ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, October 21, 2020

ಅಲ್ಲೇ ಇದೆ ನಮ್ಮ ಮನೆ



‘ಯುಕ್ತಿ’ ಪತ್ರಿಕೆಯಲ್ಲಿ ಬಂದ ‘ಮನೆ ಮಾರಾಟಕ್ಕಿದೆ’ ಜಾಹೀರಾತು ಓದಿ, ಅದರಲ್ಲಿದ್ದ ನಂಬರಿಗೆ ಫೋನ್ ಮಾಡಿ, “ಸರ್ ಇದು ಎಲ್ಬರುತ್ತೆ? ಸೋಮವಾರಪೇಟೆ ಹತ್ರ ಇರೋ ಶೆಟ್ಟಳ್ಳಿನಾ? ಯಾಕಂದ್ರೆ ಸಕ್ಲೇಶಪುರದತ್ರ ಒಂದು ಶೆಟ್ಟಳ್ಳಿ ಇದೆ ಅದ್ಕೆ ಕೇಳ್ದೆ” ಎಂದು ಒಂದೇ ಉಸಿರಿನಲ್ಲಿ ರಾಘವ ಕೇಳಿದ.

“ಸೋಮವಾರಪೇಟೆ ಹತ್ರಾನೇ. ಬನ್ನಿ ನೋಡ್ಕೊಂಡು ಬರುವಂತೆ”

“ಸರ್.. ಆ ಹಾಲೆಣ್ಣು ಮರದ್ಹತ್ರನಾ?”

ಫೋನ್ ಕಡಿತಗೊಂಡಿತ್ತು.

ವರುಷಗಳ ಹಿಂದೆ ನಾಪತ್ತೆಯಾಗಿದ್ದ ಅಪ್ಪ ನೆನಪಾಗಿ ಬಂದು ರಾಘವನ ಕಣ್ಣುಗಳನ್ನು ಕದಡಿ ಹೋಗಿದ್ದ.

***

ಬರೋಬ್ಬರಿ ಇಪ್ಪತ್ತು ವರ್ಷಗಳ ಹಿಂದೆ. ಮನೆಮಾರಿ, ಒಂದು ಲಾರಿಯಲ್ಲಿ ಪಾತ್ರೆಗೀತ್ರೆ, ಬಟ್ಟೆಬರೆ, ಸೌದೆಗೀದೆ ಎಲ್ಲ ತುಂಬಿಕೊಂಡು ಊರುಬಿಡುವ ಸಿದ್ಧತೆಯಲ್ಲಿತ್ತು ವೇಲುವಿನ ಕುಟುಂಬ. ಪೋಲೀಸರ ಭಯದಿಂದ ರಾತ್ರೋರಾತ್ರಿ ಸೌದೆ ಸುಟ್ಟು ಮಸಿ ಉತ್ಪಾದಿಸಿ ಕಾಸು ಸಂಪಾದಿಸುತ್ತಿದ್ದ ವೇಲು ಅಲಿಯಾಸ್ ವೇಲಾಯುದನಿಗೆ ಮನೆಮಂದಿಯ ಹೊಟ್ಟೆಗಳನ್ನು ಸಾಕಲು ಸಾಧ್ಯವಾಗುತ್ತಿರಲಿಲ್ಲ. ಪಾಲುವಾಣ ಸವರುವುದು, ಎರತೆ ಮಾಡುವುದು, ಅಗತೆ ಮಾಡುವುದು, ಚಿಗುರು ತೆಗೆಯುವುದು, ಕಾಫಿ ಕುಯ್ಯುವುದು, ಮನೆ ಕಟ್ಟುವುದು, ಅಡುಗೆ ಮಾಡುವುದು ಮುಂತಾದ ಬಹುಮುಖ ಕೆಲಸಗಾರನಾದರೂ, ವರುಷವಿಡೀ ಕೆಲಸವಿರದೆ ಒಲೆಬುಡದಲ್ಲಿ ಕುಳಿತು ಬಾಳೆಕಾಯಿ, ಅಣಬೆ, ಸಿಹಿಗೆಣಸನ್ನೆಲ್ಲ ಸುಟ್ಟು ತಿನ್ನುತ್ತಾ ರೇಡಿಯೋ ಸಿಲೋನಿನ ಹಾಡಿಗೆ ದನಿಗೂಡಿಸುತ್ತಿದ್ದ. ಹೆಂಡತಿ ನಾರಾಯಣಿಗೆ ಜ್ವರ ಬಂದರೂ, ಬೆರಳು ಕುಯ್ದುಕೊಂಡರೂ, ಕಾಲ್ಬೆರಳ ಸಂದಿಯಲ್ಲಿ ಹುಳ ತಿಂದು ಉರಿಹತ್ತಿ ‘ಹಾ..’ ಅಂದರೂ ಕೆಲಸಕ್ಕೆ ಕಳಿಸುವುದಕ್ಕೆ ಮಾತ್ರ ಮರೆಯುತ್ತಿರಲಿಲ್ಲ ವೇಲು. ಬೆನ್ನಿಗೆ ಬಿದ್ದಿರುವ ಮೂರು ಮಕ್ಕಳನ್ನು ನೆನೆಸಿಕೊಂಡು ಈರಪ್ಪಗೌಡರ ಕಾಫಿತೋಟಕ್ಕೆ ತನ್ನನ್ನು ಅರ್ಪಿಸಿಕೊಂಡಿದ್ದಳು ನಾರಾಯಿಣಿ.


