ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, January 16, 2024

ಪೋಸ್ಟಾಫೀಸಿನಲ್ಲಿ ಪ್ರಬಂಧಗಳ ಜಡ್ಜ್ಮೆಂಟ್

ಈಚೆಗೆ ಲಲಿತ ಪ್ರಬಂಧ ಕೃತಿಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಕೆಲವು ಲಲಿತ ಪ್ರಬಂಧಗಳನ್ನು ಓದಿದ ಅನಂತರ ಇವು ಆತ್ಮ ಚರಿತ್ರೆಯಾಗುತ್ತಿರುವುದರ ಬಗ್ಗೆ ಕಳವಳವೆನಿಸಿದ್ದಿದೆ. ತದ್ವಿರುದ್ಧವಾಗಿ , ರಹಮತ್ ತರೀಕೆರೆ ಅವರ ಬಿಡಿ ಪ್ರಬಂಧಗಳನ್ನು ಓದಿದಾಗಲೆಲ್ಲ ಪ್ರಬಂಧಗಳಿಗಿರುವ ಅಗಾಧ ಸಾಮರ್ಥ್ಯಗಳ ಬಗ್ಗೆ ಬೆರಗಾಗಿದ್ದೇನೆ.

ತಿಂಗಳುಗಳ ಹಿಂದೆ ಅಮರೇಶ ಗಿಣಿವಾರರು ತಮ್ಮ 'ಪೋಸ್ಟಾಫೀಸಿನಲಿ ಅಕ್ಕನ ಜಡ್ಜಮೆಂಟು' ಎಂಬ ಪ್ರಬಂಧಗಳ ಸಂಕಲನ ಕಳಿಸಿದ್ದರು. ಹಿಂಡುಕುಳ್ಳು (👈ಇಲ್ಲಿ ಕ್ಲಿಕ್ಕಿಸಿ) ಕಥಾ ಸಂಕಲನದ ಮೂಲಕ ಗಮನ ಸೆಳೆದಿದ್ದ ಗಿಣಿವಾರರ ಈ ಸಂಕಲನವನ್ನು ಓದಿ ಬೆರಗುಗೊಂಡೆ. ಅಂಚೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ಸಾಹಿತ್ಯದ ಅಕಡೆಮಿಕ್ ಜ್ಞಾನವನ್ನು ಗಳಿಸಿ ತಮ್ಮ ನೆಲದ(ಸಿಂಧನೂರು) ನುಡಿಯಲ್ಲಿ/ ನುಡಿಗಟ್ಟುಗಳಲ್ಲಿ ವಿವಿಧ ಆಕರಗಳೊಂದಿಗೆ ಮಂಡಿಸುತ್ತಾರೆ ಎಂದರೆ ಸಾಹಿತ್ಯವು ಅಷ್ಟರಮಟ್ಟಿಗೆ ಅವರನ್ನು ಸೆಳೆದಿದೆ/ಆವರಿಸಿದೆ ಎಂದರ್ಥ. ಪ್ರಬಂಧವನ್ನು ಅವರು ರಸಾಸ್ವಾದಕ್ಕೂ ರಿಸೋರ್ಸ್ ಆಗುವುದಕ್ಕೂ ಕಡೆದಿಟ್ಟಿದ್ದಾರೆ. ಕೇಂದ್ರ ಪ್ರಜ್ಞೆಯೊಂದನ್ನು ಅನುಭವದ- ಮಾಹಿತಿಯ ಮೂಸೆಯಲ್ಲಿ ಲಲಿತವಾಗಿ ಹೊಸೆಯುವ ಮೂಲಕ ಏಕಕಾಲದಲ್ಲಿ ಕೃತಿಕಾರನ ಭಾವ ಪ್ರಪಂಚಕ್ಕೂ ಜಗತ್ತಿನ ದರ್ಶನಕ್ಕೂ ಸೇತುವಾಗುವ ಹಾಗೆ ನೋಡಿಕೊಂಡಿದ್ದಾರೆ.




ಬಸಿರು ,ಹೆಂಡತಿ ,ಸಾವು, ಬಸ್ಸು, ಪೋಸ್ಟ್ ಆಫೀಸ್, ಬಾಲ್ಯ, ಊರು, ರೇಡಿಯೋ , ಜೀರಂಗಿ, ,ಅಂಗಾಂಗ, ಅಪಾನವಾಯು- ಇಂತಹ ಸಹಜ ಸಂಗತಿಗಳ ಮೇಲೆ ಪ್ರಬಂಧಗಳು ಹರಿದಿದ್ದರೂ, ಸಿದ್ಧ ಹಾದಿಯನ್ನು ಮುರಿದು, ಖಾಸಗಿಗೊಳ್ಳಬಹುದಾದ ಪ್ರಬಂಧವನ್ನು ಸಮುದಾಯದತ್ತ ಜಿಗಿಸಿ ಮಾನವೀಯಗೊಳಿಸುತ್ತಾರೆ. ತಾವು ಓದಿದ ಸಾಹಿತ್ಯ ಕೃತಿಗಳ/ವಸ್ತುಗಳ ಪ್ರಸ್ತಾಪ ಮಾಡುತ್ತಾರೆ.


