ಸರ್' ಎಂದು ಕಿರುಬೆರಳನ್ನೆತ್ತಿ ತೋರಿಸಿ ಹೊರಹೋದವರೇ main switch ಆಫ್ ಮಾಡಿ ಒಳಗೆ ಬಂದರು. ಒಳಗೆ ಕತ್ತಲಿದ್ದ ಕಾರಣ 'ಕ್ಯಾಂಡಲ್ ಕೊಡಿ' ಎಂದ. ಇಲ್ಲ ಎಂದಿದ್ದಕ್ಕೆ ನಿಧಾನಕ್ಕೆ ಕಚೇರಿಯಿಂದ ಹೊರಬಂದ!

ಆ ಸಮಯಕ್ಕೆ ಬಸ್ ಇಲ್ಲದ್ದರಿಂದ ಮುಖ್ಯ ಶಿಕ್ಷಕರು ಆಟೋವನ್ನೂ ಕರೆಸದೆ ನಾಲ್ಕು ಕಿಲೋಮೀಟರ್ ನಡೆಸಿಕೊಂಡು ಹೋದರು! ಅವನ ಗುಡಾಣ ಹೊಟ್ಟೆಯನ್ನು ಸ್ವಲ್ಪಮಟ್ಟಿಗೆ ಕರಗಿಸಿದ ಈ ಸ್ವಾರಸ್ಯವನ್ನು ಅವರೇ ನನಗೆ ಹೇಳಿದ್ದು.
*
ಒಂದೆರಡು ವರ್ಷಗಳ ನಂತರ ಕಚೇರಿಯ ಗೂಟ ಕಳಚಿ ಶಾಲೆಗೆ ಹೋಗಬೇಕಾದಾಗ ನೊಂದುಕೊಂಡರೂ, ಅಲ್ಲೂ ಅಧಿಕಾರಿಯಂತೆ ವರ್ತಿಸತೊಡಗಿದನಂತೆ! ಯಾರೂ ಅವನ ಮಾತು ಕೇಳದಿದ್ದಾಗ ಒಮ್ಮೆ ಬೇಗ ನಿವೃತ್ತಿ ಆಗಿದ್ದರೆ ಸಾಕು ಎಂದು ದೇವರಲ್ಲಿ ಬೇಡುತ್ತಿದ್ದನಂತೆ!
*
ಈಚೆಗೆ whatsapp ನೋಡುತ್ತಿದ್ದಾಗ ಯಾರೋ ಒಬ್ಬರು ಹಂಚಿಕೊಂಡಿದ್ದ statusನ ಪಟದಲ್ಲಿ ಹಾರ ಹಾಕಿಸಿಕೊಳ್ಳುತ್ತಿದ್ದವರ ಪೈಕಿ ಇವನೂ ಇದ್ದ.

ಜಗತ್ತಿನ ಚಿತ್ರ ಎಂದುಕೊಂಡೆ.
*
ಕಾಜೂರು ಸತೀಶ್

ಇಂಗ್ಲಿಷ್ ಎಂಬ ಅವಮಾನ ಮತ್ತು ವ್ಯಾಮೋಹ

ಯಾರಾದರೂ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿದ್ದರೆ 'ಆಽ' ಎಂದು ಬಾಯಗಲಿಸಿ ನೋಡುತ್ತಿದ್ದೆವು. ಶಾಲೆಯಲ್ಲಿ ಆಂಗ್ಲ ಭಾಷೆಯನ್ನು ಕನ್ನಡದಲ್ಲೇ ಹೇಳಿಕೊಡುತ್ತಿದ್ದುದರಿಂದ ಇಂಗ್ಲಿಷ್ ನಮಗೆ ಅಪರೂಪದ ಭಾಷೆಯಾಗಿತ್ತು.

ಮನೆಯಲ್ಲೂ ಹಾಗೆಯೇ- ರೇಡಿಯೋದಲ್ಲಿ English News ಬಂತೆಂದರೆ ಆಫ್ ಮಾಡಬೇಕಿತ್ತು! 'ಏನದು ಕೊಂಯ್ಕೊಂಯ್, ಆಫ್ ಮಾಡು' ಎನ್ನುತ್ತಿದ್ದರು!

