ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, October 11, 2022

ಮಾಯೆ

ಮನಮೋಹಕ 'ದುರ್ಗಾ ಜಲಪಾತ'ದ ಬಳಿ ಇವರ ಮನೆ ಇತ್ತು. ನೂರಾರು ಪ್ರವಾಸಿಗರು ಬಂದು ಹೋಗುತ್ತಿದ್ದರು. ಅವರಲ್ಲಿ ಉದ್ಯಮಿಗಳು, ವಿದೇಶೀಯರು, ರಾಜಕಾರಣಿಗಳು , ಕವಿಗಳು, ಪತ್ರಕರ್ತರು, ಶಿಕ್ಷಕರು, ವಿದ್ಯಾರ್ಥಿಗಳು... ಹೀಗೆ ಎಲ್ಲ ವರ್ಗದವರೂ ಇದ್ದರು.

ಮೊದಮೊದಲು ಜಲಪಾತದ ಭಂಗಿಗಳನ್ನು ಸೆರೆಹಿಡಿದು whatsapp facebookಗಳಲ್ಲಿ ಹಂಚಿಕೊಳ್ಳತೊಡಗಿದ ಇವರು, ಅದರ ಕುರಿತ ಒಂದೆರಡು ಸಾಲುಗಳನ್ನೂ ಗೀಚುತ್ತಿದ್ದರು. ಇವರ Facebook ಸ್ನೇಹಿತರ ಪಟ್ಟಿಯಲ್ಲಿ ಸಾಹಿತಿಗಳ ಸಂಖ್ಯೆ ಹೆಚ್ಚತೊಡಗಿತು.

ಜಲಪಾತವನ್ನು ನೋಡಲು ಬರುವ ಸಾಹಿತಿಗಳು ಪತ್ರಕರ್ತರು ಇವರ ಮನೆಯ ಊಟವನ್ನೂ ಸವಿದು ಹೋಗುತ್ತಿದ್ದರು.

ಕ್ರಮೇಣ ಇವರ ಬರೆಹಗಳು ಪತ್ರಿಕೆಯಲ್ಲಿ ಪ್ರಕಟವಾಗಲಾರಂಭಿಸಿದವು. 'ಸ್ಪರ್ಧೆಗಳಿಗೆ ಬರೆಯಿರಿ' ಎಂದು ಹೇಳಿ ಒತ್ತಾಯಿಸಿ ಬರೆಸುತ್ತಿದ್ದರು. ದೀಪಾವಳಿ, ಸಂಕ್ರಾಂತಿ ಸ್ಪರ್ಧೆಗಳಲ್ಲಿ ಇವರಿಗೆ ಒಂದು ಬಹುಮಾನ ನಿಶ್ಚಿತವಾಗಿತ್ತು. ಹಲವು ಕೃತಿಗಳು ಪ್ರಕಟಗೊಂಡವು. ಹಲವು ಪ್ರಶಸ್ತಿಗಳೂ ಬಂದವು.

ಯಾವ ಕೋನದಿಂದ ಚಿತ್ರಿಸಿದರೂ, ಆ ಜಲಪಾತದ ಚಿತ್ರ ಮತ್ತೆ ಮತ್ತೆ ನೋಡುವಂತೆಯೂ, ಎಷ್ಟೋ ಬಾರಿ ಕವಿತೆಯಂತೆಯೂ, ಕತೆಯಂತೆಯೂ, ನಾಟಕದಂತೆಯೂ, ಕಾದಂಬರಿಯಂತೆಯೂ, ತತ್ತ್ವಶಾಸ್ತ್ರದಂತೆಯೂ ಕಾಣುತ್ತಿತ್ತು. ಕಲಾವಿದರಿಗೂ, ಛಾಯಾಗ್ರಾಹಕರಿಗೂ, ಕವಿಗಳಿಗೂ, ಪತ್ರಕರ್ತರಿಗೂ ಬಿಡಿಸಲಾಗದ ಮಾಯೆಯಂತೆ ಅದು ಕಾಡುತ್ತಿತ್ತು.
*

- ಕಾಜೂರು ಸತೀಶ್ 

No comments:

Post a Comment