ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, May 29, 2021

ಮೌಲ್ಯ , ಶಿಕ್ಷಣ, ಅಹಂ, ಕಾಮನ್ ಸೆನ್ಸ್ ಮತ್ತು ಭ್ರಷ್ಟಾಚಾರ

ನಾನು ಪ್ರತಿದಿನ ಸಂಚರಿಸುವ ರಸ್ತೆಯ ಮಧ್ಯಭಾಗದಲ್ಲಿ ಬಿಳಿಯ ಗೆರೆಯೊಂದನ್ನು ಎಳೆಯಲಾಗಿದೆ. ಹೋಗುವವರಿಗೆ ಬರುವವರಿಗೆ ಅದೊಂದು ಸೂಚನೆ; ಮುಟ್ಟಬಾರದೆಂಬ ಸೂಚನೆ; ಆಚೆ ದಾಟಬಾರದೆಂಬ ಸೂಚನೆ.

ನಿತ್ಯ ಎದುರಿಗೆ ವಾಹನಗಳಲ್ಲಿ ಬರುವ ಮಂದಿ ಆ ಗೆರೆಯನ್ನು ಮುಟ್ಟಿ, ದಾಟಿ ಇನ್ನೂ ಈಚೆಗೆ ಬರುತ್ತಾರೆ. ಅವರ ಲೆಕ್ಕ ಇಡುತ್ತೇನೆ. ನೋಡಿದರೆ, ಅವರಲ್ಲಿ white collar ಮಂದಿಯಂತೆ ಕಾಣುವ ಜನರೇ ಹೆಚ್ಚು. 

ನಮಗೆ ರಸ್ತೆಯಲ್ಲಿ ಜಾಗವಿಲ್ಲದಿದ್ದರೆ ಅವರಿಗೇನಂತೆ!
*

ರಸ್ತೆಯಲ್ಲಿ ಹೋಗುತ್ತಿರುತ್ತೇನೆ. ಹಿಂದಿಕ್ಕಿ ಹೋಗುವ ಬೆಲೆಬಾಳುವ (ಕೆಲವೊಮ್ಮೆ ಅಗ್ಗದ ) ಕಾರಿನ ಕಿಟಕಿಯಿಂದ ಪ್ಲಾಸ್ಟಿಕ್ ಬಾಟಲಿ/ತಿಂಡಿಪೊಟ್ಟಣ ರಸ್ತೆಗೆ ಬೀಳುತ್ತದೆ. ನನ್ನನ್ನು ಅವಮಾನಿಸುವ ಹಾಗೆ ರಸ್ತೆಯಲ್ಲೇ ಆ ಬಾಟಲಿ/ಪ್ಲಾಸ್ಟಿಕ್ಕುಗಳು ರಾಜಾರೋಷವಾಗಿ ಮಲಗಿಬಿಡುತ್ತವೆ.
*

ನಿನ್ನೆ ದಿನವೂ ನೋಡಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಾರು ನಿಲ್ಲಿಸಿದ ಬಿಳಿಯ ಅಂಗಿ ಧರಿಸಿದ ಆ ವ್ಯಕ್ತಿ ತನ್ನ ಬಲಗೈಯಲ್ಲಿ ಮೂಗನ್ನು ಹಿಡಿದು ಸೀಟಿ ಜನರು ನಡೆದಾಡುವ ರಸ್ತೆಬದಿಗೆ ಸಿಂಬಳದ ಪಾದಸ್ಪರ್ಶವಾಗುವ ಹಾಗೆ ಮಾಡಿ ಎರಡೂ ಕೈಗಳನ್ನು ಉಜ್ಜಿಕೊಳ್ಳುತ್ತಾ ಕಾರು ಹತ್ತಿ ಹೊರಟುಹೋದ.

ಅವನ ವೇಷಭೂಷಣದಿಂದ ಅವನು ಕನಿಷ್ಟ ಒಂದು ಪದವಿಯ ಒಡೆಯನಾದರೂ ಆಗಿರಬಹುದು ಎಂದುಕೊಂಡೆ.
*

ಇದನ್ನು ಓದುತ್ತಿರುವ ಹಲವರು ಅಂದುಕೊಳ್ಳುತ್ತಿರುತ್ತಾರೆ: 'ಅವರು ಏನಾದರೂ ಮಾಡಿಕೊಳ್ಳಲಿ. ಇವನಿಗೇನು? ಅದು ಅವರವರ ಸ್ವಾತಂತ್ರ್ಯ.. ಇವನಿಗೇನು ನಷ್ಟ?!'

