ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, November 13, 2020

ಗಾಯದ ಹೂವುಗಳು ಕೃತಿಯ ಕುರಿತು ಕಾವ್ಯ ಎಸ್ ಅವರ ಅನಿಸಿಕೆ



"ಗಾಯದ ಹೂವುಗಳು " 2015 ರ ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ" ಪಡೆದ ಕೊಡಗಿನ ಯುವಕವಿ ಕಾಜೂರು ಸತೀಶ್ ರವರ ಮೊದಲ ಸಂಕಲನ ಎಂಬುದು ನಮ್ಮಲ್ಲರಿಗೂ ಹೆಮ್ಮೆಯ ವಿಷಯ. ಫಲ್ಗುಣಿ ಪ್ರಕಾಶನದಲ್ಲಿ ಪ್ರಕಟಣೆಗೊಂಡು ಖ್ಯಾತ ಕವಿಗಳಾದ ಶ್ರೀ ವಾಸುದೇವ ನಾಡಿಗ್ ರವರ ಮುನ್ನುಡಿ ಬರೆಸಿಕೊಂಡು ಶ್ರೀ ಪ್ರವೀಣ ಕುಮಾರ ದೈವಜ್ಞಾಚಾರ್ಯ ರವರ ಭರವಸೆಯ ಬೆನ್ನುಡಿ ಲೇಪಿಸಿಕೊಂಡಿರುವ ಕವನ ಹೊತ್ತಿಗೆ.
ಕವಿತೆಯೆಂದರೇನೆಂದೇ 
                                                             ತಿಳಿಯದ, 
                         ನನ್ನನ್ನೇ ಉಸಿರಾಡಿಕೂಳ್ಳುತ್ತಿರುವ
                                                   ಅಪ್ಪ -ಅಮ್ಮನಿಗೆ.         ಎಂಬ ಕವಿಯ ಅರ್ಪಣಾಭಾವದಿಂದ ಅರ್ಪಿಸಿಕೊಳ್ಳುತ್ತ ಹೋಗುತ್ತದೆ. 

"ಒಂದು ದಿನ ನನ್ನೊಳಗಿನ ಬೇಗುದಿಗಳಿಗೆ ಬೇರುಹುಟ್ಟಿ ಕಾಲ್ಬೆರಳ ತುದಿಯಿಂದ ನೆತ್ತಿಗೆ ಹಬ್ಬಿಕೊಳ್ಳತೊಡಗಿದಾಗ, ಕವಿತೆಯ ತೆಕ್ಕೆಯೊಳಗೆ ಬಿದ್ದೆ "ಎಂದು  ಮುನ್ನುಡಿ ಬರೆದು ಕೊಳ್ಳುವ ಕವಿ, ಕವಿತೆಗಳನ್ನು ಹೆರುವ ಪರಿಯೇ ವಿಭಿನ್ನ. 