ಅಂಗಗಳೇ ತಮ್ಮನ್ನು ತಾವು ಪರಿಚಯಿಸುವ/ನಿರೂಪಿಸುವ 'ಅಂಗಾಂಗಗಳ ನೆನೆದು' ಹೊಸ ಮಾದರಿಯ ಪ್ರಬಂಧ. ಅವರನ್ನು ತೀವ್ರವಾಗಿ ಕಾಡುವ 'ಸಾವು' (ಸಾವೆಂಬುದು ಸಾಯದ ನೆನಪು, ಸಾವಿಗೆ ಒಂದು ಪತ್ರ) 'ದೇಹಮೀಮಾಂಸೆ'( ಅಂಗಾಂಗಗಳ ನೆನೆದು, ಬಸಿರಾಯಣ) 'ಅಸ್ತಿತ್ವವಾದ'ದ ವಿವರಗಳು ಸಾಹಿತ್ಯ ಪರಂಪರೆಯ ಕೆಲವು ಟಿಪ್ಪಣಿಗಳೊಂದಿಗೆ ವ್ಯಕ್ತವಾಗಿವೆ(ಅನಂತಮೂರ್ತಿ, ಕಮೂ,ಕಾಫ್ಕ, ಗೂಗಿ, ಸಾರ್ತ್ರ, ಮಾರ್ಕ್ವೆಜ಼್...)


ಮುಗ್ಧ ಜನ ವಲಯದಲ್ಲಿ ಬೆರೆತುಹೋಗಿರುವ ಹಾಸ್ಯವನ್ನು ಅವರು ಹೆಕ್ಕುತ್ತಾರೆ. ಬಸಿರು, ಹೆಂಡತಿ ಮುಂತಾದವುಗಳ ಬಗ್ಗೆ ಹೇಳುವಾಗ 'ಪರ' ವಹಿಸುವುದಿಲ್ಲ. ಅಮರೇಶ ಗಿಣಿವಾರರಿಗೆ ಪ್ರಬಂಧದ ಓಘ ಮತ್ತು ಭಾಷಿಕ ಹಿಡಿತ ಎಷ್ಟರಮಟ್ಟಿಗೆ ಇದೆಯೆಂದರೆ, 'ಅಪಾನವಾಯು ಸಿಡಿದಾಗ' ಪ್ರಬಂಧದ ಆರಂಭವನ್ನೇ ಗಮನಿಸಿ:

ಈ ಪ್ರಬಂಧದ ತಲೆಬರಹ 'ಅಪಾನವಾಯು ಸಿಡಿದಾಗ' ಅಂತ ಬಳಸುವುದು ನನಗೆ ಸೂಕ್ತವೆನಿಸಿತು. 'ಹೂಸು ಬಿಟ್ಟಾಗ' ಅಂತ ಇಟ್ಟಿದ್ದರೆ ಓದುಗರಿಗೆ ಆರಂಭದಲ್ಲಿ ವಾಸನೆ ಹಿಡಿಸಿದಂತಾಗುತ್ತಿತ್ತು .ಅಪಾನ ವಾಯು ಎಂಬ ಶಬ್ದ ಸ್ವಲ್ಪ ನನ್ನ ಬಗ್ಗೆ ಗೌರವ ಉಳಿಸಿದೆ. ಬೇರೆ ಯಾವುದೇ ಮೂಲ ಕನ್ನಡ ಪದಗಳ ಬದಲಾಗಿ ಸಂಸ್ಕೃತ ಅಥವಾ ಪಾರಿಭಾಷಿಕ ಶಬ್ದ ಬಳಸುವುದರಿಂದ ಮೂಲ ಕನ್ನಡ ಪದಗಳ ಬಗ್ಗೆ ಕೀಳರಿಮೆ ಹುಟ್ಟುತ್ತದೆ ಎಂಬ ದಾಟಿಯಲ್ಲಿ ಕೀಲಾರ ನಾಗೇಗೌಡ ಇನ್ನಿತರರು ಜಾಲತಾಣದಲ್ಲಿ ಚರ್ಚೆಗಿಳಿದಿದ್ದರು...
*

ಕಾಜೂರು ಸತೀಶ್

No comments:

Post a Comment