ಹಾಗೆ ಓದುತ್ತಿರುವವರೆಲ್ಲರೂ ವಿದ್ಯಾವಂತರು. ಪಂಡಿತರು! ಹಲವರು ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು!
*

ಬಸ್ ನಿಲ್ದಾಣದ ಪಕ್ಕದ ಅಂಗಡಿಯವನಿಗೆ - 'ವ್ಯಾಪಾರ ಹೇಗೋ ಆಗುತ್ತದೆ, ಆದರೆ ಕಸ ಬಾಚೋರ್ಯಾರು?' ಎಂಬ ಚಿಂತೆ. ಅಷ್ಟಕ್ಕೂ ಅಲ್ಲಿ ಕಸ ಹಾಕುವವರು ಪ್ರತಿಷ್ಠಿತ ಎನಿಸಿಕೊಂಡ ಸಂಸ್ಥೆಗಳಲ್ಲಿ ಓದುತ್ತಿರುವ ಶಾಲಾ-ಕಾಲೇಜು ವಿದ್ಯಾರ್ಥಿಗಳು!

*
ಹತ್ತು ಗಂಟೆಗೆ ಸಭೆ/ ಕಾರ್ಯಕ್ರಮ ಎಂದು ಸಮಯ ನೀಡಲಾಗಿರುತ್ತದೆ. ಆಯೋಜಕ/ಕಿ ಶಿಸ್ತಿನ ವ್ಯಕ್ತಿಯಾಗಿದ್ದು ಮೊದಲೇ ಸಿದ್ಧನಾಗಿದ್ದಾನೆ/ಳೆ ಎಂದುಕೊಂಡರೆ, ಭಾಗಿಯಾಗಬೇಕಾದವರು ಆ ಹೊತ್ತಿಗೆ ಇನ್ನೂ ತಲೆಯೇ ಬಾಚಿರುವುದಿಲ್ಲ. ಕೆಲವರು ಹಾಸಿಗೆಯಿಂದ ಎದ್ದೇ ಇರುವುದಿಲ್ಲ. ಅಥವಾ ಇವರಲ್ಲನೇಕರು ಸರಿಯಾದ ಸಮಯಕ್ಕೆ ಬಂದು ಹಾಜರಿದ್ದರೂ, ಆಯೋಜಕನ ನಿದ್ದೆ ಬಿಟ್ಟೇ ಇರುವುದಿಲ್ಲ!
*

ಗುಡ್ಡದ ಮೇಲೆ ಚಾರಣ ಹೋದಾಗ ನನ್ನ ಗೆಳೆಯ ಹೇಳುತ್ತಿರುತ್ತಾರೆ- 'ಮನುಷ್ಯರೇ ಇಲ್ಲದಿದ್ದರೆ ಈ ಪರಿಸರ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ? ಮನುಷ್ಯ ಇಲ್ಲದಿದ್ದರೂ ಇದು ಇದ್ದೇ ಇರುತ್ತದೆ , ಮನುಷ್ಯರನ್ನು ಅದು ಅವಲಂಬಿಸಿಲ್ಲ. ಆದರೆ ಅದು ಇಲ್ಲದೆ ಮನುಷ್ಯರಿರುವುದಿಲ್ಲ...'

'ಮತ್ತೆ ಇಷ್ಟು ಉಳಿದಿದೆ ಅಂದ್ರೆ ಅದಕ್ಕೆ ಅಮಾಯಕ, ಅನಕ್ಷರಸ್ಥರೇ ಕಾರಣ!'
*

ನೀತಿ ಹೇಳಿಕೊಡುವ ಗುರುಗಳಲ್ಲಿ/ಸಮಾಜದಲ್ಲಿ ಆ ನೀತಿಗಳ ಕೊರತೆಯನ್ನು ವಿದ್ಯಾರ್ಥಿಗಳು/ಕಿರಿಯರು ಕಂಡುಕೊಂಡಾಗ ಇಡೀ ಮೌಲ್ಯ ವ್ಯವಸ್ಥೆ ಬುಡಮೇಲಾಗುತ್ತದೆ. ಸರಿಯಾಗಿ ಓದಲು- ಬರೆಯಲು ತಿಳಿಯದ, ವಿದ್ಯಾರ್ಥಿಯ ಸಮಸ್ಯೆಗೆ ಪರಿಹಾರ ಸೂಚಿಸಲಾಗದ, ಅವರ ವೇಗದಲ್ಲಿ ಮುನ್ನುಗ್ಗಲಾಗದ ಗುರುಗಳಿದ್ದಾಗ 'ಮೌಲ್ಯ' ಎನ್ನುವುದು ಹೇಳುವುದಕ್ಕೆ ಮಾತ್ರ ಇರುವ ಸಂಗತಿಯಾಗುತ್ತದೆ.
*

' ನಮ್ಮ ಜನಕ್ಕೆ ಯಾಕೆ common sense ಇಲ್ಲ' ಎಂದರು ಗೆಳೆಯರೊಬ್ಬರು. ' ಭ್ರಷ್ಟಾಚಾರ ಸರ್' ಎಂದೆ!!
ತಲೆಬುಡ ಅರ್ಥವಾಗದವರಂತೆ ನೋಡಿದರು. ಎಳೆಎಳೆಯನ್ನೂ ವಿವರಿಸಿದೆ.

'ನಿಜ ಸರ್' 'ಛೆ' ಎಂದರು.
*


ಕಾಜೂರು ಸತೀಶ್

No comments:

Post a Comment