 ಇರುವೆ, ಒಂಟಿ, ಊದುಕೊಳವೆ, ಖಾಲಿಡಬ್ಬ, ಚಪ್ಪಲಿಗಳು, ಮಾತು, ಮೌನ ಮತ್ತು ಕವಿತೆ, ಮರಣದ ಹಾಡು, ಹಾವು, ಮೈಲಿಗೆ, ಬೀದಿಯ ಕವಿತೆ, ಕಿಟಕಿ ತೆರೆದು ಕುಳಿತೆ, ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ, ನೆಲವಿಲ್ಲದವನ ಉಯಿಲು, ಬೇಲಿ, ನದಿ, ಕಾಡು ಕವಿತೆ, ಮಿಕ್ಕವರಾರನ್ನೂ ಹೀರಕೂಡದು, ಒಂದು ಅರ್ಜಿ ಮತ್ತು ಹದಿನಾಲ್ಕು ತಿಂಗಳು, ನೀನು ಕೊಲೆಯಾದ ಮೇಲೆ ನಿನ್ನ ಅಂಗಿ ಧರಿಸಿ ಬರೆದದ್ದು, ಕಡಲಾಚೆಯ ಹುಡುಗಿಗೆ, ಈ ರಾತ್ರಿಗಳಲ್ಲಿ ನಿದ್ರಿಸಲಾರೆ, ನಾವಿಬ್ಬರು ತೀರಿಕೊಂಡ ಮೇಲೆ,ಒಲೆ ಮತ್ತು ಅವ್ವ, ಅರ್ಥವಾಗಿರಬಹುದು, ನೀನು ನನ್ನ  ಜೊತೆ ಬದುಕಿಕೊಳ್ಳಬಹುದು, ಬೋನ್ಸಾಯ್ ಸ್ವಗತ, ಭಿಕ್ಷುಕ ಕವಿಯ ಕವಿತೆಗಳಲ್ಲದ ಸಾಲುಗಳು, ಅಸ್ವಸ್ಥ ಕವಿತೆಗಳು, ನೋಟೀಸು, ಸಲಾಮು, ನನ್ನ ಕವಿತೆ, ಬಲಿ, ಆಕಾಶ ಧುಮ್ಮಿಕ್ಕುತ್ತಿದೆ ನೀರಾಗಿ, ಇರಲಿ, ಅಪ್ಪ ಮತ್ತವನ ಹತ್ಯಾರಗಳು, ಎಲ್ಲ ಅಮಾವಾಸ್ಯೆಗಳಲ್ಲೂ ಪದ್ಯವೊಂದಿರಲಿ ಬೆಳಕಿಗೆ, ಸಾವು, ಗಾಯದ ಹೂವುಗಳು, ಆಲ್ಬಮ್, ಯಾರದಿದು? ಇನ್ನೂ ಬದುಕಿರುವ ಕವಿತೆಗಳು, ಮೊದಲ ರಾತ್ರಿಯಂದು, ನನ್ನ ಮಿತ್ರರೆಲ್ಲಾ ಹಾಯಾಗಿದ್ದಾರೆ, ನಿನಗೆ, ಕೊಳದ ಬಳಿಯ ಮರ, ಹಸಿಮೀನು ಮತ್ತು ನನ್ನ ಕವಿತೆ, ಎಡ ಮತ್ತು ಬಲ, ಮಧ್ಯರಾತ್ರಿಯ ನಂತರದ ಮಳೆ, ಶಬ್ದ ಸಮರ, ಮರ, ಕಸದ ತೊಟ್ಟಿಯ ಕಾಗದದ ಲೋಟಗಳು, ಪರೀಕ್ಷೆ, ಉಯಿಲು. 

ಈ ಮೇಲಿನ 53 ಹೂವುಗಳಿರುವ ಹೂಗುಚ್ಛ "ಗಾಯದಹೂವುಗಳು".ಪ್ರತಿಯೊಂದು ಹೂವುಗಳೂ ಗಾಯದ ಹೂವುಗಳಾಗಿ ಅರಳಿ, ಸುತ್ತೆಲ್ಲಾ ಪರಿಮಳ ಸೂಸುತ್ತಾ ಎಲ್ಲರನ್ನು ಆಕರ್ಷಿಸಿ ಘಮಘಮಿಸುತ್ತಿರುವ ಪ್ರೀತಿಯ ಪಾರಿಜಾತಗಳಾಗಿವೆ.

ಕೇಳಿಸಿಕೊಳ್ಳಿ 
ಒಂದು ಇರುವೆ ಸತ್ತಿದೆ 
ನನ್ನ ಕಾಲ ಬುಡದಲ್ಲಿ 
        
      ಎನ್ನುವ ಕವಿಯು ಸಮಾಜದ ವ್ಯವಸ್ಥೆ, ಶ್ರೀಮಂತವರ್ಗ,ಹತಾಶೆಗಳನ್ನು ಕಡಿಮೆ ಪದಗಳಲ್ಲಿ ಅತಿಸೂಕ್ಷ್ಮವಾಗಿ ಶಬ್ಧ ಸಂವೇದನೆಯಿಂದ  ಪ್ರಸವಿಸಿದ್ದಾರೆ. 

