ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, July 29, 2020

ಸ್ವಾತಂತ್ರ್ಯ



ಅವನು ಕಾಡಿನೊಳಗೆ ಕೃಷಿ ಮಾಡಿ ಬದುಕುತ್ತಿದ್ದ. ಮೊಬೈಲ್ ಇದ್ದರೂ , ರೇಡಿಯೋ ಇದ್ದರೂ ಸಿಗ್ನಲ್ ಸಿಗುತ್ತಿರಲಿಲ್ಲ. ಓದು ಬರೆಹ ತಿಳಿದಿರಲಿಲ್ಲ. ಅಗತ್ಯವಿದ್ದಾಗ ಮಾತ್ರ ಯಾವಾಗಲಾದರೊಮ್ಮೆ ಪಟ್ಟಣಕ್ಕೆ ಹೋಗಿಬರುತ್ತಿದ್ದ.

ಯುವಕರ ತಂಡವೊಂದು ಬಂದು 'ಸ್ವಾತಂತ್ರ್ಯ ದಿನಾಚರಣೆಗೆ ಪಟ್ಟಣಕ್ಕೆ ಬರಲೇಬೇಕು' ಎಂದರು.

ಆ ದಿನ ಬಂತು. ತನ್ನ ಕೆಲಸದಲ್ಲಿ ನಿರತನಾಗಿದ್ದ ಅವನು ಆ ದಿನವನ್ನೂ ಎಂದಿನಂತೆ ಕಳೆದ.

ಆ ರಾತ್ರಿ - ಎಷ್ಟೋ ದಿನಗಳಿಂದ ಇದ್ದಲ್ಲೇ ಇದ್ದ, ಎಲ್ಲಿಂದಲೋ   ಬಂದ ಕಲ್ಲೊಂದು ಆಕಾಶದಲ್ಲಿ ಕುಣಿದು ಕುಪ್ಪಳಿಸುತ್ತಾ, ಗಾಳಿಯೊಂದಿಗೆ ಚಕ್ಕಂದವಾಡುತ್ತಾ, ಮುತ್ತಿಕ್ಕುತ್ತಾ, ಪ್ರೇಮಕತೆಗಳನ್ನು ಹೇಳುತ್ತಾ , ಸಂಭೋಗಿಸುತ್ತಾ ಅವನ ಮನೆಯ ಮೇಲೆ ದೊಪ್ಪನೆ ಬಿದ್ದು ಪ್ರಾಣಬಿಟ್ಟಿತು.
*


ಕಾಜೂರು ಸತೀಶ್

No comments:

Post a Comment