ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, August 24, 2025

ಆಕಾಶ ನದಿ ಬಯಲು- ಮೇರಿ ಆಲಿವರ್ ಕವಿತೆಗಳು

‌1. ಪುಲಿಟ್ಜರ್ ಪ್ರಶಸ್ತಿ ಬಂದಾಗ ಟಿವಿ ಚಾನಲ್ ನಿಂದ 'ನಿಮ್ಮ ಸಂದರ್ಶನ ಮಾಡಲು ನಾವು ಬರಬಹುದೇ?'ಎಂದಾಗ ಹೆಂಚು ಜೋಡಿಸುತ್ತಿದ್ದ ಲೇಖಕಿಯು 'ದಯವಿಟ್ಟು ಬೇಡ' ಎನ್ನುತ್ತಾರೆ!

2. ನೆರೆಮನೆಯ ಒಬ್ಬರು ಬಂದು ' ನಿಮ್ಮನ್ನು ಟಿವಿಯಲ್ಲಿ ನೋಡಿದ ಹಾಗೆ ಅನ್ನಿಸ್ತು.. ನೀವೇನಾ ಅದು?' ಎಂದು ಪ್ರಶ್ನೆ ಎಸೆದುಹೋಗುತ್ತಾರೆ.


ಕಾಡಿನ ದಟ್ಟ ಮೌನವನ್ನು ಮೆಲ್ಲುತ್ತಾ ಕವಿತೆಗಳನ್ನೇ ಬಾಳಿದ ಮೇರಿ ಆಲಿವರ್ (1935-2019) ಕುರಿತ ಮಾತುಗಳಿವು. ಚಿಕ್ಕ ಪ್ರಾಯದಲ್ಲೇ ಲೈಂಗಿಕ ದೌರ್ಜನ್ಯಕ್ಕೊಳಗಾದ ಮೇರಿಗೆ ನಿಸರ್ಗದ ಒಡನಾಟವು ತಾನು ಕಳೆದುಕೊಂಡ ಬದುಕಿನ ಚೈತನ್ಯವನ್ನು ಮರುಪೂರಣಗೊಳಿಸಿಕೊಳ್ಳಲು ಸಹಕರಿಸಿತು. ಅದರ ಧ್ಯಾನದ ಫಲ ಈ ಕವಿತೆಗಳು.


Small is beautiful ಎಂಬ ತತ್ವದಲ್ಲಿ ನಂಬಿಕೆಯಿರಿಸಿದ್ದ ಮೇರಿ ಆಲಿವರ್ ಅವರ ಇಂಗ್ಲಿಷ್ ಕವಿತೆಗಳನ್ನು 'ಆಕಾಶ ನದಿ ಬಯಲು' ಎಂಬ ಶೀರ್ಷಿಕೆಯಲ್ಲಿ ಚೈತ್ರಾ ಶಿವಯೋಗಿಮಠ ಅವರು ಅನುವಾದಿಸಿದ್ದಾರೆ. ಹಲಸಂಗಿಯ ಸುಗಮ ಪುಸ್ತಕ ಇದನ್ನು ಪ್ರಕಟಿಸಿದೆ. "ನಾನು ಸಮಾಧಾನ ಕೊಡುವ, ಮನಸ್ಸಿಗೆ ಆಹ್ಲಾದವನ್ನು ನೀಡುವಂತಹ ಪದ್ಯಗಳನ್ನು ಬರೆಯುತ್ತೇನೆ.." ಎನ್ನುವ ಮೇರಿ ಆಲಿವರ್ ಅವರ ಕವಿತೆಗಳನ್ನು ತಮ್ಮದಾಗಿಸಿಕೊಂಡು ಚೈತ್ರಾ ಶಿವಯೋಗಿಮಠ ಕನ್ನಡದಲ್ಲಿ ಸೃಷ್ಟಿಸಿದ್ದಾರೆ.


ನಿಸರ್ಗದ ಸಣ್ಣ ಸಣ್ಣ ಸಂಗತಿಗಳು ಇಲ್ಲಿ ಹಾಡಾಗಿವೆ. ಭತ್ತ, ಮೆಣಸಿನ ಗಿಡ, ಗುಮ್ಮ, ಕೇರೆ ಹಾವು, ನಾಯಿ, ಮಿಡತೆ, ಬೆಟ್ಟ, ಹೆಬ್ಬಾತು, ಎಲೆ, ಮರ, ಕಡಲು, ಹಂಸ, ಹಕ್ಕಿ, ಮಿಂಚುಳ್ಳಿ, ಹೂವು, ಮೀನು, ಕಾಡು - ಇವೆಲ್ಲಾ ಮೇರಿಯ ಕಾವ್ಯ ವಸ್ತುಗಳು. ಅವೇ ಅವಳ ನಿಜ ಜೀವನದ ಪ್ರಪಂಚವೂ ಹೌದು.


ಇವು ನಿಸರ್ಗದ ಕಡೆಗಿನ ಪಯಣ. ಹುಟ್ಟಿದ ಮಗುವಿಗೆ ನಿಸರ್ಗ ಬೆರಗಿನಂತೆ ಕಂಡು ಅದು ನಮ್ಮನ್ನು ಪ್ರಶ್ನಿಸುವ ರೀತಿಯಲ್ಲಿಯೇ ಮೇರಿ ಆಲಿವರ್ ಅದನ್ನು ಕಾವ್ಯಾತ್ಮಕವಾಗಿ ಪ್ರಶ್ನಿಸುತ್ತಾ ನಿಸರ್ಗಕ್ಕೇ ಪ್ರಶ್ನೆ ಎಸೆಯುತ್ತಾರೆ. ಈ ನಡಿಗೆ ಒಂಟಿ ನಡಿಗೆ ಅಲ್ಲ; ಅದೊಂದು ಪ್ರಾರ್ಥನೆ; ಧನ್ಯತೆ.


ಮೇರಿಯ ಕವಿತೆಗಳ ಮತ್ತು ಚೈತ್ರಾ ಅವರ ಅನುವಾದದ ಮಾದರಿ ಇಲ್ಲಿದೆ:

ಪ್ರಾರ್ಥನೆಯ ಪ್ರಾರ್ಥನೆ ತಿಳಿಯದ ನನಗೆ
ಗೊತ್ತಿರುವುದಿಷ್ಟೇ- ಗಮನಿಸೋದು
ಹುಲ್ಲಿನ ಮೇಲೆ ಮೈಕೊಡವಿ
ಉರುಳಿ, ಮಂಡಿಯೂರಿ
ಸುಮ್ಮನಿದ್ದು ಧನ್ಯಳಾಗುವುದು ( ಬೇಸಿಗೆಯ ಒಂದು ದಿನ)

ಯಾರೂ ನೋಡಬಾರದು ನಾನು
ಮಾರ್ಜಾಲ ಹಕ್ಕಿಗಳೊಂದಿಗೆ ಮಾತಿಗಿಳಿಯುವುದನ್ನು
ಪುರಾತನ ಆಲದಮರ ತಬ್ಬಿಕೊಳ್ಳುವುದನ್ನು
ಪ್ರಾರ್ಥನೆಗೆ ನನ್ನದೇ ರೀತಿ ಇದೆ
ನಿನಗೆ ನಿನ್ನದು ಇರುವಂತೆ ( ಕಾಡು ಸುತ್ತುವಾಗ )
*

✍️ಕಾಜೂರು ಸತೀಶ್


No comments:

Post a Comment