ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, April 23, 2019

ಕರಿಕೆಯ ಉರಗಲೋಕದ ಹೆಜ್ಜೆಗುರುತುಗಳು

'ನೀನು ಹೋಗುತ್ತಿರುವ ಊರಲ್ಲಿ ವಿಷಕಾರಿ ಹಾವುಗಳಿವೆ ಅಂತ ಕೇಳಿದ್ದೆ, ಜೋಪಾನ' ಎಂದಿದ್ದರು ಹಲವರು. ಕರಿಕೆಗೆ ಹೋಗಿ 8 ತಿಂಗಳು ಕಳೆದಿದ್ದರೂ ಒಂದೇ ಒಂದು ಹಾವು ಕೂಡ ಕಣ್ಣಿಗೆ ಬಿದ್ದಿರಲಿಲ್ಲ. 'ಹಾವಂತೆ ಹಾವು'ಎಂದು ನಾನು ಗೊಣಗಿಕೊಂಡಿದ್ದೆ.

ಮಾರ್ಚ್ 10ರಂದು ಪಕ್ಕದ ಮನೆಯವರು 'ಸಾರ್ ಒಂದು ದೊ...ಡ್ಡ ಹಾವಿದೆಯಂತೆ, ಮಗ್ಳು ನೋಡಿದ್ಳಂತೆ' ಎಂದು ವರದಿ ಒಪ್ಪಿಸಿದರು. 'ಕೇರೆ ಹಾವಿರ್ಬಹುದು, ಅದೂ ದೊಡ್ದಾಗಿರುತ್ತೆ', ಎಂದು ಹೇಳಿ ಹೊರಬಂದೆ. ನಮ್ಮ ಪಕ್ಕದ ಗಿಡಗಂಟಿಗಳು ಅಲುಗಾಡತೊಡಗಿದವು. ಮೈ ಜುಮ್ಮೆಂದಿತು - 'ಕಾಳಿಂಗ'! ಅದನ್ನು ನೋಡಿದ್ದೇ ಗೆಳೆಯ ದೇವರಾಜ ಮೇಷ್ಟ್ರ ಬಾಯಿಂದ 'ಹೆಬ್ಬಾವು' ಎಂಬ ಉದ್ಘಾರ ಬಂದಿತು!

