ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, July 5, 2025

ಆಕಾಶವಾಣಿಯ ಮೇಷ್ಟ್ರು



ಪ್ರತಿಭಾವಂತರನ್ನು ಕಂಡಾಗಲೆಲ್ಲ ಅವರ ಕಡಲಿನಂತಹ ಸಾಮರ್ಥ್ಯವನ್ನು ಈ ವ್ಯವಸ್ಥೆಯು ನದಿಗೋ ಕೆರೆಗೋ ಮಿತಿಗೊಳಿಸಿರುವುದನ್ನು ನೋಡಿ ನೊಂದಿದ್ದೇನೆ. ಮಡಿಕೇರಿ ಆಕಾಶವಾಣಿಯ ಉದ್ಘೋಷಕರಾಗಿದ್ದ ಸುಬ್ರಾಯ ಸಂಪಾಜೆಯವರ ಮಾತುಗಳನ್ನು ಆಲಿಸಿದಾಗಲೆಲ್ಲ ನನಗೆ ಹಾಗೆ ಅನ್ನಿಸುತ್ತಿತ್ತು. ಭಾಷೆ, ಸಾಹಿತ್ಯ, ಪುರಾಣ, ಜನಪದ, ಭಾಷಾಶಾಸ್ತ್ರ, ಯಕ್ಷಗಾನ, ಗಮಕ( ಇವೆಲ್ಲಾ ಒಂದಕ್ಕೊಂದು ಪೂರಕವಾಗಿಯೂ, ಒಂದರೊಳಗೊಂದು ಬೆರೆತವೂ ಆಗಿರುವ ಸಂಗತಿಗಳಾದರೂ..) ತುಳು,ಅರೆಭಾಷೆ, ಸಂಸ್ಕೃತ... ಹೀಗೆ ಹಲವು ಜ್ಞಾನಶಿಸ್ತುಗಳನ್ನು ಸಂಪಾದಿಸಿರುವ ಸಂಪಾಜೆಯವರದು ಬಹುಮುಖ ಪ್ರತಿಭೆ.



ಅವರ ಆಳ ಅಧ್ಯಯನವು ಕೊಟ್ಟ ಜ್ಞಾನ,ತಿಳಿವಳಿಕೆಗಳನ್ನೂ, ಕಲಾರಂಗದ ಆಸಕ್ತಿ ಮತ್ತು ಅನುಭವಗಳನ್ನೂ ತಮ್ಮ ವೃತ್ತಿಯಲ್ಲಿ ತಂದು ಲಕ್ಷಾಂತರ ಅಭಿಮಾನಿಗಳನ್ನು ಪಡೆದವರು. ಶಿಸ್ತು ಮತ್ತು ಸೇವಾ ಬದ್ಧತೆಗೆ ಮತ್ತೊಂದು ಹೆಸರೇ ಸುಬ್ರಾಯ ಸಂಪಾಜೆ.



 ಆಕಾಶವಾಣಿ ಮಡಿಕೇರಿಯನ್ನು ಕಟ್ಟಿ ಬೆಳೆಸಿದ ಸುಬ್ರಾಯ ಸಂಪಾಜೆಯವರು ಈಗ ನಿವೃತ್ತಿ ಹೊಂದಿದ್ದಾರೆ. ಶಾರದಾ ನಂಜಪ್ಪ ಅವರು ನಿವೃತ್ತರಾಗಿ ವರ್ಷ ಕಳೆದ ಹೊತ್ತಲ್ಲಿ ಇವರೂ ನಿವೃತ್ತರಾಗಿದ್ದಾರೆ. ಆಕಾಶವಾಣಿಯ ಅಸಂಖ್ಯ ಕೇಳುಗರ ಪಾಲಿಗೆ ಇದು ತುಂಬಲಾರದ ನಷ್ಟ.
*
✍️ಕಾಜೂರು ಸತೀಶ್

No comments:

Post a Comment