ತಿಮ್ಮ ಬೈಕು ನಿಲ್ಲಿಸಿ ಮರದ ಕೆಳಗೆ ಬಂದು ನಿಂತ. ವಿಶಾಲವಾಗಿ ಬಾಹುಗಳನ್ನು ಚಾಚಿ ನಿಂತ ಮರ. ಈಗಾಗಲೇ ಇಬ್ಬರು ಅದನ್ನು ಆಶ್ರಯಿಸಿ ನಿಂತಿದ್ದರು.
"ಹೀಗೆ ಮಳೆ ಸುರಿಯುವಾಗ ಮರದ ಕೆಳಗೆ ನಿಲ್ಲಬಾರದು. ಸಿಡಿಲು ಬಡಿದರೆ ಅಪಾಯ ಕಟ್ಟಿಟ್ಟ ಬುತ್ತಿ" ತಾನು ಓದಿದ ಸಂಗತಿಗಳು ತಿಮ್ಮನಲ್ಲಿ ಮಾತಿಗಿಳಿದವು.
"ಎಷ್ಟು ಚಂದದ ಮರ, ಒಂದು ಹನಿ ಕೂಡ ಬೀಳ್ತಿಲ್ಲ" ಆ ಇಬ್ಬರು ಮಾತನಾಡುತ್ತಿದ್ದರು.
"ಇಲ್ಲೇ ಮಲಗಿದ್ರೆ ಹೇಗೆ? " ಯೋಚಿಸುತ್ತಿದ್ದರು.
ಸ್ವಲ್ಪ ಹೊತ್ತಿನ ಅನಂತರ ಮಳೆ ನಿಂತಿತು.
"ಸದ್ಯ ಸಿಡಿಲು ಬಡಿಯಲಿಲ್ಲ'' ತಿಮ್ಮ ಹೇಳಿಕೊಂಡು ಅಲ್ಲಿಂದ ಹೊರಟ.
ಆ ಇಬ್ಬರು ಅಲ್ಲೇ ಕುಳಿತಿದ್ದರು. ಜಗತ್ತನ್ನೇ ಮರೆತ ಹಾಗೆ ಅವ್ಯಕ್ತವಾದ ಸುಖವನ್ನು ಅನುಭವಿಸುತ್ತಿದ್ದರು.
"ಸಿಡಿಲು ಅವರಿಗೆ ಬಡಿಯುವುದಿಲ್ಲ, ಅದೀಗ ನನ್ನ ಎದೆಯೊಳಗೇ ಇರುವ ಹಾಗೆ ಅನ್ನಿಸುತ್ತಿದೆ" ಹೇಳಿಕೊಂಡ ತಿಮ್ಮ.
*
✍️ಕಾಜೂರು ಸತೀಶ್
No comments:
Post a Comment