ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, March 16, 2021

ತಲೆಮಾರು

ಹೊಸದಾಗಿ ಬರೆಯಲು ಆರಂಭಿಸಿದ ಯುವಕನೊಬ್ಬ ಹಿರಿಯ ಕವಿ 'ಶಾಂತಸಮುದ್ರ'ರನ್ನು ಭೇಟಿಯಾಗಲು ಬೆಂಗಳೂರಿನ ಅವರ ನಿವಾಸಕ್ಕೆ ತೆರಳಿದನು.

ಶಾಂತಸಮುದ್ರರು ಪುಸ್ತಕವನ್ನು ಓದುತ್ತಿದ್ದರು. ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.

ತಾನೊಬ್ಬ ಕತೆಗಾರ ಮತ್ತು ಕವಿ ಎಂದು ತನ್ನ ಪರಿಚಯವನ್ನು  ಯುವಕನು ಹೇಳಿಕೊಂಡನು . ತನ್ನ ಬರೆಹಗಳನ್ನು ನಾಡಿನ ಪ್ರಖ್ಯಾತ ಕತೆಗಾರರಾದ ಸೆಬಾಸ್ಟಿಯನ್ ಅವರು ಬಹುವಾಗಿ ಮೆಚ್ಚಿ ಜನಪ್ರಿಯ  'ಪ್ರಜಾಮಾತು' ಪತ್ರಿಕೆಯ ಉಪಸಂಪಾದಕರಾದ ಸಂದೀಪ ಅವರಿಗೆ ಪ್ರಕಟಿಸಲು ತಿಳಿಸಿದ್ದರಿಂದ ಆ ಪತ್ರಿಕೆಯಲ್ಲಿ ಎರಡು ಕತೆಗಳು ಪ್ರಕಟಗೊಂಡಿವೆ ಎಂದು ಹೇಳಿದನು.

ತಾನು ಬರೆಯುವ ಕತೆಗಳ ಪಾತ್ರಗಳ ಬಗ್ಗೆ ಹೇಳಿಕೊಂಡನು. ತನ್ನ ಊರು, ಮನೆ,ಕುಟುಂಬ, ಪ್ರೇಯಸಿಯರು, ಹವ್ಯಾಸ, ಅಭ್ಯಾಸ , ಕೆಲಸ, ಮಾಧ್ಯಮ, ರಾಜಕೀಯ, ಶಿಕ್ಷಣ... ಇವುಗಳ ಕುರಿತು ಹೆಮ್ಮೆಯಿಂದ  ಮಾತನಾಡಿದನು..

'ನಿಮ್ಮ ಯಾವುದೋ ಒಂದು ಕತೆ ಓದಿದ್ದೇನೆ' ಎಂದು ಮಾತಿನ ನಡುವೆ ಸೇರಿಸಿದನು.

ಶಾಂತಸಮುದ್ರರು ತಲೆಯಾಡಿಸುತ್ತಿದ್ದರು. ಒಂದು ಪದವನ್ನೂ ಅವರು ಆಡುತ್ತಿರಲಿಲ್ಲ. 

ಒಂದು ಗಂಟೆ ಕಳೆಯಿತು. ಶಾಂತಸಮುದ್ರರು ಮೌನ ಮುರಿದರು. ' ನನಗೆ ನಿದ್ದೆ ಬರುತ್ತಿದೆ.. ವಯಸ್ಸಾಯ್ತಲ್ವಾ.. ಅವಕಾಶ ಕೊಡ್ತೀರಾ?' ಎಂದರು.

ಯುವಕ ಅವರೊಡನೆ ಒಂದು selfie ತೆಗೆದುಕೊಂಡು ಅದನ್ನು ಡಿಪಿಗೆ ಹಾಕಿ , status ಮತ್ತು ಗುಂಪುಗಳಲ್ಲಿ ಹಂಚಿಕೊಂಡು, ಅಲ್ಲಿಂದ ತೆರಳಿದನು.

ಹೊರಡುವಾಗ 'ಬಾಯ್ ಸರ್' ಎಂದನು.
*


ಕಾಜೂರು ಸತೀಶ್ 

No comments:

Post a Comment