ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, May 31, 2025

ರೇಷ್ಮೆಯ ಹಾದಿ

ರೇಷ್ಮೆ ಇಲಾಖೆಯಲ್ಲಿ ಹತ್ತು ವರ್ಷಗಳ ಕಾಲಮಿತಿ ಬಡ್ತಿಯನ್ನು ಪಡೆದ ವ್ಯಕ್ತಿಗೆ ಪ್ರೊಮೋಷನ್ ನಿರೀಕ್ಷೆ ಇರುತ್ತದೆ . ಅದೇ ವ್ಯಕ್ತಿ ಆ ಹತ್ತು ಮುಗಿದು ಮತ್ತೆ ಮೂರು ವರ್ಷಗಳು ಜಾರಿದ ಮೇಲೆ 'ಈ ಕೆಲಸ ನನ್ನಂಥವರಿಗಲ್ಲ' ಅನ್ನಿಸಿದರೆ ಹೇಗಿರುತ್ತದೆ? ಅದೂ ಮದುವೆ ಆಗಿ ಮಗು ಹುಟ್ಟಿದ ಮೇಲೆ ಇಂಥದ್ದೊಂದು ಬಂದು ಮನಸ್ಸನ್ನಾಕ್ರಮಿಸಿಬಿಟ್ಟರೆ!

ಹಾಗೆ ಆದರೆ ಮತ್ತೇನಿಲ್ಲ: ಪದವಿ ಮುಗಿಸುತ್ತಾರೆ, ಬಿ.ಇಡಿ ಮುಗಿಸುತ್ತಾರೆ, KES ಪಾಸುಮಾಡುತ್ತಾರೆ, 'ಹಸಿರು ಸಹಿ' ಮಾಡುವ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗುತ್ತಾರೆ, ಮತ್ತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಹಿರಿಯ ಉಪನ್ಯಾಸಕರಾಗುತ್ತಾರೆ, ಪ್ರಭಾರ ಪ್ರಾಂಶುಪಾಲರ ಹುದ್ದೆಯನ್ನೂ ನಿರ್ವಹಿಸುತ್ತಾರೆ!

ಇನ್ನೇನು ನಿವೃತ್ತಿ ಎನ್ನುವಾಗ ಈಗಷ್ಟೇ ಕೆಲಸಕ್ಕೆ ಸೇರಿದ ಹುಡುಗರೊಂದಿಗೆ ಓಟ ಓಡಿ ಜಯಿಸಿ ರಾಜ್ಯಮಟ್ಟದಲ್ಲೂ ಅದೇ ಹುರುಪನ್ನು ತೋರುತ್ತಾರೆ! ತಮ್ಮ ಮಗ ಕ್ರಿಕೆಟ್ ಆಟಗಾರನಾದರೂ ಆಗಲಿ ಎಂದು ಪ್ಯಾಡು ಕಟ್ಟಿ ಹೆಲ್ಮೆಟ್ ಧರಿಸಿ ಕ್ರಿಕೆಟ್ ಆಡುತ್ತಾರೆ, ಸತತವಾಗಿ ಮೂರ್ನಾಲ್ಕು ಗಂಟೆಗಳ ಕಾಲ ಬೌಲಿಂಗ್ ಮಾಡುತ್ತಾರೆ.


1975 ರಿಂದ 1996/1999ರವರೆಗೂ ಕ್ರಿಕೆಟ್ ದಿಗ್ಗಜರ ಕುರಿತು ಗಂಟೆಗಟ್ಟಲೆ ಮಾತನಾಡುವ ಸಾಮರ್ಥ್ಯವುಳ್ಳವರು(ವಿವ್ ರಿಚರ್ಡ್ಸನ ಕುರಿತ ಅವರ ಮಾತು ಕೇಳಿ youtubeನಲ್ಲಿ ಹುಡುಕಿ ಹುಡುಕಿ ನೋಡಿದ್ದೇನೆ).

ಅಡುಗೆಯಲ್ಲೂ ಅದೇ ಹುರುಪು!

ಡಾ.ರಾಜ್ ಕುಮಾರ್ ಅವರ ಎಲ್ಲಾ ಚಿತ್ರಗಳನ್ನು ತಲ್ಲೀನರಾಗಿ ನೋಡುತ್ತಾರೆ ;ಎದೆಗಿಳಿಸಿಕೊಂಡು ಬದುಕುತ್ತಾರೆ. ಪಿ.ಬಿ.ಶ್ರೀನಿವಾಸ್ ಹಾಡುಗಳೆಂದರೆ ಜೀವ. ಎಷ್ಟೆಷ್ಟೋ ಗಾಯಕರ/ಸಂಗೀತ ಸಂಯೋಜಕರ ಕುರಿತ ವಿಶಿಷ್ಟ ಗ್ರಹಿಕೆಗಳು ಅವರೊಳಗಿವೆ.
'ಹಾಡಿ ಸರ್' ಎಂದರೆ ತಮಾಷೆಯ ಒಂದು ಮುನ್ನುಡಿಯೊಂದಿಗೆ 'ಚಂದ' ಹಾಡುತ್ತಾರೆ.


ಓದುವುದೆಂದರೆ ಅಷ್ಟು ಪ್ರೀತಿ. ಅದಕ್ಕಾಗಿಯೇ ನಾಲ್ಕು ಜನರ ನಡುವೆ ನಿಂತಾಗ, ತರಬೇತಿ-ಸಭೆ-ಸಮಾರಂಭಗಳಲ್ಲಿ ಕುಳಿತಾಗ ತುಸು ಎತ್ತರ! (ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಂದು ವೇದಿಕೆಯಲ್ಲಿದ್ದ ಅಷ್ಟು ಜನರ ಪೈಕಿ ನಮ್ಮ ಪೋಷಕರೊಬ್ಬರು 'ಅವರು ಯಾರು? ಏನು ಕೆಲಸ ಮಾಡೋದು? ತುಂಬಾ ವಿಷಯ ಇದೆ ಅವರ್ಹತ್ರ' ಎಂದು ಅವರ ಬಗ್ಗೆ 'ಮಾತ್ರ' ವಿಚಾರಿಸಿದ್ದರು!).


ಸಾಹಿತ್ಯ ಮಾಸಿಕವೊಂದನ್ನು ಮೂರು(?) ದಶಕಗಳಿಂದ ಸತತವಾಗಿ ಓದುತ್ತಾ ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳುವಷ್ಟು ತಾಳ್ಮೆ ಮತ್ತು ಶ್ರದ್ಧೆಯುಳ್ಳವರು. ಪರ್ಸು ನೋಡುವವರ, ತುಂಬಿಸಿಕೊಳ್ಳುವವರ ನಡುವೆ ಗ್ರಂಥಾಲಯದ ಪುಸ್ತಕಗಳನ್ನು ತಡಕಾಡಿ ತಲೆತುಂಬಾ ತುಂಬಿಸಿಕೊಳ್ಳುವವರು.



ತೀರ್ಥಯಾತ್ರೆ ಎಂದರೂ ಅಷ್ಟೇ ಪ್ರೀತಿ; ಭಕ್ತಿ.

ಅನ್ನ ನೀರು ಬಿಟ್ಟು ದಿನಗಟ್ಟಲೆ ನಿಲ್ಲಬಲ್ಲ ಕಠಿಣ ಮನಸ್ಸು( ಕೆಲವು ಹೂವುಗಳು ಎಷ್ಟೋ ದಿನಗಳವರೆಗೆ ಬಾಡದೆ ಇರಬಲ್ಲದು, ಈ👇 ಹೂವನ್ನೇ ಗಮನಿಸಿ!)


*
ಕಾಯಕವೇ ಕೈ'ಲಾಸ್'

-೧-
ಬನ್ನಿ ಊಟಮಾಡೋಣ.
ಸರಿ ಸರ್
ಆದ್ರೆ ಒಂದು ಕಂಡೀಷನ್. ಒಪ್ಕೊಂಡ್ರೆ ಸರಿ ಇಲ್ದಿದ್ರೆ ಬೇಡ.
ಏನು ಸರ್
ನಾನು ಹಣ ಕೊಡ್ತೇನೆ..


-೨-
ಮೈಸೂರಿನಿಂದ ಕೆ ಆರ್ ನಗರ ಹೋಗಿ ಬಂದೆ
ಅದ್ಯಾಕೆ ಅಲ್ಲಿಗೆ ಹೋದ್ರಿ ಸರ್
'___' ಅವ್ರನ್ನು ಪಿಕ್ ಅಪ್ ಮಾಡ್ಬೇಕಿತ್ತು...
**

ದಾಖಲೆ ಭೇಟಿ

ನಾನು ಕಂಡಂತೆ ,ಕೊಡಗಿಗೆ ಬಂದಿದ್ದು 2019ರಲ್ಲಿ. ಅನೇಕ ಕೆಲಸಗಳ ನಡುವೆಯೂ ಇವರು ಕಾಲಿಡದ ಶಾಲೆಗಳಿಲ್ಲ; ಇದ್ದರೂ ವಿರಳ. ಡಯಟ್ ಹಿರಿಯ ಉಪನ್ಯಾಸಕರೊಬ್ಬರು ಇಷ್ಟು ಶಾಲಾ ಭೇಟಿ ಮಾಡಿರುವುದು ಒಂದು ದಾಖಲೆಯೇ ಸರಿ.


*
ಇಷ್ಟು ಹೊತ್ತು ಅಭಿಮಾನದಿಂದ ನೆನಪಿಸಿಕೊಳ್ಳುತ್ತಿರುವ ಶಿವಕುಮಾರ್ ಸರ್ ಅವರಿಗೆ ಇಲಾಖೆಯ ಯಾವ ಕೆಲಸದಲ್ಲೂ ನನ್ನಿಂದ ನೆರವಾಗಲಿಲ್ಲ. ಯಾವ ತರಬೇತಿಗೂ ಅವರೊಂದಿಗೆ ಭಾಗಿಯಾಗಲಿಲ್ಲ. ನನ್ನ ಮೌನ ಅವರನ್ನು ಕಾಡಿದೆ. ಹಾಗಾಗಿ ಅವರು ನನ್ನನ್ನು ಒತ್ತಾಯಿಸಲಿಲ್ಲ(ಸಹಿಸಿಕೊಂಡರು!).


ಒಮ್ಮೆ ನಾನು ಕೇಳಿದ್ದೆ: ಸರ್ ಒಂದು ವೇಳೆ '_'ಕೆಲಸಕ್ಕೆ ನಿಮ್ಮನ್ನು ನೇಮಿಸಿದರೆ ಏನು ಮಾಡುತ್ತೀರಿ?'
'ನಾನು ಮಾಡುವುದಿಲ್ಲ. ಮಾಡಲೇಬೇಕು ಎಂದಾದರೆ ನಾನು ರಾಜೀನಾಮೆ ಕೊಡುತ್ತೇನೆ'.

ಇದು ತಪ್ಪಿಸಿಕೊಳ್ಳುವಿಕೆ ಅಲ್ಲ, ತಮ್ಮ ಎದೆಯ ದನಿಯಂತೆ ಬದುಕಲು ಅವರು ಮನಸ್ಸಿನಲ್ಲೇ ಮಾಡಿಟ್ಟುಕೊಂಡಿದ್ದ ಪೂರ್ವನಿರ್ಧಾರ.

ಸದ್ಯ ಅವರು ಆ ಕೆಲಸಕ್ಕೆ ಇಳಿಯಲಿಲ್ಲ. ತಮ್ಮ ಶುದ್ಧತೆಯನ್ನು ಕಾಪಾಡಿಕೊಂಡೇ ನಿವೃತ್ತರಾದರು. 40 ವರ್ಷಗಳ ದೀರ್ಘ ದುಡಿಮೆ ಇದು.


ಪ್ರಿಯ ಶಿವಕುಮಾರ್ ಸರ್, ಏನು ಹೇಳಬೇಕೋ ತಿಳಿಯುತ್ತಿಲ್ಲ...🙏💐
*

✍️ಕಾಜೂರು ಸತೀಶ್

Tuesday, May 20, 2025

Sound of Silence!

Every day on my way to work, I see a man who never fails to greet me with a raised hand and a warm smile. This silent gesture has been part of my mornings for the past three years!

Yesterday,he came by as I was riding my bike.Curious,I stopped and asked where he was headed. He didn’t reply. I asked again-still no answer. That’s when I realized: the man couldn’t speak!
*
I heard the sound of silence-a silent greeting that had spoken volumes all these years.A quiet connection, wordless yet powerful.
*
✍️ Kajooru Sathish 

Thursday, May 15, 2025

ಯಾವ ಒಲುಮೆ

ಯಾವ ಒಲುಮೆ ನನ್ನ ನಿನ್ನ ಸೆಳೆಯುವಂತೆ ಇಲ್ಲಿ ಸುಳಿದು
ಮರದ ಬಳ್ಳಿಯಂತೆ ಸೆಳೆದು ಬೆಳೆಯುತಿರುವುದು
ಯಾವ ಮೋಹ ಜಗವನೆಲ್ಲ ನೆರಳಿನಂತೆ ಸುತ್ತಿ ಹಿಡಿದು
ಜೀವ ಜೀವದೊಡನೆ ಬಂಧ ಬೆಸೆಯುತಿರುವುದು||ಯಾವ||

ಬಾನ ಒಲುಮೆಯೊಂದು ಬಂದು ಹನಿಗಳಾಗಿ ಬುವಿಗೆ ಉದುರಿ
ನೆಲದ ತುಂಬ ಹಸಿರ ಕುಡಿಗಳೆದ್ದು ನಗುವವು
ಹಸಿರ ಒಡಲಿನಿಂದ ಬಂದ ಹಕ್ಕಿಯದರ ಹಾಡನುಲಿದು
ನಭಕೆ ಮತ್ತೆ ನೆನಪನೆಲ್ಲ ಕಳಿಸುತಿರುವುದು||ಯಾವ||

ಕಡಲ ನಡುವಲೆಲ್ಲೋ ಅಲೆವ ದೋಣಿಗೆಷ್ಟು ಅಲೆಯ ಮೋಹ
ಕುಣಿದು ನಲಿದು ಮೈಯ್ಯನೆಲ್ಲ ನುಲಿಯುತಿರುವುದು
ತೀರದಂಥ ಮೈಯ್ಯ ಮೋಹ ಮತ್ತೆ ತೀರದತ್ತ ಚಾಚಿ
ನೆಲದ ಸಖ್ಯಕ್ಕಾಗಿ ಹಂಬಲಿಸುತಿರುವುದು||ಯಾವ||

