ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, July 7, 2022

ದುರುಳನೊಬ್ಬನನ್ನು ವಂಚಿಸಿದ ಕಥೆ!

ಕೆಲವು ವರ್ಷಗಳ ಹಿಂದಿನ ಘಟನೆ. ಅವನ ಕುರಿತಾದದ್ದು.

ಅವನು( ಮನುಷ್ಯತ್ವವೇ ಇಲ್ಲದವನಾದ್ದರಿಂದ ಈ ಸಂಬೋಧನೆ) ಯಾವುದೇ ಸಭೆ ಸಮಾರಂಭಗಳಲ್ಲಿ ಶಿಕ್ಷಕರನ್ನುದ್ದೇಶಿಸಿ ಹೇಳುತ್ತಿದ್ದಿದ್ದಿಷ್ಟೇ: " ನಿಮಗೆ ನಾವು ಸಂಬಳ ಕೊಡುವುದು ಯಾಕೆ ಗೊತ್ತಾ...?!"

ಮೂಲತಃ ಶಿಕ್ಷಕನಾಗಿದ್ದ ಆತ ಕೆಲಸ ಕಷ್ಟವೆಂದು ಕಚೇರಿಯಲ್ಲಿ ಬೀಡುಬಿಟ್ಟಿದ್ದ. ಎಲ್ಲರೂ ಅವನನ್ನು ಅಧಿಕಾರಿ ಎಂದೇ ಅಂದುಕೊಂಡಿದ್ದರು. ಹಣ ಮಾಡುವುದರಲ್ಲೂ ನಿಸ್ಸೀಮ!

ಆ ದಿನ ಸಂಜೆ ನಾಲ್ಕರ ವೇಳೆ ಒಂದು ಶಾಲೆಗೆ ಹೋಗಿದ್ದ. ಮುಖ್ಯಶಿಕ್ಷಕರು ಪುರುಷನಾದ ಕಾರಣ ಉಳಿದ ಮಹಿಳಾ ಶಿಕ್ಷಕರನ್ನು ಮನೆಗೆ ಕಳುಹಿಸಿದ. 'ಆ ವಹಿ ಕೊಡಿ ಈ ವಹಿ ಕೊಡಿ' ಎನ್ನುತ್ತಾ ಸಂಜೆ ಆರೂವರೆ ಆಯಿತು. ಇವನು ಇವತ್ತು ನನ್ನನ್ನು ಬಿಡುವುದಿಲ್ಲ ಎಂದುಕೊಂಡ ಆ ಮುಖ್ಯ ಶಿಕ್ಷಕರು 'ಈಗ ಬಂದೆ ಸರ್' ಎಂದು ಕಿರುಬೆರಳನ್ನೆತ್ತಿ ತೋರಿಸಿ ಹೊರಹೋದವರೇ main switch ಆಫ್ ಮಾಡಿ ಒಳಗೆ ಬಂದರು. ಒಳಗೆ ಕತ್ತಲಿದ್ದ ಕಾರಣ 'ಕ್ಯಾಂಡಲ್ ಕೊಡಿ' ಎಂದ. ಇಲ್ಲ ಎಂದಿದ್ದಕ್ಕೆ ನಿಧಾನಕ್ಕೆ ಕಚೇರಿಯಿಂದ ಹೊರಬಂದ!

ಆ ಸಮಯಕ್ಕೆ ಬಸ್ ಇಲ್ಲದ್ದರಿಂದ ಮುಖ್ಯ ಶಿಕ್ಷಕರು ಆಟೋವನ್ನೂ ಕರೆಸದೆ ನಾಲ್ಕು ಕಿಲೋಮೀಟರ್ ನಡೆಸಿಕೊಂಡು ಹೋದರು! ಅವನ ಗುಡಾಣ ಹೊಟ್ಟೆಯನ್ನು ಸ್ವಲ್ಪಮಟ್ಟಿಗೆ ಕರಗಿಸಿದ ಈ ಸ್ವಾರಸ್ಯವನ್ನು ಅವರೇ ನನಗೆ ಹೇಳಿದ್ದು.
*
ಒಂದೆರಡು ವರ್ಷಗಳ ನಂತರ ಕಚೇರಿಯ ಗೂಟ ಕಳಚಿ ಶಾಲೆಗೆ ಹೋಗಬೇಕಾದಾಗ ನೊಂದುಕೊಂಡರೂ, ಅಲ್ಲೂ ಅಧಿಕಾರಿಯಂತೆ ವರ್ತಿಸತೊಡಗಿದನಂತೆ! ಯಾರೂ ಅವನ ಮಾತು ಕೇಳದಿದ್ದಾಗ ಒಮ್ಮೆ ಬೇಗ ನಿವೃತ್ತಿ ಆಗಿದ್ದರೆ ಸಾಕು ಎಂದು ದೇವರಲ್ಲಿ ಬೇಡುತ್ತಿದ್ದನಂತೆ!
*
ಈಚೆಗೆ whatsapp ನೋಡುತ್ತಿದ್ದಾಗ ಯಾರೋ ಒಬ್ಬರು ಹಂಚಿಕೊಂಡಿದ್ದ statusನ ಪಟದಲ್ಲಿ ಹಾರ ಹಾಕಿಸಿಕೊಳ್ಳುತ್ತಿದ್ದವರ ಪೈಕಿ ಇವನೂ ಇದ್ದ.

ಜಗತ್ತಿನ ಚಿತ್ರ ಎಂದುಕೊಂಡೆ.
*
ಕಾಜೂರು ಸತೀಶ್

No comments:

Post a Comment