ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, November 14, 2020

ಗೋಪಾಲ್ ಹೊನ್ನಾಲಗೆರೆ : ಭಾರತೀಯ ಕಾವ್ಯದ ವಿಭಿನ್ನ ಧ್ವನಿ



ಭಾರತೀಯ ಸಾಹಿತ್ಯ ವಲಯದಲ್ಲಿ ಎಲೆಮರೆಯ ಕಾಯಿಯಂತೆ ಬಾಳಿದವರು ಕನ್ನಡಿಗ ಗೋಪಾಲ್ ಹೊನ್ನಾಲಗೆರೆ  . ಇಂಗ್ಲಿಷಿನಲ್ಲಿ ಕಾವ್ಯ ಕೃಷಿ ಮಾಡಿದ ಗೋಪಾಲ್ ಹುಟ್ಟಿದ್ದು 1942 ರಲ್ಲಿ. ಹುಟ್ಟೂರು ವಿಜಯಪುರ. ಚಿಕ್ಕವರಿದ್ದಾಗಲೇ ತಂದೆಯನ್ನು ಕಳೆದುಕೊಂಡ ಗೋಪಾಲ್ , ವೇದ ಪಂಡಿತರಾಗಿದ್ದ ಅಜ್ಜನ ಆಶ್ರಯದಲ್ಲಿ ಬೆಳೆದರು.

ಹೈದರಾಬಾದಿನ ಓಯಾಸಿಸ್ ಶಾಲೆಯಲ್ಲಿ ಓದುತ್ತಿರುವಾಗಲೇ ಸಾಹಿತ್ಯದ ಜೊತೆಗಿನ ಸಖ್ಯ. ಅಲ್ಲೇ ಕಲೆಯೊಂದಿಗೆ ಜೀವನ ಸಂಗಾತಿಯನ್ನೂ ಹುಡುಕಿಕೊಂಡರು. ಆ ನಂತರ ಇವರಿಬ್ಬರು ಪಂಚಾಗ್ನಿ, ವಿಜಯವಾಡ, ಪಂಜಾಬ್ ಮತ್ತಿತರ ಕಡೆಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಬರೆಹ, ಸುತ್ತಾಟಗಳೇ ಇವರ ಬದುಕಿನ ಬಹುಪಾಲನ್ನು ಆವರಿಸಿತ್ತು. ಇವರ ಇಬ್ಬರು ಮಕ್ಕಳಲ್ಲಿ ಒಬ್ಬ ಶಾಲೆಗೆ ತೆರಳುವ ಸಂದರ್ಭ ಅಪಘಾತದಲ್ಲಿ ತೀರಿಹೋದ. ಆ ನಂತರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತು.
ತಮ್ಮ ಕಡೆಗಾಲವನ್ನು ಗೋಪಾಲ್ ಅವರು ಬೆಂಗಳೂರಿನ ವೃದ್ಧಾಶ್ರಮವೊಂದರಲ್ಲಿ ಕಳೆದರು. ಆ ಹೊತ್ತಲ್ಲೇ ಅವರು ಕ್ಯಾನ್ಸರ್ ಪೀಡಿತರಾದರು . ಸಂಬಂಧಿಕರೊಬ್ಬರು ಅವರನ್ನು ದೆಹಲಿಗೆ ಕರೆದೊಯ್ದರು. 2003 ರಲ್ಲಿ ಗೋಪಾಲ್ ಅಲ್ಲೇ ತೀರಿಕೊಂಡರು .


ಗೋಪಾಲ್ ಅವರ ಕವಿತೆಗಳು ಪ್ರಕಟಗೊಂಡಿದ್ದು ಎಪ್ಪತ್ತರ ದಶಕದ ನಂತರ .ಇವು ಅವರ ಪ್ರಕಟಿತ ಕೃತಿಗಳು: A Gesture of fleshless sound, Zen tree and the wild Innocents, Wad of poems, The fifth, The Nudist camp, Internodes.

ತಮ್ಮ ಜೀವಿತಾವಧಿಯಲ್ಲಿ ಯಾವ ಸನ್ಮಾನ ,ಪ್ರಚಾರಗಳ ಹಂಗಿಲ್ಲದೆ ಕವಿತೆಗಳನ್ನು ‘ ಬಾಳಿದವರು ’ ಗೋಪಾಲ್ ಹೊನ್ನಾಲಗೆರೆ  . ವಸಾಹತೋತ್ತರ ಭಾರತದ ಭಿನ್ನ ಕವಿಯಾಗಿ ಗುರುತಿಸಬಹುದಾದ ಹೊನ್ನಾಲ್ಗೆರೆಯವರ ಕವಿತೆಗಳಲ್ಲಿ ಹೆಚ್ಚಾಗಿ ತಮ್ಮ ಅಲೆಮಾರಿತನದ , ಧರ್ಮ - ತತ್ವಶಾಸ್ತ್ರಗಳ ಅಪಾರ ಜ್ಞಾನದ ಪಡಿಯಚ್ಚುಗಳಿವೆ. ಸಿದ್ಧಮಾದರಿಯನ್ನು ಮುರಿದು ವೈನೋದಿಕವಾದ, ಕಥನ ಮಾದರಿಯ ಶೈಲಿಯನ್ನು ಅಳವಡಿಸಿಕೊಂಡ ಚಹರೆಗಳಿವೆ . ಅವರ ಕವಿತೆಗಳನ್ನು ಅಧ್ಯಯನ ಮಾಡಬೇಕಾದ ತುರ್ತು ನಮ್ಮೆದುರಿಗಿದೆ.



