ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, January 18, 2016

'ಗಾಯದ ಹೂವುಗಳು' ಕುರಿತು ಸುನೀತಾ ಲೋಕೇಶ್ ಅವರ ನುಡಿಗಳು

ಎದೆ ಸೀಳಿ
ತಲೆ ಸೀಳಿ
ಚರಿತ್ರೆ ಸೀಳಿ
ತೋರಿಸುವುದೆಲ್ಲ ಕಷ್ಟದ ಕೆಲಸ

ಕಾಜೂರು ಸತೀಶ್ ಅವರ ಒಂಟಿ ಕವನದ ಸಾಲುಗಳೊಂದಿಗೆ ಗಾಯದ ಹೂವುಗಳ ಅನಿಸಿಕೆಯನ್ನು ನನ್ನ ಅರಿವಿಗೆ ನಿಲುಕಿದಂತೆ ತುಸು ತಲ್ಲಣದಿಂದಲೇ ಮುಂದಿಡುತ್ತೇನೆ.

ಕಾಜೂರು ಕೊಡಗಿನ ಬರಹಗಾರರಲ್ಲಿ ಮುಂಚೂಣಿಯಲ್ಲಿರುವುದನ್ನು -ಕಡೆಂಗೋಡ್ಲು- ಪುರಸ್ಕೃತ ಗಾಯದ ಹೂವುಗಳು ಪರಿಮಳಿಸಿವೆ.

ಈ ಲೋಕ ಕಲುಷಿತಗೊಂಡಿರುವುದನ್ನು ತುಂಬಾ ಸೂಕ್ಷ್ಮವಾಗಿ ವೀಕ್ಷಿಸುತ್ತಾ ಆತಂಕದಿಂದ ಕವಿತೆಗಳ ಗರ್ಭದಲ್ಲಿರಿಸಿ, ಸುಖಪ್ರಸವದಲ್ಲಿ ಸಾರ್ಥಕತೆ ಮೆರೆದಿದ್ದಾರೆ.

ಸದಾ ಏಕಾಂಗಿಯಾಗಿ ಕ್ರಿಯಾಶೀಲರಾಗಿ ಇರಬಯಸುವ ಇವರ ತುಡಿತ ಕವಿತೆಯ ಸಾಲುಗಳಲ್ಲಿ ಮಿಡಿತಗೊಂಡಿವೆ. ಮನುಷ್ಯನ ಕಿರಾತಕ ಮನಸ್ಸುಗಳನ್ನು ಖಾಲಿ ಡಬ್ಬಕ್ಕೆ ಹೋಲಿಸಿ ಮೊಳೆತ ಭಾವ ತೀವ್ರತೆಯನ್ನು ಕವಿತೆಯಲ್ಲಿ ಬಿಂಬಿಸುವಾಗ, ಮೌನ ಪ್ರತಿಭಟನೆಯ ಕಾವು ವೇದ್ಯವಾಗುತ್ತದೆ.

ಈ ಕಾಲಘಟ್ಟದ ಮನುಷ್ಯ ಮನಸ್ಸುಗಳನ್ನು ಮಾತ್ರವಲ್ಲ, ಸುತ್ತಲಿನ ಚರಾಚರಗಳನ್ನೂ, ಎಲ್ಲರ ತಾತ್ಸಾರಕ್ಕೊಳಗಾಗುವ ವಸ್ತುಗಳನ್ನು ಗಮನಿಸುತ್ತಾ ವ್ಯವಸ್ಥೆಯ ಹುದುಲಲ್ಲಿ ಸಿಕ್ಕಿಕೊಂಡು ವ್ಯಸನಿಯಾಗಿರುವುದನ್ನು ಕವಿತೆಗಳ ಮೂಲಕ ಮುಲಾಜಿಲ್ಲದೆ ಕಕ್ಕಿದ್ದಾರೆ.

