ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, April 18, 2019

ಹಸಿವು, ಮದುವೆ ಮತ್ತು ರಕ್ಕಸತನ

ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಕಾಲದಲ್ಲಿ ನಡೆದ ಒಂದು ಘಟನೆಯು ನನ್ನನ್ನು ಬುಡಸಮೇತ ಅಲುಗಾಡಿಸಿತ್ತು. ಮದುವೆ ಮಂಟಪದಲ್ಲಿ ಹೆಚ್ಚು-ಹೆಚ್ಚು ನಾನ್ವೆಜ್ ಬಡಿಸಿಲ್ಲವೆಂದು ಆರಂಭವಾದ ಕಿತ್ತಾಟವು, ಬೆಳೆಬೆಳೆದು ಮದುವೆ ನಡೆಯುತ್ತಿದ್ದ ಸ್ಥಳವೇ ರಣಾಂಗಣವಾಗಿ ಒಂದಷ್ಟು ಜನರನ್ನು ಆಸ್ಪತ್ರೆಗೆ ದಾಖಲು ಮಾಡಿಸಿತ್ತು!
*

ಒಂದು ಮದುವೆಗೆ ಹೋಗಿದ್ದೆ. ಊಟಕ್ಕೆಂದು ಬಾಗಿಲ ಬಳಿ ಕಾಯುತ್ತಾ ನಿಂತಿದ್ದರು ಜನ. ಬಾಗಿಲು ತೆರೆದಿದ್ದೇ ತಡ- ಕದ ತೆಗೆದ ಜಲಾಶಯದ ನೀರಿನಂತೆ ನುಗ್ಗಿದರು. ನೂಕಾಟಕ್ಕೆ ವ್ಯಕ್ತಿಯೊಬ್ಬರು ಬಿದ್ದುಬಿಟ್ಟರು. ಬಿದ್ದ ವ್ಯಕ್ತಿಯ ಮೈಮೇಲೆ ತುಳಿದುಕೊಂಡು ಹೋಗಿ ಜನ ತಮ್ಮ ಆಸನವನ್ನು ಭದ್ರಪಡಿಸಿಕೊಂಡರು!
*

'ಮದುವೆ' ಎಂದರೆ 'ತಿನ್ನುವುದು' ಎಂಬ ಕಲ್ಪನೆ ಜನರಲ್ಲಿ ಬೀಡುಬಿಡುತ್ತಿದೆ. 'ಇದೆಂಥಾ ಮಾರಾಯ ಬರೀ ಪುಳಿಚಾರು... ನಾನು ಜಾಸ್ತಿ ಕವರ್ ಹಾಕಲ್ಲ'ಎಂದು ಕವರಿನಲ್ಲಿ ಹಾಕಿದ ನೂರರ ನೋಟೊಂದನ್ನು ಹಿಂತೆಗೆದು ಕಿಸೆಗಿಳಿಸಿಕೊಂಡ ಶುದ್ಧ ವಾಣಿಜ್ಯ ವ್ಯವಹಾರಕ್ಕೆ ಅದೆಷ್ಟು ಸಲ ಸಾಕ್ಷಿಯಾಗಿಲ್ಲ!
*
ಹಸಿವಾದಾಗಲಷ್ಟೇ ತಿನ್ನುವ ಪ್ರಾಣಿಗಳೆಲ್ಲಿ ಮತ್ತು ಹೊಟ್ಟೆ ತುಂಬಿದ್ದರೂ ಮತ್ತೆ ಮತ್ತೆ ತುರುಕಿ ತುಂಬಿಸಿಕೊಳ್ಳುವ ಬಕಾಸುರ ಮನುಷ್ಯರೆಲ್ಲಿ! ಮುಂದೊಂದು ದಿನ ಈ ಸ್ಥಿತಿ ಮನುಷ್ಯನನ್ನು ಯಾವ ಮಟ್ಟಕ್ಕೆ ಒಯ್ಯಬಹುದು-ಯೋಚಿಸಿದರೆ ಭಯವಾಗುತ್ತದೆ!
*

ಕಾಜೂರು ಸತೀಶ್

No comments:

Post a Comment