ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, December 22, 2022

ಸಿದ್ದೇಶಿ ಸರ್ ಎಂಬ ಪ್ರೇರಕ ಶಕ್ತಿ

28-11-2014. ಜಿಲ್ಲಾ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಯ ಸ್ಪರ್ಧೆಗೆ ಹೋಗಿದ್ದೆ. ಅದು ನಡೆಯುತ್ತಿದ್ದ ಶೂನ್ಯ ವೇಳೆಯಲ್ಲಿ ಮುಂದೆ ಬಂದ ಯುವ ಉಪನ್ಯಾಸಕರೊಬ್ಬರು ಅಲ್ಲಿದ್ದವರನ್ನು ಉದ್ದೇಶಿಸಿ 'ರಂಗಣ್ಣನ ಕನಸಿನ ದಿನಗಳು ಗೊತ್ತಾ?' ಎಂದರು.

ಮೂಲೆಯಲ್ಲಿ ನಿಂತಿದ್ದ ನಾನು 'ಇದ್ಯಾರು ಸಾಹಿತ್ಯ ಕೃತಿಯ ಕುರಿತು ಹೇಳುತ್ತಿರುವರಲ್ಲಾ' (ಅದೂ ಮಡಿಕೇರಿಯಲ್ಲಿ!)  ಎಂದುಕೊಂಡೆ ಬೆರಗಿನಿಂದ.
*



ಎಂ.ಆರ್. ಶ್ರೀನಿವಾಸಮೂರ್ತಿಯವರ ರಂಗಣ್ಣನ ಕನಸಿನ ದಿನಗಳು ಕಾದಂಬರಿಯಲ್ಲಿ ನಾಯಕ ರಂಗಣ್ಣ ಶಿಕ್ಷಕನಾಗಿ, ಅಧಿಕಾರಿಯಾಗಿ ಕಂಡು ಅನುಭವಿಸಿದ ಶಿಕ್ಷಣ ವ್ಯವಸ್ಥೆಯ ಕುರಿತ ಅನನ್ಯ ಒಳನೋಟಗಳಿರುವ ಕಾದಂಬರಿ. ರಂಗಣ್ಣನ ಕಾಳಜಿ, ಸೇವಾತತ್ಪರತೆಯೇ ವ್ಯವಸ್ಥೆಯ ಒಳಗಿಳಿದು ವಸ್ತುಸ್ಥಿತಿಯನ್ನು ವಿವೇಚಿಸಲು ಪ್ರೇರಣೆ.
*
ಮತ್ತೆ ಮಡಿಕೇರಿಯ ಟೋಲ್ ಗೇಟಿನಲ್ಲಿ ಒಂದು ಬ್ಯಾಗು ನೇತುಹಾಕಿಕೊಂಡು ಬಸ್ ಹತ್ತುವ/ಇಳಿಯುವ ಅವರನ್ನು ದೂರದಿಂದ ಗಮನಿಸುತ್ತಿದ್ದೆ. ಆಗ ಅವರು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾಗಿದ್ದರು.

ಅದೇ ಸಮಯದಲ್ಲಿ ನಾನಿದ್ದ ಶಾಲೆಗೆ ಬಂದಿದ್ದರು. ನನ್ನ ಪರಿಚಯವೂ ಆಯಿತು.
*
ಎಂಟು ವರ್ಷಗಳು ಸಂದಿವೆ. ಆ ಕಾದಂಬರಿಯ ಕುರಿತು ಪ್ರಸ್ತಾಪಿಸಿದ ಸಿದ್ದೇಶಿ ಸರ್ ಚಿತ್ರದುರ್ಗಕ್ಕೆ ಹಿಂತಿರುಗಿದರೂ ನನಗೀಗ ರಂಗಣ್ಣನಂತೆ ಅಪಾರ ಕನಸುಗಳನ್ನು ಹೊತ್ತ ಜೀವದ ಹಾಗೆ ಕಾಣಿಸುತ್ತಿದ್ದಾರೆ.