ಗಾಯದ ಹೂವುಗಳು ಹೆಸರೇ ಸೂಚಿಸುವಂತೆ ಕವಿಮನಸ್ಸು ಬದುಕಿನ ದುರವಸ್ಥೆಗಳನ್ನು ನೋಡಿ ರೊಚ್ಚಿನಿಂದ ಬುಸುಗುಟ್ಟಿದೆ. ಆವೇಶದಿಂದ ಶೋಷಕ ಶಕ್ತಿಗಳೆಡೆ ದೃಷ್ಟಿ ಹರಿಸುವಂತೆ ಓದುಗ ಮನಸ್ಸಿಗೆ ವೇದ್ಯವಾಗಿದೆ. ಅಲ್ಲದೆ ಚಿತ್ತವನ್ನು ಕಲಕುತ್ತಾ
ಭಯಾಶ್ಚರ್ಯ, ಸ್ತುತಿಯಿಂದಾವೃತವಾಗಿದೆ.

ಹೀಗೂ ಬರೆಯಲು ಸಾಧ್ಯ ಎಂಬುದನ್ನು ಸಾಕ್ಷೀಕರಿಸಿದ ಕಾಜೂರರು ಭವಿಷ್ಯದಲ್ಲಿ ಖಂಡಿತಾ ಈ ನಾಡು ಗುರುತಿಸುವ ಕವಿಯಾಗುವರು ಎಂಬುದನ್ನು ಅವರ ಕವಿತೆಗಳ 'ಪಡೆ'ಯೇ ಘೋಷಿಸಿವೆ.

ಮೂಳೆ, ಮಾಂಸ, ರಕ್ತದ ತಕರಾರುಗಳು ನನಗೆ ಅರ್ಥವಾಗದೆ ದಿಗಿಲುಗೊಳಿಸಿ ತಲ್ಲಣಕ್ಕೊಳಗಾಗಿರುವುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಮುಂದಿನ ಕವಿತೆಗಳ ತುಂಬೆಲ್ಲಾ ಭಾವ ಸೌಂದರ್ಯದಲ್ಲಿ ನವರಸಗಳು ಮೇಳೈಸುವ ಪರಿಸರ ಒದಗಿ ಬರಲಿ ಎಂದು ಆಶಿಸುತ್ತಾನೆ. ಮೃದುಮನದ ಕೊಡಗಿನ ಕವಿಸಹೋದರನಿಗೆ ಮಡಿಲು ತುಂಬಾ ಯಶಸ್ಸು ಅಕ್ಷಯಪಾತ್ರೆಯಾಗಲಿ. ಇದು ಈ ಅಕ್ಕನ ನಿರೀಕ್ಷೆ.
**

-ಸುನೀತಾ ಲೋಕೇಶ್


Sunday, January 17, 2016

ದಿನಚರಿ-15

ಈ ಮನುಷ್ಯ ಎಷ್ಟು ಸ್ವಾರ್ಥಿ ಎಂಬುದನ್ನು ನೆನೆದಾಗ ನನ್ನ ಮೇಲೆ ನನಗೇ ಅಸಹ್ಯತೆ ಹುಟ್ಟುತ್ತದೆ. ಉದಾಹರಣೆಗೆ- ನಾನು ಯಾರಿಗಾದರೂ ಕರೆಮಾಡುತ್ತಿದ್ದೇನೆ ಎಂದರೆ ಅದರಲ್ಲಿ ನನ್ನ ಸ್ವಾರ್ಥವಿರುತ್ತದೆ. ಯಾರಾದರೂ ನನ್ನನ್ನು ಹುಡುಕಿಕೊಂಡು ಬಂದಿದ್ದಾರೆ ಎಂದರೆ ಅದರಲ್ಲಿ ಅವರ ಸ್ವಾರ್ಥವಿರುತ್ತದೆ.

ಆದರೆ, ಪ್ರಾಣಿಗಳ ಈ ಬಗೆಯ ಅಂತರಾವಲಂಬನೆಯಲ್ಲಿ ಪ್ರೀತಿಯ ಲೇಪನವಿರುತ್ತದೆ. ಅದಕ್ಕೇ, ನನಗನಿಸುವುದು- ಪ್ರೀತಿಸಿದರೆ, ಪ್ರೀತಿಸುವುದಾದರೆ ಪ್ರಾಣಿಗಳನ್ನು ಪ್ರೀತಿಸಬೇಕು!
*
ಕಾಜೂರು ಸತೀಶ್