ಬಾನು ನೆಲದಿ ಹುಟ್ಟಲೆಳಸಿ ಜಾರುತಿರುವುದು
ನೆಲವು ಮೈಯ್ಯ ಕಳಚಿ ನಭಕೆ ಹಾರುತಿರುವುದು
ಒಲುಮೆ ಚಕ್ರದಂತೆ ಜಗವ ಸುತ್ತುತಿರುವುದು
ಹುಟ್ಟು ಸಾವ ನಾಣ್ಯ ಚಿಮ್ಮಿ ಬೀಳುತಿರುವುದು||ಯಾವ||
*

✍️ಕಾಜೂರು ಸತೀಶ್

ನೀನು -ನಾನು



ಮೋಡಗಟ್ಟಿದ ಬಾನು ನೀನು
ಸುಡುಜ್ವರದ ನೆಲವು ನಾನು


ಕಣ್ಣ ತುಂಬಿಸಿ ನಿಂತೆ ನೀನು
ಬತ್ತಿದೆದೆನದಿ ಇಲ್ಲಿ ನಾನು


ಮಿಂಚನು ಹೊತ್ತಿಸಿಬಿಟ್ಟೆ ನೀನು
ಸಿಡಿಲು ಗುಡುಗು ಇಲ್ಲಿ ನಾನು


ಜಾರಿಸಿದ ಹನಿಯ ತಂಪು ನೀನು
ನೆನ್ನೆದೆಯ ಸೋಂಕಲು ನೀನೇ ನಾನು


ನೀನಿಲ್ಲದ ನಾನಿಲ್ಲದ ನಾವೇ ನಾವು
ನಾವೂ ಅಲ್ಲದ ಹಸಿರೇ ನಾವು
*

✍️ಕಾಜೂರು ಸತೀಶ್






Wednesday, April 30, 2025

ಒಂಟಿ ಕಡಲು



ಒಂಟಿ ಕಡಲಿನ ಒಡಲ ಒಳಗೆ
ನೂರು ನದಿಗಳ ಹಾಡಿದೆ
ನೂರು ಊರಿನ ಕತೆಯಿದೆ

ಆಳ ಮೌನದ ಮೇಲೆ ಮೇಲೆ
ನೂರು ತೆರೆಗಳ ಮಾತಿದೆ
ಪಾದ ಸೋಕುವ ಸುಖವಿದೆ

ತುಳಿದ ತೀರದ ಹೆಜ್ಜೆಹಚ್ಚೆಗೆ
ಉಳಿವ ನೆನಪಿನ ಕಲೆಯಿದೆ
ಉಳಿವ ಹಳೆಯ ಮರೆವಿದೆ

ನೋವ ಶವಗಳ ಇಟ್ಟುಕೊಳ್ಳದ
ಶುದ್ಧ ಮನಸಿನ ಕೈಯಿದೆ
ತೀರಕ್ಕೆಸೆಯುವ ಸುಖವಿದೆ

ತೆರೆದ ಹೃದಯದ ಬಾಗಿಲೊಳಗೆ
ಜಗದ ಮೈಯ ಬೆವರಿದೆ
ಕಣ್ಣು ಹರಿಸಿದ ಕತೆಯಿದೆ
*


ಕಾಜೂರು ಸತೀಶ್

Tuesday, April 22, 2025

ಮದುವೆ



ಮದುವೆ ಕಾಗದ
ಶಾಲೆಗೆ ತರೋದು ಅಂದ್ರೆ
ಅವಳಿಗೆ ಒಂಥರಾ ನಾಚಿಕೆ

ಶಿಕ್ಷಕರ್ಯಾರೂ ಬಂದಿರದ
ಒಂದು ಫ್ರೀ ಪೀರಿಯಡ್ನಲ್ಲಿ
ಪುಸ್ತಕದ ಒಳಗೆ ಜೋಪಾನವಾಗಿರಿಸಿದ್ದ
ಕಂದು ಬಣ್ಣದ ಮದುವೆ ಕಾಗದವನ್ನು
ಹೊರತೆಗೆದಳು ಅವಳು

ಕರಿಹಲಗೆಯ ಎರಡಾಗಿ ಸೀಳುವ ಜಾಗದಲ್ಲಿ ನಿಂತು
"...ಮತ್ತೆ ...ನನ್ನ ಮದ್ವೆ ಬರುವ ಇಪ್ಪತ್ತಾರಕ್ಕೆ...
ಎಲ್ಲ ಬರಬೇಕು ಆಯ್ತಾ..."
ಅವಳ ಮೌನದಂಥ ಮಾತುಗಳನ್ನು ಕೇಳಿ
ದನಿಯನ್ನು ಹೆಕ್ಕುವ ಸ್ಪರ್ಧೆಗೆ ನಿಂತಂತಿರುವ
ತರಗತಿಗೆ ಮೌನ!

"ಹುಡುಗ ಏನ್ ಕೆಲಸ ಮಾಡ್ತಾನೆ?"
ಯಾರೋ ಕೇಳಿದಾಗ
"ಸೌದಿಯಲ್ಲಿ" ಎಂದಳಾಕೆ

ನಮ್ಮ ಪಿಯುಸಿ ತರಗತಿಯ
ಮೊದಲ ಮದುವೆಯಿದು 
ಕಾತರ ಎಲ್ಲರಿಗೂ 
ಎಲ್ಲರೂ ಸೇರಬೇಕು 
ಯಾವ ಡ್ರೆಸ್ ಹಾಕೋದು?
ಒಟ್ಟಿಗೆ ಹೋಗೋಣ 
ಯಾವ ಬಸ್ ಸ್ಟಾಪಿನಲ್ಲಿ ಕಾಯುವುದು?
ಒಂದಷ್ಟು ದಿನ ಅದೇ ಚರ್ಚೆ

ಅವಳು ಮಾತ್ರ 
ಇಂಥ ಮಾತುಗಳಿಂದ ಇಳಿದು
ಹೊರಟು ಹೋದಳು
ಓದುವುದು, ನೋಟ್ಸ್-ರೆಕಾರ್ಡ್ ಬರೆಯುವುದು...
ಪುಸ್ತಕದೊಳಗೇ ಬದುಕಿದಳು ಅವಳು

ಮದುವೆಯ ಹಿಂದಿನ ದಿನವೂ
ಅವಳು ಕಾಲೇಜಿಗೆ ಬಂದಿದ್ದಳು
"ಏ ಬರ್ಬೇಕು ಆಯ್ತಾ?"
ಪ್ರತೀ ಬೆಂಚಿನ ಪ್ರತಿಯೊಬ್ಬರನ್ನೂ
ಮತ್ತೆ ಮತ್ತೆ ಆಹ್ವಾನಿಸಿದಳು ಪ್ರೀತಿಯಿಂದ

ಪೇಟೆಯಿಂದ
ಎರಡು ಬಸ್ಸಿನಲ್ಲಿ ಕ್ರಮಿಸಿ
ಅವಳ ಮನೆ ತಲುಪಿದರೆ
ಅವಳು ಓಡಿಬಂದು ಕೈ ಹಿಡಿದುಕೊಂಡಳು
ಕೈಯ ಮದರಂಗಿಯ ಅಲಂಕಾರವನ್ನು ತೋರಿಸಿದಳು ಅವಳ ಬೆಚ್ಚಗಿನ ಆಲಿಂಗನದಲ್ಲಿ ಅವಳ ಮುಖ ಕೆಂಪಾಗಿ ಹೋಗಿತ್ತು

ಅವಳ ಉಮ್ಮ
ಕುಡಿಯಲು ತಂಪಾದ ಶರಬತ್ತು ಕೊಟ್ಟರು
ಅವಳ ಮದುವೆಯ ದಿನ ತಿಂದ ಬಿರಿಯಾನಿಯ
ರುಚಿ ಮತ್ತೆಂದೂ ಸಿಗಲೇ ಇಲ್ಲ

ಗಂಡ ಮರಳಿ ಸೌದಿಗೆ ಹೋಗುವವರೆಗೆ
ಅವಳು ಕಾಲೇಜಿಗೆ ಬರಲಿಲ್ಲ

ಒಮ್ಮೆ ಇಬ್ಬರೂ ಬಂದು
ಅತ್ತರಿನ ಪರಿಮಳವನ್ನೂ
ಒಂದು ಬಾಕ್ಸ್ ಮಿಠಾಯಿಯನ್ನೂ
ಹಂಚಿ ಹೋದರು

ನಾವೆಲ್ಲರೂ 
ಹೊಸ ಬಟ್ಟೆಯಲ್ಲಿ ಲಕಲಕ ಹೊಳೆಯುವ ಅವಳನ್ನು
ಬೆರೆಗಿನಿಂದ ನೋಡಿದೆವು 
ಅವಳು ನಮಗಿಂತಲೂ ಪ್ರಬುದ್ಧೆಯಂತೆ ಕಂಡಳು
ಅವಳ ಮಾತಲ್ಲಿ ಅವಳ ಅಜ್ಜಿಯಷ್ಟು ಅನುಭವವಿತ್ತು
"ಅವ್ಳು ಬದಲಾಗ್ಬಿಟ್ಳು ಅಲ್ವಾ..."
ಎಲ್ಲರೂ ಒಟ್ಟಿಗೆ ಅಂದೆವು

ಎಷ್ಟೋ ವರ್ಷಗಳ ಅನಂತರ
ಕಳೆದ ವಾರವಷ್ಟೇ ಅವಳನ್ನು ನೋಡಿದ್ದು
ಒಂದೇ ನೋಟಕ್ಕೆ ನನ್ನ ಗುರುತು ಸಿಕ್ಕಿ
ಹೆಸರು ಹಿಡಿದು ಕರೆದಳು
"ಪಿಯುಸಿ ಓದ್ವಾಗ ನನ್ನ ಮದುವೆಯಾಯ್ತು ನೆನ್ಪಿದೆಯಾ?" ಎಂದಾಗ ನನಗೆ ಅವಳ ನೆನಪಾಯಿತು
"ಮತ್ತೆ ಓದ್ಲಿಕ್ಕೆ ಆಗ್ಲಿಲ್ಲ ಕಣೇ...
ಮದುವೆ ಆಗ್ಲಿಕ್ಕೆ ಅವತ್ತೇನೂ ಇಷ್ಟ ಇರ್ಲಿಲ್ಲ
ನನ್ನ ಉಮ್ಮ ಮತ್ತೆ ಅಜ್ಜಿಗೂ 
ಆ ಕಾಲದಲ್ಲಿ ಇಷ್ಟ ಇರ್ಲಿಲ್ವಂತೆ"
ಅವಳ ಎದೆಯೊಳಗಿದ್ದ 
ಎಷ್ಟೋ ಹೆಣ್ಣು ಮಕ್ಕಳ ಮಾತುಗಳು,
ಪುಸ್ತಕದ ಹಾಳೆಗಳ ತಿರುವುವ ಸದ್ದು
ನನ್ನ ಕಿವಿಯ ಸದ್ದಡಗಿಸಿತು

 ಆಮೇಲೆ ಅವಳು ಏನು ಹೇಳಿದಳೋ
 ನನಗೇನೂ ಕೇಳಿಸಲಿಲ್ಲ!
*


ಮಲಯಾಳಂ ಮೂಲ- ರಗಿಲ ಸಜಿ

ಕನ್ನಡಕ್ಕೆ- ಕಾಜೂರು ಸತೀಶ್

ಅಮ್ಮನ ಪ್ರಿಯತಮ



ಅಮ್ಮ ತೀರಿಕೊಂಡು
ಮೂರು ತಿಂಗಳಾದ ಮೇಲೆ 
ನಾನವರನ್ನು ನೋಡಿದ್ದು

ಅಮ್ಮನಿಗೆ ಹತ್ತಿರ ಹತ್ತಿರ ಅರವತ್ತು,
ಅವರಿಗಾದರೋ ನಲವತ್ತು ನಲವತ್ತೈದರ ಪ್ರಾಯ
ಅವರನ್ನು ನೋಡಿದರೆ ಥೇಟ್ ಅಮ್ಮನ ಹಾಗೆ 
ಅಮ್ಮನ ಹಾಗೇ ಶಾಂತಚಿತ್ತ 
ಅಮ್ಮನದೇ ಕಣ್ಣುಗಳು
ಅಮ್ಮನದೇ ಪರಿಮಳ
ಅಮ್ಮನ ಗಾಢವಾಗಿ ಪ್ರೀತಿಸಿ
ಅಮ್ಮನೇ ಆದ ಹಾಗೆ

ಅವರ ಕೋಣೆಯ ತುಂಬೆಲ್ಲ 
ಅಮ್ಮನದೇ ಚಿತ್ರಗಳು
ಅಮ್ಮ ಇಷ್ಟು ಚೆನ್ನಾಗಿ ನಗುತ್ತಿದ್ದರಾ?
ಅವರಿಗಾಗಿ ಮಾತ್ರ ಉಟ್ಟ 
ಕೆಂಪಿನಲ್ಲಿ, ಹಸಿರಿನಲ್ಲಿ
ಗಾಢ ಬಣ್ಣಗಳಲ್ಲಿ
ಅಮ್ಮ ಹೀಗೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದರಾ?
ಇಷ್ಟು ಚೆನ್ನಾಗಿ ಕಾಣಿಸುತ್ತಿದ್ದರಾ?

ಬಣ್ಣ ಮಾಸಿದ, ಕೊಳೆ ತುಂಬಿದ ಮನೆಯ ಬಟ್ಟೆಗಳಲ್ಲಿ
ವಿಷಾದವೇ ತುಂಬಿದ್ದ ಕಣ್ಣುಗಳಲ್ಲಿ 
ಬಿಡುವಿಲ್ಲದ ದುಡಿಮೆಯಲ್ಲಿ
ಅಪ್ಪ, ಅಜ್ಜಿ, ನಾನು ಎಂಬೀ ವೃತ್ತದಲ್ಲಿ 
ಇಷ್ಟೆಲ್ಲದರ ನಡುವೆ 
ಯಾವಾಗ ಅಮ್ಮ ಅವರಿಗಾಗಿ ಹೀಗೆ ಬದುಕಿದ್ದು?

