ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, April 4, 2021

ತರುಣ ಕವಿಯ ಕಾವ್ಯಮೀಮಾಂಸೆ

20ನೇ ಶತಮಾನದ ಅಂತ್ಯದಲ್ಲಿ - 21ನೇ ಶತಮಾನದ ಆದಿಯಲ್ಲಿ ಜನಿಸಿದ ಯುವಕರ ಪೈಕಿ ನೆನಪಿನಲ್ಲಿ ಉಳಿಯುವ ಹಾಗೆ ಕವಿತೆ ಬರೆದದ್ದು/ಬರೆಯುತ್ತಿರುವವರು ನನ್ನ ಗಮನಕ್ಕೆ ಬಂದಿಲ್ಲ. ಹಾಗೆ ಬರೆದವರ  ಕೃತಿಗಳಲ್ಲಿರುವ ವ್ಯಾಕರಣ ದೋಷಗಳು ಓದುಗರನ್ನು ನುಂಗಿ ನೀರು ಕುಡಿಯುತ್ತವೆ. ಕವಿಗೋಷ್ಠಿಗಳಲ್ಲಿ ಅವರನ್ನು ನೋಡುವಾಗ ಎಲ್ಲಿಯಾದರೂ ಓಡಿಹೋಗಿ ಪ್ರಾಣರಕ್ಷಣೆ ಮಾಡಿಕೊಳ್ಳಬೇಕು ಎನಿಸುತ್ತದೆ.



ಆದರೆ, ಮಿತಿ ಎನ್ನುವುದು ಗುರುಗಣೇಶನಂಥವರ ರೂಪದಲ್ಲಿ ಇದ್ದೇ ಇರುತ್ತದೆ. 'ಇದುವರೆಗಿನ ಪ್ರಾಯ' ಎಂಬ ಕೃತಿ ಬಿಡುಗಡೆಯಾಗುವವರೆಗೆ ಆ ವ್ಯಕ್ತಿಯ, ಅವರಂತಹದೇ ಕವಿತೆಗಳ ಪರಿಚಯವಿರಲಿಲ್ಲ. ೨೩ರ ಪ್ರಾಯದ ಈ ಯುವಕ ಇಷ್ಟೆಲ್ಲಾ ಕಾವ್ಯ ಸಾಹಸಕ್ಕೆ ಇಳಿದು ಇದುವರೆಗಿನ ಹೆಚ್ಚು ಪ್ರಾಯದ ಕವಿಗಳೆನಿಸಿಕೊಂಡವರ ಕಣ್ಣು ತೆರೆಸಲು ಹೊರಟಿದ್ದಾರೆ.


ಇದುವರೆಗಿನ ಪ್ರಾಯವು ಕಾವ್ಯ ಶಿಸ್ತು ಮತ್ತು ಸೃಜನಶೀಲ ನೆಲೆಯಿಂದ ಹೆಚ್ಚು ಇಷ್ಟವಾದ ಕೃತಿ. 'ಕಾವ್ಯ ವೈಚಾರಿಕತೆ'ಯನ್ನು ಮುಗ್ಧತೆಯಿಂದ ಹೇಳಹೊರಡುವ ಅವರ ಕ್ರಮ ಆಹ್ಲಾದವನ್ನುಂಟುಮಾಡುವಂತಹದು.

ತಾಜಾತನ ಈ ಸಂಕಲನದ ಮುಖ್ಯ ಗುಣ. ನಿಸರ್ಗದ ಘಟಕಗಳನ್ನು ಕವಿತೆಯಾಗಿಸುತ್ತಾ ಚಂಗನೆ ಅವೇ ಘಟಕಗಳು personification ಆಗಿ ಜಿಗಿಯುವ ಮತ್ತು ಹೊಸ ಅರ್ಥವನ್ನು ಸೃಷ್ಟಿಸುವ ವಿಶಿಷ್ಟ ಶಕ್ತಿ ಕವಿತೆಗಳಲ್ಲಿವೆ.