ಹೀಗಿರುವ ಈ ಕುಟುಂಬ ಊರು ಬಿಡುವ ಸುದ್ದಿ ನೆರೆಕರೆಯವರಿಗೆಲ್ಲ ಖುಷಿ ತರಿಸಿತ್ತು. ಮನೆಯ ದಶದಿಕ್ಕುಗಳಿಗೂ ಚಾಚಿಕೊಂಡ ವೀರೇಶಗೌಡರು, ಸುಬ್ಬಯ್ಯಗೌಡರುಗಳಿಗೆಲ್ಲ ಒಳಗೊಳಗೇ ಒಂಥರಾ ಖುಷಿಯಾದರೂ, ‘ಛೆ! ಪಾಪ!’ ಎಂಬ ಮಾತೊಂದನ್ನು ಬಿಸಾಕಿ ಬೀಳ್ಕೊಟ್ಟಿದ್ದರು. ರವಿಗೌಡ ಆ ಮನೆ, ಜಾಗವನ್ನೆಲ್ಲ ಕೊಂಡುಕೊಂಡು ಹನ್ನೊಂದು ಸಾವಿರ ರೂಪಾಯಿಯನ್ನು ಕೊಟ್ಟು ಕಳಿಸಿದ್ದ.
ವೇಲುವಿನ ಮೂರನೇ ಮಗ ‘ಕಣ್ಣ’ ಪ್ರತೀವರ್ಷ ಕಾಯುತ್ತಿದ್ದ ಬೆಣ್ಣೆಹಣ್ಣಿನ ಗಿಡದಲ್ಲಿ ಫಸಲು ತುಂಬಿ ತುಳುಕುತ್ತಿತ್ತು. “ಗತಿಕೆಟ್ಟ ಕಾಲದಲ್ಲಿ ಹೀಗೆಲ್ಲ ಫಸಲು ಬಿಡುತ್ತೆ” ನಾರಾಯಿಣಿ ಸಮಾಧಾನಕ್ಕೇನೋ ಎಂಬಂತೆ ನುಡಿಯುತ್ತಿದ್ದಳು.


ಕಿತ್ತಳೆ, ಮಾವು, ಹಲಸು, ಚಕ್ಕೋತ, ಬಾಳೆ... ಇವೆಲ್ಲ ಮರಕ್ಕೇ ಭಾರವಾಗುತ್ತೇನೋ ಎಂಬಂತೆ ತೂಗಿ ತೊನೆಯುತ್ತಿದ್ದಾಗ ಎಂಥವನಿಗೂ ಆ ಜಾಗ, ಆ ಮನೆಯನ್ನು ಮಾರಲು ಮನಸ್ಸಾಗುವುದಿಲ್ಲ. “ಯಾಕಪ್ಪಾ ಇದನ್ನೆಲ್ಲ ಮಾರ್ತಿದ್ದೀಯ?” ಕಣ್ಣ ಕೇಳಿದರೆ, “ಹೋಗ್ಲಿಬಿಡು, ಈ ಜಾಗ ಸಿಗಲ್ಲ.. ಏನಾದ್ರೂ ಮಾಡಿ ಅವ್ರು ಕಿತ್ಕೋತಾರೆ.. ನೋಡ್ತಿದ್ದೀಯಲ್ಲ ನೀನೇ..” ಪ್ರಶ್ನೆ ಬೆಳೆಸದ ಹಾಗೆ ಉತ್ತರಿಸುತ್ತಿದ್ದ ವೇಲು.