ಅವರಿಗಾಗಿ ಕಳುಹಿಸಿದ ಸಂದೇಶಗಳಲ್ಲಿ,
ಪತ್ರಗಳಲ್ಲಿ ಕವಿತೆಗಳದೇ ಕಾರುಬಾರು 
ಗಾಢ, ಆರ್ದ್ರ ಪ್ರೇಮ
ಅಮ್ಮನ ಕಲ್ಪನೆಗಳು 
ಅಮ್ಮನ ರಹಸ್ಯಗಳು
ಅಮ್ಮನ ಬಯಕೆಗಳು
ಅಮ್ಮನ ಕನಸುಗಳು

ಉಫ್... ಎಂಥಾ ಪ್ರೇಮಿ ಅವಳು!
ಯಾರೂ ತಿಳಿಯದ 
ಯಾರೂ ಗುರುತಿಸದ
ಅವರು ಮಾತ್ರ ತಿಳಿದಿದ್ದ 
ಆರಾಧಿಸಿದ್ದ
ಮುದ್ದಿಸಿದ್ದ
ದೇವತೆಯಾಗಿದ್ದವಳ ಎದೆಯೊಳಗಿಟ್ಟುಕೊಂಡು ನಡೆದ
ಅವರಿಗೆ ಮಾತ್ರ ತಿಳಿದಿದ್ದ ಅಮ್ಮ
ಅವಳು ಪೂರ್ಣತೆ ಪಡೆದ ಒಂದೇ ಒಂದು ತಾಣ 

ಅದು ಸಾಯುವವರೆಗೆ ಒಮ್ಮೆಯೂ ಪರಸ್ಪರ ನೋಡಿರದ ಆ ಇಬ್ಬರು 
ಹೇಗೆ ಇಷ್ಟು ಗಾಢವಾಗಿ ಪ್ರೀತಿಸಿದರು!
ತೀರಿಕೊಂಡರೂ ಮತ್ತೊಬ್ಬರ ಒಳಗೆ ಬದುಕುವ
ಅವ್ಯಕ್ತ ಅದೃಶ್ಯ ವೈಚಿತ್ರ್ಯ
ಜೀವಂತವಿರುವಾಗಲೇ ತೀರಿಕೊಳ್ಳುವ
ಎಷ್ಟೋ ಮನುಷ್ಯರನ್ನು ಬದುಕಿಸಿದ,ಬದುಕಿಸುವ
ಬದುಕಿಸುತ್ತಲೇ ಇರುವ ಅದೇ ವೈಚಿತ್ರ್ಯ!
*


ಮಲಯಾಳಂ: ಲಿಷಾ ಜಯನ್

ಕನ್ನಡಕ್ಕೆ - ಕಾಜೂರು ಸತೀಶ್ 

ಮಾನಿಷಾದ



ಪುಸ್ತಕಗಳಿಂದ ತುಂಬಿದ
ಕೋಣೆಯಲ್ಲಿ
ಸ್ನಾನಮಾಡಿಸಿ
ನನ್ನ ಮಲಗಿಸಬೇಕು
ಶವವಸ್ತ್ರ ಹೊದಿಸದೆ

 ನಾನು
 ಹುಟ್ಟುವ ಮುನ್ನವೇ
 ತೀರಿಕೊಂಡಿರುವೆ

ಸುವಾಸನೆ ಹಬ್ಬಿಸುವ 
ಏನೂ ಬೇಡ
ನನ್ನ ಸುತ್ತಮುತ್ತ

ಪುಸ್ತಕಗಳ 
ಪರಿಮಳ ಸಾಕು ನನಗೆ 

ಎದೆಯೊಡೆದು ಅತ್ತವರು
ನನ್ನ ಕುಟುಂಬಸ್ಥರು
ಬಂಧುಮಿತ್ರರು

ಅಳುವ ಯಾರೂ ಅಲ್ಲಿ
ಇರಬಾರದು ನನ್ನ ಸುತ್ತ

ಓದಿ ಅಡಿಗೆರೆ ಎಳೆದ
ಪುಸ್ತಕಗಳ ವಾಕ್ಯಗಳಿಗೂ
ಕಥಾ ಪಾತ್ರಗಳಿಗೂ 
ನನ್ನ ಚುಂಬಿಸಲು
ಅವಕಾಶ ನೀಡಿ

ನನ್ನ ಸುಡದಿರಿ
ಮಣ್ಣಲ್ಲಿ ಹೂತುಬಿಡದಿರಿ

ನಾನು 
ಅಸಹ್ಯದೆಡೆಗೆ 
ಹೊರಳುವುದಿಲ್ಲ 

ನಾನು
ನಡೆದು ಬಂದ
ಪುಸ್ತಕದ ಕಡೆಗೆ
ಯಾರ ಸಹಾಯವನ್ನೂ ಬೇಡದೆ
ಮರಳಿ ಹೋಗುತ್ತೇನೆ

ನಿಧನಾನಂತರದ 
ಯಾವ ಶಾಸ್ತ್ರಗಳೂ 
ನನಗೆ ಬೇಕಿಲ್ಲ

ಮಾನಿಷಾದ
ಹಾಡುವ 
ಮಕ್ಕಳ
ನೃತ್ಯವೊಂದರ
ಹೊರತು
*


ಮಲಯಾಳಂ ಮೂಲ: ಪವಿತ್ರನ್ ತೀಕ್ಕುನಿ

ಕನ್ನಡಕ್ಕೆ - ಕಾಜೂರು ಸತೀಶ್ 

Saturday, April 5, 2025

ಲೆಕ್ಕ ಪರೀಕ್ಷೆ

ಇವತ್ತು ಗಣಿತ ಪರೀಕ್ಷೆ
ಕ್ಯಾಲ್ಕುಲೇಟರ್ ತರ್ಲಿಲ್ಲ.
ಕೈಯಲ್ಲೇ ಲೆಕ್ಕ ಮಾಡ್ತಿರೋದು
ಕಮಲಾಕ್ಷಿ ಟೀಚರ್ ಕಣ್ಣಿಗೆ ಬಿತ್ತು

ಎಲ್ಲೋ ನಿನ್ನ ಕ್ಯಾಲ್ಕುಲೇಟರ್?
ಕೈಯಲ್ಲೇ ಲೆಕ್ಕ ಹಾಕ್ತೇನೆ ಮಿಸ್.
ಕೈಯಲ್ಲಿ ಎಣಿಸ್ಲಿಕ್ಕೆ ಆಗದೆ ಇರೋದು?
ಕಾಲಲ್ಲಿ ಎಣಿಸ್ತೇನೆ ಮಿಸ್
ಅಧಿಕ ಪ್ರಸಂಗಿ
ಜೊತೆಗೆ ಬೆನ್ನಿಗೊಂದು ಗುದ್ದು

ಕೈಯಲ್ಲಿ ಎಣಿಸಿ ಮುಗಿದ ಮೇಲೆ
ಎಣಿಕೆಗೆ ಸಿಗದವುಗಳನ್ನೆಲ್ಲ
ಈಗ ಕಾಲಲ್ಲೆಲ್ಲ ಸರ್ಕಸ್ ಮಾಡುವುದಿಲ್ಲ
ಮರ್ಯಾದೆ ಪ್ರಶ್ನೆ
ಎಣಿಸಿದಷ್ಟೂ ಮುಗಿಯದ
ನಕ್ಷತ್ರಗಳನ್ನು ಕೂಡ

ಬದುಕು ಅಲ್ವಾ ಇದು
ಇದೇನು ಜ್ಯಾಮಿತಿ ಬಾಕ್ಸಿನೊಳಗಿನ
ಪೆನ್ಸಿಲ್ ಅಲ್ವಲ್ಲಾ

ಆದ್ರೂ ಲೆಕ್ಕ ತಪ್ಪುವಾಗ
ಬೆನ್ನ ಹಿಂದೆ ನಿಂತು
ನಮಗರಿಯದ ಹಾಗೆ ನೋಡುವ
ಒಬ್ಬರಿರ್ತಾರಲ್ವಾ

ಹಾಗೆ ನಿಂತು ನೋಡೋದು ಒಳ್ಳೇದೇ ಅನ್ಸುತ್ತೆ.
*


ಮಲಯಾಳಂ ಮೂಲ- ವಿಜಿಷಾ ವಿಜಯನ್

ಕನ್ನಡಕ್ಕೆ - ಕಾಜೂರು ಸತೀಶ್ 

Monday, March 3, 2025

1998

ಗುಂಡ ಶಿಕ್ಷಣಮಂತ್ರಿಯಾದ. 'ಶಿಕ್ಷಕರಿದ್ದರೆ ಮಾತ್ರ ಗುಣಾತ್ಮಕ ಶಿಕ್ಷಣ' ಎನ್ನುತ್ತಾ ಒಂದು ಲಕ್ಷ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದ. ತರಬೇತಿ ಪಡೆದು ಸರ್ಟಿಫಿಕೇಟುಗಳನ್ನು ಎಲ್ಲೆಲ್ಲೋ ಎಸೆದು ಬೇರೆ ಬೇರೆ ವೃತ್ತಿಗ ಳಲ್ಲಿ ತೊಡಗಿದವರೆಲ್ಲರೂ ಹೇಗೋ ಎಲ್ಲೋ ಹುಡುಕಿ ಅರ್ಜಿ ಸಲ್ಲಿಸಿದರು.ಹಲವರು ಪುಸ್ತಕ ಓದುವುದನ್ನೇ ನಿಲ್ಲಿಸಿ ಬಿಟ್ಟಿದ್ದರು. ಎಷ್ಟೋ ಮಂದಿಗೆ ಕಾಗುಣಿತವೇ ಮರೆತುಹೋಗಿತ್ತು.

ಅವರೆಲ್ಲರೂ ಮೇಷ್ಟ್ರಾದರು.

'ಗುಣಾತ್ಮಕ ಶಿಕ್ಷಣ ನಮ್ಮ ನಡೆ' ಎಂದು ಗುಂಡ ತನ್ನ ಕಾರಿನಲ್ಲಿ ಬರೆಸಿಕೊಂಡ.
*

✍️ ಕಾಜೂರು ಸತೀಶ್ 

ಕವಿತೆ

ತಿಮ್ಮ ದಾರಿಯಲ್ಲಿ ಹೋಗುತ್ತಿದ್ದಾಗ ಕಾರುಗಳು ಒಂದಾದ ಮೇಲೆ ಒಂದರಂತೆ ಹೋಗುತ್ತಿದ್ದವು. 

ಕೈ ತೋರಿಸಿ ಕಾರು ನಿಲ್ಲಿಸಿ ವಿಚಾರಿಸಿದ ತಿಮ್ಮ.

"ಎಲ್ಲಿಗೆ?"

"ಕವಿಗೋಷ್ಠಿಗೆ"

"ಅಲ್ಲಿ ಏನು ಮಾಡುವುದು?"

"ಕವಿತೆ ಓದುವುದು"

"ನಾನೂ ನೋಡಲು ಬರಲೇ?"

"ಬನ್ನಿ".


ಅಲ್ಲಿಂದ ಮರಳಿದ ಮೇಲೆ ತಿಮ್ಮ ಹೀಗೆ ಬರೆದ :
ನಾಲ್ಕು ಪದಗಳಿದ್ದರೆ ಒಂದು ಕವಿತೆ ಬರೆಯಬಹುದು - 'ಭಾವ, ಆತ್ಮ, ಮಧುಬಟ್ಟಲು ಮತ್ತು ಪ್ರೀತಿ'.

'ಅದರ ಜೊತೆಗೆ ಒಂದು ಮೊಬೈಲ್ ಇರಬೇಕು!'
*
✍️ಕಾಜೂರು ಸತೀಶ್

Sunday, February 23, 2025

ನಿಶ್ಚಲ ಬದುಕು


ಮಧ್ಯಾಹ್ನ ಊಟದ ಅನಂತರ 
ಅವಳು ನನ್ನ ತೊರೆದುಹೋದ ಮೇಲೆ 
ಕೆಲಕಾಲ ಓದುವುದರಲ್ಲಿ ಮಗ್ನನಾದೆ 
ಆದರೆ ಯಾಕೋ ಏನೋ ಅಲ್ಲೊಮ್ಮೆ ಕಣ್ಣಾಡಿಸಿದೆ 
ಅರ್ಧ ತಿಂದುಳಿಸಿದ 
ಸ್ಯಾಂಡ್ವಿಚ್,
ಬ್ರೆಡ್ಡು,
ಸಲಾಡ್ ಮತ್ತು ಸಲಾಮಿ 
ಎಲ್ಲದರಲ್ಲೂ ಅವಳ ಹಲ್ಲಿನ ಗುರುತಿತ್ತು.
*


ಇಂಗ್ಲೀಷ್ ಮೂಲ - ಎ ಕೆ ರಾಮಾನುಜನ್ 

ಕನ್ನಡಕ್ಕೆ - ಕಾಜೂರು ಸತೀಶ್

Tuesday, February 18, 2025

ಆರಿಹೋದ 'ಪ್ರಕಾಶ' ಮತ್ತು ಉಳಿಸಿಹೋದ ಬೆಳಕು - ಭಾಗ -1

ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು.

ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆಲ್ಲಿಹುದಿಕೇರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದ ರೋಹಿತ್ ಕೆ.ಮತ್ತೊಬ್ಬರು ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದ ಡಾ. ಪ್ರಕಾಶ್ ಬಿ.


ಆ ದಿನ ರೋಹಿತ್ ಸರ್ ಅವರು ಜಿ ಟಿ ನಾರಾಯಣರಾವ್ ಅವರ ಕುರಿತು ಮಾತನಾಡಿದರೆ ಪ್ರಕಾಶ್ ಸರ್ ಅವರು ಕಟ್ಟೀಮನಿ ಅವರ ಕುರಿತು ಮಾತನಾಡಿದ್ದರು.

 ಇವರಿಬ್ಬರಲ್ಲಿ ನನಗೆ ಮೊದಲು ಪರಿಚಿತರಾದವರು ರೋಹಿತ್ ಸರ್. ಕೊಡ್ಲಿಪೇಟೆಯಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ರೋಹಿತ್ ಸರ್, ಗೂಗಿಯ ಬಗ್ಗೆ ಪ್ರಸ್ತಾಪಿಸಿದಾಗ ಅವರ ಮಾತುಗಳಿಂದ ಪ್ರೇರಿತನಾಗಿ ಅವರನ್ನು ಮಾತನಾಡಿಸಿದ್ದೆ.