ಸಂಜೆಹೊತ್ತಿನ ಹೊಳೆ
ನಿಧಾನ ನಿಧಾನವಾಗಿ ಹರಿಯುತ್ತದೆ

ಸ್ವಲ್ಪ ತಡವಾದರೆ
ಮಕ್ಕಳು ಕಿರುಚಿ ಅತ್ತು ಕಾದುಕಾದು
ನಿದ್ದೆಮಾಡಿ ಕೊನೆಗೆ
ಅವಳೂ ಬೈದು..

ಹೀಗೆ.
*


ಕವಿತೆಯನ್ನು ತೀವ್ರವಾಗಿ ಬಾಳುವವರಿಗೆ, ಈಗಾಗಲೇ ಇರುವ ಸವೆದ ದಾರಿಗಳನ್ನು ಬಿಟ್ಟು ಕವಿತೆಯ ನಡಿಗೆಯಲ್ಲಿ ಅನನ್ಯತೆಯನ್ನು ತರಲು ಬಯಸುವವರಿಗೆ, ಕವಿತೆಯ ಕುರಿತ ಜಿಜ್ಞಾಸೆಯು ತಮ್ಮದೇ ಕಾವ್ಯ ಮೀಮಾಂಸೆಯನ್ನು ಸೃಷ್ಟಿಸಬಯಸುತ್ತದೆ. ಆಗ ಹುಟ್ಟುವ ಕವಿತೆಗಳು ಕೊನೆಗೆ ಕಾವ್ಯಮೀಮಾಂಸೆಯನ್ನು ಮುಟ್ಟುತ್ತವೆ. ಗುರುಗಣೇಶರ ಅನೇಕ ಕವಿತೆಗಳಲ್ಲಿ ಈ ಬಗೆಯ ಜಿಜ್ಞಾಸೆಗಳಿವೆ:

ಕವಿ
ಅಂದರೆ
ಒಬ್ಬ ಮನುಷ್ಯ
*
ತೀವ್ರ ಸ್ಫೋಟ
ಜನ ಸಾಯಲಿಲ್ಲ
ಕವಿತೆ ಹುಟ್ಟಿತು
*
ಮೀನು ಈಜುವ ಮುನ್ನ
ನೀರು
ಎಲೆ ಚಿಗುರುವ ಮುನ್ನ
ಬೇರು
ಭಕ್ತ ಕೈಮುಗಿವ ಮುನ್ನ
ದೇವರು
ಬರೆಯುವ ಮುನ್ನ ಕವಿತೆ

ಇರುತ್ತದೆ
ಇರಬೇಕು
*
ಗುರುಗಣೇಶರ ಕವಿತೆಗಳಿಗೆ ಎ.ಕೆ.ರಾಮಾನುಜನ್ ಅವರ ಲಯ ಹಾಗೂ ಶಿಲ್ಪವಿದೆ. ಎಸ್. ದಿವಾಕರ್ ಅವರು ಸೃಷ್ಟಿಸುವ ಚಮತ್ಕಾರವಿದೆ. ಆದರೆ ಅವರು ಇದರ ಆಚೆಗೆ ತಮ್ಮದೇ ಆದ ಅಸ್ಮಿತೆಯನ್ನು ಸ್ಥಾಪಿಸಿದ್ದಾರೆ.


ನದಿ, ಬೆಟ್ಟ, ಆಕಾಶ, ಮಳೆ, ನಾಯಿ, ಬೆಕ್ಕು , ಮರ, ಬೀಜ, ಎಲೆ, ಅಮ್ಮ ಗಾಳಿ, ಮಣ್ಣು, ಹಕ್ಕಿ, ಮೀನು, ನೆಲ, ಇಂತಹ ಸಂಗತಿಗಳನ್ನು ಹೊಸ ದೃಷ್ಟಿಯಿಂದ ಕಾವ್ಯವನ್ನಾಗಿಸಿದ ಗುರುಗಣೇಶರ ಸಾಹಿತ್ಯಕ್ಕೆ ಒಳ್ಳೆಯ ಭವಿಷ್ಯವಿದೆ.
*


-ಕಾಜೂರು ಸತೀಶ್

No comments:

Post a Comment