ಗಂಟು-ಮೂಟೆ ಕಟ್ಟಿ ಲಾರಿಗೆ ತುಂಬಿಸಿದ್ದಾಯಿತು. ಮುದಿಯಾಗಿದ್ದ ಲಾರಿ ಊಂ...ಊಂ... ಎಂದು ಏದುಸಿರುಬಿಡುತ್ತಾ ಸಾಗುವಾಗ ಅದರ ಒಳಗೆ ಕಟ್ಟಿಹಾಕಿದ್ದ ಜಿಮ್ಮಿ ಓಓ.. ಎಂದು ಊಳಿಡತೊಡಗಿದ. ಅದಕ್ಕೆ ಮೊದಲ ಪ್ರಯಾಣವಾದ್ದರಿಂದ ‘ವ್ಯಾ..ವ್ಯಾ..’ ಮಾಡಿ ನಾರಾಯಿಣಿಯಿಂದ ಏಟು ತಿಂದು ‘ಕುಂಯ್’ ಎಂದು ತೆಪ್ಪಗೆ ಮುದುರಿ ಮಲಗಿಕೊಂಡಿತು. ವೇಲುವಿನ ಮುಖದಲ್ಲಿ ಗೆಲುವಿದ್ದರೆ, ನಾರಾಯಿಣಿಯ ಕಣ್ಣುಗಳು ಹೊರಗೆ ಸುರಿಯುತ್ತಿದ್ದ ಮಳೆಯನ್ನೇ ನೆನಪಿಸುತ್ತಿದ್ದವು.


ಐಗೂರು ಗ್ರಾಮದ ಮಾರಮ್ಮನ ಗುಡಿಗೆ ಹೋಗುವ ರಸ್ತೆಯ ಸ್ವಲ್ಪ ಮೇಲೆ ಗುಡಿಸಲೊಂದರಲ್ಲಿ ಹೊಸಾ ಬದುಕನ್ನು ಆರಂಭಿಸಿದ ವೇಲುವಿನ ಕುಟುಂಬಕ್ಕೆ ಸುರಿಯುತ್ತಿದ್ದ ‘ಸುಯ್ಯೋ’ ಮಳೆಗೆ ಹುಲ್ಲಿನ ಮಾಡಿನಿಂದ ಸೋರುತ್ತಿದ್ದ ಕೆಂಪುಹನಿಗಳೆಲ್ಲ ಒಗ್ಗಿಹೋಗಿದ್ದವು. ಆ ಬಿರುಮಳೆಗೆ ಕೆಲಸ ಇಲ್ಲದಿದ್ದಾಗ ವೇಲು ಸುಟ್ಟು ತಿನ್ನುತ್ತಿದ್ದ ಹಲಸಿನ ಬೀಜ, ಗೇರುಬೀಜ, ಒಣಮೀನುಗಳು ಕೇವಲ ವಾಸನೆಯಿಂದ ನೆರೆಮನೆಯವರ ಹೊಟ್ಟೆ ತುಂಬಿಸುತ್ತಿದ್ದವು. ಈ ನಡುವೆ ವೇಲುವಿನ ತಂಗಿ ರುಕ್ಮಿಣಿಯು ಅವಿವಾಹಿತನಾಗಿದ್ದ ತೋಟದ ಮಾಲಿಕನನ್ನು ಪಟಗಾಯಿಸಿಕೊಂಡು ಒಂದಷ್ಟು ಕಾಫಿ, ಒಳ್ಳೆಮೆಣಸನ್ನೆಲ್ಲ ಮನೆಗೊಯ್ದು ಸಿರಿವಂತರ ಪಟ್ಟಿಯಲ್ಲಿ ನಿಧಾನವಾಗಿ ಜಾಗಪಡೆದುಕೊಂಡ ಸುದ್ದಿ ಒಂದು ಸೋಮವಾರದ ದಿನ ಸೋಮವಾರಪೇಟೆ ಸಂತೆಯಲ್ಲಿ ಯಾರಿಂದಲೋ ಅವನಿಗೆ ತಿಳಿಯಿತು.


