ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, October 8, 2025

ಒಂದು ಕ್ರೌರ್ಯವನ್ನು ನೆನೆದು...

ಜಗತ್ತು ಎಷ್ಟು ಭಯಾನಕವಾಗಿದೆ ಎಂಬುದಕ್ಕೆ ಇಂದಿನ ಘಟನೆಯೂ ಸೇರ್ಪಡೆಗೊಂಡಿತು.

ಈ ಮಧ್ಯಾಹ್ನ ನನಗೊಂದು ಕರೆ ಬಂದಿತು. ವೃತ್ತಿ ಸಂಬಂಧಿತ ಕರೆ ಅದು. 'ಈಗ ಬರಬಹುದಾ?' ಎಂದಾಗ 'ನಾಳೆ' ಎಂದು ಮೊದಲು ಹೇಳಿದೆನಾದರೂ ಆಮೇಲೆ ಒಪ್ಪಿಕೊಂಡು ಹೊರಟೆ. ಹೊರಟುಹೋಗುತ್ತಿರುವಾಗಲೂ ಕರೆಮಾಡಿದೆ. 'ಊಟ ಮಾಡಿ ಬರುವೆ' ಎಂದಿತು.

ಸುಮಾರು ಮೂರು ಗಂಟೆಗಳಷ್ಟು ಕಾದೆ. ಈ ನಡುವೆ ಮೂರು ಬಾರಿ ಕರೆ ಮಾಡಲಾಗಿ ಅದರಲ್ಲಿ ಒಮ್ಮೆ ಕರೆ ಸ್ವೀಕೃತಗೊಂಡು 'ಇನ್ನೇನು ಬರುವೆ' ಎಂದಿತು! ಒಂದು ಸಂದೇಶವನ್ನೂ ಎಸೆದೆ; ಅದೂ 'ಅದರ' ಕಣ್ಣಿನ ಕಸದಬುಟ್ಟಿ ಸೇರಿತು.

ಆಮೇಲೆ 'ಅದು' ಬರಲಿಲ್ಲ. ನಾನು ಮನೆಗೆ ಹಿಂತಿರುಗಿದೆ.
*
ನಾನು ಹಿಂತಿರುಗಿ ಒಂದು ಗಂಟೆ ಕಳೆದರೂ ಅತ್ತಲಿಂದ ಒಂದು ಎಲೆಯಲುಗುವಷ್ಟಾದರೂ ಸದ್ದು ಕೇಳಿಸಲಿಲ್ಲ. 'ನನಗಾಗಿ ಕಾದವನು ಏನಾದ' ( ಅದು ನನ್ನ ಕೆಲಸ ಅಲ್ಲ ಎನ್ನುವುದು ಒತ್ತಟ್ಟಿಗಿರಲಿ! )ಎಂಬ ಕನಿಷ್ಟ ಮನುಷ್ಯಪ್ರಜ್ಞೆಯೂ ಅದಕ್ಕಿಲ್ಲವಲ್ಲ ಎಂಬ ಭಯಾನಕ ಸ್ಥಿತಿಯ ಬಗ್ಗೆ ನೆನೆದು ನಾನೀಗ ಮರುಗುತ್ತಿರುವೆ.
*
ಈಗ ಹೊರಗಡೆ ಗುಡುಗಿನ ಸದ್ದು ಕೇಳಿಸುತ್ತಿದೆ. ನನ್ನೊಳಗೂ ಅದೇ ಸದ್ದು! ಹೀಗೆ ಬರೆಯುತ್ತಿರುವ ಈ ಶಬ್ದಗಳಲ್ಲಿ ಗುಡುಗು ಅಡಗಿದೆಯೋ ನಾನರಿಯೆ..
*
✍️ಕಾಜೂರು ಸತೀಶ್

Saturday, October 4, 2025

ಗುಂಡಿ

ಗುಂಡ ರಸ್ತೆಯ ಗುಂಡಿಯಲ್ಲಿ ಹೂತುಹೋದ. ಅವನ ಸಹೋದರ ತಿಮ್ಮ "ನನ್ನ ತಮ್ಮನನ್ನು ಎತ್ತಲು ಸಹಕರಿಸಿ" ಎಂದು ಗೋಗರೆದ. ಯಾರೂ ಬರಲಿಲ್ಲವಾದ್ದರಿಂದ ಗುಂಡ ಸತ್ತುಹೋದ.

'ರಾಜನಿಗೆ ಇದು ಮುಜುಗರದ ವಿಷಯ' ಎಂದು ಹಲವರು ಮಾತನಾಡಿಕೊಂಡರು. ಇದು ರಾಜನ ಕಿವಿಗೂ ಬಿದ್ದ ಕಾರಣ ರಾಜ ಹೆಲಿಕಾಪ್ಟರ್ ನಲ್ಲಿ ಬಂದು ಘಟನಾ ಸ್ಥಳವನ್ನು ವೀಕ್ಷಿಸಿ ಹೋದ.
*
ಕಾಜೂರು ಸತೀಶ್