 ಸತೀಶ್  ರವರ ಕವಿತಗಳನ್ನು ಓದುತ್ತಾ ಹೋದರೆ ಅವು ಬರಿ ಕವಿತೆಗಳಾಗಿ ಅಭಿವ್ಯಕ್ತವಾಗುವುದಿಲ್ಲ. ಅವುಗಳು ಅವರು ಬದುಕಿಕೊಳ್ಳಲು ಹಡೆದ ಮಕ್ಕಳಾಗಿವೆ. ಕವಿಗೆ ಕವಿತೆಗಳೇ ಬದುಕಿನ ಭರವಸೆಯ ಮೌಲ್ಯಗಳು. 

ಚಪ್ಪಲಿಗಳು ನಾವು ಎಂದೆಂದೂ ಬಹಿಷ್ಕ್ರತರು 
ಮಸೀದಿ ಮಂದಿರ ಇಗರ್ಚಿಗಳಿಗೂ ಅಸ್ಪೃಶ್ಯರು 
ಇತಿಹಾಸದ ಚರ್ಮ ಸುಲಿದು ಒಣಗಿಸಿ ನಮ್ಮ ಸೃಷ್ಟಿ 
  
    ಈ ಕವಿತೆಯಲ್ಲಿ ಮೌಢ್ಯ, ಜಾತೀಯತೆ, ಮೇಲು -ಕೀಳು ಮನೋಧೋರಣೆ, ಅಸಹಾಯಕತೆ, ಬಡತನ, ಅಸ್ಪೃಶ್ಯತೆ, ಸಮಾಜದ ವ್ಯವಸ್ಥೆಯ ಬಗ್ಗೆ ಇರುವ ಅತೃಪ್ತಿಯನ್ನು ಚಪ್ಪಲಿಗಳು ಕವಿತೆಯ ಮೂಲಕ ಧನ್ಯತಾ ಭಾವದಲ್ಲಿ ಕವಿತೆಯಾಗಿ ಹಡೆದಿದ್ದಾರೆ. 

ಕಡಲಿನ ಆಚೆ ಬದಿಯಲ್ಲಿ 
ನಿನ್ನದೊಂದು ತೊಟ್ಟು ರಕ್ತ 
ಈಚೆಬದಿಯಲ್ಲಿ ನನ್ನದೊಂದು ತೊಟ್ಟು ರಕ್ತ 
ಚೆಲ್ಲಿ ಬಿಡೋಣ 
 
ಕವಿ ಕವಿತೆಗಳಲ್ಲಿ ಬಳಸಿರುವ ರೂಪಕಗಳು, ಪ್ರತಿಮೆ, ಸಾಂಕೇತಿಕ ಭಾಷೆ ಪ್ರತಿಯೊಂದು ಅವರು ಕವನ ಹೆರುವ ರೀತಿಗೆ ಉದಾಹರಣೆ. 

ಹಸಿದ ಜಿಗಣೆಯೇ 
ಬಾ ಹೀರು ನನ್ನನ್ನು 
ಸ್ವಲ್ಪದರಲ್ಲೇ ನೀನು 
ದ್ರಾಕ್ಷಿಯಾಗಿ ಉದುರುತ್ತೀ 

  ಕವಿಯ ಜಿಗಣೆಯೊಂದಿಗೆ ನಿಜಕ್ಕೂ ಸೋಜಿಗವೆನ್ನಿಸುತ್ತದೆ.ಮಿಕ್ಕವರಾರನ್ನೂ ಹೀರಕೂಡದು ಎಂದು ಹೇಳುವ ಪರಿ, ಕವಿಗೆ ಇತರರ ಮೇಲಿರುವ ಉದಾರತೆ, ಕಾಳಜಿ, ವಿಶಾಲ ಮನೋಭಾವವನ್ನು ಗೋಚರಿಸುತ್ತದೆ.