ಸದಾ ಶ್ರೀಮಂತನಾಗುವ ತನ್ನ ಕನಸಿಗೆ ಬರೀ ‘ಓದು ಓದು’ ಎಂದು ಶಾಲೆಗೆ ತೆರಳುವ ಮೂವರು ಮಕ್ಕಳು ಅಡ್ಡಿಯಾಗಿದ್ದರು. ವೇಲುವಿನ ಒಳಗೆ ಒಂದು ದೊಡ್ಡ ಕೊರಗು ಹಾಗೇ ಉಳಿದುಕೊಂಡಿತ್ತು. ಅವನ ತಾಯಿ ತೀರಿಕೊಂಡಾಗ ಸಿಕ್ಕ ಕಿವಿಯ ಓಲೆಯನ್ನು ಕಷ್ಟಕ್ಕೆ ಬೇಕಾಗಬಹುದು ಎಂದು ಯಾರಿಗೂ ತಿಳಿಯದಂತೆ ಮನೆಯ ಒಳಗಡೆ ಹೂತಿಟ್ಟಿದ್ದ. ಕ್ರಮೇಣ ಅವನಿಗೆ ವಿಪರೀತ ಮರೆವು ಬಾಧಿಸಿ ನಿಖರವಾಗಿ ಅದನ್ನು ಎಲ್ಲಿ ಇಟ್ಟಿದ್ದನೆಂದು ನೆನಪು ಮಾಡಿಕೊಳ್ಳಲು ಸೋತುಬಿಟ್ಟಿದ್ದ. ಮೈಮೇಲೆ ದೇವರು ಬಂದು ಕುಣಿಯುವ ಹಲವು ದೇವರುಗಳ ಕಾಲು ಹಿಡಿದು ಕೇಳಿಯೇ ಕೇಳಿದ್ದ. ತನ್ನ ತಂಗಿಯ ಮೇಲೂ ದೇವರು ಬರುವುದಾದರೂ ಈ ಸುದ್ದಿ ಬಹಿರಂಗವಾಗಬಹುದೆಂದು ಬಚ್ಚಿಟ್ಟಿದ್ದ. ಒಮ್ಮೆ ನೆಲವನ್ನೆಲ್ಲ ಬಗೆದಾಗ ಕುಡಿಕೆಯಲ್ಲಿ ಹತ್ತು, ಇಪ್ಪತ್ತು ಪೈಸೆಗಳ ಚಿಲ್ಲರೆ ಸಿಕ್ಕಿದ್ದವು ಅಷ್ಟೆ.


ಅದ್ಯಾವ ಕೇಡುಗಾಲಕ್ಕೋ ಏನೋ, ಆ ವರ್ಷದ ಮಳೆ ಬೆಂಕಿಯ ಹಾಗೆ ಸುಡಲು ತೊಡಗಿತ್ತು. ಚೋರಣ್ಣ ಹೊಳೆಯ ಮೀನುಗಳೆಲ್ಲ ಹಿಗ್ಗಾಮುಗ್ಗಾ ನುಗ್ಗಿ ನಾಲೆ, ಕೊಲ್ಲಿ, ಗದ್ದೆಗಳಿಗೆ ತಮ್ಮ ನೆಲೆಗಳನ್ನು ವಿಸ್ತರಿಸಿದ್ದವು. ವಾರಾನುಗಟ್ಟಲೆ ತರಕಾರಿ ಖರ್ಚು ಉಳಿಯಿತಲ್ಲ ಎಂದು ಸಂಭ್ರಮಿಸಿ ಬ್ಯಾಗು ತುಂಬ ಮಳ್ಳಿ, ಬಾಳೆ, ಹಾವುಮೀನುಗಳನ್ನೆಲ್ಲ ತುಂಬಿಕೊಂಡು ಬಂದಿದ್ದ ವೇಲು. “ಈ ಪುಡಿಮೀನು ತಂದ್ರೆ ಬೇಕಾದ್ರೆ ನೀವೇ ಸರಿ ಮಾಡ್ಬೇಕು.. ನಂಗಾಗಲ್ಲ” ನಾರಾಯಿಣಿ ಬಡಬಡಾಯಿಸಿದ್ದಳು.


ವೇಲುವಿನ ಒಳಗೆ ತಾನು ಹೂತಿಟ್ಟ ಚಿನ್ನವನ್ನು ಪತ್ತೆಹಚ್ಚುವ ಮತ್ತು ಒಂದು ಸಣ್ಣ ಮನೆಯನ್ನು ಕಟ್ಟಿಸುವ ಆಸೆ ಕುಡಿಯೊಡೆದು ಬೆಳೆಯಲಾರಂಭಿಸಿತು. ಸಿಕ್ಕಾಪಟ್ಟೆ ಮನೆಯು ಸೋರಲು ತೊಡಗಿ ಹುಲ್ಲಿನ ಮೇಲೆ ಪ್ಲಾಸ್ಟಿಕ್ ಹಾಸಿದರೂ ಪರಿಹಾರ ಕಾಣಲಿಲ್ಲ. ಇಂತಹ ಅಸಹಾಯಕತೆಗಳ ನಡುವೆಯೂ ಕೆಲಸಕ್ಕೆ ಹೋಗುತ್ತಿದ್ದ ನಾರಾಯಿಣಿ ಸಂಜೆ ಚಳಿಯಿಂದ ಗಡಗಡ ನಡುಗುತ್ತಾ ಬಂದು ಅಂಟಿಕೊಂಡ ಜಿಗಣೆಗಳನ್ನು ಕೀಳುವಾಗ, “ಏ ರಂಡೆ, ನೀನೇನ್ಮಾಡಿದ್ದೀಯ ಅಂತ ಗೊತ್ತು ನಂಗೆ..” ಎಂದು ಪೀಠಿಕೆ ಹಾಕುತ್ತಿದ್ದ.