 ಆಮೇಲೆ 2013ರಲ್ಲಿ ಮಡಿಕೇರಿ ತಾಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ್ದೆ. 'ಸಾಹಿತ್ಯ ಸಮ್ಮೇಳನಗಳಲ್ಲಿ ಇಷ್ಟು ಡೀಪ್ ಆಗಿ ಮಾತನಾಡಬಾರದು' ಎಂದು ನನ್ನ ಮಾತುಗಳ ಕೊರತೆಯನ್ನು ಅವರು ಬೊಟ್ಟು ಮಾಡಿ ತೋರಿಸಿದ್ದರು. ನನಗದು ಸರಿ ಎನ್ನಿಸಿ ಅವರ ಮೇಲಿನ ಅಭಿಮಾನ ಹೆಚ್ಚಾಗಿತ್ತು.

 ರೋಹಿತ್ ಸರ್ ಅವರು ಈ ಜಿಲ್ಲೆಯನ್ನು ಬಿಟ್ಟು ಹಾಸನಕ್ಕೆ ತೆರಳಿದಾಗ ವಿದ್ವತ್ಪೂರ್ಣ ಮಾತುಗಳಿಗಾಗಿ ಉಳಿದವರು ಡಾ. ಪ್ರಕಾಶ್ ಸರ್. ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಗಳಲ್ಲಿ ಅವರ ಮಾತುಗಳನ್ನು ತಪ್ಪದೇ ಧ್ವನಿಮುದ್ರಿಸಿಕೊಳ್ಳುತ್ತಿದ್ದೆ.(ಕೇವಲ ಇಬ್ಬರ ಮಾತುಗಳನ್ನಷ್ಟೇ ಧ್ವನಿಮುದ್ರಿಸಿಕೊಳ್ಳುತ್ತಿದ್ದೆ-ಮತ್ತೊಬ್ಬರು ಬಾಲಸುಬ್ರಮಣ್ಯ ಕಂಜರ್ಪಣೆ). ಆದರೆ ಕಡೆಗೂ ಅವುಗಳನ್ನು ಉಳಿಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. 


 ಹಲವು ಗೋಷ್ಠಿಗಳಲ್ಲಿ ಪ್ರಕಾಶ್ ಸರ್ ಅವರೊಂದಿಗೆ ಭಾಗವಹಿಸಿದ್ದೆ. ನಟರಾಜು ಬೂದಾಳು ಸರ್ ಅವರ ಶೈಲಿಯಂತೆಯೇ ಅನಿಸುತ್ತಿದ್ದ ಅವರ ಮಾತುಗಳು ನನಗೆ ಬೆರಗಿನ ಹಾಗೆ ತೋರುತ್ತಿದ್ದವು. ಅವರು ತರುಣ ಡಿ ಆರ್ ರಂತೆ ಕಾಣಿಸುತ್ತಿದ್ದರು. 

ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕಥಾ ಕಮ್ಮಟದಲ್ಲಿ ಅವರ ಮಾತುಗಳನ್ನು ಜೀರ್ಣಿಸಿಕೊಳ್ಳಲು ಅಲ್ಲಿದ್ದ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿರಲಿಲ್ಲ. (ನನಗೇ ಅರ್ಥವಾಗಲಿಲ್ಲ ಎಂದು ಪಕ್ಕದಲ್ಲಿದ್ದ ಸಂಪನ್ಮೂಲ ವ್ಯಕ್ತಿಯೊಬ್ಬರು ಹೇಳಿದ್ದರು!). ಅಷ್ಟು ಆಳಕ್ಕಿಳಿದು ತಮ್ಮನ್ನು ತಾವು ಹುಡುಕುತ್ತಿದ್ದರು - ಕಳೆದುಕೊಳ್ಳುತ್ತಿದ್ದರು!


 ಪ್ರಕಾಶ್ ಸರ್ ಯಾವುದೇ ವಿಷಯದ ಆಳ-ಅಗಲಗಳನ್ನು ತಿಳಿದು ಮಾತನಾಡುವ ಪ್ರೌಢಿಮೆಯನ್ನು ಗಳಿಸಿಕೊಂಡಿದ್ದರು. ವಿಷಯವೊಂದರ ಋಣಾತ್ಮಕ ಆಯಾಮಗಳ ಬಗ್ಗೆ ಅವರು ಕಠೋರವಾಗಿ ಟೀಕಿಸುತ್ತಿರಲಿಲ್ಲ-ಮೌನವಾಗಿಬಿಡುತ್ತಿದ್ದರು. ವಿಶ್ವವಿದ್ಯಾನಿಲಯದ ವಿಚಾರಗೋಷ್ಠಿಯಲ್ಲಿ ನಾವಿಬ್ಬರು ಪ್ರತಿಕ್ರಿಯೆ ನೀಡಬೇಕಿತ್ತು. ಪ್ರಕಾಶ್ ಸರ್, ವಿಚಾರವನ್ನು ಮಂಡಿಸಿದವರ ತೀರಾ ತೆಳುವಾದ ಗ್ರಹಿಕೆಯನ್ನು ಮನಸಾರೆ ಖಂಡಿಸಿದರೂ ಎಲ್ಲೂ ಅದನ್ನು ಪ್ರಸ್ತಾಪಿಸದೆ ತಮ್ಮದೇ ಆದ ವಿಭಿನ್ನ ಒಳನೋಟಗಳನ್ನು ನೀಡಿದ್ದರು.


 ಪ್ರಕಾಶ್ ಸರ್ ಅವರು ಮೊಬೈಲ್ ಬಳಕೆಯಿಂದ ದೂರ ಉಳಿದಿದ್ದರು. ಏನಾದರೂ ಕಳಿಸುವುದಿದ್ದರೆ ಸ್ವಾಮಿ ಸರ್ ಅವರಿಗೆ ಕಳಿಸಿ ಎನ್ನುತ್ತಿದ್ದರು. ತೀರಾ ತಡವಾಗಿ ಫೇಸ್ಬುಕ್ಕಿಗೆ ಎಂಟ್ರಿ ಕೊಟ್ಟಿದ್ದರು. ಮಡಿಕೇರಿಗೆ ಬರುವಾಗಲೆಲ್ಲ ಮೊಹಿದ್ದೀನ್ ಸರ್, ಅವರ ಜೊತೆಯಾಗಿರುತ್ತಿದ್ದರು. ಕಣಿವೆಯ ಭಾರದ್ವಾಜ್ ಸರ್ ಅವರು, ಅವರ ವಿದ್ವತ್ ಶಕ್ತಿಗೆ ಬೆರಗಾಗಿದ್ದರು.

 2015ರ ಮಡಿಕೇರಿ ದಸರಾ ಕವಿಗೋಷ್ಠಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಕಾಶ್ ಸರ್ ಆಹ್ವಾನಿತರಾಗಿದ್ದರು. ಕುತೂಹಲದಿಂದ ಅವರ ಮಾತುಗಳನ್ನು ತುಂಬಿಕೊಂಡಿದ್ದೆ. ಆ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ನಾನು ವಹಿಸಿದ್ದೆ. ಪ್ರಕಾಶ್ ಸರ್ ಸ್ವಾಮಿ ಸರ್ ರವರೊಂದಿಗೆ ಆಗ ಆಗಮಿಸಿದ್ದರು. ಅವರಿಬ್ಬರೂ ಒಟ್ಟಿಗೆ ಕುಳಿತು ನನ್ನ ಭಾಷಣವನ್ನು ಕೇಳಿಸಿಕೊಳ್ಳುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟುವಂತಿದೆ.


 2017ರ ಕೊಡಗಿನ ಗೌರಮ್ಮ ಪುಸ್ತಕ ಬಹುಮಾನಕ್ಕೆ ನಾನು ಮತ್ತು ಅವರು ತೀರ್ಪುಗಾರರಾಗಿದ್ದೆವು(ಬಹುಮಾನ ವಿತರಣೆಯ ಸಂದರ್ಭದಲ್ಲಿ ನನಗದು ತಿಳಿದಿದ್ದು). ತೀರ್ಪುಗಾರರ ಅನಿಸಿಕೆ ಸಂದರ್ಭದಲ್ಲಿ ನನಗ ತಿಳಿದದ್ದು ತೀರ್ಪುಗಾರರ ಅನಿಸಿಕೆಯ ಸಂದರ್ಭದಲ್ಲಿ ನಾವಿಬ್ಬರು ಮಾತನಾಡಿದ್ದೆವು. ಶಾಂತಿ ಅಪ್ಪಣ್ಣ ಅವರ ಕೃತಿಗೆ ಬಹುಮಾನ ಬಂದಿದ್ದನ್ನು ನಾವಿಬ್ಬರು ಸಂಭ್ರಮಿಸಿದ್ದೆವು.


ಆಮೇಲೆ ಪ್ರಕಾಶ್ ಸರ್ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿ ಕೊಣನೂರು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ತೆರಳಿದರು. ಆಗಲೂ 'ಇವರ ಜ್ಞಾನ ಭಂಡಾರದ ವಿಸ್ತಾರಕ್ಕೆ ಅದು ವೇದಿಕೆಯಲ್ಲ' ಎಂದು ಮನಸಾರೆ ಅಂದುಕೊಂಡಿದ್ದೆ. ಸಿಕ್ಕಾಗಲೆಲ್ಲ 'ನೀವೂ ಪರೀಕ್ಷೆ ಬರೆಯಬೇಕಿತ್ತು ಸತೀಶ್' ಎನ್ನುತ್ತಿದ್ದರು.

 ಪ್ರಕಾಶ್ ಸರ್ ಉಪನ್ಯಾಸಕ್ಕೆ ಬರುತ್ತಿದ್ದದ್ದು ಒಂದು ದೊಡ್ಡ ದಿನಚರಿಯನ್ನು ಕೈಯಲ್ಲಿ ಹಿಡಿದುಕೊಂಡು. ಅದರಲ್ಲಿ ಹಲವು ಉಪನ್ಯಾಸ ಗಳಿಗೆ ಮಾಡಿಕೊಂಡಿದ್ದ ಟಿಪ್ಪಣಿಗಳಿದ್ದವು. ಯಾವುದೇ ಉಪನ್ಯಾಸಕ್ಕೆ ಅವರು ಅದನ್ನು ತರುತ್ತಿದ್ದರು. ಉಪನ್ಯಾಸಕ್ಕೂ ಮುನ್ನ ಒಂದು ಸಿಗರೇಟ್ ಹಚ್ಚಿಬರುತ್ತಿದ್ದರು. 

 ಆ ದಿನ ಭಾರದ್ವಾಜ್ ಸರ್ ಅವರು ಕರೆ ಮಾಡಿ 'ಪ್ರಕಾಶ್ ಹೋಗ್ಬಿಟ್ರು' ಎಂದಾಗ 'ಯಾವ ಪ್ರಕಾಶ್?' ಎಂದು ಕೇಳಿದ್ದೆ. ಎಂಥಾ ಮೇರು ಪ್ರತಿಭೆಯೊಂದರ ನಿರ್ಗಮನವಾಯಿತು ಎಂದು ನರಳಿದ್ದೆ!

ಪ್ರಕಾಶ್ ಸರ್ ನಮ್ಮನ್ನು ಅಗಲಿದ್ದು ತುಂಬಲಾರದ ನಷ್ಟ. ಕುಶಾಲನಗರದ ಪದವಿ ಕಾಲೇಜಿನಲ್ಲಿ ನಡೆದ ಸೆಮಿನಾರಿನಲ್ಲಿ ಮಾಡಿಕೊಂಡಿದ್ದ ವಿಡಿಯೋ ತುಣುಕಿನಲ್ಲಿ ಪ್ರಕಾಶ್ ಸರ್ ಅವರ ಆಗಮನದ ದೃಶ್ಯವೊಂದಿದೆ. ಒಮ್ಮೊಮ್ಮೆ ಅದನ್ನು ನೋಡಿಕೊಳ್ಳುತ್ತೇನೆ.
**


 'ಸೋಮಾರಿ ಪ್ರಕಾಶ' ಎಂದೇ ನೆನಪಿಸಿಕೊಳ್ಳುವ ಡಾ. ಸುಕನ್ಯಾ ಅವರು ತಮ್ಮ ಪತಿಯ ಬದುಕು ಬರೆಹ ಮತ್ತು ಭಾಷಣಗಳನ್ನು 'ನುಡಿ ಸಂಕಥನ'ದಲ್ಲಿ ದಾಖಲಿಸಿದ್ದಾರೆ. ಪ್ರಕಾಶರ ಕುರಿತ ಬರೆವಣಿಗೆಯು ಬೆಳೆದಂತಲ್ಲ ಹೆಣ್ಣೊಬ್ಬಳ ಬದುಕಿನ ಸಂಕಟಗಳನ್ನು, ಅವಳು ಮಾಡಬೇಕಾದ /ಮಾಡಿರುವ ತ್ಯಾಗವನ್ನು ಬಿಚ್ಚಿಡುತ್ತಾರೆ. ಕಣ್ಣುಗಳನ್ನು ತೋಯಿಸುತ್ತವೆ ಅವು. ಅತ್ಯಂತ ಪ್ರಾಮಾಣಿಕ ಅನಿಸಿಕೆಗಳವು. ತಮ್ಮ ಅಧ್ಯಯನದ ಮಿತಿಗಳನ್ನು ಒಪ್ಪಿಕೊಳ್ಳುತ್ತಲೇ ಎರಡನೆಯ ಗುರುವಾದ ಪತಿಯ ಏಳಿಗೆಯನ್ನು ಬಯಸಿದವರು ಸುಕನ್ಯಾ . ಅದಕ್ಕಾಗಿ ಪತಿಯ ಸಿದ್ಧಾಂತಗಳನ್ನು ತಾವೂ ಪಾಲಿಸಿದವರು. ತಮ್ಮ ಆದ್ಯತೆ/ ಅಧ್ಯಯನವನ್ನೆಲ್ಲ ಬದಿಗಿಟ್ಟು ಗಂಡನ, ಮಕ್ಕಳ ಆರೈಕೆಯಲ್ಲೇ ಸುಖವನ್ನು ಕಾಣುವ, ಪತಿಯ ಅಧ್ಯಯನಕ್ಕೆ ಸಮಯವನ್ನು ಕಲ್ಪಿಸಿಕೊಡುವ , ಖಾಸಗಿ ವಾಹನವಿಲ್ಲದೆ ಬದುಕುವುದನ್ನು ಕಲಿಯುವ ಮುಂತಾದ ಹಲವು ತ್ಯಾಗಗಳನ್ನು ಮಾಡಿದವರು ಡಾ.ಸುಕನ್ಯಾ ಮೇಡಂ.  