*



ನಾವಿಬ್ಬರು ಭೇಟಿಯಾದಾಗಲೆಲ್ಲಾ ನಮ್ಮನಮ್ಮ ಕನಸುಗಳ ಬಗ್ಗೆ ಚರ್ಚಿಸಿದ್ದೇವೆ: ಚಿತ್ರದುರ್ಗದ ನಿಜಲಿಂಗಪ್ಪ ಸಮಾಧಿಯ ಬಳಿ, ದೊಡ್ಡಮಳ್ತೆಯ ಹೊನ್ನಮ್ಮನಕೆರೆ ಗುಡ್ಡದಲ್ಲಿ, ಡಯಟ್ ಗೋಡೆ-ಗೋಡೆಗಳಾಚೆ. ಪಠ್ಯಪುಸ್ತಕಗಳನ್ನು ಮೀರಿದ , ಸಿದ್ಧಮಾದರಿಗಳನ್ನು ಮುರಿಯುವ ಆಲೋಚನೆಗಳೇ ಅವು; ಜೀವಪರ ಚಿಂತನೆಗಳು.



ಅವರಿರುವಲ್ಲಿ ಧನಾತ್ಮಕ ಶಕ್ತಿ ಪ್ರವಹಿಸುತ್ತಿರುತ್ತದೆ. ಪರಿಣಾಮದ ಬಗ್ಗೆ ಆಲೋಚಿಸದೆ, ತಮ್ಮ ನಿಲುವುಗಳನ್ನು ನೇರವಾಗಿ ಹೇಳಿಬಿಡುವ ಜಾಯಮಾನ ಅವರದು. ಜಿಲ್ಲೆಯ ಹಲವು ಶಿಕ್ಷಕರು ಅವರ ಪ್ರೋತ್ಸಾಹದ ಮಾತಿಗೆ ದುಡಿಯುವ ಕಸುವನ್ನು ಹೆಚ್ಚಿಸಿಕೊಂಡಿದ್ದಾರೆ, ಹೊಸತನವನ್ನು ಮೈದುಂಬಿಕೊಂಡಿದ್ದಾರೆ.



ಮಾತನಾಡುವಾಗ ಕೇಳುಗ/ನೋಡುಗರನ್ನು ಗಮನದಲ್ಲಿಟ್ಟುಕೊಂಡು , ಅವರನ್ನು ಮಾತಿಗೆಳೆಯುತ್ತಾ ಮುಂದುವರಿಯುವ , ಹಲವು ವಾಸ್ತವ ಅನುಭವಗಳನ್ನು ಮಾತಿನ ಕೇಂದ್ರಕ್ಕೆ ಲಿಂಕ್ ಮಾಡುವ ಬಗೆ ಇವರದು.



(ಯಾವತ್ತೂ ನಿದ್ರಿಸುವ ನನ್ನ ಮೊಬೈಲಿನ ಬಗ್ಗೆ ಅವರಿಗೆ ಬೇಸರ/ಸಿಟ್ಟು. ಹಲವು ಭೇಟಿಗಳಿಂದ ತಪ್ಪಿಸಿಕೊಳ್ಳುವ ನನ್ನ ನಿಲುವುಗಳ ಬಗ್ಗೆಯೂ).



ಸಿದ್ದೇಶಿ ಸರ್ ಸುಮಾರು ಒಂದು ದಶಕವನ್ನು ಇಲ್ಲಿ ಬಾಳಿದ್ದಾರೆ. ಹಲವು ಶಿಕ್ಷಕ/ವಿದ್ಯಾರ್ಥಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.
ಈ ಅನುಭವಗಳು ಅವರನ್ನು ಆಯುಷ್ಯವಿಡೀ ಬೆಚ್ಚಗಿರಿಸುತ್ತವೆ!

*

ಕಾಜೂರು ಸತೀಶ್

No comments:

Post a Comment