“ನೀನು ಆ ಚಿನ್ನಾನ ಆ ಕಳ್ಳ ಸೂಳೆಮಗ್ನಿಗೆ ಕೊಟ್ಟಿದ್ದೀಯ... ಅವನ್ಮನೆ ಹಾಳ್ಬಿದ್ಹೋಗ” ಕೈಯನ್ನು ಮೂರು ಬಾರಿ ನೆಲಕ್ಕೆ ಬಡಿದು ಶಪಿಸುತ್ತಿದ್ದ.

“ನಾನು ಹಾಗೆ ಮಾಡಿದ್ರೆ ಹಾವು ಕಡೀಲಿ ನಂಗೆ” ಕಣ್ಣಲ್ಲಿ ನೀರು ತುಂಬಿ ಮೂಗು ಸೀಟುತ್ತಿದ್ದಳು ನಾರಾಯಿಣಿ.

ಇಂತಹ ಕಿತ್ತಾಟಗಳಲ್ಲಿ ಮನೆಮಂದಿಯೆಲ್ಲ ಉಪವಾಸ ಬೀಳುತ್ತಿದ್ದರೆ ನಾರಾಯಿಣಿ ಮತ್ತು ಮಕ್ಕಳ ಕಣ್ಣಿಗೆ ಕಣ್ಣೀರಿನ ಹಬ್ಬ. ಜಿಮ್ಮಿಯ ಹೊಟ್ಟೆ ಮಾತ್ರ ಭರ್ತಿಯಾಗಿರುತ್ತಿತ್ತು.
ಬೆಳಿಗ್ಗೆಗೆ ಸಿಟ್ಟು ಕಡಿಮೆಯಾಗಿರಬಹುದು, ಏನಾದರೂ ಸ್ವಲ್ಪ ಹೊಟ್ಟೆಗೆ ಏರಿಸಿಕೊಳ್ಳಬಹುದೆಂಬ ನಾರಾಯಿಣಿಯ ನಿರೀಕ್ಷೆ, ಆಸೆಗಳೆಲ್ಲ ಸೂರ್ಯೋದಯವಾಗುತ್ತಲೇ ಕಮರಿಹೋಗುತ್ತಿದ್ದವು.

“ನಾನೇನೂ ಆ ಕಳ್ಳ ನನ್ಮಕ್ಳಿಗೆ ಹೆದರ್ಕೊಂಡು ಊರ್ಬಿಡ್ಲಿಲ್ಲ. ಎಲ್ಲ ನಿನ್ನಿಂದಾಗಿ... ಆ ಬೋಳಿಮಗನಿಂದಾಗಿ” ಮತ್ತೆ ಮತ್ತೆ ಕ್ಯಾತೆ ತೆಗೆಯುತ್ತಿದ್ದ. ನೆರೆಯ ರಾಜುವಿನ ಮನೆಯಿಂದ ಕೇಳಿಬರುವ ಸುಪ್ರಭಾತಕ್ಕೆ ಸೆಡ್ಡುಹೊಡೆಯುವಂತಿದ್ದವು ವೇಲುವಿನ ಸುಪ್ರಭಾತ.