ಗಂಡನೊಂದಿಗಿನ ಪ್ರೀತಿ, ಮುನಿಸು, ರೇಗಿಸುವಿಕೆ ರಾಜಿಗಳೊಂದಿಗೆ ಆದರ್ಶ ಬದುಕನ್ನು ಕಟ್ಟಿಕೊಳ್ಳಲು ಹವಣಿಸುವ ಹೆಣ್ಣಿನ ದಿನಚರಿಯು ಕೃತಿಯ ಪೂರ್ವಾರ್ಧದಲ್ಲಿದೆ. 

 ಎಲ್ಲರೂ ಕಾರು-ಬೈಕಿನಲ್ಲಿ ಸಂಚರಿಸುವಾಗ ತಾವು ಸಾರ್ವಜನಿಕ ವಾಹನಕ್ಕಾಗಿ ಕಾಯುವ, ಹಣ-ಆಸ್ತಿಗಳ ಹಿಂದೆ ಬೀಳುವವರ ನಡುವೆ ಬಾಡಿಗೆಮನೆಯಲ್ಲಿ ಸುಖ ಕಾಣುವ ಸಂಸಾರ ಇವರದಾಗಿತ್ತು . ತಾವು ನಂಬಿದ ಸಿದ್ಧಾಂತದಂತೆ ಬದುಕಲು ಹೊರಟ ಪ್ರಕಾಶರನ್ನು ಅನುಸರಿಸಿಕೊಂಡು ಹೋದವರು ಸುಕನ್ಯಾ. ಮದುವೆ ಮತ್ತಿತರ ಲೌಕಿಕ ಸಂಗತಿಗಳಿಂದ ವಿಮುಖರಾಗಿದ್ದ ಪ್ರಕಾಶರನ್ನು ಸೆಳೆದದ್ದು ಸುಕನ್ಯಾ ಅವರ ಪ್ರೀತಿ ಮತ್ತು ತ್ಯಾಗ . ಅದು ಇಷ್ಟು ಬೇಗ ಮುಗಿಯುತ್ತದೆ ಎನ್ನುವುದೇ ದುಃಖಕರ ಸಂಗತಿ.  

ವೈಚಾರಿಕವಾಗಿ ಪ್ರಕಾಶರಾಗಿದ್ದ ಪ್ರಕಾಶರ ಬದುಕನ್ನು ಪ್ರೊ. ರಹಮತ್ ತರೀಕೆರೆ, ಡಾ. ರಾಜಪ್ಪ ದಳವಾಯಿ ಅವರು ಬರೆದುಕೊಂಡಿದ್ದಾರೆ. ತಮ್ಮ ಶಿಷ್ಯನ ಅಧ್ಯಯನ, ಪ್ರೀತಿ, ಕಾಳಜಿಗಳ ಕುರಿತ ಅಪಾರ ಗೌರವ ಇವರಲ್ಲಿದೆ.

 ಡಾ. ಪ್ರಕಾಶ್ ಸರ್ ಬರೆದದ್ದು ತೀರಾ ಕಡಿಮೆ. ಪುಸ್ತಕಗಳಿಗೆ ಮುನ್ನುಡಿ/ ಬೆನ್ನುಡಿ/ಪ್ರತಿಕ್ರಿಯೆಯ ರೂಪದಲ್ಲಿ ಬರೆದ ಬರೆಹಗಳನ್ನು ಬಿಟ್ಟರೆ, ಅವರ ವಿದ್ವತ್ಪೂರ್ಣ ಭಾಷಣಗಳೆಲ್ಲ ರೆಕಾರ್ಡ್ ಆಗಲಿಲ್ಲ. ಆದರೆ ಅವರು ಮಾಡಿಟ್ಟ ಟಿಪ್ಪಣಿಗಳು ಇಲ್ಲಿ ಹಲವರಿಂದ ಬರೆಹ ರೂಪ ಪಡೆದುಕೊಂಡಿವೆ. ಭಾಗ ಎರಡರಲ್ಲಿ ಕಾಣಸಿಗುವ ಪ್ರಕಾಶರ ಬಹುಮುಖೀ ಅಧ್ಯಯನಗಳು, ಜೀವಪರ ಕಾಳಜಿಗಳು, ಶಿಸ್ತಿನ ಅಧ್ಯಯನಗಳು ನಮ್ಮನ್ನು ಗಾಢವಾಗಿ ತಟ್ಟುತ್ತವೆ. 
*
ಕಾಜೂರು ಸತೀಶ್ 

Sunday, February 16, 2025

ದಾರಿ

ತಿಮ್ಮ ಎಲ್ಲರೂ ನಡೆಯುವ ದಾರಿಯನ್ನು ತೊರೆದು ಕಲ್ಲು ಮುಳ್ಳುಗಳಿರುವ ದಾರಿಯಲ್ಲಿ ನಡೆಯತೊಡಗಿದ. ಕ್ರಮೇಣ ಅದು ಸವೆದು ಸವೆದು ನಡಿಗೆ ಸಲೀಸಾಯಿತು. ಹೀಗೆ ನಡೆದ ಅವನ ದಾರಿಯ ಗುರುತು ಕಂಡ ಜನರು ಅದೇ ದಾರಿಯಲ್ಲಿ ಸಾಗತೊಡಗಿದರು.
ತಿಮ್ಮ ತನ್ನ ಮೌನವು ಕಳೆದುಹೋದ ಬಗ್ಗೆ ಮರುಗಿದ.
'ಎಲ್ಲಿ, ಹೇಗೆ ನಡೆದರೂ ಜನರು ಸವೆದ ದಾರಿಯನ್ನೇ ಅನುಸರಿಸುತ್ತಾರೆ' ತನ್ನಲ್ಲೇ ಹೇಳಿಕೊಂಡ ತಿಮ್ಮ.
*

✍️ ಕಾಜೂರು ಸತೀಶ್ 

Monday, February 3, 2025

ನಗರ


ನಗರವನ್ನು ನೋಡಿದೆ
ಮುಗುಳ್ನಕ್ಕೆ

ಅಲ್ಲಿ ಯಾರು, ಹೇಗೆ ಬದುಕಬಹುದೆಂದು 
ತಿಳಿಯಲು ತೆರಳಿದ್ದೆ

ಮತ್ತೆ ಮರಳಲೇ ಇಲ್ಲ.
*


ಹಿಂದಿ ಮೂಲ - ಮಂಗಲೇಶ್ ದಬ್ರಾಲ್ 

ಕನ್ನಡಕ್ಕೆ - ಕಾಜೂರು ಸತೀಶ್ 

Sunday, February 2, 2025

ಕೆಂಪು ಹಸ್ತಗಳು



ಮೊದಲ ಬಾರಿಗೆ 
ನೋಡಿದೆ ನಾನು 
ಭ್ರಮರವೊಂದು 
ಕಮಲವಾಗುವುದನ್ನು 
ಕಮಲವು 
ನೀಲ ಕೊಳವಾಗುವುದನ್ನು 
ಮತ್ತೆ ಈ ನೀಲ ಕೊಳ 
ಅಸಂಖ್ಯ ಬಿಳಿಹಕ್ಕಿಗಳಾಗುವುದನ್ನು 
ಮತ್ತೆ ಬಿಳಿಹಕ್ಕಿಗಳೆಲ್ಲ 
ಕೆಂಪು ಆಗಸವಾಗುವುದನ್ನು 
ಆಮೇಲೆ ಆಗಸವು ಬದಲಾಗಿ 
ನಿನ್ನ ಕೆಂಪು ಕರಗಳಲ್ಲಿ ಹನಿಯುವುದನ್ನು 
ಮತ್ತು ಈ ನನ್ನ ಕಣ್ಣುಗಳನ್ನು ಮುಚ್ಚಿದಾಗ 
ಕಣ್ಣಹನಿಗಳೆಲ್ಲ ಕನಸಾಗಿ ಬದಲಾಗುವುದನ್ನು 

ನೋಡಿದೆ ನಾನು ಮೊದಲ ಬಾರಿ ನೋಡಿದೆ 
*


ಹಿಂದಿ ಮೂಲ -ಸರ್ವೇಶ್ವರ ದಯಾಳ್ ಸಕ್ಸೇನಾ 

ಕನ್ನಡಕ್ಕೆ - ಕಾಜೂರು ಸತೀಶ್ 


Thursday, January 30, 2025

ನಡು

ಸುಡುವ ಒಂದು ರಾತ್ರಿ ಬುದ್ಧ ಯಾರಿಗೂ ಹೇಳದೆ ಮೊಬೈಲ್ ಸ್ವಿಚ್ ಆಫ್ ಮಾಡಿ ಕಾಡಿಗೆ ತೆರಳಿದ.

ಕಾಡಿನಲ್ಲಿ ತೇಗದ ಮರಗಳನ್ನು ಮಾತ್ರ ನೆಡಲಾಗಿತ್ತು.

ಧ್ಯಾನಕ್ಕೆ ಒಂದು ಮರವೂ ಸಿಗದಿದ್ದಾಗ ಬುದ್ಧ ಯೋಚಿಸಿದ : ಪ್ರಗತಿಪರರು ಮರ, ಪ್ರಾಣಿ ಎಂದರೆ ಉರಿದು ಬೀಳುತ್ತಾರೆ. 'ಮನುಷ್ಯರು ಅಷ್ಟೇ' ಎನ್ನುತ್ತಾರೆ. ಅವರ ವಿರೋಧಿಗಳು 'ದೇವರು ಅಷ್ಟೇ' ಎನ್ನುತ್ತಾರೆ. ಇವರಿಬ್ಬರೂ ಬದುಕಬೇಕಾದರೆ ನೆರಳು ಕೊಡುವ ಮರ ಬೇಕು ಎಂದು ನಾನು ಹೇಳಿದರೆ ನಡುವಿನಲ್ಲಿ ನನ್ನನ್ನು ನಿಲ್ಲಿಸಿ ಕಲ್ಲು ತೂರುತ್ತಾರೆ.

ಹೀಗೆ ಹೇಳಿ ಒಂದು ಅರಳೀ ಗಿಡವನ್ನು ನೆಟ್ಟು ಮತ್ತೆ ಅರಮನೆಗೆ ಹಿಂತಿರುಗಿದ.

ಎಲ್ಲಿಗೆ ಹೋಗಿದ್ದೆ ಎಂದು ಯಾರೂ ಕೇಳಲಿಲ್ಲ.
*
ಕಾಜೂರು ಸತೀಶ್

ಎಚ್ಚರ

ಬುದ್ಧ ಮಧ್ಯರಾತ್ರಿ ಎದ್ದ.

ರಾಹುಲ ದೀಪ ಆರಿಸಿ ಕಂಬಳಿ ಹೊದ್ದು ಅದರ ಒಳಗಿಂದ ಮೊಬೈಲ್ ನೋಡುತ್ತಾ ಮಲಗಿದ್ದ.

ಯಶೋಧರೆ ಹೊರಗಿನ ಡಿಜೆ ಸದ್ದು ತಡೆಯಲಾಗದೆ ಕಿವಿಗೆ ಹತ್ತಿ ಹಾಕಿ ಮಲಗಿದ್ದಳು.

ಬುದ್ಧ ಮತ್ತೆ ಮಲಗಿದ.
*
ಕಾಜೂರು ಸತೀಶ್

Tuesday, January 28, 2025

ಪರೀಕ್ಷೆ

ಪರೀಕ್ಷೆಯಲ್ಲಿ ತಿಮ್ಮ ಅಪಾರವಾಗಿ ಓದಿದ್ದ. ಆದರೆ, ಪ್ರಶ್ನೆಗಳು ಇಂತಿದ್ದವು :
👉ರಾಜನ ಮೊದಲ ಮಗ ಹುಟ್ಟಿದ್ದೆಲ್ಲಿ?
👉ರಾಜನ ಕೊನೆಯ ಮಗನಿಗೆ ಪಟ್ಟಾಭಿಷೇಕ ಮಾಡಿದ ವರ್ಷ?

ತಿಮ್ಮ ಈ ರಾಜನ ಬಗ್ಗೆ ದಿನಗಟ್ಟಲೆ ಮಾತನಾಡುವ ಸಾಮರ್ಥ್ಯ ಪಡೆದಿದ್ದ. ಅವನಲ್ಲಿ ರಾಜನ ಆಳ್ವಿಕೆಯ ಕುರಿತ ವಿಭಿನ್ನ ಒಳನೋಟಗಳಿದ್ದವು. ಆದರೆ, ದಿನಾಂಕ ಮತ್ತು ಹುಟ್ಟೂರಿನ ಹೆಸರನ್ನು ಅವನು ತಲೆಗೆ ಹಾಕಿಕೊಂಡಿರಲಿಲ್ಲ.
*
✍️ಕಾಜೂರು ಸತೀಶ್

Monday, January 27, 2025

ಶಿಕ್ಷಣ

ಹಳ್ಳಿ ಮೇಷ್ಟ್ರು ಎಷ್ಟು ಕೇಳಿಕೊಂಡರೂ ಪೋಷಕರು ಶಾಲೆಗೆ ಬರುತ್ತಿರಲಿಲ್ಲ.

ಒಂದು ದಿನ ಮೇಷ್ಟ್ರು ರಾಜಕಾರಣಿಯೊಬ್ಬರನ್ನು ಶಾಲೆಗೆ ಆಹ್ವಾನಿಸುವುದಾಗಿಯೂ, ಆ ದಿನ ತಪ್ಪದೆ ಬರಬೇಕೆಂದೂ ಮನೆಮನೆಗೆ ಹೋಗಿ ಪೋಷಕರಿಗೆ ಹೇಳಿಬಂದರು.

ಕಾರ್ಯಕ್ರಮದ ದಿನ ಬಹುತೇಕ ಪೋಷಕರು ಬಂದಿದ್ದರು. ಮೇಷ್ಟ್ರುಒಂದು ಹಾಳೆ ಕೊಟ್ಟು 'ನಿಮ್ಮ ಹೆಸರು ಮತ್ತು ನಿಮ್ಮ ಮಕ್ಕಳು ಓದುತ್ತಿರುವ ತರಗತಿಯನ್ನು ಬರೆಯಿರಿ' ಎಂದರು.

