ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, May 5, 2019

ಪುನರಪಿ ಮರಣ ಮತ್ತು ನಡುವಿನ ಇಷ್ಟೇ ಇಷ್ಟು ಬದುಕು

ವಿದ್ಯುತ್ತಿಲ್ಲದ ಒಂದು ರಾತ್ರಿ. ಅವರು ಹೊರಡಲಣಿಯಾದರು. ನಾನು 'ಟಾರ್ಚ್ ತಗೊಂಡ್ಹೋಗಿ ಸಾರ್' ಎಂದೆ. 'ಬೇಡಬಿಡಿ' ಎಂದರು. ಮೂರ್ನಾಲ್ಕು ಹೆಜ್ಜೆ ಮುಂದೆ ಹೋದವರು ನಿಮಿಷದ ನಂತರ ಮತ್ತೆ ಬಂದರು. 'ತುಂಬಾ ಕತ್ತಲು, ಟಾರ್ಚ್ ಕೊಡಿ' ಎಂದರು. ಮತ್ತೆ ಹೊರಟವರು ಎರಡು ನಿಮಿಷಗಳ ಕಳೆದ ಮೇಲೆ ಏದುಸಿರು ಬಿಡುತ್ತಾ ಬಂದರು. 'ಮೇಷ್ಟ್ರೇ...ಇವತ್ತೇನಾದ್ರೂ ಟಾರ್ಚ್ ತಗೊಂಡ್ಹೋಗಿಲ್ಲ ಅಂದಿದ್ರೆ ಔಟ್ ಮೇಷ್ಟ್ರೇ ನಾನು... ಕರೆಂಟ್ ಲೈನ್ ಕಟ್ಟಾಗಿ ರೋಡಲ್ಲಿ ಬಿದ್ದಿದೆ, ಕರೆಂಟ್ ಇದೆ ಅದ್ರಲ್ಲಿ' ಎಂದರು.

'ಸಾವು' ಎಂದರೆ ಹಾಗೆ. ಎಲ್ಲೆಲ್ಲೋ ಹೇಗ್ಹೇಗೋ ಹೊಂಚುಹಾಕಿ ಕುಳಿತಿರುತ್ತದೆ. ಒಂಬತ್ತು ವರ್ಷಗಳ ಹಿಂದೆ, ಇದನ್ನು ಬರೆಯುತ್ತಿರುವ ಈ ದಿವಸದಂದು(ಮೇ 5) ಮೇಷ್ಟ್ರೊಬ್ಬರ ತಲೆಮೇಲೆ ಅಡಿಕೆ ಮರ ಬಿದ್ದು ಸ್ಥಳದಲ್ಲೇ ಅಸುನೀಗಿದ್ದರು. ಆಗಿದ್ದಿಷ್ಟು: ಅಡಿಕೆ ಮರವನ್ನು ಕಡಿಸುತ್ತಿದ್ದರು. ಇನ್ನೇನು ಮರ ಬೀಳಬೇಕೆನ್ನುವಷ್ಟರಲ್ಲಿ 'ಸ್ವಲ್ಪ ದೂರ ನಿಲ್ಲಿ ಮೇಷ್ಟ್ರೇ' ಎಂದಿದ್ದಾರೆ ಮರ ಕಡಿಯುವವರು. ಇವರು ಪಕ್ಕಕ್ಕೆ ಸರಿಯುವಾಗ ಅದುವರೆಗೆ ನೋಡಿರದ ಗುಂಡಿಯೊಂದರಲ್ಲಿ ಕಾಲು ಸಿಲುಕಿದೆ. ಮರ ಸಾವಾಗಿ ಅವರ ನೆತ್ತಿಗೆ ಬಡಿದಿದೆ!

ಅದರ ಹಿಂದಿನ ದಿನ ರಾತ್ರಿ 11 ಗಂಟೆಯವರೆಗೆ ಅವರು ನಮ್ಮೊಂದಿಗಿದ್ದರು.ನಮ್ಮಲ್ಲೇ ಊಟಮಾಡಿ ಹೋಗಿದ್ದರು.

'ಸಾವು' ಯಾಕಿಷ್ಟು ಕಾಡುತ್ತೋ ಗೊತ್ತಿಲ್ಲ. ನನ್ನ ಸಾವು ಕೂಡ ಕೂದಲೆಳೆಯಲ್ಲಿ ತಪ್ಪುತ್ತಾ ತಪ್ಪುತ್ತಾ ನನ್ನನ್ನು ಇದನ್ನೆಲ್ಲ ಗೀಚುವಷ್ಟರ ಮಟ್ಟಿಗೆ ತಂದು ನಿಲ್ಲಿಸಿದೆ. ಮದುವೆ, ಮನೆ,ಆಸ್ತಿ, ಬದನೆಕಾಯಿ ಎಂದೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವ ನಾವು ನಮ್ಮ ಸಾವಿಗೆ ಮಾತ್ರ ಸಿದ್ಧತೆಯನ್ನೇ ಮಾಡಿಕೊಳ್ಳುವುದಿಲ್ಲ. ಸಾವು ಬಂದಾಗ ನಾವೆಷ್ಟು ನಿಕೃಷ್ಟರಾಗಿರುತ್ತೇವೆ ಎಂಬುದನ್ನೂ ನಾವು ಯೋಚಿಸುವ ಗೊಡವೆಗೆ ಹೋಗುವುದಿಲ್ಲ.

*

ಕಾಜೂರು ಸತೀಶ್

No comments:

Post a Comment