ಸತೀಶ್ ರವರ ಕವಿತೆಗಳು ಹಸಿವು, ಬಡತನ, ಸಮಾಜದ ಅವ್ಯವಸ್ಥೆ, ಮೋಸ, ವಂಚನೆ, ಭ್ರಷ್ಟಾಚಾರ, ಹತಾಶೆ, ಜಾತೀಯತೆ, ಅಸಮಾನತೆ, ಪ್ರೀತಿ -ಪ್ರೇಮ, ಪ್ರಕೃತಿಯ ಬಗ್ಗೆ ಕಾಳಜಿ, ಪ್ರಕೃತಿ ವಿನಾಶದ ಬಗ್ಗೆ ಅಸಮಾಧಾನ ಹೀಗೆ ಸುಗಂಧ ಬೀರುತ್ತಾ ಒಂದೊಂದು ಕವಿತೆಯು ಸೂಕ್ಷ್ಮ ಸಂವೇದನೆಯೊಂದಿಗೆ ಮೊಗ್ಗಾಗಿ ಜೀವನದ ಆಳವಾದ ಅನುಭವದೊಂದಿಗೆ ಅರಳುತ್ತಾ ಹೋಗಿವೆ. 

ಕವಿತೆಗಳು ರೋಷದಿಂದ ತಲ್ಲಣಿಸುವಂತೆ  ಭಾಸವಾದರೂ ಆರೋಗ್ಯಯುತ ಸಮಾಜ ರೂಪುಗೊಳ್ಳಲು ಬದಲಾವಣೆಗಳಿಗಾಗಿ ಮಿಡಿಯುವ ತುಮುಲವಿಸುತ್ತದೆ ನನಗೆ.

ಕವಿತೆಗಳನ್ನು ವ್ಯಾಖ್ಯಾನಿಸುವುದಕ್ಕಿಂತ  ಅವುಗಳನ್ನು ಸವಿದರೆ ಅವುಗಳಲ್ಲಿನ ಕವಿಯ ಸಾಹಿತ್ಯ ಅಭಿವ್ಯಕ್ತಿಯ ಪರಿಚಯವಾಗುತ್ತದೆ. 

ಮಲೆಯಾಳಂ,ಇಂಗ್ಲೀಷ್ ಭಾಷೆಗಳ ಸಾಹಿತ್ಯದ ರುಚಿವುಂಡು ಅನುವಾದಗಳಲ್ಲಿ  ತೊಡಗಿದ್ದರೂ(ಮಲಯಾಳಂ ಅನುವಾದಿತ ಕವಿತೆಗಳ ಸಂಕಲನ" ಕಡಲ ಕರೆ"ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟವಾಗಿದೆ) ಕನ್ನಡವನ್ನು ಹೆಚ್ಚು ಪ್ರೀತಿಸಿ ಗುರುತಿಸಿಕೊಂಡಿರುವುದು ಸತೀಶ್ ರವರ ಹೆಚ್ಚುಗಾರಿಕೆ. 

  'ದೊಡ್ಡವರ ಶಿಫಾರಸ್ಸಿಲ್ಲದೆ ಬಹುಮಾನ ದಕ್ಕುವುದಿಲ್ಲ'
 ಎಂಬ ಕವಿಯ ನಿಲುವನ್ನು ಹುಸಿಯಾಗಿಸಿ ಅವರ ಕವಿತ್ವ ಜ್ಞಾನಕ್ಕೆ ಪ್ರಶಸ್ತಿಯನ್ನು ದಕ್ಕಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಹೀಗೆ ಅವರ ಸಾಹಿತ್ಯದ ತೇರು ಗಾಯದ ಹೂವುಗಳಿಂದ ಅರಳಿ ದೊಡ್ಡ ಹೆಮ್ಮರವಾಗಿ ಹಲವರಿಗೆ ಆಶ್ರಯವಾಗುವ ದೀವಿಗೆಯಾಗಲಿ ಎಂಬುದೇ ಸಾಮಾನ್ಯ ಓದುಗರಾಗಿ ನಮ್ಮೆಲರ ಹೃದಯತುಂಬಿದ ಹಾರೈಕೆ💐💐.
**

- ಕಾವ್ಯ ಎಸ್
  

No comments:

Post a Comment