ಕೆಲವರು ಅವರ ಮಕ್ಕಳು ಓದುತ್ತಿರುವ ತರಗತಿಯನ್ನು ಸರಿಯಾಗಿಯೇ ಬರೆದಿದ್ದರು!
*
ಕಾಜೂರು ಸತೀಶ್

Sunday, January 26, 2025

ಅವಧಿ

ಶಿಕ್ಷಕರೆಲ್ಲರನ್ನೂ ಕರೆಸಿ ಒಂದು ಹಾಳೆ ನೀಡಿ ಶಾಲೆಯ 8 ಅವಧಿಗಳು ಮತ್ತು ಅದರ ಸಮಯವನ್ನು ಬರೆಯಲು ತಿಳಿಸಲಾಯಿತು.

ಕೆಲವರು ಸರಿಯಾಗಿ ಬರೆದಿದ್ದರು. ಆದರೆ ಕಡೆಯ ಅವಧಿ ಪೂರ್ಣಗೊಳ್ಳುವ ಸಮಯವನ್ನು ಯಾರೂ ತಪ್ಪಾಗಿ ಬರೆದಿರಲಿಲ್ಲ.
*
ಕಾಜೂರು ಸತೀಶ್


Wednesday, January 22, 2025

ಬಯಕೆ




ಒಂದು ಸಟ್ಟುಗ ಹಿಡಿದು
ಆಕಾಶವನ್ನು ತಿರುವಿಹಾಕುತ್ತೇನೆ
ತಳಹಿಡಿದು ಕಪ್ಪಾದ ಹಗಲನ್ನು
ರಾತ್ರಿಯೆಂದು ಹೆಸರಿಟ್ಟು ಬಡಿಸುತ್ತೇನೆ

ಬೆಳದಿಂಗಳನ್ನು
ತೆಂಗಿನ ಚಟ್ನಿಯ ಹಾಗೆ
ಮೇಲೆ ಹರಡುತ್ತೇನೆ

ಖಾರ ಚಟ್ನಿ ತಿನ್ನುವ ಆಸೆಯಾಗುತಿದೆ
ಸಮುದ್ರದಲ್ಲಿ ಬೆರಳನ್ನದ್ದಿ 
ಮುಳುಗುವ ಸೂರ್ಯನನ್ನು 
ಮೇಲಕ್ಕೆತ್ತಿ ಕರಕರ ತಿನ್ನುತ್ತೇನೆ 

ಹಾ! ಖಾರವಾಗಿ 
 ಕಣ್ಣಿಂದ ನೀರಿಳಿಯುತ್ತಿದೆ 
ನನ್ನ ಹೊಟ್ಟೆಯಲ್ಲಿ 
ಕಾಡು ಮೇಡು ಬೆಟ್ಟ ಗುಡ್ಡ 
ಸುಮುದ್ರಗಳೆಲ್ಲ ಬೆಳಕು ಬೆಳಕೆಂದು 
ಚೀರಾಡುತ್ತಿದೆ 

ಈ ರಾತ್ರಿ 
ಪ್ರಪಂಚ ನನ್ನ ಹೊಟ್ಟೆಯಲ್ಲಿ 
ತಣ್ಣಗೆ ಮಲಗಿರಲಿ 
*


ಮಲಯಾಳಂ ಮೂಲ- ಸ್ಮಿತಾ ಶೈಲೇಶ್ 

ಕನ್ನಡಕ್ಕೆ - ಕಾಜೂರು ಸತೀಶ್ 

Tuesday, January 21, 2025

ಕೆಕೆಜಿ ಸರ್ ಗೆ ಅಶ್ರುತರ್ಪಣ

2006ರಲ್ಲಿ ಕಾಜೂರು ಶಾಲೆಯ ಸುವರ್ಣ ಮಹೋತ್ಸವವಿತ್ತು. ಅದರ ಅಂಗವಾಗಿ ಶಾಲೆಯಲ್ಲಿ ಓದಿದ ಆಯ್ದ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವಿತ್ತು. ಪಟ್ಟಿಯಲ್ಲಿ ಕೆ ಕೆ ಗಂಗಾಧರನ್ ಸರ್ ಅವರ ಹೆಸರನ್ನು ನೋಡಿದ ನನಗೆ ಖುಷಿಯೋ ಖುಷಿ (ಅದುವರೆಗೆ ಅವರನ್ನು ನೋಡಿರಲಿಲ್ಲ, ಆ ಸಂದರ್ಭದಲ್ಲಾದರೂ ನೋಡಬಹುದಲ್ಲಾ ಎಂಬ ಖುಷಿ ). ಆ ದಿನ ಅವರನ್ನು ನೋಡಿದೆ. ಅವರ ಹಸ್ತಾಕ್ಷರ ಇರುವ ಪರಿಚಯ ಪತ್ರವನ್ನು ಪಡೆದೆ
(ಮಾತನಾಡಿಸಲಿಲ್ಲ!).







ಆದರೆ ಕೆಕೆಜಿ ಸರ್ ಗೆ ನನ್ನ ಪರಿಚಯವಿರಲಿಲ್ಲ. 2007ರಿಂದ ನಿರಂತರವಾಗಿ 'ತುಷಾರ' ಮಾಸಪತ್ರಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನನ್ನ ಹೆಸರು ನೋಡಿ, ಅವರ ಸಂಬಂಧಿ(ಅನು ಅಕ್ಕ )ಯೊಬ್ಬರಿಗೆ ಕರೆ ಮಾಡಿ ನನ್ನ ಬಗ್ಗೆ ವಿಚಾರಿಸಿಕೊಂಡರಂತೆ. ಅವರ ಪರಿಚಯವನ್ನು 'ಗಡಿನಾಡ ಸಂಚಾರಿ' ಪತ್ರಿಕೆಯಲ್ಲಿ ಬರೆದ ಮೇಲೆ ಆಗಿಂದಾಗ್ಗೆ ನನಗೆ ಕರೆ ಮಾಡುತ್ತಿದ್ದರು. ನಾನು ನಿರಂತರವಾಗಿ ಅವರಿಗೆ sms ಕಳಿಸುತ್ತಿದ್ದೆ. ದಿನದ ಮೊದಲ ರಿಪ್ಲೈ ಅವರದೇ ಆಗಿರುತ್ತಿತ್ತು. English ಭಾಷೆಯಲ್ಲಿ ಉತ್ತಮ ಹಿಡಿತ ಅವರಿಗಿತ್ತು. ಬೆಳಿಗ್ಗೆ ನಾಲ್ಕರ ಹೊತ್ತಿನಲ್ಲೆಲ್ಲಾ ಅವರ ಅನುವಾದ ಕಾರ್ಯವು ಆರಂಭವಾಗುತ್ತಿತ್ತು.




ಕಾಜೂರನ್ನು ಎದೆಯೊಳಗೆ ಹೊತ್ತು ಅಲೆಯುವ ಕೆಕೆಜಿ ಸರ್ ಇಲ್ಲಿನ ಹಲವು ಸಂಗತಿಗಳ ಬಗ್ಗೆ ನನಗೆ ಹೇಳಿದ್ದರು. ಅವು ಪುನರಾವರ್ತನೆ ಆಗುತ್ತಿದ್ದರೂ ಹೊಸತೆಂಬಂತೆ ಅದನ್ನು ವಿವರಿಸುತ್ತಿದ್ದರು. ಕೆಲವು ಸಂಗತಿಗಳನ್ನು ಬಹಿರಂಗಗೊಳಿಸಲು ಆಗುವುದಿಲ್ಲ ಎನ್ನುತ್ತಲೇ ಅವುಗಳನ್ನು ನನಗೆ ಹೇಳುತ್ತಿದ್ದರು. ಶಾಲೆಗೆ ಹೋಗುವಾಗ ಗೆಳೆಯರಿಗೆ ತಾವು ಮುಂದೆ ಹೋಗಿರುವುದನ್ನು ತಿಳಿಸಲು ದೊಡ್ಡ ಕಲ್ಲಿಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಪ್ರಸಂಗದ ಬಗ್ಗೆ ಹೇಳಿದ್ದರು!( ಆ ಕಲ್ಲು ಈಗ ಏನಾಗಿದೆ ಎನ್ನುವ ವಿವರವನ್ನು ಇಲ್ಲಿ ಪ್ರಸ್ತಾಪಿಸಲಾರೆ!)



ಅನ್ಯಭಾಷಿಗರಾಗಿ ಇಲ್ಲಿ ಅನುಭವಿಸಿದ ಶೋಷಣೆಗಳು ಅವರ ಎದೆಯೊಳಗೆ ಹಾಗೇ ಬೀಡುಬಿಟ್ಟಿದ್ದವು. ಅದನ್ನು ಎದುರಿಸಲು ಅವರು ಬಳಸಿದ ಅಸ್ತ್ರವೇ ಬರೆಹ. ಪತ್ರಕರ್ತನಾಗುವ ಅವಕಾಶ ತಪ್ಪಿದ ಮೇಲೆ ಕೊಥಾರಿ ಕಾಫಿ ಸಂಸ್ಥೆಯಲ್ಲಿ ವೃತ್ತಿಬದುಕನ್ನು ಆರಂಭಿಸಿ , ರೈಲ್ವೇ ಮೇಲ್ ಸರ್ವೀಸ್ ನಲ್ಲಿ ಬದುಕನ್ನು ಗಟ್ಟಿಗೊಳಿಸಿದ ಕೆಕೆಜಿ ಸರ್, ವೃತ್ತಿಯನ್ನು ಮಾಡುತ್ತಲೇ ಅನುವಾದವನ್ನು ಶ್ರದ್ಧೆಯಿಂದ ರೂಢಿಸಿಕೊಂಡರು . ಜನಪ್ರಿಯ ಸಾಹಿತ್ಯಕ್ಕೂ ಕೈಹಾಕಿ ಮತ್ತೊಂದು ಬಗೆಯ ಓದುಗ ವಲಯವನ್ನೂ ತಲುಪಿದರು(ಈ ಬಗ್ಗೆ ಹಲವರು ನನ್ನೊಂದಿಗೆ ತಕರಾರನ್ನು ಹಂಚಿಕೊಂಡಿದ್ದರು- ಮುಖ್ಯವಾಗಿ ಏಟುಮಾನೂರ್   ಶಿವಕುಮಾರ್‌ ಅವರ 'ಅಷ್ಟಮಂಗಲ'ದ ಬಗ್ಗೆ )


ಕೆಕೆಜಿ ಸರ್ ಅವರನ್ನು ನಾನು ನೋಡಿರುವುದು ಮೂರು ಬಾರಿ. 2006ರ ಫೆಬ್ರವರಿ 20 , 2015ರ ಡಿಸೆಂಬರ್ ತಿಂಗಳಿನಲ್ಲಿ ಮತ್ತು 2018ರ ಜುಲೈ 26ರಂದು. ಅವರನ್ನು ಮುಖಾಮುಖಿಯಾಗಿ ಮಾತನಾಡಿಸಿದ್ದು ಮೂರನೇ ಬಾರಿ- 2018ರ ಜುಲೈ 26, ಆಲೂರು ಸಿದ್ದಾಪುರ ಮೊರಾರ್ಜಿ ಶಾಲೆಯಲ್ಲಿ ನಡೆದ ಸಾಹಿತ್ಯ ತಾಲೂಕು ಸಮ್ಮೇಳನದಲ್ಲಿ!


ಕೆಕೆಜಿ ಸರ್ ಅಧ್ಯಯನ ನಿರತರಾಗಿದ್ದರಿಂದ ವೈಚಾರಿಕವಾಗಿ ಖಚಿತ ನಿಲುವನ್ನು ಹೊಂದಿದ್ದರು. ಮೌಢ್ಯವನ್ನು ವಿರೋಧಿಸುತ್ತಿದ್ದರು. ಶೋಷಣೆಗೆ ಒಳಗಾದ ಜೀವವು ಜೀವಪರವಾಗಿರುತ್ತದೆ- ಕೆಕೆಜಿ ಸರ್ ಅಂಥವರು. ಶ್ರೀಮಂತರೊಬ್ಬರ ಮನೆಯ ಅಂಗಳವನ್ನು ಪ್ರವೇಶ ಮಾಡಿದ್ದಕ್ಕೆ ಅಲ್ಲಿಂದ ಬೈದು, ಬಂದೂಕು ತೋರಿಸಿ ಓಡಿಸಿದ್ದು, ಮೇಷ್ಟ್ರು -ಹರಿದ ಚಡ್ಡಿಯ ಮೇಲೆ ಹೊಡೆದದ್ದು, ಅದು ಮತ್ತಷ್ಟೂ ಹರಿದದ್ದು , ಶ್ರೀಮಂತ ವ್ಯಕ್ತಿಯೊಬ್ಬರು ಊರಿನವರ ಹಣ ನುಂಗಿದ್ದಕ್ಕೆ ಪತ್ರಿಕೆಯಲ್ಲಿ ( ಬೇರೆಯವರ ಹೆಸರಿನಲ್ಲಿ) ಬರೆದು ಪ್ರತಿಭಟನೆಯ ಸಂಚಲನ ಮೂಡಿಸಿದ್ದು...ಎಲ್ಲವೂ ಅವರನ್ನು ಇನ್ನಿಲ್ಲದ ಹಾಗೆ ಕಾಡುತ್ತಿದ್ದವು.


' ಸತೀಶ್, ನೀವು ಬರೆಯುತ್ತಿರುವ ವಿಷಯ ನಿಮ್ಮ ಪಕ್ಕದ ಮನೆಯವರಿಗೆ ಗೊತ್ತಾ?' ಎನ್ನುತ್ತಿದ್ದರು. ಇಲ್ಲಿನ ಪರಿಸ್ಥಿತಿ ಅಷ್ಟು ಸೂಕ್ಷ್ಮವಾಗಿ ಅವರಿಗೆ ಅರಿವಿತ್ತು. ಕಲೆಯನ್ನು ಹಣದಿಂದ ತೂಗಿ ನೋಡುವ ಊರು ಎನ್ನುತ್ತಿದ್ದರು. ಇಲ್ಲಿನ ಹಲವರ ಬಗ್ಗೆ ಮಾತನಾಡುತ್ತಿದ್ದರು. 'ಸ್ಮಿತಾ, ಸುನೀತಾ, ಸಹನಾ, ಸಂಗೀತಾ, ರಮ್ಯಾ,ಮೋಹನ್ ದಾಸ್, ಉಳ್ಳಿಯಡ ಪೂವಯ್ಯ, ರೇವತಿ ಪೂವಯ್ಯ, ಟಿ ಪಿ ರಮೇಶ್, ಲೋಕೇಶ್ ಸಾಗರ್, ಹಾತಿ, ಮಣಿ, ಪಪ್ಪನ್, ಮಾಧವನ್, ದೀಪಕ್, ರಾಘವನ್, ಬಾಲಕೃಷ್ಣ' ಇವರನ್ನೆಲ್ಲಾ ವಿಚಾರಿಸುತ್ತಿದ್ದರು. ಇವರ ಬದುಕಿನ/ಬರೆಹದ ಹಲವು ಆಯಾಮಗಳನ್ನು ವಿಶ್ಲೇಷಿಸುತ್ತಿದ್ದರು-ಅವೆಲ್ಲವೂ ಪ್ರಾಮಾಣಿಕವಾಗಿರುತ್ತಿದ್ದವು.