ಭಾಷೆಯನ್ನು ಸ್ವಯಂ ಕಲಿಯುವ ಪ್ರಕ್ರಿಯೆ(ನನ್ನೊಂದಿಗೆ ನಾನೇ ಮಾತಾಡಿಕೊಂಡು) ಬಾಲಿಶವೂ ಅಮಾನವೀಯವೂ ಆದದ್ದು. ಆದರೂ , ಅವಮಾನವನ್ನು ಮೀರಲು, ತುಸು ಆತ್ಮವಿಶ್ವಾಸವನ್ನು ಗಳಿಸಲು ನಾವು ಸ್ವಲ್ಪವಾದರೂ English ಕಲಿಯಬೇಕಿತ್ತು.
*
ನನ್ನ ಅದೃಷ್ಟವೋ ಏನೋ- ನಾನು ಒಂದನೇ ತರಗತಿಯಲ್ಲಿದ್ದಾಗ ಐದನೇ ತರಗತಿಯ ಇಂಗ್ಲೀಷ್ ಪಠ್ಯಪುಸ್ತಕದ ಪರಿಚಯವಾಯಿತು. ಹಾಗಾಗಿ , ಐದನೇ ತರಗತಿಗೆ ಹೋದಾಗ ತುಂಬಾ ಹೊಡೆಯುವ ಟೀಚರೊಬ್ಬರು ಇಂಗ್ಲೀಷ್ ಪಾಠ ಮಾಡಲು ಬಂದಾಗ ನನಗೆ ನಿಜಕ್ಕೂ ಖುಷಿ ಆಗಿತ್ತು!

ಆರನೆಯ ಇಯತ್ತೆಯ ಇಂಗ್ಲೀಷ್ ಪಾಠದಲ್ಲಿ ಒಂದು ಮಜಾ ಇರುತ್ತಿತ್ತು . ಮಧ್ಯಾಹ್ನದ ಅನಂತರದ ಮೊದಲ ಅವಧಿಯದು. ಹೋಟೆಲಿನಲ್ಲಿ ಊಟಮಾಡಿ ಒಂದು ಪ್ಯಾಕೆಟ್ ಏರಿಸಿಕೊಂಡು ಎಲೆ- ಅಡಿಕೆ ಜಗಿದು ಕಣ್ಣು ಕೆಂಪಗೆ ಮಾಡಿಕೊಂಡು ಬರುವಾಗ ಪಾಠಗಳನ್ನು ಮೊದಲೇ ಓದಿ ಡೈಜೆಸ್ಟಿನಲ್ಲಿ ಅರ್ಥ ತಿಳಿದುಕೊಂಡಿರುತ್ತಿದ್ದ ನನಗೆ ಖುಷಿಯೋ ಖುಷಿ. 'ಕತ್ತೆಗಳಾ, ದರ್ವೇಸಿಗಳಾ, ಬ್ಯಾವರ್ಸಿಗಳ ತಂದು ನಿಮ್ಮ..' ಎಂದು ಬೈಯ್ಯುತ್ತಾ ಉದ್ದ ಬೆತ್ತದಲ್ಲಿ ಬೀಳುವ ಏಟು ಇಂಗ್ಲೀಷ್ ಓದಲು ಬಾರದವರಿಗೆ ನರಕವಾಗಿತ್ತು.

ಏಳನೆಯ ಇಯತ್ತೆಯಲ್ಲಿ ಐದನೇ ತರಗತಿಯ ಅದೇ ಟೀಚರು ಇಂಗ್ಲೀಷ್ ಪಾಠಕ್ಕೆ. ಒಂದು ಪಾಠ ಒಂದು ಪದ್ಯ ಮುಗಿಸಿ ಕಿರು ಪರೀಕ್ಷೆ ಮಾಡಿ ಇಪ್ಪತ್ತಕ್ಕೆ ಹದಿನೈದು ಬಂದಿದ್ದರಿಂದ ಬಿಸಿಬಿಸಿ ಕಜ್ಜಾಯ ಕೂಡ ಕೊಟ್ಟ ಅವರಿಗೆ ಮರುದಿನವೇ ವರ್ಗಾವಣೆಯಾದಾಗ ಖುಷಿಪಟ್ಟಿದ್ದೆವು! ಆ ವರ್ಷ ಇಂಗ್ಲೀಷ್ ಪಾಠ ಮಾಡುವವರಿಲ್ಲದೆ ಡೈಜೆಸ್ಟೇ ನಮ್ಮ ಇಂಗ್ಲೀಷ್ ಮೇಷ್ಟ್ರಾಯಿತು. ಇನ್ನೇನು ಪಬ್ಲಿಕ್ ಪರೀಕ್ಷೆ ಬರಬೇಕು ಎನ್ನುವಾಗ ಆ ವಿಷಯವನ್ನು ಹಂಚಿಕೊಂಡಿದ್ದ ಮುಖ್ಯ ಶಿಕ್ಷಕರು ಬಂದು ವ್ಯಾಕರಣ ಪುಸ್ತಕದಲ್ಲಿದ್ದ Degrees of comparison ಬರೆಸಿ ಹೋಗಿದ್ದರು. ನಾವದನ್ನು ಉರುಹೊಡೆದುಕೊಂಡಿದ್ದೆವು!