ಗೋಪಾಲ್ ಹೊನ್ನಾಲಗೆರೆ  ಅವರ ಎರಡು ಕವಿತೆಗಳು

ಇರುವೆ
----------
ಆತ್ಮರತಿಯ ತಲೆಮಾರಿನವರೇ ,
ಕಟ್ಟಿರುವೆಗಳ ಗಬಗಬನೆ ತಿಂದು
ನಾಲಗೆಯಲ್ಲೇ ಅಡುಗೆ ಮಾಡುವವರೇ ,
ಕೇಳಿಸಿಕೊಳ್ಳಿ :

ನೀವು ರೊಟ್ಟಿಯ ಮೇಲೆ ಬೆಣ್ಣೆ ಲೇಪಿಸಿದಾಗ
ಒಂದು ಇರುವೆ ಬಿದ್ದಿತ್ತು ಅದರಲ್ಲಿ
ಬೆಂಕಿಕಡ್ಡಿಯಲ್ಲಿ ಅದ ಮೇಲೆತ್ತಿದೆ
ಇಷ್ಟೇ ಇಷ್ಟಿರುವ ಅದರ ಜೀವಕ್ಕೆ
ಇಷ್ಟೇ ಇಷ್ಟು ಸಹಾಯ ನನ್ನಿಂದಾಯಿತು.

ಈಗ ನಿಮಗಿಂತಲೂ ಸಂತೋಷ ನನಗಿದೆ
ನನಗಿಂತಲೂ ಸಂತೋಷ ಆ ಇರುವೆಗೆ.

ಆ ಇರುವೆಯ ನಡಿಗೆ ಅದರ ಅರಮನೆಗೆ.
ಬಾಯಲ್ಲಿ ಒಂದು ಸಕ್ಕರೆಯ ತುಣುಕು.
ಅದೇ ಹಾದಿಯಲ್ಲಿ ಸಾಲು ಸಾಲು ಇರುವೆಗಳು
ಕಿತ್ತಾಡದೆ, ದಿಕ್ಕು ತಪ್ಪದೆ
ಅಹೋರಾತ್ರಿ ದುಡಿಯುತ್ತಿವೆ ಬದುಕಿಗಾಗಿ
ಮಾರ್ಕ್ಸ್, ಮಾವೊ ಎಲ್ಲ ಹೇಗೆ ತಿಳಿಯಬೇಕು ಅವಕ್ಕೆ ?
***

ಸೇಬಿನ ಕಾಲದ ಸಾವು
-----------------------------

.. ಹಾಗೆ ಒಂದು ರಾತ್ರಿ
ಸಾವೆಂಬ ಪತಂಗ
ಹಸಿಸೇಬಿನ ಪ್ರೇಯಸಿಯ ಮೇಲೆ
ಒಂದು ಸುರಂಗ ಕೊರೆಯಿತು.
ಅದರ ಬೀಜಗಳನ್ನು ತಿಂದು
   ಎರಡು ಮೊಟ್ಟೆಯಿಟ್ಟು ಹಾರಿಹೋಯಿತು.

... ಹೀಗೆ ಆ ಆಡಮ್
    ಕೆಂಪಾದ ಸೇಬನ್ನು
    ಎರಡು ಭಾಗಗಳಾಗಿ ಕತ್ತರಿಸಿದಾಗ
    ಅವು ಪ್ರೀತಿಯ ಈವ್ಳ  ಕಣ್ಣುಗಳ ಹಾಗೆ ಕಪ್ಪಾಗಿ
    ಎರಡು ಪತಂಗಗಳು ಹಾರಿಹೋಗುವುದ ಕಂಡ.

ಬೆರಗಿನಿಂದ ಕೇಳಿದ:
ಸೇಬಿನ ಪ್ರೀತಿಯೊಳಗೆ ಪತಂಗಗಳ್ಹೇಗೆ ನುಸುಳಿತು
ಒಂದು ಸಣ್ಣ ತೂತನ್ನೂ ಮಾಡದೆ?

ನಮ್ಮ ತಲೆಯಲ್ಲಿ
ತೂತು ಮಾಡದೆ ನುಸುಳುವ
ಚಿಂತನೆಗಳ ಹಾಗೆ.
**


ಅನುವಾದ- ಕಾಜೂರು ಸತೀಶ್

1 comment:

  1. What lovely poems and what lovely translations...enjoyed reading both poems 👍🙂

    ReplyDelete