ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, December 25, 2021

ಗುಂಡಿ


ಗುಂಡಿ-೧
----------

ಹಾವುಗಳ ಹಾವಳಿ ಹೆಚ್ಚಾಗಿ ಕಪ್ಪೆಗಳು ರಸ್ತೆಯ ಚಿಕ್ಕ ಗುಂಡಿಗಳಲ್ಲಿ ಮನೆಮಾಡಿದ್ದರಿಂದ ಚಕ್ರಕ್ಕೆ ಸಿಲುಕಿ ಅವುಗಳ ಸಂತತಿ ವಿನಾಶದತ್ತ ಸಾಗಿತು. ಕಡೆಗೆ ರಸ್ತೆಯ ದೊಡ್ಡ ಗುಂಡಿಗಳಲ್ಲಿ ಮನೆಮಾಡಿದವು.

ನಾಯಕ ಕಪ್ಪೆ ಹೇಳಿತು- 'ಈಗ ಸತ್ತರೆ ನಾವಷ್ಟೇ ಸಾಯುವುದಿಲ್ಲ!'

*

ಗುಂಡಿ-೨
----------

ರಸ್ತೆಯ ದೊಡ್ಡ ಗುಂಡಿಗಳು ಆಶ್ರಯ ನೀಡಿದ ಖುಷಿಗೆ ಕಪ್ಪೆಗಳೆಲ್ಲಾ ಸೇರಿ 'ಗೆಲ್ಲಿಸಿದವರಿಗೆ'  ಸನ್ಮಾನ ಸಮಾರಂಭವನ್ನು ಏರ್ಪಡಿಸಿದವು.

*



ಕಾಜೂರು ಸತೀಶ್

Friday, December 24, 2021

'ಕಣ್ಣಲ್ಲಿಳಿದ ಮಳೆಹನಿ'ಯ ಕುರಿತು ದಾದಾಪೀರ್ ಜೈಮನ್



ಕಾಜೂರು ಸತೀಶ್ ಅವರ 'ಕಣ್ಣಲ್ಲಿಳಿದ ಮಳೆಹನಿ' ಕವನಸಂಕಲನ ಓದಿದೆ. ಸಹಜತೆಯನ್ನೇ ಜೀವವಾಗಿಸಿಕೊಂಡ ನಿರಾಭರಣ ಸೌಂದರ್ಯವಿದೆ ಈ ಕವಿತೆಗಳಲ್ಲಿ. 'ಒಂದೇ ಒಂದು ಸಾಲು, ಪದ, ಅಕ್ಷರ, ಉಪಮೆ, ರೂಪಕ, ಪ್ರತಿಮೆಗಳನ್ನು ಅನಗತ್ಯವಾಗಿ ಬಳಸಲಾರೆ ಎಂಬ ಹಠ ತೊಟ್ಟಂತಿದೆ.' ಎಂಬ ತೀರ್ಪುಗಾರರ ಅಭಿಪ್ರಾಯಕ್ಕೆ ಮುದ್ರೆಯೊತ್ತುವ ಹಾಗೆ ಇಲ್ಲಿನ ಎಲ್ಲಾ ಕವಿತೆಗಳಿವೆ.

ಒಂದು ಆತ್ಯಂತಿಕ ವಿಷಾದವನ್ನು ದಾಟಿಸುವಾಗಲೂ ಕವಿ ತುಂಬಾ ಸಂಯಮದಿಂದ ದಾಟಿಸುತ್ತಾರೆ. ಈ ಸಂಕಲನದಲ್ಲಿ ಕವಿತೆಯ ಕುರಿತಾದ ಹಲವು ಕವಿತೆಗಳಿವೆ. ಕವಿತೆಯೆಂದರೇನು ಎಂಬ ಶೋಧದ ಜೊತೆಗೆ 'ಸಾವು' ಈ ಕವಿಯನ್ನು ತೀವ್ರವಾಗಿ ಕಾಡಿದೆ. ನೆರಳಂತೆ ಸುಳಿಯುವ ಇವೆರಡನ್ನೂ ಒಂದು ದಿವ್ಯಮೌನದ ಏಕಾಂತದಲ್ಲಿ ಎದುರುಗೊಂಡು ಬರೆದ ಹಾಗಿವೆ. ಅದರ ತೀವ್ರತೆ ಪುಸ್ತಕ ಓದಿ ಮುಗಿಸಿದ ಮೇಲೂ ನಮ್ಮೊಳಗೆ ಕುಳಿತುಬಿಡುವಷ್ಟು ಶಕ್ತವಾಗಿವೆ ಎನಿಸಿದೆ. ಅಂತೆಯೇ ಬದುಕಿನ ಹಾಗೂ ಸಮಾಜದ ದಂದುಗಗಳನ್ನು ಹೇಳುವಾಗ ಕವಿ ವಾಚಾಳಿಯಾಗದೆ ತಣ್ಣಗೆ ಸಾತ್ವಿಕ ಪ್ರತಿರೋಧದ ದನಿಯಾಗಿಯೆ ಹೇಳುತ್ತಾರೆ.

ಕವಿತೆಗಳು ಇಷ್ಟವಾದವು.



- ದಾದಾಪೀರ್ ಜೈಮನ್