ಎಂಟನೇ ತರಗತಿಗೆ ಬಂದಾಗ 'ಇಂಗ್ಲೀಷ್ ಪುಸ್ತಕ ತಕೊಂಡ್ಬಾ' ಎಂದು ಮೇಷ್ಟ್ರು ಹೇಳಿದಾಗ ಕಚೇರಿಯಲ್ಲಿದ್ದ ಅವರ ಪುಸ್ತಕವನ್ನು ತರುವಾಗ ಮೆಲ್ಲಗೆ ತೆರೆದು ನೋಡಿದ್ದೆ. ಅದರ ತುಂಬ ಪೆನ್ಸಿಲಿನಲ್ಲಿ ಬರೆದಿದ್ದ ಕನ್ನಡ ಅರ್ಥಗಳು! 'ಪಾಪ! ಮೇಷ್ಟ್ರಿಗೆ ಇಂಗ್ಲೀಷ್ ಬರುವುದಿಲ್ಲ' ಲೆಕ್ಕಹಾಕಿದೆ.
*
ಹೀಗೆ ಮುಂದುವರಿದ ನನ್ನ ಇಂಗ್ಲೀಷ್ ಕಲಿಕೆ ಕಡೆಗೂ ಗುರಿಮುಟ್ಟಲಿಲ್ಲ. ಯಾರಾದರೂ ಏನಾದರೂ ಕೇಳಿದರೆ ಉತ್ತರಿಸುವ ಹಿಂಸೆಗೆ ,ಅವಮಾನಕ್ಕೆ ಆ ರಾತ್ರಿಯ ನಿದ್ದೆಯೂ ಇಂಗ್ಲೀಷ್ ಪಾಲಾಗುತ್ತಿತ್ತು!

ತುಂಬಾ ಅವಮಾನವಾದ ಆ ದಿನವೊಂದಿದೆ. ಅವರು- "Did you get it?" ಎಂದರು. ನಾನು ತಲೆಯಾಡಿಸಿದರೆ ಒಳ್ಳೆಯದಿತ್ತು, ಬದಲಿಗೆ "I didn't got" ಎಂದೆ!! ಅವರು "Oh, you didn't get?!" ಎಂದರು.
ನನಗೆ ನನ್ನ ತಪ್ಪಿನ ಅರಿವಾಯಿತು!

ಅಂದಿನಿಂದ ಓದಿದೆ. ನನ್ನೊಡನೆ ಮಾತನಾಡಿಕೊಂಡೆ. ಸಾಹಿತ್ಯ , ತತ್ತ್ವಶಾಸ್ತ್ರ, ಎಲ್ಲವೂ ಇಂಗ್ಲೀಷಿನಲ್ಲಿ! ವ್ಯಾವಹಾರಿಕ ಇಂಗ್ಲೀಷ್ ಮಂಕಾದರೂ ದೊಡ್ಡ ದೊಡ್ಡ ಪದಗಳೂ, ವಿಚಾರಗಳೂ ಬರತೊಡಗಿದವು. ಮುಂದೆ ಇಂಗ್ಲೀಷ್ ಮೇಷ್ಟ್ರಾದೆ!


ಈಗ ಯಾವ ದೇಶದಲ್ಲಾದರೂ ಸರಿ, ಬದುಕಿ ಬರುವೆ!

*

ಕಾಜೂರು ಸತೀಶ್

Monday, July 4, 2022

ಶಿಕ್ಷೆ

'ಒಂದು ವೇಳೆ ನಾನು 'ಮರ ಬಿದ್ದು' ಸತ್ತರೆ ನನ್ನ ಕುಟುಂಬಕ್ಕೆ ಒಂದು ಬಿಡಿಗಾಸೂ ಸಿಗುವುದಿಲ್ಲ. ನನ್ನವ್ವನಿಗೆ ಲಂಚ ಕೊಟ್ಟು ಅವರನ್ನೆಲ್ಲಾ ಸಾಕುವ ಕಸುವಿಲ್ಲ'.

ಹೀಗೆ ಬರೆದು ಫೇಸ್ಬುಕ್ಕಿನಲ್ಲಿ ಹಂಚಿಕೊಂಡ ಆ ನೌಕರ . ಅವನನ್ನು ನಿಯಮಬಾಹಿರವಾಗಿ ಬೇರೆಡೆಗೆ ವರ್ಗಾಯಿಸಿದ್ದರು.

ಮರುದಿನ ಅವನನ್ನು ಬಂಧಿಸಲಾಯಿತು; ಮರಣದಂಡನೆ ಶಿಕ್ಷೆ ವಿಧಿಸಲಾಯಿತು
*

ಕಾಜೂರು ಸತೀಶ್