ಡಾ.ಅಶೋಕ್ ಕುಮಾರ್ (ನಾನು ತುಂಬಾ ಗೌರವಿಸುವ ವ್ಯಕ್ತಿ ), ಕೆ ಕೆ ನಾಯರ್, ಕೋವರ್ಕೊಲ್ಲಿ ಕರುಣಾಕರ, ನಾದಾ, ಮೋಹನ್ ಕುಂಟಾರ್, ಪಾರ್ವತಿ ಐತಾಳ್, ಸಿ ರಾಘವನ್, ತೇರಳಿ ಶೇಖರ್ , ಕೆ ವಿ ಕುಮಾರನ್, ಪಯ್ಯನ್ನೂರು ಕುಂಞಿರಾಮನ್‌, ಬಿ ಕೆ ತಿಮ್ಮಪ್ಪ, ಸುಷ್ಮಾ ಶಂಕರ್ ಮೊದಲಾದ ಅನುವಾದಕರ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಿದ್ದರು.


'ಪ್ರಜಾವಾಣಿ' ಬಳಗದ ಮೇಲೆ ಅವರಿಗೆ ಅಭಿಮಾನವಿತ್ತು(ನನಗದು ಪೂರ್ವಗ್ರಹದ ಹಾಗೆ ಅನಿಸುತ್ತಿತ್ತು . ನಾನು ಆ ಕುರಿತು ಅವರೊಂದಿಗೆ ಚರ್ಚಿಸಲಿಲ್ಲ). ದಶಕದ ಹಿಂದೆ ವಿಜಯ ಕರ್ನಾಟಕಕ್ಕೂ ನನ್ನಿಂದ ಬರೆಸಿದರು. ಸಂಕ್ರಮಣ ದಲ್ಲಿ ಪ್ರಕಟಗೊಂಡ ಕವಿತೆಯ ಸಾಲಗಳನ್ನು ಅವರು ನೆನಪಿಟ್ಟುಕೊಂಡು ಉಲ್ಲೇಖಸುತ್ತಿದ್ದರು (ನನ್ನ ಮೇಲೆ ಅಷ್ಟು ಪ್ರೀತಿ ಇತ್ತು ಅವರಿಗೆ).


ಸಾಹಿತಿ/ಸಾಹಿತ್ಯದ ಮೇಲೆ ಇರುವ ಪತ್ರಿಕಾ ರಾಜಕಾರಣದ ಸೂಕ್ಷ್ಮ ಅನುಭವಿರುವ ನನಗೆ ಪತ್ರಿಕೆಗಳಿಗೆ ಬರೆಯುವುದು 'ಮಾರಿಕೊಳ್ಳುವುದು' ಎಂದೇ ಅನಿಸಿಬಿಟ್ಟಿತ್ತು ! ಅವರು ಎಷ್ಟು ಹೇಳಿದರೂ ನಾನು ನನ್ನ ಪಾಡಿಗೆ ಏನೇನೋ ಗೀಚುತ್ತಾ ಓದುತ್ತಾ ಇರತೊಡಗಿದೆ(ಅವರಿಗೆ ಬೇಸರ ಬರಿಸುವಷ್ಟು ಬದಲಾಗದೆ ಉಳಿದೆ ). ನಿಮ್ಮ ಹಾಗೆ ಇದ್ದರೆ ಸಾಹಿತ್ಯ ಲೋಕದಲ್ಲಿ ಯಾರೂ ಗಮನಿಸುವುದಿಲ್ಲ ಎನ್ನುತ್ತಿದ್ದರು.

*
"ಸತೀಶ್ ನಿಮಗೆ ___ ಗೊತ್ತಾ?
ಗೊತ್ತು ಸರ್. ತುಂಬಾ ಚೆನ್ನಾಗಿ ಬರೀತಾರೆ ಸರ್.
ನಿಮಗೆ ಒಂದು ಸನ್ಮಾನ ಇದೆ ಬನ್ನಿ ಸರ್ ಅಂತ ಕರೆದ್ರು. ಸನ್ಮಾನಕ್ಕೆ ಹಣ ಕೊಡ್ಬೇಕಂತೆ!
ಸರ್ ಅವ್ರು ಕೇಳಿದ್ದಾ?
ಹೌದು
ಹಾಗೆ ಬರೆಯುವವರು ಹೀಗೆಲ್ಲಾ ಕೇಳ್ತಾರಾ ಸರ್?
ನಿಮಗೆ ಇದೆಲ್ಲಾ ಗೊತ್ತಾಗಲ್ಲ ಸತೀಶ್..."
*


ಕಳೆದ ಒಂದೆರಡು ವರ್ಷಗಳಿಂದ ಮೊಬೈಲ್ ಕರೆಗಳು ನರಕದ ಹಾಗೆ ಅನ್ನಿಸಿ ಅದರಿಂದ ದೂರ ಉಳಿದಿದ್ದೆ. ಹಲವು ಮಂದಿ ಕರೆಮಾಡಿ ನಿರಾಶರಾಗಿದ್ದವರ ಪಟ್ಟಿಯಲ್ಲಿ ಕೆಕೆಜಿ ಸರ್ ಕೂಡ ಒಬ್ಬರಾಗಿದ್ದರು(ಸತೀಶ್ ಫೋನಿಗೆ ಸಿಗುವುದೇ ಇಲ್ಲ ಎಂದು ಹೇಳಿದ್ದರಂತೆ).
ಕಡೆಯ ಬಾರಿ ಕರೆಮಾಡಿದಾಗ ಅವರ ಧ್ವನಿ ಕ್ಷೀಣಿಸಿತ್ತು. ನಾನು ಬರೆಯುವುದನ್ನೂ ಓದುವುದನ್ನೂ ಬಿಟ್ಟುಬಿಟ್ಟೆ ಸತೀಶ್ ಎಂದರು. ತಮ್ಮ ಅನಾರೋಗ್ಯದ ಬಗ್ಗೆ ಹೇಳಿಕೊಂಡರು. ದುಃಖವಾಯಿತು. ಗಂಟೆಗಟ್ಟಲೆ ಮಾತನಾಡುತ್ತಿದ್ದ ಕೆಕೆಜಿ ಸರ್ ಹತ್ತು ನಿಮಿಷಕ್ಕೇ ಫೋನಿಟ್ಟರು! 'ಆಥರ್ಸ್ ಕಾಪಿ' ಅನುವಾದದ ಬಗ್ಗೆ ಹೇಳಬೇಕೆಂದುಕೊಂಡದ್ದು ನನ್ನೊಳಗೇ ಉಳಿಯಿತು.


ಕೆಕೆಜಿ ಸರ್ ಬಾಡಿಗೆ ಮನೆಯಲ್ಲಿಯೇ ಇದ್ದರು.ಇಷ್ಟು ವರ್ಷ ಕೆಲಸ ಮಾಡಿ ಇನ್ನೂ ಈ ಪುಟ್ಟ ಬಾಡಿಗೆ ಮನೆಯಲ್ಲೇ ಇದ್ದೇನೆ ಸತೀಶ್ ಎಂದು ಆಗ ಅವರಿಗಿದ್ದ ಹಣ ಮಾಡಬಹುದಾದ ಅವಕಾಶದ ಬಗ್ಗೆ ಹೇಳಿದ್ದರು. ಕಡೆಗೆ ತಾವು ವೃತ್ತಿಯಲ್ಲಿದ್ದಾಗ ರೆಜಿಸ್ಟರ್ ಮಾಡಿಸಿದ್ದ ಹೌಸಿಂಗ್ ಬೋರ್ಡ್ ಸೈಟಿನಲ್ಲಿ ಮನೆಕಟ್ಟಿಸಿ ಆಮಂತ್ರಣ ಕಳಿಸಿದ್ದರು. ಮಗನ ಮದುವೆಗೂ ಆಮಂತ್ರಣವಿತ್ತು. ಇಲ್ಲಿನ ಪರಿಸ್ಥಿತಿಯ ಅರಿವಿರುವ ಅವರು ಬರಲಿಲ್ಲವೆಂದು ಬೇಸರಿಸಿಕೊಳ್ಳಲಿಲ್ಲ. ಅವರ ಮೊದಲ ಕೃತಿ ಪ್ರಕಟಗೊಂಡಿದ್ದು 2009ರಲ್ಲಿ, ನಿವೃತ್ತಿಯ ಅನಂತರ!

ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಅನುವಾದಿಸಬೇಕು ಸತೀಶ್. ಮೂಲ ಪದವನ್ನೇ ಇಡುವುದು, ಅಡಿ ಟಿಪ್ಪಣಿ ಕೊಡುವುದು- ಇವು ಓದುಗನಿಗೆ ರಸಭಂಗ ಉಂಟು ಮಾಡುತ್ತದೆ ಎನ್ನುತ್ತಿದ್ದರು. ತಾವು ಮೊದಮೊದಲು ಮಾಡುತ್ತಿದ್ದ ತಪ್ಪುಗಳನ್ನು ಹೇಳುತ್ತಿದ್ದರು. ಕಮಲಾದಾಸ್, ಲಂಕೇಶ್, ವಾಸುದೇವನ್ ನಾಯರ್ ಮೊದಲಾದ ಲೇಖಕರ ಒಡನಾಟವನ್ನು ಹೇಳಿಕೊಳ್ಳುತ್ತಿದ್ದರು.
*


ಮೊನ್ನೆ, ಜನವರಿ 19ಕ್ಕೆ ಕೆಕೆಜಿ ಸರ್ ನಮ್ಮೆಲ್ಲರಿಗೆ ವಿದಾಯ ಹೇಳಿ ಹೊರಟರು. ಅವರು ಬರೆದು ಅಮರರಾದರು. ಅವರ ಅನುಭವಗಳನ್ನೆಲ್ಲ ಮೊಗೆಮೊಗೆದು ನಮ್ಮೊಳಗೆ ತುಂಬಿ ಹೊರಟರು -ಅಮರರಾದರು.

ಅಶ್ರುತರ್ಪಣ ಸರ್🙏
*

✍️ಕಾಜೂರು ಸತೀಶ್








Sunday, January 19, 2025

ಶ್ರೀಮಂತರು

ಜೋರು ಮಳೆಗೆ ಎಲ್ಲವೂ ಕೊಚ್ಚಿಕೊಂಡು ಹೋಯಿತು.

ರೈತರು, ಕೂಲಿ ಕಾರ್ಮಿಕರು ನಿರಾಶ್ರಿತರ ಶಿಬಿರವನ್ನು ಸೇರಿದರು.

ಶ್ರೀಮಂತರನ್ನು ಅವರ ನೆಂಟರು ಬಂದು ತಮ್ಮ ಮನೆಗೆ ಕರೆದುಕೊಂಡು ಹೋದರು.
*
ಕಾಜೂರು ಸತೀಶ್

ಮೀಸಲಾತಿ

"ಮೀಸಲಾತಿ ಎಂದರೇನು?" ಕೇಳಿದ ವಿದ್ಯಾರ್ಥಿ.

"ಅವರೆಲ್ಲಾ ಬೆಂಚಿನಲ್ಲಿ ಕುಳಿತು ಪಾಠಕೇಳುವಾಗ ಇವನೊಬ್ಬ ಮೂಲೆಯಲ್ಲಿ ಗೋಣಿಚೀಲ ಹಾಸಿ ಪಾಠಕೇಳುತ್ತಿದ್ದನು"
ಗುರುಗಳು ಹೇಳಿ ಮುಗಿಸಿದರು.
*
ಕಾಜೂರು ಸತೀಶ್

ಪ್ರೀತಿ

ಇವಳು ಬಾಲ್ಯದ ಗೆಳೆಯನನ್ನು ಪ್ರೀತಿಸುತ್ತಿದ್ದಳು.

ಅವನು ಬಾಲ್ಯದ ಗೆಳತಿಯನ್ನು ಪ್ರೀತಿಸುತ್ತಿದ್ದನು.

ಇಬ್ಬರಿಗೂ ಮದುವೆಯಾಗಿ ಎರೆಡೆರಡು ಮಕ್ಕಳಿದ್ದರು.
*
ಕಾಜೂರು ಸತೀಶ್ 

ಮಳೆ

ಮಳೆ ಸುರಿಯಲಾರಂಭಿಸಿತು.

ಭೂಮಿ ಹೇಳಿತು : "ನೀನೇನೋ ಸುರಿಸಿ ಹೊರಟುಬಿಡುತ್ತೀಯಾ. ಆಮೇಲೆ ಹೊತ್ತು ಹೆರಬೇಕಾದವಳು ನಾನು. ಬಿಸಿಲಲ್ಲಿ ಬೆಂದು, ಚಳಿಯಲ್ಲಿ ನೊಂದು ನರಳಬೇಕಾದವಳು ನಾನು. ಹೀಗೆ ಊರು ಬಿಟ್ಟು ಹೋಗಿ ಯಾವಾಗಲೋ ಬಂದು 'ನಾನು ಅಪ್ಪ' ಎಂದರೆ ಯಾರು ಬೆಲೆ ಕೊಡುತ್ತಾರೆ?"
*
ಕಾಜೂರು ಸತೀಶ್

Saturday, January 18, 2025

ಮಹಡಿ

ಹಣಕಾಸು ಸಚಿವರ ಮನೆಯು 30ನೇ ಮಹಡಿಯಲ್ಲಿತ್ತು. ಅವರ ಹುಟ್ಟುಹಬ್ಬದ ಕೇಕ್ ಚೂರೊಂದು ಅವರ ಆ ಮನೆಯಲ್ಲಿ ಬಿದ್ದಿತ್ತು.

