ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, February 26, 2020

ಸಂತನೊಬ್ಬನ ಕವಿತೆಯ ಹೆಜ್ಜೆಗಳು



ಗೆಳೆಯ ಪ್ರವೀಣಕುಮಾರ ದೈವಜ್ಞಾಚಾರ್ಯ ಅವರ 'ಸಂತನೊಬ್ಬನ ಹೆಜ್ಜೆಗಳು' ಅನೇಕ ವರ್ಷಗಳ ಕಾಲ ಗರ್ಭಾವಸ್ಥೆಯಲ್ಲಿದ್ದು ಕಳೆದ ತಿಂಗಳು ಪ್ರಸವಿಸಿದೆ. ಪುಸ್ತಕ ಪ್ರಾಧಿಕಾರದಿಂದ ಧನಸಹಾಯ ಬಂದಿದ್ದರೂ ಅದನ್ನು ಹಿಂದಿರುಗಿಸಿ ತಮ್ಮ ಕವಿತೆಗಳು ಮತ್ತಷ್ಟೂ ಪಕ್ವಗೊಳ್ಳಲು ಸಂತನ ಹಾಗೆ ಕಾದವರು ಅವರು. ಕಡೆಗೂ ಅವರ ಕವಿತೆಗಳಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಅದರೊಂದಿಗೆ ತಮ್ಮನ್ನು ತಾವು ಬಿಡುಗಡೆಗೊಳಿಸಿಕೊಂಡ ಕವಿಯೊಬ್ಬನು ಅನುಭವಿಸುವ ಸಣ್ಣದೊಂದು ಸುಖವನ್ನೂ ಅನುಭವಿಸಿದ್ದಾರೆ. ಈ liberation ಅವರ ಕಾವ್ಯದ ಜೀವ. ನಿರೋಗಿ ಎನ್ನುವ ಕವಿತೆಯಲ್ಲಿ ಬಿಡುಗಡೆಯ ಸ್ವರೂಪ ಹೀಗೆ ಮೂಡಿದೆ

ಒಂದು ಹೆರಿಗೆ ಕೋಣೆ
ನನ್ನ ಕಣ್ತೆರೆಸಿತು

ಶವಾಗಾರ ನನ್ನ
ಹೃದಯವನ್ನೇ ಮಾತಾಡಿಸಿತು

ಇಡೀ ಆಸ್ಪತ್ರೆ ನನಗೆ
ಬಹುದೊಡ್ಡ ಪಾಠಶಾಲೆ

ಎದೆಮುಷ್ಠಿ ಬಿಗಿಹಿಡಿದು
ಹೊರಬಂದೆ

ಹಿಡಿದ ಕಾಯಿಲೆ
ವಾಸಿಯಾಗಿತ್ತು

ನಾನೀಗ ನಿರೋಗಿ
*


ಸಂತನೊಬ್ಬನ ಧ್ಯಾನಸ್ಥ ಮನಸ್ಥಿತಿಯಲ್ಲಿಯೇ ಕವಿತೆ ಜನಿಸುವುದು. ಇಲ್ಲಿರುವ ಸಂತನ ಧ್ಯಾನ ಪಾರಮಾರ್ಥಿಕವಾದದ್ದಲ್ಲ; ವಾಸ್ತವದ್ದು. ಅದರ ಹೆಜ್ಜೆಗಳು ಅಪ್ಪ, ಊರು, ಬಿಸಿಲು,ಮಳೆ, ಪ್ರೀತಿ,ಗಾಂಧಿ,ಬಸವ,ಸಿಟ್ಟು , ಬೆಳಕು,ಬಯಲು, ಜನನ, ಮರಣಗಳನ್ನು ಕ್ರಮಿಸಿ ಸಾಗುತ್ತವೆ. ಹೆಚ್ಚೆಂದರೆ ಅವು ಆತ್ಮಗತೀಯವಾದವುಗಳು.

ಮಳೆಗಾಲದ ಒಂದು ಸಂಜೆ
ಹಾದಿಬದಿಯಿದ್ದ ನದಿಯನು
ಹೆಗಲ ಮೇಲೆ ಹೊತ್ತು ನಡೆದೆ
ನದಿಯೊಂದು ಮಗು
ನನ್ನ ತೋಳುಗಳಲ್ಲಿ
ಮತ್ತೂ ಮಲಗಿ ನಿದ್ರಿಸುವಾಗ
ಮಡಿಲಲ್ಲಿ.(ನದಿಯ ಕನಸು)

ಈ ಕಡುರಾತ್ರಿ ಯಾರಿಗೂ ತಿಳಿಯದೆ
ಧಿಮ್ಮನೆ ಧೋ ಸುರಿದ
ಮಳೆಯ ಎದೆಯೊಳಗೆ
ಅಷ್ಟು ನೋವ ಹತ್ತಿಟ್ಟವರಾರು?(ಯಾರಿದ್ದೀರಿ ನನ್ನ ಜೊತೆ?)
*
ಶಬ್ದ-ಭಾವಗಳನ್ನು ದುಂದುವೆಚ್ಚ  ಮಾಡದೆ ಬರೆಯುವ ದೈವಜ್ಞಾಚಾರ್ಯರು ಹೆಚ್ಚು ಹೆಚ್ಚು ಬರೆಯುವಂತಾಗಬೇಕು. ಅದೇ ನಮ್ಮೆಲ್ಲರ ನಿರೀಕ್ಷೆ.
*
-ಕಾಜೂರು ಸತೀಶ್

No comments:

Post a Comment