ಇತ್ತ ಹಸಿವಿನಿಂದ ಕಂಗೆಟ್ಟೂ, ‘ಹೂತಿಟ್ಟ ಚಿನ್ನ’, ‘ಅಮ್ಮನ ಅಕ್ರಮ ಸಂಬಂಧ’ದ ಸತ್ಯಾಸತ್ಯತೆಯನ್ನು ಧ್ಯಾನಿಸಿಯೂ ದಿನೇದಿನೇ ಮಕ್ಕಳು ಬಡಕಲಾಗಿ ಮೌನಿಗಳಾಗತೊಡಗಿದವು. ಹೆಂಡ ಕುಡಿಯದ, ಬೀಡಿ ಸೇದದ ಅಪ್ಪನ ಮಾತು ಸತ್ಯವಿರಬಹುದೇ? ಅಥವಾ ತನ್ನ ಹೊಟ್ಟೆ ಕಟ್ಟಿ ಮಕ್ಕಳಿಗೆ ತಂದುಣಿಸುತ್ತಿದ್ದ ಅಪ್ಪನ ಮಾತು ಕೇಳಿದಾಗಲೆಲ್ಲ ಕಣ್ಣೀರಾಗುತ್ತಿದ್ದ ಅಮ್ಮ ಹಾಗೆಲ್ಲಾ ಮಾಡುತ್ತಾಳೆಯೇ? ತಲೆ ಚಿಟ್ಟುಹಿಡಿಯುವಂತೆ ಯೋಚಿಸಿದ ಮಕ್ಕಳು, ಜನರೊಂದಿಗೆ ಬೆರೆಯುವುದನ್ನೂ ಬಿಟ್ಟುಬಿಟ್ಟವು.


ಆಷಾಢದ ಮಳೆ ಎಷ್ಟು ಭಯಂಕರವಾಗಿ ಸುರಿಯುತ್ತಿತ್ತೆಂದರೆ ಸಾರಾಯಿ ಅಂಗಡಿಯ ಎದುರಿಗಿನ ಚರಂಡಿಯಲ್ಲಿ ಹಾಯಾಗಿ ಸುಖನಿದ್ದೆಯಲ್ಲಿ ಮುಳುಗುತ್ತಿದ್ದವರೆಲ್ಲ ಹೇಗೋ ಮನೆಸೇರಿಕೊಂಡಿದ್ದರು. ಇತ್ತ ಮನೆಯ ಮೇಲೆ ಹಾಸಿದ್ದ ಒಣಹುಲ್ಲು, ಪ್ಲಾಸ್ಟಿಕ್ಕುಗಳಿಗೆಲ್ಲ ಕೇರು ಮಾಡದ ಮಳೆಯು ಗೋಡೆಯ ಮೇಲೆ ಇಳಿದು ಹಸಿಇಟ್ಟಿಗೆಯನ್ನು ಕರಗಿಸಿ ನಿಧಾನಕ್ಕೆ ಉರುಳಿಸತೊಡಗಿತು.
“ಅಯ್ಯೋ.. ಇದ್ನೂ ಕಿತ್ಕೊಂಡ್ನಲ್ಲಾ, ನಮ್ಮನ್ನೂ ಕರ್ಕೊಳ್ಲಿ ಜೊತೆಗೆ..” ಗೋಳಿಡುತ್ತಾ ನಾರಾಯಿಣಿ ಮಕ್ಕಳ ಸಹಾಯದಿಂದ ಪಾತ್ರೆ ಪಗಡೆಗಳನ್ನೆಲ್ಲ ಹೊರಗೆಳೆದು ಹಲಸಿನ ಮರದ ಕೆಳಗೆ ಹರಡಿ ಪ್ಲಾಸ್ಟಿಕ್ಕು ಮುಚ್ಚಿದರೆ, ವೇಲು ತನ್ನ ಪ್ರೀತಿಯ ರೇಡಿಯೋದ ಆರೋಗ್ಯ ಹದಗೆಡದಂತೆ ಎಚ್ಚರ ವಹಿಸಿದ್ದ.


ರೂ. ಐದುಸಾವಿರ ಕೊಟ್ಟು ಕೊಂಡುಕೊಂಡಿದ್ದ ಸ್ವಲ್ಪ ಜಾಗದಲ್ಲಿ ಮನೆಕಟ್ಟುವುದು ಅನಿವಾರ್ಯವಾದಾಗ ವೇಲುವಿನ ಒತ್ತಡ ಜಾಸ್ತಿಯಾಗಿ ಜಗಳಕ್ಕಿದ್ದ ಎರಡು ವಿಷಯಗಳು ದಿನೇದಿನೇ ಬೆಳೆಯತೊಡಗಿದವು. ಕೂಡಿಟ್ಟ ಉಳಿದ ಆರುಸಾವಿರದಲ್ಲಿ ಹೆಂಚುಹಾಕಿದ ‘ಮನೆ’ ಎಂಬ ಗುಡಿಸಲು ನಿರ್ಮಾಣವಾಯಿತು. ಹೊಸಮನೆಗೆ ಸೇರಿದ ಮೇಲೆ ಸ್ವಲ್ಪ ದಿನ ಕ್ಯಾತೆ ತೆಗೆಯುವುದನ್ನೂ ಬಿಟ್ಟುಬಿಟ್ಟಿದ್ದ.