ಅದುವರೆಗೆ ಮೃಗಾಲಯದಲ್ಲಷ್ಟೇ ನೋಡಿದ್ದ ಕಾಳಿಂಗವನ್ನು ಅಷ್ಟು ಹತ್ತಿರದಲ್ಲಿ ನೋಡುವ ಭಾಗ್ಯ ಒದಗಿ ಬಂದಿತು. ಸ್ನೇಕ್ ಸತೀಶ್(ನಾನಲ್ಲ!) ಅವರಿಗೆ ಕರೆಮಾಡಲು, ಅವರು ತಮ್ಮ ಸಂಗಡಿಗರನ್ನು ಕಳಿಸಿಕೊಟ್ಟರು. ಅವರು ತಲುಪುವಾಗಲೇ ರಾತ್ರಿಯಾಗಿದ್ದರಿಂದ ಹಾವು ನಾಪತ್ತೆಯಾಗಿತ್ತು.
*
ಹೀಗೆ ಕರಿಕೆಯ ಹಾವಿನ ಲೋಕಕ್ಕೆ ಆ ಹಾವು ಬಂದು ಸ್ವಾಗತ ಭಾಷಣ ಮಾಡಿ ಹೋಗಿತ್ತು. ಆಮೇಲೆ ನಾನು ನೋಡಿದ ಹಾವುಗಳಿಗೂ, ಅವು ನನ್ನನ್ನು - ನಾನು ಅವುಗಳನ್ನೂ ಕಾಡಿಸಿದ, ತಮಾಷೆ ನೋಡಿದ ಪ್ರಸಂಗಗಳಿಗೆ ನನ್ನ ಬಳಿ ಲೆಕ್ಕವಿಲ್ಲ!
*
ಒಮ್ಮೆ ಕನ್ನಡಿಯಲ್ಲಿ ಮುಖನೋಡಿಕೊಳ್ಳುತ್ತಿದ್ದೆ. ತಲೆಯ ಇಷ್ಟೇ ಮೇಲೆ ಹಾವೊಂದು ತೂಗಾಡುತ್ತಿರುವುದನ್ನು ಕನ್ನಡಿಯು ಹೇಳಿತು. ಮೆಲ್ಲಗೆ ಹೊರಬಂದು ಒಂದು ಉದ್ದನೆಯ ಕೋಲಿನಲ್ಲಿ ಅದನ್ನು ಮೇಲಿಂದ ಕೆಳಗೆ ಇಳಿಸಿದೆ. ಅದರ ಸಿಟ್ಟು ಎಲ್ಲಿತ್ತೋ ಏನೋ- ಕೋಲಿಗೆ ಅದರ ಹಲ್ಲು ಮುರಿದುಹೋಗುವಂತೆ ಕುಟುಕಲು ಆರಂಭಿಸಿತು. ಹೇಗೆ ಎಳೆದರೂ ಅದಕ್ಕೆ ಹೊರಗೆ ಬರಲು ಮನಸ್ಸಾಗಲಿಲ್ಲ! ನನ್ನ ಸರ್ಕಸ್ಸನ್ನು ನೋಡಿದ ನೆರೆಮನೆಯವರು ಒಂದು ತೆಳ್ಳನೆಯ ಕೋಲು ತಂದು ಬಡಿದು ಕೊಂದೇಬಿಟ್ಟರು!
*
ನಮ್ಮ ಕಿಟಕಿ ಬಾಗಿಲುಗಳು ಯಾವಾಗಲೂ ಮುಚ್ಚಿದ ಸ್ಥಿತಿಯಲ್ಲೇ ಇರುತ್ತಿದ್ದವು. ತೆರೆದದ್ದೇ ತಡ 'ಏನು ಮಾಡುತ್ತಿದ್ದೀಯ ಸತೀಶಾ' ಎಂಬಂತೆ ಇಣುಕಿ ನೋಡಲು ಹಾವುಗಳು ಬಂದೇ ಬರುತ್ತಿದ್ದವು.
*
ನಮ್ಮ ಬಾತ್ರೂಮಿನ ಒಳಕ್ಕೆ ವಾರಕ್ಕೆ ಕನಿಷ್ಟ ಒಂದು ಹಾವಾದರೂ ಬಂದು ಟೆಂಟು ಹಾಕಿರುತ್ತಿತ್ತು. ನಾನದಕ್ಕೆ ನೀರು ಸುರಿದು ಸ್ನಾನಮಾಡಿಸುತ್ತಿದ್ದೆ! ಕೆಲವು ಹಾವುಗಳು ಎಷ್ಟು ನೀರು ಸುರಿದರೂ ಅಲ್ಲಿಂದ ಕದಲುತ್ತಿರಲಿಲ್ಲ.ಹಾಗೆ ಬರುತ್ತಿದ್ದ ಹಾವುಗಳು ಬಹುತೇಕ ಸೋಮಾರಿಗಳು! ಅವು ದಿನವಿಡೀ ಅಲ್ಲೇ ಇದ್ದು ನಂತರ ಹೊರಟುಹೋಗುತ್ತಿದ್ದವು.
*
ಒಮ್ಮೆ ಬೆಳಿಗ್ಗೆ ಎಂದಿನಂತೆ ರನ್ನಿಂಗ್ ಮಾಡುತ್ತಿದ್ದಾಗ ರಸ್ತೆಯಲ್ಲಿದ್ದ ಹಾವು ಹೆಡೆಯೆತ್ತಿ ನಿಲ್ಲಲು , ಅದರ ಮೇಲೆ ಚಂಗನೆ ಜಿಗಿದು ಓಡಿಬಿಟ್ಟಿದ್ದೆ! ಇನ್ನೊಮ್ಮೆ, ಸುರುಳಿಸುತ್ತಿ ಮಲಗಿದ್ದ ಹಾವಿನ ಮೇಲೆ ಕಾಲಿಟ್ಟಾಗ ರಬ್ಬರಿನಂತಹ ವಸ್ತುವು ತಾಗಿದಂತಾಗಿ ಕಾಲೆತ್ತಿ ನೋಡಿದರೆ ನನ್ನ ಆನೆಭಾರಕ್ಕೆ ಅದು ಗಾಬರಿಗೊಂಡಂತ್ತಿತ್ತು!
*