ಇರುವೆಗಳ ಸಾಲೊಂದು ಅಲ್ಲಿಗೆ ತೆರಳಿ ಅದನ್ನು ತಿಂದು ಖಾಲಿ ಮಾಡಿದವು.
*

ಕಾಜೂರು ಸತೀಶ್

Thursday, January 16, 2025

ಏಕಲವ್ಯ

ಗುರುಗಳು ಏಕಲವ್ಯನನ್ನು ಮರಕ್ಕೆ ಕಟ್ಟಿಹಾಕಿ ಶಿಷ್ಯಂದಿರಲ್ಲಿ ''ನಿಮಗೇನು ಕಾಣಿಸುತ್ತಿದೆ ಮಕ್ಕಳೇ'' ಕೇಳಿದರು.

ಮಂತ್ರಿಯ ಮಗ ಹೇಳಿದ "ನನಗೆ ಅವನ ಕಿಡ್ನಿ ಕಾಣಿಸುತ್ತಿದೆ ಗುರುಗಳೇ"

"ಭೇಷ್" ಗುರುಗಳೆಂದರು.

"ನನಗವನ ಬಿಲ್ಲು ಕಾಣಿಸುತ್ತಿದೆ ಗುರುಗಳೇ", ಅಧಿಕಾರಿಯ ಮಗ ಹೇಳಿದ.

ಭೇಷ್" ಗುರುಗಳೆಂದರು.

"ನನಗವನ ಎರಡು ಹೆಬ್ಬೆರಳುಗಳಲ್ಲಿ ಒಂದು ಮಾತ್ರ ಕಾಣಿಸುತ್ತಿದೆ ಗುರುಗಳೇ" ಕೂಲಿಕಾರ್ಮಿಕನ ಮಗ ಹೇಳಿದ.

ಗುರುಗಳು ಕೆಂಡಾಮಂಡಲರಾದರು!
*
ಕಾಜೂರು ಸತೀಶ್

ಮಾತು

ಮಳೆಗಾಲ. ಜೋರು ಮಳೆ.

ಬಾವಲಿಗಳೆರಡು ಎಲ್ಲಿ ಜೋತು ಹಾಕಿಕೊಳ್ಳುವುದೆಂದು ಯೋಚಿಸಿದವು.

ಕಡಿಮೆ ಮಾತನಾಡುವ ಜನರಿರುವ ಊರನ್ನು ಪತ್ತೆ ಹಚ್ಚಿ ಅಲ್ಲಿನ ವಿದ್ಯುತ್ ತಂತಿಯ ಮೇಲೆ ಜೋತಾಡಲು ನಿರ್ಧರಿಸಿದವು.
*
ಕಾಜೂರು ಸತೀಶ್

ಕಪ್ಪು

ತಿಮ್ಮ ಬೆಳದಿಂಗಳ ರಾತ್ರಿಯಲ್ಲಿ ಕಪ್ಪು ವಸ್ತ್ರ ಧರಿಸಿ ನಡೆಯಲಾರಂಭಿಸಿದ.

ಜನ ಕೇಳಿದರು 'ನಿನಗೆ ಕತ್ತಲೆ ಎಂದರೆ ಇಷ್ಟವೇ?'

'ಇಲ್ಲ ನನಗೆ ಬೆಳಕೆಂದರೆ ಇಷ್ಟ. ನಿಮಗದು ತಿಳಿಯಲಿ ಎಂದೇ ಕಪ್ಪು ವಸ್ತ್ರ ತೊಟ್ಟಿದ್ದೇನೆ' ಅವನೆಂದ.
*
ಕಾಜೂರು ಸತೀಶ್

ಬೆಳಕು

ನಗರಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಒಂದು ತಿಂಗಳಾದರೂ ಬರಲೇ ಇಲ್ಲ.

ಜನರು ಹಳ್ಳಿಗೆ ಬಂದರು.

ಅಲ್ಲಿ ವಿದ್ಯುತ್ ಸ್ಥಗಿತಗೊಂಡು ಒಂದು ವರ್ಷವಾಗಿತ್ತು. ಜನ ಅರಳಿ ಕಟ್ಟೆಯನ್ನು ಸೃಷ್ಟಿ ಮಾಡುತ್ತಿದ್ದರು ಅರೆವ ಕಲ್ಲಿಗೆ ಮುಳ್ಳು ಹಾಕಿಸುತ್ತಿದ್ದರು ಕೆಲವರು ರೇಡಿಯೋ ಕೇಳುತ್ತಿದ್ದರು 'ಕಥೆ ಹೇಳಪ್ಪಾ' ಮಗು ಕೇಳುತ್ತಿತ್ತು.
*
ಕಾಜೂರು ಸತೀಶ್

ಧ್ಯಾನ

ನಗರದಲ್ಲಿ ಧ್ಯಾನಿಸುತ್ತಾ ಕವಿ ನಡೆದ.
ಯಾರೂ ಅವನ ಧ್ಯಾನವನ್ನು ಕೆಡಿಸಲಿಲ್ಲ.

ಕವಿ ಹಳ್ಳಿಯ ಜನನಿಬಿಡ ಪ್ರದೇಶದಲ್ಲಿ ನಡೆಯತೊಡಗಿದ.
ನೂರು ಕಣ್ಣುಗಳು ಅವನ ಮೇಲೆರಗಿ ಅವನ ಧ್ಯಾನಕ್ಕೆ ಭಂಗವಾಯಿತು.

ಕವಿ ದಿನಚರಿಯಲ್ಲಿ ಹೀಗೆ ಬರೆದ: 'ಧಾವಂತ ಇಲ್ಲದಿದ್ದಾಗ ಜನ ತಮ್ಮನ್ನು ಮರೆಯುತ್ತಾರೆ, ಪರರ ಬಗ್ಗೆ ಚಿಂತಿಸುತ್ತಾರೆ'.
*
ಕಾಜೂರು ಸತೀಶ್

ಇಲ್ಲ


'ಊರಿಗೆ ನೀರಿಲ್ಲ' ಎಂದರು ಜನ.
'ಹೋರಾಡಿ' ಎಂದಿತು ಅಶರೀರವಾಣಿ.

'ವಿದ್ಯುತ್ ಇಲ್ಲದೆ ತಿಂಗಳಾಯಿತು' ಎಂದರು ಜನ.
'ಹೋರಾಡಿ' ಎಂದಿತು ಅಶರೀರವಾಣಿ.

'ರಸ್ತೆಯಲ್ಲಿ ಹೊಂಡಗಳಿವೆ' ಎಂದರು ಜನ.
'ಹೋರಾಡಿ' ಎಂದಿತು ಅಶರೀರವಾಣಿ.

'ಕಚೇರಿಯ ಈ ಕಡತ ವರ್ಷಗಳಿಂದ ಬಾಕಿ ಇದೆ' ಎಂದರು ಜನ. 'ಹೋರಾಡಿ' ಎಂದಿತು ಅಶರೀರವಾಣಿ.
*
ಮಗುವೊಂದು ಸುಮ್ಮನೆ ಮಲಗಿತ್ತು. ಅದಕ್ಕೆ ಹಸಿದಿತ್ತು.ಅದು ಅಳಲಿಲ್ಲ.
ಸತ್ತು ಹೋಯಿತು!
*
ಕಾಜೂರು ಸತೀಶ್ 

ಕತೆಗಾರ


ಕತೆಗಾರ ಪತ್ರಿಕೆಗಳಿಗೆ ಬರೆಯುವುದನ್ನು ನಿಲ್ಲಿಸಿದ. ಸಾಹಿತ್ಯ ಕಾರ್ಯಕ್ರಮಗಳಿಗೆ ಭಾಗಿಯಾಗುವುದನ್ನು ನಿಲ್ಲಿಸಿದ.

ಅಂದಿನಿಂದ ಸಾಹಿತಿಗಳೆಲ್ಲ ಸೇರಿ ಅವನನ್ನು ಕತೆಗಾರನ ಪಟ್ಟದಿಂದ ಕೆಳಗಿಳಿಸಿದರು.
*
ಕಾಜೂರು ಸತೀಶ್ 

Tuesday, January 14, 2025

ಸೈನಿಕ

ಆ ಊರಿನಲ್ಲಿ ತಿಮ್ಮನೂ ಸೇರಿದಂತೆ ಹಲವು ಮಂದಿ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದರು.

ಒಬ್ಬರು ಗಡಿಯಲ್ಲಿ ಸತ್ತಾಗ ಮನೆಯ ಬಳಿ ಸುಮಾರು ಹತ್ತು ಸಾವಿರ ಮಂದಿ ಸೇರಿದರು.

ಒಬ್ಬರು ಹೃದಯಾಘಾತವಾಗಿ ತೀರಿಕೊಂಡಾಗ ಸುಮಾರು ಎರಡು ಸಾವಿರ ಮಂದಿ ಸೇರಿದರು.

ನಿವೃತ್ತಿಹೊಂದಿದ ಒಬ್ಬರು ತೀರಿಕೊಂಡಾಗ ಸಾವಿರ ಮಂದಿ ಸೇರಿದರು.

ಇವರೆಲ್ಲರ ಅಪ್ಪ ಅಮ್ಮ ಹೆಂಡತಿ ಮಕ್ಕಳು ಮಾತ್ರ ಒಂದೇ ಸಮ ಕಣ್ಣೀರು ಹಾಕಿದರು.
*
ಕಾಜೂರು ಸತೀಶ್

Saturday, January 11, 2025

ರದ್ದಿ

'ಕವಿತೆ ಬರೆಯುವುದು ಹೇಗೆ?' ಹುಡುಗನೊಬ್ಬ ತಿಮ್ಮನ ಬಳಿ ಬಂದು ಕೇಳಿದ. ತಿಮ್ಮ ಕವಿತೆಯ ಕುರಿತು ಹಲವು ಸಂಗತಿಗಳನ್ನು ಬಿಚ್ಚಿಟ್ಟ.

ತಿಮ್ಮ ಹೇಳಿದ್ದು ಅವನಿಗೆ ಅರ್ಥವಾಗಲಿಲ್ಲವಾದರೂ ಪ್ರಾಸ ಎನ್ನುವುದು ಮಾತ್ರ ಸ್ಪಷ್ಟವಾಗಿ ಅರ್ಥವಾಗಿತ್ತು.

ಒಂದು ವಾರ ಕಳೆಯಿತು. ' ನನ್ನ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವಿದೆ ನೀವು ತಪ್ಪದೆ ಬರಬೇಕು' ಹುಡುಗ ಆಹ್ವಾನ ಪತ್ರ ನೀಡಿ 'ಬಾಯ್ ಸರ್' ಎಂದು ಹೇಳಿ ಹೊರಟುಹೋಗಿದ್ದ.
*
ಕಾಜೂರು ಸತೀಶ್

Friday, January 3, 2025

ಕಾಲ್ ಮಿ

' ಪ್ಲೀಸ್ ಕಾಲ್ ಮಿ ' ಎಂಬ ಸಂದೇಶ ಬಂದಿತ್ತು. ತಿಮ್ಮ ಕರೆ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಮಾಡಿದ್ದರೂ ಅರ್ಧ ಗಂಟೆ ಕರೆಯಲ್ಲಿ ನಿರತನಾಗಬೇಕಿತ್ತು.

ಅವರಿಗೆ ತನ್ನ ಸಹೋದರನ ದೂರವಾಣಿ ಸಂಖ್ಯೆ ತುರ್ತಾಗಿ ಬೇಕಿತ್ತು. ಅದಕ್ಕಾಗಿ ಅವರು ಹಲವರಿಗೆ ಕರೆ ಮಾಡಿದ್ದರು.

'ಪ್ಲೀಸ್ ಕಾಲ್ ಮಿ' ಯ ಬದಲು 'ಅಣ್ಣನ ಮೊಬೈಲ್ ಸಂಖ್ಯೆ ಕಳಿಸಿ' ಎಂಬ ಸಂದೇಶ ಬಂದಿದ್ದಿದ್ದರೆ ಇಬ್ಬರಿಗೂ ನೆಮ್ಮದಿ ಇರುತ್ತಿತ್ತು, ಕರೆ ಸ್ವೀಕರಿಸಿ ಇಲ್ಲ ಎಂದವರ ಸಮಯ ಕೂಡ ಉಳಿಯುತ್ತಿತ್ತು' ತಿಮ್ಮ ಯೋಚಿಸಿದ.

*
ಕಾಜೂರು ಸತೀಶ್


Wednesday, January 1, 2025

ಬೆಟ್ಟ

ಬೆಟ್ಟದ ತುದಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತಿಮ್ಮ ತೀರ್ಮಾನಿಸಿದ. ಅಲ್ಲಿಗೆ ತಲುಪುವುದೇ ಸಾಹಸದ ಕೆಲಸವಾಗಿತ್ತು.ಆದರೆ ಶ್ರಮಿಕನಾದ ತಿಮ್ಮನಿಗೆ ಅದೊಂದು ಸಾಮಾನ್ಯ ಬೆಟ್ಟವಾಗಿತ್ತು.

ಬೆಟ್ಟದ ತುದಿ ತಲುಪಿದ. ದೂರದಲ್ಲಿ ಗುಂಪೊಂದು ಸಿಳ್ಳೆಹಾಕಿಕೊಂಡು ಬರುತ್ತಿತ್ತು. ವಾರಾಂತ್ಯದ ರಜೆಯಲ್ಲಿ ಬೆಟ್ಟ ಹತ್ತಲು ಬಂದ ಗುಂಪಾಗಿತ್ತು ಅದು.

ಕ್ರಮೇಣ ಧ್ವನಿ ಕ್ಷೀಣಿಸತೊಡಗಿತು. ಅವರೆಲ್ಲಾ ಬೆಟ್ಟ ಹತ್ತಲಾಗದೆ ಕುಸಿದು ಕುಳಿತಿದ್ದರು.

ಆ ಗುಂಪಿನಲ್ಲಿದ್ದ ಕೆಲವರು ಗುಡ್ಡದ ತುದಿಯಲ್ಲಿದ್ದ ತಿಮ್ಮನನ್ನು ಗುರುತಿಸಿದರು. 'ಅಷ್ಟು ಕಡಿದಾದ ಬೆಟ್ಟಕ್ಕೆ ಒಬ್ಬನೇ ಹತ್ತಿದ್ದಾನೆ ವಾವ್ ' ಎಂದು ಸಿಳ್ಳೆಹಾಕತೊಡಗಿದರು.

ಅದು ತಿಮ್ಮನಿಗೂ ಕೇಳಿಸಿತು( ಮುಂದೇನಾಯಿತು ಎಂಬುದು ತಿಮ್ಮನಿಗೂ ನೆನಪಿಲ್ಲ ).
*


ಕಾಜೂರು ಸತೀಶ್