ಅದೆಲ್ಲಿದ್ದನೋ ಅಷ್ಟು ದಿನ, ಪೂವಯ್ಯ ತನ್ನ ಬೆನ್ನಿಗೆ ಒಂದಷ್ಟು ಜನರನ್ನು ಕಟ್ಟಿಕೊಂಡು “ಯಾರನ್ನು ಕೇಳಿ ಮನೆ ಕಟ್ಟಿದ್ಯಾ ಇಲ್ಲಿ? ಎಲ್ಲೆಲ್ಲಿಂದಲೋ ಬಂದು ಸಾಯ್ತೀರಿ ಇಲ್ಲಿ.. ಮಲಯಾಳೀ ಸೂಳೇಮಕ್ಳಾ” ಎಂದು ತಾನು ಧರಿಸಿದ್ದ ಬಿಳಿವಸ್ತ್ರಕ್ಕೂ ತನ್ನ ಮಾತಿಗೂ ಯಾವ ಸಂಬಂಧವೂ ಇಲ್ಲದಂತೆ ಕಿರುಚತೊಡಗಿದ.

“ಈ ವಾರ ಖಾಲಿ ಮಾಡ್ಬೇಕು, ಇಲ್ಲಾಂದ್ರೆ ಹುಟ್ಟಿಲ್ಲಾ ಅನ್ಸ್ಬಿಡ್ತೇನೆ.. ನಿಮ್ಗೆಲ್ಲ ಹೇಳವ್ರು ಕೇಳವ್ರು ಯಾರೂ ಇಲ್ಲ ಅಂದ್ಕೊಂಡ್ರಾ?” ಅಬ್ಬರಿಸಿದ ಪಂಚಾಯತಿ ಅಧ್ಯಕ್ಷ ಚಂದ್ರ.


ಅದು ಕೇಳಿದ ಮೇಲೆ ವೇಲು ವಿಪರೀತ ಮೌನಿಯಾದ; ನಿದ್ರಾಹೀನನಾದ. ವಾರದ ಏಳೂ ದಿನವೂ ಕತ್ತೆಯ ಹಾಗೆ ದುಡಿಯತೊಡಗಿದ. ಹಿರಿಯ ಮಗ ರಾಘವನಿಗೆ “ನಾನಿರ್ತೀನೋ ಇಲ್ವೋ ಗೊತ್ತಿಲ್ಲ, ನೀನು ಏನಾದ್ರೂ ಮಾಡಿ ಓದ್ಬೇಕು.. ಲಾಯರ್ರೋ ಪೋಲೀಸೋ ಏನಾದ್ರೂ ಆಗ್ಬೇಕು. ನಾನು ಬದುಕಿದ್ರೆ ನಿನ್ನ ಓದ್ಸೇ ಓದ್ಸ್ತೇನೆ. ಮತ್ತೆ ಆ ಶೆಟ್ಟಳ್ಳಿಯ ಮನೇನ ಹೇಗಾದ್ರೂ ಮಾಡಿ ನೀನು ಕೊಂಡ್ಕೋಬೇಕು” ಎಂದಿದ್ದ.

 ಆ ಮನೆ ಕೊಂಡ್ಕೋಬೇಕು ಎನ್ನುವ ಅಪ್ಪನ ಮಾತು ಅವನಿಗೆ ವಿಚಿತ್ರವಾಗಿ ಕಂಡಿತು. 'ಹೀಗೆಲ್ಲ ಆಗ್ಲಿಕ್ಕೆ ಇದೇನು ಸಿನಿಮಾನಾ ಅಥವಾ ಕಥೆನಾ' ಕೇಳಿದ್ದ ನೇರವಾಗಿ.


ವಾರ ಮುಗಿಯುತ್ತಾ ಬಂತು. “ಅವ್ನು ಬರ್ಲಿ ಮಾಡ್ತೀನಿ ಅವ್ನಿಗೆ... ನಾ ನನ್ನಪ್ನಿಗೆ ಹುಟ್ಟಿದ್ ಮಗ್ನೇ ಆಗಿದ್ರೆ” ಎನ್ನುತ್ತಿದ್ದ ವೇಲುವಿಗೆ “ಏನಾಗುತ್ತೆ ನಿಮಗೆ.. ಬರೀ ಬಾಯಲ್ಲಿ” ಕುಟುಕಿದಳು ನಾರಾಯಿಣಿ.


