ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, March 23, 2016

ದಿನಚರಿ -17

ಆಗಷ್ಟೇ ಪರಿಚಯವಾದ ವ್ಯಕ್ತಿ ಶಿಕ್ಷಕರಾದಲ್ಲಿ ಒಂದು ಸಂಗತಿಯನ್ನು ಪರಸ್ಪರ ಹಂಚಿಕೊಂಡೇ ಹಂಚಿಕೊಂಡಿರುತ್ತೇವೆ- 'ನಮ್ಮಲ್ಲಿ ಇಷ್ಟು ಮಕ್ಕಳು, ನಿಮ್ಮಲ್ಲಿ ?'

ನಾಳೆ ದಿನ ಸರ್ಕಾರಿ ಶಾಲೆಗಳೆಲ್ಲ ಬಾಗಿಲು ಹಾಕಿಕೊಂಡು ವ್ಯಥೆ ಪಡುತ್ತದಲ್ಲಾ ಎಂಬುದನ್ನು ನೆನೆದಾಗ ಮುಖ್ಯವಾಗಿ ನೆನಪಾಗುವುದು: ಸೋಮಾರಿ ಶಿಕ್ಷಕರು, ಶಾಲೆಯನ್ನೇ ಉದ್ಯಮವಾಗಿಸಿಕೊಂಡಿರುವ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು ಮತ್ತು ಎ.ಸಿ. ರೂಮಿನ ಶಿಕ್ಷಣ ತಜ್ಞರು.

ಭಾಷೆ-ಸಂಸ್ಕೃತಿಗಳ ಬಗ್ಗೆ ಉದ್ದುದ್ದ ಮಾತನಾಡುವ ಸಾಹಿತಿಗಳೆಲ್ಲಿದ್ದಾರೆ ಬೆಂಕಿಬಿದ್ದ ಈ ಹೊತ್ತಲ್ಲಿ?!
*
ಕಾಜೂರು ಸತೀಶ್


Tuesday, March 22, 2016

ದಿನಚರಿ -16

'ಟಿ.ವಿ. ಇಲ್ಲದೆ ಹೇಗಿರುತ್ತೀಯ?' ಕೇಳುತ್ತಾರೆ ಗೆಳೆಯರು.

ಏಕೆಂದರೆ ಇಲ್ಲಿರುವ 'ಲೊಡಕಾಸಿ' ಬಿ.ಎಸ್.ಎನ್.ಎಲ್. ಟವರ್ ದಿನಕ್ಕೆ ಹನ್ನೆರಡು ಗಂಟೆಗಳ ಕಾಲವಾದರೂ ಎಚ್ಚರದ ಸ್ಥಿತಿಯಲ್ಲಿರುವುದಿಲ್ಲ. ಸ್ವಲ್ಪ ಮೋಡವಾದರೂ ರೇಡಿಯೋ ಸಿಗ್ನಲ್ ಇಲ್ಲದೆ ಗೊರಗೊರ ಕೆಮ್ಮಲು ತೊಡಗುತ್ತದೆ.

'ಇಂತಹ ಕೊರತೆಗಳನ್ನು ತುಂಬುವುದಾದರೂ ಹೇಗೆ?' ಅವರ ಪ್ರಶ್ನೆ.

ಒಂದು ನಿಮಿಷದ ಏಕಾಂತವಾದರೂ ಸಿಗಲಿ ಎಂದು ನಿತ್ಯ ಕಾದು ಕೂರುತ್ತೇನೆ. ನೆರೆಹೊರೆಯವರ 'ಆರ್ಭಟ'ವೇ ನನಗೆ ಸಂಗೀತ. ಅವರ 'ಕೊರೆತ'ವೇ ಉಪನ್ಯಾಸ. ಹುಟ್ಟಿದಾಗಲೇ ಸತ್ತುಹೋದ ನೂರಾರು ಕತೆ-ಕವಿತೆಗಳನ್ನೆಲ್ಲ ಅವರಿಗೇ ಅರ್ಪಿಸಿಬಿಡುತ್ತೇನೆ.

ಇಷ್ಟಾದರೂ ಈ ರೇಡಿಯೋ ಅವರ ಆರ್ಭಟಗಳಿಂದ ನನ್ನನ್ನು ಸ್ವಲ್ಪವಾದರೂ ಪಾರುಮಾಡುತ್ತಿದೆ. ದಿನ ಕಳೆದು ಅಥವಾ ಎಷ್ಟೋ ದಿನಗಳಾದ ಮೇಲೆ ಸಿಗುವ ಅಥವಾ ಪತ್ರಿಕೆಗಳ ಮುಖ ನೋಡಲೂ ಸಾಧ್ಯವಾಗದ ಹೊತ್ತಲ್ಲೆಲ್ಲ ರೇಡಿಯೋ ನನಗೆ ಜಗತ್ತನ್ನು ತೋರಿಸಿ ಹಸಿವನ್ನು ನೀಗಿಸಿದೆ.

ಬಾಲ್ಯದಿಂದಲೂ ಜೊತೆಗಿದ್ದ ಈ ಗೆಳತಿ, ನಾನು ಬದುಕಿರುವವರೆಗೂ ಜೊತೆಗೇ ಇರುತ್ತಾಳೆ!
*
ಕಾಜೂರು ಸತೀಶ್