ಶಶಿ ಫಾರೆಸ್ಟರ್ ಬಂದ ಮೇಲೆ ಸುಮಾರು ಹೆಬ್ಬಾವುಗಳನ್ನು ಹಿಡಿದರು. ಅದಕ್ಕೂ ಮೊದಲು ಹೆಬ್ಬಾವು/ಕಾಳಿಂಗವನ್ನು ಕೆಲವರು ಹೊಡೆದು ಕೊಂದುಬಿಡುತ್ತಿದ್ದರು.
*

ನಮ್ಮ ಶಾಲೆಯ ಯಾವ ಮೂಲೆಯಲ್ಲಿ ಹಾವಿದ್ದರೂ ಮಕ್ಕಳು ನನ್ನನ್ನು ಕರೆದುಕೊಂಡು ಹೋಗಿ ತೋರಿಸುತ್ತಿದ್ದರು. ಹಾವುಗಳನ್ನು ಕೊಲ್ಲುವುದರಿಂದಾಗುವ ಅನಾಹುತಗಳನ್ನು ಮಕ್ಕಳಿಗೆ ಹೇಳುತ್ತಿದ್ದೆ.
*

ಒಮ್ಮೆ ಬಸ್ ಸ್ಟ್ಯಾಂಡಿನಲ್ಲಿ ಕುಳಿತ್ತಿದ್ದಾಗ ಹಾವೊಂದು ದೊಪ್ಪನೆ ಕೆಳಗೆ ಬಿತ್ತು. ಥೇಟ್ ಬಿಸಿಲು ಹಾವಿನಂತಿತ್ತು. ಅದಕ್ಕಿಂತ ಸ್ವಲ್ಪ ದಪ್ಪ ಮತ್ತು ಉದ್ದಕ್ಕಿತ್ತು. ಬೇಡಬೇಡವೆಂದರೂ ಒಬ್ಬಾತ 'ತುಂಬಾ ವೆಷಂ ಸಾರೇ' ಎಂದು ಅದನ್ನು ಹೊಡೆದು ಕೊಂದೇಬಿಟ್ಟ.ಒಂದೆರಡು ಪೆಟ್ಟು ಬಿದ್ದಿದ್ದೇ ತಡ ಅದು ಸಂಪೂರ್ಣ ನೀಲಿಗಟ್ಟಿತು! ಸತ್ತಾಗಲಂತೂ ನೀಲಿಹಾವು!
*

ನನ್ನ ಸಹೋದ್ಯೋಗಿಗೆ ಒಂದು ಸಂಜೆ ಹಾವು ಕುಟುಕಿದ್ದು ಅವರ ಅರಿವಿಗೂ ಬರಲಿಲ್ಲ. ಆಮೇಲೆ ವಿಷವೇರತೊಡಗಿದಾಗ ಅದು ಹಾವೆಂದು ತಿಳಿದು ಕೆಲಕಾಲ ಚಿಕಿತ್ಸೆ ಪಡೆದರು.
*
ಮಳೆಗಾಲದಲ್ಲಂತೂ ರಸ್ತೆಯಲ್ಲಿ ಹಾವುಗಳು ವಾಹನಗಳಿಗೆ ಸಿಲುಕಿ ಸತ್ತುಬಿದ್ದಿರುತ್ತಿದ್ದವು. ನಿತ್ಯಹರಿದ್ವರ್ಣದ ಕರಿಕೆ ತನ್ನ ನಿಜದ ಚೆಲುವನ್ನು ಉಳಿಸಿಕೊಳ್ಳಲು ಒಂದಷ್ಟು ಚೆಲುವು ಚೆಲುವಾದ ಹಾವುಗಳನ್ನು ಸಾಕಿಕೊಂಡಿತ್ತು.
*

ಕಾಜೂರು ಸತೀಶ್

No comments:

Post a Comment