ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, October 8, 2020

ಸಾವು



ಎರಡು ಮೂರು ದಿನಗಳ ಬಿಡುವಿಲ್ಲದ ಕೆಲಸ. ಆ ಯುವಕ ತನ್ನ ಕೋಣೆಯಲ್ಲಿ ಹೃದಯಾಘಾತವಾಗಿ ತೀರಿಕೊಂಡಿದ್ದ.

ಮೊಬೈಲ್ ಚಾರ್ಜಿಗೆ ಇಟ್ಟಿದ್ದ. ಇಂಟರ್ನೆಟ್ ಆನ್ ಆಗಿತ್ತು. 

ನೂರಾರು ಕರೆಗಳು ಬಂದಿದ್ದವು. ಸಾವಿರಾರು whatsapp  ಸಂದೇಶಗಳೂ.

' ಸುರೇಶ ಕರೆ ಸ್ವೀಕರಿಸುತ್ತಿಲ್ಲ. ಕರೆ ಸ್ವೀಕರಿಸಿದರೆ ಸರಿ, ಇಲ್ಲದಿದ್ದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು'

' ಈಗ ಬೆಂಗಳೂರಿಗೆ ಹೋಗಿ ಸಭೆಗೆ ಹಾಜರಾಗು, ಕಚೇರಿಗೆ ಬಂದು ಹೋಗು or receive my call'

whatsapp ಗುಂಪಿನಲ್ಲಿ ಸಂದೇಶಗಳ ಸುರಿಮಳೆ.

" ರೀ ಸುರೇಶನಿಗೆ ಕಾಲ್ ಮಾಡಲು ಹೇಳ್ರೀ, ಎಲ್ಲಿ ಸತ್ತಿದ್ದಾನೆ ಅವ್ನು". ಕಚೇರಿಯ ಇತರ ಕೆಲಸಗಾರರಿಗೆ  ಮೇಲಿನಿಂದ ಕರೆಗಳು ಬರಲಾರಂಭಿಸಿದವು.
ಅವರೆಲ್ಲರೂ ಒಂದು ಪಾರ್ಟಿಯಲ್ಲಿ ತಲ್ಲೀನರಾಗಿದ್ದರು. ತುಸು ಹೆಚ್ಚೇ ಎಣ್ಣೆ ಹೊಡೆದಿದ್ದರು.

ಒಬ್ಬೊಬ್ಬರೇ ಕರೆಮಾಡಲಾರಂಭಿಸಿದರು. ಪ್ರತಿಕ್ರಿಯೆಯಿಲ್ಲ.


ಸಂದೇಶ ಕಳುಹಿಸಲಿಲ್ಲವೆಂದು, ಕರೆ ಸ್ವೀಕರಿಸಲಿಲ್ಲವೆಂದು ಹುಡುಗಿಯೂ ಹುಸಿ ಕೋಪ ತೋರಿಸಿ ಮಾತುಬಿಟ್ಟಳು.

ದಿನಗಳು ಕಳೆದವು.

ಕಚೇರಿಯಲ್ಲಿ ಆದೇಶ ಟೈಪಿಸಲಾಗುತ್ತಿತ್ತು. ಕರ್ತವ್ಯ ಲೋಪದ ಮೇಲೆ ಆ ಯುವಕನನ್ನು 'ಸಸ್ಪೆಂಡ್' ಮಾಡಲಾಗಿತ್ತು.

ಆದೇಶ ಹಿಡಿದುಕೊಂಡು ಬಂದ ನೌಕರ ಬಾಗಿಲು ಕುಟ್ಟಿದ. ಸದ್ದೇ ಇಲ್ಲ. ಕಿಟಕಿ ತೆರೆದು ನೋಡಿದ. 

ಝುಂಯ್ಯ್ಯ್ಯ್ ಎಂಬ ಸದ್ದು ಅವನ ಕಿವಿಯನ್ನೂ, ಕಡಲ ಅಲೆಗಳ ಹಾಗೆ ಚಲಿಸುತ್ತಿದ್ದ ಹುಳುಗಳು ಅವನ ಕಣ್ಣುಗಳನ್ನೂ, ಗಂಮ್ಮ್ಮ್ ಎನ್ನುತ್ತಿದ್ದ ವಾಸನೆ ಅವನ ಮೂಗನ್ನೂ ಒಮ್ಮೆಲೇ ತಿವಿದು ಕೆಳಕ್ಕೆ ಬೀಳಿಸಿದವು ಮತ್ತು ಆ ಆದೇಶದ ಪ್ರತಿಯ ಮೇಲೆ ಬಿದ್ದು ಸಹಿ ಮಾಡಿ ಸ್ವೀಕರಿಸಿದವು.
*




ಕಾಜೂರು ಸತೀಶ್ 


No comments:

Post a Comment