ಅವತ್ತು ಸಂಜೆ ಶಾಲೆಯಿಂದ ಮನೆಗೆ ತಲುಪಿದ್ದೇ ಅಂಗಳದಲ್ಲಿ ಪೂವಯ್ಯನ ಹೆಣ ಇಷ್ಟಗಲ ಕಣ್ಣುತೆರೆದು ಆಕಾಶ ದಿಟ್ಟಿಸುತ್ತಾ ಮಲಗಿದ್ದನ್ನು ಕಂಡು ಮಕ್ಕಳು ಗಾಬರಿಬಿದ್ದು ಜೋರಾಗಿ ಕಿರುಚಿಕೊಂಡವು. ಎಷ್ಟು ಹುಡುಕಿದರೂ ವೇಲುವಿನ ಸುಳಿವು ಸಿಗಲೇ ಇಲ್ಲ. ಕೆಲವು ಸಂಘಟನೆಗಳ ಸಹಕಾರವಿದ್ದುದರಿಂದ ಅವನ ಕುಟುಂಬವನ್ನು ಅಲ್ಲಿಂದ ಓಡಿಸಲು ಪೂವಯ್ಯನ ಹಿಂಬಾಲಕರಿಗೆ ಸಾಧ್ಯವಾಗಲಿಲ್ಲ. ಪಂಚಾಯತ್ ಅಧ್ಯಕ್ಷ ಚಂದ್ರ,ಈ ಕುಟುಂಬದ ಮೇಲೆ ಸಾಮಾಜಿಕ ಬಹಿಷ್ಕಾರದ ಆಜ್ಞೆ ಹೊರಡಿಸಿದ.


ಬದುಕು ಮೂರಾಬಟ್ಟೆಯಾಯಿತು. ವೇಲುವಿನ ಪತ್ತೆಯಾಗದೆ ಅವನ ಮೇಲೆ ಊರಿನವರು ದಿನಕ್ಕೊಂದು ಕತೆ ಕಟ್ಟಿ ಬೆಳೆಸತೊಡಗಿದರು. ನಾರಾಯಿಣಿ ಮಕ್ಕಳಿಗಾಗಿ ತನ್ನ ಬದುಕನ್ನು ಒತ್ತೆಯಿಟ್ಟಳು.

***

ತಹಶೀಲ್ದಾರ್ ಆದ ಖುಷಿ ರಾಘವನಿಗಿಂತ ನಾರಾಯಿಣಿಗೇ ಹೆಚ್ಚಿತ್ತು. ಊರಿನ ಬಹಿಷ್ಕಾರ ಈಗ ಕ್ರಮೇಣ ಕುಸಿದು ಒಬ್ಬಬ್ಬರೇ ಹತ್ತಿರವಾಗತೊಡಗಿದರು. ಕಾಕತಾಳೀಯವೆಂಬಂತೆ ಶೆಟ್ಟಳ್ಳಿಯ ಆ ಮನೆಮಾರುವುದಕ್ಕೆ ಅದರ ಮಾಲಿಕ ರವಿಗೌಡ ಹೊರಟಿರುವ ಸುದ್ದಿ ಆ ದಿನದ ‘ಯುಕ್ತಿ’ ಪತ್ರಿಕೆಯಲ್ಲಿ ನೋಡಿ ಅದನ್ನು ಕೊಳ್ಳಲು ಮರುದಿನ ಹೊರಡುವವನಿದ್ದ ರಾಘವ ತುಂಬಾ ಭಾವುಕನಾಗಿದ್ದ.


ಆ ರಾತ್ರಿಯ ಕನಸಿನಲ್ಲಿ ಶೆಟ್ಟಳ್ಳಿಯ ಮನೆಯ ಹಿಂಭಾಗದ ಬೆಣ್ಣೆಹಣ್ಣಿನ ಮರದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹಣ್ಣುಗಳು ತೂಗಿದ್ದವು. ಮುಖಕ್ಕೆಲ್ಲ ಬಳಿದುಕೊಂಡಂತಿದ್ದ ಬಿಳಿಯ ಮೀಸೆ, ಗಡ್ಡದಿಂದ ತುಂಬಿಕೊಂಡಿದ್ದ ತನ್ನಪ್ಪ ಮೇಲಿನಿಂದ ಒಂದು ಗುದ್ದಲಿ, ಹಾರೆ ಹಿಡಿದು ಕಾಯುತ್ತಿದ್ದ. ‘ಚಿನ್ನ...ಮನೆ...’ ಕನವರಿಸುತ್ತಲೇ ಇದ್ದ ರಾಘವ.
*


ಕಾಜೂರು ಸತೀಶ್





No comments:

Post a Comment